ರಾಜಕೀಯ
ಬಿಜೆಪಿ, ಕಾಂಗ್ರೆಸ್ ಮತ್ತು ಹಿಂದುತ್ವ..!

ಕಾಂಗ್ರೆಸ್ ಮೃದು ಹಿಂದುತ್ವವಾದಿಯೇ?- ಹೌದು, ಕಾಂಗ್ರೆಸ್ ಜಾತಿವಾದಿಯೇ?- ಹೌದು. ಕಾಂಗ್ರೆಸ್ ಭ್ರಷ್ಟ ಪಕ್ಷವೇ?- ಹೌದು. ಆದರೂ ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ನೋಡುವುದನ್ನು ನಾನು ನಾನು ಒಪ್ಪುವುದಿಲ್ಲ. ಬಿಜೆಪಿ, ಮತ್ತು ಅದರ ಜುಟ್ಟು ಹಿಡಿದಿರುವ ಆರೆಸ್ಸೆಸ್ ಧರಿಸಿರುವುದು ಸಾಂಸ್ಕೃತಿಕ ಮುಖವಾಡ, ಅದರ ಒಳಗಿರುವ ನೈಜಮುಖ ಜನಾಂಗವಾದಿ ಫ್ಯಾಸಿಸಂ.
ಅಂದರೆ, ಈ ದೇಶದ ಸಂಪೂರ್ಣ ಹಿಡಿತ ಕೆಲವೇ ಕೆಲವು ಜನಾಂಗಗಳಿಗೆ/ವರ್ಗಗಳಿಗೆ/ಜಾತಿಗಳಿಗಳ ಕೈಯಲ್ಲಿ ಇರಬೇಕೆಂದು ಬಯಸಿ ಅದನ್ನು ಜಾರಿಗೊಳಿಸಲು ನೂರು ವರ್ಷಗಳ ಹಿಂದೆಯೇ (1921ರಲ್ಲಿ) ಮೂಂಜೆಯನ್ನು ಜರ್ಮನಿಗೆ ಕಳಿಸಿ, ಅದೇ ಪ್ರಕಾರವಾಗಿ ಸಂಘಟನೆ ಕಟ್ಟಿದ ಇತಿಹಾಸ ಅದಕ್ಕಿದೆ. ಈ ಮೇಲಿನ ಉದ್ದೇಶಕ್ಕೆ ಆರೆಸ್ಸೆಸ್ – ಬಿಜೆಪಿಗೆ ತಡೆಯುಂಟು ಮಾಡುತ್ತಿರುವುದೇ 1950ರಲ್ಲಿ ಈ ದೇಶ ಒಪ್ಪಿಕೊಂಡ ಸಂವಿಧಾನ.
ಇದಕ್ಕೆ ಹೋಲಿಸಿದರೆ ಕಾಂಗ್ರೆಸ್ ಗೆ ಮೇಲಿನ ಯಾವ ಹಿಡನ್ ಅಜೆಂಡಾವಾಗಲೀ, ಮುಖವಾಡವಾಗಲೀ ಇಲ್ಲ. ದೇಶದ ಸಂವಿಧಾನವನ್ನು ತಿದ್ದುಪಡಿ ಮೂಲಕ ಬಂಡವಾಳಿಗರ ಲಾಭಕ್ಕೆ ಅನುವು ಮಾಡಿಕೊಡಲು ಕಾಂಗ್ರೆಸ್ ಬಯಸುತ್ತದೆಯೇ ಹೊರತು ಬಿಜೆಪಿಯಂತೆ ಒಂದು ಹೊಸ ಜನಾಂಗೀಯ ನಾಗರಿಕತೆ ಕಟ್ಟಲು ಸಂವಿಧಾನವನ್ನೇ ಬುಡಮೇಲು ಮಾಡುವ ಯಾವ ಉದ್ದೇಶಗಳೂ ಕಾಂಗ್ರೆಸ್ ಗೆ ಇಲ್ಲ.
ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಂಡು ಇತರೆ ಎಷ್ಟೋ ಪಕ್ಷಗಳನ್ನು ಉಳಿಸಬಹುದಿತ್ತು, ಬೆಳೆಸಬಹುದಿತ್ತು. ಆದರೆ ಭಾರತದ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ಜೊತೆ ಸೇರಿದ ಮಿತ್ರಪಕ್ಷಗಳು ಬಹಳ ಸಲ ವಂಚನೆಗೊಳಗಾಗಿವೆ. ಇದೆಲ್ಲಾ ನಿಜವೇ ಆದರೂ ಇದಾವುದೂ ಸಹ ಬಿಜೆಪಿ, ಆರೆಸ್ಸೆಸ್ನ ಹಿಡನ್ ಅಜೆಂಡಾಕ್ಕೆ ಸರಿಸಾಟಿಯಲ್ಲ. ಗುದ್ದಾಡಿಕೊಂಡೇ ಕಾಂಗ್ರೆಸನ್ನು ಮಣಿಸಬಹುದು. ಆದರೆ ಒಮ್ಮೆ ಇಡೀ ದೇಶದ ಸಂಪೂರ್ಣ ಜುಟ್ಟು ಆರೆಸ್ಸೆಸ್ ಕೈಗೆ ಸಿಕ್ಕಿದರೆ ದೇಶದ ಅಳಿದುಳಿತ ಸಂಸ್ಥೆಗಳೂ ಸರ್ವನಾಶವಾಗುತ್ತವೆ. ಅದು ತರಲಿರುವ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ನೀತಿಗಳು ದೇಶದ ಬಹುಜನರ ಪಾಲಿಗೆ ಮರಣಶಾಸನವಾಗಿರುತ್ತವೆ. ಒಂದು ಅತ್ಯಂತ ಅನಾಗರಿಕವಾದ ಗುಲಾಮಗಿರಿ ವ್ಯವಸ್ಥೆ ಬಂದೊದಗಲಿದೆ.
