ಭಾವ ಭೈರಾಗಿ
ಕೃತಿ ವಿಶ್ಲೇಷಣೆ | ‘ನೂಲಿನ ಬೇಲಿ’ ಆವರಣದಿ ಭ್ರಮಣಿಸಿದ ಕ್ಷಣ..!

- ಕು. ಹರ್ಷಿಯಾ ಭಾನು
ಲೇಖಕರನ್ನು ಪರಿಚಯಿಸಿದವರು ಚುಟುಕಾಗಿ ಅವರ ಪರಿಚಯ ಹಾಗೂ ಅವರ ಸಾಹಿತ್ಯಾಸಕ್ತಿಯ ಕುರಿತು ವಿವರಿಸಿದ್ದಾರೆ.ಮುನ್ನುಡಿಯ ಬರೆಹಗಾರರು ಕಾದಂಬರಿಯ ಒಳತಿರುಳನ್ನು ತಮ್ಮ ಮುನ್ನುಡಿಯಲ್ಲಿ ತೆರೆದಿಡುವುದರ ಮೂಲಕ ಓದುಗರಲ್ಲಿ ಕೃತಿಯ ಬಗ್ಗೆ ಕುತೂಹಲ ಕೆರಳಿಸಿ ಸ್ವಾಗತಿಸುವ ಹಾಗಿದೆ . ಈ ಕೃತಿಯನ್ನು ಲೇಖಕರು ತಮ್ಮ ಗುರುಗಳಿಗೆ ಗುರುದಕ್ಷಿಣೆಯ ರೂಪದಲ್ಲಿ ಗೌರವದಿಂದ ಸಮರ್ಪಿಸಿಸಿದ್ದಾರೆ. ಈ ಕೃತಿಯು ಇಪ್ಪತ್ತು ಅದ್ಯಾಯಗಳಿಂದ ಕೂಡಿದೆ.
ಮತ್ತೊಂದು ಬಹುಮುಖ್ಯವಾದ ಅಂಶವೇನೆಂದರೆ ನಿರೂಪಣೆಯ ಶೈಲಿ ವರ್ತಮಾನವನ್ನು ಭೂತಕಾಲದೊಂದಿಗೆ ಸಂಯೋಜನೆಗೊಳಿಸಿ ಕಥೆಯನ್ನು ನಿರೂಪಣೆ ಮಾಡುತ್ತಾ ನಿರೂಪಕರು ಸಾಗುತ್ತಾರೆ. ಇದೊಂದು ನೆನಪುಗಳ ಮೆರವಣಿಗೆ. ರನ್ನನ ಗದಾಯುದ್ದದಲ್ಲಿ ಬಳಕೆಯಾಗಿರುವ ಸಿಂಹಾವಲೋಕನ ಕ್ರಮ(flash back technique) ಲೇಖಕರ ಕಾದಂಬರಿಯಲ್ಲೂ ಬಳಕೆಯಾಗಿದೆ.
ಈ ಕೃತಿಯ ಬಗ್ಗೆ ಲೇಖಕರು ತಮ್ಮ ಮಾತುಗಳಲ್ಲಿ ಹೇಳಿಕೊಂಡಂತೆ, ಅವರು ಬಾಲ್ಯದಲ್ಲಿ ಕಂಡ ಘಟನೆಗಳನ್ನೇ ಆದಾರವಾಗಿಟ್ಟುಕೊಂಡು ಈ ಕಾದಂಬರಿಯನ್ನು ಹೆಣೆದಿದ್ದಾರೆ. ‘ನೂಲಿನ ಬೇಲಿ‘ ಅಂದರೆ ಅತ್ಯಂತ ನಾಜೂಕಾದ ಬೇಲಿ ಎಂಬರ್ಥದಲ್ಲಿ ಈ ಶೀರ್ಷಿಕೆ ಬಳಸಿದ್ದಾರೆ.. ಅಂದರೆ ಇಂತಹ ಬೇಲಿಯಿಂದ ಮೇಲ್ನೋಟಕ್ಕೆ ರಕ್ಷಣೆ ದೊರೆಯುತ್ತೆ ಎನಿಸಿದರೂ ಸಹ ಅಪಾಯವೇ ಹೆಚ್ಚು…. ಕಾಯುವವರೇ ಕೊಲ್ಲುವವರಾದಂತೆ, ರಕ್ಷಕರೇ ಭಕ್ಷಕರಾದಂತೆ, ಬೇಲಿಯೇ ಎದ್ದು ಹೊಲ ಮೇಯುವುದು ಎಂಬಂತೆ ಈ ಕಾದಂಬರಿಯ ಕಥಾ ಹಂದರ ಹಲವು ಗೂಢಾರ್ಥಗಳನ್ನು ಹೊಂದಿದೆ.
