ರಾಜಕೀಯ
ದಿಲ್ಲಿ ‘ಆಪ್’ ಗೆಲುವಿನ ವ್ಯಾವಹಾರಿಕ ಅಪಾಯಗಳು..!
- ರಾಜಾರಾಮ್ ತಲ್ಲೂರ್
“ಗೆಲ್ಲುವ ಕುದುರೆ”ಗಳನ್ನು ಗುರುತಿಸಿ ಖರೀದಿಸುವ ವ್ಯಾವಹಾರಿಕ ಚಾಣಾಕ್ಷತೆ ಭಾರತದ ರಾಜಕೀಯಕ್ಕೆ ತಟ್ಟಿರುವ ಹೊಸಪಿಡುಗು. ಸ್ವತಃ ಬಿಜೆಪಿ ತಂದ ಈ ಚಾಣಾಕ್ಷತೆಯ ಮುಳ್ಳನ್ನು ಆಪ್ ದಿಲ್ಲಿಯಲ್ಲಿ ಅದೇ ಮುಳ್ಳಿನಿಂದ ಎದುರಿಸಿದೆ ಮತ್ತು ಮುಳ್ಳನ್ನು ಮುಳ್ಳಿನಿಂದಲೇ ಕೀಳುವಲ್ಲಿ ಯಶಸ್ಸನ್ನೂ ಕಂಡಿದೆ.
ಒಂದು ರಾಜಕೀಯ ಪಕ್ಷ ತನಗೆ ಜನತೆ ಆಯ್ದುಕೊಟ್ಟ ತನ್ನ ಜನಪ್ರತಿನಿಧಿಯನ್ನು ಆತನ/ಆಕೆಯ ಕರ್ತವ್ಯ ನಿರ್ವಹಣಾ ಸಾಮರ್ಥ್ಯದ ಆಧಾರದಲ್ಲಿ ಚುನಾವಣೆಯ ನಿಕಷಕ್ಕೆ ಒಡ್ಡುವ ಮೊದಲೇ ಹಿಂತೆಗೆದುಕೊಂಡು ಚುನಾವಣೆಯ ಹೊತ್ತಿಗೆ ಹೊಸಮುಖವನ್ನು ಜನತೆಯ ಮುಂದೊಡ್ಡುವುದು ದೀರ್ಘಕಾಲಿಕ ರಾಜಕೀಯದ ಆರೋಗ್ಯದ ದ್ರಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ.
ಈ ಬಾರಿ ಚುನಾವಣೆಯಲ್ಲಿ ಆಪ್ ಪಕ್ಷ ತನ್ನ ಸಿಟ್ಟಿಂಗ್ ಎಮ್ಮೆಲ್ಲೆಗಳಲ್ಲಿ 15 ಮಂದಿಯನ್ನು ಬದಲಾಯಿಸಿ, ಹೊಸ ಮುಖಗಳನ್ನು ಚುನಾವಣೆಗಿಳಿಸಿತ್ತು. ಆ ಹದಿನೈದೂ ಮಂದಿ ಈಗ ಮರುಚುನಾಯಿತರಾಗಿದ್ದಾರೆ. ಸಹಜವಾಗಿಯೇ ಆ ಹದಿನೈದು ಸೀಟುಗಳು ಆಪ್ ಗೆ ಕಳೆದುಕೊಳ್ಳುವ ಭಯ ಇದ್ದ ಸೀಟುಗಳು.
ಆಪ್ ಬಿಟ್ಟು ಬಿಜೆಪಿ ಸೇರಿದ ಮೂವರಲ್ಲಿ ಒಬ್ಬರು (ದೇವೀಂದರ್ ಶೇರಾವತ್ – ಬಿಜ್ವಾಸಾನ್) ಮಾತ್ರ ಜಯಗಳಿಸಿದ್ದು, ಉಳಿದಿಬ್ಬರು (ಗಾಂಧೀನಗರ್, ಕಾರಾವಾಲ್ ನಗರ್) ಆಪ್ ಎದುರು ಸೋತಿದ್ದಾರೆ. ಆಪ್ ಬಿಟ್ಟ ಅಲ್ಕಾ ಲಾಂಬಾ (ಚಾಂದನಿ ಚೌಕ್), ಸಂದೀಪ್ ಸಿಂಗ್ (ಸುಲ್ತಾನ್ ಪುರ್ ಮಾಜ್ರಾ) ಕೂಡ ಸೋತಿದ್ದಾರೆ.
ಹಿಂದಿನ ಅಸೆಂಬ್ಲಿಯಲ್ಲಿ 3 ಸೀಟು ಹೊಂದಿದ್ದ ಬಿಜೆಪಿ ಎರಡು ಸೀಟುಗಳನ್ನು ಮಾತ್ರ ಉಳಿಸಿಕೊಂಡಿದ್ದು ಒಂದನ್ನು ಆಪ್ ಗೆ ಕಳೆದುಕೊಂಡಿದೆ. ಅಕಾಲಿ ದಳದ ಕೈಲಿದ್ದ ರಜೌರಿ ಗಾರ್ಡನ್ ಆಪ್ ಪಾಲಾಗಿದೆ. BJP ಹೊಸದಾಗಿ ಗೆದ್ದದ್ದು 5 ಸೀಟುಗಳನ್ನು ಮಾತ್ರ.
ಹೀಗೆ ಕೊಡುಕೊಳ್ಳುವ ವ್ಯವಹಾರಗಳ ರಾಜಕೀಯದಿಂದ ಸೋಲುವುದು ತಳಮಟ್ಟದಲ್ಲಿ ಕೆಲಸಮಾಡುವ ಪಕ್ಷ ಕಾರ್ಯಕರ್ತರು. ಪಕ್ಷ ಯಾವುದೇ ಇದ್ದರೂ ಇದು ಸತ್ಯ. ತಳಮಟ್ಟದ ಪ್ರಾಮಾಣಿಕತೆಗೆ ಬೆಲೆಕೊಡದ, ನೈತಿಕ ಬೇರು ಗಟ್ಟಿ ಇಲ್ಲದ “ವ್ಯಾವಹಾರಿಕ” ರಾಜಕೀಯ ದೇಶದ ಜನ ಸಾಮಾನ್ಯನ ಆಶೋತ್ತರಗಳನ್ನು ಶಾಸನಸಭೆಗಳಲ್ಲಿ ಪ್ರತಿನಿಧಿಸಲಾರವು; ಜನಹಿತಕ್ಕನುಸಾರವಾಗಿ ಈಡೇರಿಸಲಾರವು… ಇದೆಲ್ಲ ಏನಿದ್ದರೂ ಶಾರ್ಟ್ ಟರ್ಮ್ ಫಾಯಿದೆ ನೋಡುವ ರಾಜಕೀಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243