ಭಾವ ಭೈರಾಗಿ
ಏನೆಂದು ಹೆಸರಿಡಲಿ ಈ ಚಂದ ಅನುಭವಕೆ..!

ಹೃದಯದ ರಾಜ,
ಹೌದು ಕಣೋ ನಾನು ನಿನ್ನನ್ನು ಹೀಗಂತಲೇ ಕರೆಯುತ್ತಿದ್ದದ್ದು. ಹಾಗೆ ಕರೆದಾಗಲೆಲ್ಲಾ ನಾನೇ ನಿನ್ನ ರಾಣಿ, ಈ ಜಗವೇ ನಮ್ಮ ರಾಜ್ಯ, ನಾವಿಬ್ಬರೇ ಅರಸನ ಮನೆಯವರು, ನಾವು ಹೇಳಿದಂತೆ ಪ್ರಜೆಗಳೆಲ್ಲಾ ಕೇಳಬೇಕು ಎಂಬೆಲ್ಲಾ ಅತಿಯಾದ ಹುಚ್ಚು ಕಲ್ಪನೆಗಳಲ್ಲಿ ಬೀಗುತ್ತಿದ್ದೆ. ಆದರೆ ನಿನ್ನನ್ನು ಇಷ್ಟ ಪಡುತ್ತಿದ್ದದ್ದು ಮಾತ್ರ ಸುಳ್ಳಲ್ಲ. ವ್ಯವಸ್ಥಿತ ಮನೆಯ ಸುತ್ತಲೂ ಗೋಡೆ, ಒಳಗೆ ಯಾರೂ ಬರಬಾರದೆಂದು ಕಬ್ಬಿಣದ ಗೇಟಿಗೆ ದಪ್ಪನೆಯ ಬೀಗ, ರಾತ್ರಿ ಎಂಟರ ನಂತರ ಯಾರೂ ಹೊರ ಹೋಗುವಂತಿರಲಿಲ್ಲ. ತಡವಾದರೆ ಕರೆ ಮಾಡಿ ತಿಳಿಸಿರಬೇಕು, ಬಸ್ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದರು. ಇದು ನನ್ನಪ್ಪನ ಆಜ್ಞೆ. ಇದು ಮಕ್ಕಳ ಮೇಲಿನ ಅತಿಯಾದ ಪ್ರೀತಿಯೋ ಅಥವಾ ಮಕ್ಕಳೆಂಬ ಮಮಕಾರವೋ ಗೊತ್ತಿಲ್ಲ.ಹದ್ದಿನ ಕಣ್ಣಿನಂತೆ ನಮ್ಮನ್ನ ನೋಡಿಕೊಳ್ಳುತ್ತಿದ್ದರು.
ಅಂಥ ಮನೆಯಲ್ಲಿನ ತೋಟದ ಮಲ್ಲಿಗೆಯ ಮರದ ಬಳ್ಳಿಯ ಎಲೆ ಮರೆಯಲ್ಲಿ ಇಣುಕುತಿದ್ದವಳು ನಾನು. ಯಾರಿಗೂ ಕಾಣದೆ ಅರಳಿ ನಿಂತ ಮಲ್ಲಿಗೆಯ ಹೂವಿನಂತಿದ್ದೆ. ಅದಾವ ಮಾಯದಲಿ ನೀ ಗಿಡದಿಂದ ಕಿತ್ತುಕೊಂಡೆಯೋ ಗೊತ್ತಿಲ್ಲ. ಶಿವನ ಪೂಜೆಗೆ ಅರ್ಪಿತವಾಗಬೇಕೆಂದಿದ್ದವಳು ನಾನು. ನಿನ್ನ ಪ್ರೀತಿಯ ಅಪ್ಪುಗೆಯಲಿ ಕರಗಿ ಜಾರಿ ಪಾದಕ್ಕೆ ಸೇರಿದಾಗ ನೀನೇ ನನ್ನ ಶಿವನಂತೆ ಕಂಡಿದ್ದೆ. ಆಗಲೇ ನನ್ನ ಜನ್ಮ ಸಾರ್ಥಕ ಎಂದೆನಿಸಿತು. ನಿನ್ನ ಮೇಲಿನ ಪ್ರೀತಿ ದುಪ್ಪಟವಾಯಿತು.
ಒಮ್ಮೊಮ್ಮೆ ನೀ ಫೋನಿನಲ್ಲಿ ಸಿಗದೆ ಬೇಸರವಾದಾಗ ನನ್ನೊಳಗೆ ನಾನೇ “ನಾ ಹೇಗೆ ಇವನಿಗೆ ಸೇರಿದೆ.. ? , ಯಾವ ಮಾಯರೂಪ ಇವನನ್ನು ಇಷ್ಟ ಪಡುವಂತೆ ಮಾಡಿತು..?. ಕಾಲೇಜಾಯಿತು ಮನೆಯಾಯಿತು ಎಂಬ ಅಮ್ಮನ ನುಡಿಯನ್ನ ಚಾಚೂ ತಪ್ಪದೆ ಪಾಲಿಸುತ್ತಿದ್ದವಳು ನಾನು. ಕಾಲೇಜಿನಲ್ಲಿ, ನಮ್ಮೂರಿನಲ್ಲಿ ಅದೆಷ್ಟೋ ಸ್ಪುರದ್ರೂಪಿ ಯುವಕರು ಈ ಮಲ್ಲಿಗೆಯ ಸುವಾಸನೆಯ ನೆತ್ತಿಗೇರಿಸಿಕೊಳ್ಳಲು ಹರಸಾಹಸ ಪಟ್ಟರೂ ದಕ್ಕದವಳು ಅದ್ಹೇಗೆ , ನೀ ಮಾತ್ರ ನನ್ನ ಹೃದಯದ ಅಂತಃಪುರದೊಳಗೆ ಮಯೂರವರ್ಮನಂತೆ ಚಾಣಾಕ್ಷತೆಯಿಂದ ನುಗ್ಗಿಬಿಟ್ಟಿದ್ದೆ…?. ಇನ್ನೂ ಅರ್ಥವಾಗದೇ ಪ್ರಶ್ನೆಯಾಗೇ ಉಳಿದಿದೆ ನನಗೆ. ಅತಿಯಾದ ಅಕ್ಕರೆ, ಮುದ್ದುತನ, ಕೆಟ್ಟ ಕಣ್ಣುಗಳು ಬೀಳಬಾರದೆಂಬ ರಕ್ಷಣೆಯ ಭರವಸೆಯಿಂದಲೋ ಏನೋ ಬುದ್ಧ ರಾಜ್ಯ ತೊರೆದು ಹೋಗಲು ಪ್ರೇರೇಪಿಸಿರಬೇಕು.
ಮನೆಬಿಟ್ಟು ಹೋದ ಅವರೊಬ್ಬ ಜಗತ್ತಿಗೆ ಜ್ಞಾನಿಗಳಾದರು, ಮಾರ್ಗದರ್ಶಕರಾದರು. ಅಂತೆಯೇ ನಮ್ಮ ಮನೆಯ ಕಟ್ಟು ನಿಟ್ಟಿನ ವಾತಾವರಣವೇ ಹೊರ ಬಂದು ನಿನ್ನನ್ನು ಪ್ರೀತಿಸಲು ಪ್ರೇರೇಪಿಸಿರಬೇಕು. ಅಪ್ಪನ ಗದರಿಕೆಗೆ ಹೆದರಿ ಮಾತೇ ಆಡುತ್ತಿರಲಿಲ್ಲ. ಅಮ್ಮನೋ ಅಪ್ಪನ ಮಾತಿಗೆ ಎದುರಾಡದೆ ಹಾಕಿದ ಗೆರೆಯಲ್ಲೇ ನಡೆಯುತ್ತಿದ್ದಳು.ನಮ್ಮ ಇಷ್ಟ ಕಷ್ಟದ ಬಗ್ಗೆ ಒಮ್ಮೆಯೂ ಪ್ರೀತಿಯಿಂದ ಮಾತನಾಡಿರಲಿಲ್ಲ. ಅಕ್ಕ ಪಕ್ಜದವರ ಜೊತೆನೂ ಹೆಚ್ಚು ಬೆರೆಯಲು ಬಿಡುತ್ತಿರಲಿಲ್ಲ. ಅಷ್ಟು ಬಿಗಿಯಾಗಿತ್ತು ನಮ್ಮ ಮನೆ. ಮಧ್ಯಮ ವರ್ಗದ ಸಂಸಾರ ನಮ್ಮದು. ಹಾಗೆಂದು ಎಂದೂ ಉಪವಾಸ ಬೀಳಿಸಿದವರಲ್ಲ ನನ್ನಪ್ಪ. ಹಗಲು ರಾತ್ರಿಗಳೆನ್ನದೆ ದುಡಿದು ಸಲಹುತ್ತಿದ್ದರು.
ಇಂಥ ವೇಳೆ ಓದು ಮುಗಿದ ನನಗೆ ಅಪ್ಪನ ಕಷ್ಟವನ್ನು ಸ್ವಲ್ಪ ನೀಗಿಸಲು ಮುಂದಾದೆ. ಅಪ್ಪ ಅಮ್ಮ ಇಬ್ಬರಿಗೂ ಹೇಗೋ ಒಪ್ಪಿಸಿ ಸ್ನೇಹಿತೆಯೊಂದಿಗೆ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿಕೊಂಡೆ. ಊರು ಬಿಟ್ಟು ಬಂದದ್ದು ಒಂದು ಕಡೆ ನನಗೆ ಸ್ವಾತಂತ್ರ್ಯ ಸಿಕ್ಕಿತು ಎನಿಸಿದರೆ, ಅಷ್ಟು ವರ್ಷಗಳಿಂದ ಜೊತೆಗಿದ್ದ ಅಪ್ಪ ಅಮ್ಮನನ್ನು ಬಿಟ್ಟು ಇರಬೇಕಲ್ಲ ಎಂದು ಇನ್ನೊಂದೆಡೆ. ಒಳ್ಳೆ ಕೆಲಸವೇನೋ ಸಿಕ್ಕಿತು, ಆರಂಭದಲ್ಲಿ ಕಸಿವಿಸಿ ಎನಿಸಿದರೂ ತದನಂತರ ಹೊಂದಿಕೊಳ್ಳಬೇಕಾಯಿತು.
