ಭಾವ ಭೈರಾಗಿ
‘ಬ್ರೇಕ್ ದಿ ರೂಲ್ಸ್ ಅಂದ್ರೆ’ ತಪ್ಪು ಮಾಡೋದಾ?

ಈ ಪ್ರಶ್ನೆಗೆ ಉತ್ತರ ಹುಡುಕುವ ಮುಂಚೆ ತಪ್ಪು ಅಂದ್ರೆ ಏನು ಅಂತ ತಿಳಿದುಕೊಳ್ಳಬೇಕಲ್ವಾ…? ಅವನು ಮಾಡಿದ್ದು ತಪ್ಪು ಕಣೋ ಆದರೂ ಇವನು ಮಾಡಿದ್ದೇನು ಮಹಾ ಸರಿಯಲ್ಲ ಬಿಡು ಅಂತ ಅಲ್ಲಲ್ಲಿ ಮಾತಾಡೋದು ಕೇಳಿರುತ್ತೇವೆ. ಈ ಸರಿ ತಪ್ಪುಗಳ ಲೆಕ್ಕಾಚಾರ ನಾವೇ ಮಾಡುಕೊಂಡದ್ದು ಎಂಬುದು ಮೊದಲ ಸತ್ಯ.
ಸೃಷ್ಟಿಯಲ್ಲಿ ಯಾವುದೇ ಸರಿ ತಪ್ಪು ಎಂಬ ವಿಂಗಡಣೆಯಿಲ್ಲ. ಮನುಷ್ಯ ವಿಕಸನಗೊಳ್ಳುತ್ತಾ ಹೋದಂತೆ ತನಗೆ ಅನುಕೂಲಕರವಾದುದ್ದೆಲ್ಲ ಸರಿ ಎಂದು ಭಾವಿಸತೊಡಗುತ್ತಾನೆ. ತನ್ನ ಅನುಕೂಲಕ್ಕೆ ತಕ್ಕಂತೆ ಸರಿ ತಪ್ಪುಗಳ ಲೆಕ್ಕಾಚಾರ ಹಾಕುತ್ತಾನೆ. ಹಿರಿಯರು ತಮಗೆ ಸರಿ ಅನಿಸಿದ್ದನ್ನು ಚಿಕ್ಕವರಿಂದ ಮಾಡಿಸಲು ಹೊರಟರು ಅದೇ ದೊಡ್ಡ ದೊಡ್ಡ ತಪ್ಪುಗಳಿಗೆ ದಾರಿಯಾಯ್ತು. ಈ ಸರಿ ತಪ್ಪುಗಳ ಬಗೆಗೆ ಮತ್ತೊಂದು ದಿನ ಮಾತನಾಡೋಣ ಈಗ ಬ್ರೇಕ್ ದಿ ರೂಲ್ಸ್ ಬಗ್ಗೆ ಮಾತನಾಡುವ.
ನಾವೆಲ್ಲರೂ ಆಗಾಗ ರೂಲ್ಸ್ ಆರ್ ಮೇಡ್ ಫಾರ್ ಬ್ರೇಕ್ ಅನ್ನುವುದನ್ನು ಕೇಳಿರ್ತೇವೆ, ಹೌದು ಬದುಕು ಅಂತ ಚೌಕಟ್ಟುಗಳನ್ನು ಮೀರಿದ್ದು. ಹಾಗೆ ಬದುಕಿದರೆ ಒಂದು ಸುಂದರ ಅನುಭವ ನಮ್ಮದಾಗಲು ಸಾಧ್ಯವಿದೆ. ಹಾಗಂತ ಇದೇ ಮಾತನ್ನು ನಂಬಿದ ಎಷ್ಟೋ ಜನ ತಪ್ಪು ಮಾಡುವುದೇ ಜೀವನದ ಪರಮಸುಖ ಎಂದು ಭಾವಿಸಿರುವುದು ದುರಂತವೇ ಸರಿ.
