ದಿನದ ಸುದ್ದಿ
NRC ಬೇಡ ಅನ್ನುವುದಕ್ಕೊಂದು ತಾಜಾ ಉದಾಹರಣೆ, ಮಿಸ್ ಮಾಡ್ದೆ ಓದಿ..!

- ಉದಯ್ ಗಾವ್ಕರ್
ಪಾರ್ಬತಿದೇವಿ.ಆಸ್ಸಾಂನ ಚಿರಾಂಗ್ ಜಿಲ್ಲೆಯ ಹಂಚರಾ ಪೋಲಿಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈಕೆಯ ಮನೆಯಿದೆ. ಕಳೆದ ಎರಡು ವರ್ಷ ಎಂಟು ತಿಂಗಳಿಂದ detention camp ಎಂದು ಕರೆದುಕೊಳ್ಳುವ ಜೈಲಿನಲ್ಲಿ ಇದ್ದಾಳೆ. ಈಕೆಯ ಹತ್ತಿರ ಆಧಾರ್ ಇದೆ. ವೋಟರ್ ಕಾರ್ಡ್ ಇದೆ. ರೇಷನ್ ಕಾರ್ಡ್ ಇದೆ.
ಆದರೆ, ಈ ದಾಖಲೆಗಳು ಆಕೆಯನ್ನು ಇದೇ ದೇಶದವಳು ಎಂದು ಸಾಬೀತುಮಾಡಲು ಸಾಧ್ಯವಾಗಲಿಲ್ಲ. ಆಕೆಯ ಮಗ ಬಿಶ್ವನಾಥ ಸದ್ಯ ಎಲ್ಲ ಪ್ರಯತ್ನಗಳನ್ನು ಕೈಬಿಟ್ಟು ಜೈಲಿನಲ್ಲಿ ಮೂರು ವರ್ಷಗಳ ಅವಧಿ ಮುಗಿದ ನಂತರ ಆಕೆ ಬಿಡುಗಡೆಯಾಗುವುದನ್ನು ಕಾಯುತ್ತಿದ್ದಾನೆ. ತನ್ನಮ್ಮ ತನ್ನ ಕೊನೆಯ ದಿನಗಳನ್ನು ಜೈಲಿನಲ್ಲಿ ಕಳೆಯಬಾರದು ಎಂಬುದು ಅವನಾಸೆ.
ಆತ ಮಾಡಬಹುದಾದ ಪ್ರಯತ್ನಗಳನ್ನೆಲ್ಲ ಮಾಡಿದ್ದಾನೆ. ಅಮ್ಮ ಹುಷಾರಿಲ್ಲದಾಗ ಬೇಲ್ ಸಿಗಬಹುದೆಂದು ವಕೀಲರನ್ನು ಗೊತ್ತುಮಾಡಿಕೊಂಡು ಹೈಕೋರ್ಟ್ ವರೆಗೆ ಅಲೆದಿದ್ದಾನೆ. ಫೊರೆನರ್ಸ್ ಟ್ರಿಬ್ಯುನಲ್ಲಿನಲ್ಲಿಗೂ ಸೆಣಿಸಿದ್ದಾನೆ. ರಿಕ್ಷಾ ಚಲಾಯಿಸಿ ಜೀವನ ನಿರ್ವಹಣೆ ಮಾಡುವ ಬಿಶ್ವನಾಥ ವಕೀಲರಿಗೆ ಕೊಟ್ಟಿದ್ದೇ ಹತ್ತಿರ ಹತ್ತಿರ ಎರಡು ಲಕ್ಷ ರೂಪಾಯಿಗಳಾಗಿವೆ.
ಫಾರಿನರ್ಸ್ ಟ್ರಿಬ್ಯುನಲ್ ನ ಮೊದಲ ಕೆಲವು ಕಲಾಪಗಳನ್ನು ಪಾರ್ಬತಿ ತಪ್ಪಿಸಿಕೊಂಡಿದ್ದರು. ಆ ನಂತರ ತನ್ನ ತಂದೆಯ 1949 ರ ರೇಷನ್ ಕಾರ್ಡ್ ಮತ್ತು ಅವರ ಹೆಸರಿರುವ 1970 ರ ಮತದಾರರ ಪಟ್ಟಿಯನ್ನು ಸಂಪಾದಿಸಿ ಟ್ರಿಬ್ಯುನಲ್ ಗೆ ಕೊಟ್ಟರೂ ಪ್ರಯೋಜನವಾಗಲಿಲ್ಲ.
ತಾನು ಕೊಟ್ಟ ದಾಖಲಾತಿಯಲ್ಲಿರುವ ವ್ಯಕ್ತಿ ತನ್ನ ತಂದೆ ಎಂಬುದನ್ನು ಆಕೆಯಿಂದ ಸಾಬೀತುಪಡಿಸಲಾಗಲಿಲ್ಲ. ಪಂಚಾಯತ್ ಕಾರ್ಯದರ್ಶಿ ತನ್ನಿಂದ ನೀಡಬಹುದಾದ ಪ್ರಮಾಣ ಪತ್ರಗಳನ್ನೆಲ್ಲ ನೀಡಿ ತಮ್ಮೂರಿನ ವೃದ್ಧ ತಾಯಿಯನ್ನು ಊರಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಿದ್ದು ಫಲ ನೀಡಲಿಲ್ಲ.
ಇದು ಪಾರ್ಬತಿಯ ಕತೆ ಮಾತ್ರವಲ್ಲ. ಕಡಿಮೆ ಆದಾಯವಿರುವ ಮತ್ತು ಸಾಮಾಜಿಕ ಶ್ರೇಣಿಯಲ್ಲಿ ಕೆಳಸ್ತರದಲ್ಲಿರುವ ಬಹುತೇಕ ವಿವಾಹಿತ ಹೆಂಗಸರಿಗೆ ತಮ್ಮ ತಂದೆಯ ಕುಟುಂಬದೊಂದಿಗೆ ಸಂಬಂಧ ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ.
ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪು ಆಕೆಯ ಜೈಲಿನ ಅವಧಿಯನ್ನು ಮುಂದಿನ ನಾಲ್ಕು ತಿಂಗಳಿಗೆ ಮೊಟಕುಗೊಳಿಸಿದೆ. ಅಲ್ಲಿಯವರೆಗೂ ಆಕೆ ಬದುಕಿರಲಿ, ಜೀವಂತ ಮನೆ ತಲುಪಲಿ ಮತ್ತು ತನ್ನ ಮನೆಯಲ್ಲೇ ಕೊನೆಯ ದಿನಗಳನ್ನು ಆಕೆ ಕಳೆಯಲಿ ಎಂದು ಹಾರೈಸೋಣ!
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