ಹೀಗ್ಗೆ ಹತ್ತು ವರ್ಷಗಳ ಹಿಂದೆ ನಡೆದ ಘಟನೆಯೊಂದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಹೀರೋ ಹೋಂಡಾ ಫ್ಯಾಶನ್ ಬೈಕ್ ಹೊಸತು, ಕಂಪನಿಯವರು ಆಗ ತಾನೆ ಚಾಲನೆ ಕೊಟ್ಟಿದ್ದ ಹೊಸ ಬ್ರಾಂಡ್, ಜರ್ರ್….ನೆ ಬಂದು ನೀನು ಆಫೀಸಿನ ಎದುರು ನಿಲ್ಲಿಸಿದೆ. ಆ ಶಬ್ಧಕ್ಕೆ ಮೆಟ್ಟಿಲುಗಳ ಹತ್ತುತ್ತಿದ್ದವಳು ಒಮ್ಮೆ ತಿರುಗಿ ನೋಡಿದೆ. ಬೈಕ್ ನಿಂದ ಇಳಿದವನೇ ಹೆಲ್ಮೆಟ್ ತೆಗೆದು ಬಾಜಿಗರ್ ಸಿನಿಮಾದಲ್ಲಿ ಶಾರುಖ್ ಖಾನ್ ಒದರುವಂತೆ ನಿನ್ನ ತಲೆಯನ್ನೊಮ್ಮೆ ಒದರಿದೆ. ನಿನ್ನ ಅನಿಸಿಕೆಗೆ ತಕ್ಕಂತೆ ಆ ನಿನ್ನ ನೀಳಕೂದಲು ಅದರ ಜಾಗವನ್ನು ಸಲೀಸಾಗಿ ಕೂರಿತು. ಸಾಲದೆಂಬಂತೆ ಕೈಯಬೆರಳುಗಳಿಂದ ಹಿಂದಕ್ಕೆ ಸರಿಸಿದಾಗಲಂತೂ ಅದಕ್ಕೆ ಮೆರಗು ಬಂತು. ಎತ್ತರದ ನಿಲುವು, ಸುಂದರ ವದನ, ಸದೃಢ ಮೈಕಟ್ಟು, ಬ್ಲೂ ಜೀನ್ಸ್ ಪ್ಯಾಂಟ್ ಗೆ ಸರಿಹೊಂದುವ ಟೀ ಶರ್ಟ್, ಹುಡುಕಿದರೂ ಎಳ್ಳಷ್ಟೂ ಕೊಂಕಿರದ ದೇಹ ಸೌಂದರ್ಯ, ಸಿನಿಮಾ ಹೀರೋಗಳಿಗೆ ಇರಬೇಕಾದ ಎಲ್ಲಾ ಸ್ವಭಾವ, ಗುಣಲಕ್ಷಣಗಳು ನಿನ್ನಲ್ಲಿದ್ದವು.ನಿನ್ನ ಕಣ್ಣ ಕಾಂತಿಗೆ ಒಮ್ಮೆ ಅವಾಕ್ಕಾದೆ. ಬಹುಶಃ ನಾ ಸೋತಿದ್ದು ನಿನಗೆ ಅಂದೇ ಇರಬೇಕು. ಇಷ್ಟೆಲ್ಲಾ ನಡೆದದ್ದು ಎರಡು ನಿಮಿಷದಲ್ಲಿ ಮಾತ್ರ. ಆ ಎರಡು ನಿಮಿಷ ನನ್ನ ಮನಸ್ಸನ್ನೇ ಪ್ರಫುಲ್ಲಗೊಳಿಸಿತ್ತು. ಬಂದವನೆ ಸರಸರನೆ ಮೆಟ್ಟಿಲುಗಳ ಹತ್ತಿ ನನ್ನನ್ನೇ ಹಿಂದಿಕ್ಕಿ ಹೊರಟು ಬಿಟ್ಟೆ. ಇಲ್ಲೊಬ್ಬಳು ಹುಡುಗಿ ನಿಂತಿದ್ದಾಳೆ, ಅವಳ ಮುಖವನ್ನೊಮ್ಮೆಯಾದರೂ ನೋಡೋಣ ಎನಿಸಲೇ ಇಲ್ಲ ನಿನಗೆ. ಆವಾಗಲೇ ನಿರ್ಧರಿಸಿದೆ ನೀನೇ ನನಗೆ ಸರಿಯಾದ ಜೋಡಿಯೆಂದು.
ಕಂಪನಿ ಸೇರಿ ಮೂರು ತಿಂಗಳಾದರೂ ಒಮ್ಮೆಯೂ ನೋಡದಿದ್ದವನು ಯಾರಿವನು..? ಎಂಬ ಪ್ರಶ್ನೆ ಗುನುಗುತ್ತಲೇ ಎರಡನೇ ಮಹಡಿ ಮೆಟ್ಟಿಲುಗಳ ಹತ್ತಿದ್ದೇ ನೆನಪಿಲ್ಲ. ಸಿನಿಮಾಗಳಲ್ಲಿ ಹೀರೋಗಳನ್ನ ನೋಡಿ ಎಂಜಾಯ್ ಮಾಡುತ್ತಿದ್ದವಳು, ಅಂದು ಮಾತ್ರ ನೀನೇ ನನ್ನ ಹೀರೋ ಎನಿಸಿಬಿಟ್ಟಿತು. ಆ ಸಮಯದಲ್ಲಿ ಪ್ರೇಮಲೋಕ ಸಿನಿಮಾದ ಯಾರಿವನು….? ಈ ಮನ್ಮಥನೂ…ಎಂಬ ಹಾಡು ನನಗರಿವಿಲ್ಲದಂತೆ ನಾಲಿಗೆಯಲ್ಲಿ ನಲಿಯುತ್ತಿತ್ತು.
ನೆನಪಿರಬಹುದು ಅಂದು ಸೋಮವಾರ, ವಾರದ ಮೊದಲ ದಿನ ನಾನು ಅಲ್ಲಿ ರಿಸಪ್ಸನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರಿಂದ ನಮ್ಮ ಬಾಸ್ ಗೆ ಹಿಂದಿನ ವಾರದ ಹಾಜರಾತಿ ಪುಸ್ತಕ, ಕಂಪನಿಯ ಕೆಲಸಗಾರರ ಒಳ ಬರುವ ಮತ್ತು ಹೊರ ಹೋಗುವ ಸಮಯದ ಪುಸ್ತಕವನ್ನು ತೋರಿಸುವುದು ರೂಢಿ. ಅಂತೆಯೇ ಬಹಳ ನಿಷ್ಠೆಯಿಂದ ಮತ್ತು ಗಂಭೀರವಾಗಿ ಎಲ್ಲವನ್ನೂ ಸಿದ್ಧಗೊಳಿಸುತ್ತಿದ್ದೆ. ಗಡುಸು ಧ್ವನಿಯೊಂದು ” ಹಲೋ ಎಕ್ಸ್ ಕ್ಯೂಸ್ ಮಿ ಮೈ ನೇಮ್ ಇಸ್ ಅಶೋಕ್, ಕ್ಯಾನು ಪ್ಲೀಸ್ ಎಂಟರ್ ಮೈ ನೇಮ್ ಇನ್ ಸ್ಟಾಫ್ ರಿಜಿಸ್ಟರ್ , ಐಯಾಮ್ ನ್ಯೂಲಿ ಜಾಯ್ನ್ಡ್ ” ಯಾರಪ್ಪ ಇದು ಬರೀ ಇಂಗ್ಲೀಷೇ ಮಾತನಾಡುತ್ತಾನೆ ಅಂತ ತಲೆ ಎತ್ತಿ ನೋಡಿದೆ. ನನಗೆ ಇದು ಕನಸೋ ಇಲ್ಲ ನನಸೋ ಅನುಸಿಬಿಟ್ಟಿತು.
ಮೊನ್ನೆ ಬಿರುಗಾಳಿಯಂತೆ ಹೋದವನು ಇಂದು ತಂಗಾಳಿಯಂತೆ ಬಂದು ನಿಂತಿದ್ದಾನಲ್ಲ ಅಂತ ತುಂಬಾ ಖುಷಿಯಾಯಿತು.
ಯಾರಿವನು ಎಂದು ತಲೆ ಕೆಡಿಸಿಕೊಂಡಿದ್ದಕ್ಕೆ ಅಂದು ಉತ್ತರ ಸಿಕ್ಕಿತ್ತು. ಎರಡು ಅಡಿಯ ಅಂತರದಲ್ಲಿ ಮುಖಾಮುಖಿಯಲ್ಲಿದ್ದೆವು. ಕಳೆದ ಭೇಟಿಯಲ್ಲಿ ಸ್ಪಷ್ಟವಾಗಿ ನೋಡದಿದ್ದ ಆ ನಿನ್ನ ಚಂದಿರನಂತ ವದನವನ್ನು ಅಂದು ಹಾಗೇ ದಿಟ್ಟಿಸುತ್ತ ನಿಂತುಬಿಟ್ಟಿದ್ದೆ. ಚಿಗುರು ಮೀಸೆ, ಸೊಂಪಾಗಿ ಬೆಳೆದ ಕುರುಚಲು ಗಡ್ಡ ಮತ್ತದೇ ಜೀನ್ಸ್ ಪ್ಯಾಂಟ್, ಅರ್ಧ ತೋಳಿನ ಫಾರ್ಮಲ್ ಚೆಕ್ಸ್ ಶರ್ಟ್ ನಿನ್ನ ಅಂದಕ್ಕೆ ಮೆರಗು ಕೊಟ್ಟಿತ್ತು.
