ದಿನದ ಸುದ್ದಿ
ಜಾತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ : ಡಾ.ಬಿ.ಆರ್.ಅಂಬೇಡ್ಕರ್ ಈ ಬರಹ ನಿಮಗಾಗಿ

ಸಾಮೂಹಿಕ ಸಂಪ್ರದಾಯ,ಅಧಿಕಾರ ಮತ್ತು ಹಿತಗಳನ್ನು ಮೀರಿ ತನ್ನ ಸ್ವಂತ ಅಭಿಪ್ರಾಯ ಮತ್ತು ನಂಬಿಕೆಗಳನ್ನು ಸ್ವತಂತ್ರವಾಗಿ ಒಬ್ಬ ವ್ಯಕ್ತಿ ಹೇಳತೊಡಗುವುದೇ ಎಲ್ಲಾ ಬಗೆಯ ಸುಧಾರಣೆಗಳ ಆರಂಭ. ಈ ಸುಧಾರಣೆ ಮುಂದುವರಿಯುವುದೋ ಇಲ್ಲವೋ ಎನ್ನುವುದು ಆ ಸಮೂಹ ಆತನಿಗೆ ಒದಗಿಸುವ ಅವಕಾಶವನ್ನು ಅವಲಂಬಿಸುತ್ತದೆ.
ಸಮೂಹ ಅಥವಾ ಸಮಾಜ ತಾಳೆಯಿಂದ ನ್ಯಾಯಬುದ್ದಿಯಿಂದ ಅಹ ವ್ಯಕ್ತಿಗಳನ್ನು ನೋಡಿಕೊಂಡರೆ ಆ ವ್ಯಕ್ತಿಗಳು ತಮ್ಮ ಅಭಿಪ್ರಾಯಗಳನ್ನು ಮುಂದುವರಿಸುತ್ತಾ ಆಗಿ, ಕೊನೆಗೆ ಅವರನ್ನೆಲ್ಲ ಮನವೊಲಿಸಿ ತಮ್ಮ ಹೊಸ ವಿಚಾರಗಳಿಗೆ ಒಪ್ಪಿಸುವುದೂ ಸಾಧ್ಯ . ಸಮೂಹಕ್ಕೆ ಬೇಡವಾದರೆ ಆ ವ್ಯಕ್ತಿಗಳನ್ನು ಹತ್ತಿಕ್ಕಬಹುದು. ಹಾಗಾದಾಗ ಸುಧಾರಣೆಯ ಪ್ರಯತ್ನ ಸತ್ತು ಹೋಗುತ್ತದೆ. ಜಾತಿಯ ಕೈಯಲ್ಲಿ ಬಹಿಷ್ಕಾರವೆಂಬುದೊಂದು ಬಲಿಷ್ಠವಾದ ಹಕ್ಕು ಇದೆ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ . ಜಾತಿಯ ನಿಯಮಗಳನ್ನು ಮೀರಿದವನಿಗೆ ಕೊಡುವ ತೀವ್ರತರವಾದ ಶಿಕ್ಷೆಯೆಂದರೆ ಈ ಬಹಿಷ್ಕಾರ.
ಬಹಿಷ್ಕೃತ ವ್ಯಕ್ತಿ ತನ್ನ ಜಾತಿಯ ಯಾವನೊಂದಿಗೂ ಸಂಬಂಧವಿಟ್ಟುಕೊಳ್ಳುವಂತಿಲ್ಲ. ಹೀಗೆ ಎಲ್ಲರಿಗೂ ಬೇಡವಾಗಿ ಬದುಕುವುದೆಂದರೆ ಸತ್ತಂತೆಯೇ ಸರಿ . ಈ ಬಹಿಷ್ಕಾರದ ಭಯ ಬಲವಾಗಿರುವುದರಿಂದ ಯಾವ ಹಿಂದೂವಾದರೂ ಜಾತಿ ನಿಯಮಕ್ಕೆ ವಿರೋಧವಾಗಿ ತನ್ನ ಸ್ವಂತ ಅಭಿಪ್ರಾಯಗಳನ್ನು ಹೇಳುವ ಧೈರ್ಯ ಮಾಡಲಾರನು. ಸಮಾಜವನ್ನು ಬಿಟ್ಟು ಮನುಷ್ಯ ಬದುಕಲಾರ. ತಾನು ಹೇಳಿದಂತೆ ಅದು ಕೇಳದಿದ್ದರೆ, ಅದು ಹೇಳಿದಂತೆ ತಾನು ಕೇಳಬೇಕು . ಸಂಪೂರ್ಣವಾಗಿ ಅದಕ್ಕೆ ಶರಣಾಗುವ ಪ್ರಸಂಗ ಬಂದರೂ ಪರವಾಗಿಲ್ಲ . ವ್ಯಕ್ತಿಯ ಈ ದೌರ್ಬಲ್ಯದ ಲಾಭ ಪಡೆದುಕೊಳ್ಳಲು ಜಾತಿ ಯಾವಾಗಲೂ ಸಿದ್ದವಾಗಿರುತ್ತದೆ.
ಸುಧಾರಕನ ಜೀವನವನ್ನೊಂದು ನರಕವಾಗಿಸಬಲ್ಲ ಕುತಂತ್ರ ಜಾತಿಯಿಂದ ನಡೆಯಬಹುದು. ಕುತಂತ್ರ ಒಂದು ಅಪರಾಧವಾಗಿದ್ದ ಪಕ್ಷದಲ್ಲಿ ಧೈರ್ಯಶಾಲಿಯೊಬ್ಬನು ಜಾತಿಗೆ ವಿರೋಧವಾಗಿ ನಿಂತನೆಂದು ಅವನನ್ನು ಬಹಿಷ್ಕರಿಸುವ ಈ ದುಷ್ಪಕೃತ್ಯವನ್ನು ಕಾನೂನು ರೀತಿಯಲ್ಲಿ ಶಿಕ್ಷಾರ್ಹವೆಂದು ಏಕೆ ಪರಿಗಣಿಸಬಾರದೋ ನಾನರಿಯೆ. ಆದರೆ ಕಾನೂನು ಆಯಾ ಜಾತಿಗೆ ಅದರದರ ನಿಯಮಗಳ ಸ್ವಾತಂತ್ರ್ಯವಿತ್ತಿದೆ; ತಪ್ಪಿತಸ್ಥರಿಗೆ ಬಹಿಷ್ಕಾರ ಹಾಕುವ ಸ್ವಾತಂತ್ರ್ಯವನ್ನು ಪ್ರಶ್ನಿಸುವುದಿಲ್ಲ . ಸಂಪ್ರದಾಯಬದ್ದ ಜನರ ಕೈಯಲ್ಲಿ ಜಾತಿ ಒಂದು ಬಲಿಷ್ಟ ಆಯುಧವಾಗಿದ್ದು , ಅದ್ದರಿಂದ ಸುಧಾರಕನನ್ನೂ ಸುಧಾರಣೆಗಳನ್ನೂ ಅದು ನಿರ್ಮೂಲನೆಗೊಳಿಸಬಲ್ಲದು.
-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
