ದಿನದ ಸುದ್ದಿ
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (AIBEA) 76ನೇ ಸ್ಥಾಪನಾ ದಿನಾಚರಣೆ
- ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ವತಿಯಿಂದ ಬ್ಯಾಂಕ್ ಗ್ರಾಹಕರಿಗೆ ಹಾಗೂ ಪುಟ್ಪಾತ್ ವ್ಯಾಪಾರಸ್ಥರಿಗೆ ಮಾಸ್ಕ್ ಹಾಗೂ ಸಾನಿಟೈಸರ್ ನೀಡುವ ಮೂಲಕ ಸ್ಥಾಪನಾ ದಿನದ ಆಚರಣೆ.
- ಎ.ಐ.ಬಿ.ಇ.ಎ. ಪ್ರತಿಯೊಬ್ಬ ಬ್ಯಾಂಕ್ ನೌಕರರ ಹೆಮ್ಮೆಯ ಸಂಘ
- ಎ.ಐ.ಬಿ.ಇ.ಎ. ದೇಶ ಪ್ರೇಮಿ ಸಂಘ
ಸುದ್ದಿದಿನ, ದಾವಣಗೆರೆ : ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (AIBEA) 76 ನೇ ಸ್ಥಾಪನಾ ದಿನದ ಅಂಗವಾಗಿ ಇಂದು ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ವತಿಯಿಂದ ಕೆನರಾ ಬ್ಯಾಂಕ್ನ ಮಂಡಿಪೇಟೆ ಮತ್ತು ವಿದ್ಯಾನಗರ ಶಾಖೆಯಲ್ಲಿ ಬ್ಯಾಂಕ್ ಗ್ರಾಹಕರಿಗೆ ಹಾಗೂ ಪುಟ್ಪಾತ್ ವ್ಯಾಪಾರಿಗಳಿಗೆ ಮಾಸ್ಕ್ ಹಾಗೂ ಸಾನಿಟೈಸರ್ ನೀಡುವ ಮೂಲಕ ಹಾಗೂ ಕೊರೋನಾ ಸಾಂಕ್ರಾಮಿಕ ರೋಗದ ಬಗ್ಗೆ ತಿಳುವಳಿಕೆ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ನ ರಾಜ್ಯ ಉಪಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು 1946 ರ ಎಪ್ರಿಲ್ 20 ರಂದು ಬ್ಯಾಂಕ್ ಉದ್ಯೋಗಿಗಳ ಪ್ರಪ್ರಥಮ ಸಂಘಟನೆಯಾಗಿ ಸ್ಥಾಪನೆಗೊಂಡಿತು. ಸ್ಥಾಪನೆಯಾದ ದಿನದಿಂದಲೂ ಬ್ಯಾಂಕ್ ಉದ್ಯೋಗಿಗಳ ಪರವಾಗಿ ಹೋರಾಟ ಮಾಡಿ ಬ್ಯಾಂಕ್ ನೌಕರರಿಗೆ ಅನೇಕ ಸೌಲಭ್ಯಗಳನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದರು.
1960 ರ ದಶಕದಲ್ಲಿ ಬ್ಯಾಂಕ್ ರಾಷ್ಟ್ರೀಕರಣಕ್ಕಾಗಿ ಸುದೀರ್ಘವಾದ ಹೋರಾಟ ಮಾಡಿ 1969ರಲ್ಲಿ ಬ್ಯಾಂಕ್ ರಾಷ್ಟ್ರೀಕರಣಕ್ಕೆ ಕಾರಣವಾದ ಏಕೈಕ ಬ್ಯಾಂಕ್ ಸಂಘಟನೆ ಎಂಬ ಕೀರ್ತಿಗೆ ಭಾಜನವಾಯಿತು. ಬ್ಯಾಂಕ್ ರಾಷ್ಟ್ರೀಕರಣದ ಮೂಲಕ ಲಕ್ಷಾಂತರ ನಿರುದ್ಯೋಗಿಗಳಿಗೆ ಬ್ಯಾಂಕ್ ಉದ್ಯೋಗ ಹಾಗೂ ಕೊಟ್ಯಾಂತರ ನಿರುದ್ಯೋಗಿಗಳಿಗೆ ಬ್ಯಾಂಕ್ ಸಾಲವನ್ನು ನೀಡಿ ಸ್ವ ಉದ್ಯೋಗ ಮಾಡಲು ಅವಕಾಶ ಕಲ್ಪಿಸಲಾಯಿತು.
