ಲೈಫ್ ಸ್ಟೈಲ್
ಕಂತ್ರಿ ನಾಯಿಯಲ್ಲ, ಡೊಂಕು ಬಾಲದ “ಕಂಟ್ರಿ” ನಾಯಿ..!
- ಡಾ.ಎನ್.ಬಿ.ಶ್ರೀಧರ
ಹೋಗಯ್ಯ.. ನಿನ್ ಕಂತ್ರಿ ಬುದ್ಧಿ ತೋರಿಸ್ಬೇಡ..!! ಇದು ಒಂದು ಸಾಮಾನ್ಯ ಬೈಗುಳ. ಈ “ಕಂತ್ರಿ” ಶಬ್ದ ಎಲ್ಲಿಂದ ಬಂತು ಅಂದರೆ “ಶುದ್ಧ ದೇಶಿ” ಅಂತಲೋ ಅಥವಾ ಸ್ಥಳೀಯವಾಗಿ ತಯಾರಾಗಿರುವುದು ಅಂತ ಇರಬಹುದು. ನಮ್ಮ ಬೀದಿ ನಾಯಿಗಳಿಗೆ ಇದೊಂದು ವಿಶೇಷಣವಾಗಿ ಸೇರಿಕೊಂಡು ಬಿಟ್ಟಿದೆ!. ಪಕ್ಕಾ ನಮ್ಮ “ಸ್ವದೇಶಿ ಮೇಕ್” ಆದ ಇವು ಇನ್ನೂ ಸ್ವದೇಶಿ ಪ್ರೇಮಿಗಳ ಕಣ್ಮಣಿ ಆಗದೇ ಇರುವುದು ಅವುಗಳ ದುರಂತವೇ ಸರಿ.
ನಾಯಿಯು ತೋಳದ ಜಾತಿಗೆ ಸೇರಿದ ಒಂದು ಪ್ರಾಣಿ. ಆದರೆ ನಾಯಿಯು ತನ್ನ ಗೆಳೆಯ ಸಮಾನನಾದ ಮಾಲೀಕನ ಮಾತನ್ನು ಕೇಳುವ, ಆಜ್ಞೆಯನ್ನು ಪಾಲಿಸುವ ನಿಯತ್ತಿನ ಸಾಕು ಪ್ರಾಣಿ. ಮನೆ ನಾಯಿಗೂ, “ಬೀದಿ ನಾಯಿ” ಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಶಿಕಾರಿಗಾಗಿಯೂ, ಮನೆಯನ್ನು ರಕ್ಷಿಸಲು, ಹೊಲ-ಗದ್ದೆಗಳನ್ನು ಕಾಯಲು ನಾಯಿಯನ್ನು ಸಾಕಲಾಗುತ್ತದೆ. ನಾಯಿಯಲ್ಲೂ ಹಲವು ವಿಧಗಳಿವೆ. ಅವೆಂದರೆ “ಜಾತಿ” ನಾಯಿ ಮತ್ತು “ನಾಯಿ” ಜಾತಿ. ವಿದೇಶಿ ನಾಯಿಗಳಾದ ಡಾಬರ್ಮೆನ್, ಡಾಶ್ ಹಂಡ್, ಲಾಬ್ರಡಾರ್ ಇವೆಲ್ಲಾ “ಜಾತಿ”ನಾಯಿಗಳು.. ನಮ್ಮ ಕಥಾ”ನಾಯಕ”ರಾದ “ಕಂತ್ರಿ” ನಾಯಿಗಳು ಶ್ವಾನ ಪ್ರೇಮಿಗಳ ಪ್ರಕಾರ “ನಾಯಿ” ಜಾತಿ!