“ಹಲೋ ಏನಾಯಿತು” ಎಂದಾಗಲೇ ನಾನು ನಿಧಾನಿಸಿ ಎಚ್ಚರವಾಗಿ ಸಾರಿ… ಎಸ್ ಪ್ಲೀಸ್ , ಮೈನೇಮ್ ಇಸ್ ಆಶಾ ಎಂದು ನನ್ನ ನಾಮಾಂಕಿತವನ್ನ ಪರಿಚಯ ಮಾಡಿಕೊಂಡೆ. ನಿನ್ನ ಹೆಸರು ಅಶೋಕ್ ಎಂದಾಗಲೇ ನಾನು ಎಚ್ಚೆತ್ತುಕೊಳ್ಳಬೇಕಿತ್ತು ನೀನು ನನಗೆ ಸಿಗುವವನಲ್ಲ ಎಂದು. ಏಕೆಂದರೆ ಹೃದಯ ಗೀತೆ ಸಿನಿಮಾದಲ್ಲಿ ಅಶೋಕ್ ಆಶಾ ಎಂಬ ಎರಡು ಕ್ಯಾರೆಕ್ಟರ್ ಗಳು ಕೊನೆಗೂ ಒಂದಾಗುವುದೇ ಇಲ್ಲ. ಅರುಣ ಎಂಬ ಇನ್ನೊಂದು ಕ್ಯಾರೆಕ್ಟರ್ ಅಶೋಕನಿಗೆ ಜೋಡಿಯಾಗುತ್ತದೆ. ಕಾಕತಾಳೀಯ ನೋಡು ಆ ಸಿನಿಮಾದಂತೆಯೇ ನಮ್ಮ ಜೀವನವು ಆಗಿ ಹೋಯಿತು. ನಾವು ಒಂದಾಗಲು ಸಾಧ್ಯವೇ ಆಗಲಿಲ್ಲ…..ನೀನು ಮಾತನಾಡುವ ಇಂಗ್ಲೀಷ್ ಎಷ್ಟು ಸ್ಪಷ್ಟವಾಗಿರುತ್ತಿತ್ತು ಎಂದರೆ ನುರಿತ ಇಂಗ್ಲೀಷ್ ಪ್ರೊಫೆಸರ್ ರೀತಿ ಇರುತ್ತಿತ್ತು.
ಆ ನಿನ್ನ ನಿರರ್ಗಳ ಮಾತನ್ನು ಕೇಳುತ್ತಲೇ ಇರಬೇಕು ಎನಿಸುತ್ತಿತ್ತು. ಬಹುಶಃ ಆ ಒಂದು ಮಾಯವೂ ಕೂಡ ನಿನ್ನಲ್ಲಿ ನಾ ಬಂಧಿಯಾಗಲು ಪ್ರೇರಣೆಯಾಗಿರಬಹುದು….. ಸರಿ..ನನ್ನ ಪರಿಚಯವನ್ನು ನಾನೇ ಮಾಡಿಕೊಂಡಾಗಲಾದರೂ ಸ್ವಲ್ಪ ನಗಬಾರದಿತ್ತೆ…? ಮುಖವನ್ನು ಊದಿಸಿಕೊಂಡವನಂತೇ ಇದ್ದೆ.” ಆಯ್ತಾ ನಾ ಹೊರಡಬೇಕು ” ಎಂದು ನನ್ನನ್ನು ನೋಯಿಸಿದಂತ್ತಿತ್ತು. ಏಕೆಂದರೆ ಇನ್ನೂ ಸ್ವಲ್ಪ ಸಮಯ ಇಲ್ಲೇ ಇರಲಿ ಎಂಬ ಹಂಬಲ. “ಆಯ್ತು ” ಎನ್ನುವಷ್ಟರಲ್ಲಿ ಹೊರಟೇ ಬಿಡೋದೆ…?. ” ಹೋಗು ಹೋಗು..ಎಲ್ಲೋಗ್ತೀಯ ಊರಿಗೆ ಬಂದೋಳು ನೀರಿಗೆ ಬರೋದಿಲ್ವ” ಎಂದು ಮನಸೊಳಗೇ ಹೇಳಿಕೊಂಡು ಕಾರ್ಯಮಗ್ನಳಾದೆ. ಅಂದಿನಿಂದ ದಿನಾ ಬರುವೆ ಹೋಗುವೆ. ನನಗಂತೂ ಧೈರ್ಯವಿಲ್ಲ ನಿನ್ನ ಜೊತೆ ಮಾತನಾಡಲು. ನೀ ಬಂದಾಗಲಂತೂ ಕೋಗಿಲೆಗೆ ಮಾವು ಚಿಗುರಿದಾಗ ಎಷ್ಟು ಸಂತೋಷ ಪಡುತ್ತದೋ, ಬೆಳದಿಂಗಳ ಕಂಡ ನವಿಲು ಹೇಗೆ ಗರಿಬಿಚ್ಚಿ ಕುಣಿಯುತ್ತದೋ ಹಾಗೆ ಆಗುತ್ತಿತ್ತು ನನಗೆ. ನಿನ್ನನ್ನು ನೋಡುವುದೇ ನನ್ನ ಭಾಗ್ಯವೆನಿಸುತ್ತಿತ್ತು.
ಅಂದು ದಸರಾ ಪೂಜೆ, ಹಬ್ಬಕ್ಕಿಂತ ಎರಡುದಿನ ಮುಂಚಿತವಾಗಿಯೇ ಮಾಡುತ್ತಿದ್ದರು. ನಾನು ರಿಸೆಪ್ಷನಿಸ್ಟ್ ಆಗಿದ್ದರಿಂದ ಎಲ್ಲರಂತೆ ನಾನೂ ತುಸು ಹೆಚ್ಚಾಗೇ ಮೇಕಪ್ ಮಾಡಿಕೊಂಡು ಒಂದೊಳ್ಳೆ ಮೆರೂನ್ ಬಣ್ಣದ ರೇಷಿಮೆ ಸೀರೆಗೆ ಕುಚ್ಚು ಹಾಕಿಸಿ ಅದಕ್ಕೊಪ್ಪುವ ಆಭರಣಗಳನ್ನು ಹಾಕಿಕೊಂಡು ಬಂದಿದ್ದೆ. ಅದಕ್ಕೆ ವಾರಗಳ ತಯಾರಿ ಇತ್ತು. ನೀನೋ ಹೇಗೇ ಇದ್ದರೂ ಸುಂದರವಾಗಿದ್ದೀಯ, ಆಕರ್ಷಿತನಾಗಿದ್ದೀಯ ನಿನ್ನ ಸೆಳೆಯಲು ಸ್ವಲ್ಪ ಪ್ರಯತ್ನ ಮಾಡೋಣ ಎಂದು. ಇಷ್ಟು ದಿವಸ ಜೀನ್ಸ್ ಹಾಕುತ್ತಿದ್ದವನು ಅಂದು ಮಾತ್ರ ನೀನು ಫಾರ್ಮಲ್ ಶರ್ಟ್ ಮತ್ತು ಪ್ಯಾಂಟ್ ಧರಿಸಿ, ಕಪ್ಪು ಬಣ್ಣದ ಶೂ, ಮೇಲೊಂದು ಬ್ಲೇಜರ್ ಹಾಕಿ, ಕಣ್ಣಿಗೆ ಗ್ಲಾಸ್ ಧರಿಸಿ ಒಳಗೆ ಎಂಟ್ರಿ ಕೊಟ್ಟೆ ನೋಡು…ಕಳೆದೋದೆ ನಾನು ಆ ನಿನ್ನ ನೋಟಕ್ಕೆ. ಅದ್ಯಾವ ತಾಯಿ ಹೆತ್ತ ಮಗನೋ ನೀನು ಎನಿಸಿದ್ದು ಸುಳ್ಳಲ್ಲ. ಅಷ್ಟು ಜನರ ಗುಂಪಲ್ಲಿ ನನಗೆ ಕಾಣುತ್ತಿದ್ದದ್ದು ನೀನೊಬ್ಬನೇ. ನಿನ್ನಂದನೇ ನನ್ನ ಕಣ್ಣು ತುಂಬಿಹೋಗಿತ್ತು. ಪೂಜೆ ಪುನಸ್ಕಾರಗಳು ನಡೆಯುತ್ತಿತ್ತು. ಆದರೆ ಅದ್ಯಾವ ಪರಿಜ್ಞಾನವೂ ನನಗಿರಲಿಲ್ಲ.
