ಸಿನಿ ಸುದ್ದಿ
‘ಉರಿ – ಸರ್ಜಿಕಲ್ ಸ್ಟೈಕ್’ ಎಂಬ ಸೈನಿಕರ ಅದ್ಬುತ ಕಾರ್ಯಾಚರಣೆ..!

ಭಾರತೀಯ ಸೇನಾ ಕಾರ್ಯಾಚರಣೆ ಸಂಬಂಧಿತ ಭಾರತೀಯ ಸಿನಿಮಾರಂಗದಲ್ಲಿ ಈವರೆಗೂ ಅನೇಕ ಚಿತ್ರಗಳು ಬಂದಿದೆ. ಹಿಂದಿ ಜತೆಗೆ ಪ್ರಾದೇಶಿಕ ಭಾಷೆಗಳಲ್ಲಿಯೂ ಸೈನಿಕರ ವೀರತೆ ಪ್ರದರ್ಶಿಸುವ ಕಥಾ ಚಿತ್ರಗಳು ವೀಕ್ಷಕರ ಗಮನ ಸೆಳೆದಿದೆ. ಕಾರ್ಗಿಲ್ ವಿಷಾಯಾಧರಿಸಿ ಹತ್ತಕ್ಕೂ ಅಧಿಕ ಸಿನಿಮಾಗಳು ತೆರೆಕಂಡಿದೆ. ಕಾರ್ಗಿಲ್ ಸಮರವನ್ನೇ ಮುಖ್ಯಕಥೆಯಾಗಿರಿಸಿಕೊಂಡ ಚಿತ್ರಗಳು ಹಣ ಗಳಿಸುವಲ್ಲಿ ಯಶಸ್ಸು ಕಂಡಿದೆ. ಈ ಮೂಲಕ ಸೈನಿಕರು, ಸೈನ್ಯದ ಕಥೆಯನ್ನು ಹೊಂದಿದ ಚಿತ್ರಗಳು ಪ್ರೇಕ್ಷಕರ ಮನಸ್ಸು ಗೆಲ್ಲುತ್ತದೆ ಎಂಬುದು ಸಾಬೀತಾಗಿದೆ.
ಆದರೆ, ಇದೀಗ ಮತ್ತೊಂದು ಇತಿಹಾಸ ಸೖಷ್ಟಿಯಾಗಿದೆ. 2016 ರ ಸರ್ಜಿಕಲ್ ಸ್ಟೈಕ್ ಆಧರಿಸಿ ಉರಿ ಎಂಬ ಹೆಸರಿನ ಚಿತ್ರ ತೆರೆಕಂಡು ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸದ್ದು ಮಾಡುತ್ತಿದೆ.
ಕಾಶ್ಮೀರ ಗಡಿಯಲ್ಲಿನ ಉರಿ ಎಂಬ ಗ್ರಾಮದ ಸೇನಾ ಶಿಬಿರದ ಮೇಲೆ ಬೆಳ್ಳಂಬೆಳಗ್ಗೆ ಪಾಕ್ ಭಯೋತ್ಪಾದಕರು ನುಸುಳಿ ಭಾರತದ ಹೆಮ್ಮೆಯ 19 ಯೋಧರನ್ನು ಬಲಿ ಪಡೆದಿದ್ದರು. ಈ ಭಯೋತ್ಪಾದಕರ ಕಾರ್ಯಾಚರಣೆ ಭಾರತೀಯರನ್ನು ರೊಚ್ಚಿಗೆಬ್ಬಿಸಿತ್ತು. ಅದರಲ್ಲಿಯೂ ಸೈನ್ಯದ ಅತ್ಯಂತ ಪರಾಕ್ರಮಿ ಯೋಧರೇ ಭಯೋತ್ಪಾದಕರಿಗೆ ಸುಲಭವಾಗಿ ಬಲಿಯಾಗಿದ್ದರು. ಭಾರತದ ಸೈನ್ಯದ ಪ್ರತಿಷ್ಟೆಗೂ ಈ ಘಟನೆ ಮಸಿ ಬಳಿದಿತ್ತು. ಸೈನ್ಯದ ಮರ್ಯಾದೆಯೂ ಪ್ರಶ್ನೆಯಾಗಿತ್ತು.
ಪ್ರಧಾನಿ, ರಕ್ಷಣಾ ಸಚಿವರೂ ಸೇರಿದಂತೆ ಎಲ್ಲರೂ ಹುತಾತ್ಮರ ಬಲಿದಾನಕ್ಕೆ ಮಮ್ಮಲ ಮರುಗಿದರು. ತಮ್ಮವರನ್ನು ವಂಚಿಸಿ ಬಲಿತೆಗೆದುಕೊಂಡದ್ದು ಭಾರತೀಯ ಸೈನಿಕರ ರಕ್ತ ಕುದಿಯುವಂತೆ ಮಾಡಿತ್ತು. ಪ್ರತಿಕಾರ ತೀರಿಸಿಯೇ ಸಿದ್ದ ಎಂದು ಸೈನಿಕರು ಯೋಜನೆ ರೂಪಿಸುತ್ತಿದ್ದರು.
ಇಂಥ ಸೈನಿಕರ ಚಿಂತನೆಗೆ ಬೆಂಬಲವಾಗಿ ನಿಂತದ್ದೇ ಕೇಂದ್ರ ರಕ್ಷಣಾ ಸಚಿವಾಲಯ. ಸೇನಾ ಪಡೆಗೆ ಎಲ್ಲಾ ರೀತಿಯ ನೆರವು ನೀಡಿ ಮುನ್ನುಗ್ಗಿ, ಪಾಕ್ ನೆಲೆಗೆ ನುಗ್ಗಿ ಅಲ್ಲಿ ಅವಿತಿಟ್ಟುಕೊಂಡಿರುವ ಭಯೋತ್ಪಾದಕರನ್ನು ಬಗ್ಗು ಬಡಿಯಿರಿ ಎಂದು ಆದೇಶ ನೀಡಿಯೇ ಬಿಟ್ಟಿತ್ತು. ಈ ಆದೇಶವನ್ನೇ ಕಾಯುತ್ತಿದ್ದ ಭಾರತೀಯ ಸೈನಿಕರಿಗೆ ಅಷ್ಟೇ ಸಾಕಿತ್ತು. ಯಾವ ರೀತಿ ರಾತ್ರೋರಾತ್ರಿ ಪಾಕ್ ನೆಲೆಗೆ ನುಗ್ಗಿ ಭಯೋತ್ಪಾದಕರ ಹುಟ್ಟಡಗಿಸಿದ್ದಲ್ಲದೇ ತಾವೂ ಸುರಕ್ಷಿತವಾಗಿ ಮರಳಿ ಭಾರತಕ್ಕೆ ಮರಳುತ್ತಾರೆ.