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವುದರಿಂದ ಹಿಡಿದು ಅಪ್ಪ ಅಮ್ಮನ ಪ್ರತಿ ಮಾತಿಗೂ ಎದಿರಾಡುವುದೇ ಜೀವನದ ಸುಖವಲ್ಲ, ನಿಯಮಗಳನ್ನು ಗಾಳಿಗೆ ತೂರಿ ಮತ್ತೊಬ್ಬರಿಗೆ ತೊಂದರೆ ಕೊಡುವುದರಲ್ಲಿ ಸುಖವಿಲ್ಲ. ಮೀರುವುದಾದರೆ ಮೀರಲೇಬೇಕಿರುವ ನಮ್ಮೊಳಗಿನ ಸಾವಿರ ಅಘೋಷಿತ ನಿಯಮಗಳಿವೆಯಲ್ಲ ಅವುಗಳನ್ನು ಮೀರಿಬಿಡಿ. ರಸ್ತೆಪಕ್ಕದಲ್ಲಿ ಚರಂಡಿಯೊಳಗೇ ಆಡುತ್ತಾ ಕಿಲ್ಲನೆ ನಗುವ ಪುಟ್ಟಕಂದನನ್ನು ನೋಡಿ ಮುಟ್ಟಿದರೆ ಯಾರು ಏನಂದುಕೊಂಡಾರೋ ಎಂದು ಸುಮ್ಮನೆ ಹೋಗುವ ನಿಯಮವನ್ನು ಮೀರಿಬಿಡಿ. ಉರಿಬಿಸಿಲಿನಲ್ಲೂ ಬೆವರೊರೆಸಿಕೊಂಡು ಟ್ರಾಫಿಕ್ ಕಂಟ್ರೋಲ್ ಮಾಡುವ ಕಾನ್ಸ್ಟೆಬಲ್ ಒಬ್ಬರಿಗೆ ಬಿಗುಮಾನ ಬಿಟ್ಟು ಥ್ಯಾಂಕ್ ಯೂ ಸರ್ ಎಂದು ಬನ್ನಿ, ಅತೀ ದಿಬ್ಬದ ದಾರಿಯಲ್ಲಿ ತರಕಾರಿ ಗಾಡಿ ತಳ್ಳಲು ಹೆಣಗಾಡುತ್ತಿರುವ ತಾತನಿಗೆ ಕೈಜೋಡಿಸಿಬಿಡಿ ಅದಕ್ಕಾಗಿ ಬೇಕಿದ್ದರೆ ನೋ ಪಾರ್ಕಿಂಗ್ ನಲ್ಲೂ ಗಾಡಿ ನಿಲ್ಲಿಸಿಕೊಳ್ಳಿ.
ಫುಟ್ ಪಾತ್ ನಲ್ಲಿ ನೆಲದಮೇಲೆ ಚಕ್ಕಳಂಬಕ್ಕಳ ಹಾಕಿಕೊಂಡು ಗೆಳೆಯರೊಡನೆ ಐಸ್ ಕ್ರೀಂ ತಿಂದು ನೋಡಿ, ಯಾರದೋ ಹುಟ್ಟುಹಬ್ಬಕ್ಕಾಗಿ ರಾತ್ರೋರಾತ್ರಿ ಗೆಳೆಯರನ್ನೆಲ್ಲ ಒಟ್ಟುಗೂಡಿಸಿ ಹನ್ನೆರಡುಗಂಟೆ ಆಚರಣೆಯ ಸಾಹಸ ಮಾಡಿ, ಜಿಟಿಜಿಟಿ ಮಳೆಯಲ್ಲಿ ಸ್ಕೂಟಿಹತ್ತಿ ಊರು ಸುತ್ತಿನೋಡಿ ಹೀಗೆ ಹೇಳುತ್ತಾ ಹೋದರೆ ನಾವು ಮಾಡಬಹುದಾದ ಮತ್ತು ಮಾಡಲೇಬೇಕಿರುವ ಸಾವಿರ ಕೆಲಸಗಳಿವೆ. ಇವುಗಳಿಗಾಗಿ ನಾವೇ ಮಾಡಿಕೊಂಡ ರೂಲ್ಸ್ ಬ್ರೇಕ್ ಮಾಡಿಬಿಡಿ. ವಿಧಾನಸೌಧದ ಕ್ಯಾಂಟೀನಿನಲ್ಲಿ ಕೆಲಸ ಮಾಡುವ ಹುಡುಗಿಗೆ ನೀವ್ ಚೆಂದ ನಗ್ತೀರ ಅಂತ ಹೇಳಿದ್ರೆ ಮತ್ತಷ್ಟು ಚೆಂದಗೆ ನಗುತ್ತಾಳೆ, ನಮ್ಮ ಡ್ರೈವರ್ ಗೆ ಬನ್ನಿ ಸಾರ್ ಒಟ್ಟಿಗೆ ಊಟ ಮಾಡೋಣ ಎಂದರೆ ಅವರ ಕಣ್ಣುಗಳಲ್ಲಿ ಆಶ್ಚರ್ಯ, ಪ್ರೆಸ್ ಮೀಟ್ ನಲ್ಲಿ ಜ್ಯೂಸ್ ಕೊಡುವ ಹುಡುಗನಿಗೆ ನಿಮ್ ಡ್ರೆಸ್ಸಿಂಗ್ ಸ್ಟೈಲ್ ಇಷ್ಟ ಆಯ್ತು ಅಂದ್ರೆ ಅವನ ಮುಂದಿನ ಹೆಜ್ಜೆಗೊಂದು ಗತ್ತು ಸೇರಿಕೊಳ್ಳುತ್ತೆ.
