ಲೈಫ್ ಸ್ಟೈಲ್
ನೀಲಿ ನಾಲಿಗೆ ರೋಗ ಮತ್ತು ಚಿಕಿತ್ಸಾ ವಿಧಾನ
ಸುದ್ದಿದಿನ ಡೆಸ್ಕ್ : ಕರ್ನಾಟಕದಲ್ಲಿ ನೀಲಿ ನಾಲಿಗೆ ರೋಗಕ್ಕೆ ಸಾವಿರಾರು ಆಡು, ಕುರಿಗಳು ಬಲಿಯಾಗುತ್ತಿದ್ದು, ವರ್ಷವೊಂದಕ್ಕೆ ಸುಮಾರು 18,600 ಆಡು, ಕುರಿಗಳು ಈ ಮಾರಣಾಂತಿಕ ಖಾಯಿಲೆಗೆ ತುತ್ತಾಗಿ ಸಾವನ್ನಪುತ್ತಿವೆ.
ಕುದುರೆನೊಣ ಮತ್ತು ಉಣ್ಣೆಹುಳ ಆಡು, ಕುರಿಗಳಿಗೆ ಕಚ್ಚುವುದರಿಂದ ನೀಲಿ ನಾಲಿಗೆ ರೋಗ ಹಬ್ಬುತ್ತದೆ. ನೀಲಿ ರೋಗದ ವೈರಾಣುವಿನಲ್ಲಿ 24 ಪ್ರಬೇಧಗಳಿದ್ದು, ನಮ್ಮ ರಾಜ್ಯದಲ್ಲಿ 6 ಪ್ರಬೇಧಗಳು ಈಗಾಗಲೇ ಪರಿಚಲನೆಯಲ್ಲಿವೆ.
ಆಡು, ಕುರಿಗಳನ್ನು ಕೊಲ್ಲುವ ಈ ನೀಲಿ ನಾಲಿಗೆ ರೋಗ 1904 ರಲ್ಲಿ ಮೊದಲು ಆಫ್ರಿಕಾದಲ್ಲಿ ಪತ್ತೆಯಾಯಿತು. ಭಾರತದಲ್ಲಿ ಇಷ್ಟೊಂದು ವ್ಯಾಪಕವಾಗಿ ಹರಡಿದ್ದು, ಕರ್ನಾಟಕದಲ್ಲಿ 15 ವರ್ಷಗಳಲ್ಲಿ ಸಾವಿರಾರು ಆಡು, ಕುರಿಗಳು ಸಾವನ್ನಪ್ಪಿವೆ.
ಸಾಮಾನ್ಯವಾಗಿ ಆಗಸ್ಟ್ನಿಂದ ಫೆಬ್ರವರಿವರೆಗೆ ವ್ಯಾಪಕವಾಗಿ ಕಂಡುಬರುವ ಈ ನೀಲಿ ನಾಲಿಗೆ ರೋಗ ಮಳೆ ನಿಂತ ಎರಡು ಮೂರು ವಾರಗಳ ನಂತರ ವ್ಯಾಪಕವಾಗಿ ಹರಡಲು ಶುರುಮಾಡುತ್ತದೆ. ಕುದುರೆನೊಣ ಮತ್ತು ಉಣ್ಣೆಹುಳ ಆಡು, ಕುರಿಗಳಿಗೆ ಕಚ್ಚುವುದರಿಂದ ನೀಲಿ ನಾಲಿಗೆ ರೋಗ ಹಬ್ಬುತ್ತದೆ. ತಗ್ಗು ಪ್ರದೇಶ, ನಿಂತ ನೀರು ಮತ್ತು ಜಾಗು ಪ್ರದೇಶಗಳು ಈ ಕುದುರೆ ನೊಣಗಳ ಆವಾಸ ಸ್ಥಾನ. ಮಳೆಗಾಲ ಮತ್ತು ಚಳಿಗಾಲಗಳಲ್ಲಿ ಇವುಗಳು ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಇಡುವ ಮೂಲಕ ಸಂತಾನೋತ್ಪತ್ತಿ ವೃದ್ದಿಸಿಕೊಳ್ಳುತ್ತದೆ. ಇಂಥ ಸ್ಥಳಗಳಲ್ಲಿ ಕುರಿ ಮೇಯಿಸುವುದು ನೀಲಿ ನಾಲಿಗೆ ರೋಗಕ್ಕೆ ಆಹ್ವಾನ ನೀಡಿದಂತಾಗುತ್ತದೆ.
