ರಾಜಕೀಯ
ಬಲಪಂಥದತ್ತ ಜಾಗತಿಕ ಪಲ್ಲಟದ ಈ ಸಮಯ

- ಜಾಗತಿಕ ಅರ್ಥವ್ಯವಸ್ಥೆಯು ಬಿಕ್ಕಟ್ಟಿಗೆ ಒಳಗಾಗಿರುವ ಪರಿಸ್ಥಿತಿಯಲ್ಲಿ ಮತ್ತು ಅದರ ಪರಿಣಾಮವಾಗಿ ನಿರುದ್ಯೋಗವು ಉಲ್ಬಣಗೊಂಡ ಪರಿಸ್ಥಿತಿಯಲ್ಲಿ ಜಗತ್ತಿನಾದ್ಯಂತ ಬಲ ಪಂಥದತ್ತ ಪಲ್ಲಟ ಕಾಣುತ್ತಿದೆ. ಬಲಪಂಥದ ಬೆಳವಣಿಗೆಗೆ ಅದು ಆರ್ಥಿಕ ಬಿಕ್ಕಟ್ಟು ಮತ್ತು ನಿರುದ್ಯೋಗವನ್ನು ಗಮನಕ್ಕೆ ತಗೊಂಡಿರುವುದು ಮತ್ತು ಅಧಿಕಾರಸ್ಥರ ಪರವಾದ ರಾಜಕೀಯ ಪಕ್ಷಗಳು ಗಮನಕ್ಕೆ ತಗೊಂಡಿರದಿರುವುದೇ ಕಾರಣ ಎನ್ನಬಹುದು. ಭಾರತದಲ್ಲಿಯೂ ಸಹ ಅಭಿವೃದ್ಧಿ ಅಜೆಂಡಾದ ಮೂಲಕವೇ 2014ರಲ್ಲಿ ಮೋದಿ ಅಧಿಕಾರ ಹಿಡಿದದ್ದು. ನವ ಉದಾರವಾದವನ್ನು ಪ್ರತಿನಿಧಿಸುವ ಕಾಂಗ್ರೆಸ್ನಂತಹ ಒಂದು ಪಕ್ಷದಿಂದ ಬಿಜೆಪಿಯಂತಹ ಒಂದು ಬಲ ಪಂಥೀಯ ಪಕ್ಷದತ್ತ ಪಲ್ಲಟವು ಸಾಧ್ಯವಾಗಿರುವುದು ನವ-ಉದಾರವಾದದ ಬಿಕ್ಕಟ್ಟಿನಿಂದಾಗಿಯೇ ಎಂಬ ಸಂಗತಿಯಂತೂ ಸ್ಪಷ್ಟ.
ಮೋದಿಯವರ ಪುನರಾಯ್ಕೆಯು, ಜಗತ್ತು ಬಲ ಪಂಥಾಭಿಮುಖವಾಗಿ ಸರಿಯುತ್ತಿರುವ ವಿದ್ಯಮಾನದ ಒಂದು ಭಾಗವಾಗಿದೆ ಎಂಬ ಆಯಾಮವನ್ನು ನಾವು ಗಮನಿಸುವುದೇ ಇಲ್ಲ. ಹಾಗಾಗಿ, ಮೋದಿಯವರ ಪುನರಾಯ್ಕೆಯ ಬಗ್ಗೆ ನಾವು ಚರ್ಚಿಸುವಾಗ, ಇಡೀ ಜಗತ್ತೇ ಬಲಕ್ಕೆ ವಾಲುತ್ತಿದೆ ಎಂಬ ಅಂಶದ ಪ್ರಸ್ತಾಪ ನಮ್ಮ ಚರ್ಚೆಯಲ್ಲಿ ಬಹುತೇಕ ಇರುವುದಿಲ್ಲ. ಇಸ್ರೇಲ್ನಲ್ಲಿ ನೆತನ್ಯಾಹು ಪುನರಾಯ್ಕೆಗೊಂಡಿದ್ದಾರೆ. ಟರ್ಕಿಯಲ್ಲಿ ಎರ್ಡೊಗಾನ್ ಪ್ರಚಂಡ ಬಹುಮತದಿಂದ ಪುನರಾಯ್ಕೆಯಾಗಿದ್ದಾರೆ. ಚುನಾವಣೆಗೆ ಮುನ್ನ ಈ ಪಕ್ಷವು ಪುನರಾಯ್ಕೆ ಆಗುವುದೇ ಇಲ್ಲ ಎನ್ನುವ ಭವಿಷ್ಯ ನುಡಿಯನ್ನು ಸುಳ್ಳಾಗಿಸಿ, ಆಸ್ಟ್ರೇಲಿಯಾದಲ್ಲಿ ಕನ್ಸರ್ವೇಟಿವ್ ಪಕ್ಷವು ಅಧಿಕಾರಕ್ಕೆ ಮರಳಿದೆ.
ಎಡ ಪಂಥವು ಹಲವು ಹತ್ತು ದೇಶಗಳಲ್ಲಿ ಮರು ಹುಟ್ಟು ಪಡೆಯುವಂತಹ ಸ್ಪೂರ್ತಿ ತುಂಬುವ ಭರವಸೆ ಇತರರಲ್ಲಿ ಮೂಡಲು ಕಾರಣವಾಗಿದ್ದ ಎಡ ಪಕ್ಷಗಳು ಇತ್ತೀಚಿನವರೆಗೆ ಅಧಿಕಾರದಲ್ಲಿದ್ದ ಲ್ಯಾಟಿನ್ ಅಮೇರಿಕಾದಲ್ಲಿ, ಒಂದರ ನಂತರ ಮತ್ತೊಂದು ದೇಶದಲ್ಲಿ ಬಲ ಪಂಥೀಯ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಇಂತಹ ಬದಲಾವಣೆಗಳ ಪೈಕಿ, ಅತ್ಯಂತ ಮಹತ್ವದ್ದು ಮತ್ತು ಅದೇ ಸಮಯದಲ್ಲಿ ಕುಖ್ಯಾತ ಎನ್ನಬಹುದಾದ ಬದಲಾವಣೆ ಬ್ರೆಜಿಲ್ನಲ್ಲಿ ಆಗಿದೆ.
