ರಾಜಕೀಯ
ಸ್ವಾತಂತ್ರ್ಯದ ಮೇಲೆ ಪ್ರಹಾರಗಳು- ಈ ಆಗಸ್ಟ್ 15 ರಂದುಮೋದಿ-ಷಾ ಜೋಡಿಯ ಕಾಶ್ಮೀರ ಅತ್ಯಾಚಾರದ ಸಂದೇಶ

- ಮೋದಿ ಸರಕಾರ ಭಾರತದೊಂದಿಗೆ “ಜಮ್ಮು ಮತ್ತು ಕಾಶ್ಮೀರವನ್ನು ಸಮಗ್ರೀಕರಿಸಿರುವುದು” ತಮ್ಮ ಮಹಾಸಾಧನೆ ಎಂದು ಡಂಗುರ ಹೊಡೆಯುತ್ತಿದ್ದರೆ, ಅತ್ತ ಕಾಶ್ಮೀರದ ಜನತೆ, ಭಾರತದ ಇತರರೊಂದಿಗೆ ಹೋಲಿಸಿದರೆ ಸ್ವಾತಂತ್ರ್ಯದ ಅರ್ಥವಾದರೂ ಏನು ಎಂದು ಆಶ್ಚರ್ಯ ಪಡುವಂತಹ ವೈದೃಶ್ಯ ಕಣ್ಣಿಗೆ ರಾಚುತ್ತಿದೆ. ಸ್ವಾತಂತ್ರ್ಯ ಮತ್ತು ಗಣತಂತ್ರ ಸಂವಿಧಾನದೊಂದಿಗೆ ಬಂದಿರುವ ಸ್ವಾತಂತ್ರ್ಯಗಳು ಅಪಾಯದಲ್ಲಿವೆ. ಇದೀಗ ಮೋದಿ-ಷಾ ದ್ವಯರು ನಡೆಸಿರುವ ಕಾಶ್ಮೀರ ಅತ್ಯಾಚಾರ ನೀಡುತ್ತಿರುವ ಸಂದೇಶ. ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲಿನ ಈ ಕ್ರೂರ ಪ್ರಹಾರವನ್ನು ಉಪೇಕ್ಷಿಸಿದರೆ ಅದರಿಂದ ದೇಶದ ಇತರ ಭಾಗಗಳಿಗೂ ಕೇಡು ಸಂಭವಿಸುತ್ತದೆ. ಸರ್ವಾಧಿಕಾರಶಾಹಿ ಆಳ್ವಿಕೆ ಯಾರನ್ನೂ ಬಿಡುವುದಿಲ್ಲ. ಇಂತಹ ಒಂದು ಸನ್ನಿವೇಶದಲ್ಲಿ, ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಯನ್ನು, ಹೆಚ್ಚೆಚ್ಚು ಜನಗಳನ್ನು ಅಣಿನೆರೆಸುವ ಮೂಲಕ ಮತ್ತು ಐಕ್ಯ ಜನಾಂದೋಲನಗಳ ಮೂಲಕ ಸಾಧಿಸಬೇಕಾಗಿದೆ. ಆಗಸ್ಟ್ 15, ಎಲ್ಲ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಒಗ್ಗೂಡಿಸಿ ಈ ಸಾವು-ಬದುಕಿನ ಸಾಹಸಕಾರ್ಯವನ್ನು ಕೈಗೆತ್ತಿಕೊಳ್ಳುವ ದೃಢನಿರ್ಧಾರ ಮಾಡುವ ದಿನವಾಗಿದೆ.
ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಚಿಂದಿ ಮಾಡಿರುವ, ಬೃಹತ್ ಪ್ರಮಾಣದಲ್ಲಿ ಕಣಿವೆಯ ಜನಗಳಿಗೆ ಬೀಗ ಜಡಿದಿರುವ ಮಬ್ಬಿನಲ್ಲಿ ನಡೆಯುತ್ತಿದೆ. ಕೆಂಪುಕೋಟೆಯಲ್ಲಿ ಈ ಆಗಸ್ಟ್ 15ರಂದು ನರೇಂದ್ರ ಮೋದಿ ತ್ರಿವರ್ಣ ಧ್ವಜವನ್ನು ಆರೋಹಿಸುವಾಗ, ಅತ್ತ ಲಕ್ಷಾಂತರ ಕಾಶ್ಮೀರಿಗಳು ಸತತವಾಗಿ ಹನ್ನೊಂದನೇ ದಿನ ತಮ್ಮ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಸಂಚರಿಸುವ, ತಮಗೆ ಬೇಕಾದವರನ್ನು ಸಂಪರ್ಕಿಸುವ, ಬದುಕು ನಡೆಸಲು ಕೆಲಸ ಮಾಡುವ, ಶಾಲೆಗೆ ಹೋಗುವ, ಆರೋಗ್ಯಪಾಲನೆ ಮತ್ತು ಔಷಧಿಗಳನ್ನು ಪಡೆಯುವ ಅವರ ಹಕ್ಕನ್ನು ಕಳಚಿ ಹಾಕಲಾಗಿದೆ. ಇವೆಲ್ಲವೂ ಸ್ವತಂತ್ರ ಭಾರತದ ನಾಗರಿಕರಾಗಿ ಇರುವ ಮೂಲಭೂತ ಹಕ್ಕುಗಳು.
ನೂರಾರು ಕಾಶ್ಮೀರಿ ರಾಜಕಾರಣಿಗಳು ಮತ್ತು ಕಾರ್ಯಕರ್ತರುಗಳು ಜೈಲುಗಳಲ್ಲಿದ್ದಾರೆ ಅಥವ ಗುಪ್ತಸ್ಥಳಗಳಲ್ಲಿ ಸ್ಥಾನಬದ್ಧತೆಯಲ್ಲಿದ್ದಾರೆ. ಹಲವರನ್ನು ಹೊರಗೊಯ್ದು ಆಗ್ರಾ, ಬರೇಲಿ, ಲಕ್ನೌ ಮುಂತಾದೆಡೆಗಳಲ್ಲಿ ಜೈಲುಗಳಲ್ಲಿ ಇಡಲಾಗಿದೆ. ಅವರೆಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ, ಅವರ ಕುಟುಂಬದವರು, ಸಂಬಂಧಿಕರು ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲವಾಗಿದೆ. ಮೋದಿ ಸರಕಾರ ಭಾರತದೊಂದಿಗೆ “ಜಮ್ಮು ಮತ್ತು ಕಾಶ್ಮೀರವನ್ನು ಸಮಗ್ರೀಕರಿಸಿರುವುದು” ತಮ್ಮ ಮಹಾಸಾಧನೆ ಎಂದು ಡಂಗುರ ಹೊಡೆಯುತ್ತಿದ್ದರೆ, ಅತ್ತ ಕಾಶ್ಮೀರದ ಜನತೆ, ಭಾರತದ ಇತರರೊಂದಿಗೆ ಹೋಲಿಸಿದರೆ ಸ್ವಾತಂತ್ರ್ಯದ ಅರ್ಥವಾದರೂ ಏನು ಎಂದು ಆಶ್ಚರ್ಯ ಪಡುವಂತಹ ವೈದೃಶ್ಯ ಕಣ್ಣಿಗೆ ರಾಚುತ್ತಿದೆ.
ಕಾಶ್ಮೀರಿಗಳಿಗೆ ಎಂತಹ ಅವಮಾನ ಮಾಡಲಾಗಿದೆ ಎಂಬುದು ಅವರನ್ನು ರಾಜಕೀಯ ಹಕ್ಕುಗಳನ್ನು ಕಸಿದುಕೊಂಡಿರುವ ರೀತಿಯಲ್ಲಿ ವ್ಯಕ್ತವಾಗುತ್ತದೆ. ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶದ ಮಟ್ಟಕ್ಕೆ ಇಳಿಸಿದ ನಂತರ, ಹೊಸ ವಿಧಾನಸಭೆ ಪುದುಚೇರಿಯ ಮಾದರಿಯಲ್ಲಿ ಇರುತ್ತದೆ, ಉಪರಾಜ್ಯಪಾಲರೆಂಬವರು ಹೇಳಿದ್ದೇ ಆಳ್ವಿಕೆಯಾಗುತ್ತದೆ. ಈ ಮೊಟಕುಗೊಳಿಸಿದ ವಿಧಾನ ಸಭೆಯ ಸಂಯೋಜನೆ ಕೂಡ ಬದಲಾಗಲಿದೆ. ಜಮ್ಮ ಮತ್ತು ಕಾಶ್ಮೀರ ಮರುಸಂಘಟನೆಯ ಮಸೂದೆ ಮತಕ್ಷೇತ್ರಗಳ ಮರುವಿಂಗಡಣೆಗೆ ಅವಕಾಶ ಕಲ್ಪಿಸಿದೆ. ಇದನ್ನು ಚುನಾವಣಾ ಆಯೋಗ ಮಾಡುತ್ತದೆ.
