ದಿನದ ಸುದ್ದಿ

ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆಯಾಗಿ 50 ವರ್ಷ; ನೆಹರು ತಾರಾಲಯದಲ್ಲಿ ವಿಶೇಷ ಕಾರ್ಯಕ್ರಮ

Published

on

ಸುದ್ದಿದಿನಡೆಸ್ಕ್:ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆ ಮಾಡಿ ಇಂದಿಗೆ 50 ವರ್ಷಗಳು ಸಂದಿವೆ. 1975ರಲ್ಲಿ ಈ ದಿನದಂದು ಉಡಾವಣೆ ಮಾಡಲಾದ ಈ ಉಪಗ್ರಹಕ್ಕೆ ಪ್ರಾಚೀನ ಭಾರತೀಯ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ ಆರ್ಯಭಟ ಅವರ ಹೆಸರನ್ನು ಇಡಲಾಗಿತ್ತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ ಈ ಉಪಗ್ರಹವನ್ನು ರಷ್ಯಾ ಸಹಾಯದೊಂದಿಗೆ ಕಪುಸ್ಟಿನ್‌ಯಾರ್‌ನಿಂದ ಉಡಾವಣೆ ಮಾಡಲಾಯಿತು.

ಸೌರ ಭೌತಶಾಸ್ತ್ರ, ವಾಯುವಿಜ್ಞಾನ ಮತ್ತು ಎಕ್ಸ್-ರೇ ಖಗೋಳಶಾಸ್ತ್ರ ಸೇರಿದಂತೆ ಇತರೆ ಪ್ರದೇಶಗಳನ್ನು ಅನ್ವೇಷಿಸುವುದು ಈ ಉಪಗ್ರಹದ ಉದ್ದೇಶವಾಗಿತ್ತು. ಕಕ್ಷೆಯಲ್ಲಿ ಐದು ದಿನಗಳನ್ನು ಕಳೆದ ನಂತರ, ಆರ್ಯಭಟ ವಿದ್ಯುತ್ ವೈಫಲ್ಯವನ್ನು ಅನುಭವಿಸಿತು, ಇದರಿಂದಾಗಿ ಎಲ್ಲಾ ಪ್ರಯೋಗಗಳನ್ನು ನಿಲ್ಲಿಸಲಾಯಿತು. ಇದರ ಹೊರತಾಗಿಯೂ, ಅಮೂಲ್ಯವಾದ ದತ್ತಾಂಶವನ್ನು ಸಂಗ್ರಹಿಸಲಾಯಿತು ಮತ್ತು ವಿಜ್ಞಾನಿಗಳಿಗೆ ಉಪಗ್ರಹ ಅಭಿವೃದ್ಧಿಯಲ್ಲಿ ನಿರ್ಣಾಯಕ ಅನುಭವವನ್ನು ಇದು ನೀಡಿತು.

ವೈಫಲ್ಯದ ನಂತರ ಉಪಗ್ರಹವು ಇನ್ನೂ ಕೆಲವು ದಿನಗಳವರೆಗೆ ಮಾಹಿತಿಯನ್ನು ರವಾನಿಸುವುದನ್ನು ಮುಂದುವರೆಸಿತು. ಆರ್ಯಭಟವು ಭಾರತದ ಬಾಹ್ಯಾಕಾಶ ಪರಿಶೋಧನೆಗೆ ಅಡಿಪಾಯವಾಯಿತು ಮತ್ತು ದೇಶದ ಭವಿಷ್ಯದ ಬಾಹ್ಯಾಕಾಶ ಯಾನಗಳಿಗೆ ಪ್ರಮುಖ ಮೈಲಿಗಲ್ಲಾಯಿತು. ಅದರ ಯಶಸ್ವಿ ಉಡಾವಣೆಯೊಂದಿಗೆ, ಭಾರತವು ಕಕ್ಷೆಗೆ ಉಪಗ್ರಹವನ್ನು ಕಳುಹಿಸಿದ ವಿಶ್ವದ 11 ನೇ ರಾಷ್ಟ್ರವೆಂದು ಗುರುತಿಸಲ್ಪಟ್ಟಿತು.