ಅಲ್ಲಿ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೇರ್ ಬೊಲ್ಸೊಮಾರೊ ಕೆಲ ವರ್ಷಗಳ ಹಿಂದೆ ಬ್ರೆಜಿಲ್ನಲ್ಲಿ ಅಧಿಕಾರದಲ್ಲಿದ್ದ ಮಿಲಿಟರಿ ಆಡಳಿತವನ್ನು ಹಾಡಿ ಹೊಗಳಿರುವುದೇ ಅಲ್ಲದೆ, ಮಿಲಿಟರಿಯು ಇನ್ನೂ ಹೆಚ್ಚು ಮಂದಿಯನ್ನು ಕೊಂದು ಹಾಕಿದ್ದರೆ ಒಳ್ಳೆಯದಿತ್ತು ಎಂದು ಹೇಳಿರುವುದು ದಾಖಲಾಗಿದೆ. ಈ ಎಲ್ಲವಕ್ಕೂ ಕಳಶವಿಟ್ಟಂತೆ, ಕಳೆದ ಭಾನುವಾರ ಯೂರೋಪಿಯನ್ ಒಕ್ಕೂಟದ 28ಸದಸ್ಯ ದೇಶಗಳಲ್ಲಿ ಯೂರೊ ಪಾರ್ಲಿಮೆಂಟಿಗೆ ನಡೆದ ಚುನಾವಣೆಗಳ ಫಲಿತಾಂಶವು ಯೂರೋಪಿನಲ್ಲಿ ಗಮನಾರ್ಹ ಸಂಖ್ಯೆಯ ಜನತೆಯ ಒಲವು ಬಲ ಪಂಥದತ್ತ ಸರಿಯುತ್ತಿರುವ ಅಂಶವನ್ನು ಸಾರುತ್ತದೆ.
ಫ್ರಾನ್ಸ್ನಲ್ಲಿ ಮುಂಬರುವ ಮಹಾ ಚುನಾವಣೆಯಲ್ಲಿ ಮರೀನ್ ಲೇ ಪೆನ್ ಅವರ ಉಗ್ರ ಬಲಪಂಥೀಯ ಪಕ್ಷವು, ಹಾಲಿ ಅಧ್ಯಕ್ಷ ಎಮ್ಯಾನ್ಯುಅಲ್ ಮೆಕ್ರಾನ್ ಅವರ ನಡು ಪಂಥೀಯ ಪಕ್ಷಗಳ ಮೈತ್ರಿಕೂಟವನ್ನು ಹಿಂದಿಕ್ಕಿ, ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಬಹುದೆಂದು ಈಗ ತೋರುತ್ತದೆ. ಇಟಲಿಯ ಉಪ ಪ್ರಧಾನ ಮಂತ್ರಿ ಮಾತ್ತಿಯೊ ಸಲ್ವಿನಿ ಅವರ ಉಗ್ರ ಬಲಪಂಥೀಯ ಪಕ್ಷವು ಇಟಲಿಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವುದಷ್ಟೇ ಅಲ್ಲದೆ, ಯೂರೊ ಪಾರ್ಲಿಮೆಂಟಿನಲ್ಲಿ ಜರ್ಮನಿಯ ಛಾನ್ಸೆಲರ್ ಅಂಜೆಲಾ ಮರ್ಕೆಲ್ ಅವರ ಪಕ್ಷವನ್ನು ಹಿಂದಿಕ್ಕಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಮರ್ಕೆಲ್ ಅವರ ಪಕ್ಷವು ಐದು ವರ್ಷಗಳ ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ 9% ಕಡಿಮೆ ಮತಗಳಿಸಿದೆ. ಅಷ್ಟೇ ಅಲ್ಲ, ಜರ್ಮನಿಯ ಆಲ್ಟರ್ನೆಟೀವ್ ಫಾರ್ ಜರ್ಮನಿ ಎಂಬ ಉಗ್ರ ಬಲಪಂಥೀಯ ಪಕ್ಷವು 10.೫% ಮತ ಹೆಚ್ಚಿಸಿಕೊಂಡಿದೆ. ಹಂಗೆರಿಯಲ್ಲಿ, ಅಧ್ಯಕ್ಷ ವಿಕ್ಟರ್ ಒರ್ಬಾನ್ ಅವರ ಬಲಪಂಥೀಯ ಪಕ್ಷವು ಮತ್ತೊಮ್ಮೆ ಪುನರಾಯ್ಕೆಗೊಳ್ಳುವ ಹಾದಿಯಲ್ಲಿದೆ.
