ದಿನದ ಸುದ್ದಿ

ಬಂಡೀಪುರ ಬೆಂಕಿ ನಿಯಂತ್ರಣಕ್ಕೆ ‌ ವಾಯುಪಡೆ ಕಾರ್ಯಾಚರಣೆ ಆರಂಭ : ಹೆಚ್.ಡಿ.ಕೆ

Published

on

ಸುದ್ದಿದಿನ, ಬೆಂಗಳೂರು : ಬಂಡೀಪುರ ಮೀಸಲು ಅರಣ್ಯದಲ್ಲಿನ ಅಗ್ನಿ ಅನಾಹುತವನ್ನು ತಕ್ಷಣ ತಹಬಂದಿಗೆ ತರುವ ಬಗ್ಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಅರಣ್ಯ ಮತ್ತು ಅಗ್ನಿಶಾಮಕ ಕಾರ್ಯದರ್ಶಿಗಳ ಜೊತೆಗೆ ಮಾತುಕತೆ ನಡೆಸಿದ ಅವರು ಇಲ್ಲಿಯವರೆಗೆ ಅಗ್ನಿ ನಂದಿಸಲು ನಡೆದಿರುವ ಕಾರ್ಯಾಚರಣೆಯನ್ನು ಪರಿಶೀಲಿಸಿದರು.

ಬಂಡೀಪುರದಲ್ಲಿ ಬೆಂಕಿ ವ್ಯಾಪಿಸದಿರುವ ನಿಟ್ಟಿನಲ್ಲಿ ವಾಯುದಳದ ಸಹಾಯ ಪಡೆಯುವ ಬಗ್ಗೆ ಮುಖ್ಯಮಂತ್ರಿಗಳು ವಾಯುಪಡೆ ಮುಖ್ಯಸ್ಥರೊಂದಿಗೆ ಮಾತನಾಡಿದರು. ವಾಯುದಳದ ಮುಖ್ಯಸ್ಥರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕಾರ್ಯಾಚರಣೆ ಆರಂಭವಾಗಿದೆ.

ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಥಳದಲ್ಲಿಯೇ ಇದ್ದು, ಮುಖ್ಯಮಂತ್ರಿಗಳು ಕಾರ್ಯಾಚರಣೆಯ ಎಲ್ಲಾ ಮಾಹಿತಿಯನ್ನು ಕಾಲ ಕಾಲಕ್ಕೆ ಪಡೆಯುತ್ತಿದ್ದಾರೆ. ಬಂಡೀಪುರದಲ್ಲಿ ಬೆಂಕಿ ನಿಯಂತ್ರಣಕ್ಕೆ ಬೇಕಾದ ಎಲ್ಲಾ ಪೂರಕ ಸಹಾಯ ಸೌಲಭ್ಯಗಳನ್ನು ತಕ್ಷಣವೇ ಒದಗಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಹಿರಿಯ ಅಧಿಕಾರಿಗಳು ಹಾಗೂ ಹೆಚ್ಚ್ಚುವರಿ ಸಿಬ್ಬಂದಿಯನ್ನು ತಕ್ಷಣ ಸ್ಥಳಕ್ಕೆ ಕಳಿಸಲು ತಿಳಿಸಿದರು.

ಇಡೀ ಕಾರ್ಯಾಚರಣೆಯನ್ನು ಖುದ್ದು ಮೇಲುಸ್ತುವಾರಿ ವಹಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.ಈ ಮಧ್ಯೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ಬಂಡೀಪುರ ಅರಣ್ಯ ಪ್ರದೇಶಕ್ಕೆ ಸಾರ್ವಜನಿಕರು ಭೇಟಿ ನೀಡಬಾರದು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version