ಭಾವ ಭೈರಾಗಿ
ಕವಿತೆ | ಬೆವರು ಸುರಿಸುವುದರಿಂದ ಮಾತ್ರ ಚರಿತ್ರೆ

‘ನಡೆದಾಡುವ ದೇವರು’ ಎಂದು ಹೆಸರಾದ ಸಿದ್ದಗಂಗ ಶ್ರೀಗಳು ಬರೆದಿದ್ದಾರೆ ಎಂದು ವೈರಲ್ ಆದ ತೆಲುಗು ಕ್ರಾಂತಿಕಾರಿ ಕವಿ ಶ್ರೀಶ್ರೀ ಅವರ ಒಂದು ಪ್ರಸಿದ್ಧ ಕವಿತೆ.ಶ್ರೀಗಳು ಶಿವೈಕ್ಯರಾದರು ಎಂಬ ಸುದ್ದಿ ತಿಳಿಯುತ್ತಿದ್ದಂತೆ ಶ್ರೀಗಳ ಹಿರಿಮೆಯನ್ನು ಸಾರುವ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡತೊಡಗಿವೆ. ಇದೇ ಸಂದರ್ಭದಲ್ಲಿ ಶ್ರೀ ಸಿದ್ದಗಂಗಾ ಶ್ರೀಗಳು ಬರೆದಿರುವ ಕವಿತೆ ಎಂಬ ಶೀರ್ಷಿಕೆಯಲ್ಲಿ ಕವಿತೆಯೊಂದು ವೈರಲ್ ಆಯಿತು. ಆದರೆ ಆ ಕವಿತೆಯು ಆಂಧ್ರದ ಕ್ರಾಂತಿಕಾರಿ ದಿಗಂಬರ ಕವಿಗಳಲ್ಲಿ ಒಬ್ಬರಾದ ಶ್ರೀ ಶ್ರೀ ಅವರು ಬರೆದಿರುವ ಕವಿತೆ ಎಂದು ತಿಳಿದು ಬಂದಿದೆ. ಈ ಕವಿತೆಯನ್ನು ಸಾಮಾಜಿಕ ಕಾರ್ಯಕರ್ತರಾದ ಪದ್ಮಾ ಕೆ ರಾಜ್ ಎಂಬುವವರು ಕೆಲವು ತಿಂಗಳುಗಳ ಹಿಂದೆ ಕನ್ನಡಕ್ಕೆ ಅನುವಾದಿಸಿದ್ದರು.
ಸಾಧ್ಯವಾದರೆ ಓಡು
ಆಗಲಿಲ್ಲವಾದರೆ ನಡೆ
ಅದೂ ಸಾಧ್ಯವಾಗದಿರೆ
ಉರುಳಿ ಕೊಂಡು ಹೋಗು ಅಷ್ಟೇ!
ಆದರೆ ಕದಲದೇ
ಬಿದ್ದಿರಬೇಡ ಒಂದೇ ಕಡೆ

ಕೆಲಸ ಸಿಗಲಿಲ್ಲವೆಂದು,
ವ್ಯಾಪಾರ ನಷ್ಟವಾಯಿತೆಂದು
ಗೆಳೆಯನೊಬ್ಬ ಮೋಸಮಾಡಿದನೆಂದು,
ಪ್ರೀತಿಸಿದವಳು
ಕೈಬಿಟ್ಟಳೆಂದು!!
ಹಾಗೆ ಇದ್ದರೆ ಹೇಗೆ..?
ದಾಹಕ್ಕೆ ಬಾರದ
ಸಮುದ್ರದ ಅಲೆಗಳು ಕೂಡಾ
ಕುಣಿದು ಕುಪ್ಪಳಿಸುತ್ತವೆ ನೋಡು!
ಮನಸು ಮಾಡಿದರೇ…
ನಿನ್ನ ಹಣೆಬರಹ ಇಷ್ಟೇ
ಅಂದವರೂ ಸಹ…
ನಿನ್ನ ಮುಂದೆ ತಲೆ ತಗ್ಗಿಸುವ
ತಾಕತ್ತು ನಿನ್ನಲ್ಲಿದೆ
ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ?