ಉರಿ ಸರ್ಜಿಕಲ್ ಸ್ಟೈಕ್ ಗೆ ಕೇವಲ 11 ದಿನಗಳಲ್ಲಿ ನಮ್ಮ ಸೇನಾ ಪಡೆ ಎಲ್ಲಾ ರೀತಿಯಲ್ಲಿಯೂ ಸಜ್ಜಾಗುವುದೇ ಅತ್ಯಂತ ರೋಮಾಂಚಕ. ಸೈನಿಕರ ಮನೋಸ್ಥೆರ್ಯ, ಜತೆಗೆ ಗರುಡ ಎಂಬ ಅತ್ಯಾಧುನಿಕ ಹದ್ದಿನ ದ್ರೋಣ್ ಕ್ಯಾಮರ ಕಾರ್ಯಾಚರಣೆಯೂ ಕುತೂಹಲಕಾರಿ.
ಭಾರತೀಯ ಸೇನಾ ಪಡೆ ಯಾವೆಲ್ಲಾ ರೀತಿಯಲ್ಲಿ ತಯಾರಿ ನಡೆಸಿ ಭಯೋತ್ಪಾದಕರ ಹುಟ್ಟಡಗಿಸಿಸುತ್ತಾರೆ ಎಂಬ ಅದ್ಬುತ ಕಥೆಯನ್ನು ಯುವ ನಿರ್ದೇಶಕರ ಆದಿತ್ಯ ಧರ್ ತನ್ನ ಮೊದಲ ಚಿತ್ರದಲ್ಲಿ ಮನಮುಟ್ಟುವಂತೆ ನಿರ್ದೇಶಿಸಿದ್ದಾರೆ. ಕಾಶ್ಮೀರ – ಪಾಕ್ ಗಡಿಯ ನೈಜತೆಯನ್ನು ಸೈಬ್ರಿಯಾ ದೇಶದ ಕಾಡಿನಲ್ಲಿ ಚಿತ್ರಿಸಲಾಗಿದೆ. ವಿಕ್ಕಿ ಕೌಷಲ್ ಎಂಬ ನಟ ಸೇನಾಧಿಕಾರಿ ವಿಹಾನ್ ಸಿಂಗ್ ಪಾತ್ರದಲ್ಲಿ ನಟಿಸಿದ ರೀತಿಯೂ ಮೆಚ್ಚುಗೆಯಾಗುತ್ತದೆ. ಪ್ರಧಾನಿ ಮೋದಿ, ರಕ್ಷಣಾ ಸಚಿವ ಪರಿಕ್ಕರ್ ಸೇರಿದಂತೆ ಎಲ್ಲರ ಪಾತ್ರಗಳಲ್ಲಿಯೂ ನೈಜತೆಯಿದೆ. ನಿಜ ಘಟನೆಯೊಂದನ್ನು ಹೀಗೂ ಚಿತ್ರವಾಗಿಸಬಹುದು ಎಂಬುದಕ್ಕೆ ಉರಿ ಸಿನಿಮಾ ಸಾಕ್ಷಿಯಾಗುತ್ತದೆ.
ಸಾಮಾನ್ಯವಾಗಿ ಉರಿ ಸರ್ಜಿಕಲ್ ಸ್ಟೈಕ್ ನಂಥ ವಿಷಯವನ್ನು ಹೇಳುವಾಗ ಬಹಳಷ್ಟು ಸಂಗತಿಗಳಿಗೆ ಸೇನಾಡಳಿತ ಅನುಮತಿ ನೀಡುವುದಿಲ್ಲ. ಆದರೆ, ಈ ಚಿತ್ರದ ಮಟ್ಟಿಗೆ ಹಲವು ಸಂಗತಿಗಳನ್ನು ಪ್ರಸ್ತಾಪಿಸಲು ಅವಕಾಶ ನೀಡುವ ಮೂಲಕ ಬಾರತೀಯರಿಗೆ ಸೇನಾಕಾರ್ಯಾಚರಣೆಯ ವಿಷಯಗಳ ಮಾಹಿತಿ ನೀಡುವಲ್ಲಿ ಸಫಲವಾಗಿದೆ. ದೇಶಪ್ರೇಮವನ್ನು ಬಡಿದೆಬ್ಬಿಸುವ ಪ್ರಯತ್ನಕ್ಕೂ ಉರಿ ಚಿತ್ರ ನೆರವಾಗಿದೆ. ಈ ಮೂಲಕ ಸೈನ್ಯದ ಉದ್ದೇಶವೂ ಸಫಲವಾಗಿದೆ.
ಎಲ್ಲಿಯೂ ವಿಷಾಯಾಂತರಗೊಳ್ಳದೇ, ಉತ್ಪೇಕ್ಷೆಗೆಗೊಳಗಾಗದೇ ಸೀದಾಸಾದಾ ರೀತಿಯಲ್ಲಿಯೇ ಕಥೆ ಹೇಳುತ್ತಾ ಸಾಗುವ ಚಿತ್ರ ಅಂತಿಮವಾಗಿಯೂ ಬಹುಪರಾಕ್ ಎನಿಸಿಕೊಳ್ಳದೇ ದಿಡೀರ್ ಅಂತ್ಯಗೊಳ್ಳುತ್ತದೆ. ಇನ್ನೂ ಬೇಕಿತ್ತು ಎನಿಸುವಾಗಲೇ ಚಿತ್ರ ಮುಗಿಯುತ್ತದೆ. ಈ ಮೂಲಕ ಚಿತ್ರ ಮನಸ್ಸಿನಲ್ಲಿ ಹಲವು ದಿನಗಳ ಕನವರಿಕೆಗೆ ಕಾರಣವಾಗುತ್ತದೆ.
ರಾಜಕೀಯಕ್ಕಾಗಿನ ಚಿತ್ರವೇ?
ಇದು ಮೋದಿಗೆ ವೋಟ್ ತಂದುಕೊಡಲು ನೆರವಾಗುತ್ತದೆ. ಚಿತ್ರ ಹಣ ಮಾಡಲೆಂದೇ ನಿರ್ಮಿತವಾಗಿವೆ. ಇದೇನ್ ಮಹಾ ಎಂದೆಲ್ಲಾ ಕೆಲವರು ಬಾಲಿಶವಾದ ಹೇಳಿಕೆ ನೀಡುತ್ತಿದ್ದಾರೆ. ಇಂಥ ಹೇಳಿಕೆಗಳು ಬದಿಗಿರಲಿ.