ತರಕಾರಿ ಮಾರುವ ಆಂಟಿಗೆ ನಮ್ಮಮ್ಮನಿಗೂ ನಿಮ್ಮಷ್ಟೇ ವಯಸ್ಸು ಆಂಟಿ ಅಂದ್ರೆ ನಾಳೆಯಿಂದ ಅವರು ನನ್ನ ದಾರಿ ಕಾಯ್ತಾರೆ, ದೇಶಕಾಯುವ ಸೈನಿಕ ಕಂಡಾಗೊಂದು ಸೆಲ್ಫಿ ಕೇಳಿ ಅವರು ಎದೆಯುಬ್ಬಿಸಿ ನಿಲ್ಲುತ್ತಾರೆ ಆ ಎದೆಯೊಳಗೆ ನಮ್ಮ ದೇಶದ ಉಸಿರಿರುತ್ತದೆ, ರೈತರು ಅಂತ ಗೊತ್ತಾದರೆ ಬಸ್ ನಲ್ಲಿ ಎದ್ದು ಸೀಟು ಕೊಡಿ ಅವರು ನಿಮ್ಮ ಮಕ್ಕಳು ಮೊಮ್ಮೊಕ್ಕಳಿಗೆ ಅನ್ನ ನೀಡುತ್ತಾರೆ, ಎಲ್ಲಕ್ಕಿಂತ ಮೊದಲು ಯಾರು ಏನೆಂದುಕೊಂಡರೂ ಸರಿ ನಿಮ್ಮಮ್ಮನಿಗೊಮ್ಮೆ ಕಾಲು ಮುಟ್ಟಿ ನಮಸ್ಕರಿಸಿಬಿಡಿ, ಇವತ್ತು ನಾನೇನಾಗಿದ್ದೇನೋ ಅದಕ್ಕೆ ನೀನೆ ಕಾರಣ ಅಪ್ಪ ಅಂತ ಆ ಹೊರಟು ಮನುಷ್ಯನಿಗೆ ಮನಸುಬಿಚ್ಚಿ ಹೇಳಿ ಅವರ ಕಣ್ಣಲ್ಲಿ ನೀರಿರುತ್ತದೆ ಅದು ನಿಮ್ಮ ಮಕ್ಕಳ ಮನಸ್ಸನ್ನು ತಣ್ಣಗಿಡುತ್ತದೆ.