“ಡೊಂಕು ಬಾಲದ ನಾಯಕರೆ, ನೀವೇನೂಟವ ಮಾಡಿದಿರಿ?… ಕಣಕವ ಕುಟ್ಟುವ ಅಲ್ಲಿಗೆ ಹೋಗಿ;ಹಣಿಕೀ ಹಣಿಕೀ ನೋಡುವಿರಿ; ಕಣಕವ ಕುಟ್ಟುವ ಒನಕೆಲಿ ಹೊಡೆದರೆ ಕಂಯ್ ಕುಂಯ್ ರಾಗವ ಮಾಡುವಿರಿ! ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ ತಗ್ಗೀ ಬಗ್ಗೀ ನೋಡುವಿರಿ;ಹುಗ್ಗಿಯ ಮಾಡುವ ಸವಟಲಿ ಹೊಡೆದರೆ ಕಂಯ್ ಕುಂಯ್ ರಾಗವ ಮಾಡುವಿರಿ! ಹಿರಿ ಬೀದಿಯಲಿ ಓಡುವಿರಿ,ಕರಿ ಬೂದಿಯಲಿ ಹೊರಳುವಿರಿ; ಪುರಂದರ ವಿಠ್ಠಲರಾಯನು ಹೇಳಿದ ಪರಿಪರಿ ಆಟದಿ ಚರಿಸುವಿರಿ!” ಇದೊಂದು ಪುರಂಧರ ದಾಸರ ಜನಪ್ರಿಯ ಕೀರ್ತನೆ.
ಇದರಲ್ಲಿ ನಮ್ಮ “ಕಂತ್ರಿ” ನಾಯಿಗಳ ಸಂಪೂರ್ಣ ಗುಣಗಾನ ಮಾಡಲಾಗಿದೆ. ಪುರಂದರದಾಸರ ಮೊದಲ ಹೆಸರು ”ಶ್ರೀನಿವಾಸ ನಾಯ” ಎನ್ನುವದು ಎಲ್ಲರಿಗೂ ತಿಳಿದ ಸಂಗತಿ. ಈ ಹಾಡಿನ ಪಲ್ಲವಿಯಲ್ಲಿ ‘ಡೊಂಕು ಬಾಲದ ನಾಯಕರೆ’ ಎನ್ನುವ ಪದಪುಂಜವನ್ನು ಗಮನಿಸಿ. ಈ ಸಂಬೋಧನೆಯು ನಾಯಿಯನ್ನು ಉದ್ದೇಶಿಸಿರುವದು ಎನ್ನುವದು ಸಾಮಾನ್ಯ ಅರ್ಥ. ಅದರ ಜೊತೆಗೇ ದಾಸರು ‘ನಾಯಕರೆ’ ಎಂದು ಶ್ರೀನಿವಾಸ ನಾಯಕರನ್ನು ಅಂದರೆ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿರುವದು ಇಲ್ಲಿಯ ವಿಶೇಷಾರ್ಥ. ಬಹುಶಃ ದಾಸರು ತಮಗೆ ತಾವೇ ಹೀಗೆ ಹೇಳಿಕೊಳ್ಳುತ್ತಿರಬಹುದು.
ಈ ನಾಯಿಗಳೂ ಅಷ್ಟೇ.. ಹಸಿವಿನಿಂದ ಬಳಲಿ ಎಲ್ಲೆಲ್ಲಿ ಅಹಾರ ಸಿಗುತ್ತದೆಯೋ ಆಲ್ಲಲ್ಲಿ ನುಗ್ಗಿ ಸಿಕ್ಕ ಸಿಕ್ಕವರಿಂದ ಹೊಡೆಸಿಕೊಂಡು “ಕಂಯ್.. ಕಂಯ್. ಎನ್ನುತ್ತಾ ಮತ್ತೆ ಮತ್ತೆ ಅದೇ ಸ್ಥಳಕ್ಕೆ ನುಗ್ಗಿ ದೀನ ದ್ರಷ್ಟಿಯಿಂದ ನೋಡುತ್ತಾ ದಯೆ ಬರುವ ಹಾಗೇ ಮಾಡಿ ಅಹಾರ ಗಿಟ್ಟಿಸುತ್ತವೆ. ಇದು ಅವುಗಳ ಚಾಕಚಕ್ಯತೆ.ಹಸಿವಾದಾಗ ಅಹಾರ ನೀಡದಿದ್ದರೆ ಎರಡೂ ತುಟಿಗಳನ್ನು ಹಿಸಿದು ದಂತಪಂಕ್ತಿಗಳನ್ನು ತೋರಿಸುತ್ತಾ ಹೆದರಿಸಿ ಅಹಾರ ಗಿಟ್ಟಿಸುವುದಿದೆ.