ಹಿಂದಿನ ವಿಧಾನಸಭೆಯ ಬಲ ಜಮ್ಮು ಮತ್ತು ಕಾಶ್ಮೀರ ವಿಭಾಗಗಳಿಂದ 83ಆಗಿತ್ತು. ಅದನ್ನು90ಕ್ಕೆ ಏರಿಸಲಾಗುತ್ತದೆ. ಈ ಮರುವಿಂಗಡಣೆಯ ಕಸರತ್ತಿನಲ್ಲಿ ಜಮ್ಮು ಭಾಗದ ಸೀಟುಗಳ ಸಂಖ್ಯೆ ಏರಲಿದೆ. ಹಿಂದಿನ ವಿಧಾನಸಭೆಯಲ್ಲಿ ಅದು37 ಇತ್ತು. ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸೀಟುಗಳನ್ನು ಪತ್ರ್ಯೇಕಿಸಿದಾಗ, ಕಾಶ್ಮೀರ ಕಣಿವೆಗೆ ಉಳಿಯುವ ಸೀಟುಗಳ ಸಂಖ್ಯೆಯಲ್ಲಿ (ಇದುವರೆಗೆ 46) ಕಡಿತವಾಗುತ್ತದೆ. ಈ ಮೂಲಕ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತದ ಆಶ್ವಾಸನೆ ಸಿಗುವಂತಾಗುತ್ತದೆ. ಉಪರಾಜ್ಯಪಾಲರು ಇಬ್ಬರು ಮಹಿಳಾ ಸದಸ್ಯರನ್ನು ನೇಮಿಸಲು ಅವಕಾಶ ಇರುವುದು ಅದನ್ನು ಇನ್ನಷ್ಟು ಖಾತ್ರಿಗೊಳಿಸುತ್ತದೆ.
ಇನ್ನೊಂದು ಕುಟಿಲ ನಡೆಯೆಂದರೆ, ಕಾಶ್ಮೀರ ಕಣಿವೆಯಲ್ಲಿ ಜನಸಂಖ್ಯಾ ಸಂಯೋಜನೆಯಲ್ಲಿ ಒಂದು ಬದಲಾವಣೆ ತರುವುದು. ಆರ್ಥಿಕ ಅಭಿವೃದ್ಧಿ ಮತ್ತು ಹೂಡಿಕೆಯ ಹೆಸರಲ್ಲಿ, ಜಮ್ಮು ಮತ್ತು ಕಾಶ್ಮೀರದ ಹೊರಗೆ ಇರುವ ಜನಗಳು ಕಣಿವೆ ಪ್ರದೇಶಕ್ಕೆ ಬಂದು ಭೂಮಿ ಖರೀದಿಸಲು ಮತ್ತು ನೆಲೆಸಲು ಉತ್ತೇಜನೆ ನೀಡಲಾಗುವುದು. ಅದಾಗಲೇ 2016ರಲ್ಲಿ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮಾಜಿ ಯೋಧರನ್ನು ವಸತಿ ಕಾಲೊನಿಗಳಲ್ಲಿ ನೆಲೆಗೊಳಿಸುವ ಒಂದು ಪ್ರಸ್ತಾವ ಇತ್ತು. ಅದಕ್ಕೆ ಭೂಮಿ ನೀಡುವ ಮಾತೂ ಇತ್ತು. ಕಾಶ್ಮೀರದ ಜನಸಂಖ್ಯಾ ಸಂಯೋಜನೆಯನ್ನು ಬದಲಾಯಿಸುವುದು ಅಥವ ಕಾಶ್ಮೀರಿ ಜನಗಳ ಅಸ್ಮಿತೆಯನ್ನು ದುರ್ಬಲಗೊಳಿಸುವುದು ಇದರ ಗುರಿ.
