ದಿನದ ಸುದ್ದಿ
ಇಸ್ರೇಲಿ ಬೇಹುಗಾರಿಕೆ ಸಾಧನವನ್ನು ಬಳಸಿದವರು ಯಾರು?

ವಾಟ್ಸ್ ಆಪ್ ಸರಕಾರಕ್ಕೆ ನೀಡಿರುವ ತನ್ನ ಖಾತೆಗಳ ಹ್ಯಾಕ್ ಆಗಿರುವ ಹೆಸರುಗಳಲ್ಲಿ ಭೀಮ-ಕೋರೆಗಾಂವ್ ವಿಷಯದಲ್ಲಿ ಆಪಾದಿತರಾಗಿರುವವರು ಮತ್ತು ಅವರ ರಕ್ಷಣೆಗೆ ನಿಂತಿರುವ ವಕೀಲರಲ್ಲಿ ಹಲವರ ಹೆಸರುಗಳು ಇವೆ. ಆದ್ದರಿಂದ ಇವೆರಡರ ನಡುವಿನ ಸಂಬಂಧ ಸಾಕಷ್ಟು ಸ್ಪಷ್ಟವಾಗಿದೆ.. ಇವೆಲ್ಲವೂ ಸರಕಾರವೇ ತನ್ನನ್ನು ಟೀಕಿಸುವವರ ಖಾತೆಗಳನ್ನು ಸೀಳಲು ಇಸ್ರೇಲೀ ಬೇಹುಗಾರಿಕೆ ಸಾಧನವನ್ನು ಬಳಸುವಲ್ಲಿ ಶಾಮೀಲಾಗಿದೆ ಎಂಬ ಸಂದೇಹಗಳನ್ನು ದೃಢಪಡಿಸುತ್ತವೆ. ಈ ಇಡೀ ಕೊಳಕು ವ್ಯವಹಾರದ ಆಮೂಲಾಗ್ರ ತನಿಖೆ ನಡೆಯಬೇಕು.
- ಪೀಪಲ್ಸ್ ಡೆಮಾಕ್ರಸಿ ಸಂಪಾದಕೀಯ, ನವಂಬರ್ 10
ವಿವಿಧ ಕಾರ್ಯಕರ್ತರು, ಪತ್ರಕರ್ತರು ಮತ್ತು ರಾಜಕಾರಣಿಗಳ ವಾಟ್ಸ್ ಆಪ್ ಖಾತೆಗಳನ್ನು ಇಸ್ರೇಲಿ ಕಂಪನಿ ಪೆಗಸಸ್ ನ ಬೇಹುಗಾರಿಕೆ ಸಾಧನವನ್ನು ಬಳಸಿ ಸೀಳಿರುವ(ಹ್ಯಾಕ್ ಮಾಡಿರುವ) ಸುದ್ದಿ ಕಳವಳಕಾರಿ ಮತ್ತು ಖಂಡನೀಯ. ಇದು ಹೇಗಾಯಿತು, ಖಾಸಗಿತ್ವದ ಉಲ್ಲಂಘನೆ ಹೇಗೆ ಸಂಭವಿಸಿತು, ಇದಕ್ಕೆ ಯಾರು ಹೊಣೆ ಎಂಬುದಕ್ಕೆ ವಿವರಣೆ ನೀಡಬೇಕಾಗಿದೆ. ಸರಕಾರ ಯಾವುದೇ ವಿವರಣೆಯನ್ನು ಕೊಟ್ಟಿಲ್ಲವಾದರೂ, ಇದರಲ್ಲಿ, ಈ ಬೇಹುಗಾರಿಕೆಯಲ್ಲಿ ಸರಕಾರದ ಶಾಮೀಲಿನತ್ತ ಬೊಟ್ಟು ಮಾಡುವ ಹೆಚ್ಚಿನ ತಥ್ಯಗಳು ಸಾರ್ವಜನಿಕಗೊಂಡಿವೆ.