ಪ್ರದಾನಿಯಾಗಿದ್ದ ವ್ಯಕ್ತಿ ಸೈನಿಕರಿಗೆ ಮುನ್ನುಗ್ಗಿ, ಸೋಲು ನನಗಿರಲಿ, ಗೆಲವು ನಿಮ್ಮದಾಗಿರಲಿ ಎಂದು ಹುರಿದುಂಬಿಸಿ ರಾತ್ರಿಯಿಡಿ ಜಾಗರಣೆ ಕುಳಿತು ಭಾರತೀಯ ಸೈನಿಕರ ಸ್ಥಿತಿ ಕಾರ್ಯಾಚರಣೆ ಸಂದರ್ಭ ಹೇಗಿದೆಯೋ ಎಂದು ತಲೆಕೆಡಿಸಿಕೊಳ್ಳುತ್ತಾರೆ ಎಂದರೆ ಅಂಥ ಪ್ರಧಾನಿ ಬಗ್ಗೆಯೂ ಗೌರವ ಬಾರದಿದ್ದರೆ ಹೇಗೆ? ಚುನಾವಣೆಯಲ್ಲಿ ಮತಗಳನ್ನು ಯಾರಿಗೆ ಹಾಕುತ್ತೇವೆಯೋ ಅದು ಅವರವರಿಗೆ ಬಿಟ್ಟದ್ದು. ಆದರೆ, ಸೈನಿಕರೇ ಭಯೋತ್ಪಾದಕರ ಹುಟ್ಟಡಗಿಸಿ ಬನ್ನಿ ಎಂದು ಧೈರ್ಯ, ಸ್ಥೆರ್ಯ, ಆಧುನಿಕ ಶಸ್ತ್ರಾಸ್ತಗಳನ್ನು ನೀಡಿದ ಆ ಪ್ರಧಾನಿಗೆ ಮೆಚ್ಚುಗೆ ಸೂಚಿಸದಿದ್ದರೆ ಹೇಗೆ?
ಇದೇ ಅನುಮತಿ ಮೊದಲೇ ಸಿಕ್ಕಿದ್ದರೇ?
ಕೆಲವು ದಶಕಗಳ ಹಿಂದೆ, ನನಗೆ 24 ಗಂಟೆಗಳ ಕಾಲಾವಕಾಶ ನೀಡಿ ಪಾಕಿಸ್ತಾನಿಗಳ ಹುಟ್ಟಡಗಿಸಿ ಬರುತ್ತೇನೆ ಎಂದಿದ್ದ ಕೊಡಗಿನ ಹೆಮ್ಮೆಯ ಜನರಲ್ ತಿಮ್ಮಯ್ಯ ಅವರಿಗೂ ಆ ಸಂದರ್ಭ ಸರ್ಜಿಕಲ್ ಸ್ಟೈಕ್ ಗೆ ಅನುಮತಿ ನೀಡಿದ್ದರೆ, ಕಾಶ್ಮೀರಕ್ಕೆ ಇಂದಿನ ದುರ್ಗತಿ ಬರುತ್ತಿರಲಿಲ್ಲವೇನೋ.
ಅದೇನೇ ಇರಲಿ.. ಉರಿ ಎಂಬ ಅಪರೂಪದ ಸಿನಿಮಾ ವೀಕ್ಷಿಸುವ ಮೂಲಕ ಸೈನಿಕ ಕಾರ್ಯಾಚರಣೆ ಹೇಗಿರುತ್ತೆ.. ಸೈನಿಕರ ಜೀವನ ಎಷ್ಟೊಂದು ಸಾಹಸಮಯ, ಯಾತನಾಮಯವಾಗಿರುತ್ತೆ ಎಂದು ತಿಳಿದುಕೊಳ್ಳುವ ಅಪೂರ್ವ ಅವಕಾಶವನ್ನು ಉರಿ ಎಂಬ ಚಿತ್ರ ನೀಡಿದೆ. ನಾನು ಸಿನಿಮಾಗಳನ್ನು ನೋಡೇದೇ ಇಲ್ಲ ಎಂಬ ಧೋರಣೆ ಬದಿಗಿಟ್ಟು ಭಾರತದ ಗಡಿಯನ್ನು ತಮ್ಮ ಪ್ರಾಣ ಒತ್ತೆಯಿಟ್ಟು ಕಾಯುತ್ತಿರುವ ಸೈನಿಕರಿಗಾಗಿಯಾದರೂ ಒಮ್ಮೆ ನೋಡಿ.
ಅಂದ ಹಾಗೆ, ಈವರೆಗೂ ನಾವು ನೀವೆಲ್ಲಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಬಾಹುಬಲಿ -2 ಎಂಬ ಚಿತ್ರದ ಎಲ್ಲಾ ದಾಖಲೆಗಳನ್ನು ಉರಿ ಚಿತ್ರ ಪುಡಿಗಟ್ಟಿದೆ. ಕೇವಲ 23 ದಿನಗಳಲ್ಲಿ ಉರಿ ಚಿತ್ರ 200 ಕೋಟಿ ರು ಸಂಗ್ರಹಿಸಿ 500 ಕೋಟಿ ಸಂಗ್ರಹದತ್ತ ಮುನ್ನುಗ್ಗಿ ದೇಶದ ಇತಿಹಾಸದಲ್ಲಿಯೇ ಮಹೋನ್ನತ ದಾಖಲೆಗೆ ದಾಪುಗಾಲಿಡುತ್ತಿದೆ.
