ದಿನದ ಸುದ್ದಿ

ಆಂದೋಲನ-ಈ ಜೀವ ಈ ಜೀವನ | ಅಂಗನವಾಡಿ ಕಾರ್ಯಕರ್ತೆಯ ಅಸಾಮಾನ್ಯ ಕರ್ತವ್ಯಪ್ರಜ್ಞೆ..!

Published

on

  • ಪಂಜು ಗಂಗೊಳ್ಳಿ, ವ್ಯಂಗ್ಯಚಿತ್ರಕಾರರು, ಮುಂಬೈ

28 ವರ್ಷ ಪ್ರಾಯದ ರೆಲು ವಸಾವೆ ಮಹಾರಾಷ್ಟ್ರದ ನಂದೂಬರ್ಾರ್ ಜಿಲ್ಲೆಯ ಆದಿವಾಸಿ ಪ್ರದೇಶದ, ಚಿಮಲ್ಖೇಡಿ ಎಂಬ ಹಳ್ಳಿಯ ಒಬ್ಬರು ಅಂಗನವಾಡಿ ಕಾರ್ಯ್ಯಕರ್ತೆ. ಈ ಹಳ್ಳಿಗೆ ರಸ್ತೆಗಳಿಲ್ಲ. ಹಾಗಾಗಿ, ಆ ಪ್ರದೇಶದ ಜನ ಎಲ್ಲಿಗೇ ಹೋಗಬೇಕಿದ್ದರೂ ದೋಣಿಯಲ್ಲಿ ಕುಳಿತು, ನರ್ಮದಾ ನದಿಯನ್ನು ದಾಟಬೇಕು.

ಚಿಮಲ್ಖೇಡಿಯೂ ಸೇರಿ ಏಳು ಹಳ್ಳಿಗಳ ಗರ್ಭಿಣಿಯರು ಮತ್ತು ಆರು ವರ್ಷದೊಳಗಿನ ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡುವುದು, ಅವರಿಗೆ ಸರ್ಕಾರ ನಿಗದಿಪಡಿಸಿದ ಔಷಧಿ, ಹಾಲು, ಮೊಟ್ಟೆ ಮೊದಲಾದ ಪೋಷಕಾಂಶಯುಕ್ತ ಆಹಾರ ಒದಗಿಸುವುದು. ಸಾಮಾನ್ಯ ಸಂದರ್ಭಗಳಲ್ಲಿ ಮಕ್ಕಳು, ಮಹಿಳೆಯರು ದೋಣಿಯಲ್ಲಿ ಕುಳಿತು ತಾವೇ ಅಂಗನವಾಡಿ ಕೇಂದ್ರಕ್ಕೆ ಬರುತ್ತಾರೆ.

ಆದರೆ, ಕೆಲವು ವಿಶೇಷ ಅಥವಾ ತುರ್ತು ಸಂದರ್ಭಗಳಲ್ಲಿ, ರೆಲು ವಸಾವೆ ತಾವೇ ದೋಣಿಯಲ್ಲಿ ಅವರ ಮನೆಗಳಿಗೆ ಹೋಗಿ, ಲಸಿಕೆ ಹಾಕುವುದು, ಔಷಧಿನೀಡುವುದು ಮಾಡಬೇಕಾಗುತ್ತದೆ. ಬೆಳಗಿನ ಏಳುವರೆಗೆ ತನ್ನ ಅಂಗನವಾಡಿ ಕೇಂದ್ರಕ್ಕೆ ಹೋಗಿ, ಮಧ್ಯಾಹ್ನದ ತನಕ ಅಲ್ಲಿ ಕೆಲಸ ಮಾಡುತ್ತಾರೆ. ನಂತರ, ಔಷಧಿ, ಆಹಾರವಸ್ತು ಮತ್ತು ಮಕ್ಕಳನ್ನು ತೂಗುವ ತಕ್ಕಡಿ ಮೊದಲಾದವುಗಳನ್ನು ಹಿಡಿದುಕೊಂಡು, ದೋಣಿಯಲ್ಲಿ ಕುಳಿತು, ತನ್ನ ಕ್ಷೇತ್ರಮಿತಿಯಲ್ಲಿ ಬರುವ ಹಳ್ಳಿಗಳ ಮಕ್ಕಳು, ಗರ್ಭಿಣಿ ಯರ ಮನೆಗಳ `ಕ್ಷೇತ್ರ ಭೇಟಿ(ಫೀಲ್ಡ್ ವಿಸಿಟ್)’ಗಳಿಗೆ ಹೋಗುವುದು ಇವರು ಪ್ರತಿದಿನ ಮಾಡಬೇಕಾದ ಕೆಲಸ.