ಬ್ಯಾಂಕ್ನಲ್ಲಿ ಖಾಲಿಯಿರುವ ಅನೇಕ ಖಾಯಂ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲು ಕೂಡ ಸಂಘದ ವತಿಯಿಂದ ಹೋರಾಟವನ್ನು ಮಾಡಲಾಯಿತು. ಬ್ಯಾಂಕ್ ಉದ್ಯೋಗಿಗಳ ಉದ್ಯೋಗ ಭದ್ರತೆಗೆ ಹೋರಾಡಿ ಜಯಗಳಿಸಿದ ಪರಿಣಾಮವಾಗಿ ಇಂದಿಗೂ ಅಸಂಖ್ಯಾತ ಯುವಕರು ತಾವು ಇಂಜಿನಿಯರಿಂಗ್, ಎಮ್.ಬಿ.ಎ., ಎಮ್.ಸಿ.ಎ., ಮೊದಲಾದ ಉನ್ನತ ಶಿಕ್ಷಣ ಪದವಿಯನ್ನು ಹೊಂದಿದ್ದರೂ ಸಹ ಬ್ಯಾಂಕ್ ಉದ್ಯೋಗಕ್ಕೆ ಭದ್ರತೆ ಇರುವ ಕಾರಣಕ್ಕಾಗಿ ಬ್ಯಾಂಕ್ ನೌಕರಿಯನ್ನೇ ಅರಸಿಕೊಂಡು ಬರುತ್ತಿದ್ದಾರೆ ಎಂದು ನುಡಿದರು.
1991 ರಲ್ಲಿ ಆರಂಭವಾದ ಖಾಸಗೀಕರಣ, ಜಾಗತೀಕರಣ ಮತ್ತು ಉದಾರೀಕರಣದ ನೀತಿಗಳ ವಿರುದ್ಧವೂ ನಿರಂತರವಾಗಿ ಹೋರಾಡಿದ ಶ್ರೇಯಸ್ಸು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಕ್ಕೆ ಸಲ್ಲುತ್ತದೆ. ಬ್ಯಾಂಕ್ ನೌಕರರ ಶ್ರೇಯೋಭಿವೃದ್ಧಿಗಾಗಿ ಹೋರಾಡುವುದರ ಜೊತೆ ಜೊತೆಗೆ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯ ಉಳಿವಿಗಾಗಿ, ಅಸಂಘಟಿತ ವಲಯದ ನೌಕರರ ಹಕ್ಕಿಗಾಗಿ, ಬ್ಯಾಂಕ್ ಖಾಸಗಿಕರಣದ ವಿರುದ್ಧ, ವಿದೇಶೀ ನೇರ ಬಂಡವಾಳದ ಒಳ ಹರಿವಿನ ವಿರುದ್ದ, ಆಳುವ ಸರಕಾರಗಳ ಕಾರ್ಮಿಕ ವಿರೋಧಿ ಧೋರಣೆಗಳ ವಿರುದ್ಧ ಅವಿರತವಾಗಿ ಸಂಘವು ಹೋರಾಡಿದೆ ಎಂದು ಹೇಳಿದರು.
“ಬ್ಯಾಂಕಿಂಗ್ ಸೌಲಭ್ಯವು ಪ್ರತಿಯೊಬ್ಬ ಭಾರತೀಯನ ಮೂಲಭೂತ ಹಕ್ಕಾಗಬೇಕು ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಗಳಿಸುವ ಲಾಭವು ದೇಶದ ಜನರ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕೇ ವಿನಹ ಖಾಸಗೀ ಬಂಡವಾಳಷಾಹಿಗಳ ಲೂಟಿಗಾಗಿ ಅಲ್ಲ” ಎನ್ನುವುದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಸ್ಪಷ್ಟವಾದ ನಿಲುವಾಗಿದೆ. ಇದಕ್ಕಾಗಿ ಸತತವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಕಾಂII ಪ್ರಭಾತ್ಕರ್, ಕಾಂII ಹೆಚ್.ಎಲ್.ಪರ್ವಾನಾ, ಕಾಂII ಡಿ.ಪಿ.ಚಡ್ಡಾ, ಕಾಂII ತಾರಕೇಶ್ವರ್ ಚಕ್ರವರ್ತಿ, ಕಾಂII ಏಕನಾಥ್ ಪೈ, ಕಾಂII ಸಿ.ಸುಬ್ರಹ್ಮಣ್ಯನ್ ಮೊದಲಾದ ಮಹಾನ್ ನಾಯಕರುಗಳು ತಮ್ಮ ಜೀವನವನ್ನೇ ಬ್ಯಾಂಕ್ ನೌಕರರ ಸಂಘಟನೆಗಾಗಿ ಮುಡಿಪಾಗಿಟ್ಟ ಮಹಾನ್ ಚೇತನಗಳು. ಪ್ರಸ್ತುತ ಕಾಂII ಸಿ.ಹೆಚ್.ವೆಂಕಟಾಚಲಂ.