ಮೋದಿಯವರ ಗೆಲುವು ದೇಶದಲ್ಲಿ ಜರುಗಿದ ಅನೇಕ ಬೆಳವಣಿಗೆಗಳಿಗೆ ಸಲ್ಲುತ್ತದೆ ಎಂಬುದು ಸ್ಪಷ್ಟವಿದ್ದರೂ ಸಹ, ಇಡೀ ವಿಶ್ವವೇ ಬಲ ಪಂಥಾಭಿಮುಖವಾಗಿ ದಾಪುಗಾಲು ಹಾಕುತ್ತಿರುವ ಈ ಸನ್ನಿವೇಶವನ್ನು ಮರೆಯಬಾರದು. ಬಲ ಪಂಥದ ಕಡೆಗೆ ಕೊಂಡೊಯ್ಯುವ ಉದ್ದೇಶಪೂರ್ವಕ ಪ್ರಯತ್ನಗಳು ಚಾಲನೆಯಲ್ಲಿರುವ ಈ ಸಂದರ್ಭದಲ್ಲಿ, ಇದು ಹೀಗೆಯೇ ಆಗುತ್ತಿರುವುದು ಏಕೆ? ಎಂಬ ಪ್ರಶ್ನೆಯನ್ನು ನಾವು ಕೇಳಬೇಕಾಗುತ್ತದೆ. ಉದಾರ ಮನೋಭಾವದ ಬೂರ್ಜ್ವಾ ವಿಶ್ಲೇಷಕರು, ಈ ಎಲ್ಲ ದೇಶಗಳ ಪಕ್ಷಗಳು ಮತ್ತು ಚಳವಳಿಗಳ ನಡುವೆ ಗೋಚರಿಸುವ ಒಂದು ಸಮಾನ ಅಂಶವನ್ನು ಕಾಣುವುದರ ಬದಲಾಗಿ, ಈ ವಾಸ್ತವದ ಚಿತ್ರವನ್ನು ತುಂಡರಿಸಿ ವಿಶ್ಲೇಷಿಸುವ ಪ್ರವೃತ್ತಿ ಬೆಳಸಿಕೊಂಡಿದ್ದಾರೆ: ಅವರು ಯೂರೋಪ್ ದೇಶದ ರಾಜಕೀಯ ಪಕ್ಷಗಳನ್ನು ಯೂರೋಪಿಯನ್ ಒಕ್ಕೂಟ ಪರ ಮತ್ತು ಯೂರೋಪಿಯನ್ ಒಕ್ಕೂಟ ವಿರೋಧಿ, ಅಥವಾ, ವಲಸೆ-ಪರ ಅಥವಾ ವಲಸೆ-ವಿರೋಧಿ ಎಂದೇ ವಿಭಜಿಸುತ್ತಾರೆ.
ಅದೇ ರೀತಿಯಲ್ಲಿ, ಬೂರ್ಜ್ವಾ ವಿಶ್ಲೇಷಕರು ಮೋದಿಯವರ ಗೆಲುವನ್ನು ಹಿಂದುತ್ವದೊಂದಿಗೆ ತಳುಕು ಹಾಕಿಕೊಂಡಿರುವ ಒಂದು ವಿದ್ಯಮಾನವಾಗಿ ನೋಡುತ್ತಾರೆಯೇ ಹೊರತು, ಯೂರೋಪಿನಲ್ಲಿ ಆಗುತ್ತಿರುವ ವಿದ್ಯಮಾನಕ್ಕೂ ಮತ್ತು ಭಾರತದ ಈ ವಿದ್ಯಮಾನಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ ಎಂಬಂತೆಯೇ ನೋಡುತ್ತಾರೆ. ಡೊನಾಲ್ಡ್ ಟ್ರಂಪ್ ಅವರ ಬಲಗೊಳ್ಳುತ್ತಿರುವ ಪುನರಾಯ್ಕೆಯನ್ನೂ ಸಹ ಈ ಬೆಳವಣಿಗೆಗಳಿಂದ ಪ್ರತ್ಯೇಕಿಸಿಯೇ ಕಾಣುತ್ತಾರೆ. ಆದರೆ, ಈ ರೀತಿ ಪ್ರತ್ಯೇಕಿಸಿ ನೋಡುವುದು ಮಾರ್ಕ್ಸ್ವಾದಿ ವಿಶ್ಲೇಷಣೆಗೆ ಸಲ್ಲುವಂತದ್ದಲ್ಲ. ಮಾರ್ಕ್ಸ್ವಾದಿ ವಿಶ್ಲೇಷಣೆ ಘಟನೆಗಳನ್ನು ಸಮಗ್ರವಾಗಿ ನೋಡುತ್ತದೆ, ಅನಾವರಣಗೊಳ್ಳುತ್ತಿರುವ ಘಟನಾವಳಿಗಳ ನಡುವೆ ಇರುವ ಸಮಾನ ರೂಪ, ಕ್ರಮ ಅಥವಾ ಏರ್ಪಾಡು ಮತ್ತು ಅದರ ವರ್ಗ ವಿನ್ಯಾಸವನ್ನು ಗುರುತಿಸುತ್ತದೆ. ಅಂತಾದರೆ, ಜಗತ್ತಿನಾದ್ಯಂತ ಬಲ ಪಂಥದತ್ತ ಸರಿಯುತ್ತಿರುವುದರ ಬಗ್ಗೆ ಮಾರ್ಕ್ಸ್ವಾದಿಗಳು ಏನು ಹೇಳಬಹುದು?
ಇದು ಸ್ಪಷ್ಟವಾಗಿ 2008ರಲ್ಲಿ ಆರಂಭವಾಗಿ ಇನ್ನೂ ಜಾಗತಿಕ ಅರ್ಥವ್ಯವಸ್ಥೆಯನ್ನು ಬಿಗಿದುಕೊಂಡಿರುವ ಆರ್ಥಿಕ ಬಿಕ್ಕಟ್ಟನ್ನು ವ್ಯಕ್ತಪಡಿಸುತ್ತದೆ. ಈ ಬಿಕ್ಕಟ್ಟಿನಿಂದ ಸ್ವಲ್ಪ ಚೇತರಿಕೆಯ ಲಕ್ಷಣಗಳು ಆಗೊಮ್ಮೆ ಈಗೊಮ್ಮೆ ಪ್ರಕಟಗೊಂಡಿವೆ. ಆದರೆ, ಚೇತರಿಕೆಯ ಲಕ್ಷಣಗಳು ಕಾಣಿಸಿಕೊಂಡ ಸ್ವಲ್ಪವೇ ಸಮಯದಲ್ಲಿ ಜಾಗತಿಕ ಅರ್ಥವ್ಯವಸ್ಥೆಯು ಮತ್ತೊಮ್ಮೆ ಬಿಕ್ಕಟ್ಟಿನಲ್ಲಿ ಮುಳುಗುತ್ತಿತ್ತು. ಒಂದು ಪುಟಿಯುವ ರಬ್ಬರ್ ಚೆಂಡಿನ ಉಪಮಾನವು ಜಾಗತಿಕ ಅರ್ಥವ್ಯವಸ್ಥೆಯ ಈ ಪರಿಸ್ಥಿತಿಗೆ ಸೊಗಸಾಗಿ ಹೋಲುತ್ತದೆ: ಚೆಂಡು ನೆಲದಿಂದ ಪುಟಿದ ಕೂಡಲೇ ಚೇತರಿಕೆಯ ಉತ್ಸಾಹ ಏರುತ್ತಿತ್ತು; ಪುಟಿದ ಚೆಂಡು ಮತ್ತೆ ನೆಲಕ್ಕೆ ಬಿದ್ದ ಕೂಡಲೇ ಆ ಉತ್ಸಾಹ ಇಳಿಯುತ್ತಿತ್ತು.