ಗೋಪಾಲ್ ಬೆಟ್ಟಳ್ಳಿ, ರಘು ಬೆಟ್ಟಳ್ಳಿ, ಹುಳಿಯಾರ್ ನಟರಾಜ್ ಸರ್, ರಮೇಶ ಮೊದಲಾದವರು ವರ್ತಮಾನದ ಪಾತ್ರಗಳು. ರಮೇಶ ಪೆಟ್ರೋಲ್ ಬಂಕ್ ಹತ್ತಿರ ನಿರೂಪಕರಿಗೆ ಆಕಸ್ಮಿಕವಾಗಿ ಭೇಟಿಯಾದಾಗಲೇ ಅವರ ಸ್ಮೃತಿಪಟಲದಲ್ಲಿ ಹಳೆಯ ನೆನಪುಗಳು ಒಂದೊಂದಾಗಿ ಬರಲಾರಂಭಿಸಿದ್ದು.
ಮೊದಲ ಹಾಗೂ ಎರಡನೆ ಅದ್ಯಾಯವು ವರ್ತಮಾನದ ಕಥೆಯನ್ನು ಹೊಂದಿದೆ, ಗೋಪಾಲ್ ಬೆಟ್ಟಳ್ಳಿಯವರೊಂದಿಗೆ ಕಳೆದ ಕ್ಷಣಗಳು ಹಾಗೂ ನಟರಾಜ್ ಹುಳಿಯಾರ್ ಸರ್ ರವರೊಂದಿಗೆ ಕಾರ್ಯಕ್ರಮಕ್ಕೆ ಹೋದ ಕ್ಷಣಗಳನ್ನು ವಿವರಿಸುತ್ತಾರೆ. ನಿಜವಾದ ಕಥೆ ಪ್ರಾರಂಭವಾಗುವುದು ಕಾರ್ಯಕ್ರಮ ಮುಗಿಸಿ ಮರಳುವಾಗ ಪೆಟ್ರೋಲ್ ಬಂಕ್ ಹತ್ತಿರ ಭೇಟಿಯಾದ ರಮೇಶ ಎಂಬ ವ್ಯಕ್ತಿಯನ್ನು ಕಂಡಾಗ.ಅವರನ್ನು ಭೇಟಿಯಾದ ನಂತರ ನಿರೂಪಕರ ಬಾಲ್ಯಕಾಲದ ನೆನಪುಗಳ ಮೆರವಣಿಗೆ ಪ್ರಾರಂಭವಾಗುತ್ತದೆ.
ಕಾದಂಬರಿಯ ಮುಖ್ಯಪಾತ್ರಧಾರಿ ಮದನ ಓದುಗರಿಗೆ ಖಳನಾಯಕರೇ ಸರಿ. ಅವರ ಮಡದಿ ಸುಮತಿ, ಅವರ ಸಹೋದರರಾದ ಶಂಕರ, ಶಂಕರನ ಮಡದಿ ಭವಾನಿ(ಇವರೇ ಕಾದಂಬರಿಯ ದುರಂತ ನಾಯಕ ನಾಯಕಿಯರು) ಕಾದಂಬರಿಯ ಇತರೆ ಪಾತ್ರಗಳು, ರಾಮಣ್ಣ, ಪಂಕಜ, ಕುಮಾರಿ, ಸುಮತಿಯ ಮಕ್ಕಳು , ನಿರೂಪಕರ ತಾಯಿ, ಶಂಕರನ ಮಕ್ಕಳು ಮುಂತಾದವರು.
ಕಾದಂಬರಿಯು ಸರ್ಕಾರದ ಅರಾಜಕತೆ, ಬೇಜವಾಬ್ದಾರಿತನ, ಕಲಬೆರಕೆ, ಮೂಢನಂಬಿಕೆ, ಬಡತನ, ಕಾಮ ಮತ್ತು ಪ್ರೇಮಗಳ ಸುತ್ತಲಿನ ಕಥಾ ಹಂದರವನ್ನು ಹೊಂದಿದೆ. ಪ್ರಾರಂಭದಲ್ಲಿ ‘ಸರ್ಕಾರದ ಅರಾಜಕತೆ’ ಹಾಗೂ ‘ಬೇಜವಾಬ್ದಾರಿತನ’ದ ಬಗ್ಗೆ ನಿರೂಪಕರು ಧ್ವನಿಯೆತ್ತುತ್ತಾರೆ. ಅಂದರೆ ಸರ್ಕಾರವು ಓಟು ಹಾಕಿದ ಜನಗಳಿಗೆ ಕತ್ತಲೆ ಭಾಗ್ಯ ಕರುಣಿಸಿ ತಾವು ಮಾತ್ರ ಜನಸಾಮಾನ್ಯರ ಕಷ್ಟಗಳಿಗೆ ಕಾರಣರಾಗುತ್ತಾರೆಂಬ ಸೂಕ್ಷ್ಮ ವಿಚಾರವನ್ನು ತಿಳಿಸುತ್ತಾರೆ.
ಮೂಢನಂಬಿಕೆ
ಈ ಮೂಢನಂಬಿಕೆಯನ್ನು ನಂಬದೆ ನಂಬಿಕೆಯನ್ನಷ್ಟೇ ಗೌರವಿಸಬೇಕೆನ್ನುವ ಸ್ಪಷ್ಟ ಸಂದೇಶ ಅವರ ಕಾದಂಬರಿ ನಮಗೆ ನೀಡುತ್ತದೆ, ಉದಾಹರಣೆಗೆ ಭವಾನಿ ಹಾಗೂ ಶಂಕರ ಮದುವೆಯಾದ ಹೊಸದರಲ್ಲಿ ಗೋಚರವಾದ ಅಪಶಕುನಗಳು ಮೇಲ್ನೋಟಕ್ಕೆ ಮೂಢನಂಬಿಕೆಯಂತೆ ಭಾಸವಾದರೂ ಸಹ ಅವರಿಬ್ಬರ ಬದುಕು ದುರಂತ ಅಂತ್ಯ ಕಂಡದ್ದನ್ನು ನಿರೂಪಕರು ಬಲವಾಗಿ ನಂಬುವಂತೆ ಮಾಡಿತು.
