ದಿನದ ಸುದ್ದಿ
‘ಎತ್ತಿನಹೊಳೆ ಯೋಜನೆ ಕೈಬಿಡಿ’ ಎಂದು ಬರಪೀಡಿತ ಜಿಲ್ಲೆಗಳವರು ಆಗ್ರಹಿಸಲಿ

ನಿನ್ನೆ ಎತ್ತಿನಹೊಳೆ ಯೋಜನೆಯ ಬಗ್ಗೆ ನಾನೊಂದು ಪೋಸ್ಟ್ ಹಾಕಿದ್ದೇ. ನನ್ನ ಗೆಳೆಯರೊಬ್ಬರಿಂದ ಈ ರೀತಿಯ ಪ್ರಕ್ರಿಯೆ ಬಂದಿದೆ. “ಬರಪೀಡಿತ ಜಿಲ್ಲೆಯ ಜನರನ್ನು ವ್ಯಂಗ್ಯ ಮಾಡುವ ಅವಶ್ಯಕತೆ ಇರಲಿಲ್ಲವೇನೋ. ಅಲ್ಲಿನ ನೀರಿನ ಸಮಸ್ಯೆ ಅಪಾಯಮಟ್ಟದಲ್ಲಿದೆ.
ಹಾಗಾಗಿ ಈ ಯೋಜನೆಯ ಬಗ್ಗೆ ಅವರು ಆಸೆ ಪಡುವುದರಲ್ಲಿ ಯಾವ ತಪ್ಪೂ ಇಲ್ಲಾ. ಅವರಲ್ಲಿ ಈ ಯೋಜನೆಯ ಹೆಸರಲ್ಲಿ ಕನಸು ಬಿತ್ತಿದ ರಾಜಕಾರಣಿಗಳನ್ನು ಗುರಿಯಾಗಿಸಬೇಕೆ ಹೊರತು ಈಗಾಗಲೇ ನೊಂದು ಬೇಯುತ್ತಿರುವ ಜನರನ್ನಲ್ಲಾ.”ಈ ಪ್ರತಿಕ್ರಿಯೆಯನ್ನು ನಾನು ಸಂಪೂರ್ಣ ಇತ್ಯಾತ್ಮಕವಾಗಿ ತೆಗೆದುಕೊಂಡು ಮುಂದುವರೆಸುತ್ತೇನೆ.
ಬರಪೀಡಿತ ಜಿಲ್ಲೆಗಳೂ ಸೇರಿದಂತೆ ಕರ್ನಾಟಕದ ಜಲಮೂಲಗಳು ಮತ್ತು ಜಲಸೌಲಭ್ಯಗಳ ಬಗ್ಗೆ ನನಗೆ ಸ್ವಲ್ಪ ಅರಿವಿದೆ. ಆದರೆ ನಾನು ತಜ್ಞನಂತೂ ಅಲ್ಲ. ಬರಪೀಡಿತ ಜಿಲ್ಲೆಗಳಲ್ಲಿ ಈ ಪರಿಸ್ಥಿತಿ ಉಂಟಾಗುವುದಕ್ಕೆ ಅಲ್ಲಿ ಎರಡು ಮೂರು ದಶಕಗಳಿಂದ ಭೂಮಿಯ ಮೇಲೆ, ಜಲಮೂಲಗಳ ಮೇಲೆ ನಡೆದ ತಪ್ಪುನಡೆಗಳ ಬಗ್ಗೆಯೂ ತುಸು ಅರಿವಿದೆ. ಇಲ್ಲಿ ಆ ಜಿಲ್ಲೆಗಳ ಜನರನ್ನು, ರೈತರನ್ನು ವ್ಯಂಗ್ಯದಿಂದ ಕಾಣುವ ಪ್ರಶ್ನೆಯೇ ಇಲ್ಲ. ಹಾಗೆ ಭಾವಿಸಿದ್ದರೆ ಅದು ಸಂಪೂರ್ಣ ತಪ್ಪು ಗ್ರಹಿಕೆ.