ಸೃಷ್ಟಿ ಚಲನಶೀಲ
ಯಾವುದೂ ನಿಲ್ಲಬಾರದು
ಹರಿಯುವ ನದಿ
ಬೀಸುವ ಗಾಳಿ
ತೂಗುವ ಮರ
ಹುಟ್ಟೋ ಸೂರ್ಯ
ಅಂದುಕೊಂಡಿದ್ದನ್ನು ಸಾಧಿಸಬೇಕೆಂದು
ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ
ಯಾವುದೂ ನಿಲ್ಲಬಾರದು.
ಏಳು… ಎದ್ದೇಳು
ಹೊರಡು…
ನಿನ್ನನ್ನು ಅಲಗಾಡದಂತೆ
ಮಾಡಿದ ಆ ಮಾನಸಿಕ ಸಂಕೋಲೆಗಳನ್ನು ಬೇಧಿಸು,
ಬಿದ್ದ ಜಾಗದಿಂದಲೇ
ಓಟ ಶುರು ಮಾಡು
ನೀನು ಮಲಗಿದ ಹಾಸಿಗೆ
ನಿನ್ನನ್ನು ಅಹಸ್ಯಪಡುವ ಮುನ್ನ
ಅಲಸ್ಯವನ್ನು ಬಿಡು
ಕನ್ನಡಿ ನಿನ್ನನ್ನು ಪ್ರಶ್ನಿಸುವ
ಮುನ್ನ ಉತ್ತರ ಹುಡುಕು
ನೆರಳು ನಿನ್ನನ್ನು ಬಿಡುವ
ಮುನ್ನ ಬೆಳಕಿಗೆ ಬಾ
ಮತ್ತೆ ಹೇಳುತ್ತಿದ್ದೇನೆ…
ಕಣ್ಣೀರು ಸುರಿಸುವುದರಿಂದ
ಅದು ಸಾಧ್ಯವಿಲ್ಲ!
ಬೆವರು ಸುರಿಸುವುದರಿಂದ
ಮಾತ್ರ ಚರಿತ್ರೆ
ಸೃಷ್ಟಿಸಬಹುದೆಂದು
ತಿಳಿದುಕೋ…
ಓದಿದರೆ ಇವು ಪದಗಳಷ್ಟೇ…
ಆದರೆ ಆಚರಿಸಿದಾಗ
ಅಸ್ತ್ರಗಳು..!!!!!
ಮಹಾ ಶಸ್ತ್ರಗಳು!!!!!!!
-ತೆಲುಗು ಮೂಲ: ಶ್ರೀಶ್ರೀ
-ಕನ್ನಡಕ್ಕೆ : ಪದ್ಮಾ ಕೆ ರಾಜ್
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಭಾವ ಭೈರಾಗಿ
ಕವಿತೆ | ಡಿವೈಡರುಗಳು

- ವಿಲ್ಸನ್ ಕಟೀಲ್
ಈಗೀಗ ರಸ್ತೆಗಳಿಗಿಂತ
ಡಿವೈಡರುಗಳೇ ಅತ್ಯಾಕರ್ಶಕ..!
ಮೆತ್ತನೆ ಹುಲ್ಲುಹಾಸು, ಚೆಂದದ ಹೂಗಿಡಗಳು..
ಸುಂದರ ಜಾಹೀರಾತುಗಳು…
ರಸ್ತೆಗಳ ಆರೋಗ್ಯಕ್ಕಿಂತ
ಡಿವೈಡರುಗಳ ಸೌಂದರ್ಯಕ್ಕೇ
ಸರಕಾರ ಹೆಚ್ಚು ಹಣ ಖರ್ಚು ಮಾಡುತ್ತದೆ.
ಕೆಲವು ಕಡೆ ಈ ಡಿವೈಡರುಗಳೇ
ರಸ್ತೆಯ ತಿರುವುಗಳನ್ನು,
ಮುಟ್ಟುವ ಗುರಿಯನ್ನು
ನಿಯಂತ್ರಿಸುತ್ತವೆ..!