ಹೀಗೇ ನಡೆಯುತ್ತಿದ್ದ ರೆಲು ವಸಾವೆಯೆ ದಿನಚರಿಗೆ ಕೋವಿಡ್ ದಾಳಿಯ ಹಿನ್ನೆಲೆಯಲ್ಲಿ ಹೇರಲಾದ ಲಾಕ್ ಡೌನ್ ಭಾರೀ ಹೊಡೆತ ನೀಡಿತು. ಮಕ್ಕಳು ಮತ್ತು ಗಭರ್ಿಣಿಯರು ಅಂಗನವಾಡಿ ಕೇಂದ್ರಗಳಿಗೆ ಬರುವುದು ಸಂಪೂರ್ಣವಾಗಿ ನಿಂತಿತು. ರೆಲು ಸ್ವತಃ ಅವರುಗಳ ಮನೆಗೆ ಹೋಗಲಾಗದಂತಹ ಪರಿಸ್ಥಿತಿ. ಏಕೆಂದರೆ, ಹೊಳೆ ದಾಟಲು ದೋಣಿ ನಡೆಸಲು ಯಾರೂ ಮುಂದೆ ಬಾರರು. ಬಂದರೂ, ಅವರ ಸಮಯಕ್ಕೆ ಅನುಗುಣವಾಗಿ ರೆಲು ತನ್ನ ದಿನಚರಿಯನ್ನು ಹೊಂದಿಸಕೊಳ್ಳಬೇಕಾಗಿತ್ತಾದುದರಿಂದ, ಅವರ ಸಾಮಾನ್ಯ ದಿನಚರಿ ಅಸ್ತವ್ಯಸ್ತವಾಗುತ್ತಿತ್ತು. ಆದರೆ, ರೆಲು ಅಷ್ಟು ಬೇಗನೆ ತನ್ನ ಕರ್ತವ್ಯ ಪಾಲನೆಯಿಂದ ಹಿಮ್ಮಖರಾಗಲು ತಯಾರಿರಲಿಲ್ಲ. ಆಗ ಸ್ವತಃ ಅವರೇ ದೋಣಿ ನಡೆಸಿ, ತನ್ನ ಕರ್ತವ್ಯವನ್ನು ಪಾಲಿಸಲು ಮುಂದಾದರು!

ಏಪ್ರಿಲ್ ತಿಂಗಳಲ್ಲಿ ಅವರು ಸ್ಥಳೀಯ ಮೀನುಗಾರರೊಬ್ಬರಿಂದ ಒಂದು ಚಿಕ್ಕ ದೋಣಿಯನ್ನು ಕೇಳಿ ಪಡೆದರು. ಹೋಗುವ ಮತ್ತು ಬರುವ ಒಟ್ಟು ದೂರ 14 ಕಿಮಿ. ಎರಡೂ ಕೈಗಳಿಂದ ಹುಟ್ಟು ಹಾಕಿ, ಅಷ್ಟು ದೂರ ದೋಣಿ ನಡೆಸಲು ಅಪಾರ ದೈಹಿಕ ಶ್ರಮದ ಜೊತೆ ಅಷ್ಟೇ ಧೈರ್ಯ, ಆತ್ಮವಿಶ್ವಾಸವೂ ಬೇಕು. ಅದೂ ಅಲ್ಲದೆ, ರೆಲು ಚಿಕ್ಕಂದಿನಿಂದಲೂ ಹೊಳೆಯನ್ನು ನೋಡಿ ಬೆಳೆದವರಾದರೂ, ಹೀಗೆ ದೋಣಿ ನಡೆಸುವುದು ಅವರಿಗೆ ಮೊದಲ ಅನುಭವ. ಆದರೆ, ಕರ್ತವ್ಯಪ್ರಜ್ಞೆ ಅವರಿಗೆ ಇವೆಲ್ಲವನ್ನು ಹಿಮ್ಮೆಟ್ಟುವ ಅಪಾರ ಆತ್ಮವಿಶ್ವಾಸ ಮತ್ತು ಮಾನಸಿಕ ಸ್ಥೈರ್ಯವನ್ನು ನೀಡಿತು.

