ಬಹಿರಂಗ

ಹುತಾತ್ಮ ಭಗತ್ ಸಿಂಗ್ ಮತ್ತು ಪ್ರಸ್ತುತ ಭಾರತ

Published

on

 

  • ಕೆ. ವಾಸುದೇವರೆಡ್ಡಿ
    ಎಸ್ಎಫ್ಐ ರಾಜ್ಯ ಕಾರ್ಯದರ್ಶಿ

ಪ್ಪಟ ದೇಶಪ್ರೇಮಿಗಳಾದ ಭಗತ್ ಸಿಂಗ್, ರಾಜಗುರು,ಸುಖದೇವ್ ರನ್ನು ಬ್ರಿಟಿಷ್ ಸರ್ಕಾರ 1931 ಮಾರ್ಚ್ 23 ನೇಣಿಗೇರಿಸಿತು. ಬ್ರಿಟಿಷ್ ಸಾಮ್ರಾಜ್ಯಶಾಹಿ ದಾಸ್ಯದ ಸಂಕೋಲೆಯಿಂದ ಭಾರತದ ವಿಮೋಚನೆಗಾಗಿ ಚಿರು ಯೌವನದ ಯುವಕರ ಬಲಿದಾನ ಅಸಂಖ್ಯಾತ ಭಾರತೀಯರನ್ನು ಸ್ವಾತಂತ್ರ್ಯ ಚಳುವಳಿಗೆ ಪ್ರಚೋದಿಸಿತು.

ಒಂದು ಉನ್ನತ ಧ್ಯೇಯ ಮತ್ತು ಆದರ್ಶಗಳಿಗಾಗಿ ಹೋರಾಡಿ ಸ್ಥಾಪಿತ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು ವ್ಯವಸ್ಥೆಯ ಬದಲಾವಣೆಗಾಗಿ ಅವಿರತ ಶ್ರಮಿಸಿ ಪ್ರಭುತ್ವದ ಧೂರ್ತತನಕ್ಕೆ ಬಲಿಯಾಗುವ ಪ್ರಾಮಾಣಿಕ ಹೋರಾಟಗಾರರನ್ನು ಹುತಾತ್ಮ ಎಂದು ಬಣ್ಣಿಸಬಹುದು. ವ್ಯಕ್ತಿಗತ ಸೈದ್ಧಾಂತಿಕ ನೆಲೆಯಲ್ಲಿ ಹುತಾತ್ಮ ಎಂಬ ಪದಕ್ಕೆ ನಾನಾ ಅರ್ಥಗಳು ಮೂಡುತ್ತವೆ. ಭಾರತದ ಪ್ರಸ್ತುತ ರಾಜಕಾರಣದಲ್ಲಿ ಹುತಾತ್ಮ ಎಂಬ ಪದವೂ ಸಹ ಮಾರುಕಟ್ಟೆಯ ಸರಕಿನಂತಾಗಿದ್ದು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಚಿಮ್ಮುಹಲಗೆಯಾಗಿ ಪರಿಣಮಿಸಿದೆ.

23 ವರ್ಷಕ್ಕೆ ಬಲಿಪೀಠ ಮೇಲೆ ಇನ್ ಕ್ವಿಲಾಬ್ ಜಿಂದಾಬಾದ್ ಕ್ರಾಂತಿಯ ಕಹಳೆ ಮೊಳಗಿಸಿದ ಶಾಹೀದ್ ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳನ್ನು ಭಾರತ ಸರ್ಕಾರ ಹುತಾತ್ಮರೆಂದು ಅಧಿಕೃತವಾಗಿ ಪರಿಗಣಿಸದಿರುವುದು ಮತ್ತು ಚಂಡಿಗಢ ಮತ್ತು ಹರಿಯಾಣ ವಿಮಾನ ನಿಲ್ದಾಣಕ್ಕೆ ಶಾಹೀದ್ ಭಗತ್ ಸಿಂಗ್ ಹೆಸರನ್ನು ನಾಮಕರಣ ಮಾಡಲು ಸಹ ಹೋರಾಟ ನಡೆಸಿದರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಗಣಘೋರ ಅವಮಾನದ ಸಂಗತಿ. ಆದರೆ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಕೊಟ್ಟು ಹೊರ ಬಂದ ಸಂಘಪರಿವಾರದ ಸ್ವಯಂಘೋಷಿತ ವೀರ ಸಾವರ್ಕರ್ ಗೆ ಭಾರತರತ್ನ ಕೊಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

