ದಿನದ ಸುದ್ದಿ
ದೇಹ ಮನಸ್ಸು ಹೃದಯವೇ ಬಹು ಡೊಡ್ಡ ಸಂಪತ್ತು : ಡಾ. ಸಿದ್ದೇಶ್ವರನ್
ಸುದ್ದಿದಿನ, ಮಲೆಬೆನ್ನೂರು : ತನು ಮನ ಧನದ ಸಮರ್ಪಕ ಬಳಕೆಯ ಅರಿವು ಇರುವ ವ್ಯಕ್ತಿ ಮಾತ್ರ ಜೀವನದಲ್ಲಿ ಸಂಪೂರ್ಣ ಯಶಸ್ಸನ್ನು ಗಳಿಸಬಲ್ಲನು. ಆದ್ದರಿಂದ ಮನೆಯಲ್ಲಿ ಪೋಷಕರು ಹಾಗೂ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಈ ಅರಿವನ್ನು ಮೂಡಿಸಬೇಕು ಎಂದು ದಾವಣಗೆರೆ ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರೊಫೆಸರ್ ಹಾಗೂ ಹಾರ್ಟ್ ಫುಲ್ ನೆಸ್ಸ್ ಧ್ಯಾನ ತರಬೇತುದಾರರಾದ ಡಾ. ಸಿದ್ದೇಶ್ವರನ್ ಅವರು ಸಲಹೆ ನೀಡಿದರು.
ಮಲೇಬೆನ್ನೂರು ಪಟ್ಟಣದ ಜಿಗಳಿ ರಸ್ತೆಯಲ್ಲಿರುವ ಒಡೆಯರ ಬಸವಾಪುರದ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ ನ ರಾಜ ರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ದಿನಾಂಕ: 24/12/2022 ರ ಸಂಜೆ 4.30 ಕ್ಕೆ ನಡೆದ 17 ನೇ ವರ್ಷದ ಕಲ್ಚರಲ್ ಫೆಸ್ಟ್ – ಮೆಗಾ ಇವೆಂಟ್ : ಸಾಂಸ್ಕೃತಿಕ ಉತ್ಸವವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದೇಹ, ಮನಸ್ಸು ಹಾಗೂ ಹೃದಯವೇ ನಮ್ಮ ಬಹು ದೊಡ್ಡ ಸಂಪತ್ತು . ಇದರ ಸದ್ಭಳಕೆ ಮಾಡಿಕೊಳ್ಳುವುದೇ ದೊಡ್ಡ ಸಾಧನೆ. ಈ ಕುರಿತು ಮಕ್ಕಳಿಗೆ ತಿಳಿಸಿಕೊಡುವುದು ಹಿರಿಯರ ಕರ್ತವ್ಯ. ಇದುವೇ ಮೂಲ ಶಿಕ್ಷಣ ಎಂದು ವಿವರಿಸಿದರು.
ಮತ್ತೋರ್ವ ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಶಿಕ್ಷಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಂಗ್ಲ ಭಾಷಾ ವಿಷಯದ ಸಂಪನ್ಮೂಲ ವ್ಯಕ್ತಿ ಕಲಿವೀರ ಕಳ್ಳಿಮನಿ ಮಾತನಾಡಿ, ಸರಿ ತಪ್ಪಿನ ಅರಿವೇ ವ್ಯಕ್ತಿತ್ವ ವಿಕಸನದ ಮೂಲ. ಸರಿ ಮತ್ತು ತಪ್ಪುಗಳ ಅರಿವು ಇರುವ ಮನುಷ್ಯ ತನ್ನ ವ್ಯಕ್ತಿತ್ವವನ್ನು ಉಜ್ವಲವಾಗಿ ನಿರ್ಮಿಸಿಕೊಳ್ಳಬಲ್ಲನು. ಈ ದಿಸೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಬಾಲ್ಯದಿಂದಲೇ ವಿದ್ಯಾರ್ಥಿಗಳಿಗೆ ಬೇಕು – ಬೇಡಗಳ ಆಯ್ಕೆಯ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ವೈಯುಕ್ತಿಕವಾಗಿ ತನ್ನ ಬದುಕನ್ನು ಕಟ್ಟಿಕೊಂಡು ತನ್ನವರ ಬದುಕಿಗೆ ಆಸರೆ ಆಗುವುದನ್ನು ಕಲಿಸಬೇಕು. ಅದರ ಕೊರತೆಯ ಕಾರಣ ವೃದ್ದಾಶ್ರಮಗಳ ಸಂಖ್ಯೆ ಪ್ರಸ್ತುತ ಹೆಚ್ಚಿದೆ. ಅದು ತಗ್ಗ ಬೇಕಾದರೆ ಮಕ್ಕಳು ಹೆತ್ತವರನ್ನು ಪ್ರೀತಿಸುವ ಪ್ರೇರಣೆಯನ್ನು ಶಿಕ್ಷಣ ನೀಡಬೇಕು ಎಂದರು.