ಕಾಂII ಹೆಚ್.ವಸಂತ ರೈ, ಕಾಂII ಪಿ.ಸುಂದರೇಶನ್, ಕಾಂII ಅಜಯ್ ಮಾಂಜ್ರೇಕರ್, ಕಾಂII ಸಿ.ಎಸ್.ವೇಣುಗೋಪಾಲ್, ಕಾಂII ಪಿ.ಆರ್.ಕಾರಂತ್, ಕಾಂII ರಾಮಕೃಷ್ಣ ರೆಡ್ಡಿ, ಕಾಂII ಜಯನಾಥ್ ಮೊದಲಾದವರ ಸಾರಥ್ಯದಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಅತ್ಯಂತ ಸಮರ್ಥವಾಗಿ ಮುನ್ನಡೆಯುತ್ತಿದೆ.
ಕಳೆದ 75 ವರ್ಷಗಳ ಅವಧಿಯಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ನೆರಳಿನಲ್ಲಿ ಲಕ್ಷಾಂತರ ಬ್ಯಾಂಕ್ ನೌಕರರು ನೆಮ್ಮದಿಯ ಹಾಗೂ ಸುಭದ್ರವಾದ ಜೀವನವನ್ನು ಕಂಡಿದ್ದಾರೆ. ಪ್ರತಿಯೊಬ್ಬ ಬ್ಯಾಂಕ್ ನೌಕರರು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವನ್ನು ಅಭಿಮಾನದಿಂದ, ಹೆಮ್ಮೆಯಿಂದ “ಇದು ನಮ್ಮ ಸಂಘ” – “ಇದು ನಮ್ಮ ಎ.ಐ.ಬಿ.ಇ.ಎ.” ಎಂದು ಗರ್ವದಿಂದ ಹೇಳಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ಆನಂದಮೂರ್ತಿ, ಕೆನರಾ ಬ್ಯಾಂಕ್ ವಿದ್ಯಾನಗರ ಶಾಖೆಯ ಮುಖ್ಯ ಪ್ರಬಂಧಕ ಆರ್.ಬಿ.ಸಂಜೀವಪ್ಪ, ಕೆನರಾ ಬ್ಯಾಂಕ್ ವರ್ಕಮೆನ್ ಎಂಪ್ಲಾಯೀಸ್ ಯೂನಿಯನ್ನ ಕೇಂದ್ರ ಸಮಿತಿ ಸದಸ್ಯ ಆರ್.ಆಂಜನೇಯ, ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ನ ಪದಾಧಿಕಾರಿಗಳಾದ ಕೆ.ರಾಘವೇಂದ್ರ ನಾಯರಿ, ಕೆ.ವಿಶ್ವನಾಥ ಬಿಲ್ಲವ, ಸಿ.ಪರಶುರಾಮ ಹಾಗೂ ಕಾಡಜ್ಜಿ ಎನ್.ವೀರಪ್ಪ, ಕೆ.ಶಶಿಶೇಖರ್, ದಾದಾಪೀರ್. ಸಿದ್ದಲಿಂಗೇಶ್ ಕೋರಿ, ಕೆ.ಸುನಂದಮ್ಮ, ಡಿ.ಎಮ್.ಆನಂದಕುಮಾರ್, ಎಮ್. ಸಂದೀಪ್, ಡಿ.ಎ.ಸಾಕಮ್ಮ, ಬಿ.ಎನ್.ಶ್ವೇತಾ, ಆಶಾ ವಿದ್ಯಾಸಾಗರ್, ದರ್ಶನ್, ಡಿ.ಎ.ರವಿ, ಅಂಬರೀಶ್ ಮುಂತಾದವರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243