ದೇಶ-ದೇಶದ್ರೋಹ-ದೇಶ ಭಕ್ತಿ ಮುಂತಾದ ವಿದ್ಯಮಾನಗಳು ಬಲಪಂಥೀಯ ರಾಜಕಾರಣದ ನೆಲೆಯಲ್ಲಿ ಅನುಕೂಲಸಿಂಧುವಾಗಿ ವ್ಯಾಖ್ಯಾನಿಸಲ್ಪಡುತ್ತಿರುವ ಸಂದರ್ಭದಲ್ಲಿ ಹುತಾತ್ಮ ಎಂಬ ಪದ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತಿದೆ.

ಆದರೆ ಹುತಾತ್ಮ ಎನ್ನುವ ಗೌರವ ಪಡೆಯುವ ಹಕ್ಕು ಕೇವಲ ಪ್ರಾಮಾಣಿಕ ದಿಟ್ಟ ಕ್ರಾಂತಿಕಾರಿಗಳಿಗೆ ಮಾತ್ರವೇ ಇರುತ್ತದೆ. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಾವಿರಾರು ಜನ ತಮ್ಮ ಜೀವವನ್ನೇ ಪಣವಿಟ್ಟು ಬ್ರಿಟೀಷರ ವಿರುದ್ಧ ಹೋರಾಡಿ ಮೃತರಾದರೂ ಹುತಾತ್ಮ ಎಂಬ ಪಟ್ಟಕ್ಕೆ ಅರ್ಹನಾದ ವ್ಯಕ್ತಿ ಸಂಗಾತಿ ಭಗತ್ಸಿಂಗ್, ರಾಜಗುರು ಸುಖದೇವ್ ಮತ್ತು ಆತನ ಸಂಗಾತಿಗಳು ಮಾತ್ರ. ಏಕೆಂದರೆ ಭಗತ್ ಸಿಂಗ್ ಕೇವಲ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಹೋರಾಡಲಿಲ್ಲ.

ಭಾರತದಲ್ಲಿ ಅಮೂಲಾಗ್ರ ಬದಲಾವಣೆ ತರಲು ಅಸಮಾನತೆಯ ಬುನಾದಿ ಮೇಲೆ ನಿರ್ಮಾಣವಾಗಿರುವ ಶ್ರೇಣೀಕೃತ, ಊಳಿಗಮಾನ್ಯ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿದ್ದ ಶೋಷಣೆ ಮತ್ತು ಅಸಮಾನತೆಯ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತು ಹಾಕಿ ನವ ಸಮ ಸಮಾಜದ ಕನಸುಗಳನ್ನು ಭಗತ್ ಸಿಂಗ್ ಮತ್ತು ಅವನ ಸಂಗಾತಿಗಳು ಒಂದು ವೇಳೆ ಸ್ವಾತಂತ್ರ್ಯದ ಕನಸು ಸಾಕಾರಗೊಳ್ಳುವ ಮುನ್ನವೇ ಅಮರರಾದರು.