ನೀಲಿ ರೋಗದ ಲಕ್ಷಣಗಳು
ಕುರಿ ಇಲ್ಲವೇ ಮೇಕೆಗಳಿಗೆ ಮೊದಲು ತೀವ್ರವಾದ ಜ್ವರ ಬರುವುದು. ನಂತರ ಬಾಯಿಯಲ್ಲಿ ಜೊಲ್ಲು ಸುರಿಯುವುದು ಹಾಗೂ ಮೂಗಿನಲ್ಲಿ ಹಳದಿ ಮಿಶ್ರಿತ ಗೊಣ್ಣೆ ಕಾಣಿಸಿಕೊಳ್ಳುವುದು. ಕೆಲವೊಮ್ಮೆ ನಾಲಗೆಯು ಹಳದಿ ಬಣ್ಣಕ್ಕೆ ತಿರುಗುವುದು. ಬಾಯಿ, ಮೂಗು, ಮುಖ ಮತ್ತು ತಲೆಗಳಲ್ಲಿ ಬಾವು ಕಂಡುಬರುತ್ತದೆ. ಮೂಗಿನ ಒಳಪದರಗಳೆಲ್ಲಾ ಕೆಂಪಾಗಿ ತುಟಿ, ಒಸಡು ಮತ್ತು ನಾಲಿಗೆಯು ಊದಿಕೊಂಡಿರುತ್ತದೆ. ಒಸಡಿನ ಮೇಲ್ಬಾಗದಲ್ಲಿ ಹುಣ್ಣು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣವಾಗಿರುತ್ತದೆ.
ಈ ಕಾರಣಗಳಿಂದಾಗಿ ಆಡು, ಕುರಿಗಳು ಮೇವು ತಿನ್ನಲಾಗದೆ ನಿಶಕ್ತಿಗೆ ಒಳಗಾಗುತ್ತವೆ. ನಂತರದ ದಿನಗಳಲ್ಲಿ ಕುಂಟಲು ಪ್ರಾರಂಭಿಸುತ್ತವೆ. ಕಾಲಿನ ಚರ್ಮ, ಗೊರಸು ಮತ್ತು ಸಂಧುಗಳಲ್ಲಿ ನೀಲಿ ಬಣ್ಣದ ಪಟ್ಟಿ ಕಾಣಿಸುತ್ತದೆ. ಕೆಲವು ಆಡು ಕುರಿಗಳು ಭೇಧಿ ಕಾಣಿಸಿಕೊಂಡು ನಿತ್ರಾಣಗೊಂಡು ಕತ್ತನ್ನು ಪಕ್ಕಕ್ಕೆ ವಾಲಿಸುತ್ತವೆ. ಸೂಕ್ತ ಸಮಯದಲ್ಲಿ ಆರೈಕೆ, ಆಹಾರ ಮತ್ತು ಚಿಕಿತ್ಸೆ ಸಿಗದಿದ್ದರೆ ಬಳಲಿಕೆಯಿಂದಾಗಿ ಸಾವನ್ನಪ್ಪಬಹುದು.
ನೀಲಿ ರೋಗ ಕಂಡುಬಂದಾಗ ಚಿಕಿತ್ಸೆ ಮಾಡುವ ವಿಧಾನ
ವೈರಾಣುವಿನಿಂದ ಹರಡುವ ಈ ಖಾಯಿಲೆಗೆ ಚಿಕಿತ್ಸೆ ನೀಡುವ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಆದಾಗ್ಯೂ ಜ್ವರ, ನೋವು, ನಂಜು ನಿವಾರಣೆಗಾಗಿ ಚಿಕಿತ್ಸೆಯನ್ನು ನೀಡಬಹುದು. ರೋಗ ಹರಡುವ ಮುನ್ನವೇ ಲಸಿಕೆ ಹಾಕಿಸುವುದು ಅಗತ್ಯ.
ಮೂಗು ಒಸಡು ಮತ್ತು ಬಾಯಿಯನ್ನು ನಂಜು ನಿರೋಧಕ ದ್ರಾವಣ/ಅಡುಗೆ ಸೋಡಾದಿಂದ ಶುಚಿಗೊಳಿಸಬೇಕು. ಬಾಯಿಗೆ ಜೇನುತುಪ್ಪ ಸವರುವುದರಿಂದ ರೋಗ ಉಲ್ಬಣವಾಗುವುದನ್ನು ತಡೆಯಬಹುದು. ರಾಗಿ, ಜೋಳದ ಗಂಜಿ ಮತ್ತು ಹೆಸರು ಬೇಳೆ ಹೂರಣವನ್ನು ಕೊಟ್ಟು ಶಕ್ತಿಯನ್ನು ಹೆಚ್ಚಿಸುವ ಆರೈಕೆ ಮಾಡಿದರೆ ರೋಗಪೀಡಿತ ಕುರಿ/ಮೆಕೆಗಳನ್ನು ಬದುಕಿಸಿಕೊಳ್ಳಬಹುದು.