ಹೆಣ್ಣಿನ ಮೇಲಿನ ದೌರ್ಜನ್ಯ
ಈ ಸಮಸ್ಯೆ ಇಂದು ನಿನ್ನೆಯದಲ್ಲ.ತಲೆತಲಾಂತರದಿಂದ ಬೆಳೆದು ಬಂದಿರುವ, ಇಂದಿಗೂ ಬಗೆಹರಿಯದ ಹೆಣ್ಣು ಮಕ್ಕಳ ಸಮಸ್ಯೆ. ಪುರುಷನ ವಕ್ರದೃಷ್ಟಿಗೆ ಬಲಿಯಾದ ಹೆಣ್ಣುಗಳೆಷ್ಟೋ ದುರಂತ ಅಂತ್ಯ ಕಾಣೋದನ್ನ ನಾವು ದಿನಬೆಳಗಾದರೆ ಮಾದ್ಯಮಗಳ ಮೂಲಕ ತಿಳಿದುಕೊಳ್ಳುತ್ತೇವೆ. ಕಾದಂಬರಿಯ ಪಾತ್ರಗಳಾದ ಕುಮಾರಿ, ಪಂಕಜ ಹಾಗೂ ಭವಾನಿಯಂತಹ ಮೂವರು ಹೆಣ್ಣು ಮಕ್ಕಳ ಕಥೆಗಳು ವಿಭಿನ್ನವಾಗಿದ್ದರೂ ಸಹ ಪುರುಷನ ದೌರ್ಜನ್ಯಕ್ಕೆ ಒಳಗಾದವರು.
ಬಡತನ
ಇದೊಂದು ಸಾಮಾಜಿಕ ಸಮಸ್ಯೆ ನಿರೂಪಕರು ಬಡತನದ ಬವಣೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ, ನಿರೂಪಕರ ಕುಟುಂಬ ಬಡತನದಿಂದ ಕೂಡಿದ್ದರೂ ಸಹ ಅವರಿಗೆ ಸರ್ಕಾರಿ ಶಾಲೆಗೆ ಕಳುಹಿಸಿ ಓದಿಸುವುದು, ಅದೆಷ್ಟೋ ಕಿ.ಮೀ. ನಡೆದುಕೊಂಡೆ ಹೋಗ್ಬೇಕಾದ ಸನ್ನಿವೇಷ, ಮಳೆ ಬಂದ್ರೆ ನೆನೆದುಕೊಂಡೇ ಬರಬೇಕಾದ ಅನಿವಾರ್ಯತೆ, ಮನೆಯಲ್ಲಿ ಬಡತನ ಇರುವುದರಿಂದ ತನ್ನ ಓದು ಮುಂದುವರೆಸಲು ಮಾವನ ಮನೆಗೆ ಕಳುಹಿಸಿ ತಿಂದುಂಡು ಚೆನ್ನಾಗಿರುವನೆಂಬ ತಾಯಿಯ ಕಾಳಜಿ ಇವೆಲ್ಲವುಗಳನ್ನು ಲೇಖಕರು ವಿವರಿಸಿದ್ದಾರೆ.
ಬೀದಿ ಜಗಳಗಳು
ಕೊಳಾಯಿ ನೀರಿಗಾಗಿ ನಡೆಯುವ ಜಗಳಗಳು,ತಾರಕಕ್ಕೇರಿದ ಪ್ರಸಂಗಗಳು, ಉದಾಹರಣೆಗೆ ಪರಿಮಳ ಮತ್ತು ಜಯಮ್ಮರ ನಡುವೆ ನಡೆದ ಜಗಳ ತಾರಕಕ್ಕೇರಿ ಪರಸ್ಪರರನ್ನು ಹೀಯಾಳಿಸುತ್ತಾ, ಹೀಗಳೆಯುತ್ತಾ ಜುಟ್ಟು ಹಿಡಿದು ಹೊಡೆದಾಡುವಷ್ಟರಮಟ್ಟಿಗೆ ತಾರಕಕ್ಕೇರಿ ಜಗಳ ನಿಂತ ಮೇಲೆ ಪೊಲೀಸರು ಬರುವುದು, ಸಮಾಜದಲ್ಲಿ ನಡೆಯುತಿರುವ ಪ್ರಸ್ತುತ ವ್ಯವಸ್ಥೆಯನ್ನು ಬಿಂಬಿಸುತ್ತದೆ. ಇವೇ ಮುಂತಾದ ಸಾಮಾಜಿಕ ಸಮಸ್ಯೆಗಳಿಗೆ ಕನ್ನಡಿಹಿಡಿದಿದ್ದಾರೆ ನಿರೂಪಕರು.ಪರಿಸ್ಥಿತಿಯ ಕೈಗೊಂಬೆಯಾಗಿ ಹೆಣ್ಣು ಯಾವರೀತಿ ಪುರುಷನ ದಾರುಣವಾದ ಶೋಷಣೆಗೆ ಒಳಗಾಗುತ್ತಾಳೆ ಎಂಬುದನ್ನು ಪಂಕಜ, ಕುಮಾರಿ ಹಾಗೂ ಭವಾನಿ ಪಾತ್ರಗಳ ಮೂಲಕ ಓದುಗರಿಗೆ ಲೇಖಕರು ತಿಳಿಸಿದ್ದಾರೆ.
