ದಿನದ ಸುದ್ದಿ

ದಾವಣಗೆರೆ | ಕೊರೊನಾ ಒಂದು ಶಂಕಿತ ಪ್ರಕರಣ : ಗಂಟಲು ದ್ರವ ಮಾದರಿ ಪರೀಕ್ಷೆಗೆ ಜಿಲ್ಲಾಧಿಕಾರಿಗಳಿಂದ ಐಸೊಲೇಟೆಡ್ ವಾರ್ಡ್‍ಗಳ ಪರಿಶೀಲನೆ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್ (ಕೋವಿಡ್-19) ಸೋಂಕಿನ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಜಿಲ್ಲಾಸ್ಪತ್ರೆ, ಬಾಪೂಜಿ ಮತ್ತು ಎಸ್. ಎಸ್.ಆಸ್ಪತ್ರೆ ಸೇರಿದಂತೆ ಒಟ್ಟು 132 ಬೆಡ್‍ಗಳನ್ನು ಈ ಸೋಂಕಿಗೆ ಚಿಕಿತ್ಸೆ ನೀಡಲೆಂದು ಮೀಸಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಕೊರೊನ ವೈರಸ್ ಸೋಂಕು ಮುನ್ನೆಚ್ಚರಿಕೆ ಕ್ರಮದ ಹಿನ್ನೆಲೆ ಇಂದು ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆ, ಬಾಪೂಜಿ, ಎಸ್.ಎಸ್.ಆಸ್ಪತ್ರೆಗಳಿಗೆ ಭೇಟಿ ನೀಡಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲೆಂದು ಮುನ್ನೆಚ್ಚರಿಕೆ ಕ್ರಮವಾಗಿ ಮೀಸಲಿಡಲಾಗಿರುವ ಐಸೊಲೇಟೆಡ್ ವಾರ್ಡ್‍ಗಳನ್ನು ಪರಿಶೀಲಿಸಿದ ನಂತರ ಮಾತನಾಡಿದರು.

ಕೊರೊನಾ ಸೋಂಕಿನ ಚಿಕಿತ್ಸೆಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ ಒಟ್ಟು 132 ಬೆಡ್‍ಗಳನ್ನು ಸಿದ್ದಪಡಿಸಿದ್ದೇವೆ. ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಒಟ್ಟು 10 ಬೆಡ್‍ಗಳು, ಬಾಪೂಜಿ ಆಸ್ಪತ್ರೆಯಲ್ಲಿ 15 ಬೆಡ್‍ಗಳು ಹಾಗೂ ಎಸ್.ಎಸ್.ಆಸ್ಪತ್ರೆಯಲ್ಲಿ 15 ಬೆಡ್‍ಗಳುಳ್ಳ ಐಸೊಲೇಟೆಡ್ ವಾರ್ಡ್‍ಗಳನ್ನು ಮೀಸಲಿಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಂದೆಡೆ ಮೂರು ಮತ್ತು ಒಂದೆಡೆ ನಾಲ್ಕು ಬೆಡ್ ವ್ಯವಸ್ಥೆ ಮಾಡಲಾಗಿದೆ. ಹಾಗೂ ತಾಲ್ಲೂಕು ಮಟ್ಟದಲ್ಲಿ ಐಸೊಲೇಟೆಡ್ ವಾರ್ಡ್‍ಗಳ ವ್ಯವಸ್ಥೆ ಮಾಡಲಾಗಿದೆ.

ಶಂಕಿತ ಪ್ರಕರಣ-ನಿಗಾ

11ನೇ ತಾರೀಖಿನಂದು ಹರಪನಹಳ್ಳಿ ತಾಲ್ಲೂಕಿನ ಕಂಚಿಕೇರಿ ಗ್ರಾಮಕ್ಕೆ ಸುಮಾರು 26 ವರ್ಷದ ಯುವಕ ದುಬೈನಿಂದ ಬಂದಿದ್ದು, ಬಳ್ಳಾರಿ ಜಿಲ್ಲಾಧಿಕಾರಿಗಳು ಕಂಚಿಕೇರಿ ದಾವಣಗೆರೆಗೆ ಸಮೀಪವಿರುವ ಕಾರಣ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಚಿಗಟೇರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ. ಆ ಯುವಕನಿಗೆ ಕೊರೊನಾ ವೈರಸ್ ಸೋಂಕಿನ ಯಾವ ಲಕ್ಷಣಗಳೂ ಕಂಡು ಬಂದಿಲ್ಲ. ಹಾಗೂ ಆತ ಕೂಡ ಊರಿಗೆ ಹೋಗುವುದಾಗಿ ಹೇಳುತ್ತಿದ್ದಾರೆ.

