ದಿನದ ಸುದ್ದಿ
ಜೂನ್ 7 ರಂದು ಕೃಷಿ ವಿಶ್ವವಿದ್ಯಾಲಯದ 35 ನೇ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ 72 ನೇ ಘಟಿಕೋತ್ಸವ
ಸುದ್ದಿದಿನ,ಧಾರವಾಡ : ಇಲ್ಲಿನ ಕೃಷಿ ವಿಶ್ವವಿದ್ಯಾಲಯದ 35 ನೇ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ 72 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭಗಳು ಜೂನ್ 7 ಮಂಗಳವಾರದಂದು ಪ್ರತ್ಯೇಕವಾಗಿ ನಡೆಯಲಿವೆ.
ಜೂನ್ 7 ರಂದು ಬೆಳಿಗ್ಗೆ 11 ಗಂಟೆಗೆ ಕೃಷಿ ವಿವಿಯ ರೈತರ ಜ್ಞಾನಭಿವೃದ್ಧಿ ಕೇಂದ್ರದಲ್ಲಿ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಥಾವರ್ಚಂದ್ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ 35 ನೇ ಘಟಿಕೋತ್ಸವ ಜರುಗುವುದು. ಐಸಿಎಆರ್ ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಯೋಜನೆಯ ನಿರ್ದೇಶಕ ಡಾ.ರಾಕೇಶ್ಚಂದ್ರ ಅಗರ್ವಾಲ್ ಘಟಿಕೋತ್ಸವ ಭಾಷಣ ಮಾಡುವರು. ಕೃಷಿ ಸಚಿವರು ಹಾಗೂ ವಿವಿಯ ಸಹಕುಲಾಧಿಪತಿಗಳಾದ ಬಿ.ಸಿ. ಪಾಟೀಲ ಉಪಸ್ಥಿತರಿರುವರು ಎಂದು ಕುಲಸಚಿವ ಶಿವಾನಂದ ಕರಾಳೆ ಹಾಗೂ ಕುಲಪತಿ ಡಾ.ಮಹದೇವ ಚೆಟ್ಟಿ ತಿಳಿಸಿದ್ದಾರೆ.
ಕವಿವಿ 72 ನೇ ಘಟಿಕೋತ್ಸವ: ಜೂನ್ 7 ರಂದು ಮಧ್ಯಾಹ್ನ 3 ಗಂಟೆಗೆ ಕವಿವಿಯ ಗಾಂಧೀಭವನದಲ್ಲಿ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಥಾವರ್ಚಂದ್ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ 72 ನೇ ವಾರ್ಷಿಕ ಘಟಿಕೋತ್ಸವ ಜರುಗುವುದು.
ನವದೆಹಲಿಯ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಜನೆಟಿಕ್ ಇಂಜಿನೀಯರಿಂಗ್ ಮತ್ತು ಬಯೋಟೆಕ್ನಾಲಜಿ ಸಂಸ್ಥೆಯ ನಿರ್ದೇಶಕ ಡಾ.ದಿನಕರ ಎಂ. ಸಾಳುಂಕೆ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ, ಐಟಿಬಿಟಿ, ಎಸ್ ಆ್ಯಂಡ್ ಟಿ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವರು ಹಾಗೂ ವಿವಿಯ ಸಮಕುಲಾಧಿಪತಿಗಳಾದ ಡಾ.ಅಶ್ವತ್ಥ್ ನಾರಾಯಣ ಸಿ.ಎನ್ ಉಪಸ್ಥಿತರಿರುವರು. ಜೂನ್ 8 ರಂದು ಬೆಳಿಗ್ಗೆ 10.30 ಕ್ಕೆ ಪಿಎಚ್ಡಿ ಪ್ರಮಾಣಪತ್ರ, ಪಾರಿತೋಷಕ, ಶಿಷ್ಯವೇತನ, ಶ್ರೇಣಿ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು ಎಂದು ಕುಲಸಚಿವ ಯಶಪಾಲ ಕ್ಷೀರಸಾಗರ ಹಾಗೂ ಕುಲಪತಿ ಪ್ರೊ.ಕೆ.ಬಿ.ಗುಡಸಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243