ಡಿವೈಡರುಗಳಿಗೆ ರಸ್ತೆಗಳಂತೆ
ಮೈಮಾಂಸ ಕಿತ್ತುಬರುವ,
ಚರಂಡಿಗಳು ಉಕ್ಕಿ ಹರಿಯುವ,
ಮಳೆಗಾಲದಲ್ಲಿ ಮುಳುಗಿ ಉಸಿರುಗಟ್ಟುವ ಚಿಂತೆಯಿಲ್ಲ
ರಸ್ತೆಪಕ್ಕದ ಮನೆಗಳನ್ನೂ
ಸಲೀಸಾಗಿ ಕೆಡವುವ ಬುಲ್ಡೋಜರುಗಳು
ಡಿವೈಡರುಗಳಿಗೆ ಹಾನಿ ಮಾಡುವುದಿಲ್ಲ.

ಇತ್ತೀಚೆಗೆ ಹೆಚ್ಚಿನವರು
ರಸ್ತೆಗಳಲ್ಲಿ ಸಾಗುವುದಕ್ಕಿಂತ
ಡಿವೈಡರಿನಲ್ಲಿ ಅಡ್ಡಾಡುವುದನ್ನೇ ಇಷ್ಟಪಡುತ್ತಾರೆ.
ಡಿವೈಡರಿನಲ್ಲಿ ನಿಂತವರಿಗೆ
ಎರಡೂ ಬದಿಯವರಿಗೆ
ತಮಾಶೆ ಮಾಡಲು ತುಂಬಾ ಸಲೀಸು
ಹಾಗೆಂದು ಮೈಮರೆಯುವಂತಿಲ್ಲ
ಡಿವೈಡರಿನಲ್ಲಿದ್ದವರೂ ಎಚ್ಚರ ಇರಲೇಬೇಕು
ಮೊನ್ನೆ
ಬಲಗಡೆಯಿಂದ ಬಂದ
ನಿಯಂತ್ರಣ ತಪ್ಪಿದ ಮಂತ್ರಿಯ ಕಾರು
ಡಿವೈಡರಿಗೇ ನುಗ್ಗಿತ್ತು!
ಡಿವೈಡರಿನಲ್ಲಿದ್ದವರು
ಎಡಕ್ಕೆ ಹಾರಿ
ಜೀವ ಉಳಿಸಿಕೊಂಡರು..!
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಒಂದು ಕವಿತೆ ಬರೆದು ಕೊಡಿ

- ಮಾನಸ ಗಂಗೆ
ಹಸಿವನ್ನ ನೀಗಿಸುವ
ಒಂದು ಕವಿತೆ ಬರೆದು ಕೊಡಿ,
ಎರಡ್ಹೊತ್ತು ತಿಂದು
ನಾಳೆಗೊಂದಿಷ್ಟು ಉಳಿಸಿಕೊಳ್ಳುವೆ
ಸಸ್ಯದ್ದೊ ,ಮಾಂಸದ್ದೊ
ಬೆಂದದ್ದೊ ,ಹಸಿ ಹಸಿಯೋ
ಯಾವುದೋ ಒಂದು
ನಾಲ್ಕು ಸಾಲು ಗೀಚಿ ಬಿಡಿ
ನನಗೀಗ ತುಂಬಾ ಹಸಿವಿದೆ
ನೀವು ಬರೆದು ಕೊಟ್ಟ
ಕವಿತೆಗಳ ಕೊನೆಯಲ್ಲಿ
ನಿಮ್ಮ ಹೆಸರನ್ನು ದಯವಿಟ್ಟೂ
ಬರೆಯಬೇಡಿ,
ಹಸಿವಿಗೆ ಋಣಭಾರವನ್ನ
ಹೊರುವ ಶಕ್ತಿ ಇಲ್ಲ

ಇನ್ನೊಂದು ಮನವಿ
ಹಸಿವಿನ ಬಗ್ಗೆ
ಕವಿತೆ ಬರೆಯುವಾಗ
ನೀವು ಸ್ವಲ್ಪ ಹಸಿವನ್ನಿಟ್ಟುಕೊಳ್ಳಿ
ಹೊಟ್ಟೆ ತುಂಬಿದ ಪದಗಳಿಗೆ
ನಿದ್ದೆ ಜಾಸ್ತಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಹೆಣಗಳ ಹೂಳಲು ಒಂದಿಷ್ಟು ಭೂಮಿ ಕೊಡಿ

- ರುಜು, ಸಂಶೋಧನಾ ವಿದ್ಯಾರ್ಥಿ, ದಾವಣಗೆರೆ
ಅಂಗಲಾಚಿ ಬೇಡುವೆ…
ಒಂದಿಷ್ಟು ಭೂಮಿ ಕೊಡಿಸಿ
ಬದುಕು ಕಟ್ಟಿಕೊಳ್ಳಲು ಅಲ್ಲ
ಸತ್ತ ನನ್ನ ಹೆಣದ ಗೂಡು ಕಟ್ಟಲು
ಬೀಳುವ ನನ್ನ ಜನಗಳ
ಹೆಣಗಳ ಹೂಳಲು.