ಉರಿ ಎಂಬ ಚಿತ್ರವನ್ನು ನೋಡುತ್ತಿದ್ದಾಗ ಕೇಳಿಬರುತ್ತಿದ್ದ ಸೈನಿಕರ ಪರ ಘೋಷಣೆಗಳು, ವಂದೇ ಮಾತರಂ ಎಂಬ ಉದ್ಗೋಷ. ಚಪ್ಪಾಳೆಯ ಮಾರ್ಧನಿ. ಭಾರತದ ಸೇನಾ ಪಡೆಯ ಬಗ್ಗೆ ಭಾರತೀಯರಿಗೆ ಇರುವ ಹೆಮ್ಮೆಯ ದ್ಯೋತಕ ಎನ್ನಿಸಿತು. ಸೈನಿಕರ ವೀರಸಾಹಸವನ್ನು ಚಿತ್ರ ರೂಪದಲ್ಲಿ ವೀಕ್ಷಿಸಿದರರ ಸಂತೋಷದ ಕಂಬನಿ ನಮ್ಮ ಸೈನಿಕರಿಗೆ ತುಡಿಯುವ ಮನಸ್ಸುಗಳು ಇನ್ನೂ ಜೀವಂತವಿದೆ ಎಂಬ ಭಾವನೆಗೆ ಕಾರಣವಾಯಿತು. ಅವರವರ ಅಭಿಮಾನಿ ನಾಯಕರಿಗೆ ಪ್ರೇಕ್ಷಕರು ಥಿಯೇಟರ್ ಸೂರು ಹಾರಿಹೋಗುವಂತೆ ಚಪ್ಪಾಳೆ ತಟ್ಟಿ , ಶಿಳ್ಳೆ ಹೊಡೆದು ಸಂಭ್ರಮಿಸಿದ್ದನ್ನು ನೋಡಿದ್ದೇನೆ.
ಆದರೆ, ಚಿತ್ರವೊಂದನ್ನು ವೀಕ್ಷಿಸುತ್ತಲೇ ಕಣ್ಣೀರುಗರೆಯುತ್ತಾ, ಆ ವೀರ ಸೈನಿಕರಿಗೆ ಭಾಷ್ಪಾಂಜಲಿ ಹಾಕುತ್ತಿದ್ದ ಬಹಳ ಅಪರೂಪದ ಸನ್ನಿವೇಶವನ್ನೂ ನಾನು ನೋಡಿದೆ. ಅದೇ ಉರಿ ಎಂಬ ಸರ್ಜಿಕಲ್ ಸ್ಟ್ಕೈಕ್ ನ ಸಾರ್ಥಕತೆ.
(ಗಮನಿಸಿ – ಮಡಿಕೇರಿಯ ಕಾವೇರಿ ಚಿತ್ರಮಂದಿರ ಶ್ರ10, 2, 6 ಮತ್ತು 9 ಗಂಟೆ ಪ್ರದಶ೯ನ ಹಾಗೂ ಕುಶಾಲನಗರದ ಕೂರ್ಗ್ ಸಿನಿಫ್ಲೆಕ್ಸ್ ( 11, 2,5 ಮತ್ತು 8 ಗಂಟೆ ಪ್ರದಶ೯ನ) ಗಳಲ್ಲಿ ಗುರುವಾರದವರೆಗೆ ಉರಿ ಚಿತ್ರ ವೀಕ್ಷಿಸಬಹುದು.)
ಸೈನಿಕರಾಗಲಿಲ್ಲ, ಪರವಾಗಿಲ್ಲ. ಸೈನಿಕರ ಧೀರ ಕಾರ್ಯಾಚರಣೆಯನ್ನು 2.10 ಗಂಟೆ ಸಿನಿಮಾದಲ್ಲಿ ವೀಕ್ಷಿಸಿ ಅಭಿನಂದಿಸುವ ಅವಕಾಶ ಮಿಸ್ ಮಾಡಿಕೊಳ್ಳಬೇಡಿ.
– ಅನಿಲ್ ಎಚ್.ಟಿ
ಪತ್ರಕರ್ತ
ಮಡಿಕೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಕ್ರೀಡೆ
ಶುಕ್ರವಾರ | ಬೆಳಗಿನ ಪ್ರಮುಖ ಸುದ್ದಿಗಳು

ಶುಕ್ರವಾರ | ಬೆಳಗಿನ ಪ್ರಮುಖ ಸುದ್ದಿಗಳು
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದೂ ಕೂಡ ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ವೀಕ್ಷಣೆಯನ್ನು ಮುಂದುವರೆಸಲಿದ್ದಾರೆ. ಸಾಯಿ ಬಡಾವಣೆ, ನಾಗಪ್ಪ ರೆಡ್ಡಿ ಬಡಾವಣೆ ಮತ್ತು ಪೈ ಬಡಾವಣೆಗಳಿಗೆ ಅವರು ಭೇಟಿ ನೀಡಲಿದ್ದಾರೆ.
- ಪರಿಷ್ಕೃತ ಕ್ರಿಯಾ ಯೋಜನೆ 2015 ರಲ್ಲಿ ಲೋಪವಿದೆ ಎಂಬ ಕಾರಣಕ್ಕೆ ಜಲ ಮೂಲಗಳ ಬಳಕೆಯನ್ನು ವಸತಿ ಉದ್ದೇಶಕ್ಕೆ ಪರಿವರ್ತಿಸುವ ಕುರಿತಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿದ್ದ ಅಧಿಸೂಚನೆಯನ್ನು ತಕ್ಷಣವೇ ರದ್ದುಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡಿಎ ಆಯುಕ್ತರಿಗೆ ಸೂಚಿಸಿದ್ದಾರೆ. ಅದರಂತೆ ಬಿಡಿಎ ಆಯುಕ್ತರು ಅಧಿಸೂಚನೆ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
- ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ಉಡುಪಿ, ವಿಜಯಪುರ, ಬೆಳಗಾವಿ, ತಿಪಟೂರು ಸೇರಿ ಹಲವು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ವತಃ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
- ಬೆಸ್ಕಾಂನ ಎಲ್ಲ ಕಾರ್ಯ ಮತ್ತು ಪಾಲನ ವಿಭಾಗಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರದಂದು ಅಂದರೆ, ನಾಳೆ ಮಧ್ಯಾಹ್ನ 3 ಗಂಟೆಯಿಂದ 5.30ರವರೆಗೆ ಗ್ರಾಹಕ ಸಂವಾದ ಸಭೆಗಳನ್ನು ನಡೆಸಲಾಗುವುದು. ಗ್ರಾಹಕರು ವಿದ್ಯುತ್ಗೆ ಸಂಬಂಧಿಸಿದ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.
