ದಿನದ ಸುದ್ದಿ
ಇದೊಂದು ‘’ಅಡ್ಡಕಸುಬಿ’’ ಬಜೆಟ್ : ಸಿದ್ದರಾಮಯ್ಯ ಟೀಕೆ

ಸುದ್ದಿದಿನ,ಬೆಂಗಳೂರು : ಬಜೆಟ್ ತಯಾರಿಕೆ ಎನ್ನುವುದು ಗಂಭೀರವಾದ ಪವಿತ್ರ ಕಾರ್ಯ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಮಂಡಿಸಿದ ಬಜೆಟ್ ನೋಡಿದರೆ ಇದೊಂದು ‘’ಅಡ್ಡಕಸುಬಿ’’ ಬಜೆಟ್ನಂತೆ ಕಾಣುತ್ತಿದೆ. ಇದರಲ್ಲಿ ಅರ್ಥಶಾಸ್ತ್ರವೂ ಇಲ್ಲ, ಗಣಿತವೂ ಇಲ್ಲ, ವೃತ್ತಿಪರತೆಯೂ ಇಲ್ಲ. ಎಲ್ಲವೂ ಅಸ್ಪಷ್ಟ, ಗೊಂದಲಮಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗುರುವಾರ ಮುಖ್ಯ ಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್ ಉದ್ದೇಶಿಸಿ ಪ್ರತಿಕ್ರಿಯೆ ನೀಡಿದ ಅವರು, 2013ರ ನನ್ನ ಮೊದಲ ಬಜೆಟ್ ಹಾಗೂ 2018ರ ಕೊನೆಯ ಬಜೆಟ್ ಗಾತ್ರದ ನಡುವಿನ ವ್ಯತ್ಯಾಸ ರೂ.1.16.000 ಕೋಟಿ. ಈ ಬಾರಿಯ ಬಜೆಟ್ ಗಾತ್ರ ಹಿಂದಿನ ಬಜೆಟ್ಗಿಂತ ಕೇವಲ ರೂ.4.000 ಕೋಟಿ ಹೆಚ್ಚಿದೆ ಅಂದರೆ 1.5% ಹೆಚ್ಚಾಗಿದೆ ಅಷ್ಟೆ. ಹೀಗಾದಾಗ ಎಲ್ಲಾ ವಲಯಗಳ ಅಭಿವೃದ್ಧಿಗೆ ಅಗತ್ಯ ಪ್ರಾಶಸ್ತ್ಯ ನೀಡಲು ಸಾಧ್ಯವಿಲ್ಲ. 14ನೇ ಹಣಕಾಸು ಆಯೋಗದ ಪ್ರಕಾರ ನಮ್ಮ ರಾಜ್ಯಕ್ಕೆ 4.71% ಅನುದಾನ ಹಂಚಿಕೆಯಾಗಿತ್ತು. ಇತ್ತೀಚೆಗೆ ಮಂಡಿಸಲಾದ 15ನೇ ಹಣಕಾಸು ಆಯೋಗದ ಪ್ರಕಾರ ನಮ್ಮ ಹಂಚಿಕೆ ಪಾಲು 3.64%ಗೆ ಇಳಿಕೆಯಾಗಿದೆ. ಇದರಿಂದ ರೂ.11,215 ಕೋಟಿ ನಷ್ಟವಾಗಿದೆ. ಯಡಿಯೂರಪ್ಪ ಅವರು ಎಲ್ಲದಕ್ಕೂ ಬಜೆಟ್ ಮೂಲಕ ಉತ್ತರಿಸುತ್ತೇನೆ ಅಂತಿದ್ರು, ಈಗೇನು ಹೇಳ್ತಾರೆ? ಎಂದು ಪ್ರಶ್ನಿಸಿದರು.