ಇವತ್ತಾದರೂ ನಿನ್ನ ಜೊತೆ ಮನಬಿಚ್ಚಿ ಮಾತನಾಡಲೇ ಬೇಕು ಎನಿಸಿಬಿಟ್ಟಿತ್ತು. ಪೂಜೆ ಏನೋ ಸರಾಗವಾಗಿ, ಸುಸೂತ್ರವಾಗಿ ಮುಗಿಯಿತು. ಆದರೆ ನನ್ನ ದೇವರ ಪೂಜೆನೇ ಇನ್ನೂ ಮಾಡಲಿಲ್ಲವಲ್ಲ , ವರವನ್ನು ಕೇಳಲೇ ಇಲ್ಲವಲ್ಲ ಎಂದುಕೊಳ್ಳುವಷ್ಟರಲ್ಲಿ ನನ್ನ ಗೆಳತಿಯೊಬ್ಬಳು ಒಂದು ಫೋಟೋ ತೆಗೆದುಕೊಳ್ಳೋಣವೆಂದು ಅಣಿಯಾಗುತ್ತಿದ್ದೆವು. ಆಕಸ್ಮಾತ್ ನಮ್ಮ ಬಳಿಗೆ ನೀನು ಬಂದೆ. ನನ್ನ ಗೆಳತಿಗೆ ನನ್ನ ಮನದಾಸೆ ಅರಿತಿತ್ತು ಎನಿಸುತ್ತದೆ.” ಸರ್ ನಿಮ್ಮ ಜೊತೆ ಒಂದು ಫೋಟೋ ತೆಗೆದುಕೊಳ್ಳುತ್ತೇವೆ ನಿಂತುಕೊಳ್ಳಿ” ಎಂದೇ ಬಿಟ್ಟಳು. ನೀನು ಅರೆ ಮನಸ್ಸಿನಿಂದಲೋ ಅಥವಾ ಒಳ್ಳೆ ಮನಸ್ಸಿನಿಂದಲೋ “ವೈ ನಾಟ್” ಎಂದೇ ಬಿಟ್ಟೆ. ಫೋಟೋ ತೆಗೆಯಬೇಕು ಸರಿ ತೆಗೆಯಲು ಯಾರಿರಲಿಲ್ಲ. ನನ್ನ ಗೆಳತಿನೇ ಮೊಬೈಲ್ ಎತ್ತಿಕೊಂಡು ನಮ್ಮಿಬ್ಬರನ್ನು ಜೊತೆಮಾಡಿ ನಿಲ್ಲಿಸಿಯೇ ಬಿಟ್ಟಳು. ರೋಗಿ ಬಯಸಿದ್ದು ವೈದ್ಯ ಹೇಳಿದ್ದು ಎರಡೂ ಒಂದೇ ಆಗಿಹೋಗಿತ್ತು.” ಸ್ಮೈಲ್” ಎಂದು ಮೂರು ನಾಲ್ಕು ಕ್ಲಿಕ್ಕಿಸಿ ಬಿಟ್ಟಳು. ಓಕೆ ಸರ್ ಆಯ್ತು ಎಂದು ಫೋಟೋ ನೋಡುತ್ತಲೇ “ಸರ್ ಡೋಂಟ್ ಮೈಂಡ್ ನಿಮ್ಮಿಬ್ಬರದು ಒಳ್ಳೆ ಜೋಡಿ ” ಎಂದು ನೇರವಾಗಿಯೇ ಹೇಳಿಬಿಡೋದೆ. ನೀನೋ ಹುಸಿನಗುತ ಅಲ್ಲಿಂದ ಜಾರಿಕೊಂಡೆ. ಆದರೆ ನಿಜವಾಗಿ ಜಾರಿದ್ದು ನಾನು. ನಿನ್ನ ಮೋಹದ ಆಳದೊಳಕ್ಕೆ ಜಾರಿ ಬಿದ್ದಿದ್ದವಳು ನಾನು.
ನನ್ನ ಹುಚ್ಚು ಎಷ್ಟಿತ್ತೆಂದರೆ ಅಂದು ತೆಗೆದಿದ್ದ ಜೋಡಿ ಫೋಟೋವನ್ನ ನನ್ನ ಮೊಬೈಲ್ ನ ಸ್ಕ್ರೀನ್ ಸೇವರ್ ಗೆ ಹಾಕಿಕೊಂಡಿದ್ದೆ. ಅದ ನೋಡಿದ ಅದೆಷ್ಟೋ ಗೆಳತಿಯರು ಯಾವಾಗ ಮದುವೆಯಾಯಿತು ಎಂದು ಛೇಡಿಸುವಂತೆ ಕಾಲೆಳೆಯುತ್ತಿದ್ದರು. ಮನಸ್ಸಿನೊಳಗೆ ಸಂತೋಷ ಭರಿತವಾಗಿದ್ದರೂ ಮೇಲು ನೋಟಕ್ಕೆ ಛೆ…ಹೋಗ್ರೇ ಎಂದು ಮೂದಲಿಸುವಂತೆ ಹೇಳಿಬಿಡುತ್ತಿದ್ದೆ. ಗೆಳತಿ ಅಂದು ಹೇಳಿದ ಮಾತು ನನ್ನ ಮನಸ್ಸನ್ನೇ ವಿಚಲಿತಗೊಳಿಸಿತ್ತು. ಅವಳು ಹೇಳಿದ ಮಾತು ನಿಜವಾದರೆ ಹೇಗಿರುತ್ತದೆ ಜೀವನ, ಬೆಸ್ಟ್ ಜೋಡಿ ಅವಾರ್ಡ್ ಸಿಗಬಹುದೇ ಎಂದೆಲ್ಲಾ ಯೋಚಿಸುತ್ತಲೇ ಇದ್ದೆ. ಒಂದು ಮುಖ್ಯವಾದ ವಿಷಯ ನಾನು ನಿನ್ನ ಮೂರ್ತಿಯನ್ನು ನನ್ನ ಹೃದಯದ ಗುಡಿಯಲ್ಲಿಟ್ಟು ಪೂಜೆ ಮಾಡುತ್ತಿದ್ದದ್ದು, ಮನಸಿನ ಭಾವನೆಗಳು ಇದಾವುದನ್ನೂ ನನ್ನ ಗೆಳತಿಯ ಜೊತೆಗೆ ಹಂಚಿಕೊಂಡವಳಲ್ಲ. ಸದ್ದಿಲ್ಲದೇ ಅರಳಿದ ನಿಶಬ್ಧದ ಪ್ರೀತಿ ನನ್ನದು.
ನಮ್ಮ ಪ್ರಥಮ ಖಾಸಗಿ ಭೇಟಿಯ ಬಗ್ಗೆ ಹೇಳಲೇಬೇಕು. ಅಂದು ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಆಫೀಸಿಗೆ ರಜಾ ಇತ್ತು. ನನ್ನ ಗೆಳತಿ ಲಾಲ್ ಬಾಗ್ ಗೆ ಹೋಗೋಣ ಎಂದು ಒತ್ತಾಯಿಸಿದಳು. ನನಗೂ ಬೆಂಗಳೂರು ಹೊಸದಾಗಿತ್ತು ಮತ್ತು ಅದೂ ಅಲ್ಲದೆ ಲಾಲ್ ಬಾಗ್ ಎಂದು ಹೆಸರು ಮಾತ್ರ ಕೇಳಿದ್ದೆ, ನೋಡಿರಲಿಲ್ಲ. ನಾನೂ ಆಸೆಯಿಂದ ಅವಳಿಗೆ ಹಸಿರು ನಿಶಾನೆ ತೋರಿಸಿಬಿಟ್ಟೆ. ಮನಸೊಳಗೆ ನೀನು ಜೊತೆಯಲ್ಲಿ ಬಂದಿದ್ದರೆ ಚನ್ನಾಗಿರುತ್ತಿತ್ತು ಎನಿಸಿದರೂ ಮತ್ತೊಂದು ಭಾವ ಅದೆಲ್ಲಾ ದೂರದ ಮಾತು ಎಂದು ನನಗೆ ನಿರಾಶೆಗೊಳುಸುತ್ತಿತ್ತು. ಅದೇ ಚಿಂತೆಯಲ್ಲಿ ಮುಳುಗಿ ಹೋಗಿದ್ದ ನನಗೆ ” ಇಳಿಯಮ್ಮ ಲಾಲ್ ಬಾಗ್ ಬಂತು” ಎಂದಾಗ ವಾಸ್ತವತೆಗೆ ಬಂದು ಪ್ರವೇಶ ದ್ವಾರದ ಕಡೆ ಹೊರಟೆವು. ನಮ್ಮೂರಿನ ಸಂತೆ, ಜಾತ್ರೆಗೆ ಹೋಗಿ ರೂಢಿಯಿದ್ದ ನನಗೆ ಅದೇ ದೊಡ್ಡದು ಎನಿಸಿತ್ತು. ಆದರೆ ಲಾಲ್ ಬಾಗ್ ನೋಡಿ ಇದು ಸಮುದ್ರ ಎನಿಸಿಬಿಟ್ಟಿತ್ತು. ಎಲ್ಲೆಲ್ಲಿ ಮೋಡಿದರೂ ಜನ ಕಾಲಿಡಲು ಜಾಗವೇ ಇರುತ್ತಿರಲಿಲ್ಲ. ಅಷ್ಟೊಂದು ಜನಸಾಗರವೇ ತುಂಬಿಹೋಗಿತ್ತು. ಊರಿನಲ್ಲಿ ಅಪ್ಪನ ಬೆರಳ ಹಿಡಿದು ಜಾತ್ರೆಗೆ ಹೋಗುತ್ತಿದ್ದವಳು, ನನಗೆ ಅದು ಬೇಕು ಇದು ಬೇಕು ಎಂದು ಕೇಳಿ ತೆಗೆಸಿಕೊಳ್ಳುತ್ತಿದ್ದೆ. ಇಂದು ಪ್ರಥಮವಾಗಿ ನಾನೇ ಏನು ಬೇಕಾದರೂ ತೆಗೆದುಕೊಳ್ಳುವ ನಿರ್ಧಾರವಿತ್ತು. ಆದರೆ ಅದೇಕೋ ಅಪ್ಪ ನನಗೆ ತುಂಬಾ ನೆನಪಾಗಿ ಹೋಗಿದ್ದ.
