ದಿನದ ಸುದ್ದಿ
ದೂಡಾ ನಿರ್ಲಕ್ಷ್ಯ ಧೋರಣೆ ; ಅಡ ಕತ್ತರಿಯಲ್ಲಿ ಸಿಲುಕಿದ ಅನ್ನದಾತ : ದೂಡಾಗೆ ಮೇ31ರವರೆಗೆ ಡೆಡ್ ಲೈನ್ ನೀಡಿದ ಹಳೇ ಕುಂದುವಾಡ ರೈತರು
ಸುದ್ದಿದಿನ,ದಾವಣಗೆರೆ : ನಗರದ ಹಳೇ ಕುಂದುವಾಡದಲ್ಲಿ ದೂಡಾ ಇಲಾಖೆ ಹೊಸ ಬಡಾವಣೆ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು, ಆದರೆ ಎರಡುವರೆ ವರ್ಷಗಳಿಂದ ರೈತರನ್ನು ಅಲೆದಾಡಿಸುತ್ತಾ ಜಮೀನು ಖರೀದಿ ಪ್ರಕ್ರಿಯೆಯನ್ನೆ ಶುರು ಮಾಡದೇ ರೈತರನ್ನ ಅಡಕತ್ತರಿಯಲ್ಲಿ ಸಿಲುಕಿಸಿದೆ, ಮೇ 31ರೊಳಗೆ ಖರೀದಿ ಪ್ರಕ್ರಿಯೆ ಶುರು ಮಾಡಬೇಕು, ಇಲ್ಲದಿದ್ದಲ್ಲಿ ರೈತರು ಜಮೀನು ಮಾರಾಟ ಮಾಡುವುದಿಲ್ಲ ಎಂದು ದೂಡಾ ಇಲಾಖೆಗೆ ರೈತರು ಅಂತಿಮ ಗಡುವು ನೀಡಿದ್ದಾರೆ.
ನಗರದ ದೂಡಾ ಕಚೇರಿಗೆ ಆಗಮಿಸಿದ ಹಳೇ ಕುಂದುವಾಡ
ರೈತರು, ದೂಡಾ ಆಯುಕ್ತ ಕುಮಾರಸ್ಚಾಮಿ ಅವರಿಗೆ ಮನವಿ ಸಲ್ಲಿಸಿದರು.. ಈ ಸಂದರ್ಭದಲ್ಲಿ ಮಾತನಾಡಿದ ರೈತರು, ಹಳೇ ಕುಂದುವಾಡದಲ್ಲಿ ದೂಡಾ ಇಲಾಖೆ ಸುಮಾರು 53.19 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಲು ತಯಾರಿ ನಡೆಸಿದೆ. ಈ ಪ್ರಕ್ರಿಯೆ ಸುಮಾರು ಎರಡುವರೆ ವರ್ಷದಿಂದ ನಡೆಯುತ್ತಲೇ ಇದೆ.ಮೊದಲು ರೈತರನ್ನು ಆಹ್ವಾನಿಸದೇ ದರ ನಿಗದಿ ಮಾಡಿ ವಿವಾದ ಸೃಷ್ಟಿಸಿತ್ತು.
53 ಎಕರೆ ಜಮೀನನ್ನೆ ಖರೀದಿ ಮಾಡಲು ಆಗುತ್ತಿಲ್ಲ, 53 ಎಕರೆ ಪ್ರದೇಶದ ಸುತ್ತಾಮುತ್ತಾ ಇರುವ 150 ಎಕರೆಯನ್ನ ಸ್ವಾಧೀನ ಮಾಡಿಕೊಳ್ಳುತ್ತೇವೆ ಎಂದು ಪ್ರಕಟಣೆ ಹೊರಡಿಸುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿತ್ತು.. ಅದಾದ ಬಳಿಕ ರೈತರನ್ನು ಮನವರಿಕೆ ಮಾಡಿ ಬಳಿಕ ನಾಲ್ಕು ತಿಂಗಳ ಹಿಂದೆ ಡಿಸಿ ಮಹಾಂತೇಶ್ ಬೀಳಗಿಯವರ ಅಧ್ಯಕ್ಷತೆಯಲ್ಲಿ ಮರು ಸಭೆ ಕರೆದು ಒಂದು ಎಕರೆಗೆ 1.28 ಕೋಟಿ ರೂ. ಹಾಗೂ ಸರ್ಕಾರಿ ದರದಲ್ಲಿ ಒಂದು ನಿವೇಶನ ನೀಡಲು ರೈತರು ಹಾಗೂ ದೂಡಾ ಇಲಾಖೆ ನಡೆಯುವ ಅಂತಿಮ ಒಪ್ಪಂದ ನಡೆದಿತ್ತು.