ಮಹದಾಯಿ ಯೋಜನೆಗೆ ರೂ.500 ಕೋಟಿ, ಎತ್ತಿನಹೊಳೆ ಯೋಜನೆಗೆ ರೂ.1,500 ಕೋಟಿ, ತುಂಗಭದ್ರಾ ಜಲಾಶಯದ ಹೂಳೆತ್ತಲು ರೂ.20 ಕೋಟಿ ಅನುದಾನ ನೀಡಲಾಗುವುದು ಎಂದು ಬಜೆಟ್ನಲ್ಲಿ ಹೇಳಲಾಗಿದೆ. ರಾಜ್ಯದ ಎರಡು ಜೀವನದಿಗಳಾದ ಕೃಷ್ಣ ಮೇಲ್ದಂಡೆ ಮತ್ತು ಕಾವೇರಿ ನದಿ ಯೋಜನೆಗಳ ಅನುದಾನದ ಬಗ್ಗೆ ಬಜೆಟ್ನಲ್ಲಿ ಯಾವ ಉಲ್ಲೇಖವು ಇಲ್ಲ. ಪ್ರಸಕ್ತ ಬಜೆಟ್ನಲ್ಲಿ ರೈತರ ಸಾಲಮನ್ನಾದ ಬಗ್ಗೆ ಒಂದಕ್ಷರವೂ ಮಾಹಿತಿ ಇಲ್ಲ. ಹಿಂದಿನ ಸಮ್ಮಿಶ್ರ ಸರ್ಕಾರ ಹಂತ ಹಂತವಾಗಿ ಸಾಲ ಮನ್ನಾ ಮಾಡುವ ಘೋಷಣೆ ಮಾಡಿತ್ತು, ಅದರ ಬಗ್ಗೆ ಕನಿಷ್ಠ ಮಾಹಿತಿಯನ್ನಾದರೂ ನೀಡಬೇಕಲ್ಲವೇ? 2018ರ ಬಜೆಟ್ನಲ್ಲಿ ನಾನು ಕೃಷಿ, ತೋಟಗಾರಿಕೆ, ನೀರಾವರಿ, ರೇಷ್ಮೆ, ಹೈನುಗಾರಿಕೆ ಸೇರಿದಂತೆ ಇದಕ್ಕೆ ಸಂಬಂಧಿತ ಚಟುವಟಿಕೆಗಳಿಗೆ ಒಟ್ಟು ರೂ.38,073 ಕೋಟಿ ಅನುದಾನ ಮೀಸಲಿಟ್ಟಿದ್ದೆ. ಪ್ರಸಕ್ತ ಬಜೆಟ್ನಲ್ಲಿ ಇದನ್ನು ರೂ.32,259 ಕೋಟಿಗೆ ಇಳಿಕೆ ಮಾಡಲಾಗಿದೆ. ಹಾಗಿದ್ದರೆ, ಇದು ಹೇಗೆ ರೈತಪರ ಬಜೆಟ್ ಆಗಲು ಸಾಧ್ಯ? ಎಂದರು.
ಶಿಕ್ಷಣ ಕ್ಷೇತ್ರಕ್ಕೆ 2018-19ರಲ್ಲಿ ರೂ.26,864 ಕೋಟಿ ಮೀಸಲಿರಿಸಿದ್ದೆ. ಅಂದರೆ ಒಟ್ಟಾರೆ ಬಜೆಟ್ನ ಶೇ.12 ಪಾಲು ಇತ್ತು. ಈ ಬಾರಿ ರೂ.29,768 ಕೋಟಿ ಮೀಸಲಿಡಲಾಗಿದೆ. ಅಂದರೆ ಶೇ.11 ಮಾತ್ರ. ಹಿಂದಿಗಿಂತ ಶೇ.1 ರಷ್ಟು ಕಡಿಮೆ ಮಾಡಲಾಗಿದೆ. ಈ ಅನುದಾನ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣಬೇಕೆ ಹೊರತು ಕಡಿಮೆಯಾಗಬಾರದು. ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ಕಳೆದ ಬಾರಿ ರೂ.30,150 ಕೋಟಿ ಅನುದಾನ ನೀಡಲಾಗಿತ್ತು. ಈ ಬಾರಿ ರೂ.26,131 ಕೋಟಿ ನೀಡಲಾಗಿದೆ. ಸುಮಾರು ರೂ.4000 ಕೋಟಿ ಅನುದಾನ ಕಡಿಮೆಯಾಗಿದೆ. ಬಜೆಟ್ ಗಾತ್ರ ಹೆಚ್ಚಾದಂತೆ ಈ ಅನುದಾನದ ಗಾತ್ರ ಕೂಡ ಹೆಚ್ಚಾಗಬೇಕು. ಇದು ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿ ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