ಲಾಲ್ ಬಾಗ್ ಒಳಗಿನ ಕೆರೆಯಲ್ಲಿ ವಿಹಾರಕ್ಕೆಂದು ಜನ ತುಂಬಿದ್ದರು. ನನಗೂ ಒಮ್ಮೆ ಅದರಲ್ಲಿ ಕೂರಬೇಕು ಎನಿಸಿತ್ತು. ಗೆಳತಿಗೆ ಒತ್ತಾಯಿಸಿ ಹೋದೆವು. ಒಂದು ಬೋಟಿನಲ್ಲಿ ಇಬ್ಬರಿಗೇ ಅವಕಾಶವಿರುತ್ತಿತ್ತು. ಯಾರೋ ಅಪರಿಚಿತರು ಮೊದಲೇ ಕುಳಿತಿದ್ದರಿಂದ ಇನ್ನೊಬ್ಬರು ಕೂರಬಹುದಿತ್ತು. ನನ್ನ ಗೆಳತಿಯನ್ನೇ ಮೊದಲು ಕೂರಿಸಿ ಕಳುಹಿಸಿದೆ. ನಂತರ ನಾನು ಹೋಗೋಣವೆಂದು. ಅದೃಷ್ಟ ನೋಡು ನನ್ನ ಹಿಂದೆಯೇ ನೀನು ನಿಂತಿರೋದೇ..” ಹಾಯ್…ಏನು ಒಬ್ಬರೇ ಬಂದಿದ್ದೀರ..? ” ಎಂಬ ನಿನ್ನ ಪ್ರಶ್ನೆಗೆ ಕಣ್ಣಲ್ಲಿ ಅರಳಿದ ಆಸೆಯೊಂದಿಗೆ ನಗು ಮೊಗದಿಂದ ” ಇಲ್ಲ ನನ್ನ ಸ್ನೇಹಿತೆ ಜೊತೆ ಬಂದಿದ್ದೇನೆ. ಅವಳು ಬೋಟಿಂಗ್ ಹೋಗಿದ್ದಾಳೆ. ನಾವಿಬ್ಬರೂ ಜೊತೆ ಹೋಗೋಣ ” ಎಂದು ನಾನೇ ನಿನಗೆ ಆಹ್ವಾನವಿಟ್ಟೆ. ಅದೇನೋ ಅಂದು ನೀನೂ ಒಳ್ಳೆಯ ಮೂಡಿನಲ್ಲಿದ್ದೆ ಅನಿಸುತ್ತೆ ಹೋಗೋಣವೆಂದುಬಿಟ್ಟೆ. ನನ್ನ ಗಳತಿ ಬಂದ ತಕ್ಷಣ ನಾವಿಬ್ಬರೇ ಕುಳಿತು ಹೊರಟೆವು.
ಅಂದು ನನ್ನ ಜೀವನದ, ಪ್ರೇಮದ ಮೊದಲ ಹೆಜ್ಜೆಯಾಗಿತ್ತು. ಒಂದು ಹುಡುಗನ ಜೊತೆ ಏಕಾಂಗಿ ಪ್ರಯಾಣ ಅದಾಗಿತ್ತು. ” ನನಗೆ ನೀರನ್ನು ಕಂಡರೆ ಭಯ. ನಿಮ್ಮನ್ನು ಹಿಡಿದುಕೊಳ್ಳಬಹುದುದೇ ..? ” ಎಂದು ಕೇಳಿದಾಗ ಓಕೆ ಅಂದು ಬಿಟ್ಟಿದ್ದೆ. ನನ್ನ ಖುಷಿಯ ಕೇಳಬೆಕೇ ನಿನ್ನ ತೋಳ ಒಳಗೆ ನನ್ನ ಕೈಗಳನು ತೂರಿಸಿ ಬಂಧಿಮಾಡಿಬಿಟ್ಟೆ. ಪುರುಷನ ಪ್ರಥಮ ಸ್ಪರ್ಶಕ್ಕೆ ನನ್ನ ಹೆಣ್ತನದ ಆಸೆಗಳು ಗರಿಗೆದರಿ ಕುಣಿಯಲಾರಂಭಿಸಿದವು.ಮೈಯೆಲ್ಲಾ ನಡುಗುವಂತಾಗಿ ನಾಚಿಕೆ ಕೇಕೆ ಹಾಕುತ್ತಿತ್ತು. ತೋಳ ಬಂಧನವನ್ನು ಮೆಲ್ಲನೆ ಎಳೆದುಕೊಳ್ಳೋಣ ಎನಿಸಿತ್ತು. ಆದರೆ ಬಯಸದೆ ಬಂದ ಭಾಗ್ಯವನ್ನು ಬಿಡಬಾರದು ಎಂದು ತೀರ್ಮಾನಿಸಿದ್ದೆ. ನೀನು ನೋಡಲೆಂದೇ ಒಮ್ಮೊಮ್ಮೆ ನನ್ನ ಮೊಬೈಲನ್ನು ತೆಗೆದು ನಮ್ಮಿಬ್ಬರ ಜೋಡಿ ಫೋಟೋವನ್ನ ಕಾಣುವಂತೆ ಇಡುತ್ತಿದ್ದೆ. ಆದರೆ ನೀನು ಮಾತ್ರ ಏನು ಗೊತ್ತೇ ಇಲ್ಲವೇನೋ ಎಂಬಂತೆ ನಟಿಸುತ್ತಿದ್ದೆ. ಇಬ್ಬರೂ ಜಿದ್ದಿಗೆ ಬಿದ್ದವರಂತೆ ಮೌನವಾಗಿದ್ದೆವು. ತುಂಬಿದ ಯೌವ್ವನದ ರಸಭರಿತ ಹೆಣ್ಣೊಂದು ಬಳಿ ಇದೆ, ತೋಳ ತೆಕ್ಕೆಯಲಿ ಬಂಧನವಾಗಿದ್ದಾಳೆ ಏನಾದರೂ ಮಾತನಾಡೋಣ ಎನಿಸಲೇ ಇಲ್ಲ ನಿನಗೆ. ಆ ಕಡೆ ಈ ಕಡೆ ಪ್ರಕೃತಿಯನ್ನೇ ದಿಟ್ಟಿಸುತ್ತಿದ್ದೆ. ನಾನು ಹೆಣ್ಣು ದುಡುಕಬಾರದು ಎಂದು ಎಷ್ಟೇ ಪ್ರಯತ್ನ ಪಟ್ಟರೂ ಕೊನೆಗೆ ನಾನೇ ಮೌನ ಮುರಿದು ” ಯಾಕೆ ಮೌನವಾಗಿದ್ದೀರ …,? ಏನಾದರೂ ಮಾತನಾಡಿ…ಸುಮ್ಮನೆ ಕೂರಲು ಬೇಸರವಾಗುವುದಿಲ್ಲವೇ…? ಎಂದು ನಾನೇ ಮೌನ ಮುರಿದು ಕೇಳಿಯೇಬಿಟ್ಟೆ. ” ಹಾಗೇನಿಲ್ಲಾ ನೀವೇ ಮಾತನಾಡಿ. ನಾನು ಹೆಚ್ಚಿಗೆ ಮಾತನಾಡಿ ಅಭ್ಯಾಸವಿಲ್ಲ” ಇದು ನಿನ್ನ ಉತ್ತರವಾಗಿತ್ತು. ವಿಧಿಯಿಲ್ಲದೆ ನನ್ನ ಮನದಾಳದ ಮಾತನ್ನ ನಾಚಿಕೆಯಿಂದ ತಲೆತಗ್ಗಿಸಿ “ನನಗೆ ನೀವಂದ್ರೆ ಇಷ್ಟ, ಯಾವಾಗಲೂ ನಿಮ್ಮ ಜೊತೆ ಹೀಗೆ ಇರಬೇಕು ಎನಿಸುತ್ತದೆ ನನ್ನ ಈ ಪ್ರೇಮ ನಿವೇದನೆಯನ್ನ ಒಪ್ಪಿಕೊಳ್ಳುವಿರಾ..?” ಎಂದು ಒಂದೇ ಸಮನೆ ಒಪ್ಪಿಸಿಬಿಟ್ಟೆ. ” ದಯವಿಟ್ಟು ಕ್ಷಮಿಸಿ ಸದ್ಯಕ್ಕೆ ನಾನು ಏನನ್ನೂ ಹೇಳಲಾರೆ.
ಸ್ವಲ್ಪ ದಿನಗಳ ಕಾಲಾವಕಾಶ ಬೇಕು ಎಂದುಬಿಟ್ಟೆ. ಆ ಹೊತ್ತಿನಲ್ಲಿ ನಿನ್ನ ನೀರಸವಾದ ಉತ್ತರಕ್ಕೆ ಬೇಸರವೇನು ತರಲಿಲ್ಲವಿದ್ದರೂ “ಪರವಾಗಿಲ್ಲ ಯೋಚಿಸಿ ಉತ್ತರಿಸಿ” ಎನ್ನುವಷ್ಟರಲ್ಲಿ ಬೋಟಿನಿಂದ ಇಳಿಯಬೇಕಾದ ಅನಿವಾರ್ಯತೆ ಬಂತು. ಅಷ್ಟರಲ್ಕಾಗಲೇ ಸಮಯ ಎರಡನ್ನು ದಾಟಿತ್ತು. ನಿನಗೆ ಏನನಿಸಿತೋ ಏನೋ ಊಟ ಮಾಡೋಣವೆಂದು ಅಲ್ಲೇ ಇದ್ದ ಮೊಬೈಲ್ ಹೋಟೆಲ್ ಗೆ ನೀನೇ ಕರೆದೊಯ್ದೆ. ನನಗೆ ಒಂದು ಮೂಲೆಯಲ್ಲಿ ಒಪ್ಪಿಕೊಂಡರೆ ಎಷ್ಟು ಚನ್ನಾಗಿರಬಹುದು ಎಂದು ಮುಂದಿನದನ್ನು ಲೆಕ್ಕ ಹಾಕುತ್ತಿದ್ದೆ.ಊಟ ಮುಗಿಸಿ ಬೈ ಹೇಳಿ ಹೊರಟೇಬಿಟ್ಟೆ.
ಮನೆಗೆ ಬಂದವಳೇ ಸ್ವಲ್ಪ ಮೌನಿಯಾದೆ. ನಾನು ಏನಾದರೂ ತಪ್ಪು ಮಾಡಿದೆನೇ..? ಹಾಗೆ ಹೇಳಬಾರದಿತ್ತೇ..? ನನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಅವರು..? ಎಂಬೆಲ್ಲಾ ಪ್ರಶ್ನೆಗಳು ಕಾಡಲಾರಂಭಿಸಿದವು. ಇಷ್ಟಪಟ್ಟಿದ್ದು ಸಿಗಬೇಕಂದ್ರೆ ರಿಸ್ಕ್ ತೆಗೆದುಕೊಂಡರೂ ಪರವಾಗಿಲ್ಲ ಎಂದು ನಾನೇ ಸಮಾಧಾನ ಪಟ್ಟುಕೊಂಡೆ. ನನ್ನ ಮೌನದ ವಾತಾವರಣವನ್ನು ಗಮನಿಸಿದ ನನ್ನ ಗೆಳತಿ “ಲಾಲ್ ಬಾಗ್ ಗೆ ಹೋಗಿ ಬಂದಾಗಿನಿಂದ ನಿನ್ನಲ್ಲೇನೋ ಬದಲಾವಣೆ ಕಾಣಿಸುತ್ತಾ ಇದೆ ಏನಾಯಿತು..? ” ಎಂಬ ಅನುಮಾನದ ಪ್ರಶ್ನೆ ಕೇಳಲಾರಂಭಿಸಿದಳು.ಏನೋ ಸಬೂಬು ಹೇಳಿ ಮರೆಸಿಬಿಟ್ಟಿದ್ದೆ.
