ದಿನದ ಸುದ್ದಿ
ಹಲವು ತಡೆಗೋಡೆಗಳ ನಡುವೆಯೂ ಪ್ರಪಂಚದಾದ್ಯಂತ 69ಮಹಿಳೆಯರು ದೇಶದ ಚುಕ್ಕಾಣಿ ಹಿಡಿದಿದ್ದಾರೆ : ಸಾಮಜಿಕ ಕಾರ್ಯಕರ್ತೆ ಭವ್ಯಾ ನರಸಿಂಹಮೂರ್ತಿ
ಸುದ್ದಿದಿನ, ಬೆಂಗಳೂರು : ದೇಶದ ಜನಸಂಖ್ಯೆಯ ಸುಮಾರು ಅರ್ಧದಷ್ಟಿರುವ ಮಹಿಳೆಯರು ಉನ್ನತ ಸ್ಥಾನಗಳನ್ನು ಅಲಂಕರಿಸುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ಆದರ್ಶರಾಗಿ ನಿಲ್ಲುವಲ್ಲಿ ಗಂಡಿಗಿಂತ ಹಿಂದುಳಿದಿದ್ದಾಳೆ ಎಂದು ಸಾಮಾಜಿಕ ಕಾರ್ಯಕರ್ತೆ ಹಾಗೂ ಕೆಪಿಸಿಸಿಯ ವಕ್ತಾರೆಯಾದ ಭವ್ಯಾ ನರಸಿಂಹಮೂರ್ತಿ ಆತಂಕ ವ್ಯಕ್ತಪಡಿಸಿದರು.
ಮಹಿಳಾ ದಿನಾಚರಣೆಯ ಅಂಗವಾಗಿ ನಗರದ ಸೇಂಟ್ ಜೋಸೆಫ್ ಈವ್ನಿಂಗ್ ಕಾಲೇಜಿನಲ್ಲಿ ಮಾರ್ಚ್ 8 ರಂದು ನಡೆದ ‘ವುಮೆನ್ಸ್ ಲೀಡರ್ ಶಿಪ್‘ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಆಸಕ್ತಿದಾಯಕ ವಿಷಯಗಳನ್ನು ಚರ್ಚಿಸಿ ಹೆಣ್ಣುಮಕ್ಕಳನ್ನು ಸಬಲರಾಗಿರುವಂತೆ ಪ್ರೇರೇಪಿಸಿದರು.
ಮಹಿಳೆಗೆ ಅವಕಾಶಗಳ ಕೊರತೆ ಅಧಿಕಾರವಿಲ್ಲದಿರುವುದು ಪ್ರೋತ್ಸಾಹ ಇಲ್ಲದಂತಹ ಹಲವು ಕಾರಣಗಳಿರಬಹುದು ಆದರೆ ಶಿಕ್ಷಣ ಪಡೆಯುವುದರಿಂದ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಹೆಣ್ಣು ತನ್ನ ಅಸ್ತಿತ್ವವನ್ನು ಜಗತ್ತಿಗೆ ಸಾಬೀತು ಪಡಿಸಬಲ್ಲಳು ಎಂದರು.
ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ಕಷ್ಟವಾಗಿದ್ದ ಸಮಯದಲ್ಲಿ RTE, ಮಧ್ಯಾಹ್ನದ ಬಿಸಿಯೂಟದಂತಹ ಕಾರ್ಯಕ್ರಮಗಳು ಹೆಣ್ಣು ಮಕ್ಕಳನ್ನು ಶಾಲೆಯ ಕಡೆಗೆ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇಷ್ಟೆಲ್ಲದರ ಹೊರತಾಗಿಯೂ ಹೆಣ್ಣು ಮಕ್ಕಳ ಸುರಕ್ಷತೆ ಶಾಲೆಯಲ್ಲಿ ಸಂಭವಿಸಬಹುದಾದಂತಹ ಲೈಂಗಿಕ ಕಿರುಕುಳದಿಂದಾಗಿ ಇಂದು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಹ ವಾತಾವರಣವಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಲವು ತೊಂದರೆಗಳ ನಡುವೆ ಸಿಕ್ಕಿರುವ ಅವಕಾಶಗಳು ಮಹಿಳೆ ಸದ್ವಿನಿಯೋಗ ಪಡಿಸಿಕೊಂಡು ಶೈಕ್ಷಣಿಕವಾಗಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಉದ್ಯೋಗದಲ್ಲಿ ಮಹಿಳೆಯರ ಅವಕಾಶಗಳ ಬಗ್ಗೆ ಬಂದಾಗ ಒಂದೇ ವಿದ್ಯಾರ್ಹತೆಯ ಹೆಣ್ಣು ಗಂಡಿನ ನಡುವೆ ಸ್ಪರ್ಧೆ ಎದುರಾದರೆ ಪುರುಷರಿಗೆ ಆದ್ಯತೆ ನೀಡುವ ಸಾಧ್ಯತೆಗಳೇ ಹೆಚ್ಚಿವೆ, ಹಾಗಾಗಿ ಎಲ್ಲಾ ರಂಗದಲ್ಲೂ ಹೆಣ್ಣಿಗೆ ಮೀಸಲಾತಿ ನೀಡುವ ಮೂಲಕ ಬಾಗಿಲನ್ನು ತೆರೆಯಬೇಕಾಗಿರುವ ಜವಾಬ್ದಾರಿ ಇದೆ ಎಂದು ನುಡಿದರು.
ಸಮೀಕ್ಷೆಗಳ ಪ್ರಕಾರ, ಭಾರತದಲ್ಲಿ 27%ಮಹಿಳೆಯರು 15ವಯಸ್ಸಿಗಿಂತ ಮುಂಚೆಯೇ ಮದುವೆಯಾಗಿ ಸಂಸಾರದ ನೊಗ ಹೊರುತ್ತಿದ್ದಾರೆ.2020ರ ಮಹಿಳಾ ಆಯೋಗದ ವರದಿಯ ಪ್ರಕಾರ 10000 ವರದಕ್ಷಿಣೆ ಕಿರುಕುಳದ ಕೇಸ್ ದಾಖಲಾಗಿದೆ ಜೊತೆಗೆ 15ನಿಮಿಷಕ್ಕೆ ಒಮ್ಮೆ ಒಬ್ಬ ಹೆಣ್ಣು ಮಗಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಇಷ್ಟೆಲ್ಲಾ ತಡೆಗೋಡೆಗಳ ನಡುವೆಯೂ ಭಾರತದಲ್ಲಿ 1747 ಪುರುಷ ಎಂ.ಪಿ.ಗಳಿಗೆ 67ಮಹಿಳೆಯರಿದ್ದಾರೆ. ಪ್ರಪಂಚದಾದ್ಯಂತ 69ಮಹಿಳೆಯರು ದೇಶದ ಚುಕ್ಕಾಣಿ ಹಿಡಿದು ಮುನ್ನಡೆಸುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಸಂವಾದದ ವಿಡಿಯೋ
ಸುದ್ದಿದಿನ.ಕಾಂ|ವಾಟ್ಸಾಪ್|9980346243