ಹಣದ ಅಮಲೇರಿದರೆ ಮನುಷ್ಯ ಎಂತಹ ಕೀಳುಮಟ್ಟಕ್ಕೆ ಬೇಕಾದರೂ ಇಳಿಯಬಲ್ಲ ಎಂಬುದನ್ನು ಮದನನ ಪಾತ್ರ ಸಂಕೇತಿಸುತ್ತದೆ. ಪಂಕಜಳ ಬಡತನದ ಸ್ಥಿತಿಯನ್ನು ರಾಮಣ್ಣ ತನ್ನ ಸ್ವಾರ್ಥಕ್ಕೆ ಬಳಸಿಕೊಂಡ, ಸುಮತಿ ಅವರ ಸಂಬಂಧಿಕರಾದ ಕುಮಾರಿಯನ್ನ ಮದನ ತನ್ನ ಸ್ವಾರ್ಥಕ್ಕೆ ಬಳಸಿಕೊಂಡದ್ದಲ್ಲದೆ, ತನ್ನ ತಮ್ಮನ ಹೆಂಡತಿಯ ಸಂಸಾರದ ಸರ್ವನಾಶಕ್ಕೂ ಸಹ ಮದನ ಮೂಲ ಕಾರಣನಾದ. ತಾನೇ ತನ್ನ ತಮ್ಮನ ಸಂಸಾರಕ್ಕೆ ಆಸರೆಯಾದಂತೆ ನಟಿಸಿ, ನಂಬಿಸಿ ಭವಾನಿಗೆ ದ್ರೋಹ ಎಸಗಿದ ಕಿರಾತಕನಂತೆ ಓದುಗರಿಗೆ ಕಾಣುತ್ತಾನೆ ಮದನ.
ಕುಮಾರನ ಆತ್ಮಹತ್ಯೆ(ಮಾತು ಬರದವನಾಗಿದ್ದು ಮದುವೆಯಾಗದ್ದಕ್ಕೆ ಜನರ ಚುಚ್ಚು ಮಾತುಗಳಿಂದ ಬೇಸತ್ತು), ಬಾಲ್ಯದಲ್ಲೇ ತನ್ನ ತಾಯಿಗೆ ಸಹಾಯ ಮಾಡಬೇಕೆಂಬ ರಮೇಶನ ಜವಾಬ್ದಾರಿತನ, ಶಂಕರನ ಮೃದು ಸ್ವಭಾವ ಹೀಗೆ ಒಂದೇ ಎರಡೇ,,, ಹತ್ತು ಹಲವು ಸನ್ನಿವೇಷಗಳಿಂದ ಕೂಡಿದ ಅಭೂತಪೂರ್ವ ಕಾದಂಬರಿ ಇದಾಗಿದೆ. ಭವಾನಿಯ ದುರಂತಮಯ ಬದುಕನ್ನು ಓದುವಾಗಲಂತೂ ಕಣ್ಣೆಲ್ಲ ಒದ್ದೆ , ಒದ್ದೆ. ಕಾರಣ ಭವಾನಿಯ ಬದುಕಿಗೆ ಆಸರೆಯಾಗಿ ನಿಲ್ಲಬೇಕಾಗಿದ್ದ ಮದನನೇ ಆಕೆಯ ಬಾಳಿಗೆ ನೂಲಿನ ಬೇಲಿಯಾದದ್ದು, ಬದುಕಿಗೆ ಮುಳುವಾದದ್ದು ನಿಜಕ್ಕೂ ಆಕೆಯ ದುರಂತಕ್ಕೆ ನೇರ ಕಾರಣವಾಗಿಬಿಟ್ಟನು.
ಇಲ್ಲಿ ತಾತ್ವಿಕತೆಯ ಸಂಕೇತವಾಗಿ ನಿಲ್ಲುವುದು ನಿರೂಪಕರ ತಾಯಿ. ಅವರು ಭವಾನಿಗೆ ತೋರುವ ಮಮತೆ ಹಾಗೂ ಸುಮತಿ, ಭವಾನಿ ಇಬ್ಬರಿಗೂ ಹೇಳುವ ಬುದ್ದಿವಾದ ಕಾದಂಬರಿಕಾರರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ. ಕೊಳಾಯಿ ಜಗಳ, ಬೈಗುಳಗಳು, ಕಣ್ಣ ಮುಂದೆ ನಡೆದ ಅಪಶಕುನಗಳು, ನೆರೆಹೊರೆಯವರ ಮಾತುಕತೆಗಳು ಇವೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ನಿರೂಪಕರು ಸನ್ನಿವೇಷಗಳನ್ನು ನೆನಪಿಸಿಕೊಂಡು ಆಗಾಗ ಭಾವಪರವಶರಾಗುತ್ತಿದ್ದರು.. ಓದುಗರನ್ನೂ ಸಹ ಸರಾಗವಾಗಿ ಓದಿಸುತ್ತಾ ಭಾವಪರವಶರನ್ನಾಗಿ ಮಾಡುತ್ತಿದ್ದರು.
