ದಿನದ ಸುದ್ದಿ
ಕೊರೊನಾ ಮತ್ತು ನಮ್ಮ IASಗಳು..!

- ರಾಜಾರಾಮ್ ತಲ್ಲೂರ್
ಶತ್ರುದಾಳಿ ನಡೆದಾಗ ಕೋಟೆಯ ಬಾಗಿಲು ಭದ್ರಪಡಿಸಿಕೊಳ್ಳುವುದೇ ಯುದ್ಧ ಅಲ್ಲ. ಅದು ಯುದ್ಧದ ತಯಾರಿಗೆ ಮೊದಲ ಹಂತ. ಶತ್ರು ಹಠಾತ್ ಎರಗದಂತೆ ಬಾಗಿಲು ಭದ್ರಪಡಿಸಿ, ಹತ್ಯಾರುಗಳು, ಸೈನಿಕರು ತಯಾರಾಗಬೇಕು.
ನಮ್ಮಲ್ಲೀಗ ಕೋಟೆಬಾಗಿಲು ಭದ್ರಪಡಿಸಿ 23 ದಿನಗಳು ಕಳೆದಿವೆ. ಮತ್ತೆ ಮೇ 3ರ ತನಕ ಕೋಟೆಬಾಗಿಲು ಮುಚ್ಚಿಯೇ ಇರಲಿದೆ ಎಂಬ ಸೂಚನೆ ನಿನ್ನೆ ಹೊರಬಿದ್ದಿದೆ. ತಯಾರಿ ಏನಾಗಿದೆ ಎಂದರೆ ಚಿತ್ರಣ ಆಶಾದಾಯಕ ಇಲ್ಲ.
ಕೊರೊನಾ ಬರಿಯ ಬಾಗಿಲು ಭದ್ರಪಡಿಸಿದರೆ ಹೊರಟು ಹೋಗುವ ಆತಂಕ ಅಲ್ಲ. ಹಾಗಿದ್ದಿದ್ದರೆ ಈ ಜಗತ್ತಿನಲ್ಲಿ ಫ್ಲೂ ವೈರಸ್ ಗಳೇ ಇರುತ್ತಿರಲಿಲ್ಲ. ಪ್ರತೀ ಸೀಸನ್ನಿನಲ್ಲಿ ಮೂರು-ನಾಲ್ಕು ಸುತ್ತು ಬರುವ ಎಲ್ಲ ವೈರಸ್ ಗಳ ರೀತಿಯೇ ತಾನೂ ಕೂಡ ಎಂದು ಕೊರೊನಾ ಈಗಾಗಲೇ ಚೀನಾದ ವುಹಾನ್, ದಕ್ಷಿಣ ಕೊರಿಯಾ ಮೊದಲಾದೆಡೆ ಸಾಬೀತುಪಡಿಸುತ್ತಿದೆ. ಅಲ್ಲಿ ಸೋಂಕಿನ ಎರಡನೇ ಅಲೆ ಹರಡುತ್ತಿದೆ.
ಅಂದರೆ, ಬರಿಯ ಲಾಕ್ ಡೌನ್ ಮಾಡಿಕೊಂಡು ಕುಳಿತರೆ ಇನ್ನು ಐದಾರು ವರ್ಷ ಹೋದರೂ ಜಗತ್ತು ಇದೇ ಸ್ಥಿತಿಯಲ್ಲಿ ಇರಬೇಕಾಗುತ್ತದೆ ಎಂಬುದು ವಾಸ್ತವ. ಕೊರೊನಾ ಜೊತೆ ಬದುಕುವುದು ನಮಗೆ ಅಭ್ಯಾಸ ಆಗದೆ ಬೇರೆ ದಾರಿ ಇಲ್ಲ.
ನಾನು ಇಲ್ಲಿ ಹೇಳಹೊರಟಿರುವುದು, ನಮ್ಮ ದೇಶದ ನಿಯಮಗಳನ್ನು ರೂಪಿಸುವ IAS ಕೆಡೇರ್ ಬಗ್ಗೆ. ಕಳೆದ 20 ದಿನಗಳಲ್ಲಿ ಅವರು ಮುಂದಿನ ದಿನಗಳಿಗೆ ಒಂದು ಸ್ಪಷ್ಟ-ನಿಖರ-ಕಾರ್ಯರೂಪಕ್ಕೆ ತರಬಲ್ಲ ಒಂದಿಷ್ಟು ನಿಯಮಗಳನ್ನು ರೂಪಿಸಬಲ್ಲರು ಎಂಬ ನಿರೀಕ್ಷೆ ಇತ್ತು.
ಆದರೆ ನಿನ್ನೆ ಲಾಕ್ ಡೌನ್ 2.0 ಗೆ ಮಾರ್ಗದರ್ಶಿಯನ್ನು ವಿವರವಾಗಿ ನೋಡಿದ ಬಳಿಕ ತುಂಬಾ ನಿರಾಸೆ ಆಯ್ತು. ಅಲ್ಲಿ ಹೇಳಲಾಗಿರುವ ಎಲ್ಲ ನಿಯಮಗಳೂ ಎಷ್ಟು ಆಂಬಿಗ್ಯುಯಿಟಿಯಿಂದ ತುಂಬಿವೆ ಎಂದರೆ ಕಳೆದ ಸಾರಿಯಂತೆ ಕ್ಲಾರಿಫಿಕೇಷನ್ ಗಳಿಗೆ ಕ್ಲಾರಿಫಿಕೇಷನ್ ಗಳ ಮತ್ತೊಂದು ಸರಣಿಯನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದು. ಇದೆಲ್ಲ ಬೊಟ್ಟುಮಾಡುವುದು ಹಠಾತ್ ವಿಪತ್ತು ಸನ್ನಿವೇಶಗಳನ್ನು ಎದುರಿಸುವುದಕ್ಕೆ ನಮ್ಮ ತಯಾರಿಯ ಕೊರತೆಯನ್ನೇ.
ಇನ್ನಾದರೂ ಕೊರೊನೋತ್ತರ ಬದುಕಿಗೆ ಸ್ಪಷ್ಟ ಚಿತ್ರಣವೊಂದನ್ನು ತಯಾರಿ ಮಾಡದಿದ್ದರೆ, ದೇಶದ ಆರ್ಥಿಕ – ಸಾಮಾಜಿಕ ಸಂಕಟಗಳು ಎಲ್ಲರನ್ನೂ ಒಟ್ಟಾಗಿ ಮುಳುಗಿಸಲಿವೆ. ಈವತ್ತಲ್ಲ ನಾಳೆ ದೇಶದ ಎಲ್ಲ ಚಟುವಟಿಕೆಗಳಿಗೆ ಅವಕಾಶ ಕೊಡಲೇಬೇಕಾಗುತ್ತದೆ. ಕೊರೊನಾ ನಾಲ್ಕನೇ ಹಂತಕ್ಕೆ ಹರಡದಂತೆ ನಿಗಾ ಇರಿಸಿಕೊಂಡೇ ದೇಶ ಸಹಜ ಚಟುವಟಿಕೆಗಳೊಂದಿಗೆ ಮುನ್ನಡೆಯುವುದು ಹೇಗೆ ಎಂಬ ನಿಖರ ಯೋಜನೆಗಳನ್ನು ಇಂದೇ ಮಾಡದಿದ್ದರೆ, ಈಗ ಆಗುತ್ತಿರುವ ಮುಕ್ಕುಗಳು ಶಾಶ್ವತವಾಗಿ ಉಳಿಯಲಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