” ಸ್ವಾತಂತ್ರ್ಯ ಎಂದರೆ ಕೇವಲ ಯಜಮಾನರ ಬದಲಾವಣೆ ಎಂದಾದರೆ ಜನರ ಶೋಷಣೆಯು ಹಾಗೆ ಮುಂದುವರಿಯಲಿದೆ ಆದ್ದರಿಂದ ಈ ಶೋಷಕ ವ್ಯವಸ್ಥೆಯನ್ನು ಬುಡ ಸಮೇತ ಕಿತ್ತು ಹಾಕಬೇಕು, ಹಳೆಯ ಸಂಗತಿಗಳನ್ನು ಕಾಪಾಡಿಕೊಂಡು ನವ ಸಮಾಜ ನಿರ್ಮಾಣ ಅಸಾಧ್ಯ ಅಂದರೆ ಈ ದೇಶದಿಂದ ಬಿಳಿಯ ದೊರೆಗಳು ಹೋಗಿ ಕಂದು ಬಣ್ಣದ (ಇದೇ ದೇಶದ) ಭೂಮಾಲಕ, ಬಂಡವಾಳದಾರರ ಕೈಗೆ ರಾಜಕೀಯ ಅಧಿಕಾರ ಹಸ್ತಾಂತರವಾಗುವುದರಿಂದ ನಿಜವಾದ ಸ್ವಾತಂತ್ರ್ಯ ಬರುವುದಿಲ್ಲ. ಬದಲಿಗೆ ಈ ದೇಶದ ಬಡಜನರ ಶೋಷಣೆ ಮುಂದುವರೆಯಲಿದೆ. ಎಂಬ ಭಗತ್ ಸಿಂಗ್ ರವರು ಮಾತು ದೇಶದ ಪ್ರಸ್ತುತ ಸಮಾಜೋ ರಾಜಕೀಯ ವ್ಯವಸ್ಥೆಯನ್ನು ಗ್ರಹಿಸಿದರೆ ನಮ್ಮ ಅರಿವಿಗೆ ಬರುವುದು ಸಹಜ.

ಹೌದು ಈಸ್ಟ್ ಇಂಡಿಯಾ ಕಂಪನಿಗಳ ಸ್ಥಾನದಲ್ಲಿ ಬಹುರಾಷ್ಟ್ರೀಯ ಕಾರ್ಪೋರೇಟ್ ಕಂಪೆನಿಗಳು, ಬ್ರಿಟಿಷರ ಪಾತ್ರದಲ್ಲಿ ರಾಜಕಾರಣದ ವ್ಯಾಪಾರಿಗಳು ಈ ದೇಶವನ್ನು ಲೂಟಿ ಹೊಡೆದು ಜನರನ್ನು ವಂಚಿಸುತ್ತಿದ್ದಾರೆ. 1947 ರಲ್ಲಿ ಕೇವಲ ಆಳುವ ಯಜಮಾನರು ಮಾತ್ರ ಬದಲಾಗಿರೋದು. ಆದ್ದರಿಂದ ಈಗಲೂ ದೇಶ ಬಡತನ, ಅಸ್ಪೃಶ್ಯತೆ, ಮೌಢ್ಯ, ಧರ್ಮಾಂಧತೆ, ದುಡಿಯುವ ರೈತ ಕಾರ್ಮಿಕರ ಪೋಷಣೆ ಮುಂದುವರೆದಿದೆ.