‘ನಾಯಿಯ ಬಾಲ ಲಳಿಗೆಯಲ್ಲಿ ಹಾಕಿದರೂ ಡೊಂಕೇ’ ಎನ್ನುವ ಗಾದೆ ಮಾತು ಇದೆಯಲ್ಲ! ಇದಕ್ಕೆ ತಕ್ಕ ಹಾಗೇ ನಮ್ಮ ಕಂತ್ರಿ ನಾಯಿಗಳು. ಸುರುಳಿ ಸುತ್ತಿಕೊಂಡು ಅವುಗಳ “ದ್ವಾರ”ವನ್ನೆಲ್ಲಾ ಜಗಕ್ಕೆಲ್ಲಾ ಹೆಮ್ಮೆಯಿಂದ ತೋರಿಸಿಕೊಂಡು ಓಡಾಡುವುದು ಪ್ರಾಣಿಸಹಜ ಧರ್ಮ ಎಂದು ಚರ್ಚೆಗೊಳಪಡಿಸದೇ ಸುಮ್ಮನಾಗುವುದು ಒಳಿತು. ನನ್ನ ಸ್ನೇಹಿತನೊಬ್ಬ ತಮಾಷೆಯಾಗಿ “ಈ ಕಂತ್ರಿ ನಾಯಿ ಮುಂಡೆವಕ್ಕೆ ಚಡ್ಡಿ ಹೊಲಿಸ್ತೀವಿ ಅಂತ ಯಾರೂ ಮುಂದೆ ಬಂದಿಲ್ವೇ?! ಅಸಹ್ಯ ಕಣಪ್ಪಾ.. ನವದ್ವಾರಗಳನ್ನೆಲ್ಲಾ ಜಗತ್ತಿಗೇ ತೋರಿಸ್ಕೊಂಡು ಓಡಾತ್ವಲ್ಲಾ” ಅಂತ ಅಲವತ್ತುಕೊಂಡಿದ್ದ..
“ರೀ ಅವೆಲ್ಲಾ ಕಂತ್ರಿ ನಾಯಿಗಳಲ್ಲ ಕಣ್ರೀ .. ಕಂಟ್ರಿ ನಾಯಿಗಳು..ಹೀಗೆಂದು ಹೇಳಿದ್ದು ನನ್ನ ಸ್ನೇಹಿತ.. ಸಂಜೆ ವಾಕಿಂಗ್ ಹೋಗುವಾಗ ಈ ಕಂತ್ರಿ ನಾಯಿಗಳ ವರ್ತನೆಯನ್ನೇ ಗಮನಿಸುವುದು ನನ್ನ ಕಾಯವಾಗಿತ್ತು. ಒಂದರ ಹಿಂದೆ ಒಂದರಂತೆ ಏನೋ “ಮಹತ್ಕಾರ್ಯ” ಸಾಧಿಸಲು ಕಿವಿ ಕತ್ತು ನೇರ ಮಾಡಿ ಗಂಬೀರವದನ ಮಾಡಿಕೊಂಡು ಆಗಾಗ ಅಲ್ಪ ಸ್ವರದಲ್ಲಿ ಗುರ್ರೆನ್ನುತ್ತಾ ಅವು ಹೋಗುವುದನ್ನು ನೋಡಿದರೆ ವಿಧಾನ ಸೌಧದಲ್ಲಿ ಮಾನ್ಯಮಂತ್ರಿಗಳು ಸಭೆ ಕರೆದಾಗ ತರತರದ ಕಡತಗಳನ್ನು ಬಗಲಲ್ಲಿಟ್ಟುಕೊಂಡು ಮೊಬೈಲಿನಲ್ಲಿ ಯಾರ ಜೊತೆಯೋ ಮಾತನಾಡುತ್ತಾ ಅನ್ಯಮನಸ್ಕರಾಗಿ ಹೋಗುತ್ತಿರುವ ಅಧಿಕಾರಿಗಳಂತೆ ಕಾಣುತ್ತಿದ್ದವು.