ಬೆಳಗ್ಗೆ 11 ಗಂಟೆಗೆ ನಡೆದ ಕಾರ್ಯಕ್ರಮವನ್ನು ಸಸ್ಯಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ, ವ್ಯಕ್ತಿತ್ವ ವಿಕಸನ ಕುರಿತು ಮಾತನಾಡಿದ ದಾವಣಗೆರೆ ಸರ್ಕಾರಿ ಪ.ಪೂ ಕಾಲೇಜಿನ ಶಿಕ್ಷಕ ಹಾಗೂ ಶಿಕ್ಷಣ ಕ್ಷೇತ್ರದ ಆಂಗ್ಲ ಭಾಷಾ ವಿಷಯದ ಸಂಪನ್ಮೂಲ ವ್ಯಕ್ತಿಯಾದ ಗೋವಿಂದ್ ರಾಜು ಅವರು, ಸೋಲಿನ ಅರಿವಿಲ್ಲದೆ ಗೆಲುವು ಅಸಾಧ್ಯ. ಸೋತಾಗ ಎದೆಗುಂದದೆ ಗೆಲ್ಲುವುದನ್ನು ರೂಢಿಸಿಕೊಂಡರೆ ಶಾಶ್ವತ ಯಶಸ್ಸು ದಕ್ಕುತ್ತದೆ. ಪ್ರಪಂಚ ಮೊದಲು ವ್ಯಕ್ತಿತ್ವವನ್ನು ಗುರುತಿಸುತ್ತದೆ. ನಂತರ ಸಾಧನೆಯನ್ನು ಹೊಗಳುತ್ತದೆ. ಅಂತಹ ವ್ಯಕ್ತಿತ್ವ ಮತ್ತು ಸಾಧನೆ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.
ಬೆಳಗಿನ ಮತ್ತು ಸಂಜೆಯ ಕಾರ್ಯಕ್ರಮದಲ್ಲಿ ಶೈಕ್ಷಣಿಕ ವರ್ಷದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಚಾಂಪಿಯನ್ಸ್ ಗಳಿಗೆ ಅಭಿನಂದನಾ ಪತ್ರ, ಮೆಡೆಲ್ , ಶೀಲ್ಡ್ ವಿತರಿಸಿ ಅಭಿನಂದಿಸಲಾಯಿತು.
ಹಿಂದಿನ ವರ್ಷಗಳ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಸಂಸ್ಥೆಯ ಟಾಪರ್ ಆಗಿ ಹೊರ ಹೊಮ್ಮಿದ್ದ 13 ವಿದ್ಯಾರ್ಥಿಗಳನ್ನು ಆಹ್ವಾನಿಸಿ ಗೌರವಿಸಿದ ಕಾರ್ಯ ಸಂಸ್ಥೆಯ ವಿಶೇಷ ಕಾಳಜಿಗೆ ಸಾಕ್ಷಿ ಎನಿಸಿತು.
ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಚೆಂದ ಮೂಡಿ ಬಂದವು. ಶಿವ ತಾಂಡವ, ಸುಗ್ಗಿ ಹಾಡು, ಕೋಲಾಟ, ಚಾರ್ಲಿ ಚಾಪ್ಲಿನ್ ಡಾನ್ಸ್ , ಹೆಣ್ಣು ಭ್ರೂಣ ಹತ್ಯೆ, ಅನಕ್ಷರತೆ, ಕಲಿಕಾ ದೋಷ ನಿವಾರಣೆಯ ಸಂದೇಶ ಸಾರಿದ ನೃತ್ಯ ರೂಪಕ ಇತ್ಯಾದಿಗಳು ವಿದ್ಯಾರ್ಥಿಗಳ ಜಾಣ್ಮೆ, ಕಲೆ ಹಾಗೂ ಪ್ರತಿಭೆಯನ್ನು ಅನಾವರಣಗೊಳಿಸಿದವು. ” ತೊಲಗಲಿ ತ್ರಾಸ – ಮಿನುಗಲಿ ರೈತನ ಮೊಗದಲಿ ಮಂದಹಾಸ ” ಎಂಬ ಶೀರ್ಷಿಕೆಯಡಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಿರು ನಾಟಕ ಪ್ರಸ್ತುತ ರೈತಾಪಿ ವರ್ಗದ ಬವಣೆ ತೆರೆದಿಡುವ ಜೊತೆ ಪರಿಹಾರೋಪಾಯದ ಆಶಯ ವ್ಯಕ್ತಪಡಿಸಿತು.
ಸಂಸ್ಥೆಯ ಕಾರ್ಯದರ್ಶಿ ಶಿವಾನಂದಪ್ಪ ಜಿ.ಬಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಸುಜಾತ ಶಿವಾನಂದಪ್ಪ , ಮುಖ್ಯೋಪಾಧ್ಯಾಯ ಶಶಿಧರ್ ಎಸ್ ವೇದಿಕೆಯಲ್ಲಿದ್ದರು.
ಶಿಕ್ಷಕರಾದ ರವೀಂದ್ರ, ಆಸೀಫುಲ್ಲಾ, ಶಿಕ್ಷಕಿಯರಾದ ಕವಿತಾ ಕೊಮಾರನಹಳ್ಳಿ, ಪ್ರತಿಭಾ ಜಗದೀಶ್ , ಶಾಂತಾ, ಭಾಗ್ಯ ರೇಣುಕಾ ಪ್ರಸನ್ನ, ಅನುಷಾ, ಚಂದನ, ಜಯಲಕ್ಷ್ಮೀ, ಸಂಗೀತ ಕಾರ್ಯಕ್ರಮದ ಶಿಸ್ತು ನಿರ್ವಹಿಸಿದರು.
ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಸುತ್ತಮುತ್ತಲ ಗ್ರಾಮದ ಸಾವಿರಾರು ವೀಕ್ಷಕರು ನೆರೆದಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243