ಇಂತಹ ವಾದದ ಬಗ್ಗೆ ತಕರಾರು ಎತ್ತಬಹುದು. ಈ ತಕರಾರಿನ ಸಮರ್ಥನೆಯಾಗಿ ಅಮೇರಿಕಾದಲ್ಲಿ ನಿರುದ್ಯೋಗದ ದರವು ಹಿಂದಿನ ದಶಕಗಳಿಗಿಂತಲೂ ಕೆಳ ಮಟ್ಟಕ್ಕೆ ಈಗ ಇಳಿದಿದೆ ಎಂದು ಹೇಳಬಹುದು. ಆದರೆ, ಉದ್ಯೋಗದಲ್ಲಿ ಭಾಗವಹಿಸುವಿಕೆಯ ದರವು 2008ರಲ್ಲಿ ಇದ್ದದ್ದಕ್ಕಿಂತಲೂ ಕೆಳಗಿದೆ. ಉದ್ಯೋಗ ಭಾಗವಹಿಸುವಿಕೆಯ ದರವು ಈಗಲೂ 2008ರಲ್ಲಿ ಇದ್ದಷ್ಟೇ ಇದೆ ಎಂದು ಊಹಿಸಿಕೊಂಡರೆ, ಅಮೇರಿಕಾದ ಇಂದಿನ ನಿರುದ್ಯೋಗದ ದರ 8% ಆಗುತ್ತದೆ, ಅಧಿಕೃತ ಅಂಕಿಗಳು ಹೇಳುವ ಹಾಗೆ 4% ಅಲ್ಲ.
ಜಾಗತಿಕ ಅರ್ಥವ್ಯವಸ್ಥೆಯು ಬಿಕ್ಕಟ್ಟಿಗೆ ಒಳಗಾಗಿರುವ ಪರಿಸ್ಥಿತಿಯಲ್ಲಿ ಮತ್ತು ಅದರ ಪರಿಣಾಮವಾಗಿ ನಿರುದ್ಯೋಗವು ಉಲ್ಬಣಗೊಂಡ ಪರಿಸ್ಥಿತಿಯಲ್ಲಿ ಜಗತ್ತಿನಾದ್ಯಂತ ಬಲ ಪಂಥದತ್ತ ಪಲ್ಲಟ ಕಾಣುತ್ತಿದೆ. ಅರ್ಥವ್ಯವಸ್ಥೆಯ ಬಿಕ್ಕಟ್ಟು ಮತ್ತು ನಿರುದ್ಯೋಗದ ಪ್ರಶ್ನೆ ಬಂದಾಗ, ಉದಾರವಾದೀ ಬೂರ್ಜ್ವಾ ಪಕ್ಷಗಳು ಸಾಮಾನ್ಯವಾಗಿ ನಿರಾಕರಣೆಯ ಧೋರಣೆ ತಳೆಯುತ್ತವೆ. ನಿರುದ್ಯೋಗ ಉಂಟಾಗುವುದಕ್ಕೆ ವ್ಯವಸ್ಥೆ ಕಾರಣವಲ್ಲ; ವಲಸಿಗರೇ ಕಾರಣ; ಆದುದರಿಂದ ವಲಸೆಯನ್ನು ತಡೆಯಬೇಕು ಎಂದು ಪ್ರತಿಪಾದಿಸುವ ಬಲ ಪಂಥವು, ಕೊನೆಯ ಪಕ್ಷ, ನಿರುದ್ಯೋಗವು ಉಂಟುಮಾಡುವ ಯಾತನೆಯನ್ನು ಗುರುತಿಸುತ್ತದೆ.