ದೀನ ವದನದಿಂದ ಮನೆ ಮುಂದೆ ನಿಂತು ಬಾಲ ಅಲ್ಲಾಡಿಸುತ್ತಾ ಪರಮ ಸ್ನೇಹಿತರಂತೆ ವರ್ತಿಸಿ ತಿಂಡಿಗಾಗಿ ಭಿಕ್ಷೆ ಕೋರುವ ನಾಯಿಗಳ ಸ್ವಭಾವವೇ ಬೇರೆ. ಮನೆಯೊಡತಿಗೆ ಕರುಣೆ ಉಕ್ಕಿ ತಿಂಡಿಯನ್ನು ನೀಡದಿದ್ದರೆ ಜಪ್ಪಯ್ಯ ಅಂದರೂ ಸಹ ಒಂದಿನಿತೂ ಮುಂದೆ ಹೋಗದ ನಾಯಿಗಳೆಷ್ಟೋ?. ಅಲ್ಪ ದಯೆ ಬಂದು ಅಹಾರ ಹಾಕಿದರೆ ಅಲ್ಲಿಯೇ ಜಾಂಡಾ ಊರಿಯೇ ಬಿಡುತ್ತವೆ. ಕ್ರಮೇಣ ಅವುಗಳ ಸ್ನೇಹಪರ ನಡುವಳಿಕೆಯಿಂದ ವಿಶ್ವಾಸ ಗಳಿಸಿ ಮನೆಗೆ ಎಂಟ್ರಿ ಹೊಡದು ಮನೆಯ ಕಾಯಂ ಸದಸ್ಯನಾದರೂ ಸಹ ಆಶ್ಚರ್ಯವಿಲ್ಲ!!
ನನ್ನ ಸ್ನೇಹಿತನ ಕಾಕರ್ ಸ್ಪಾನಿಯಲ್ ಜಾತಿಯ ಶ್ವಾನವೊಂದನ್ನು ಕರೆದು ಕೊಂಡು ವಾಕಿಂಗ್ ಹೋಗುತ್ತಿದ್ದೆವು. ಒಮ್ಮೆ ದಾರಿಯ ಪಕ್ಕ ಒಂದು ಕಂತ್ರಿ ನಾಯಿಯೊಂದು ತನ್ನ ಪಕ್ಕೆಲೆಬುಗಳನ್ನು ಬಿಟ್ಟುಕೊಂಡು ನೆಲಕ್ಕೆ ಮೆತ್ತಿಕೊಂಡಂತೆ ಚಪ್ಪಟೆಯಾಗಿ ಬಿದ್ದುಕೊಂಡಿತ್ತು. ನಮ್ಮ ಇರುವನ್ನು ಸಂಪೂರ್ಣವಾಗಿ ಅಲಕ್ಷಿಸಿ ತನ್ನ ಕಿವಿಗಳೆರಡನ್ನು ತಟಪಟ ಕೊಡಗಿ ಹಾಗೇ ಸತ್ತು ಹೋದಂತೆ ಬಿದ್ದುಕೊಂಡಿತು.
ನಮ್ಮ ನಾಯಿಯ ವಾಸನೆ ಸಿಕ್ಕೊಡನೆ ಶವದಂತೆ ಬಿದ್ದಿದ್ದ ಅದಕ್ಕೆ ತಟಕ್ಕನೆ ಪ್ರಾಣ ಸಂಚಾರವಾಗಿ ಪ್ರಾಣ ಸಂಚಾರವಾಗಿ ಸ್ಪ್ರಿಂಗಿನಂತೆ ನೆಗೆದು ಗುರ್ರೆನ್ನುತ್ತಾ ದಂತ ಪಂಕ್ತಿಗಳನ್ನು ತೋರಿಸುತ್ತಾ ಏರಿಹೋಯ್ತು. ಆದರೆ ನಮ್ಮ ನಾಯಿ ಒಳ್ಳೆ ಪಳಗಿದ ರಾಜಕಾರಣಿಯಂತೆ ತನ್ನ ಎರಡೂ ತುಟಿಗಳನ್ನು ಸಾಧ್ಯವಾದಷ್ಟು ಮೇಲೆತ್ತಿ ಒಳ್ಳೆ ಹೊಳಪು ಕೊಟ್ಟ ಗರಗಸದಂತಿದ್ದ ಎರಡೂ ದಂತ ಪಂಕ್ತಿಗಳ ಸಂಪೂರ್ಣ ಪ್ರದರ್ಶನ ಮಾಡಿತು.