‘ಸಬ್ ಕ ಸಾಥ್, ಸಬ್ ಕ ವಿಕಾಸ್’ ಎನ್ನುವ ಬಿಜೆಪಿ ನಾಯಕರು ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. 5 ಅಲ್ಪಸಂಖ್ಯಾತ ವಸತಿ ಶಾಲೆಗಳ ಅಭಿವೃದ್ಧಿಪಡಿಸುವ ಯೋಜನೆ ಹೊರತುಪಡಿಸಿದರೆ ಈ ಸಮುದಾಯದ ಅಭಿವೃದ್ಧಿಗೆ ಬೇರೆಲ್ಲೂ ನಯಾಪೈಸೆ ಅನುದಾನ ನೀಡುವ ಕುರಿತು ಬಜೆಟ್ನಲ್ಲಿ ತಿಳಿಸಿಲ್ಲ. ಬಿಜೆಪಿ ಸರ್ಕಾರದ ‘ಕಲ್ಯಾಣ ಕರ್ನಾಟಕ’ ಎಂಬುದು ಬರೀ ಘೋಷಣೆಗಷ್ಟೇ ಸೀಮಿತವಾಗಿದೆ. ನಮ್ಮ ಸರ್ಕಾರದ ಕಡೆಯ ಎರಡು ಬಜೆಟ್ನಲ್ಲಿ ಈ ಭಾಗದ ಅಭಿವೃದ್ಧಿಗೆ ತಲಾ ರೂ.1,500 ಕೋಟಿ ಅನುದಾನ ನೀಡಿದ್ದೆ, ಈ ಬಾರಿಯೂ ಅಷ್ಟೇ ಅನುದಾನವನ್ನು ಮೀಸಲಿಡಲಾಗಿದೆ. ಹೆಸರು ಬದಲಾಯಿಸಿದ ಮಾತ್ರಕ್ಕೆ ಈ ಭಾಗದ ಕಲ್ಯಾಣವಾಗುತ್ತದೆಯೇ? ಎಂದು ಹೇಳಿದರು.
ರೂ.18,000 ಕೋಟಿ ವೆಚ್ಚದ ಉಪನಗರ ರೈಲು ಯೋಜನೆಗೆ ರಾಜ್ಯವು ಕೇವಲ ರೂ.500 ಕೋಟಿ ಅನುದಾನ ಮೀಸಲಿರಿಸಿದೆ. ಕೇಂದ್ರ ಸರ್ಕಾರ ತನ್ನ ಬಜೆಟ್ನಲ್ಲಿ ರೂ.1 ಕೋಟಿ ಅನುದಾನ ಮೀಸಲಿಟ್ಟಿದೆ. ಇಷ್ಟು ಕಡಿಮೆ ಅನುದಾನದಲ್ಲಿ ಈ ಯೋಜನೆ ಆರಂಭವಾಗುವ ಸಾಧ್ಯತೆಗಳೇ ಇಲ್ಲ. ಹೀಗಾದರೆ ನಗರದ ಸಂಚಾರ ದಟ್ಟಣೆ ನಿವಾರಿಸುವುದು ಹೇಗೆ? 2018-19ರಲ್ಲೇ ನಾನು ನಗರೋತ್ಥಾನ ಯೋಜನೆಯಡಿ ರೂ.10,000 ಕೋಟಿಗಳನ್ನು ಬೆಂಗಳೂರು ನಗರವೊಂದಕ್ಕೆ ನೀಡಿದ್ದೆ. ಈ ಬಾರಿ ರೂ.8,772 ಕೋಟಿಗಳನ್ನು ಮೀಸಲಿರಿಸಲಾಗಿದೆ. ಯಡಿಯೂರಪ್ಪ ಅವರು 6 ತಿಂಗಳಲ್ಲಿ ಬೆಂಗಳೂರು ಚಿತ್ರಣ ಬದಲಿಸುತ್ತೀನಿ ಅಂದಿದ್ರು. ಅಧಿಕಾರಕ್ಕೆ ಬಂದು 7 ತಿಂಗಳಾಯ್ತು, ನಗರದ ಚಿತ್ರಣ ಬದಲಾಗಿದೆಯೇ? ಎಂದು ನುಡಿದರು.