ಡಿಸೆಂಬರ್ 30 ನೇ ತಾರೀಖು ನೀನು ಎಂದಿನಂತೆ ಸ್ಮಾರ್ಟ್ ಆಗಿ ನಗುಮುಖದೊಂದಿಗೆ ನನ್ನ ಬಳಿ ಬಂದು ನಿಂತೆ. ಆ ರೀತಿಯ ನಗುವನ್ನು ನಾನು ಅಲ್ಲಿಯವರೆಗೂ ನೋಡಿಯೇ ಇರಲಿಲ್ಲ. ಹುಬ್ಬಿನ ಸನ್ನೆಯಲ್ಲೇ ಏನು ವಿಶೇಷ ಎಂಬಂತೆ ನಟಿಸಿದೆ. ” ನಾಳೆ ನಿಮಗೊಂದು ಸರ್ ಪ್ರೈಜ್ ನೀಡುತ್ತೇನೆ ಗೆಟ್ ರೆಡಿ ಟು ಗೊ ಬ್ರಿಗೇಡ್ ರೋಡ್ ಟು ಸೆಲೆಬ್ರೇಟ್ ನ್ಯೂ ಇಯರ್” ಎಂದು ಹೊರಟುಬಿಟ್ಟೆ. ನಾನು ತಲೆ ಕೆಡಿಸಿಕೊಂಡು ಯೋಚಿಸುತ್ತಾ ಕುಳಿತೆ. ಆಮೇಲೆ ಗೊತ್ತಾಯಿತು ನಾಳಿದ್ದು ನ್ಯೂ ಇಯರ್ ಇರುವುದರಿಂದ ಕರೆಯುತ್ತಿದ್ದಾರೆಂದು. ಆದರೆ ಸರ್ ಪ್ರೈಜ್ ಏನು ಎಂಬುದರೆ ಬಗ್ಗೆ ಕುತೂಹಲ ಹೆಚ್ಚಾಯಿತು. ಅದೇ ಗುಂಗಿನಲ್ಲಿ ರಾತ್ರಿ ಸರಿಯಾಗಿ ನಿದ್ರೆನೇ ಬಾರಲಿಲ್ಲ. ಮಾರನೆಯ ದಿನ ಸಂತೋಷದಿಂದ ಆಫೀಸಿಗೆ ಬೇಗ ಹೊರಟು ಬಂದೆ. ಎಲ್ಲಾ ಕೆಲಸಗಳನ್ನು ಬೇಗ ಮುಗಿಸಿ ಸಂಜೆ ಐದಕ್ಕೆ ನೀನೇ ಬಂದು ನನ್ನ ಕರೆದುಕೊಂಡು ಹೋದೆ. ಅಲ್ಲೊಂದು ಗೊಂದಲ ಎರಡೂ ಕಡೆ ಕೂರಬೇಕೆ, ಒಂದು ಕಡೆ ಕೂರಬೇಕೆಂದು. ಕೊನೆಗೆ ನೀನೇ ಎರಡು ಕಡೆ ಕೂರಲು ತಿಳಿಸಿದೆ.
ಅದು ಎರಡನೆ ಬಾರಿ ನಿನ್ನ ಜೊತೆ ಹೊರಟಿದ್ದು. ರಸ್ತೆಯಲ್ಲಿ ಹೋಗುವಾಗ ಅದೆಷ್ಟೋ ಪ್ರೇಮಿಗಳನ್ನ ಬೈಕಲ್ಲಿ ಹೋಗುವುದನ್ನ ನೋಡಿದ್ದೆ. ಹಿಂದಿನ ಸೀಟಿನಲ್ಲಿ ಕುಳಿತ ಹುಡುಗಿ ಅವಳ ಪ್ರಿಯತಮನನ್ನು ಹಿಂದಿನಿಂದ ಬಾಚಿ ತಬ್ಬಿ ಹಿಡಿದಿರುವುದನ್ನೂ ನೋಡಿದ್ದೆ. ಹಾಗೆ ನೋಡಿದಾಗ ನಾನೂ ಹೀಗೆ ಹೋಗುವುದು ಯಾವಾಗ ಎನಿಸಿದ್ದು ಸುಳ್ಳಲ್ಲ. ಆ ಆಸೆ ಈಗ ಈಡೇರುತ್ತದೆ ಎಂದುಕೊಳ್ಳುವಾಗಲೇ ಧೈರ್ಯಮಾಡಿ ನಿನ್ನೆಗಲ ಮೇಲೆ ಕೈ ಇಟ್ಟೇಬಿಟ್ಟೆ. ನೀನು ಮರುಮಾತನಾಡದೆ ನಿನ್ನಷ್ಷಕ್ಕೆ ಬೈಕ್ ಓಡಿಸುತ್ತಿದ್ದೆ.
ಬ್ರಿಗೇಡ್ ರೋಡ್ ತುಂಬ ಜನಜಂಗುಳಿ. ಎಲ್ಲಿ ನೋಡಿದರೂ ಹೊಸ ವರ್ಷದ ಆಚರಣೆಗೆಂದು ಬಂದ ಜನರು. ಅದರಲ್ಲಿ ಪ್ರೇಮಿಗಳೇ ಹೆಚ್ಚು. ಅದು ನನಗೆ ಹೊಸತು ಇದರ ಯಾವ ಗಂಧ ಗಾಳಿಯೂ ಗೊತ್ತಿರಲಿಲ್ಲ. ಅಲ್ಲಿ ನಿನ್ನ ಕೈಬೆರಳನ್ನೇ ಹಿಡಿದುಕೊಂಡು ಪುಟ್ಟ ಮಗುವಿನಂತೆ ನಿನ್ನ ಹಿಂದೆಯೇ ಬರುತ್ತಿದ್ದೆ. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಗಳೆಲ್ಲವನ್ನು ಒಮ್ಮೆ ಸುತ್ತು ಹಾಕಿ ಬರುವಷ್ಟರಲ್ಲಿ ರಾತ್ರಿ ಹನ್ನೊಂದರ ಸಮಯ. ಜಗಮಗಿಸುವ ಬಣ್ಣದ ಲೈಟುಗಳು, ಕುಣಿಯಲೆಂದೇ ಹುಚ್ಚೆಬ್ಬಿಸುವಂಥ ಹಾಡುಗಳು ಗುಯ್ ಗುಡುತ್ತಿದ್ದವು. ಹನ್ನೆರಡು ಗಂಟೆ ಆಗುತ್ತಿದ್ದಂತೇ ಎಲ್ಲರೂ ಹರ್ಷೋದ್ಘಾರದಿಂದ ” ಹ್ಯಾಪಿ ನ್ಯೂ ಇಯರ್ ” ಎಂದು ಕೂಗಲಾರಂಭಿಸಿದರು. ಆದರೆ ನೀನು ಮಾತ್ರ ನನ್ನ ಕೈಹಿಡಿದು ಮುಂಗೈಯಿಗೆ ಮುತ್ತಿಟ್ಡು ” ಐ ಲವ್ ಯು ” ಎಂದುಬಿಟ್ಟೆ. ನನಗೆ ಆ ಕ್ಷಣದ ಸಂತೋಷವನ್ನು ಹೇಳಿಕೊಳ್ಳಲಾಗುತ್ತಿರಲಿಲ್ಲ. ಮೌನಿಯಾದೆ, ಕಣ್ಣಲ್ಲಿ ಪನ್ನೀರು ಬಂತು. ಇವತ್ತಿಗೆ ನನ್ನ ಬಹುದಿನದ ಕನಸು ಈಡೇರಿತು ಎಂದು ಮನದೊಳಗೆ ಹರ್ಷಿತಗೊಂಡೆ.
ಅಂದಿನಿಂದ ನನ್ನ ಹೃದಯದ ಅರಮನೆಗೆ ನೀನೇ ಅಧಿಪತಿಯಾದೆ. ನಾನಿನ್ನ ದಾಸಿಯಾದೆ. ನನ್ನ ಇಷ್ಟ ಕಷ್ಟ ಎಲ್ಲವನ್ನೂ ಕೇಳುತ್ತಿದ್ದೆ. ನನ್ನನ್ನು ಸಂತೋಷಗೊಳುಸುವುದೇ ನಿನ್ನ ಕಾಯಕವಾಗಿ ಹೋಗಿತ್ತು. ನಿನ್ನ ಮಾತಿಗೆ , ಪ್ರೀತಿಗೆ ಸಂಪೂರ್ಣ ಶರಣಾಗಿ ಹೋಗಿದ್ದೆ. ಇಷ್ಟೆಲ್ಲಾ ನಡೆದರೂ ಒಮ್ಮೆಯೂ ನೀನು ಸಂಯಮ ಮೀರಲಿಲ್ಲ. ಅಸಭ್ಯವಾಗಿ ವರ್ತಿಸಲಿಲ್ಲ. ನಿನ್ನ ಆ ಗುಣನೇ ಇರಬೇಕು ನಾನಿಂದು ಇಷ್ಟು ಹೊಗಳಲು. ಒಮ್ಮೆ ನನ್ನಪ್ಪನಿಂದ ಕರೆ ಬಂತು ಊರಿಗೆ ಬೇಗನೆ ಬರಬೇಕೆಂದು. ಏನೋ ಗಾಢವಾದ ವಿಷಯವಿರಬೇಕೆಂದು ನಿನಗೂ ಹೇಳದೆ ಹೊರಟು ಬಿಟ್ಟೆ. ಆಮೇಲೆ ತಿಳಿಯಿತು ನನ್ನ ಮದುವೆಯ ಸಲುವಾಗಿ ಎಂದು. ನನ್ನಪ್ಪನ ಆಸೆ, ಕನಸಿನ ಮುಂದೆ ನನ್ನ ಪ್ರೀತಿ ಚಿಕ್ಕದೆನಿಸಿತು. ಮರು ಮಾತನಾಡದೆ ಒಪ್ಪಿಕೊಂಡೆ. ಆದರೆ ನಿನ್ನ ಜೊತೆ ಕಳೆದ ಆ ಒಂದೊಂದು ಕ್ಷಣಕ್ಕೆ, ಅನುಭವಕ್ಕೆ ಏನೆಂದು ಹೆಸರಿಟ್ಟು ಕರೆಯಲಿ. ಹೌದು ಈ ನೆನಪುಗಳೇ ಹಾಗೆ ಬೇಡವೆಂದರೂ ಅಕ್ಷಿ ಪಟಲದ ಮುಂದೆ ಬಂದು ಹಳೆಯ ಪಾತ್ರಗಳು ನಟಿಸುತ್ತಾ ಹೋಗುತ್ತವೆ. ಮತ್ತೆ ಕಾಣದಾಗುತ್ತವೆ.