ತನ್ನ ಆಯುದ ಖಜಾನೆಗಳಲ್ಲಿ ಇರುವ ವಿವಿಧ ತರಹೇವಾರಿ ಆಯುಧೋಪಕರಣಗಳ ವಿವರಗಳನ್ನು ಅವುಗಳ ಉಪಯೋಗದಿಂದ ಮುಂದೊದಗುವ ದುಷ್ಪರಿಣಾಮಗಳನ್ನೂ ಅದಕ್ಕೆ ಮನದಟ್ಟಾಗುವಂತೆ ಎಷ್ಟು ಸಾಧ್ಯವೋ ಅಷ್ಟು ಅಕರಾಳ ವಿಕರಾಳತೆಯಿಂದ ತೋರಿಸಿತು.
ನಮ್ಮ ಮಿತ್ರನ ಗಂಭೀರವಾದ “ಜಾತಿ” ನಾಯಿಯ ಬಳಿ ಇರಬಹುದಾದ ಯುದ್ದೋಪಕರಣಗಳನ್ನು ನೋಡಿದ ಕೂಡಲೇ ಕಾರ್ಗಿಲ್ ಯುದ್ಧದಲ್ಲಿ ಸೋತ ಪಾಕಿಸ್ತಾನದಂತೆ ಸೋಲು ಖಚಿತವಾಗಿ ಕಂತ್ರಿ ನಾಯಿಗೆ ಕೊಂಚ ದಿಗಿಲಾಯ್ತು. ತಕ್ಷಣ ತನ್ನ ರಕ್ಷಣಾ ನೀತಿಯನ್ನು ಬದಲಿಸಿ ಕೇವಲ ಮಾನ ಮರ್ಯಾದೆ ಉಳಿಸಿಕೊಳ್ಳಲು ದೂರದಿಂದಲೇ ವೊವ್.. ವೊವ್.. ಎಂದು “ನಾನೇನು ನಿನ್ನ ವೈರಿಯಲ್ಲ, ಸ್ನೇಹಾ ಮಾಡೋಣವೇ?” ಎಂಬಂತೆ ಬೊಗಳಿತು.
ನಮ್ಮ ನಾಯಿ ಜಾತಿ ನಾಯಿಯಾದ ಕಾರಣ ತುಸು ಮರ್ಯಾದೆಯನ್ನು ಬಿಂಕವನ್ನು ಜಾಸ್ತಿ ತೊರಿಸಿ ತನ್ನ ಗಂಬೀರತೆಯನ್ನು ಮೆರೆಯಿತು. ಪೊಗದಸ್ತಾದ ಕಾಯ, ಸುಂದರ ನುಣುಪಾದ ಕೇಶರಾಶಿಯ ಉದ್ದ ಕಿವಿಗಳ “ಜಾತಿ” ನಾಯಿಯನ್ನು ನೋಡಿ ಅದನ್ನು ನೋಡಿ ಬೊಗಳಿದ ಬಗ್ಗೆ ಆ ಕಂತ್ರಿ ನಾಯಿ ಅಪರಾಧಿ ಮನೋಭಾವ ಹೊಂದಿ ಅದಕ್ಕೆ ಅರಿವಿಲ್ಲದಂತೆ ಅದರ ಮೋಟು ಬಾಲ ಅದರ ಹಿಂಗಾಲುಗಳ ನಡುವೆ ತನ್ನಷ್ಟಕ್ಕೆ ತಾನೇ ಮಡಚಿಕೊಳ್ಳತೊಡಗಿತು.