ಹೀಗೆ ಕಾದಂಬರಿ ಓದುಗರನ್ನು ಯಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ, ಇದಕ್ಕೆ ನನ್ನ ಅನುಭವವೇ ಕಾರಣ. ಬಿಡುಗಡೆಗೂ ಮುನ್ನವೇ ಮುದಲ್ ವಿಜಯ್ ಅಣ್ಣಾವ್ರಿಗೆ ಕೃತಿಯನ್ನು ಕೇಳಿದಾಗ ವಿಳಾಸ ಪಡೆದು ಕಳುಹಿಸಿದರು. ಒಮ್ಮೆ ಓದಲೆಂದು ಎತ್ತಿಕೊಂಡ ಕೃತಿ ಪೂರ್ತಿ ಓದಿ ಮುಗಿಯುವವರೆಗೂ ಇಡಲು ಮನಸ್ಸೇ ಆಗಲಿಲ್ಲ. ಸಮಯ ಸಿಕ್ಕಾಗ ಓದಬೇಕು ಎನಿಸುವುದಕ್ಕಿಂತಲೂ, ಒಮ್ಮೆ ಓದಲು ಪ್ರಾರಂಭಿಸಿದರೆ ಸಾಕು, ಈ ಕಾದಂಬರಿಯ ಓದಿಗಾಗಿಯೇ ಸಮಯ ಮಾಡ್ಕೊಬೇಕು ಎನಿಸಬಹುದಾದ ಕೃತಿಗಳ ಸಾಲಿಗೆ ಈ ಕಾದಂಬರಿ ಸೇರುತ್ತದೆ.
ಕೃತಿ: ನೂಲಿನ ಬೇಲಿ
ಲೇಖಕರ ಹೆಸರು: ಮುದಲ್ ವಿಜಯ್
ಪ್ರಕಾಶನ: ಮುದಲ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಕಿಚನ್ ವಕ್ತ್

- ಸಂಘಮಿತ್ರೆ ನಾಗರಘಟ್ಟ
ಎದ್ದ ತಕ್ಷಣ
ಎದ್ದೋ ಬಿದ್ದೋ ಎಂದು
ಫ್ರೆಶ್ ಆಗಲು ಬಾತ್ ರೂಂ
ನತ್ತ ಹೋಗುವುದೇ ತಡ
ಅಲ್ಲಿನ ಪುಟ್ಟ ಕನ್ನಡಿಯಲ್ಲಿ
ಹಿಡಿ ಮಾತ್ರದ ನನ್ನ ಮುಖ
ಥೇಟ್ ಆಟದ ರೋಬೋಟ್
ನಂತೆಯೇ ಕಾಣುತ್ತಿತ್ತು
ಒಳಗಿನಿಂದ ಕದ ತೆಗೆದು
ಆಚೆ ಹೆಜ್ಜೆಯಿಡುವ ಹೊತ್ತಿಗಾಗಲೇ
ಕಿಚನ್ ನಲ್ಲಿ ಆರ್ಡರ್ ಸಿದ್ಧ
ಬಿಸಿ ನೀರು ಒಬ್ಬರಿಗಾದರೆ
ಸ್ಟ್ರಾಂಗ್ ಕಾಫಿ ಇನ್ನೊಬ್ಬರಿಗೆ
ಅದನ್ನು ಕೊಡುವ ಗ್ಲಾಸ್
ಗಾಜಿನದೋ ಸ್ಟೀಲ್ ನದೋ
ಎಂಬ ಗೊಂದಲದಲ್ಲೇ
ಸ್ಟವ್ ಮೇಲಿನ ಹಾಲು
ಉಕ್ಕಿ ತನ್ನ ಹಿತ ಶತ್ರು
ಗ್ಯಾಸ್ ಟ್ಯುಬ್ ನತ್ತ ಹರಿಯುತ್ತಿತ್ತು
ಅದನ್ನು ಉಜ್ಜಿ ಕ್ಲೀನ್ ಮಾಡಿ
ಸಿಂಕ್ ನತ್ತ ನೋಡುತ್ತಿದ್ದಂತೆ
ಎಲ್ಲಾ ಪಾತ್ರೆ ಸೌಟು ಬಾಣಲೆಯಲ್ಲಿ
ತೇಲುತ್ತಿದ್ದ ಅನ್ನದ ಅಗುಳು
ಇನ್ನು ಅರೆಬರೆ ಖಾಲಿ ಆಗಿದ್ದ
ಹೊಟ್ಟೆ ಒಳಗಿನ ಕಲ್ಮಶದಂತಿತ್ತು
ರಾತ್ರಿ ,ಹಗಲು ಮಾಡುವ
ತಿಂಡಿ -ಕೆಲಸಗಳ ಚಿಂತೆಯಲ್ಲೇ
ನಿದ್ದೆ ಹೀರಿಕೊಂಡು ಮುಖ
ಹುಳಿ ಹಿಂಡಿದಂತಾಗಿತ್ತು….