ಈ ಹಿಂದೆ ಸತ್ತ
ನನ್ನ ಜನಗಳ ಹೆಣಗಳು
ರಸ್ತೆ ಬದಿಯ ಮೋರಿಯಲ್ಲಿ ಮಣ್ಣಾಗಿವೆ,
ಮಳೆ ಹೊಯ್ದು, ಕಾಲುವೆಯು ಬಂದು
ಒಂದಿಷ್ಟು ಕುರುಹಿಲ್ಲದೆ ನೆಲಸಮವಾಗಿವೆ
ಹುಡುಕಿದರು ಸಿಗುತ್ತಿಲ್ಲ
ನನ್ನಪ್ಪನ ಹೆಣದ ದಿಬ್ಬ
ಪ್ರತಿ ವರ್ಷದ ಕ್ರಿಯಾ ಕರ್ಮವಿಲ್ಲದೆ
ಅನಾಥವಾಗಿದ್ದಾನೆ.
ಅದಕ್ಕಾಗಿ ಕೈ ಮುಗಿದು ಬೇಡುವೆ
ಮುಂದೆ ಬೀಳಲಿರುವ
ಹೆಣಗಳ ದಿಬ್ಬವನ್ನಾದರೂ ಕಾಣುತ್ತೇವೆ
ನಮಗೊಂದಿಷ್ಟು ಭೂಮಿ ಕೊಡಿ
ನಮ್ಮವರ ಹೆಣಗಳನ್ನು ಗುರುತಿಟ್ಟುಕೊಳ್ಳಲು.

ಕೋರ್ಟು ಕಚೇರಿ ತಿಳಿದವರಲ್ಲ ನನ್ನ ಜನ
ಪುಡಿ ಭೂಮಿಗಾಗಿ ಚಪ್ಪಲಿಗಳನ್ನ ಸವೆಸಿದ್ದಾರೆ
ಸಿಕ್ಕ ಸಿಕ್ಕವರಿಗೆ ಸಲಾಮು ಹೊಡೆದಿದ್ದಾರೆ
ರೊಕ್ಕ ಕೇಳಿದವರಿಗೆ ರೊಕ್ಕ
ಬಿರಿಯಾನಿ ಎಂದವರಿಗೆ ಬಿರಿಯಾನಿ
ಇಷ್ಟಾದರೂ ಒಂದಿಂಚು ಭೂಮಿ ಸಿಗಲಿಲ್ಲ
ಜೇಬು ಖಾಲಿ, ಮನಸು ಖಾಲಿ
ಪ್ರತಿರೋಧಿಸುತ್ತಿಲ್ಲ ಪರಿತಪಿಸುತ್ತಿದ್ದಾರೆ.