ಮತ್ತೊಮ್ಮೆ ನಿನ್ನನ್ನು ಹೃದಯದ ರಾಜ ಎನ್ನುತ ಮುಗಿಸುತ್ತಿರುವೆ. ನೀ ಎಲ್ಲೇ ಇದ್ದರೂ ಸುಖವಾಗಿರೆಂದು ಆಶಿಸುತ್ತೇನೆ.
ಇಂತಿ ನಿನ್ನ ಪ್ರೇಮದಾಸಿ
–ಮಹದೇವ್ ಬಿಳುಗಲಿ
9611339024
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಕಿಚನ್ ವಕ್ತ್

- ಸಂಘಮಿತ್ರೆ ನಾಗರಘಟ್ಟ
ಎದ್ದ ತಕ್ಷಣ
ಎದ್ದೋ ಬಿದ್ದೋ ಎಂದು
ಫ್ರೆಶ್ ಆಗಲು ಬಾತ್ ರೂಂ
ನತ್ತ ಹೋಗುವುದೇ ತಡ
ಅಲ್ಲಿನ ಪುಟ್ಟ ಕನ್ನಡಿಯಲ್ಲಿ
ಹಿಡಿ ಮಾತ್ರದ ನನ್ನ ಮುಖ
ಥೇಟ್ ಆಟದ ರೋಬೋಟ್
ನಂತೆಯೇ ಕಾಣುತ್ತಿತ್ತು
ಒಳಗಿನಿಂದ ಕದ ತೆಗೆದು
ಆಚೆ ಹೆಜ್ಜೆಯಿಡುವ ಹೊತ್ತಿಗಾಗಲೇ
ಕಿಚನ್ ನಲ್ಲಿ ಆರ್ಡರ್ ಸಿದ್ಧ
ಬಿಸಿ ನೀರು ಒಬ್ಬರಿಗಾದರೆ
ಸ್ಟ್ರಾಂಗ್ ಕಾಫಿ ಇನ್ನೊಬ್ಬರಿಗೆ
ಅದನ್ನು ಕೊಡುವ ಗ್ಲಾಸ್
ಗಾಜಿನದೋ ಸ್ಟೀಲ್ ನದೋ
ಎಂಬ ಗೊಂದಲದಲ್ಲೇ
ಸ್ಟವ್ ಮೇಲಿನ ಹಾಲು
ಉಕ್ಕಿ ತನ್ನ ಹಿತ ಶತ್ರು
ಗ್ಯಾಸ್ ಟ್ಯುಬ್ ನತ್ತ ಹರಿಯುತ್ತಿತ್ತು
ಅದನ್ನು ಉಜ್ಜಿ ಕ್ಲೀನ್ ಮಾಡಿ
ಸಿಂಕ್ ನತ್ತ ನೋಡುತ್ತಿದ್ದಂತೆ
ಎಲ್ಲಾ ಪಾತ್ರೆ ಸೌಟು ಬಾಣಲೆಯಲ್ಲಿ
ತೇಲುತ್ತಿದ್ದ ಅನ್ನದ ಅಗುಳು
ಇನ್ನು ಅರೆಬರೆ ಖಾಲಿ ಆಗಿದ್ದ
ಹೊಟ್ಟೆ ಒಳಗಿನ ಕಲ್ಮಶದಂತಿತ್ತು
ರಾತ್ರಿ ,ಹಗಲು ಮಾಡುವ
ತಿಂಡಿ -ಕೆಲಸಗಳ ಚಿಂತೆಯಲ್ಲೇ
ನಿದ್ದೆ ಹೀರಿಕೊಂಡು ಮುಖ
ಹುಳಿ ಹಿಂಡಿದಂತಾಗಿತ್ತು….
ಇನ್ನೇನು ಎಲ್ಲಾ ಕೆಲಸ ಮುಗಿಸಿ
ಸೋಫಾ ದಲ್ಲಿ ಕುಳಿತು
ಸುದ್ದಿ ಫೀಡ್ ನೋಡುತ್ತಿದ್ದೆ
ಅಕ್ಕಿ ರಾಗಿಯ ಬೆಲೆ ಪಟ್ಟಿ ಏರಿತ್ತು
ಯಾಕೋ ಈಗಲೂ ದಾಸರಿರಬೇಕಿತ್ತು
ಸಮ ತೂಕ ಮಾಡಿ ಎರಡನ್ನೂ ಅಳೆದು
ನಮ್ಮವರ ಹೊಟ್ಟೆಯನ್ನೂ ತುಂಬಿಸಬೇಕೆನಿಸಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ರೇಖೆಗಳು

- ಡಾ.ಪುಷ್ಪಲತ ಸಿ ಭದ್ರಾವತಿ
ಗಡಿ ದೇಶಗಳೇನೊ ಹಂಚಿಕೊಂಡಿರಿ
ಆದರೆ,
ಸೂರ್ಯ ಚಂದ್ರರ ಗತಿಯೇನು
ಉಸಿರಾಡುವ ಗಾಳಿಯು ಒಂದಿರುವಾಗ
ಪ್ರಾಣವಾಯುವಿಗೆ ಬಂಧನದಲ್ಲಿರಿಸಲಾದಿತೆ
ಹರಿಯುವ ನದಿಗಳಿಗೆ ನಾಮಕರಣವೇನೋ ಮಾಡಿದಿರಿ
ಆದರೆ,
ಜರಿಗಳು, ಹಳ್ಳಕೊಳ್ಳಗಳು ಮಾಡಿದಾದರೂ ಏನು
ಪೂಜಾರಿ ಕೊಟ್ಟಿದ್ದು ತೀರ್ಥವೆ
ಆಬೆಜಂಜಂ, ಹಾಲಿ ವಾಟರ್ ಎಲ್ಲವೂ ಜಲ
ಫಾದರ್,ಪೂಜಾರಿ,ಮೌಲ್ವಿ
ಎಲ್ಲರೂ ಕುಡಿದದ್ದು ನೀರು
ಕೊನೆಗೂ ಅದರ ಮೂಲರೂಪ ಬದಲಾಗಲಿಲ್ಲ
ಮನುಷ್ಯ ,ಪ್ರಾಣಿ,ಮರಗಿಡಗಳ
ತಳಿಗಳನ್ನು ಬೇರ್ಪಡಿಸುವವನು ಮೂರ್ಖನೇ ಇರಬೇಕು .
ದೇಹದಲ್ಲಿರುವ ನರಮಂಡಲವನೊಮ್ಮೆ ಬೇರ್ಪಡಿಸಿ
ಬದುಕಲಾದಿತೆ
ಏನು?
ಕ್ರಿಸ್ತನೇನಾದರು ಬಂದು ಮತಾಂತರ ಮಾಡಿದನೇ
ಅಲ್ಲಾನೇನಾದರು ಬಂದು ರಾಮಮಂದಿರ ಕೆಡವಿದನೇ
ಶಿವನೇನಾದರು ಬಂದು ಮಸೀದಿಯನ್ನು ಹೊಡೆದುರುಳಿಸಿದನೇ..!?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು..!

- ಪ್ರೀತಿ.ಟಿ.ಎಸ್, ದಾವಣಗೆರೆ
ಬೇಂದ್ರೆಯವರು “ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು, ಕಳೆದ ದುಃಖಗಳಲ್ಲಿ ನೆನೆದಂತೆಯೆ” ಎಂದು ತಮ್ಮ ಸಖೀ ಗೀತದಲ್ಲಿ ಹಾಡುತ್ತಾರೆ. ಆದರೆ ಈ ಹೊಸ ವರ್ಷದಲ್ಲಿ ಕಹಿದಿನಗಳ ನೆನಪೇ ಬೇಡ, ಸಿಹಿ ಕಹಿ ಕನಸುಗಳನ್ನು ಕಂಡಂತಹ ಎಳೆತನದ, ಕೆಳೆತನದ ದಿನಗಳ ನೆನಪೇ ಸ್ಥಿರವಾಗಿರಲಿ; ಕಾಲನ ಹೊಡೆತಕ್ಕೆ ಆ ಕನಸುಗಳ ನೆನಪು ಮರೆಯಾಗದಿರಲಿ.