ಇನ್ನೇನು ಎಲ್ಲಾ ಕೆಲಸ ಮುಗಿಸಿ
ಸೋಫಾ ದಲ್ಲಿ ಕುಳಿತು
ಸುದ್ದಿ ಫೀಡ್ ನೋಡುತ್ತಿದ್ದೆ
ಅಕ್ಕಿ ರಾಗಿಯ ಬೆಲೆ ಪಟ್ಟಿ ಏರಿತ್ತು
ಯಾಕೋ ಈಗಲೂ ದಾಸರಿರಬೇಕಿತ್ತು
ಸಮ ತೂಕ ಮಾಡಿ ಎರಡನ್ನೂ ಅಳೆದು
ನಮ್ಮವರ ಹೊಟ್ಟೆಯನ್ನೂ ತುಂಬಿಸಬೇಕೆನಿಸಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ರೇಖೆಗಳು

- ಡಾ.ಪುಷ್ಪಲತ ಸಿ ಭದ್ರಾವತಿ
ಗಡಿ ದೇಶಗಳೇನೊ ಹಂಚಿಕೊಂಡಿರಿ
ಆದರೆ,
ಸೂರ್ಯ ಚಂದ್ರರ ಗತಿಯೇನು
ಉಸಿರಾಡುವ ಗಾಳಿಯು ಒಂದಿರುವಾಗ
ಪ್ರಾಣವಾಯುವಿಗೆ ಬಂಧನದಲ್ಲಿರಿಸಲಾದಿತೆ
ಹರಿಯುವ ನದಿಗಳಿಗೆ ನಾಮಕರಣವೇನೋ ಮಾಡಿದಿರಿ
ಆದರೆ,
ಜರಿಗಳು, ಹಳ್ಳಕೊಳ್ಳಗಳು ಮಾಡಿದಾದರೂ ಏನು
ಪೂಜಾರಿ ಕೊಟ್ಟಿದ್ದು ತೀರ್ಥವೆ
ಆಬೆಜಂಜಂ, ಹಾಲಿ ವಾಟರ್ ಎಲ್ಲವೂ ಜಲ
ಫಾದರ್,ಪೂಜಾರಿ,ಮೌಲ್ವಿ
ಎಲ್ಲರೂ ಕುಡಿದದ್ದು ನೀರು
ಕೊನೆಗೂ ಅದರ ಮೂಲರೂಪ ಬದಲಾಗಲಿಲ್ಲ
ಮನುಷ್ಯ ,ಪ್ರಾಣಿ,ಮರಗಿಡಗಳ
ತಳಿಗಳನ್ನು ಬೇರ್ಪಡಿಸುವವನು ಮೂರ್ಖನೇ ಇರಬೇಕು .
ದೇಹದಲ್ಲಿರುವ ನರಮಂಡಲವನೊಮ್ಮೆ ಬೇರ್ಪಡಿಸಿ
ಬದುಕಲಾದಿತೆ
ಏನು?
ಕ್ರಿಸ್ತನೇನಾದರು ಬಂದು ಮತಾಂತರ ಮಾಡಿದನೇ
ಅಲ್ಲಾನೇನಾದರು ಬಂದು ರಾಮಮಂದಿರ ಕೆಡವಿದನೇ
ಶಿವನೇನಾದರು ಬಂದು ಮಸೀದಿಯನ್ನು ಹೊಡೆದುರುಳಿಸಿದನೇ..!?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು..!

- ಪ್ರೀತಿ.ಟಿ.ಎಸ್, ದಾವಣಗೆರೆ
ಬೇಂದ್ರೆಯವರು “ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು, ಕಳೆದ ದುಃಖಗಳಲ್ಲಿ ನೆನೆದಂತೆಯೆ” ಎಂದು ತಮ್ಮ ಸಖೀ ಗೀತದಲ್ಲಿ ಹಾಡುತ್ತಾರೆ. ಆದರೆ ಈ ಹೊಸ ವರ್ಷದಲ್ಲಿ ಕಹಿದಿನಗಳ ನೆನಪೇ ಬೇಡ, ಸಿಹಿ ಕಹಿ ಕನಸುಗಳನ್ನು ಕಂಡಂತಹ ಎಳೆತನದ, ಕೆಳೆತನದ ದಿನಗಳ ನೆನಪೇ ಸ್ಥಿರವಾಗಿರಲಿ; ಕಾಲನ ಹೊಡೆತಕ್ಕೆ ಆ ಕನಸುಗಳ ನೆನಪು ಮರೆಯಾಗದಿರಲಿ.