ಈ ಮುಗ್ದ ಮನಗಳ ತಣಿಯಲು
ಒಂದಿಷ್ಟು ಭೂಮಿ ಕೊಡಿ
ಸುಖ ಸುಪ್ಪತ್ತಿಗೆಯಿಂದ ಮೆರೆಯಲು ಅಲ್ಲ
ಸತ್ತಾಗಲಾದರೂ ನೆಮ್ಮದಿಯಿಂದ ಮಲಗಲು
ಊರೂರು ಅಲೆದು,
ಹತ್ತಿಯನು ಪಿಂಜಿ,
ಹಾಸಿಗೆಯನು ಹೊಲೆದು
ಇನ್ನೊಬ್ಬರ ಸುಖ ನಿದ್ರೆಗೆ ಕಾರಣರಾದ
ಪಿಂಜಾರರು ನಾವು,
ನಮ್ಮಗಳ ಚಿರ ನಿದ್ರೆಗೆ
ಗೂಡೊಂದು ಇಲ್ಲ,
ನಾವು ನಿದ್ರಿಸಬೇಕಿದೆ ಎಲ್ಲರಂತೆ ನೆಮ್ಮದಿಯಲಿ
ಹಾಸಿಗೆಯ ಮೇಲಲ್ಲ, ಘೋರಿಯ ಒಳಗಲ್ಲಿ,
ನಮ್ಮದಾದೊಂದು ಭೂಮಿಯಿಲ್ಲ
ನಮ್ಮವರ ಹೆಣಗಳ ಹೂಳಲು
ಜಾಣರಾದ ನೀವು ಜಾಗವೊಂದು ಕೊಡಿಸಿರಿ
ನಮ್ಮವರ ಹೆಣಗಳಿಗೆ ಮುಕ್ತಿಯನು ನೀಡಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ಮಳೆ ಅವಾಂತರ | ನವಿಲೇಹಾಳಿನಲ್ಲಿ ನಾಲ್ಕು ಮನೆಗಳು ನೆಲಸಮ
-
ಕ್ರೀಡೆ6 days ago
ಕಾಮನ್ ವೆಲ್ತ್ ಕ್ರೀಡಾಕೂಟ ; ಪುರುಷರ 73 ಕೆ.ಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಅಚಿಂತಾ ಶೆಯಿಲಿಗೆ ಸ್ವರ್ಣ ಪದಕ
-
ನಿತ್ಯ ಭವಿಷ್ಯ7 days ago
ಸೋಮವಾರ ರಾಶಿ ಭವಿಷ್ಯ-ಆಗಸ್ಟ್-1,2022 : ಈ ರಾಶಿಯವರಿಗೆ ತುಂಬಾ ಇಷ್ಟಪಟ್ಟವರು ನಿಲುಕದ ನಕ್ಷತ್ರ!
-
ದಿನದ ಸುದ್ದಿ6 days ago
ಹರಿಯಾಣದ ಚಾಂಡಿಮಂದಿರದಲ್ಲಿ ಇಂದಿನಿಂದ ಇದೇ 20ರವರೆಗೆ ಭಾರತ – ವಿಯೆಟ್ನಾಂ ಸೇನಾ ಸಮರಾಭ್ಯಾಸ
-
ದಿನದ ಸುದ್ದಿ6 days ago
ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ; ಮೇಲ್ವಿಚಾರಣೆಗೆ ಕಾರ್ಯಪಡೆ ರಚನೆ
-
ಕ್ರೀಡೆ6 days ago
ಸೇಂಟ್ ಕಿಟ್ಸ್ ನಲ್ಲಿಂದು ಭಾರತ – ವೆಸ್ಟ್ ಇಂಡೀಸ್ ನಡುವಣ 2ನೇ ಟಿ-20 ಕ್ರಿಕೆಟ್ ಪಂದ್ಯ
-
ದಿನದ ಸುದ್ದಿ6 days ago
ಕೋಲಾರ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಇಂದು ಸಂಜೆ ಪ್ರತಿಭಟನೆ
-
ದಿನದ ಸುದ್ದಿ6 days ago
ಮಂಕಿಪಾಕ್ಸ್ ಕುರಿತಂತೆ ನಾಳೆ ಮಹತ್ವದ ಸಭೆ : ಸಿ.ಎಂ ಬಸವರಾಜ್ ಬೊಮ್ಮಾಯಿ