ಆದರೆ ಬಳ್ಳಾರಿ ಜಿಲ್ಲಾಧಿಕಾರಿಗಳು ಆತನಿಗೆ ಗಂಟಲು ನೋವಿದೆ ಎಂದು ಹೇಳಲಾಗುತ್ತಿರುವ ಹಿನ್ನೆಲೆ ಪರೀಕ್ಷೆ ಮಾಡಿಸುವಂತೆ ತಿಳಿಸಿರುತ್ತಾರೆ. ಈ ಹಿನ್ನಲೆಯಲ್ಲಿ ಆತನ ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಕಳುಹಿಸಲಾಗಿದ್ದು ನಾಳೆಗೆ ಆ ಪರೀಕ್ಷೆಯ ವರದಿ ಬರಲಿದೆ. ಸದ್ಯಕ್ಕೆ ಮುಂಜಾಗೃತಾ ಕ್ರಮವಾಗಿ ಆಸ್ಪತ್ರೆಯಲ್ಲೇ ಇರಿಸಿಕೊಳ್ಳಲಾಗಿದೆ. ನಂತರದಲ್ಲಿ ಯಾವುದೇ ಲಕ್ಷಣಗಳು ಕಂಡು ಬರದಿದ್ದರೂ ಆತನನ್ನು ಮನೆಯಲ್ಲೇ 14 ದಿನ ನಿಗಾವಣೆಯಲ್ಲಿರುವಂತೆ ಸೂಚಿಸಲಾಗುವುದು.

  • ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿಗಳು

ವಿದೇಶ ಹೋಗಿ ಬಂದ ಇತಿಹಾಸವಿರುವ 49 ಜನ ಜಿಲ್ಲೆಯಲ್ಲಿದ್ದು, 14 ಜನ 14 ದಿನ ಅವಲೋಕನ ಅವಧಿ ಮುಗಿಸಿದ್ದಾರೆ. ಒಬ್ಬರು 28 ದಿನ ಅವಲೋಕನ ಅವಧಿ ಮುಗಿಸಿದ್ದಾರೆ. ಇನ್ನುಳಿದವರು ಅವಲೋಕನ ಅವಧಿಯ ಬೇರೆ ಬೇರೆ ಹಂತದಲ್ಲಿದ್ದು, ಯಾರಲ್ಲೂ ಸೋಂಕಿನ ಲಕ್ಷಣ ಇಲ್ಲ. ಸೋಂಕಿನ ಲಕ್ಷಣಗಳಿದ್ದ ನಾಲ್ಕು ಜನರ ವರದಿ ನÉಗೆಟೆವ್ ಇದ್ದು ಜಿಲ್ಲೆಯಲ್ಲಿ ಯಾವುದೇ ಖಚಿತಪಟ್ಟ ಪ್ರಕರಣಗಳು ವರದಿಯಾಗಿಲ್ಲ ಎಂದರು.

ಇಂದು ವಿಡಿಯೋ ಕಾನ್ಫರೆನ್ಸ್‍ನಲ್ಲಿ ಮಾನ್ಯ ಮುಖ್ಯಂತ್ರಿಗಳು ದಿನಸಿ ವಸ್ತುಗಳು, ದೈನಂದಿನ ವಸ್ತುಗಳನ್ನು ಮಾರಾಟ ಮಾಡಲಾಗುವು ಮೋರ್, ಬಿಗ್‍ಬಜಾರ್‍ಗಳಂತಹ ಶಾಪ್‍ಗಳನ್ನು ಬಂದ್ ಮಾಡಬಾರದು. ಕೆಲವರು ಮಾಡಿರುವುದು ಗಮನಕ್ಕೆ ಬಂದಿದ್ದು ತೆರೆಯುವಂತೆ ಸೂಚನೆ ನೀಡಲು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿಯೂ ಇಂತಹ ಶಾಪ್‍ಗಳನ್ನು ತೆರೆಯುವಂತೆ ಪಾಲಿಕೆ ಆಯುಕ್ತರ ಮೂಲಕ ಸೂಚನೆ ನೀಡಿದ್ದೇವೆ. ಜನಸಂದಣಿಯಾವುಂತಹ ಕಾರ್ಯಕ್ರಮಗಳು, ಘಟನೆಗಳ ನಿಯಂತ್ರಣಕ್ಕಾಗಿ ಹಬ್ಬ, ಜಾತ್ರೆ, ಸಂತೆಗಳನ್ನು ನಿಷೇಧಿಸಲು ಕ್ರಮ ವಹಿಸಲಾಗಿದೆ. ದೈವದ ಕೃಪೆಯಿಂದ ಜಿಲ್ಲೆಯಲ್ಲಿ ಆತಂಕಕಾರಿ ಎನ್ನುವ ಸ್ಥಿತಿ ಇಲ್ಲ. ಆದರೆ ಕೊರೊನಾ ವೈರಸ್ ಸೋಂಕಿನ ನಿಯಂತ್ರಣ ಮತ್ತು ತಡೆಗಾಗಿ ಎಲ್ಲ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಪಾಲಿಕೆ ಆಯುಕ್ತರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್, ಎಸ್‍ಎಸ್‍ಐಎಂ ಪ್ರಾಂಶುಪಾಲರಾದ ಪ್ರಸಾದ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version