- ಜೈಪುರದಲ್ಲಿ ಇಂದು ನಡೆಯಲಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ನಂತರ ಅವರು ಪಕ್ಷದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
- ಇಂದಿನಿಂದಲೇ ಜಾರಿಗೆ ಬರುವಂತೆ ಕಚ್ಚಾ ಸೆಣಬಿನ ಮೇಲಿನ ಬೆಲೆ ಮಿತಿಯನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷ ಸೆಪ್ಟಂಬರ್ 30ರಂದು ಸೆಣಬು ಕಾರ್ಖಾನೆಗಳು ಮತ್ತು ಇತರೆ ಬಳಕೆದಾರರು ಟಿಡಿ5 ದರ್ಜೆಯ ಸೆಣಬು ಖರೀದಿಸಲು ಪ್ರತಿ ಕ್ವಿಂಟಾಲ್ ಗೆ 6ಸಾವಿರದ 500ರೂಪಾಯಿ ಬೆಲೆ ಮಿತಿ ನಿಗದಿಪಡಿಸಲಾಗಿತ್ತು. ಕಚ್ಚಾ ಸೆಣಬು ವ್ಯಾಪಾರದ ಮಾರುಕಟ್ಟೆಯ ಎಲ್ಲ ಆಯಾಮಗಳನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
- ಐಪಿಎಲ್ ಟಿ-20 ಕ್ರಿಕೆಟ್ನಲ್ಲಿಂದು ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.
- ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
- ಇದೇ 22ರಂದು ಫಿಲ್ಮಾಹಾಲಿಕ್ ಫೌಂಡೇಶನ್ ವತಿಯಿಂದ 3ನೇ ವರ್ಷದ ಕರ್ನಾಟಕ ಯುವ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ ಮತ್ತು ಮೈಸೂರು ಅಂತಾರಾಷ್ಟ್ರೀಯ ಜಲ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಮೈಸೂರಿನ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮೈಸೂರು ಅಂತರಾಷ್ಟ್ರೀಯ ಜಲ ಚಲನಚಿತ್ರೋತ್ಸವದ ಮುಖ್ಯ ಉದ್ದೇಶ ಹೊಸ ತಲೆಮಾರಿನ ಚಲನಚಿತ್ರ ತಯಾರಕರಿಗೆ ಕಲಾತ್ಮಕ ಸೃಜನಶೀಲತೆಯನ್ನು ಪೋಷಿಸಿ ಮತ್ತು ಉತ್ತೇಜಿಸಿ ಅವರ ಚಲನಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರದರ್ಶಿಸುವುದೇ ಆಗಿದೆ. 91ಕ್ಕೂ ಹೆಚ್ಚು ದೇಶಗಳ ಚಲನಚಿತ್ರ ತಯಾರಕರು ಭಾಗವಹಿಸಲಿದ್ದಾರೆ.
- ಚಾಮರಾಜನಗರ ತಾಲೂಕಿನ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು ಜಲಾಶಯಗಳು ಯಾವುದೇ ಸಮಯದಲ್ಲಿ ಭರ್ತಿಯಾಗಬಹುದಾಗಿದೆ. ಜಲಾಶಯಗಳ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮದ ಕಬಿನಿ ನಾಲೆಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮನವಿ ಮಾಡಿದ್ದಾರೆ.
- ಮಂಡ್ಯದಲ್ಲಿ ಭಾರಿ ಮಳೆಯಿಂದ ಬೀಡಿ ಕಾಲೋನಿಯ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲಾಧಿಕಾರಿ ಎಸ್. ಅಶ್ವತಿ ಬೀಡಿ ಕಾಲೋನಿಗೆ ಭೇಟಿ ನೀಡಿ, ಪರಿಶೀಲಿಸಿ ಸದ್ಯಕ್ಕೆ ಕಾಲೋನಿಯ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
- ಮುಂಗಾರು ಋತುವಿನಲ್ಲಿ ವಿದ್ಯುತ್ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಕೂಡಲೆ ಅಗತ್ಯ ಪ್ರಮಾಣದ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ವಿದ್ಯುತ್ ಉತ್ಪಾದನಾ ಸಂಸ್ಥೆಗಳಿಗೆ ಸೂಚಿಸುವಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರಕಾರ ಸಲಹೆ ನೀಡಿದೆ. ರಾಜ್ಯ ಸರ್ಕಾರಗಳು ವಿದ್ಯುತ್ ಉತ್ಪಾದನೆಗಾಗಿ ಕೂಡಲೇ ಅಗತ್ಯ ಕಲ್ಲಿದ್ದಲು ಪ್ರಮಾಣದ ಶೇಕಡ10ರಷ್ಟನ್ನು ಆಮದು ಮಾಡಿಕೊಳ್ಳುವಂತೆ ಹಾಗೂ ಈ ತಿಂಗಳ 31ರೊಳಗೆ ಕಲ್ಲಿದ್ದಲು ಆಮದು ಆರ್ಡರ್ ನೀಡುವಂತೆ ಸಚಿವ ಆರ್ಕೆ ಸಿಂಗ್ ಸೂಚಿಸಿದ್ದಾರೆ.
- ಇದೇ 21 ಮತ್ತು 22ರಂದು ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಯಾದಗಿರಿ ಜಿಲ್ಲೆಯಲ್ಲಿ ನಡೆಯಲಿದ್ದು, 6 ಸಾವಿರದ 625 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. 28 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ರಾಗಪ್ರಿಯಾ ಯಾದಗಿರಿಯಲ್ಲಿ ತಿಳಿಸಿದ್ದಾರೆ.
- ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೇ 21ರಂದು ನಿಗದಿಯಾಗಿದ್ದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಮೇ 27ಕ್ಕೆ ಮುಂದೂಡಲಾಗಿದೆ. ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿರುವುದರಿಂದ ಚುನಾವಣಾ ನೀತಿ ಸಂಹಿತೆ ಹಾಗೂ ಶಿಕ್ಷಣ ಇಲಾಖೆಯ ಟಿಇಟಿ ಪರೀಕ್ಷೆಯನ್ನು ಮೇ 21 ರಂದು ನಿಗದಿಗೊಳಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
- ದಾವಣಗೆರೆ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯಿಂದ ಕೆರೆ ಕಟ್ಟೆಗಳಿಗೆ ನೀರು ಬಂದಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯ ಅಬ್ಬರಕ್ಕೆ ಹರಿಹರ ಮತ್ತು ಹೊನ್ನಾಳಿ ತಾಲ್ಲೂಕಿನಲ್ಲಿ ಕೊಯ್ಲಿಗೆ ಬಂದಿದ್ದ ಭತ್ತ ನೆಲ ಕಚ್ಚಿದ್ದು, 1 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಬೆಳೆ ಹಾಳಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
- ಅವಧಿಗೆ ಮುನ್ನವೇ ಮುಂಗಾರು ಅಪ್ಪಳಿಸಿರುವ ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆ ಇಂದು ಕೂಡ ಕೇರಳ ರಾಜಧಾನಿ ತಿರುವನಂತಪುರಂ, ಕೊಲ್ಲಂ ಸೇರಿದಂತೆ ಒಟ್ಟು 12 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದೆ.