ಇಂದು ಹುತಾತ್ಮ ಭಗತ್ ಸಿಂಗ್ ನ ರಾಜಕೀಯ, ಆರ್ಥಿಕ, ಸೈದ್ಧಾಂತಿಕ, ವಿಚಾರಗಳು ಆದರ್ಶ ಪ್ರೇರೇಪಣೆಯಾಗಿವೆ. ಎಡಪಂಥೀಯ ಸಂಘಟನೆಗಳಿಗೆ ಭಗತ್ ಸಿಂಗ್ನ ಸಾಮ್ರಾಜ್ಯಶಾಹಿ, ವಸಹಾತುಶಾಹಿ ವಿರೋಧಿ ಧೋರಣೆ ಅಪ್ಯಾಯಮಾನವಾದರೆ ಬಲಪಂಥೀಯರಿಗೆ ಅವರದೇ ಆದ ಸೀಮಿತ ಚೌಕಟ್ಟಿನ “ ದೇಶಪ್ರೇಮ-ದೇಶಭಕ್ತಿ ” ಅವನನ್ನು ಆರಾಧಿಸುವಂತೆ ಮಾಡುತ್ತದೆ. ಭಗತ್ ಸಿಂಗ್ ಗಲ್ಲುಶಿಕ್ಷೆಗೊಳಗಾಗದೆ ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆಯಲ್ಲಿ ತಾನು ಬಯಸಿದ ಸಮಾಜವಾದಿ ವ್ಯವಸ್ಥೆಯನ್ನು ತರಲು ಯತ್ನಿಸಿದ್ದಲ್ಲಿ ಬಹುಶಃ ಈಗಿನ ಸ್ವಯಂ ಘೋಷಿತ ದೇಶಭಕ್ತರಿಂದ ಭಾರತದಲ್ಲಿ ಆರಾಧ್ಯ ದೈವದ ಪಟ್ಟ ಅವನಿಗೆ ದೊರೆಯುತ್ತಿಲಿಲ್ಲವೇನೋ..! ಬಹುಶಃ ವಿಶ್ವದ ಇತಿಹಾಸ ಪಠ್ಯಗಳಲ್ಲಿ ಲ್ಯಾಟಿನ್ ಅಮೆರಿಕದ ಕ್ರಾಂತಿಕಾರಿ ಚೆ ಗುವಾರನನ್ನು ಕಡೆಗಣಿಸಿರುವಂತೆಯೇ ಭಗತ್ಸಿಂಗ್ನನ್ನೂ ಕಡೆಗಣಿಸಲಾಗಿದೆ.

ಒಂದು ಅರ್ಥದಲ್ಲಿ ಭಗತ್ ಸಿಂಗ್ ಹುತಾತ್ಮನಾಗಿದ್ದು “ ದೇಶಭಕ್ತಿ ”ಯ ವಕ್ತಾರರಿಗೆ ಒಂದು ವರದಾನವಾಗಿ ಪರಿಣಮಿಸಿದರು. ಕೇಸರಿಪಡೆಗಳಿಗೆ ಭಗತ್ ಸಿಂಗ್ ನಾಸ್ತಿಕವಾದ, ಜ್ಯಾತ್ಯಾತೀತ, ಸಮಾಜವಾದಿ ವಿಚಾರಗಳು ಬಲಪಂಥೀಯ ರಾಜಕಾರಣಕ್ಕೆ ವಿರುದ್ಧವಾಗಿರುವುದರಿಂದ ಭಗತ್ ಸಿಂಗ್ ನನ್ನು ಕೇಸರಿಪಡೆಗಳು ಹೈಜಾಕ್ ಮಾಡಲು ಸಾಧ್ಯವಾಗಿಲ್ಲ. ಇಲ್ಲದಿದ್ದರೆ ಕೆಂಪುಕೋಟೆಯ ತ್ರಿವರ್ಣ ಧ್ವಜದ ನೆರಳಲ್ಲಿ ವಿಜೃಂಭಿಸುವ ಭಗತ್ ಸಿಂಗ್ ನನ್ನು ಕೇಸರಿ ಭಗವಾಧ್ವಜದ ಶೋಭಾಯಾತ್ರೆಯಲ್ಲೂ ವಿಜೃಂಭಿಸುತ್ತಿದ್ದರು.