–ದರ್ಶನ್ ಆರಾಧ್ಯ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಭಾವ ಭೈರಾಗಿ
ಕವಿತೆ | ಕಿಚನ್ ವಕ್ತ್

- ಸಂಘಮಿತ್ರೆ ನಾಗರಘಟ್ಟ
ಎದ್ದ ತಕ್ಷಣ
ಎದ್ದೋ ಬಿದ್ದೋ ಎಂದು
ಫ್ರೆಶ್ ಆಗಲು ಬಾತ್ ರೂಂ
ನತ್ತ ಹೋಗುವುದೇ ತಡ
ಅಲ್ಲಿನ ಪುಟ್ಟ ಕನ್ನಡಿಯಲ್ಲಿ
ಹಿಡಿ ಮಾತ್ರದ ನನ್ನ ಮುಖ
ಥೇಟ್ ಆಟದ ರೋಬೋಟ್
ನಂತೆಯೇ ಕಾಣುತ್ತಿತ್ತು
ಒಳಗಿನಿಂದ ಕದ ತೆಗೆದು
ಆಚೆ ಹೆಜ್ಜೆಯಿಡುವ ಹೊತ್ತಿಗಾಗಲೇ
ಕಿಚನ್ ನಲ್ಲಿ ಆರ್ಡರ್ ಸಿದ್ಧ
ಬಿಸಿ ನೀರು ಒಬ್ಬರಿಗಾದರೆ
ಸ್ಟ್ರಾಂಗ್ ಕಾಫಿ ಇನ್ನೊಬ್ಬರಿಗೆ
ಅದನ್ನು ಕೊಡುವ ಗ್ಲಾಸ್
ಗಾಜಿನದೋ ಸ್ಟೀಲ್ ನದೋ
ಎಂಬ ಗೊಂದಲದಲ್ಲೇ
ಸ್ಟವ್ ಮೇಲಿನ ಹಾಲು
ಉಕ್ಕಿ ತನ್ನ ಹಿತ ಶತ್ರು
ಗ್ಯಾಸ್ ಟ್ಯುಬ್ ನತ್ತ ಹರಿಯುತ್ತಿತ್ತು
ಅದನ್ನು ಉಜ್ಜಿ ಕ್ಲೀನ್ ಮಾಡಿ
ಸಿಂಕ್ ನತ್ತ ನೋಡುತ್ತಿದ್ದಂತೆ
ಎಲ್ಲಾ ಪಾತ್ರೆ ಸೌಟು ಬಾಣಲೆಯಲ್ಲಿ
ತೇಲುತ್ತಿದ್ದ ಅನ್ನದ ಅಗುಳು
ಇನ್ನು ಅರೆಬರೆ ಖಾಲಿ ಆಗಿದ್ದ
ಹೊಟ್ಟೆ ಒಳಗಿನ ಕಲ್ಮಶದಂತಿತ್ತು
ರಾತ್ರಿ ,ಹಗಲು ಮಾಡುವ
ತಿಂಡಿ -ಕೆಲಸಗಳ ಚಿಂತೆಯಲ್ಲೇ
ನಿದ್ದೆ ಹೀರಿಕೊಂಡು ಮುಖ
ಹುಳಿ ಹಿಂಡಿದಂತಾಗಿತ್ತು….
ಇನ್ನೇನು ಎಲ್ಲಾ ಕೆಲಸ ಮುಗಿಸಿ
ಸೋಫಾ ದಲ್ಲಿ ಕುಳಿತು
ಸುದ್ದಿ ಫೀಡ್ ನೋಡುತ್ತಿದ್ದೆ
ಅಕ್ಕಿ ರಾಗಿಯ ಬೆಲೆ ಪಟ್ಟಿ ಏರಿತ್ತು
ಯಾಕೋ ಈಗಲೂ ದಾಸರಿರಬೇಕಿತ್ತು
ಸಮ ತೂಕ ಮಾಡಿ ಎರಡನ್ನೂ ಅಳೆದು
ನಮ್ಮವರ ಹೊಟ್ಟೆಯನ್ನೂ ತುಂಬಿಸಬೇಕೆನಿಸಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ರೇಖೆಗಳು

- ಡಾ.ಪುಷ್ಪಲತ ಸಿ ಭದ್ರಾವತಿ
ಗಡಿ ದೇಶಗಳೇನೊ ಹಂಚಿಕೊಂಡಿರಿ
ಆದರೆ,
ಸೂರ್ಯ ಚಂದ್ರರ ಗತಿಯೇನು
ಉಸಿರಾಡುವ ಗಾಳಿಯು ಒಂದಿರುವಾಗ
ಪ್ರಾಣವಾಯುವಿಗೆ ಬಂಧನದಲ್ಲಿರಿಸಲಾದಿತೆ
ಹರಿಯುವ ನದಿಗಳಿಗೆ ನಾಮಕರಣವೇನೋ ಮಾಡಿದಿರಿ
ಆದರೆ,
ಜರಿಗಳು, ಹಳ್ಳಕೊಳ್ಳಗಳು ಮಾಡಿದಾದರೂ ಏನು
ಪೂಜಾರಿ ಕೊಟ್ಟಿದ್ದು ತೀರ್ಥವೆ
ಆಬೆಜಂಜಂ, ಹಾಲಿ ವಾಟರ್ ಎಲ್ಲವೂ ಜಲ
ಫಾದರ್,ಪೂಜಾರಿ,ಮೌಲ್ವಿ
ಎಲ್ಲರೂ ಕುಡಿದದ್ದು ನೀರು
ಕೊನೆಗೂ ಅದರ ಮೂಲರೂಪ ಬದಲಾಗಲಿಲ್ಲ
ಮನುಷ್ಯ ,ಪ್ರಾಣಿ,ಮರಗಿಡಗಳ
ತಳಿಗಳನ್ನು ಬೇರ್ಪಡಿಸುವವನು ಮೂರ್ಖನೇ ಇರಬೇಕು .