ಈ ವೇಳೆ ಎರಡೇ ತಿಂಗಳಲ್ಲಿ ಜಮೀನು ಖರೀದಿ ಮಾಡುತ್ತೇವೆ ಎಂದು ದೂಡಾ ಸಮಯ ಕೇಳಿತ್ತು.. ಆದರೆ ನಾಲ್ಕು ತಿಂಗಳು ಕಳೆದರು ಖರೀದಿ ಪ್ರಕ್ರಿಯನ್ನೆ ಶುರು ಮಾಡಿಲ್ಲ, ಇತ್ತ ನಮ್ಮ ಜಮೀನು ನಮಗೆ ಬಿಟ್ಟುಕೊಡಿ ಎಂದರು ಬಿಡುತ್ತಿಲ್ಲ, ಎರಡುವರೆ ವರ್ಷದಿಂದ ರೈತರನ್ನು ಅಲೆದಾಡಿಸುತ್ತಾ ಮೂಗಿಗೆ ತುಪ್ಪ ಸವರುವ ಕೆಲಸವನ್ನು ದೂಡಾ ಇಲಾಖೆ ಮಾಡಿತ್ತಿದೆ ಎಂದು ರೈತರು ದೂರಿದರು.
ಕೆಲವು ರೈತರು ಸಾಲಸೋಲು ಮಾಡಿ ಸಂಕಷ್ಟದಲ್ಲಿದ್ದಾರೆ.. ಇನ್ನೂ ಕೆಲವರು ಜಮೀನು ಬೇರೆಯವರಿಗೆ ಮಾರಾಟ ಮಾಡಲಾಗದ ಸ್ಥಿತಿಯಲ್ಲಿದ್ದಾರೆ, ಇಲ್ಲಿ ಜಮೀನು ಮಾರಾಟ ಮಾಡಿ ಬೇರೆಡೆ ಜಮೀನು ಖರೀದಿಸಲು ಮುಂದಾದರೆ ಈಗಾಗಲೇ ಬೇರೆಡೆ ಜಮೀನು ದರ ಗಗನಕ್ಕೆ ಏರಿದೆ, ಇಲ್ಲಿ ಮಾರಾಟ ಮಾಡಿ ದುಬಾರಿ ಬೆಲೆಗೆ ಬೇರೆಡೆಗೆ ಜಮೀನು ಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕೆಲವು ರೈತರು ಗೊಂದಲಕ್ಕೆ ಹೀಡಾಗಿದ್ದಾರೆ, ಕೆಲವರು ಜಮೀನು ಕೊಡಲ್ಲ ಎಂದರು ಸಹ ಈಗಾಗಲೇ ಬಡಾವಣೆ ನಿರ್ಮಾಣಕ್ಕೆ ಸೇರ್ಪಡೆ ಮಾಡಿ ರೈತರಿಗೆ ದೂಡಾ ತೊಂದರೆ ನೀಡುತ್ತಿದೆ.
ಈ ಹಿನ್ನಲೆ ಇದೇ ಮೇ31 ರೊಳಗೆ ಜಮೀನು ಖರೀದಿ ಪ್ರಕ್ರಿಯೆ ಶುರು ಮಾಡಬೇಕು, ದಿನಾಂಕ ಮೀರಿದರೆ ಯಾವುದು ಕಾರಣಕ್ಕೂ ನಾವು ನಿಮಗೆ ಜಮೀನು ಮಾರಾಟ ಮಾಡುವುದಿಲ್ಲ, ದೂಡಾ ಎಲ್ಲಾ ಜಮೀನುಗಳಿಗೆ ನಿರಪೇಕ್ಷಣ ಪತ್ರ(ಎನ್ ಒಸಿ) ನೀಡಿ ನಮ್ಮ ಜಮೀನುಗಳಿಗೆ ಮುಕ್ತಿ ನೀಡಿ ಎಂದು ರೈತರು ಅಂತಿಮ ಗಡುವು ನೀಡಿದ್ದಾರೆ.
ಇನ್ನೂ ಸಂದರ್ಭದಲ್ಲಿ ಹರಿಹರ ಶಾಸಕ ಎಸ್ ರಾಮಪ್ಪ ಮಾತನಾಡಿ, ಜಮೀನು ಖರೀದಿ ಮಾಡಲು ನಿಮಗೆ ಆಗದಿದ್ದರೆ ರೈತರಿಗೆ ಅಲೆದಾಡಿಸಿ ಯಾಕೆ ತೊಂದರೆ ನೀಡುತ್ತೀರಿ, ಅವರ ಪಾಡಿಗೆ ಅವರನ್ನು ಬಿಟ್ಟುಬಿಡಿ ಎಂದು ಆಯುಕ್ತರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಿಟ್ಲಕಟ್ಟೆ ಚಂದ್ರಪ್ಪ, ನರಸಪ್ಪರ ಶಿವಪ್ಪ, ಹನುಮಂತಪ್ಪ, ಜಯ್ಯಪ್ಪ, ದೇವರಾಜ್, ರೇವಣಪ್ಪ, ಮಧುನಾಗರಾಜ್, ಆನಂದಪ್ಪ ಸೇರಿದಂತೆ ರೈತರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243