ಸಮಕಾಲೀನ ಸಂದರ್ಭದಲ್ಲಿ, ಭಗತ್ ಸಿಂಗ್ ಹುತಾತ್ಮನಾಗಿ 89 ವರ್ಷಗಳು ಕಳೆದಿರುವ ಈ ಸಂದರ್ಭದಲ್ಲಿ ಕೇವಲ ಸ್ವಾತಂತ್ರ್ಯ ಸಂಗ್ರಾಮಿ ಎಂಬ ಸೀಮಿತ ಚೌಕಟ್ಟಿನೊಳಗೆ ಬಂಧಿಸುವುದು ಹುತಾತ್ಮನಿಗೆ ಅಪಚಾರ ಎಸಗಿದಂತೆಯೇ ಸರಿ. ಏಕೆಂದರೆ ಬ್ರಿಟೀಷ್ ಆಡಳಿತ ವ್ಯವಸ್ಥೆ ಭಗತ್ ಸಿಂಗ್ ಎಂಬ ಒಬ್ಬ ವ್ಯಕ್ತಿಯನ್ನು ಗಲ್ಲಿಗೇರಿಸಿತ್ತು. ವ್ಯಕ್ತಿಗಳನ್ನು ಕೊಂದು ಹಾಕಬಹುದು ಆದರೆ ಅವರ ವಿಚಾರಗಳು ಅಲ್ಲ, ಉನ್ನತ ಆದರ್ಶಗಳು ಅಂತ್ಯಗೊಳಿಸುವುದಿಲ್ಲ ಎಂಬ ಭಗತ್ಸಿಂಗ್ನ ಮುತ್ತಿನಂತಹ ನುಡಿಗಳು ಎಷ್ಟು ಸತ್ಯ. ಭಗತ್ ಸಿಂಗ್ ಹುತಾತ್ಮನಾದ ನಂತರವೂ ಆತನ ವಿಚಾರ, ತತ್ವ ಸಿದ್ಧಾಂತಗಳು ಜೀವಂತವಾಗಿವೆ. ಇನ್ನೂ ಶತಮಾನಗಳ ಕಾಲ ಜೀವಂತವಾಗಿರುತ್ತವೆ. ಇಂದು ನಾವು ಈ ಯುವ ಕ್ರಾಂತಿಕಾರಿಯನ್ನು ನೆನೆಯುವುದೇ ಆದರೆ ಬೇರೊಂದು ನೆಲೆಗಟ್ಟಿನಲ್ಲೇ ಸ್ಮರಿಸಬೇಕಾಗುತ್ತದೆ.

ಭಗತ್ ಸಿಂಗ್ ಕೇವಲ ತನ್ನ ಒಂದು ಉದ್ದೇಶಕ್ಕಾಗಿ ಅಥವಾ ತನ್ನ ಎಡಪಂಥೀಯ ಧೋರಣೆಗಳ ಅಸ್ತಿತ್ವವನ್ನು ಉಳಿಸಿಲೆಂದೇ ಹುತಾತ್ಮನಾಗಲಿಲ್ಲ. ಅಥವಾ ತನ್ನದೇ ಆದ ರಾಜಕೀಯ ಭೂಮಿಕೆಗಾಗಿ, ಅಧಿಕಾರ ರಾಜಕಾರಣಕ್ಕಾಗಿ ಹುತಾತ್ಮನಾಗಲಿಲ್ಲ. ಇಂದು ನಾವು ಕಾಣುತ್ತಿರುವ ಪಕ್ಷ ರಾಜಕಾರಣ ಮತ್ತು ವಿಭಜನೆಯ ಚಿಂತನೆಗಳನ್ನು ಮೀರಿ ದೇಶದ ಯುವ ಜನತೆಗೆ, ಭವಿಷ್ಯದ ಪೀಳಿಗೆಗೆ ಸಮ ಸಮಾಜದ ಒಂದು ನಿರ್ದಿಷ್ಟ ಆಯಾಮವನ್ನು ತನ್ನ ಹೋರಾಟದ ಮೂಲಕ ಬಿಂಬಿಸಿದ ಭಗತ್ ಸಿಂಗ್ ಸ್ಪೂರ್ತಿದಾಯಕ.