ಯೂರೋಪಿಯನ್ ಒಕ್ಕೂಟ ವ್ಯವಸ್ಥೆಯಲ್ಲಿ, ಅದರ ದುಡಿಮೆಗಾರರು ಒಕ್ಕೂಟದ 28 ಸದಸ್ಯ ದೇಶಗಳಲ್ಲಿ ಯಾವುದೇ ದೇಶಕ್ಕೆ ವಲಸೆ ಹೋಗುವ ಅವಕಾಶವು ಮುಕ್ತವಾಗಿರುವುದರಿಂದ, ಕೆಲವು ಬಲ ಪಂಥೀಯ ಪಕ್ಷಗಳು ಯೂರೋಪಿಯನ್ ಒಕ್ಕೂಟದ ವಿರೋಧಿಗಳೂ ಆಗಿದ್ದಾರೆ. ಆಡಳಿತದಲ್ಲಿರುವ ಮತ್ತು ಅವರಿಗೆ ವಿರೋಧವಿರುವ ಉದಾರವಾದೀ ಬೂರ್ಜ್ವಾ ಪಕ್ಷಗಳು ಬಿಕ್ಕಟ್ಟು ಇದೆಯೆನ್ನುವುದನ್ನೇ ಒಪ್ಪಿಕೊಳ್ಳದ ಪರಿಸ್ಥಿತಿಯಲ್ಲಿ ಮತ್ತು ಎಡ ಪಂಥವು ಈ ಬಿಕ್ಕಟ್ಟಿನಿಂದ ಹೊರಬರುವ ಒಂದು ಪರ್ಯಾಯ ಅಜೆಂಡಾವನ್ನು ಜನತೆಯ ಮುಂದಿಡುವಲ್ಲಿ ನಿಧಾನವಾಗಿರುವ ಪರಿಸ್ಥಿತಿಯಲ್ಲಿ, ಇಂತಹ ಪರಿಸ್ಥಿತಿ ನಿರ್ಮಾಣವಾಗುವುದನ್ನೇ ಕಾಯುತ್ತಿದ್ದ ಬಲ ಪಂಥವು ಕಿಂದರಿಜೋಗಿಯಂತೆ ರಂಗ ಪ್ರವೇಶಿಸಿ ನಿರುದ್ಯೋಗ ಪರಿಹರಿಸುವ ಕಿಂದರಿ ಬಾರಿಸಿತು. ಒಂದು ವಲಸೆ-ವಿರೋಧಿ ಅಜೆಂಡಾವನ್ನು ಜನತೆಯ ಮುಂದಿಡುವ ಮೂಲಕ ಬಲ ಪಂಥವು ತನ್ನ ಚಟುವಟಿಕೆಗಳಿಗೆ ಚಾಲನೆ ಕೊಟ್ಟಿದೆ. ಹೀಗೆ ಜಗತ್ತಿನ ಉದ್ದಗಲದಲ್ಲೂ ಅದರ ಬೆಳವಣಿಗೆಗೆ ಅದು ಬಿಕ್ಕಟ್ಟು ಮತ್ತು ನಿರುದ್ಯೋಗವನ್ನು ಗಮನಕ್ಕೆ ತಗೊಂಡಿರುವುದು ಮತ್ತು ಅಧಿಕಾರಸ್ಥರ ಪರವಾದ ರಾಜಕೀಯ ಪಕ್ಷಗಳು ಗಮನಕ್ಕೆ ತಗೊಂಡಿರದಿರುವುದೇ ಕಾರಣ ಎನ್ನಬಹುದು.
ಹಾಗಾದರೆ, ಭಾರತದಲ್ಲಿನ ಕತೆ ಈ ವಿವರಣೆಯ ಚೌಕಟ್ಟಿಗೆ ಹೊಂದಿಕೊಳ್ಳುತ್ತದೆಯೇ? ಭಾರತದಲ್ಲಿಯೂ ಸಹ ಅಭಿವೃದ್ಧಿ ಅಜೆಂಡಾದ ಮೂಲಕವೇ 2014ರಲ್ಲಿ ಮೋದಿ ಅಧಿಕಾರ ಹಿಡಿದದ್ದು. ಅದಕ್ಕೂ ಮುನ್ನವೇ ಯುಪಿಎ-2 (2009-14) ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ದರ ಇಳಿಮುಖವಾಗಿತ್ತು. ಹಾಗಾಗಿ, ಪ್ರತಿಯೊಬ್ಬರ ಅದೃಷ್ಟ ಖುಲಾಯಿಸುವ ನವ ಉದಾರವಾದದ ಭರವಸೆ ಮಬ್ಬಾಗಲಾರಂಭಿಸಿತ್ತು. ಜನತೆಗೆ ಕೊಟ್ಟಿದ್ದ ಅಭಿವೃದ್ಧಿ ಅಥವಾ ವಿಕಾಸ ಭರವಸೆಯನ್ನು ಈಡೇರಿಸಲು ಮೋದಿ ಸರ್ಕಾರವು ಅಧಿಕಾರದ ಅವಧಿಯಲ್ಲಿ(2014-19) ಅಕ್ಷರಷಃ ಏನನ್ನೂ ಮಾಡಲಿಲ್ಲ.
ಆ ಕಾರಣದಿಂದಾಗಿಯೇ ಈಗ ತಾನೇ ಮುಗಿದ ಚುನಾವಣೆಯಲ್ಲಿ ಅಭಿವೃದ್ಧಿ ಅಥವಾ ವಿಕಾಸದ ಬಗ್ಗೆ ಮೋದಿಯವರು ಒಂದೇ ಒಂದು ಶಬ್ದವನ್ನೂ ಉಚ್ಛರಿಸಲಿಲ್ಲ. ಆದರೆ, ಭಯೋತ್ಪಾದನೆ ವಿರುದ್ಧ ಹೋರಾಡುವೆ, ರಾಷ್ಟ್ರವನ್ನು ರಕ್ಷಿಸುವೆ, ಪಾಕೀಸ್ತಾನಕ್ಕೆ ಪಾಠ ಕಲಿಸುವೆ ಮತ್ತು ಹಿಂದುತ್ವ ಪ್ರತಿಷ್ಠಾಪನೆಯಂತಹ ಮಾತುಗಳ ಮೂಲಕ ಇಡೀ ಚರ್ಚೆಯ ದಿಕ್ಕನ್ನೇ ಮೋದಿ ಬದಲಿಸಿದರು. ಈ ತಂತ್ರಗಾರಿಕೆಯ ಮಾತುಗಳ ಮೂಲಕ, ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿ ಸಾಧಿಸಲು ತಮ್ಮ ಸರ್ಕಾರ ಮಾಡಿದ್ದೇನು ಎಂಬುದರ ಕುರಿತು ಎದುರಾಗುವ ಇರುಸು ಮುರುಸಿನ ಪ್ರಶ್ನೆಗಳನ್ನು ನಿರಾಯಾಸವಾಗಿ ತಪ್ಪಿಸಿಕೊಂಡರು. ಅದರಿಂದ ಅವರಿಗೆ ಭರ್ಜರಿ ಅನುಕೂಲವೇ ಆಯ್ತು.