ನಿಯಂತ್ರಣ ಕ್ರಮಗಳು
ಬೆಳಿಗ್ಗೆ ಮತ್ತು ಸಂಜೆ ಕುರಿಹಟ್ಟಿ ಸುತ್ತ ಬೇವಿನ ಸೊಪ್ಪಿನ ಹೊಗೆಯನ್ನು ಹಾಕಬೇಕು. ಸುತ್ತಮುತ್ತ ಕೀಟನಾಶಕ ದ್ರಾವಣ ಸಿಂಪಡಿಸಿ ನೀರು ನಿಲ್ಲದಂತೆ ಎಚ್ಚರ ವಹಿಸಿ ಸೊಳ್ಳೆಗಳು ವೃದ್ದಿಯಾಗದಂತೆ ನೋಡಿಕೊಳ್ಳಬೇಕು. ರೋಗಗ್ರಸ್ಥ ಕುರಿಯನ್ನು ಹೊರಗೆ ಮೇಯಿಸಲು ಕರೆದೊಯ್ಯದೇ ಹಟ್ಟಿಯಲ್ಲಿಯೇ ಮೆತ್ತನೆಯ ಆಹಾರ ಕೊಡಬೇಕು. ಒಣ ಹುಲ್ಲನ್ನು ಆಹಾರವಾಗಿ ನೀಡುವುದು ಸೂಕ್ತವಲ್ಲ. ಈ ಸಂದರ್ಭದಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸಬಾರದು ಉಣ್ಣೆ ಇರುವುದರಿಂದ ಸೊಳ್ಳೆ ಕಡಿತ ತಪ್ಪಿಸಬಹುದು. ಸಾಧ್ಯವಾದರೆ ಸೊಳ್ಳೆಪರದೆ ಉಪಯೋಗಿಸಬಹುದು.
ಕುರುಡು ನೊಣಗಳು ಬೆಳಿಗ್ಗೆ ಸೂರ್ಯ ಹುಟ್ಟಿದ ನಂತರದ ಒಂದು ಗಂಟೆ ಮತ್ತೆ ಸಂಜೆ ಸೂರ್ಯ ಮುಳುಗುವ ಒಂದು ಗಂಟೆ ಮುಂಚೆ ಬಹಳ ಚುರುಕಾಗಿರುತ್ತವೆ. ಹಾಗಾಗಿ 9 ಗಂಟೆ ನಂತರ ಹೊರಗಡೆ ಮೇಯಲು ಬಿಡಬಹುದು. ಹಾಗೂ 5 ಗಂಟೆಯ ಒಳಗೆ ಹಟ್ಟಿಗೆ ತರುವುದು ಸೂಕ್ತ. ತಗ್ಗು ಮತ್ತು ಜೌಗು ಪ್ರದೇಶಗಳಿಗಿಂತ ಎತ್ತರದ ಒಣ ಭೂಮಿಯಲ್ಲಿ ಮೇಯಿಸುವುದು ಸೂಕ್ತ.
ರೋಗ ಕಂಡ ಕೂಡಲೇ ಕುರಿಗಳಿಗೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸುವುದು ಹಾಗೂ ಸೂಕ್ತ ಸಲಹೆ ಪಡೆಯುವುದು ಸೂಕ್ತ. ನಾಟಿ ಔಷಧ ಅಥವಾ ಪಶುವೈದ್ಯರ ಸಲಹೆ ಇಲ್ಲದೆ ನೇರವಾಗಿ ಔಷಧಿ ಅಂಗಡಿಗಳಿಂದ ಔಷಧಿಗಳನ್ನು ಪಡೆದು ಚಿಕಿತ್ಸೆ ನೀಡುವುದು ಕುರಿ/ಮೇಕೆಗಳ ಪ್ರಾಣಕ್ಕೆ ಕುತ್ತಾಗಬಹುದು. ಮತ್ತು ರೈತರಿಗೆ ಆರ್ಥಿಕ ನಷ್ಟವುಂಟಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243