ನಮ್ಮ ನಾಯಿ ಇದೇ ಸಂದರ್ಭವೆಂದು ಅದರ ಮನಸ್ಥೈರ್ಯವನ್ನು ಪೂರ್ತಿಯಾಗಿ ಕಲಕಲು “ಏನೆಂದು ಬಯ್ದೆ?.ಇನ್ನೊಂದು ಸಾರಿ ಬೊಗಳು ನೋಡೋಣ!!” ಎಂಬಂತೆ ಅದರ ಹತ್ತಿರ ಏರಿ ಹೋಯ್ತು. ಆ ಕಂತ್ರಿ ನಾಯಿ ಮಕಾಡೆ ಮಲಗಿ ನಾಲ್ಕೂ ಕಾಲುಗಳನ್ನು ಮೇಲೆತ್ತಿಕೊಂಡು ಅಂಗಾತ ಬಿದ್ದು ತನ್ನ ಪರಮ ಶರಣಾಗತಿಯನ್ನು ವ್ಯಕ್ತಬಿಟ್ಟಿತು !!.
ಇದೇ ಸಂದರ್ಭವೆಂದು ನಮ್ಮ ನಾಯಿ ಅದರ ಹತ್ತಿರ ಹೋಗಿ ಅದರ “ಮರ್ಮಸ್ಥಳ” ದ “ಸುವಾಸನೆ” ಯನ್ನು ಅಘ್ರಾಣಿಸಿ ಅದೂ ತನ್ನ ಜಾತಿಯ ಗಂಡು ನಾಯಿಯೇ ಎಂದು ತಿಳಿದು “ತತ್ತೆರೆಕಿ.. ಯೂಸ್ಲೆಸ್!” ಎಂಬಂತೆ ಬಯ್ದು ಪರಮ ನಿರಾಸಕ್ತಿಯಿಂದ ನಮ್ಮೆಡೆ ರಾಜಗಾಂಭೀರ್ಯದ ನಡೆಯಿಂದ ಬಂದಿತು. ಅದರ ಜಾಗದಲ್ಲಿ ಹೆಣ್ಣು ಕಂತ್ರಿ ನಾಯಿ ಇದ್ದರೆ ಮಜಾ ಬೇರೆ ಇತ್ತು ಎಂದು ನನ್ನ ಸ್ನೇಹಿತ ನಕ್ಕ !!.
ಈ ಕಂತ್ರಿ ನಾಯಿಗಳು ಹೀಟಿಗೆ ಬಂದರಂತೂ ಮುಗಿಯಿತು !! ಒಂದಿನಿತೂ ಮಾನ ಮರ್ಯಾದೆ ಇಲ್ಲದೆಯೇ “ನಾಯಿ” ಕಾದಾಡಿದಂತೆ ಕಾದಾಡುತ್ತವೆ. ಹತ್ತಾರು ಗಂಡು ನಾಯಿಗಳೆಲ್ಲಾ ಸೇರಿಕೊಂಡು ಒಂದಕ್ಕಿಂತ ಒಂದು ಮೇಲು ಎಂಬಂತೆ ತಮ್ಮ ತಮ್ಮೊಳಗೇ ಗುದ್ದಾಡುತ್ತವೆ. ಗೆದ್ದ ನಾಯಿಗೆ ಮಿಲನ ಮಹೋತ್ಸವದ ಸಂತಸವಾದರೆ ಸೋತ ಗಂಡು ನಾಯಿಗಳೆಲ್ಲಾ ಮೊಗ ಸೋತ ಸ್ವರವನ್ನು ಕುಂಯಿ .. ಕುಂಯಿ ಎಂದು ಹೊರಡಿಸುತ್ತಾ ಸೊಪ್ಪಗೇ ಮೊಗ ಮಾಡಿಕೊಂಡು ಬಂದ ದಾರಿಗೆ ಸುಂಕವಿಲ್ಲದಂತೆ ಮತ್ತೊಂದೆಡೆ ತೆರಳುತ್ತವೆ.
ಮುಂದುವರೆಯುತ್ತದೆ….
ಸುದ್ದಿದಿನ.ಕಾಂ|ವಾಟ್ಸಾಪ್|9980346243