ದೇಹದಲ್ಲಿರುವ ನರಮಂಡಲವನೊಮ್ಮೆ ಬೇರ್ಪಡಿಸಿ
ಬದುಕಲಾದಿತೆ
ಏನು?
ಕ್ರಿಸ್ತನೇನಾದರು ಬಂದು ಮತಾಂತರ ಮಾಡಿದನೇ
ಅಲ್ಲಾನೇನಾದರು ಬಂದು ರಾಮಮಂದಿರ ಕೆಡವಿದನೇ
ಶಿವನೇನಾದರು ಬಂದು ಮಸೀದಿಯನ್ನು ಹೊಡೆದುರುಳಿಸಿದನೇ..!?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು..!

- ಪ್ರೀತಿ.ಟಿ.ಎಸ್, ದಾವಣಗೆರೆ
ಬೇಂದ್ರೆಯವರು “ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು, ಕಳೆದ ದುಃಖಗಳಲ್ಲಿ ನೆನೆದಂತೆಯೆ” ಎಂದು ತಮ್ಮ ಸಖೀ ಗೀತದಲ್ಲಿ ಹಾಡುತ್ತಾರೆ. ಆದರೆ ಈ ಹೊಸ ವರ್ಷದಲ್ಲಿ ಕಹಿದಿನಗಳ ನೆನಪೇ ಬೇಡ, ಸಿಹಿ ಕಹಿ ಕನಸುಗಳನ್ನು ಕಂಡಂತಹ ಎಳೆತನದ, ಕೆಳೆತನದ ದಿನಗಳ ನೆನಪೇ ಸ್ಥಿರವಾಗಿರಲಿ; ಕಾಲನ ಹೊಡೆತಕ್ಕೆ ಆ ಕನಸುಗಳ ನೆನಪು ಮರೆಯಾಗದಿರಲಿ.
ಹೊಸ ವರ್ಷದಲ್ಲಿ ಇದೆಂತ ಬರಿತ್ತಿದ್ದಾರೆ ಅಂತೀರ! ನಿಮಗಿಂದು ಬರೀ ಹೊಸ ವರುಷ. ಆದರೆ ನನಗೋ ನನ್ನ ಜೀವನ ಪಾವನವಾಗಿಸುವ ದಿನ. ಯಾಕೇ ಗೊತ್ತಾ? ನನ್ನ ಸಾಹಿತ್ಯ ಕ್ಷೇತ್ರಕ್ಕೆ ಅನುಕರಿಣಿಸಿ, ಸಮಾಜ ಕ್ಷೇತ್ರದಲ್ಲಿ ನನ್ನನ್ನ ತೊಡಗುವಂತೆ ಮಾಡಿ, ಕಿಂಚಿತಾದರೂ ನನ್ನಲ್ಲಿ ದಯೆ, ಕರುಣೆ, ವಿಶ್ವಾಸ, ಪ್ರೀತಿ ಹೀಗೆ ಅನೇಕ ಭಾವಗಳನ್ನ ಚಿಕ್ಕಂದಿನಿಂದ ತಿದ್ದಿ ತೀಡಿದ ನನ್ನ ತಂದೆ ತಾಯಿಯ ಜನುಮ ದಿನ.
ಹೊಸ ವರುಷಕ್ಕಿಂತ ಇವರೀರ್ವರ ಜನುಮವೇ ಅದೇನೋ ಸಂಭ್ರಮ. ಅದೇನೋ ಸಡಗರ. ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿಟ್ಟು ಹೊಸ ಜೀವನದ ಪಯಣಕ್ಕೆ ಅದೇನೋ ಕಾತುರದಿಂದ ಗಡಿಬಿಡಿಯಾಗುವಾಗ ಅಪ್ಪಾಜಿ ಬಂದು ಹಾದಿಯಲ್ಲಿ ಕಲ್ಲು- ಮುಳ್ಳುಗಳಿರಬಹುದು ಎಚ್ಚರ! ಆದರೆ ಅದನ್ನು ಎದುರಿಸಿ ಮುನ್ನಡೆದಾಗಲೇ ಸುಖ ಸಾಗರ ಎಂಬ ಅವರ ಆಶಯದ ನುಡಿ ಮಾತುಗಳು ಬಹುಶಃ ಇಂದು ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ.