ಹೊಸ ವರ್ಷದಲ್ಲಿ ಇದೆಂತ ಬರಿತ್ತಿದ್ದಾರೆ ಅಂತೀರ! ನಿಮಗಿಂದು ಬರೀ ಹೊಸ ವರುಷ. ಆದರೆ ನನಗೋ ನನ್ನ ಜೀವನ ಪಾವನವಾಗಿಸುವ ದಿನ. ಯಾಕೇ ಗೊತ್ತಾ? ನನ್ನ ಸಾಹಿತ್ಯ ಕ್ಷೇತ್ರಕ್ಕೆ ಅನುಕರಿಣಿಸಿ, ಸಮಾಜ ಕ್ಷೇತ್ರದಲ್ಲಿ ನನ್ನನ್ನ ತೊಡಗುವಂತೆ ಮಾಡಿ, ಕಿಂಚಿತಾದರೂ ನನ್ನಲ್ಲಿ ದಯೆ, ಕರುಣೆ, ವಿಶ್ವಾಸ, ಪ್ರೀತಿ ಹೀಗೆ ಅನೇಕ ಭಾವಗಳನ್ನ ಚಿಕ್ಕಂದಿನಿಂದ ತಿದ್ದಿ ತೀಡಿದ ನನ್ನ ತಂದೆ ತಾಯಿಯ ಜನುಮ ದಿನ.
ಹೊಸ ವರುಷಕ್ಕಿಂತ ಇವರೀರ್ವರ ಜನುಮವೇ ಅದೇನೋ ಸಂಭ್ರಮ. ಅದೇನೋ ಸಡಗರ. ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿಟ್ಟು ಹೊಸ ಜೀವನದ ಪಯಣಕ್ಕೆ ಅದೇನೋ ಕಾತುರದಿಂದ ಗಡಿಬಿಡಿಯಾಗುವಾಗ ಅಪ್ಪಾಜಿ ಬಂದು ಹಾದಿಯಲ್ಲಿ ಕಲ್ಲು- ಮುಳ್ಳುಗಳಿರಬಹುದು ಎಚ್ಚರ! ಆದರೆ ಅದನ್ನು ಎದುರಿಸಿ ಮುನ್ನಡೆದಾಗಲೇ ಸುಖ ಸಾಗರ ಎಂಬ ಅವರ ಆಶಯದ ನುಡಿ ಮಾತುಗಳು ಬಹುಶಃ ಇಂದು ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ.
ಮಾಮೂಲೀ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ತಂದೆ-ತಾಯಿಯ ಪೋಸ್ಟ್ ಹಾಕಿ ವಿಶ್ ಮಾಡಿದ್ರೆ ಮುಗಿತಿತ್ತು. ಆದರೆ ಈ ಭಾರಿ, ನನಗಾಗುತ್ತಿರುವುದು ವಿಚಿತ್ರ ಅನುಭವ. ಸಾವಿರ ನೋವು, ದುಃಖ-ದುಮ್ಮಾನಗಳು ಎದೆಯಲ್ಲಿದ್ರು ನಮ್ಮ ಮುಂದೆ ತೋರಿಸದೆ ಮನಸ್ಸಲ್ಲೇ ಇಟ್ಟು ಕೊರಗುತ್ತ ಒಳ್ಳೆಯ ವಿದ್ಯಾಭ್ಯಾಸ ನೀಡಿ, ಸಂಸ್ಕೃತಿ, ನಾಡು-ನುಡಿ, ಸಂಸ್ಕಾರವನ್ನು ಭಿತ್ತುತ್ತ ಬಂದಿದ್ದಾರೆ. ಸುಖದಲ್ಲೆ ಬೆಳೆದ ನಮಗೆ ಕಹಿ ಜೀವನದ ಅನುಭವ ಕಡಿಮೆಯೇ!
ಅಪ್ಪಜಿ-ಅಮ್ಮನ ಆಸೆಯಂತೆ ಮಾಸ್ಟರ್ ಆಫ್ ಜರ್ನಲಿಸಂ ಅಲ್ಲಿ ಎರಡು ಬಂಗಾರದ ಪದಕ ಗೆದ್ದು ಅವರಿಗೆ ನೀಡಿ ಆಸೆ ತೀರಿಸಿದ ನಂತರವಷ್ಟೇ ತಿಳಿದ್ದದ್ದು. ಜೀವನದ ಆಳವೆಷ್ಟು ಎಂದು? ಅಪ್ಪಾಜಿ ಅಮ್ಮನನ್ನು ಬಿಟ್ಟು ಕೆಲಸ ಹುಡುಕುತ್ತ ಬೆಂಗಳೂರಿಗೆ ಬಂದಾಗ ನಿಜವಾದ ರೋಧನೆ, ನೋವು, ಒಂಟಿತನ, ಕಷ್ಟ, ಉಪವಾಸ, ಅನ್ನದ ಬೆಲೆ ಹೀಗೆ ಬದುಕಿನ ಅಷ್ಟು ಪಾಠಗಳು ತಿಳಿಯುತ್ತ ಹೋದದ್ದು. ಎಂತಹ ಒದ್ದಾಟದಲ್ಲೂ ನನ್ನ ತಂದೆ-ತಾಯಿಗೆ ತಿಳಿಸದೆ ನಗ್ತ ನಗ್ತ ಮಾತಾಡಿದ್ರು ಕ್ಷಣಮಾತ್ರದಲ್ಲಿ ಅಪ್ಪಜಿ ಮಾತ್ರ ನನ್ನ ನಗುವಿನ ಹಿಂದಿನ ದುಃಖನ ಗುರುತಿಸಿ, ಮತ್ತಷ್ಟು ಬಲ ತುಂಬುತ್ತ ಬಂದವರು.