ಹೊಸ ವರ್ಷದಲ್ಲಿ ಇದೆಂತ ಬರಿತ್ತಿದ್ದಾರೆ ಅಂತೀರ! ನಿಮಗಿಂದು ಬರೀ ಹೊಸ ವರುಷ. ಆದರೆ ನನಗೋ ನನ್ನ ಜೀವನ ಪಾವನವಾಗಿಸುವ ದಿನ. ಯಾಕೇ ಗೊತ್ತಾ? ನನ್ನ ಸಾಹಿತ್ಯ ಕ್ಷೇತ್ರಕ್ಕೆ ಅನುಕರಿಣಿಸಿ, ಸಮಾಜ ಕ್ಷೇತ್ರದಲ್ಲಿ ನನ್ನನ್ನ ತೊಡಗುವಂತೆ ಮಾಡಿ, ಕಿಂಚಿತಾದರೂ ನನ್ನಲ್ಲಿ ದಯೆ, ಕರುಣೆ, ವಿಶ್ವಾಸ, ಪ್ರೀತಿ ಹೀಗೆ ಅನೇಕ ಭಾವಗಳನ್ನ ಚಿಕ್ಕಂದಿನಿಂದ ತಿದ್ದಿ ತೀಡಿದ ನನ್ನ ತಂದೆ ತಾಯಿಯ ಜನುಮ ದಿನ.
ಹೊಸ ವರುಷಕ್ಕಿಂತ ಇವರೀರ್ವರ ಜನುಮವೇ ಅದೇನೋ ಸಂಭ್ರಮ. ಅದೇನೋ ಸಡಗರ. ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿಟ್ಟು ಹೊಸ ಜೀವನದ ಪಯಣಕ್ಕೆ ಅದೇನೋ ಕಾತುರದಿಂದ ಗಡಿಬಿಡಿಯಾಗುವಾಗ ಅಪ್ಪಾಜಿ ಬಂದು ಹಾದಿಯಲ್ಲಿ ಕಲ್ಲು- ಮುಳ್ಳುಗಳಿರಬಹುದು ಎಚ್ಚರ! ಆದರೆ ಅದನ್ನು ಎದುರಿಸಿ ಮುನ್ನಡೆದಾಗಲೇ ಸುಖ ಸಾಗರ ಎಂಬ ಅವರ ಆಶಯದ ನುಡಿ ಮಾತುಗಳು ಬಹುಶಃ ಇಂದು ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ.
ಮಾಮೂಲೀ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ತಂದೆ-ತಾಯಿಯ ಪೋಸ್ಟ್ ಹಾಕಿ ವಿಶ್ ಮಾಡಿದ್ರೆ ಮುಗಿತಿತ್ತು. ಆದರೆ ಈ ಭಾರಿ, ನನಗಾಗುತ್ತಿರುವುದು ವಿಚಿತ್ರ ಅನುಭವ. ಸಾವಿರ ನೋವು, ದುಃಖ-ದುಮ್ಮಾನಗಳು ಎದೆಯಲ್ಲಿದ್ರು ನಮ್ಮ ಮುಂದೆ ತೋರಿಸದೆ ಮನಸ್ಸಲ್ಲೇ ಇಟ್ಟು ಕೊರಗುತ್ತ ಒಳ್ಳೆಯ ವಿದ್ಯಾಭ್ಯಾಸ ನೀಡಿ, ಸಂಸ್ಕೃತಿ, ನಾಡು-ನುಡಿ, ಸಂಸ್ಕಾರವನ್ನು ಭಿತ್ತುತ್ತ ಬಂದಿದ್ದಾರೆ. ಸುಖದಲ್ಲೆ ಬೆಳೆದ ನಮಗೆ ಕಹಿ ಜೀವನದ ಅನುಭವ ಕಡಿಮೆಯೇ!
ಅಪ್ಪಜಿ-ಅಮ್ಮನ ಆಸೆಯಂತೆ ಮಾಸ್ಟರ್ ಆಫ್ ಜರ್ನಲಿಸಂ ಅಲ್ಲಿ ಎರಡು ಬಂಗಾರದ ಪದಕ ಗೆದ್ದು ಅವರಿಗೆ ನೀಡಿ ಆಸೆ ತೀರಿಸಿದ ನಂತರವಷ್ಟೇ ತಿಳಿದ್ದದ್ದು. ಜೀವನದ ಆಳವೆಷ್ಟು ಎಂದು? ಅಪ್ಪಾಜಿ ಅಮ್ಮನನ್ನು ಬಿಟ್ಟು ಕೆಲಸ ಹುಡುಕುತ್ತ ಬೆಂಗಳೂರಿಗೆ ಬಂದಾಗ ನಿಜವಾದ ರೋಧನೆ, ನೋವು, ಒಂಟಿತನ, ಕಷ್ಟ, ಉಪವಾಸ, ಅನ್ನದ ಬೆಲೆ ಹೀಗೆ ಬದುಕಿನ ಅಷ್ಟು ಪಾಠಗಳು ತಿಳಿಯುತ್ತ ಹೋದದ್ದು. ಎಂತಹ ಒದ್ದಾಟದಲ್ಲೂ ನನ್ನ ತಂದೆ-ತಾಯಿಗೆ ತಿಳಿಸದೆ ನಗ್ತ ನಗ್ತ ಮಾತಾಡಿದ್ರು ಕ್ಷಣಮಾತ್ರದಲ್ಲಿ ಅಪ್ಪಜಿ ಮಾತ್ರ ನನ್ನ ನಗುವಿನ ಹಿಂದಿನ ದುಃಖನ ಗುರುತಿಸಿ, ಮತ್ತಷ್ಟು ಬಲ ತುಂಬುತ್ತ ಬಂದವರು.
ಜನವರಿ 1 ಬಂತೆಂದರೆ ಅಪ್ಪಾಜಿ ಅಮ್ಮನ ಹುಟ್ಟು ಹಬ್ಬ. ಈ ಭಾರಿ ನಾನು ನಿಮಗೆನೂ ಮಾಡಿದೇನು? ಕಡೆಪಕ್ಷ ಅವರ ಮುಂದೆ ಹೋಗಿ ನಿಂತು ಶುಭಾಶಯ ತಿಳಿಸಿ ಬಂದು ಬಿಡಲೇ ಎಂದರೆ ಕೈಯಲ್ಲಿ ಕಾಸಿಲ್ಲ. ಇಲ್ಲಿಂದಲೇ ಶುಭಾಶಯ ತಿಳಿಸಿ ಸುಮ್ಮನಾಗಿ ಬಿಡಲೇ ಎಂದರೆ ಮನಸ್ಸು ಒಪ್ಪುತ್ತಿಲ್ಲ. ಇದೀಗ ದುಡಿತ್ತಿದ್ದಿನಾದರು ಕಣ್ಣ ಮುಂದಿರುವ ಅಷ್ಟು ಹೊಣೆಗಾರಿಕೆಗಳು ನನ್ನನ್ನ ಕಟ್ಟಿಹಾಕ್ತಿದೆ. ಈ ಗೊಂದಲದ ನಡುವೇ ಈ ಲೇಖನ ನಿಮಗಾಗಿ.
ಅಪ್ಪಜಿ-ಅಮ್ಮ ಈ ಭಾರಿ ಹೊಸ ವರುಷದ ಹೊಸ ಆಚರಣೆ ಸಾಧ್ಯವಾಗದಿದ್ದರು ಬೇಸರಿಸದಿರಿ. ಯಾಕೆಂದರೆ ನಿಮಗಾಗಿ ನೀವು ಕಂಡ ಹೊಸ ಕನಸಿನ ಗೂಡೊಂದನ್ನ ಹೊತ್ತು ತರುತ್ತಿದ್ದೇನೆ. ತಂದ ದಿನವೇ ನಿಮ್ಮ ಈ ಜನುಮೋತ್ಸವವನ್ನು ಆಚರಿಸ್ತೇನೆ. ಇದನ್ನ ನಿಮ್ಮೊಡನೇ ಹೇಳಬಹುದಿತ್ತಾದರು, ನನ್ನ ಸಹಪಯಣಿಗರೊಡನೆ ಹಂಚಿಕೊಂಡ ಈ ಕನಸುಗಳು ನಮ್ಮ ಬಾಳಿನ ಮುಂದಿನ ಪಯಣದ ಬುತ್ತಿಯಾಗುತ್ತದೆ ಎಂಬುದು ನನ್ನ ಭಾವನೆ.
ಇಂತಹ ಅದೆಷ್ಟೋ ಅನುಭವಗಳು ಮನೆ ಬಿಟ್ಟು, ತಂದೆ ತಾಯಿಯ ಆಶಯವನ್ನು ನೆನಸಾಗಿಸೋ ಸಾವಿರ ಕನಸುಗಳನ್ನು ಹೊತ್ತು ಬಂದ ಅದೆಷ್ಟೋ ಮನಸ್ಸುಗಳಿಗೆ ಆಗಿರುತ್ತೆ. ಇನ್ನು ಕೆಲವರಿಗೆ ಇಡೀ ವರ್ಷದ ಶ್ರಮದಾಯಕ ದುಡಿಮೆ ಬಳಿಕ ಮನಸ್ಸು ಸ್ವಲ್ಪ ವಿಶ್ರಾಂತಿಯನ್ನು, ಮನೋರಂಜನೆಯನ್ನು ಬಯಸುತ್ತದೆ. ಕುಟುಂಬದ ಬಂಧವನ್ನು ಗಟ್ಟಿಗೊಳಿಸಲು ಮತ್ತು ಪ್ರೀತಿ, ಅನುಬಂಧವನ್ನು ಬಿತ್ತಲು ಹೊಸವರ್ಷವೊಂದು ಸುವರ್ಣಾವಕಾಶ. ನಮ್ಮ ಎಲ್ಲ ಕೆಲಸಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ಕೊಟ್ಟು ರಿಲ್ಯಾಕ್ಸ್ ಮಾಡುವ ಮೂಲಕ ಸಂಭ್ರಮ, ಸಡಗರಕ್ಕೆ ಅಣಿಯಾಗೋಣ. ನಿಮ್ಮೆಲ್ಲರ ಆಸೆ, ನಿರೀಕ್ಷೆಗಳು ನೆರವೇರಲಿ ಎಂದು ಮನಸ್ಸಲ್ಲೆ ಪ್ರಾರ್ಥಿಸುತ್ತಾ, ಮುಸ್ಸಂಜೆ ಕವಿಯುತ್ತಿರುವಾಗಲೂ ಮರುದಿನದ ಬೆಳಗು ಆಶಾಕಿರಣವನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