ಸರಕಾರ, ಈ ಸುದ್ದಿ ಹೊರಬಂದಾಗ, ಹಲವಾರು ಭಾರತೀಯರ ಖಾಸಗಿತ್ವದ ಉಲ್ಲಂಘನೆಯ ಬಗ್ಗೆ ವಾಟ್ಸ್ ಆಪ್ ಯಾವುದೇ ಸರಕಾರೀ ಸಂಸ್ಥೆಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಹೇಳಿತು. ಆದರೆ ತಾವು ದಸ್ತಾವೇಜುಗಳೊಂದಿಗೆ ಈ ಮಾಹಿತಿಯನ್ನು ನೀಡಿ, ವಾಸ್ತವವಾಗಿ, ಖಾಸಗಿತ್ವದ ಉಲ್ಲಂಘನೆಯಾಗಬಹುದು ಎಂದು ಭಾರತ ಸರಕಾರವನ್ನು ಎಚ್ಚರಿಸಿದ್ದೆವು ಎಂದು ವಾಟ್ಸ್ ಆಪ್ ನವರು ಪ್ರತ್ಯುತ್ತರ ನೀಡಿದರು. ಮೇ ತಿಂಗಳಲ್ಲಿ ಮತ್ತು ನಂತರ ಮತ್ತೆ ಸಪ್ಟಂಬರಿನಲ್ಲಿ ಈ ಎಚ್ಚರಿಕೆಯನ್ನು ನೀಡಿರುವುದಾಗಿ ಅವರು ಹೇಳಿದ್ದಾರೆ. ಸರಕಾರದ ಹೇಳಿಕೆಗೆ ಉತ್ತರವಾಗಿ ವಾಟ್ಸ್ ಆಪ್ ಮೇ ತಿಂಗಳಲ್ಲಿ ಕಳಿಸಿದ ಟಿಪ್ಪಣಿ ಮತ್ತು ಸಪ್ಟಂಬರ್ನಲ್ಲಿ ಕಳಿಸಿದ ಪತ್ರವನ್ನು ಲಗತ್ತಿಸಿತ್ತು.
ನಂತರ, ಸರಕಾರ ಇದನ್ನು ದೃಢ ಪಡಿಸಿತು, 121 ಭಾರತೀಯರನ್ನು ಪೆಗಸಸ್ ಬೇಹುಗಾರಿಕೆ ಸಾಧನ ಗುರಿ ಮಾಡಿರುವ ಮಾಹಿತಿಯನ್ನು ಸಪ್ಟಂಬರ್ ನಲ್ಲಿ ಪಡೆದಿರುವುದಾಗಿ ಹೇಳಿತು, ಆದರೆ ಮಾಹಿತಿ ತಂತ್ರಜ್ಞಾನ ಮಂತ್ರಾಲಯದ ಪ್ರಕಾರ ಈ ಪತ್ರ ಬಹಳ ಅಸ್ಪಷ್ಟವಾಗಿತ್ತು.