ಜನವರಿ 1 ಬಂತೆಂದರೆ ಅಪ್ಪಾಜಿ ಅಮ್ಮನ ಹುಟ್ಟು ಹಬ್ಬ. ಈ ಭಾರಿ ನಾನು ನಿಮಗೆನೂ ಮಾಡಿದೇನು? ಕಡೆಪಕ್ಷ ಅವರ ಮುಂದೆ ಹೋಗಿ ನಿಂತು ಶುಭಾಶಯ ತಿಳಿಸಿ ಬಂದು ಬಿಡಲೇ ಎಂದರೆ ಕೈಯಲ್ಲಿ ಕಾಸಿಲ್ಲ. ಇಲ್ಲಿಂದಲೇ ಶುಭಾಶಯ ತಿಳಿಸಿ ಸುಮ್ಮನಾಗಿ ಬಿಡಲೇ ಎಂದರೆ ಮನಸ್ಸು ಒಪ್ಪುತ್ತಿಲ್ಲ. ಇದೀಗ ದುಡಿತ್ತಿದ್ದಿನಾದರು ಕಣ್ಣ ಮುಂದಿರುವ ಅಷ್ಟು ಹೊಣೆಗಾರಿಕೆಗಳು ನನ್ನನ್ನ ಕಟ್ಟಿಹಾಕ್ತಿದೆ. ಈ ಗೊಂದಲದ ನಡುವೇ ಈ ಲೇಖನ ನಿಮಗಾಗಿ.
ಅಪ್ಪಜಿ-ಅಮ್ಮ ಈ ಭಾರಿ ಹೊಸ ವರುಷದ ಹೊಸ ಆಚರಣೆ ಸಾಧ್ಯವಾಗದಿದ್ದರು ಬೇಸರಿಸದಿರಿ. ಯಾಕೆಂದರೆ ನಿಮಗಾಗಿ ನೀವು ಕಂಡ ಹೊಸ ಕನಸಿನ ಗೂಡೊಂದನ್ನ ಹೊತ್ತು ತರುತ್ತಿದ್ದೇನೆ. ತಂದ ದಿನವೇ ನಿಮ್ಮ ಈ ಜನುಮೋತ್ಸವವನ್ನು ಆಚರಿಸ್ತೇನೆ. ಇದನ್ನ ನಿಮ್ಮೊಡನೇ ಹೇಳಬಹುದಿತ್ತಾದರು, ನನ್ನ ಸಹಪಯಣಿಗರೊಡನೆ ಹಂಚಿಕೊಂಡ ಈ ಕನಸುಗಳು ನಮ್ಮ ಬಾಳಿನ ಮುಂದಿನ ಪಯಣದ ಬುತ್ತಿಯಾಗುತ್ತದೆ ಎಂಬುದು ನನ್ನ ಭಾವನೆ.
ಇಂತಹ ಅದೆಷ್ಟೋ ಅನುಭವಗಳು ಮನೆ ಬಿಟ್ಟು, ತಂದೆ ತಾಯಿಯ ಆಶಯವನ್ನು ನೆನಸಾಗಿಸೋ ಸಾವಿರ ಕನಸುಗಳನ್ನು ಹೊತ್ತು ಬಂದ ಅದೆಷ್ಟೋ ಮನಸ್ಸುಗಳಿಗೆ ಆಗಿರುತ್ತೆ. ಇನ್ನು ಕೆಲವರಿಗೆ ಇಡೀ ವರ್ಷದ ಶ್ರಮದಾಯಕ ದುಡಿಮೆ ಬಳಿಕ ಮನಸ್ಸು ಸ್ವಲ್ಪ ವಿಶ್ರಾಂತಿಯನ್ನು, ಮನೋರಂಜನೆಯನ್ನು ಬಯಸುತ್ತದೆ. ಕುಟುಂಬದ ಬಂಧವನ್ನು ಗಟ್ಟಿಗೊಳಿಸಲು ಮತ್ತು ಪ್ರೀತಿ, ಅನುಬಂಧವನ್ನು ಬಿತ್ತಲು ಹೊಸವರ್ಷವೊಂದು ಸುವರ್ಣಾವಕಾಶ. ನಮ್ಮ ಎಲ್ಲ ಕೆಲಸಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ಕೊಟ್ಟು ರಿಲ್ಯಾಕ್ಸ್ ಮಾಡುವ ಮೂಲಕ ಸಂಭ್ರಮ, ಸಡಗರಕ್ಕೆ ಅಣಿಯಾಗೋಣ. ನಿಮ್ಮೆಲ್ಲರ ಆಸೆ, ನಿರೀಕ್ಷೆಗಳು ನೆರವೇರಲಿ ಎಂದು ಮನಸ್ಸಲ್ಲೆ ಪ್ರಾರ್ಥಿಸುತ್ತಾ, ಮುಸ್ಸಂಜೆ ಕವಿಯುತ್ತಿರುವಾಗಲೂ ಮರುದಿನದ ಬೆಳಗು ಆಶಾಕಿರಣವನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