ಆದರೆ ಇಂದು ಆಳುವ ವರ್ಗಗಳ ತಾಳಕ್ಕೆ ತಕ್ಕಂತೆ ಪತನದತ್ತ ಹೆಜ್ಜೆ ಹಾಕುತ್ತಾ ಭ್ರಷ್ಟ ವ್ಯವಸ್ಥೆಯ ಕಬಂಧ ಬಾಹುಗಳಿಗೆ ಸಿಲುಕಿ ನಲುಗುತ್ತಿರುವುದು ದೇಶದ ಯುವಜನತೆ ಭಗತ್ ಸಿಂಗ್ ಪ್ರತಿಪಾದಿಸಿದ ಉನ್ನತ ಆದರ್ಶಗಳು ಯಾವುವೂ ಎಂದು ಗಮನಿಸಬೇಕು. ತ್ಯಾಗ, ಪ್ರಾಮಾಣಿಕತೆ, ಆದರ್ಶ ಮತ್ತು ಸತ್ಯಸಂಧತೆಯನ್ನು ಭೌಗೋಳಿಕ ಚೌಕಟ್ಟಿನಲ್ಲಿ ಬಂಧಿಸುವ ಬದಲು ಸಾಮಾಜಿಕ ನೆಲೆಯಲ್ಲಿ ಗ್ರಹಿಸಿದಾಗ ಸಮಾಜ ಒಂದು ಉನ್ನತ ಧ್ಯೇಯದೆಡೆಗೆ ಸಾಗುವುದು ಸಾಧ್ಯ. ಇಲ್ಲವಾದಲ್ಲಿ ಎಲ್ಲವೂ ಆಳುವವರ ಹಿತಾಸಕ್ತಿ ಕಾಪಾಡುವ ಭೂಪಟದ ಭೌಗೋಳಿಕ ದೇಶಭಕ್ತಿಯ ಸೀಮಿತ ಶರಪಂಜರದೊಳಗೆ ಬಂಧಿಯಾಗುತ್ತವೆ.

ಭಾರತದ ಪ್ರಸ್ತುತ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ಸನ್ನಿವೇಶವನ್ನು ಗಮನಿಸಿದಾಗ ಭಗತ್ ಸಿಂಗ್ ಮತ್ತು ಸಂಗಾತಿಗಳು ಪ್ರತಿಪಾದಿಸಿದ ಎಲ್ಲ ಮೌಲ್ಯಗಳೂ ಅಪಮೌಲ್ಯಕ್ಕೊಳಗಾಗುತ್ತಿರುವುದು ಎದ್ದು ಕಾಣುತ್ತದೆ. ತಮ್ಮ ಜಾತ್ಯತೀತ, ವೈಚಾರಿಕತೆ, ಜನಪರ ಹೋರಾಟಗಳಲ್ಲಿ ಪ್ರಾಮಾಣಿಕತೆಯಿಂದ ತೊಡಗಿದರೆ ಹತ್ಯೆಗೀಡಾಗುವ, ಒತ್ತಡಕ್ಕೆ ಸಿಲುಕಿಸಿ ಆತ್ಮಹತ್ಯೆಗೆ ಶರಣಾಗುವಂತೆ ಮಾಡಲಾಗುತ್ತಿದೆ.