ಮಾಮೂಲೀ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ತಂದೆ-ತಾಯಿಯ ಪೋಸ್ಟ್ ಹಾಕಿ ವಿಶ್ ಮಾಡಿದ್ರೆ ಮುಗಿತಿತ್ತು. ಆದರೆ ಈ ಭಾರಿ, ನನಗಾಗುತ್ತಿರುವುದು ವಿಚಿತ್ರ ಅನುಭವ. ಸಾವಿರ ನೋವು, ದುಃಖ-ದುಮ್ಮಾನಗಳು ಎದೆಯಲ್ಲಿದ್ರು ನಮ್ಮ ಮುಂದೆ ತೋರಿಸದೆ ಮನಸ್ಸಲ್ಲೇ ಇಟ್ಟು ಕೊರಗುತ್ತ ಒಳ್ಳೆಯ ವಿದ್ಯಾಭ್ಯಾಸ ನೀಡಿ, ಸಂಸ್ಕೃತಿ, ನಾಡು-ನುಡಿ, ಸಂಸ್ಕಾರವನ್ನು ಭಿತ್ತುತ್ತ ಬಂದಿದ್ದಾರೆ. ಸುಖದಲ್ಲೆ ಬೆಳೆದ ನಮಗೆ ಕಹಿ ಜೀವನದ ಅನುಭವ ಕಡಿಮೆಯೇ!
ಅಪ್ಪಜಿ-ಅಮ್ಮನ ಆಸೆಯಂತೆ ಮಾಸ್ಟರ್ ಆಫ್ ಜರ್ನಲಿಸಂ ಅಲ್ಲಿ ಎರಡು ಬಂಗಾರದ ಪದಕ ಗೆದ್ದು ಅವರಿಗೆ ನೀಡಿ ಆಸೆ ತೀರಿಸಿದ ನಂತರವಷ್ಟೇ ತಿಳಿದ್ದದ್ದು. ಜೀವನದ ಆಳವೆಷ್ಟು ಎಂದು? ಅಪ್ಪಾಜಿ ಅಮ್ಮನನ್ನು ಬಿಟ್ಟು ಕೆಲಸ ಹುಡುಕುತ್ತ ಬೆಂಗಳೂರಿಗೆ ಬಂದಾಗ ನಿಜವಾದ ರೋಧನೆ, ನೋವು, ಒಂಟಿತನ, ಕಷ್ಟ, ಉಪವಾಸ, ಅನ್ನದ ಬೆಲೆ ಹೀಗೆ ಬದುಕಿನ ಅಷ್ಟು ಪಾಠಗಳು ತಿಳಿಯುತ್ತ ಹೋದದ್ದು. ಎಂತಹ ಒದ್ದಾಟದಲ್ಲೂ ನನ್ನ ತಂದೆ-ತಾಯಿಗೆ ತಿಳಿಸದೆ ನಗ್ತ ನಗ್ತ ಮಾತಾಡಿದ್ರು ಕ್ಷಣಮಾತ್ರದಲ್ಲಿ ಅಪ್ಪಜಿ ಮಾತ್ರ ನನ್ನ ನಗುವಿನ ಹಿಂದಿನ ದುಃಖನ ಗುರುತಿಸಿ, ಮತ್ತಷ್ಟು ಬಲ ತುಂಬುತ್ತ ಬಂದವರು.