ನವ ಉದಾರವಾದವನ್ನು ಪ್ರತಿನಿಧಿಸುವ ಕಾಂಗ್ರೆಸ್ನಂತಹ ಒಂದು ಪಕ್ಷದಿಂದ ಬಿಜೆಪಿಯಂತಹ ಒಂದು ಬಲ ಪಂಥೀಯ ಪಕ್ಷದತ್ತ ಪಲ್ಲಟವು ಸಾಧ್ಯವಾಗಿರುವುದು ನವ ಉದಾರವಾದದ ಬಿಕ್ಕಟ್ಟಿನಿಂದಾಗಿಯೇ ಎಂಬ ಸಂಗತಿಯಂತೂ ಉಳಿದೇ ಉಳಿಯುತ್ತದೆ. ನವ ಉದಾರವಾದವು ಅಭಿವೃದ್ಧಿ ತರುತ್ತದೆ ಎಂಬುದಾಗಿ ಸೋಗುಹಾಕುವುದು ಕಾಗ್ರೆಸ್ ಪಕ್ಷಕ್ಕೆ ಇನ್ನೆಷ್ಟೂ ಸಾಧ್ಯವಿರಲಿಲ್ಲ. ಬಿಜೆಪಿಯಂತೂ ಅಭಿವೃದ್ಧಿಯ ಬಗ್ಗೆ ಮಾತಾಡಲೇ ಇಲ್ಲ. ಆದರೆ, ಕಥನ-ಪ್ರವಚನದ ದಿಕ್ಕನ್ನೇ ಬದಲಿಸಿತು. ಅದು ಕಾರ್ಪೊರೇಟ್-ಹಣಕಾಸು ಕುಳಗಳಿಗೆ ಹಿಡಿಸಿತು ಕೂಡ (ಅದೆಷ್ಟು ಅಂದರೆ, ಬಿಜೆಪಿ ಗೆಲ್ಲುತ್ತದೆಂದು ಎಕ್ಸಿಟ್ ಪೋಲ್ಗಳು ಭವಿಷ್ಯ ನುಡಿದ ಕೂಡಲೇ ಷೇರು ಪೇಟೆ ಸೂಚ್ಯಂಕ ಸರ್ರನೆ ಏರಿತು).
ಬದಲಾದ ಇಂತಹ ಸಂವಾದ-ಕಥನಗಳ ಪ್ರಭಾವ ತಾತ್ಕಾಲಿಕ. ನವ ಉದಾರವಾದವು ಸಿಕ್ಕಿಹಾಕಿಕೊಂಡಿರುವ ಬಿಕ್ಕಟ್ಟಿನಿಂದ ಹೊರಬರುವುದು ಹೇಗೆ ಎಂಬುದರ ಬಗ್ಗೆ ಯಾವ ಸುಳಿವೂ ಕಾಂಗ್ರೆಸ್ಗೂ ಇಲ್ಲ, ಬಿಜೆಪಿಗೂ ಇಲ್ಲ. ಆದ್ದರಿಂದ, ಕೋಟ್ಯಂತರ ನಿರುದ್ಯೋಗಿಗಳಿಗೆ ಅವರು ಉದ್ಯೋಗ ಒದಗಿಸಲಾರರು. ಹಾಗೆ ಹೇಳುವುದಾದರೆ, ಕಾಂಗ್ರೆಸ್ ಪಕ್ಷದ ಕೆಲವರಿಗೆ ನವ ಉದಾರವಾದದ ಹಾದಿಯಲ್ಲಿ ಮುಂದೆ ಹೋಗುವುದು ಅದೆಷ್ಟು ಕಷ್ಟ ಎಂಬುದರ ಅರಿವಿತ್ತು. ಹಾಗಾಗಿಯೇ, ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಐದು ಕೋಟಿ ಕಡು ಬಡ ಕುಟುಂಬಗಳಿಗೆ ವಾರ್ಷಿಕ 72,000 ರೂ ಹಣ ವರ್ಗಾಯಿಸುವ ನ್ಯಾಯ ಯೋಜನೆಯ ಘೋಷಣೆ ಕೊಟ್ಟಿತ್ತು. ಮಾಮೂಲು ಪರಿಸ್ಥಿತಿಯಲ್ಲಿ ಸಾಕಷ್ಟು ಉತ್ಸಾಹ ತುಂಬುವ ಸಾಧ್ಯತೆ ಹೊಂದಿದ್ದ ಮತ್ತು ಪಕ್ಷದ ಪಾಲಿಗೆ ಅಧಿಕಾರ ತಂದುಕೊಡುವಂತಹ ಒಂದು ಯೋಜನೆಯೇ ಠುಸ್ ಪಟಾಕಿಯಂತಾಯಿತು. ಏಕೆಂದರೆ, ಅದಕ್ಕೆ ಬೇಕಾಗುವ ಹಣ ಯಾವ ಮೂಲದಿಂದ ಬರುತ್ತದೆ ಎಂಬುದನ್ನು ಕಾಂಗ್ರೆಸ್ ಪಕ್ಷವು ಹೇಳದೇ ಇದ್ದುದರಿಂದ ಅದು ಜನರ ವಿಶ್ವಾಸ ಗಳಿಸಲಿಲ್ಲ. ಇದೊಂದು ಚುನಾವಣಾ ಭರವಸೆ, ಚುನಾವಣೆಯ ಮರು ದಿನವೇ ಅದನ್ನು ಮುರಿಯಲಾಗುತ್ತದೆ ಎಂದೇ ಜನ ಸಹಜವಾಗಿ ಭಾವಿಸಿದರು.
