ದಿನದ ಸುದ್ದಿ
ಸಹಾಯ ಹಸ್ತದ ನಿರೀಕ್ಷೆಯಲ್ಲಿ ಈ ಉತ್ಸಾಹಿ ದಿವ್ಯಾಂಗ ಯುವ ಪ್ರತಿಭೆ

- ಗಂಗಾಧರ ಬಿ ಎಲ್ ನಿಟ್ಟೂರ್
ಮನೆಯಲ್ಲಿ ಎಲ್ಲರ ಮುದ್ದಿನ ಕಣ್ಮಣಿಯಾಗಿದ್ದ ಆತ ಎಲ್ಲಾ ಮಕ್ಕಳಂತೆ ಉಂಡುಟ್ಟು, ಆಯಾಗಿ ಓಡಾಡಿಕೊಂಡಿದ್ದ. 3 – 4 ವರ್ಷದವನಿದ್ದಾಗ ಒಮ್ಮೆ ಕಾಡಿದ ಅತಿಸಾರ ಭೇದಿ ಮತ್ತು ಜ್ವರಕ್ಕೆಂದು ಕೊಡಿಸಿದ ಚಿಕಿತ್ಸೆ ಓವರ್ ಡೋಸ್ ಆಗಿ ಕಾಲಿನ ಸ್ವಾಧೀನ ಕಿತ್ತುಕೊಂಡಿದ್ದಲ್ಲದೆ ದೃಷ್ಟಿಯನ್ನೂ ಪ್ರತಿಶತಃ ಮಂದಗೊಳಿಸಿ ಮೂಲೆ ಹಿಡಿಸಿ ಬಿಟ್ಟಿತು. ಆದರೂ ಅವನೊಳಗಿನ ಅದಮ್ಯ ಉತ್ಸಾಹವನ್ನು ಮಾತ್ರ ಕಸಿದುಕೊಳ್ಳಲಾಗಲಿಲ್ಲ ಆ ದುರ್ವಿಧಿಗೆ. ಆತನ ಜೀವನೋತ್ಸಾಹ, ಪಾಸಿಟಿವ್ ಎನರ್ಜಿಯನ್ನು ಕಂಡ ಯಾರಿಗಾದರೂ ಖಂಡಿತ ಅಚ್ಚರಿಯಾಗುತ್ತದೆ.
ಹುಟ್ಟು ಅನಕ್ಷರಸ್ಥನಾದ ಆತನಿಗೆ ಹಾಡುವುದೆಂದರೆ ಪಂಚಪ್ರಾಣ. ಟಿವಿ, ಮೊಬೈಲ್ ನಲ್ಲಿ ಒಮ್ಮೆ ಕೇಳಿದ ಹಾಡನ್ನು ಸೀದಾ ಮಸ್ತಕಕ್ಕೇರಿಸಿಕೊಂಡು ಬಿಡುತ್ತಾನೆ. ಕವ್ವಾಲಿ, ಶರೀಫರ ತತ್ವಪದಗಳನ್ನು ಹಾಡುವುದೆಂದರೆ ಬಲು ಪ್ರೀತಿ. ಹಿಂದಿ ಮತ್ತು ಕನ್ನಡ ಸಿನಿಮಾ ಗೀತೆಗಳು ಸೇರಿದಂತೆ ನೂರಾರು ಹಾಡುಗಳ ಜತೆ ಪ್ರಸಿದ್ಧ ನಟರುಗಳ ಹಲವಾರು ಡೈಲಾಗ್ ಗಳು ಸಹ ಬಾಯಿಪಾಠವಾಗಿವೆ. ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡದಿದ್ದರೂ ಯಾವುದೇ ಗೀತೆಗಳಿಗೆ ಭಾವತುಂಬಿ ಹಾಡುವ ಕಲೆ ಆತನಿಗೆ ಒಲಿದಿದೆ.
ಇಂತಹ ವಿಶೇಷ ವಿಶಿಷ್ಟ ದಿವ್ಯಾಂಗ ಪ್ರತಿಭೆಯ ಹೆಸರು ಕೆ. ಮೊಹಮ್ಮದ್ ಬಾಷಾ. ದಾವಣಗೆರೆ ನಗರದ ನಿಟುವಳ್ಳಿ ಹೊಸ ಬಡಾವಣೆಯ 2ನೇ ಮೇನ್ 4 ನೇ ಕ್ರಾಸ್ ನಲ್ಲಿ ವಾಸ. ತಂದೆ ದಿವಂಗತ ಬಾಬು ಸಾಬ್, ತಾಯಿ ಎಂ. ಮಾಮಾಜಾನ್. ಬಡತನದ ಬೇಗೆಯಲ್ಲಿ ಬೇಯುತ್ತಿರುವ ಕುಟುಂಬದ ಭಾರವನ್ನು ಮೊಹಮ್ಮದ್ ನ ಅಣ್ಣನಾದ ವಲಿಬಾಷಾರ ಆಟೋ ರಿಕ್ಷಾ ಹೊತ್ತು ಸಾಗುತ್ತಿದೆ.