ಮೊನ್ನೆತಾನೆ ಶೇ.10 ರಷ್ಟು ಬಸ್ ದರವನ್ನು ಹೆಚ್ಚಿಸಲಾಗಿತ್ತು. ಏಪ್ರಿಲ್-2020 ರಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.1.60, ಡಿಸೇಲ್ ಬೆಲೆ ರೂ.1.59 ರಷ್ಟು ಹೊಸ ತೆರಿಗೆ ಪ್ರಕಾರ ಏರಿಕೆಯಾಗಲಿದೆ. ಇದರ ಜೊತೆಗೆ ಸ್ಲೀಪರ್ ಕೋಚ್ ಬಸ್ ಹಾಗೂ ಮಿನಿ ಬಸ್ಗಳ ಮೇಲೆ ಹೊಸದಾಗಿ ಹೆಚ್ಚುವರಿ ತೆರಿಗೆ ವಿಧಿಸಲು ಹೊರಟಿದ್ದಾರೆ. ವಿತ್ತೀಯ ಜವಾಬ್ದಾರಿ ನೀತಿಯಲ್ಲೇ ಸಾಲ ಪಡೆಯಲು ಅವಕಾಶಗಳಿದ್ದರೂ ನಮ್ಮ ಸರ್ಕಾರವಿದ್ದಾಗ ಸಾಲ ಮಾಡಿ ಹೋಳಿಗೆ ತಿನ್ನುತ್ತೀರಿ ಎಂದು ಬಿಜೆಪಿಯವರು ಹಂಗಿಸುತ್ತಿದ್ದರು. ಈಗ ಅವರೇ ರೂ.52,000 ಕೋಟಿ ಸಾಲ ಮಾಡಲು ಹೊರಟಿದ್ದಾರೆ. ಇದೊಂದು ರೀತಿ ‘ಆಚಾರ ಹೇಳೋಕೆ, ಬದನೆಕಾಯಿ ತಿನ್ನೋಕೆ’ ಎಂಬಂತೆ ಆಯಿತಲ್ಲವೇ? ಎಂದು ಟೀಕಿಸಿದರು.
ರಾಜ್ಯದ 44 ಇಲಾಖೆಗಳನ್ನು ಆರು ವಲಯಗಳಲ್ಲಿ ವಿಂಗಡಿಸಿ ಇಲಾಖಾವಾರು ಯೋಜನೆ ಮತ್ತು ಅನುದಾನಗಳನ್ನು ಪ್ರತ್ಯೇಕವಾಗಿ ನಮೂದಿಸದೆ ತೆರಿಗೆದಾರರ ದಾರಿ ತಪ್ಪಿಸುವ ಹುನ್ನಾರವನ್ನು ಬಜೆಟ್ನಲ್ಲಿ ಕಾಣಬಹುದು. ತಮ್ಮ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಇಂತಹದ್ದೊಂದು ಕುತಂತ್ರವನ್ನು ಮಾಡಿದ ಹಾಗೆ ಕಾಣುತ್ತಿದೆ. ಮುಖ್ಯಮಂತ್ರಿಗಳು ಬಜೆಟ್ ತಯಾರಿಕೆಯನ್ನು ಗಂಭೀರವಾಗಿ ಸ್ವೀಕರಿಸದೆ ಕಾಟಾಚಾರಕ್ಕೆ ಮಾಡಿ ಮುಗಿಸಿದಂತಿದೆ. ಈ ಬಜೆಟ್ನ ಇನ್ನಷ್ಟು ಹುಳುಕುಗಳನ್ನು ಒಂದೊಂದಾಗಿ ಮುಂದಿನ ದಿನಗಳಲ್ಲಿ ಜನತೆಯ ಮುಂದೆ ಬಿಚ್ಚಿಡುತ್ತೇನೆ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