ಅರ್ಥವ್ಯವಸ್ಥೆಯನ್ನು ಮುನ್ನೆಡೆಸುವುದು ಹೇಗೆ ಎಂಬುದರ ಬಗ್ಗೆ ಮಧ್ಯಮಾರ್ಗಿ, ಉದಾರವಾದೀ ಬೂರ್ಜ್ವಾ ಪಕ್ಷವಾದ ಕಾಂಗ್ರೆಸ್ಗೆ ಒಂದು ಸ್ಪಷ್ಟ ಕಲ್ಪನೆಯೇ ಇಲ್ಲ. ಆ ಪಕ್ಷಕ್ಕೆ ಸರಿಸಮನಾಗಿ ಬಿಜೆಪಿಗೂ ಅದರ ಬಗ್ಗೆ ಯಾವುದೇ ಸುಳಿವೂ ಇಲ್ಲ. ಬಿಜೆಪಿಯ ಅತಿರೇಕದ ರಾಷ್ಟ್ರವಾದವು ಬಹಳ ಬೇಗನೇ ತೆಳುವಾಗುತ್ತದೆ. ಹಸಿವು ಮತ್ತು ನಿರುದ್ಯೋಗದಿಂದ ನರಳುತ್ತಿರುವ ಜನತೆಯನ್ನು ಗಾಳಕ್ಕೆ ಸಿಕ್ಕಿಸಿದ ಹುಳ ತಿನ್ನುವ ಮೀನುಗಳೆಂದು ಭಾವಿಸಿ, ಅವರಿಗೆ ದಿನನಿತ್ಯವೂ ಪಾಕೀಸ್ತಾನ-ವಿರೋಧೀ ಮತ್ತು ಮುಸ್ಲಿಂ-ವಿರೋಧೀ ಮಾತುಗಳನ್ನೇ ಉಣಬಡಿಸುವ ಆಟ ಬಹಳ ಕಾಲ ನಡೆಯುವುದಿಲ್ಲ. ಅಲ್ಲದೆ, ಆರ್ಥಿಕ ಪರಿಸ್ಥಿತಿ ನಿಂತಲ್ಲೇ ನಿಶ್ಚಲವಾಗಿ ಉಳಿಯುವುದಿಲ್ಲ.
ಮೋದಿ ಸರ್ಕಾರವು ಆರ್ಥಿಕ ವಲಯದತ್ತ ತಲೆ ಹಾಕಿ ಮಲಗದೇ ಇದ್ದರೂ ಸಹ, ಅರ್ಥವ್ಯವಸ್ಥೆಯು ಮೋದಿಯವರನ್ನು ಅವರಷ್ಟಕ್ಕೆ ಅವರು ಇರಲು ಬಿಡುವುದಿಲ್ಲ, ಬೆನ್ನು ಹತ್ತಿದ ಬೇತಾಳನಂತೆ ಕಾಡುತ್ತದೆ. ಕಾಲಕ್ರಮೇಣ, ಆರ್ಥಿಕ ಚಟುವಟಿಕೆಗಳ ಹಿಂಜರಿತ ಮತ್ತು ವಿದೇಶ ವ್ಯಾಪಾರದ ಬಾಕಿ ಚುಕ್ತಾ ಮಾಡುವುದೇ ಒಂದು ಸಮಸ್ಯೆಯಾದಾಗ, ಆರ್ಥಿಕ ಬಿಕ್ಕಟ್ಟು ಉಲ್ಬಣಗೊಳ್ಳುತ್ತದೆ. ಆಗ, ಉತ್ತರ ಕೊಡಲು ಮೋದಿ ಸರ್ಕಾರದ ಬಳಿ ಹೇಳಿಕೊಳ್ಳುವ ಸಮರ್ಥನೆಗಳಿರುವುದಿಲ್ಲ. ಮತ್ತು, ಬಿಕ್ಕಟ್ಟಿನಿಂದ ಅರ್ಥವ್ಯವಸ್ಥೆಯನ್ನು ಪಾರುಮಾಡುವುದು ಆ ವೇಳೆಗಾಗಲೇ ಇನ್ನೂ ಹೆಚ್ಚು ಕಷ್ಟಕರವಾಗುತ್ತದೆ.
ಜನತೆಯ ದಿನನಿತ್ಯದ ಬದುಕಿನ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ನವ ಉದಾರವಾದದ ಎರಡೂ ಪಡೆಗಳು (ಕಾಂಗ್ರೆಸ್ ಮತ್ತು ಬಿಜೆಪಿ) ಅಸಮರ್ಥವಾಗಿವೆ. ಈ ಪರಿಸ್ಥಿತಿಯಲ್ಲಿ, ಅರ್ಥವ್ಯವಸ್ಥೆಯನ್ನು ಬಿಕ್ಕಟ್ಟಿನಿಂದ ಹೊರ ಬರುವ ಮಾರ್ಗದರ್ಶನವನ್ನು ಎಡ ಪಂಥ ಮಾತ್ರ ಒದಗಿಸಬಲ್ಲದು. ಎಡ ಪಂಥದ ಈ ಮಾರ್ಗವು ನಮ್ಮನ್ನು ಬಂಡವಾಳಶಾಹಿಯಿಂದ ಆಚೆಗೆ ಕೊಂಡೊಯ್ಯಬಲ್ಲದು. ನವ ಉದಾರ ಬಂಡವಾಳಶಾಹಿ ದಿಗಂತದಿಂದ ಆಚೆಗಿನ ಕಣ್ಣೋಟ ಹೊಂದಿರುವುದು ಎಡ ಪಂಥ ಮಾತ್ರ. ಆದ್ದರಿಂದ, ಎಡ ಪರ್ಯಾಯ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ಸಲ್ಲುತ್ತದೆ.