ಪಟ್ಟಭದ್ರ ಹಿತಾಸಕ್ತಿಗಳ, ಮತೀಯವಾದಿಗಳ, ಧರ್ಮಾಂಧರ ಕೆಂಗಣ್ಣಿಗೆ ಬಲಿಯಾಗಿ ಬದುಕಿದ್ದೂ ಶವದಂತಾಗುವ ಸಾಹಿತಿ, ವಿಚಾರವಾದಿಗಳು ಈ ವ್ಯವಸ್ಥೆಯ ಲೋಪಗಳನ್ನು ಜನಸಾಮಾನ್ಯರ ಮುಂದಿರಿಸಿದ ಅಪರಾಧಕ್ಕಾಗಿ ಸ್ಥಾಪಿತ ವ್ಯವಸ್ಥೆಯಿಂದಲೇ ದಮನಕ್ಕೊಳಗಾಗುವ ಹೋರಾಟಗಾರರು, ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಒಂದು ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಲು ಶ್ರಮಿಸಿ ಆಡಳಿತ ವ್ಯವಸ್ಥೆಯ, ಪ್ರಭುತ್ವದ ದಮನಕ್ಕೊಳಗಾಗುವ ಪ್ರಜ್ಞಾವಂತರು ಇವರೆಲ್ಲರೂ ತಮ್ಮೊಳಗಿನ ಬೌದ್ಧಿಕ ಶಕ್ತಿ ಮತ್ತು ಉತ್ಸಾಹಗಳು ಹುತಾತ್ಮವಾಗುವುದನ್ನು ಕಣ್ಣೆದುರಿನಲ್ಲೇ ಭಾರತದಲ್ಲಿ ಕಾಣುತ್ತಿದ್ದೇವೆ. ಇದರ ನಡುವೆಯೇ ಭಗತ್ ಸಿಂಗ್ ಬೌದ್ಧಿಕವಾಗಿ ಜೀವಂತವಾಗಿದ್ದರೂ ಭೌತಿಕವಾಗಿ ಕಣ್ಮರೆಯಾಗುತ್ತಿದ್ದಾನೆ.

ಕೇವಲ 23 ವರ್ಷಕ್ಕೆ ನೇಣುಗಂಬಕ್ಕೆ ಏರುವ ಕೊನೆಯ ಗಳಿಗೆಯಲ್ಲೂ ಭಗತ್ ಸಿಂಗ್ ನ ಸ್ಪೂರ್ತಿಯಾಗಿದ್ದ ಕಾಮ್ರೇಡ್ ಲೆನಿನ್ ರವರ ಪುಸ್ತಕ ಓದಿ ಮುಗಿಸುವುದು ಕೊನೆಯುಸಿರೆಳೆಯುವ ಮುನ್ನ ಅಂತಿಮ ಆಸೆ ಎಂದಿದ್ದರು. ಆದರೆ ಇಂದು ದೇಶಭಕ್ತಿಯನ್ನು ಸ್ವಯಂ ಗುತ್ತಿಗೆ ಪಡೆದುಕೊಂಡಿರುವವರು ತ್ರಿಪುರಾದ ಅರ್ಗತಲಾ ದಲ್ಲಿ ಲೆನಿನ್ ಪ್ರತಿಮೆಯನ್ನು ಜೆಸಿಬಿ ಯಂತ್ರದಿಂದ ಉರುಳಿಸಿ ರಣಕೇಕೆ ಹಾಕಿದ್ದು ನೋಡಿದರೆ ಗೊತ್ತಾಗುತ್ತದೆ ಈ ಶಕ್ತಿಗಳು ಭಗತ್ ಸಿಂಗ್ ಕನಸಿನ ಭಾರತವನ್ನು ಛಿದ್ರಗೊಳಿಸುತ್ತಿದ್ದಾರೆ. ಈ ಕೋಮುವಾದಿ, ಮೂಲಭೂತವಾದಿ ಶಕ್ತಿಗಳಿಂದ ದೇಶದ ಐಕ್ಯತೆ ಸಮಗ್ರತೆ ಜಾತ್ಯತೀತತೆಯನ್ನು ಕಾಪಾಡುವುದೇ ನಮ್ಮ ಮುಂದಿರುವ ಮೊದಲ ಕರ್ತವ್ಯ.