ರಾಜಕೀಯ ಭಾಷೆಯಲ್ಲಿ ಇದನ್ನು ಫ್ಯಾಸಿಸಂ ಎಂದು ಹೇಳುತ್ತೇವಾದರೂ ಆರೆಸ್ಸೆಸ್ ಭಾರತದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಫ್ಯಾಸಿಸಂ ಸ್ವರೂಪ ಟೋಟಲಿ ಬೇರೆಯದೇ ರೀತಿಯದ್ದು. ಹಿಟ್ಲರ್, ಮುಸಲೋನಿ ಯಾರೂ ಅದರ ಎದುರು ನಿಲ್ಲುವುದಿಲ್ಲ. ಇಸ್ರೇಲ್ ಕೂಡಾ ನಾಚಿಕೊಳ್ಳುತ್ತದೆ.
ನಿಮಗೆ ತಿಳಿದಿರಲಿ ಆರೆಸ್ಸೆಸ್ ಹಿಂದುತ್ವದ ಮೂಲಕ ಹೊಸ ನಾಗರಿಕತೆಯೊಂದನ್ನು ನಿಜಗೊಳಿಸುವ ಮಾತಾಡುತ್ತಿದೆ. ಏನದು ಆರೆಸ್ಸೆಸ್ ತರಲು ಬಯಸಿರುವು ನಾಗರಿಕತೆ? ಕಾಂಗ್ರೆಸ್, ಕಮ್ಯುನಿಷ್ಟ್, ಬಿಎಸ್ ಪಿ ಯಾರೆಂದರೆ ಯಾರೂ ಈ ‘ನಾಗರಿಕತೆ’ ಹೆಸರಿನ ಅನಾಗರಿಕೆತೆ ಏನು ಎಂಬ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಆರೆಸ್ಸೆಸ್ ತರಬಯಸಿರುವು ಆ ನಾಗರಿಕತೆಯಲ್ಲಿ ಇಂದು ಪ್ರತಿಪಕ್ಷಗಳೆಂದು ಭಾವಿಸಿಕೊಂಡಿರುವ ಯಾವ ಪಕ್ಷಗಳೂ ಕನಿಷ್ಠ ಅಸ್ತಿತ್ವವನ್ನೂ ಹೊಂದಿರುವುದಿಲ್ಲ, ಸಂವಿಧಾನದ ಪೀಠಿಕೆಯನ್ನು ಬಲಿಪೀಠಕ್ಕೆ ಅರ್ಪಿಸಲಾಗಿರುತ್ತದೆ, ಡೆಮಕ್ರಸಿಯ ಯಾವ ಉದಾರತೆಯೂ ಉಸಿರಿಟ್ಟುಕೊಂಡಿರುವುದಿಲ್ಲ, ಸಂಸ್ಕೃತಿ ಸಂಪೂರ್ಣ ಏಕರೂಪಿಯಾಗಿರುತ್ತದೆ, ಸಮಾಜ ಪಿರಮಿಡ್ಡಾಗಿರುತ್ತದೆ, ಪ್ರಭುತ್ವ ಬಿಗಿಯಾಗಿರುತ್ತದೆ. ಭಿನ್ನ-ಎನಿಸುವ ಎಲ್ಲವನ್ನೂ ನಿರ್ದಯವಾಗಿ ಹತ್ತಿಕ್ಕಲಾಗುತ್ತದೆ.
ಇಂತಹ ಒಂದು ‘ಹೊಸ ನಾಗರಿಕತೆಯ’ ಕಲ್ಪನೆ ಕಾಂಗ್ರೆಸ್ಸಿಗೆ ಇಲ್ಲವೆಂದೇ ನನ್ನ ಅನಿಸಿಕೆ. ಈ ಮೇಲೆ ಹೇಳಿದ ಆರೆಸ್ಸೆಸ್ಸಿನ ಅಜೆಂಡಾಗಳಿಗೆ ಎಷ್ಟೋ ಸಲ ಕಾಂಗ್ರೆಸ್ ಪೂರಕವಾಗಿಯೇ ವರ್ತಿಸಿದೆ ಎಂಬುದೂ ನಿಜ. ಆದರೆ ಅದರ ಪರಿಣಾಮವಾಗಿಯೇ ಇಂದು ಅದು ಹೀನಾಯ ಸ್ಥಿತಿ ಅನುಭವಿಸುತ್ತಿರುವುದು.