ವಾಟ್ಸ್ ಆಪ್ ಸರಕಾರದೊಂದಿಗೆ ಹಂಚಿಕೊಂಡ ಮಾಹಿತಿಯ ವಿವರಗಳನ್ನು ನೀಡಿರುವುದು, ಈ ಬೇಹುಗಾರಿಕೆಗೆ ಗುರಿಯಾದ ಜನಗಳ ಹೆಸರುಗಳೆಲ್ಲ ಸರಕಾರ ಮತ್ತು ಅದರ ಧೋರಣೆಗಳ ಟೀಕಾಕಾರರಾಗಿರುವ ಸುಪರಿಚಿತ ಕಾರ್ಯಕರ್ತರು ಮತ್ತು ಪತ್ರಕರ್ತರದ್ದಾಗಿರುವುದು, ಈ ಬಗ್ಗೆ ತಮಗೆ ಗೊತ್ತಿರಲಿಲ್ಲ ಎಂದು ನಟಿಸುವ ಸರಕಾರದ ಅಸಮರ್ಪಕ ಮತ್ತು ಕುಂಟು ನೆವವೊಡ್ಡುವ ಪ್ರಯತ್ನಗಳು-ಇವೆಲ್ಲವೂ ಸರಕಾರವೇ ತನ್ನನ್ನು ಟೀಕಿಸುವವರ ಖಾತೆಗಳನ್ನು ಸೀಳಲು ಇಸ್ರೇಲೀ ಬೇಹುಗಾರಿಕೆ ಸಾಧನವನ್ನು ಬಳಸುವಲ್ಲಿ ಶಾಮೀಲಾಗಿದೆ ಎಂಬ ಸಂದೇಹಗಳನ್ನು ದೃಢಪಡಿಸುತ್ತವೆ. ವಾಟ್ಸ್ ಆಪ್ ಸರಕಾರಕ್ಕೆ ನೀಡಿರುವ ಹೆಸರುಗಳಲ್ಲಿ ಭೀಮ-ಕೋರೆಗಾಂವ್ ವಿಷಯದಲ್ಲಿ ಆಪಾದಿತರಾಗಿರುವವರು ಮತ್ತು ಅವರ ರಕ್ಷಣೆಗೆ ನಿಂತಿರುವ ವಕೀಲರಲ್ಲಿ ಹಲವರ ಹೆಸರುಗಳು ಇವೆ. ಆದ್ದರಿಂದ ಇವೆರಡರ ನಡುವಿನ ಸಂಬಂಧ ಸಾಕಷ್ಟು ಸ್ಪಷ್ಟವಾಗಿದೆ.
ತನ್ನ ಬೇಹುಗಾರಿಕೆ ತಂತ್ರಜ್ಞಾನವನ್ನು ಸರಕಾರಗಳಿಗೆ ಮತ್ತು ಸರಕಾರೀ ಏಜೆನ್ಸಿಗಳಿಗೆ ಮಾತ್ರ ನೀಡುವುದು ಎಂದು ಅದನ್ನು ಉತ್ಪಾದಿಸಿದ ಎನ್ ಎಸ್ ಒ ಕಂಪನಿ ಹೇಳಿಕೆ ನೀಡಿದೆ. ಈ ಬೇಹುಗಾರಿಕೆ ತಂತ್ರಜ್ಞಾನ ವಿಪರೀತ ವೆಚ್ಚದಾಯಕವಾಗಿದ್ದು ಯಾವುದೇ ಖಾಸಗಿ ಸಂಸ್ಥೆಗೆ ಇದರ ವೆಚ್ಚ ಭರಿಸುವುದು ಸಾಧ್ಯವಿಲ್ಲ ಎಂಬುದನ್ನೂ ಇಲ್ಲಿ ಗಮನಿಸಬಹುದು.
ಈ ಇಡೀ ಕೊಳಕು ವ್ಯವಹಾರದ ಆಮೂಲಾಗ್ರ ತನಿಖೆ ನಡೆಯಬೇಕು. ಸರಕಾರೀ ಏಜೆನ್ಸಿಗಳು ಯಾವುದಾದರೂ ಈ ಕಾನೂನುಬಾಹಿರ ಕೃತ್ಯಕ್ಕೆ ಕಾರಣರಾಗಿದ್ದರೆ, ಅದಕ್ಕೆ ಹೊಣೆಗಾರರಾದವರನ್ನು ಶಿಕ್ಷಿಸಬೇಕು. ಈ ಪ್ರಕರಣ ಸಾಮಾನ್ಯ ನಾಗರಿಕರ ಹಕ್ಕುಗಳು ಮತ್ತು ಖಾಸಗಿತ್ವವನ್ನು ಕಾಪಾಡಿಕೊಳುವ್ಳ ಒಂದು ಸಮಗ್ರ ಮಾಹಿತಿ ರಕ್ಷಣಾ ಕಾಯ್ದೆಯನ್ನು ತರಬೇಕಾದ ತುರ್ತನ್ನು ಎತ್ತಿತೋರಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