ಬಹಳ ಕಾಲದಿಂದ ಕಾಶ್ಮೀರಿ ಜನಗಳ ನಾಗರಿಕ ಸ್ವಾತಂತ್ರ್ಯಗಳ ದಮನ ಮತ್ತು ಪ್ರಭುತ್ವದ ದಬ್ಬಾಳಿಕೆ ರೂಢಿಯಾಗಿ ಬಿಟ್ಟಿರುವ ದೇಶದ ಇತರ ಭಾಗಗಳ ಜನರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಸನ್ನಿವೇಶ ಹದಗೆಡುತ್ತಿರುವ ಸನ್ನಿವೇಶದ ಮತ್ತೊಂದು ಅಧ್ಯಾಯ ಮಾತ್ರ, ಅದನ್ನು ಕೇಂದ್ರ ಸರಕಾರ ದೃಢವಾಗಿ ನಿಭಾಯಿಸುತ್ತಿದೆ ಎಂದು ಕಾಣಬಹುದು.
ಆದರೆ ಹೀಗೆ ಭಾವಿಸುವುದು ಒಂದು ಪ್ರಮಾದವಾಗುತ್ತದೆ. ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲಿನ ಈ ಕ್ರೂರ ಪ್ರಹಾರವನ್ನು ಉಪೇಕ್ಷಿಸಿದರೆ ಅದರಿಂದ ದೇಶದ ಇತರ ಭಾಗಗಳಿಗೂ ಕೇಡು ಸಂಭವಿಸುತ್ತದೆ. ಸರ್ವಾಧಿಕಾರಶಾಹಿ ಆಳ್ವಿಕೆ ಯಾರನ್ನೂ ಬಿಡುವುದಿಲ್ಲ-ಭಿನ್ನ ಅಭಿಪ್ರಾಯ ಇರುವವರನ್ನು, ಪ್ರತಿಪಕ್ಷಗಳಿಲ್ಲಿ ಇರುವವರನ್ನು, ಮತ್ತು ತಮ್ಮ ಪ್ರಜಾಪ್ರಭುತ್ವ ಹಕ್ಕುಗಳನ್ನು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸುವ ಯಾರನ್ನೂ. ಸ್ವಾತಂತ್ರ್ಯ ಮತ್ತು ಗಣತಂತ್ರ ಸಂವಿಧಾನದೊಂದಿಗೆ ಬಂದಿರುವ ಸ್ವಾತಂತ್ರ್ಯಗಳು ಅಪಾಯದಲ್ಲಿವೆ. ಇದೀಗ ಮೊದಿ-ಷಾ ದ್ವಯರು ನಡೆಸಿರುವ ಕಾಶ್ಮೀರ ಅತ್ಯಾಚಾರ ನೀಡುತ್ತಿರುವ ಸಂದೇಶ.
ಸ್ವಾತಂತ್ರ್ಯ ದಿನದಂದು, ಕಳೆದ ಐದು ವರ್ಷಗಳ ಸರ್ವಾಧಿಕಾರಶಾಹಿ ಆಳ್ವಿಕೆ ಸಂವಿಧಾನದ ಅಡಿಯಲ್ಲಿರುವ ಎಲ್ಲ ಸಂಸ್ಥೆಗಳನ್ನು ಶಿಥಿಲಗೊಳಿಸುವ ದಾರಿಯಲ್ಲಿ ಸಾಗಿದೆ ಎಂಬುದನ್ನು ವೀಕ್ಷಿಸುವುದು ಕೂಡ ಉಚಿತವಾಗಿದೆ. ಇದರ ಒಂದು ಸಣ್ಣ ಉದಾಹರಣೆಯೆಂದರೆ, ಸುಪ್ರಿಂ ಕೋರ್ಟಿನ ಮೂವರು ನ್ಯಾಯಾಧೀಶರ ಪೀಠ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಸ್ವಾತಂತ್ರ್ಯಗಳ ಮತ್ತು ಮೂಲಭೂತ ಹಕ್ಕುಗಳ ವ್ಯಾಪಕ ಪ್ರಮಾಣದ ಉಲ್ಲಂಘನೆಗಳನ್ನು ನಿಲ್ಲಿಸಲು ಮಧ್ಯಪ್ರವೇಶಿಸಲು ನಿರಾಕರಿಸಿರುವುದು.