ದುರಂತವೆಂದರೆ ಕಾಂಗ್ರೆಸನ್ನೂ ಒಳಗೊಂಡಂತೆ ಎಲ್ಲಾ ರಾಜಕೀಯ ಪಕ್ಷಗಳು ತಂತಮ್ಮ ಅಸ್ತಿತ್ವವೊಂದನ್ನೇ ಧ್ಯೇಯವಾಗಿಟ್ಟುಕೊಂಡು ಯೋಚಿಸುತ್ತಿವೆಯೇ ವಿನಃ ಈ ದೇಶದ ಭವಿಷ್ಯದ ಬಗ್ಗೆ ಅವುಗಳ ಬದ್ಧತೆಯ ಬಗ್ಗೆ ಅನುಮಾನ ಕಾಡುತ್ತಿದೆ.
ಹೆಚ್ಚಿಲ್ಲ ಒಂದೇ ತಿಂಗಳು ಬಾಕಿ ಇದೆ. ಒಂದೋ ಈ ಪಕ್ಷಗಳ ವಿವೇಕ ಈ ದೇಶವನ್ನು ಉಳಿಸಬೇಕು ಇಲ್ಲವೇ ಈ ದೇಶದ ಹಳ್ಳಿ,ಸ್ಲಂಗಳಲ್ಲಿ ವಾಸಿಸುವ ಜನಕೋಟಿ, ಬದುಕಿನ ವಾಸ್ತವಗಳ ಅರಿವಿರುವ ಯುವಜನತೆ ಯಾವ ಪ್ರಲೋಭನೆಗೂ ಒಳಗಾಗದೇ ತೋರುವ ಎಚ್ಚರ ಈ ದೇಶವನ್ನು ಉಳಿಸಬೇಕು. ಎರಡೂ ಕೈ ಕೊಟ್ಟರೆ ಭಾರತದ ಪ್ರಜಾಪ್ರಭುತ್ವದ ಚರಮಗೀತೆ ಹಾಡೋಣ..ಸಿದ್ಧರಾಗಿ..!
–ಹರ್ಷಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

ದಿನದ ಸುದ್ದಿ
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ : ಭವ್ಯ ನರಸಿಂಹಮೂರ್ತಿ

ಸುದ್ದಿದಿನ, ಬೆಂಗಳೂರು : ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಅವರ ತತ್ವ ಆದರ್ಶಗಳು ಹಾಗೂ ಯುವ ಜನತೆಗೆ ನೀಡಿರುವ ಸಂದೇಶಗಳನ್ನು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನತೆಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ರ್ಯಾಲಿ ಬೆಳಿಗ್ಗೆ 09-00 ಕ್ಕೆ ರಾಜಾಜಿನಗರ Entrance Bridge ಇಂದ ಪ್ರಾರಂಭವಾಗಿ ನವರಂಗ ಚಿತ್ರಮಂದಿರ – ಶಂಕರ್ ಮಠ – ಹಾವನೂರ್ ಸರ್ಕಲ್ – ಹೌಸಿಂಗ್ ಬೋರ್ಡ್ – ಕಾಮಾಕ್ಷಿಪಾಳ್ಯ ಬಸ್ ಸ್ಟಾಂಡ್ – ಹಾವನೂರ್ – ಅಕ್ಷಯ ಉಪಹಾರ – ಮೋದಿ ಹಾಸ್ಪಿಟಲ್ – ನವರಂಗ ಬ್ರಿಡ್ಜ್ – ಗಿರಿಯಾಸ್ ಸಿಗ್ನಲ್ – 6th ಬ್ಲಾಕ್ – ಕೊನೆಯದಾಗಿ 12 ಗಂಟೆಗೆ ಭಾಷ್ಯಮ್ ಸರ್ಕಲ್ ನಲ್ಲಿ ಕೊನೆಗೊಳ್ಳುತ್ತದೆ.
ದಾರಿಯಲ್ಲಿ 4 ಕಡೆ ಸ್ವಾಮಿ ವಿವೇಕಾನಂದರಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ. ಪೂಜೆಯ ನಂತರ ವಿವೇಕಾನಂದರ ತತ್ವ ಆದರ್ಶಗಳನ್ನೊಳಗೊಂಡ ಹತ್ತು ಸಾವಿರ ಪುಸ್ತಕಗಳನ್ನು ಕ್ಷೇತ್ರದಾದ್ಯಂತ ಉಚಿತವಾಗಿ ಹಂಚಲಾಗುವುದು ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