ನೀರು ಸಿಕ್ಕರೆ ಯಾವುದೇ ರೈತನ ಮನೋಭಾವ ಹೇಗೆ ಬದಲಾಗುತ್ತದೆ ಎನ್ನುವುದನ್ನೂ ನೋಡುತ್ತಲೇ ಬಂದವನಾಗಿ ನಾನು ಹಾಗೆ ಹೇಳಿದ್ದೇನೆ ಅಷ್ಟೇ. ಅಲ್ಲದೇ ನಮ್ಮ ಜಾಗತೀಕೃತ ಬಂಡವಾಳಶಾಹೀ ಲೋಕ ರೈತನಿಗೆ ಎಂಥಾ ಅಮಿಷಗಳನ್ನು ಒಡ್ಡುತ್ತದೆ ಎನ್ನುವುದೂ ಇಲ್ಲಿ ಸೂಚ್ಯವಾಗಿದೆ.
ಹಾಗೆಂದು ಈ ಯೋಜನೆಗೆ ಮುಂದಡಿ ಇಡುವುದಕ್ಕೆ ಮುಂಚೆ ಬರಪೀಡಿತ ಜಿಲ್ಲೆಯವರಿಗೆ ಮುಂದಾಗುವ ಪರಿಣಾಮಗಳ ಬಗ್ಗೆಯಾಗಲೀ, ತಮ್ಮ ಜಿಲ್ಲೆಗಳಿಗೆ ಇದು ನಿಜಕ್ಕೂ ಪರಿಹಾರವಲ್ಲ ಎನ್ನುವುದಾಗಲೀ ಅರಿವಿರಲಿಲ್ಲ ಮತ್ತು ಅರಿವಿಲ್ಲ ಎನ್ನುವುದನ್ನು ನಾನು ಪೂರ್ತಿಯಾಗಿ ಒಪ್ಪಲಾರೆ. ಮಾನವಸಹಜ ಆಸೆಯೊಂದಿಗೆ ಅವರು ಯೋಜನೆಗೆ ಆಗ್ರಹಿಸಿ ಹೋರಾಟವನ್ನೂ ಮಾಡಿದ್ದಾರೆ, ವಿರೋಧಿಸುವ ಸಮಯಗಳಲ್ಲಿ ಮೌನವನ್ನೂ ವಹಿಸಿದ್ದಾರೆ.
ಈಗ ಈ ಯೋಜನೆಯಿಂದ ಯಾರಿಗೂ ಪ್ರಯೋಜನವಿಲ್ಲ ಎನ್ನುವುದು ಬಹುತೇಕ ಎಲ್ಲರಿಗೂ ಮನಗಂಡಿದೆ, ಅಲ್ಲವೇ?
ಈಗಲಾದರೂ ಈ ಯೋಜನೆಯನ್ನು ಕೈಬಿಡಿ, ನಮಗೆ ನಮ್ಮ ಸಂಪನ್ಮೂಲಗಳಿಂದಲೇ ದೀರ್ಘಕಾಲೀನ ಜಲಸುಸ್ಥಿರತೆಯ ಕಾರ್ಯಕ್ರಮಗಳನ್ನು ಆರಂಭಿಸಿ ಎಂದು ಸರ್ಕಾರವನ್ನು ಆಗ್ರಹಿಸಿ ಹೋರಾಟ ಆರಂಭಿಸಲಿ. ಅವರೊಂದಿಗೆ ನಾನೂ ಒಬ್ಬ ಕಾಲಾಳಾಗಿ ಬರುತ್ತೇನೆ. ಪಶ್ಚಿಮಘಟ್ಟ ತೀರ ಸಂಕಷ್ಟದ ಸ್ಥಿತಿಯಲ್ಲಿದೆ. ಅದನ್ನು ಉಳಿಸಿದರೆ ಇಡೀ ನಾಡಿಗೇ ಹಿತ. ಆ ಹೋರಾಟಕ್ಕೆ ಬರಪೀಡಿತ ಜಿಲ್ಲೆಗಳೂ ಸೇರಿದಂತೆ ಕರ್ನಾಟಕದ ಎಲ್ಲ ಭಾಗದ ಜನರು ಮುಂದಾಗಲಿ.
–ಕೇಸರಿ ಹರವೂ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