14 ಕಿಮಿ. ದೋಣಿ ನಡೆಸಿದ ನಂತರ, ಆದಿವಾಸಿಗಳ ಮನೆಗಳಿಗೆ ಹೋಗಲು ಸಾಮಾನುಗಳನ್ನು ಹೊತ್ತುಕೊಂಡು, ಗುಡ್ಡಗಳನ್ನು ಹತ್ತಿ ಇಳಿದು, ಕಾಲ್ನಡಿಗೆಯಲ್ಲಿ ಹೋಗಬೇಕು. ಮಳೆಗಾಲದ ತಿಂಗಳುಗಳಲ್ಲಿ ಮಳೆಯ ಜೊತೆ ನದಿಯಲ್ಲಿ ನೀರು ತುಂಬಿ ಹರಿಯುವಾಗ ರೆಲು ಗಾಬರಿಯಾಗುತ್ತಿದ್ದರೂ, ಕರ್ತವ್ಯಪ್ರಜ್ಞೆ ಅವರನ್ನು ಸೆಟೆದು ನಿಲ್ಲಿಸುತ್ತಿತ್ತು. ಹುಟ್ಟು ಹಾಕಿ ದೋಣಿ ನಡೆಸಿ, ಗುಡ್ಡಗಳನ್ನು ಹತ್ತಿಳಿದು, ಸಂಜೆ ಹೊತ್ತು ಮನೆ ತಲುಪಿದಾಗ, ಕೈಗಳಿಗೆ ಜೋಮು ಹಿಡಿದು, ಇಡೀ ಶರೀರ ಸುಸ್ತಾಗಿದ್ದರೂ, ಗಂಡ ಮತ್ತು ಇಬ್ಬರು ಚಿಕ್ಕ ಮಕ್ಕಳಿಗೆ ಅಡುಗೆ ಮಾಡುತ್ತಿದ್ದರು. ಅವರ ಗಂಡ ರಮೇಶ್ ಕೂಡಾ ಹೆಂಡತಿಯ ಕರ್ತವ್ಯಪ್ರಜ್ಞೆಯನ್ನು ಮನಸಾ ಕೊಂಡಾಡುತ್ತಾರೆ.

ಬಿಗಿ ಲಾಕ್ ಡೌನ್ನ ದುರಿತ ಕಾಲದಲ್ಲೂ ರೆಲು ವಸಾವೆ ತನ್ನ ಕರ್ತವ್ಯವನ್ನು ಪಾಲಿಸಲು ಹಿಂಜರಿಯದ ಕಾರಣ, 7 ಜನ ಗರ್ಭಿಣಿಯರು, 25 ನವಜಾತ ಶಿಶುಗಳು ಮತ್ತು ಸುಮಾರು 138 ಮಕ್ಕಳು, ನಿಯಮಿತವಾಗಿ ಮೂಲಭೂತ ಸೌಲಭ್ಯಗಳಾದ ಔಷಧಿ ಮತ್ತು ಪೋಷಕಾಂಶಯುಕ್ತ ಆಹಾರ ಪಡೆಯಲು ಸಾಧ್ಯವಾಯಿತು. ರೆಲು ವಸಾವೆಯ ಈ ಅಸಾಮಾನ್ಯ ಕರ್ತವ್ಯಪ್ರಜ್ಞೆಯನ್ನು ಗುರುತಿಸಿ, ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಪರಿಷತ್ ಅವರನ್ನು ಕೊಂಡಾಡಿ, ಸನ್ಮಾನಿಸಿದರೂ, ಆ ಏಳು ಹಳ್ಳಿಗಳ ಜನತೆ ಇವರ ಋಣವನ್ನು ಅಷ್ಟು ಸುಲಭದಲ್ಲಿ ತೀರಿಸಲಾರರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version