- ವಾರ್ಷಿಕ ಅಮರನಾಥ ಯಾತ್ರೆ ಹಾಗೂ ಮಚಲಿ ಯಾತ್ರೆಯ ಹಿನ್ನೆಲೆಯಲ್ಲಿ ಸೇನಾ ಪಡೆಗಳ ಹಾಗೂ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಭದ್ರತಾ ಪರಿಶೀಲನೆ ನಡೆಸಿದರು. ಲೆಫ್ಟಿನೆಂಟ್ ಜನರಲ್ ಮಂಜಿಂದರ್ ಸಿಂಗ್ ನೇತೃತ್ವದಲ್ಲಿ ಸೇನಾ ಪಡೆಗಳ ತಂಡ ಜಮ್ಮು ವಲಯದ ನಗ್ರೋಟಾ ಎಂಬಲ್ಲಿ ಭದ್ರತಾ ಸಿದ್ಧತೆಗಳ ಪರಿಶೀಲನೆ ನಡೆಸಿತು. ಜಮ್ಮು ಪೊಲೀಸ್ ಇಲಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಮುಖೇಶ್ ಸಿಂಗ್ ಹಾಗೂ ಗುಪ್ತಚರ ದಳದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
- ಐಪಿಎಲ್ ಕ್ರಿಕೆಟ್ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್ಗಳಿಂದ ಜಯಗಳಿಸಿದೆ. ಟೈಟನ್ಸ್ ತಂಡ ಒಡ್ಡಿದ 169ರನ್ಗಳ ಗುರಿ ಬೆನ್ನೆತ್ತಿದ ಬೆಂಗಳೂರು ತಂಡ ಇನ್ನೂ 8ಎಸೆತಗಳು ಬಾಕಿ ಇರುವಂತೆ 2 ವಿಕೆಟ್ ನಷ್ಟಕ್ಕೆ 170ರನ್ಗಳಿಸಿ ಗೆಲುವಿನ ನಗೆ ಬೀರಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ
ಕಾನ್ ಚಲನಚಿತ್ರೋತ್ಸವದಲ್ಲಿ ಭಾರತೀಯ ಪೆವಿಲಿಯನ್ ಉದ್ಘಾಟಿಸಿದ ಸಚಿವ ಅನುರಾಗ್ ಠಾಕೂರ್

ಸುದ್ದಿದಿನ ಡೆಸ್ಕ್ : ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಕಾನ್ ಚಲನಚಿತ್ರೋತ್ಸವದಲ್ಲಿ ಭಾರತೀಯ ಪೆವಿಲಿಯನ್ ಅನ್ನು ಉದ್ಘಾಟಿಸಿದರು.
ಈ ವೇಳೆ ಅವರು 53 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಠಾಕೂರ್ ಅವರು ದೃಶ್ಯ ಮತ್ತು ಶ್ರವಣ ಮಾಧ್ಯಮ ಸಹ ನಿರ್ಮಾಣ ಪ್ರೋತ್ಸಾಹ ಯೋಜನೆಯಡಿ ಭಾರತದಲ್ಲಿ ನಿರ್ಮಾಣ ಮತ್ತು ಚಿತ್ರೀಕರಣಗೊಂಡ ಚಿತ್ರಗಳಿಗೆ ಶೇಕಡ 30ರಷ್ಟು ಅಂದರೆ 260ಸಾವಿರ ಡಾಲರ್ವರೆಗೆ ವಿನಾಯತಿ ನೀಡಲಾಗುವುದು ಎಂದು ಪ್ರಕಟಿಸಿದರು.
ಅಲ್ಲದೆ ಭಾರತದಲ್ಲಿ ಚಿತ್ರೀಕರಣ ಮಾಡಲಾಗುವ ವಿದೇಶಿ ಚಿತ್ರಗಳಿಗೆ ಹೆಚ್ಚುವರಿಯಾಗಿ 65 ಸಾವಿರ ಡಾಲರ್ ಬೋನಸ್ ನೀಡಲಾಗುವುದು. ಅವರು ಶೇಕಡ 15ಕ್ಕೂ ಅಧಿಕ ಮಾನವ ಸಂಪನ್ಮೂಲವನ್ನು ಭಾರತದಿಂದಲೇ ಬಳಸಿಕೊಂಡಿರಬೇಕು ಎಂದು ಹೇಳಿದರು.
ಭಾರತವನ್ನು ಚಲನಚಿತ್ರ ನಿರ್ಮಾಣ ಹಾಗೂ ಶ್ರವಣ ಮತ್ತು ದೃಶ್ಯ ಮಾಧ್ಯಮದ ತಾಣವನ್ನಾಗಿ ರೂಪಿಸಲು ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಚಲನಚಿತ್ರ ಪರಂಪರಾ ಯೋಜನೆ ಅಡಿ ಸರ್ಕಾರ ವಿಶ್ವದ ಅತಿದೊಡ್ಡ ಸಿನಿಮಾ ಪುನರುಜ್ಜೀವನ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅದರಡಿ ಎಲ್ಲಾ ಭಾಷೆಗಳ 2 ಸಾವಿರದ 200 ಅಧಿಕ ಚಲನಚಿತ್ರಗಳ ವೈಭವವನ್ನು ಮರು ಸ್ಥಾಪಿಸಲಾಗುವುದು ಎಂದು ಅನುರಾಗ್ ಠಾಕೂರ್ ಹೇಳಿದರು.
Shooting of foreign films in India gets a boost, Union Minister @ianuragthakur announces major sops
Inaugurates 🎪India Pavilion; unveils poster for 53rd edition of #IFFI at #CannesFilmFestival
Read details: https://t.co/sifPxUmtGN
1/n pic.twitter.com/aYpo60NLYx
— PIB India (@PIB_India) May 18, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಬೆಳಗಿನ ಪ್ರಮುಖ ಸುದ್ದಿಗಳು

ಬೆಳಗಿನ ಪ್ರಮುಖ ಸುದ್ದಿಗಳು
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಚಿಕ್ಕಮಗಳೂರು ಜಿಲ್ಲಾ ಭೇಟಿ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ 16 ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದ್ದಾರೆ.
- ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದ್ದು, ಕೇಂದ್ರ ಸಂಸ್ಕೃತಿ ಸಚಿವಾಲಯದಿಂದ ಬೆಂಗಳೂರಿನ ’ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್’ನಲ್ಲಿ ಇಂದು ಸಂಜೆ 6 ಗಂಟೆಗೆ ’ವಸ್ತು ಸಂಗ್ರಹಾಲಯದ ಶಕ್ತಿ’ ಕುರಿತ ವಿಚಾರಸಂಕಿರಣ ಆಯೋಜಿಸಲಾಗಿದೆ.
- ಕೇಂದ್ರ ಸರ್ಕಾರದ ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಗೃಹ ಬಳಕೆಯ ವೆಚ್ಚ ಸಮೀಕ್ಷೆ ಕುರಿತ 2 ದಿನಗಳ ತರಬೇತಿ ಕಾರ್ಯಾಗಾರ ಇಂದು ಬೆಂಗಳೂರಿನಲ್ಲಿ ಚಾಲನೆಯಾಗಲಿದೆ. ಜುಲೈ 1 ರಿಂದ ಒಂದು ವರ್ಷದ ಅವಧಿಗೆ ಸಮೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
- ಡ್ರೋಣ್, ರೋಬೋಟಿಕ್ಸ್ ಸೇರಿದಂತೆ ಮುಂದುವರಿದ ತಂತ್ರಜ್ಞಾನದೊಂದಿಗೆ ರಕ್ಷಣಾ ಪಡೆಗಳನ್ನು ಬಲಪಡಿಸಲಾಗುತ್ತಿದೆ. ’ಆತ್ಮ ನಿರ್ಭರ್ ಭಾರತ್’ ಪರಿಕಲ್ಪನೆಯಡಿ ರಕ್ಷಣಾ ವಲಯದ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಗುತ್ತಿದೆ ಎಂದು ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ ನೀಡಿದ್ದಾರೆ.
- ಉತ್ತರಖಂಡದಲ್ಲಿ ಮೇ 3ರಿಂದ ಚಾರ್ಧಾಮ್ ಯಾತ್ರೆ ಆರಂಭಗೊಂಡಿದ್ದು, ಇದೂವರೆಗೆ 3ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಂಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಗಳು ಸತತವಾಗಿ ಯಾತ್ರೆಯ ನಿಗಾವಹಿಸುತ್ತಿವೆ. ಎಲ್ಲ ಯಾತ್ರಾರ್ಥಿಗಳು, ಯಾತ್ರೆಗೆ ಮುನ್ನ ಅಧಿಕೃತವಾಗಿ ನೋಂದಾಯಿಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.
- ಚಲನಚಿತ್ರ ವಲಯದಲ್ಲಿ ಸುಗಮ ಉದ್ಯಮ ವಾತಾವರಣ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಚಲನಚಿತ್ರಗಳು ಮತ್ತು ವಿದೇಶಿ ಚಿತ್ರಗಳ ಸಹ-ನಿರ್ಮಾಣಕ್ಕೆ ಎಲ್ಲ ಸೌಲಭ್ಯ ಒದಗಿಸಲು ಹಾಗೂ ಸರ್ಕಾರಿ ಮಟ್ಟದ ವಿವಿಧ ಅನುಮತಿ ನೀಡಿಕೆಗೆ ಏಕಗವಾಕ್ಷಿ ವ್ಯವಸ್ಥೆ ರೂಪಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಧಾನಿ ವಿವರಿಸಿದರು.
- ರಾಜ್ಯದ ಕರಾವಳಿಯಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತುರ್ತು ಸೇವೆಗೆ ಶುಲ್ಕರಹಿತ ದೂರವಾಣಿ ಸಂಖ್ಯೆ 1077ಹಾಗೂ ದೂರವಾಣಿ ಸಂಖ್ಯೆ08382-229857 ಮೊಬೈಲ್ ಸಂಖ್ಯೆ 9483511015 ಕ್ಕೆ ಸಂಪರ್ಕಿಸಲು ಜಿಲ್ಲಾಡಳಿತ ಕೋರಿದೆ.
- ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಧಾರವಾಡ ವಲಯದ ಕಾರ್ಯಕ್ರಮ ಐತಿಹಾಸಿಕ ಬಾದಾಮಿಯಲ್ಲಿ ಇಂದು ನಿಗದಿಯಾಗಿದೆ.
- ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಗೆ ನಿನ್ನೆ ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ನಾಮಪತ್ರ ಸಲ್ಲಿಸಲು ಇದೇ 24ರಂದು ಕೊನೆಯ ದಿನವಾಗಿದ್ದು, 25ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 27ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿರುತ್ತದೆ. ಅಗತ್ಯ ಬಿದ್ದಲ್ಲಿ ಜೂನ್ 3ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿರುತ್ತದೆ. 5 ಗಂಟೆಯ ನಂತರ ಮತಗಳ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
- ನೌಕಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಭಾರತೀಯ ನೌಕಾಪಡೆಗಳೊಂದಿಗೆ ಜಂಟಿ ಕಾರ್ಯ ನಿರ್ವಹಿಸಲು ಅಮೆರಿಕ ಉತ್ಸುಕವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
- ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆಯಲ್ಲಿ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದು, ಭಾರತೀಯ ಚಿತ್ರೋದ್ಯಮ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ. ಭಾರತದಲ್ಲಿ ಅಸಂಖ್ಯಾತ ಕಥೆಗಳಿದ್ದು, ಇದು ಜಾಗತಿಕ ಕಥಾ ಕಣಜವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
- ಬ್ಯಾಂಕಾಕ್ ನಲ್ಲಿ ಇತ್ತೀಚೆಗೆ ನಡೆದ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜಯಗಳಿಸಿದ ಭಾರತೀಯ ತಂಡದ ಆಟಗಾರ ಹಾಗೂ ಬೆಂಗಳೂರಿನಲ್ಲಿ ತರಬೇತಿ ಪಡೆದಿರುವ ಲಕ್ಷ್ಯ ಸೇನ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 5ಲಕ್ಷ ರೂಪಾಯಿ ಬಹುಮಾನದ ಚೆಕ್ ನ್ನು ನಿನ್ನೆ ಪ್ರದಾನ ಮಾಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಉಪಸ್ಥಿತರಿದ್ದರು.
