ದಿನದ ಸುದ್ದಿ
ಪೌರತ್ವ ಕಾಯಿದೆ ಮತ್ತು ಎನ್ ಆರ್ ಸಿ : ನೀವೆಲ್ಲಿದ್ದೀರಿ ನೋಡಿಕೊಳ್ಳಿ

ಪಾಕ್, ಬಾಂಗ್ಲಾ, ಅಫ್ಘಾನ್ ಗಳಿಂದ ಡಿಸೆಂಬರ್ 31, 2014ರೊಳಗೆ ಅಕ್ರಮವಾಗಿ ಭಾರತದೊಳಕ್ಕೆ ನುಸುಳಿದ ಮುಸ್ಲಿಮೇತರರು ಕೇವಲ 5 ವರ್ಷ ಇಲ್ಲಿದ್ದರೆ ಅವರೆಲ್ಲರನ್ನು ಭಾರತೀಯ ಪೌರರನ್ನಾಗಿ ಮಾಡಲಾಗುತ್ತದೆ. ಇದು ಮೋದಿ-ಶಾ ಅವರ ಪೌರತ್ವ ಕಾಯಿದೆಯ ಕೊಡುಗೆ.
ಆದರೆ ಸಾವಿರಾರು ವರ್ಷಗಳಿಂದ ಇಲ್ಲೇ ಸಕ್ರಮವಾಗಿ ವಾಸಿಸುತ್ತಾ, ಈ ಮೋದಿ-ಶಾ ಅವರನ್ನು ಅಧಿಕಾರಕ್ಕೇರಿಸಲು ಓಟನ್ನೂ ಕೊಟ್ಟ ~135 ಕೋಟಿ ಭಾರತೀಯರು ಇಲ್ಲಿನ ಪೌರರು ಹೌದೋ ಅಲ್ಲವೋ ಎಂಬುದನ್ನು ಸದ್ಯದಲ್ಲೇ ಎನ್ ಆರ್ ಸಿ ಪ್ರಕ್ರಿಯೆ ಆರಂಭಿಸಿ ಮೋದಿ-ಶಾ ತಿಳಿಸಲಿದ್ದಾರೆ; ಆ ಮೊದಲ ಪಟ್ಟಿಯನ್ನು ಪ್ರಕಟಿಸುವವರೆಗೆ ಎಲ್ಲ ಭಾರತೀಯರೂ ತಾವು ಭಾರತೀಯರು ಹೌದೋ ಅಲ್ಲವೋ ಎಂದು ತಿಳಿಯಲು ಉಸಿರು ಬಿಗಿ ಹಿಡಿದು ಕಾಯುತ್ತಿರಬೇಕು; ಆ ಪಟ್ಟಿಯಲ್ಲಿ ತನ್ನ ಹೆಸರು ಖಂಡಿತಕ್ಕೂ ಇರಲಿದೆ ಎಂದು ಯಾವ ಭಾರತೀಯನಾದರೂ (ಹಿಂದೂ ಇರಲಿ, ಬೇರೆ ಯಾವುದೇ ಮತದವನಾದರೂ ಇರಲಿ) ಈಗಲೇ ಹೇಳಲು ಸಾಧ್ಯವೇ?
ಅಂದರೆ ಮುಸ್ಲಿಮೇತರ ಅಕ್ರಮ ವಿದೇಶಿ ನುಸುಳುಕೋರರಿಗೆ ಭಾರತೀಯ ಪೌರತ್ವ ಖಚಿತವಾಯಿತು, ~135 ಕೋಟಿ ಭಾರತೀಯರು ತಮ್ಮ ಪೌರತ್ವದ ಸ್ಥಾನಮಾನವನ್ನು ಅರಿಯಲು ಎನ್ಆರ್ ಸಿ ಮೊದಲ ಪಟ್ಟಿಯು ಪ್ರಕಟವಾಗುವವರೆಗೆ ಕಾಯಬೇಕು.
ಯಾರದಾದರೂ ಭಾರತೀಯರ ಹೆಸರುಗಳು ಇನ್ನಷ್ಟೇ ಬರಬೇಕಾದ ಆ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದರೆ ಅಂಥವರು ತಾವು ಅಥವಾ ತಮ್ಮ ಹಿರಿಯರು 1971ಕ್ಕೂ ಹಿಂದಿನಿಂದ ಇಲ್ಲೇ ನೆಲಸಿದ್ದೆವು ಎಂಬುದಕ್ಕೆ ಈ ಮೋದಿ-ಶಾ ಸರಕಾರಕ್ಕೆ ಪುರಾವೆ ಸಲ್ಲಿಸಬೇಕಾಗುತ್ತದೆ, ಅದನ್ನು ಪರಿಶೀಲಿಸಿದ ಸರಕಾರಿ ಅಧಿಕಾರಿಗಳು ಭಾರತೀಯರ ಭಾರತೀಯತೆಯನ್ನು ನಿರ್ಧರಿಸಲಿದ್ದಾರೆ.
ವಾಹ್ ವಾಹ್ ವಾಹ್!
ವಿದೇಶಗಳಿಂದ ಓಡಿ, ಅಕ್ರಮವಾಗಿ ಭಾರತಕ್ಕೆ ನುಸುಳಿದವರು ಐದೇ ವರ್ಷ ಇಲ್ಲಿದ್ದರೆ ಭಾರತೀಯರಾಗಿಬಿಡುತ್ತಾರೆ.
ಭಾರತೀಯರಾಗಿ, ಸಕ್ರಮವಾಗಿ ಇಲ್ಲೇ ಬದುಕುತ್ತಿರುವವರು, ಅದರಲ್ಲೂ, ಸಾವಿರಾರು ವರ್ಷಗಳಿಂದ ಇಲ್ಲೇ ಇರುವ ಆದಿವಾಸಿ ಬುಡಕಟ್ಟುಗಳವರು, ಬಡವರು, ನಿರ್ಗತಿಕರು, ಅಲೆಮಾರಿಗಳು, ಇದುವರೆಗೂ ಮತದಾರರ ಪಟ್ಟಿಯಲ್ಲಿ ಸೇರದೇ ಹೋದವರು, ಸಂತೃಸ್ತ ಮಹಿಳೆಯರು, ತಾವು ಇಲ್ಲೇ ಜೀವಿಸುತ್ತಿದ್ದವರು ಎಂದು ಸರಕಾರಕ್ಕೆ ಒಪ್ಪಿಗೆಯಾಗಬಲ್ಲ ಲಿಖಿತ ದಾಖಲೆಗಳಲ್ಲಿ ತೋರಿಸಲಾಗದಿದ್ದರೆ ಅಕ್ರಮ ವಲಸಿಗರಾಗಿ ಬಹಿಷ್ಕೃತರಾಗಲಿದ್ದಾರೆ, ಕೂಡು ಶಿಬಿರಗಳಿಗೋ, ಜೈಲುಗಳಿಗೋ ತಳ್ಳಲ್ಪಡಲಿದ್ದಾರೆ. ಅದರಲ್ಲಿ ಹಿಂದೂ, ಮುಸ್ಲಿಂ ಇತ್ಯಾದಿ ಮತಭೇದವಿರುವುದಿಲ್ಲ, ಯಾರ ಪೌರತ್ವ ದೃಢಗೊಳ್ಳುವುದಿಲ್ಲವೋ ಅವರು ಕೂಡು ಶಿಬಿರಕ್ಕೆ ಹೋಗಲು ಅಣಿಯಾಗಬೇಕು. ಎಲ್ಲ 135 ಕೋಟಿ ಭಾರತೀಯರೂ ಕಾಯೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
