ದಿನದ ಸುದ್ದಿ
ಯಾರು ಈ ಬಿ ಎಂ ಬಶೀರ್ ? ಏನಿದು ವಾರ್ತಾಭಾರತಿ ? ನಾಡು ನುಡಿಗೆ ಇವರ ಕೊಡುಗೆ ಏನು ?

- ರವಿರಾಜ್ ಗೌಡ
ಹಿರಿಯ ಪತ್ರಕರ್ತ ಬಿ ಎಂ ಬಶೀರ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಿ ಬರೆದ ಎರಡೇ ಸಾಲಿನ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿದೆ. ಫೇಸ್ ಬುಕ್ ನಲ್ಲಿ ಯಾರು ಬಶೀರಾ ? ಬಶೀರನ ಸಾಧನೆಗಳು ಏನು ? ನಾವು ಮಾಡಿದ್ದಷ್ಟು ಹೋರಾಟಗಳನ್ನು ಬಶೀರ ಮಾಡಿದ್ದಾನಾ ? ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳಲಾಗುತ್ತಿದೆ.
ಉಪ್ಪಿನಂಗಡಿ ಬಳಿಯ ಮಠ ಎಂಬಲ್ಲಿ ಜನಿಸಿದ ಬಿ ಎಂ ಬಶೀರರು ಪತ್ರಿಕೋದ್ಯಮ ಚಳುವಳಿ ಕಾರಣಕ್ಕಾಗಿಯೇ ಸಹೋದರ ಬಿ ಎಂ ರಶೀದರನ್ನು ಕಳೆದುಕೊಂಡರು. ಲಂಕೇಶ್ ನಲ್ಲಿ ಕೆಲಸ ಮಾಡುತ್ತಿದ್ದ ಬಿ ಎಂ ರಶೀದರ ಅನುಮಾಸ್ಪದ ಸಾವು ಬಿ ಎಂ ಬಶೀರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಿಲ್ಲ. ಅಷ್ಟೊಂದು ಸೈದ್ದಾಂತಿಕ ಬದ್ದತೆ, ದೈರ್ಯವಂತಿಕೆ ಬಿ ಎಂ ಬಶೀರ್ ಗೆ ಇತ್ತು. ಪತ್ರಿಕೋಧ್ಯಮದಲ್ಲಿ ಜನಪರ ಚಳುವಳಿಗಳ ಜೊತೆ ನಿಂತ ಬಿ ಎಂ ಬಶೀರರು ನಾಡಿನ ಚಳುವಳಿಗಳ ಪ್ರಮುಖ ಭಾಗವೇ ಆಗಿದ್ದರು.
ಮುಂಬಯಿನ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ 5 ವರ್ಷಗಳ ಕಾಲ ದುಡಿದ ನಂತರ ಜನವಾಹಿನಿ ಪತ್ರಿಕೆಯಲ್ಲಿ ಹಿರಿಯ ಸಂಪಾದಕರಾಗಿ 5 ವರ್ಷ ಕೆಲಸ ಮಾಡಿದ್ದಾರೆ. ಪ್ರಸ್ತುತ “ವಾರ್ತಾ ಭಾರತಿ” ಕನ್ನಡ ದೈನಿಕದಲ್ಲಿ ಸುದ್ದಿ ಸಂಪಾದಕನಾಗಿ ಕಳೆದ ಹನ್ನೆರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಫೇಸ್ ಬುಕ್, ವಾಟ್ಸಪ್ ಗಳಂತಹ ಸಾಮಾಜಿಕ ಜಾಲತಾಣ ಇಲ್ಲದೇ ಇದ್ದ ಸಂದರ್ಭದಲ್ಲಿ ವಾರ್ತಾಭಾರತಿ ಪತ್ರಿಕೆ ಕನ್ನಡಿಗರು, ರೈತರ ಜೊತೆ ಗಟ್ಟಿಯಾಗಿ ನಿಂತಿತ್ತು.
ವಿಶೇಷ ಅರ್ಥಿಕ ವಲಯಕ್ಕೆ ಒಎನ್ ಜಿಸಿ ಕಂಪನಿಯು 3000 ಎಕರೆ ರೈತರ ಭೂಮಿ ಸ್ವಾಧೀನ ಮಾಡಿದಾಗ ರೈತರ ಜೊತೆ ನಿಂತ ಮೂರು ಪತ್ರಿಕೆಗಳಲ್ಲಿ ವಾರ್ತಾಭಾರತಿಯೂ ಒಂದು. ಅದಕ್ಕಾಗಿ ಅದು ನಷ್ಟ ಮಾಡಿಕೊಂಡಿದ್ದು ಕೋಟಿ ಕೋಟಿ ರೂಪಾಯಿಗಳ ಜಾಹೀರಾತು. ಎಲ್ಲಾ ಪತ್ರಿಕೆಗಳು ಮುಖಪುಟ ಜಾಹೀರಾತು ಹಾಕಿ ಕಂಪನಿ ಪರ ಇದ್ರೆ ವಾರ್ತಾಭಾರತಿ ಮಾತ್ರ ಅಭಿಯಾನದ ರೀತಿಯಲ್ಲಿ ರೈತರ ಪರ ನಿಂತಿತ್ತು.