- ಕೇರಳದಲ್ಲಿ ಭಾರೀ ಮಳೆ ಮುಂದುವರಿದಿದ್ದು, 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ಪಾಲಕ್ಕಾಡ್, ಕೋಳಿಕೋಡ್, ವೈನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 3 ದಿನಗಳಲ್ಲಿ ಗುಡುಗುಸಹಿತ ಭಾರೀ ಮಳೆ ಮುಂದುವರಿಯಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
- ರಾಜ್ಯಾದ್ಯಂತ ನಿನ್ನೆ ರಾತ್ರಿ ಧಾರಾಕಾರ ಮಳೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗುಡುಗುಸಹಿತ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ವಾಹನ ಸಂಚಾರ, ಜನಜೀವನವನ್ನು ಅಸ್ತವ್ಯಸ್ಥಗೊಂಡಿದೆ. ಹಳೆ ಮೈಸೂರು ಭಾಗದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.
- ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ6 ಸಾವಿರದ500 ಕ್ಕೂ ಹೆಚ್ಚು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಾಲೆಗಳನ್ನು ಗುರುತಿಸಿ, ಆಗಸ್ಟ್ನಿಂದ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
- ಲಂಡನ್ ನಲ್ಲಿ ಇದೇ 19ರಂದು ನಡೆಯಲಿರುವ ಕಾಮನ್ವೆಲ್ತ್ ರಾಷ್ಟ್ರಗಳ ಶಿಕ್ಷಣ ಸಮಾವೇಶ ಹಾಗೂ ಇದೇ 26ರಿಂದ ದಾವೋಸ್ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಪಾಲ್ಗೊಳ್ಳಲಿದ್ದಾರೆ.
- ನಗರದ ಸುಗಮ ಸಂಚಾರ ವ್ಯವಸ್ಥೆಗೆ ಟೋಯಿಂಗ್ ಅಗತ್ಯವಿದೆ. ಸರ್ಕಾರದೊಂದಿಗೆ ಚರ್ಚಿಸಿ ಪರಿಷ್ಕೃತ ನಿಯಮಗಳ ರೂಪಿಸಿ ಟೋಯಿಂಗ್ ವ್ಯವಸ್ಥೆ ಮರುಜಾರಿಗೆ ಪ್ರಯತ್ನಿಸಲಾಗುವುದು ಎಂದು ನೂತನ ಬೆಂಗಳೂರು ಪೊಲೀಸ್ ಆಯುಕ್ತ ಪ್ರಥಾಪ್ ರೆಡ್ಡಿ ಹೇಳಿದ್ದಾರೆ.
- ಅಸ್ಸಾಂನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಕುರಿತು ಗೃಹ ಸಚಿವ ಅಮಿತ್ ಶಾ ಕಳವಳ ವ್ಯಕ್ತ ಪಡಿಸಿದ್ದಾರೆ. ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಮತ್ತು ಈಗಾಗಲೇ ಎನ್ ಡಿ ಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
- ಮುಸ್ಲಿಮರ ಪ್ರವೇಶ ಮತ್ತು ಪೂಜೆಯ ಹಕ್ಕಿಗೆ ಅಡ್ಡಿಯಾಗದಂತೆ ಶಿವಲಿಂಗ ಪತ್ತೆಯಾದ ಪ್ರದೇಶವನ್ನು ರಕ್ಷಿಸುವಂತೆ ಸುಪ್ರೀಂ ಕೋರ್ಟ್ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಸೂಚಿಸಿದೆ. ಅಲ್ಲದೆ, ಈ ವಿಷಯವನ್ನು ನಾಳೆ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ. ಈ ಮಧ್ಯೆ, ಜ್ಞಾನವಾಪಿ ಮಸೀದಿಯ ಒಳಭಾಗದ ವಿಡಿಯೊ ಸಮೀಕ್ಷೆಗಾಗಿ ನೇಮಿಸಲಾಗಿದ್ದ ಕಮಿಷನರ್ ಅಜಯ್ ಕುಮಾರ್ ಮಿಶ್ರಾರನ್ನು ವಾರಾಣಸಿ ನ್ಯಾಯಾಲಯ ವಜಾಗೊಳಿಸಿದೆ.
- ದೇಶದಲ್ಲಿ ಕೋವಿಡ್ ಲಸಿಕೆ ನೀಡಿಕೆ ವ್ಯಾಪ್ತ 191 ಕೋಟಿ ೬೩ ಲಕ್ಷ ಗಡಿ ದಾಟಿದೆ. ನಿನ್ನೆ 13 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಯಿತು. ಇದುವರೆಗೆ 13ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ 4 ಕೋಟಿ 47 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ7 days ago
ಇಂದಿನಿಂದಲೇ ಈ ರಾಶಿಗಳಿಗೆ ಧನ ಲಾಭ, ಸುಖ ಸಂಪತ್ತು ಪ್ರಾಪ್ತಿ! ಶನಿವಾರ ರಾಶಿ ಭವಿಷ್ಯ-ಮೇ-14,2022
-
ಬಹಿರಂಗ4 days ago
ಡಾಕಿನಿ ಎಂದರೆ ಬೌದ್ಧ ಭಿಕ್ಕುಣಿ / ಬೌದ್ಧ ಯೋಗಿಣಿ
-
ಅಂತರಂಗ7 days ago
ರಾಜ್ಯದ ಗಡಿಯಿಂದ ದೇಶದ ಗಡಿಗೆ ಪ್ರವಾಸದ ಕ್ಷಣಗಳು..!
-
ನೆಲದನಿ5 days ago
ಕಾಯಕ ಜೀವಿಗಳ ಚಳುವಳಿಯಲ್ಲಿ ಬುದ್ಧಪ್ರಜ್ಞೆ
-
ಬಹಿರಂಗ5 days ago
ದಯೆಯಾಗಿ ಚಳುವಳಿ ಕೈಗೊಂಡ ಮಹಾ ಜ್ಞಾನಿ ಬುದ್ಧ
-
ನಿತ್ಯ ಭವಿಷ್ಯ5 days ago
ಸೋಮವಾರ- ರಾಶಿ ಭವಿಷ್ಯ ಮೇ-16,2022 : ಈ ಚಂದ್ರ ಗ್ರಹಣದಿಂದಾಗಿ ಈ ರಾಶಿಗಳಿಗೆ ಸಂತೋಷವೇ ಸಂತೋಷ!
-
ನಿತ್ಯ ಭವಿಷ್ಯ6 days ago
ಭಾನುವಾರ- ರಾಶಿ ಭವಿಷ್ಯ ಮೇ-15,2022
-
ದಿನದ ಸುದ್ದಿ4 days ago
ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