ಇದನ್ನೂ ಓದಿ :

ಜೆಇಇ ಮೇನ್ಸ್ ಫಲಿತಾಂಶ ಪ್ರಕಟ : 24 ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಅಂಕ

ಕಾರ್ಯಕ್ರಮ

ಬೆಂಗಳೂರಿನ ಜವಾಹರ ಲಾಲ್ ನೆಹರು ತಾರಾಲಯದಲ್ಲಿಂದು ಯು.ಆರ್. ರಾವ್ ಉಪಗ್ರಹ ಕೇಂದ್ರ ಮತ್ತು ಜವಾಹರ ಲಾಲ್ ನೆಹರು ತಾರಾಲಯ ಸಹಯೋಗದೊಂದಿಗೆ ಆರ್ಯಭಟ ಉಡಾವಣೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾರತೀಯ ಖಭೌತ ಸಂಸ್ಥೆ ನಿರ್ದೇಶಕರಾದ ಡಾ. ಅನ್ನಪೂರ್ಣಿ ಸುಬ್ರಮಣಿಯಂ, ಯು.ಆರ್. ರಾವ್ ಉಪಗ್ರಹ ಕೇಂದ್ರದ ನಿರ್ದೇಶಕರಾದ ಎಂ. ಶಂಕರನ್, ಅಂತರಿಕ್ಷ ಆಯೋಗದ ಸದಸ್ಯರು, ಇಸ್ರೋ ಮಾಜಿ ಅಧ್ಯಕ್ಷರಾದ ಎ.ಎಸ್. ಕಿರಣ್ ಕುಮಾರ್, ತಾರಾಲಯದ ನಿರ್ದೇಶಕರಾದ ಡಾ. ವಿ.ಆರ್. ಗುರುಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾಜಿ ಇಸ್ರೋ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್, ಭಾರತದ ಶ್ರೇಷ್ಠ ಭೌತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ ವಿಕ್ರಮ್ ಸಾರಾಭಾಯ್, ಭೌತಶಾಸ್ತ್ರಜ್ಞ ಹೋಮಿ. ಜೆ ಭಾಭಾ ರಂತಹ ಭಾರತ ಕಂಡ ದಾರ್ಶನಿಕ ಮಹಾತ್ಮರು ತಮ್ಮ ಅನನ್ಯ ದೃಷ್ಟಿಕೋನದೊಂದಿಗೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ರೂವಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಅವರಿಂದ ಸ್ಫೂರ್ತಿ ಪಡೆದು, ಇಂದಿನ ಯುವಜನರು ದೇಶ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಚಿಂತಿಸಬೇಕು ಎಂದು ಹೇಳಿದರು.

ಉದ್ಘಾಟನಾ ಭಾಷಣದಲ್ಲಿ ಎಂ. ಶಂಕರನ್, ಭಾರತದ ಬಾಹ್ಯಾಕಾಶ ಪಯಣದಲ್ಲಿ ಆರ್ಯಭಟ ಉಪಗ್ರಹ ನಿರ್ವಹಿಸಿದ ಪಾತ್ರ ಕುರಿತು ಸಮಗ್ರ ಚಿತ್ರಣ ನೀಡಿದರು. ಇಲ್ಲಿಯವರೆಗೆ ಭಾರತ 130ಕ್ಕೂ ಅಧಿಕ ಉಪಗ್ರಹಗಳ ಉಡವಾಣೆ ಮಾಡಿದ್ದು, ಇದರಲ್ಲಿ ಶೇಕಡ 50ಕ್ಕಿಂತಲೂ ಹೆಚ್ಚು ಉಪಗ್ರಹಗಳು ಇನ್ನೂ ಕಾರ್ಯ ನಿರ್ವಹಿಸುತ್ತಿವೆ ಎಂದರು.

ಇದೇ ವೇಳೆ ಮಾತನಾಡಿದ ಡಾ. ಅನ್ನಪೂರ್ಣಿ ಸುಬ್ರಮಣಿಯಮ್, ನಮ್ಮ ಪೂರ್ವಜರು, ವಿಜ್ಞಾನಿಗಳು ಬಿಟ್ಟು ಹೋಗಿರುವ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಾಧಿಸುವ ಛಲದೊಂದಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಯಾವುದೇ ಯೋಜನೆಯ ಯಶಸ್ಸಿಗೆ ಆಧಾರಸ್ತಂಭವಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಆರ್ಯಭಟ ಉಪಗ್ರಹದ ಪಯಣದ ಕುರಿತ ಸಮಗ್ರ ಮಾಹಿತಿಯುಳ್ಳ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version