ಇಂತಹ ಒಂದು ಸನ್ನಿವೇಶದಲ್ಲಿ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಜೀವನಾಧಾರದ ಹಕ್ಕೂ ಸೇರಿದಂತೆ ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಯನ್ನು, ಹೆಚ್ಚೆಚ್ಚು ಜನಗಳನ್ನು ಅಣಿನೆರೆಸುವ ಮೂಲಕ ಮತ್ತು ಐಕ್ಯ ಜನಾಂದೋಲನಗಳ ಮೂಲಕ ಸಾಧಿಸಬೇಕಾಗಿದೆ. ಆಗಸ್ಟ್ 15, ಎಲ್ಲ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಒಗ್ಗೂಡಿಸಿ ಈ ಸಾವು-ಬದುಕಿನ ಸಾಹಸಕಾರ್ಯವನ್ನು ಕೈಗೆತ್ತಿಕೊಳುವ್ಳ ದೃಢನಿರ್ಧಾರ ಮಾಡುವ ದಿನವಾಗಿದೆ.
–ಪ್ರಕಾಶ ಕಾರಟ್
- ಕೃಪೆ : ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

ದಿನದ ಸುದ್ದಿ
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ : ಭವ್ಯ ನರಸಿಂಹಮೂರ್ತಿ

ಸುದ್ದಿದಿನ, ಬೆಂಗಳೂರು : ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಅವರ ತತ್ವ ಆದರ್ಶಗಳು ಹಾಗೂ ಯುವ ಜನತೆಗೆ ನೀಡಿರುವ ಸಂದೇಶಗಳನ್ನು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನತೆಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ರ್ಯಾಲಿ ಬೆಳಿಗ್ಗೆ 09-00 ಕ್ಕೆ ರಾಜಾಜಿನಗರ Entrance Bridge ಇಂದ ಪ್ರಾರಂಭವಾಗಿ ನವರಂಗ ಚಿತ್ರಮಂದಿರ – ಶಂಕರ್ ಮಠ – ಹಾವನೂರ್ ಸರ್ಕಲ್ – ಹೌಸಿಂಗ್ ಬೋರ್ಡ್ – ಕಾಮಾಕ್ಷಿಪಾಳ್ಯ ಬಸ್ ಸ್ಟಾಂಡ್ – ಹಾವನೂರ್ – ಅಕ್ಷಯ ಉಪಹಾರ – ಮೋದಿ ಹಾಸ್ಪಿಟಲ್ – ನವರಂಗ ಬ್ರಿಡ್ಜ್ – ಗಿರಿಯಾಸ್ ಸಿಗ್ನಲ್ – 6th ಬ್ಲಾಕ್ – ಕೊನೆಯದಾಗಿ 12 ಗಂಟೆಗೆ ಭಾಷ್ಯಮ್ ಸರ್ಕಲ್ ನಲ್ಲಿ ಕೊನೆಗೊಳ್ಳುತ್ತದೆ.
ದಾರಿಯಲ್ಲಿ 4 ಕಡೆ ಸ್ವಾಮಿ ವಿವೇಕಾನಂದರಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ. ಪೂಜೆಯ ನಂತರ ವಿವೇಕಾನಂದರ ತತ್ವ ಆದರ್ಶಗಳನ್ನೊಳಗೊಂಡ ಹತ್ತು ಸಾವಿರ ಪುಸ್ತಕಗಳನ್ನು ಕ್ಷೇತ್ರದಾದ್ಯಂತ ಉಚಿತವಾಗಿ ಹಂಚಲಾಗುವುದು ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