ಕನ್ನಡ ಸಾಹಿತ್ಯ ಲೋಕಕ್ಕೆ ಬಿ ಎಂ ಬಶೀರರ ಕೊಡುಗೆಯೂ ಮಹತ್ವದ್ದು. ಕನ್ನಡದಲ್ಲಿ ಹನಿಗತೆ ಪ್ರಾಕಾರವನ್ನು ಸಮರ್ಥವಾಗಿ ಬಳಸುತ್ತಿರುವರಲ್ಲಿ ಬಶೀರರು ಪ್ರಮುಖರು. ಜೊತೆಗೆ ಉತ್ತಮ ಕವಿಯೂ ಹೌದು. ಮುಂಬಯಿ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ, ಚಿನ್ನದ ಪದಕದೊಂದಿಗೆ ಎಂ.ಎ. ಪದವಿ ಪಡೆದಿದ್ದ ಬಿ ಎಂ ಬಶೀರರು ಹಲವು ಪುಸ್ತಕಗಳನ್ನು ಬರೆದಿದ್ದಾರೆ.
ಪ್ರವಾದಿಯ ಕನಸು (ಕವನ ಸಂಕಲನ), ಬಾಳೆಗಿಡ ಗೊನೆ ಹಾಕಿತು (ಕಥಾ ಸಂಕಲನ), ಅಂಗೈಯಲ್ಲಿ ಆಕಾಶ (ಹನಿಗತೆಗಳ ಸಂಕಲನ), ಬಾಡೂಟದ ಜೊತೆಗೆ ಗಾಂಧೀ ಜಯಂತಿ (ಲೇಖನಗಳ ಸಂಗ್ರಹ), ನನ್ನ ಮಸೀದಿ ಧ್ವಂಸಗೈದವರಿಗೆ ಕೃತಜ್ಞ-ಸೂಫಿ ಕಣ್ಣಲ್ಲಿ ಹನಿಗಳು(ಹನಿ ಕವಿತೆಗಳು), ಅಮ್ಮ ಹಚ್ಚಿದ ಒಲೆ(ಕವನ ಸಂಕಲನ) ಅವರ ಪ್ರಮುಖ ಪ್ರಕಟಿತ ಪುಸ್ತಕಗಳು. ಈ ರೀತಿಯ ಸಾಹಿತ್ಯ ಸೇವೆಗಾಗಿ ಮುದ್ದಣ ಕಾವ್ಯ ಪ್ರಶಸ್ತಿ, ಮೈಸೂರು ಚದುರಂಗ ಪ್ರತಿಷ್ಥಾನ ಪ್ರಶಸ್ತಿ, ಲಂಕೇಶ್ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.
ಕರಾವಳಿಯ ಮುಸ್ಲಿಂ ಕೋಮುವಾದ ಮತ್ತು ಹಿಂದೂ ಕೋಮುವಾದವನ್ನು ಸಮಾನಾಗಿ ನೋಡುವ ಬಿ ಎಂ ಬಶೀರರು ಎರಡೂ ವರ್ಗಗಳಿಂದ ದಾಳಿಗೆ ಒಳಗಾದವರು. ಎರಡೂ ವಾದಿಗಳ ನೈತಿಕ ಪೊಲೀಸ್ ಗಿರಿ, ಹಿಡನ್ ಅಜೆಂಡಾಗಳನ್ನು ಪತ್ರಿಕೆಯ ಮೂಲಕ ಬಯಲುಗೊಳಿಸಿದವರು. ಎಲ್ಲಾ ಕನ್ನಡ ಪತ್ರಿಕೆಗಳು ಹಿಂದಿ ಗುಲಾಮಗಿರಿ, ಹಿಂದುತ್ವವಾದ, ಶ್ರೀಮಂತರ ಪರ ಇರೋ ಸಂಧರ್ಭದಲ್ಲಿ ಅದರ ಪ್ರವಾಹಕ್ಕೆ ಎದುರಾಗಿ ವಾರ್ತಾಭಾರತಿ ಹಾಗೋ ಹೀಗೋ ಈಜಾಡುತ್ತಾ ಜನರಿಗಾಗಿ ಹೋರಾಡುತ್ತಿದೆ. 25 ವರ್ಷದ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಬದುಕಿನಲ್ಲಿ ಬಿ ಎಂ ಬಶೀರರು ಸಮಾಜಕ್ಕಾಗಿ ತನ್ನ ಕುಟುಂಬದವರನ್ನು, ಹಣವನ್ನು ಕಳೆದುಕೊಂಡರೇ ಹೊರತು ಬಂಗಲೆಗಳನ್ನು ಕಟ್ಟಲಿಲ್ಲ, ಆದಾಯದ ಮೂಲಕ್ಕಾಗಿ ಉದ್ಯಮಗಳನ್ನು ಸ್ಥಾಪಿಸಲಿಲ್ಲ. ಆದ್ದರಿಂದಲೇ ರಾಜಿರಹಿತ ಬದುಕು ಸಾದ್ಯವಾಯಿತು.
ಬಿ ಎಂ ಬಶೀರ್ ಮತ್ತು ಅವರ ಕುಟುಂಬದ ತ್ಯಾಗ, ಬಲಿದಾನದ ಇತಿಹಾಸ, ರಾಜಿರಹಿತ ಪತ್ರಿಕೋದ್ಯಮದ ಹಿನ್ನಲೆಯೇ ಒಂದು ದೊಡ್ಡ ಹೋರಾಟದ ಇತಿಹಾಸ. ಇಂತವರನ್ನು ಯಾವುದೋ ಆಶಯದ ಪ್ರತಿಕ್ರಿಯೆಯನ್ನು ತಿರುಚಿ ಗುರಿಯಾಗಿಸೋದು ಕನ್ನಡದ ಜನ ಚಳುವಳಿಗೆ ಮಾಡುವ ದ್ರೋಹವಲ್ಲದೆ ಇನ್ನೇನೂ ಅಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

-
ನಿತ್ಯ ಭವಿಷ್ಯ6 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ4 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ9 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ8 hours ago
ನಟ ಮನದೀಪ್ ರಾಯ್ ನಿಧನ