ನಿರ್ವಹಣೆಯ ತೊಂದರೆ ಹಿನ್ನೆಲೆಯಲ್ಲಿ ದಿವ್ಯಾಂಗನಾದರೂ ಕಲಿಕೆಯಲ್ಲಿ ಅಪಾರ ಶ್ರದ್ಧೆ ಮತ್ತು ಆಸಕ್ತಿ ಹೊಂದಿರುವ ಮೊಹಮ್ಮದ್ ನನ್ನು ಓದು – ಬರಹ ಅಥವಾ ಸಂಗೀತಭ್ಯಾಸಕ್ಕಾಗಿ ಯಾವುದಾದರೂ ಉಚಿತ ವಸತಿ ಶಾಲೆ ಅಥವಾ ಆಶ್ರಮಗಳಿಗಾದರೂ ಕಳಿಸಲು ಸಾಧ್ಯವಾಗಲಿಲ್ಲ ಎಂಬುದು ಮಾಮಾಜಾನ್ ರ ನೋವಿನ ನುಡಿ.
ಪ್ರಸ್ತುತ 27 ರ ಪ್ರಾಯದ ಈ ಉತ್ಸಾಹಿ ಯುವಕನ ಪ್ರತಿಭೆ ಬೆಳಕಿಗೆ ಬರಲು ಸದ್ಯ ವೇದಿಕೆಯನ್ನು ಕಲ್ಪಿಸಿಕೊಡುವವರು, ಆರ್ಥಿಕವಾಗಿ ಸಹಕಾರ ನೀಡುವ ಔದಾರ್ಯ ಉಳ್ಳವರು ಮುಂದೆ ಬಂದು ಗುರುತಿಸಬೇಕಿದೆ. ಈತನ ಸಂಗೀತ ಕಲಿಕೆಯನ್ನು ಕ್ರಮಬದ್ಧ ಮತ್ತು ಶಾಸ್ತ್ರೀಯಗೊಳಿಸಲು ಬಿಡುವಿನ ವೇಳೆಯಲ್ಲಿ ಆತನ ಮನೆಗೆ ಹೋಗಿ ಉಚಿತವಾಗಿ ಸಂಗೀತ ಹೇಳಿಕೊಡುವ ಸಹೃದಯತೆಯನ್ನು ಸಂಗೀತ ಶಿಕ್ಷಕರು ತೋರಬೇಕಿದೆ .
ಸದ್ಯದ ಪರಿಸ್ಥಿತಿಯಲ್ಲಿ ಹೃದಯ ಶ್ರೀಮಂತಿಕೆಯಿಂದ ಯಾರಾದರೂ ತಾವಾಗಿಯೇ ಒಂದಷ್ಟು ಸಹಾಯ ಹಸ್ತ ಚಾಚಿದರೆ ಆತನ ಕುಟುಂಬದ ಆರ್ಥಿಕ ಬವಣೆ ನೀಗಲು ಸಹಾಯವಾಗುವ ಜೊತೆ ಸಂಗೀತ ಕ್ಷೇತ್ರಕ್ಕೆ ಈ ಪ್ರತಿಭೆಯಿಂದ ಸಾಕಷ್ಟು ಕೊಡುಗೆ ಲಭಿಸುವುದರಲ್ಲಿಯೂ ಸಂದೇಹವಿಲ್ಲ.
ದಯವಿಟ್ಟು ಈ ನಂಬರ್ ಗೆ ಸಂಪರ್ಕಿಸಿ ಸಹಾಯ ಹಸ್ತ ಚಾಚಿ : ಮೊಹಮ್ಮದ್ ಬಾಷಾ ನ ಮೊ.ಸಂ : 8088644148

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

-
ನಿತ್ಯ ಭವಿಷ್ಯ6 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ4 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ8 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ7 hours ago
ನಟ ಮನದೀಪ್ ರಾಯ್ ನಿಧನ