ಜನವರಿ 1 ಬಂತೆಂದರೆ ಅಪ್ಪಾಜಿ ಅಮ್ಮನ ಹುಟ್ಟು ಹಬ್ಬ. ಈ ಭಾರಿ ನಾನು ನಿಮಗೆನೂ ಮಾಡಿದೇನು? ಕಡೆಪಕ್ಷ ಅವರ ಮುಂದೆ ಹೋಗಿ ನಿಂತು ಶುಭಾಶಯ ತಿಳಿಸಿ ಬಂದು ಬಿಡಲೇ ಎಂದರೆ ಕೈಯಲ್ಲಿ ಕಾಸಿಲ್ಲ. ಇಲ್ಲಿಂದಲೇ ಶುಭಾಶಯ ತಿಳಿಸಿ ಸುಮ್ಮನಾಗಿ ಬಿಡಲೇ ಎಂದರೆ ಮನಸ್ಸು ಒಪ್ಪುತ್ತಿಲ್ಲ. ಇದೀಗ ದುಡಿತ್ತಿದ್ದಿನಾದರು ಕಣ್ಣ ಮುಂದಿರುವ ಅಷ್ಟು ಹೊಣೆಗಾರಿಕೆಗಳು ನನ್ನನ್ನ ಕಟ್ಟಿಹಾಕ್ತಿದೆ. ಈ ಗೊಂದಲದ ನಡುವೇ ಈ ಲೇಖನ ನಿಮಗಾಗಿ.
ಅಪ್ಪಜಿ-ಅಮ್ಮ ಈ ಭಾರಿ ಹೊಸ ವರುಷದ ಹೊಸ ಆಚರಣೆ ಸಾಧ್ಯವಾಗದಿದ್ದರು ಬೇಸರಿಸದಿರಿ. ಯಾಕೆಂದರೆ ನಿಮಗಾಗಿ ನೀವು ಕಂಡ ಹೊಸ ಕನಸಿನ ಗೂಡೊಂದನ್ನ ಹೊತ್ತು ತರುತ್ತಿದ್ದೇನೆ. ತಂದ ದಿನವೇ ನಿಮ್ಮ ಈ ಜನುಮೋತ್ಸವವನ್ನು ಆಚರಿಸ್ತೇನೆ. ಇದನ್ನ ನಿಮ್ಮೊಡನೇ ಹೇಳಬಹುದಿತ್ತಾದರು, ನನ್ನ ಸಹಪಯಣಿಗರೊಡನೆ ಹಂಚಿಕೊಂಡ ಈ ಕನಸುಗಳು ನಮ್ಮ ಬಾಳಿನ ಮುಂದಿನ ಪಯಣದ ಬುತ್ತಿಯಾಗುತ್ತದೆ ಎಂಬುದು ನನ್ನ ಭಾವನೆ.
ಇಂತಹ ಅದೆಷ್ಟೋ ಅನುಭವಗಳು ಮನೆ ಬಿಟ್ಟು, ತಂದೆ ತಾಯಿಯ ಆಶಯವನ್ನು ನೆನಸಾಗಿಸೋ ಸಾವಿರ ಕನಸುಗಳನ್ನು ಹೊತ್ತು ಬಂದ ಅದೆಷ್ಟೋ ಮನಸ್ಸುಗಳಿಗೆ ಆಗಿರುತ್ತೆ. ಇನ್ನು ಕೆಲವರಿಗೆ ಇಡೀ ವರ್ಷದ ಶ್ರಮದಾಯಕ ದುಡಿಮೆ ಬಳಿಕ ಮನಸ್ಸು ಸ್ವಲ್ಪ ವಿಶ್ರಾಂತಿಯನ್ನು, ಮನೋರಂಜನೆಯನ್ನು ಬಯಸುತ್ತದೆ. ಕುಟುಂಬದ ಬಂಧವನ್ನು ಗಟ್ಟಿಗೊಳಿಸಲು ಮತ್ತು ಪ್ರೀತಿ, ಅನುಬಂಧವನ್ನು ಬಿತ್ತಲು ಹೊಸವರ್ಷವೊಂದು ಸುವರ್ಣಾವಕಾಶ. ನಮ್ಮ ಎಲ್ಲ ಕೆಲಸಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ಕೊಟ್ಟು ರಿಲ್ಯಾಕ್ಸ್ ಮಾಡುವ ಮೂಲಕ ಸಂಭ್ರಮ, ಸಡಗರಕ್ಕೆ ಅಣಿಯಾಗೋಣ. ನಿಮ್ಮೆಲ್ಲರ ಆಸೆ, ನಿರೀಕ್ಷೆಗಳು ನೆರವೇರಲಿ ಎಂದು ಮನಸ್ಸಲ್ಲೆ ಪ್ರಾರ್ಥಿಸುತ್ತಾ, ಮುಸ್ಸಂಜೆ ಕವಿಯುತ್ತಿರುವಾಗಲೂ ಮರುದಿನದ ಬೆಳಗು ಆಶಾಕಿರಣವನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