ಸಂಕ್ಷಿಪ್ತವಾಗಿ, ನಾವೀಗ ಒಂದು ಚಾರಿತ್ರಿಕ ಪರ್ವಕಾಲವನ್ನು ನೋಡುತ್ತಿದ್ದೇವೆ. ಈ ಸನ್ನಿವೇಶದಲ್ಲಿ, ಬಲಪಂಥವು ಒಂದು ಹುಸಿ ಅಥವಾ ವಿಭಜನಕಾರೀ ಅಜೆಂಡಾದ ಸುತ್ತ ಜನರನ್ನು ಅಲ್ಪ ಕಾಲದಲ್ಲೇ ಅಣಿನೆರೆಸುವಲ್ಲಿ ಎಷ್ಡೇ ಯಶಸ್ವಿಯಾಗಿದ್ದರೂ ಸಹ, ನಿರುದ್ಯೋಗ ಮತ್ತು ಹತಾಶೆಯ ಪರಿಸ್ಥಿತಿಗೆ ಒಳಗಾಗಿರುವ ಆ ಜನರನ್ನು ಆ ಪರಿಸ್ಥಿತಿಯಿಂದ ಹೊರತರುವ ಮಾರ್ಗ ತೋರಲು ಬಲ ಪಂಥವು ಮೂಲಭೂತವಾಗಿ ಅಸಮರ್ಥವಾಗಿದೆ.
ಒಂದು ರಾಷ್ಟ್ರದ ಚರಿತ್ರೆಯಲ್ಲಿ, ಅಸ್ತಿತ್ವದಲ್ಲಿರುವ ವ್ಯವಸ್ಥೆಯು ಸ್ಥಿರವಾಗಿ ಮತ್ತು ದೀರ್ಘವಾಗಿ ಬಾಳುವ ಸಾಮರ್ಥ್ಯವುಳ್ಳದ್ದೆಂದು ತೋರುವ ಕ್ಷಣಗಳಿರುತ್ತವೆ. ಆದರೆ, ಇವೆಲ್ಲವೂ ಕ್ಷಿಪ್ರವಾಗಿ ಬದಲಾಗುತ್ತವೆ, ಹಿಂದಿನಂತೆಯೆ ಸಾಗುವುದು ಇನ್ನು ಸಾಧ್ಯವಿಲ್ಲವೆಂಬ ಪರಿಸ್ಥಿತಿಯಲ್ಲಿ ಹೊಸ ಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಂತಹ ಒಂದು ಕ್ಷಣ ಬಂಡವಾಳಶಾಹಿಗೆ ಈಗ ಬಂದಿದೆ, ಭಾರತದಲ್ಲಿ ಮಾತ್ರವಲ್ಲ ವಿಶ್ವದ ಎಲ್ಲೆಡೆಯಲ್ಲೂ. ಭಾರತದಲ್ಲಿ ಮತ್ತು ಬೇರೆ ಹಲವು ದೇಶಗಳಲ್ಲಿ ಬಲಪಂಥವು ಎಷ್ಡೇ ಚುನಾವಣಾ ಯಶಸ್ಸು ಗಳಿಸಿದರೂ, ಅದು ಈ ಮೂಲಭೂತ ಅಂಶವನ್ನು ಮಾರ್ಪಡಿಸಲಾರದು.
–ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಕೃಪೆ : ಜನಶಕ್ತಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

ದಿನದ ಸುದ್ದಿ
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ : ಭವ್ಯ ನರಸಿಂಹಮೂರ್ತಿ

ಸುದ್ದಿದಿನ, ಬೆಂಗಳೂರು : ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಅವರ ತತ್ವ ಆದರ್ಶಗಳು ಹಾಗೂ ಯುವ ಜನತೆಗೆ ನೀಡಿರುವ ಸಂದೇಶಗಳನ್ನು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನತೆಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ರ್ಯಾಲಿ ಬೆಳಿಗ್ಗೆ 09-00 ಕ್ಕೆ ರಾಜಾಜಿನಗರ Entrance Bridge ಇಂದ ಪ್ರಾರಂಭವಾಗಿ ನವರಂಗ ಚಿತ್ರಮಂದಿರ – ಶಂಕರ್ ಮಠ – ಹಾವನೂರ್ ಸರ್ಕಲ್ – ಹೌಸಿಂಗ್ ಬೋರ್ಡ್ – ಕಾಮಾಕ್ಷಿಪಾಳ್ಯ ಬಸ್ ಸ್ಟಾಂಡ್ – ಹಾವನೂರ್ – ಅಕ್ಷಯ ಉಪಹಾರ – ಮೋದಿ ಹಾಸ್ಪಿಟಲ್ – ನವರಂಗ ಬ್ರಿಡ್ಜ್ – ಗಿರಿಯಾಸ್ ಸಿಗ್ನಲ್ – 6th ಬ್ಲಾಕ್ – ಕೊನೆಯದಾಗಿ 12 ಗಂಟೆಗೆ ಭಾಷ್ಯಮ್ ಸರ್ಕಲ್ ನಲ್ಲಿ ಕೊನೆಗೊಳ್ಳುತ್ತದೆ.
ದಾರಿಯಲ್ಲಿ 4 ಕಡೆ ಸ್ವಾಮಿ ವಿವೇಕಾನಂದರಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ. ಪೂಜೆಯ ನಂತರ ವಿವೇಕಾನಂದರ ತತ್ವ ಆದರ್ಶಗಳನ್ನೊಳಗೊಂಡ ಹತ್ತು ಸಾವಿರ ಪುಸ್ತಕಗಳನ್ನು ಕ್ಷೇತ್ರದಾದ್ಯಂತ ಉಚಿತವಾಗಿ ಹಂಚಲಾಗುವುದು ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ7 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ5 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ20 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ19 hours ago
ನಟ ಮನದೀಪ್ ರಾಯ್ ನಿಧನ