ಇದಕ್ಕೆ ಕಾರಣ ಎಂದರೆ ಸಮಕಾಲೀನ ಭಾರತದಲ್ಲಿ ಉನ್ನತ ಸಮಾಜವನ್ನು ನಿರ್ಮಿಸಲು ನೆರವಾಗುವ ಎಲ್ಲ ಮೌಲ್ಯಗಳೂ ಬಿಕರಿಗಿವೆ, ಹಾಗೆಯೇ ಈ ಎಲ್ಲ ಮೌಲ್ಯಗಳೂ ಪ್ರಭುತ್ವದ ಶೋಷಣೆಗೆ ಸಿಲುಕಿ ನಲುಗುತ್ತಿವೆ. ಭೌತಿಕವಾಗಿ ಆತ್ಮ, ದೇಹ ಇಲ್ಲದ ಈ ಮೌಲ್ಯಗಳನ್ನು ಗಲ್ಲಿಗೇರಿಸಲು ವ್ಯವಸ್ಥೆಯ ಸಂರಕ್ಷಕರಿಗೆ ಸಾಧ್ಯವಿಲ್ಲ. ಆದರೆ ಈ ಮೌಲ್ಯಗಳನ್ನು ಪ್ರತಿಪಾದಿಸುವ ವ್ಯಕ್ತಿಗಳನ್ನು ಪಂಜರದೊಳಗೆ ಬಂಧಿಸುವ ಮೂಲಕ ನಿರ್ನಾಮ ಮಾಡುವುದು ಸುಲಭಸಾಧ್ಯ. ರೋಹಿತ್ ವೇಮುಲ, ಕನ್ನಯ್ಯ ಕುಮಾರ್, ಜೆಎನ್ಯು ವಿವಾದ, ದಾದ್ರಿ ಘಟನೆ ಮತ್ತು ಭೀಮ್ ಕೊರೆಂಗಾವ.. ವಿದ್ಯಮಾನಗಳು ರಾಷ್ಟ್ರ ಮತ್ತು ರಾಷ್ಟ್ರೀಯತೆಯ ವ್ಯಾಖ್ಯೆಯನ್ನೇ ವಿಭಿನ್ನ ನೆಲೆಗೆ ಕೊಂಡೊಯ್ದಿದೆ.

ರಾಷ್ಟ್ರ ಭಕ್ತಿ ಎನ್ನುವ ಬೌದ್ಧಿಕ ವಿದ್ಯಮಾನ ಇಂದು ಲೌಕಿಕತೆಯನ್ನು ಪಡೆದುಕೊಂಡಿದ್ದು ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ದೇಶಭಕ್ತಿ ಪ್ರದರ್ಶಿಸಲು ಜಯಕಾರ ಕೂಗಬೇಕಾದ ಸಂದರ್ಭ ಒದಗಿಬಂದಿದೆ..! ಹಾಗಾಗಿ ಪ್ರಭುತ್ವ ಮತ್ತು ಪ್ರಜೆಗಳ ನಡುವಿನ ಸಂಘರ್ಷವನ್ನು ದೇಶಭಕ್ತಿ-ದೇಶದ್ರೋಹದ ಚೌಕಟ್ಟಿನಲ್ಲೇ ವ್ಯಾಖ್ಯಾನಿಸಲಾಗುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಪ್ಪಟ ದೇಶಪ್ರೇಮಿ ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳನ್ನು ಹುತಾತ್ಮರೆಂದು ನೆನೆಯುತ್ತಿದ್ದೇವೆ. ಭಗತ್ ಸಿಂಗ್ ಇಂದಿಗೂ ಭಾರತದ ಭವಿಷ್ಯ ಕಟ್ಟಲು ಚಿಂತಿಸುವವರೆಲ್ಲರೊಳಗೆ ಅದಮ್ಯ ಚೇತನವಾಗಿದ್ದಾನೆ.

ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳು ಬಿದ್ದ ಮರಗಳು ಅಲ್ಲ ಬಿತ್ತಿದ ಬೀಜಗಳು.ನಮ್ಮೆಲ್ಲರಲ್ಲೂ ಭಗತ್ ಸಿಂಗ್ ವಿಚಾರಗಳನ್ನು ವಿಚಾರಧಾರೆ ಕ್ರಾಂತಿಯನ್ನುಂಟು ಮಾಡಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version