ಸಿನಿ ಸುದ್ದಿ

ಡಾ.ರಾಜ್ ಚಿತ್ರಗಳ, ಹಾಡುಗಳ ಹಬ್ಬವೂ ; ನೆನಪಿನ ಅಲೆಗಳೂ..!

Published

on

  • ರಘೋತ್ತಮ ಹೊ‌.ಬ

ಇಂದು ಡಾ.ರಾಜಕುಮಾರ್ ಹುಟ್ಟುಹಬ್ಬ. ಡಾ.ರಾಜ್ ನಮ್ಮ ನಡುವಿನ, ನಮ್ಮ ನಡುವೆ ಈ ನೆಲದಲ್ಲಿ ನಡೆದಾಡಿದ ಅಪರೂಪದ ನಟ. ಕನ್ನಡದ ಏಕತೆ, ಅಸ್ಮಿತೆಗೆ ರಾಜ್ ಕೊಡುಗೆ ಅನನ್ಯ. ಅವರ ವೈವಿದ್ಯಮಯ ಪಾತ್ರಗಳು “ರಾಮನಿಂದು ಹಿಡಿದು ಗೌತಮ ಬುದ್ಧನವರೆಗೆ… ಲವರ್ ಬಾಯ್‌ನಿಂದ್ ಹಿಡಿದು ಜೇಮ್ಸ್ ಬಾಂಡ್ ಮಾದರಿ ಪತ್ತೇದಾರಿ ಹೀರೋವರೆಗೆ…” ಬಹುಶಃ ಕನ್ನಡದ ಬೇರಾವ ನಟರೂ ಅವರಷ್ಟು ವೈವಿಧ್ಯತೆಯನ್ನು ಮೆರೆಯಲೇ ಇಲ್ಲ, ನೀಡಲು ಸಾಧ್ಯವೇ ಇಲ್ಲ. ಅಂತಹ ಅನನ್ಯ, ಅದ್ಭುತ ಡಾ.ರಾಜ್. ದುರಂತವೆಂದರೆ ನನ್ನಂತಹವರು ಮನೆಯವರ ಅನುಮತಿ ಇಲ್ಲದೆ ಚಲನಚಿತ್ರ ನೋಡುವ ಮಟ್ಟಕ್ಕೆ ಬೆಳೆಯುವಷ್ಟೊತ್ತಿಗೆ ರಾಜ್ ಇರಲೇ ಇಲ್ಲ!

ಈ ನಡುವೆಯೂ ರಾಜ್ ಕುರಿತು ಅದರಲ್ಲೂ ಅವರ ಹಾಡುಗಳ ಕುರಿತು ಹೇಳುವುದಾದರೆ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ 10ನೇ ತರಗತಿಯ ದೊರೆರಾಜು ಹುಡುಗಿಯ ಧ್ವನಿಯಲ್ಲಿ ಮತ್ತು ನನ್ನ ತರಗತಿ ಸಹಪಾಠಿ ಮಿತ್ರ ಹೊನ್ನೂರು ಲಿಂಗರಾಜು ಡಾ.ರಾಜ್ ದನಿಯಲ್ಲಿ ಜ್ವಾಲಾಮುಖಿ ಚಿತ್ರದ “ಏಕೋ ಏನೋ… ಈ ನನ್ನ ಮನವು…” ಹಾಡನ್ನು ಕೀಬೋರ್ಡ್ ಮತ್ತು ಗಿಟಾರ್ ಸಮೇತ ಹಾಡಿದಾಗ ಮಕ್ಕಳಾದ ನಮಗಂತೂ ರಾಜ್ ನಮ್ಮ ಕಣ್ಣಮುಂದೆಯೇ ಹಾದು ಹೋದ ಅನುಭವ. ಆ ನೆನಪು ಈಗಲೂ ಚಿರಸ್ಥಾಯಿ. ಅಂದಹಾಗೆ ನಾನು ಕೇಳಿದ ಆ ಗಾಯನ ರಾಜ್ ಮೇಲಿನ ನನ್ನ ಅಭಿಮಾನವನ್ನು ಮತ್ತಷ್ಟು ಅವರ ಬಳಿ ಹೊಯ್ದಿತು. ಮುಂದೆ ಆರ್ಕೆಸ್ಟ್ರಾವೊಂದರಲ್ಲಿ ಅಶ್ವಮೇಧ ಚಿತ್ರದ “ಹೃದಯ ಸಮುದ್ರ ಕಲಕಿ…’ ಹಾಡನ್ನು ಕೇಳಿದಾಗ ಅಂತಹದ್ದು ಮತ್ತೂ ಹೆಚ್ಚಾಯಿತು. ಹ್ಞಾಂ, ಹಾಗೆಯೇ ಬಾಲ್ಯದಲ್ಲಿ ನಮ್ಮ ಎದುರು ಮನೆಯ ಗುರುದಾಸ ತಾತಾ ಟೈಲರಿಂಗ್ ಕೆಲಸ ಮಾಡುತ್ತಾ ಡಾ.ರಾಜ್‌ರ “ಬಾನಿಗೊಂದು ಎಲ್ಲೆ ಎಲ್ಲಿದೆ…” ಹಾಡನ್ನು ಹಾಡುತ್ತಿದ್ದರೆ… ಚಿಕ್ಕ ಹುಡುಗನಾಗಿ ನಾನದನ್ನು ಕೇಳುತ್ತಿದ್ದರೆ… ಆ ಅನುಭವವೇ ಒಂದು ರೋಚಕ! ಆ ಕಾರಣಕ್ಕೆ ಈಗಲೂ ನಾನು ಡಾ.ರಾಜ್ ಸ್ವರದಲ್ಲಿ ಆಗಾಗ ಅನುಕರಿಸಿ ಹಾಡುತ್ತಿರುತ್ತೇನೆ. ಡಾ.ರಾಜ್ ಹಾಡುಗಳ ಸ್ವರ್ಗದಲ್ಲಿ ತೇಲುತ್ತಿರುತ್ತೇನೆ.

ಇನ್ನು ರಾಜಕುಮಾರ್‌ರ ನಟನೆ ಬಗ್ಗೆ ಹೇಳುವುದಾದರೆ, ನಮ್ಮೂರ ಬೀದಿಯಲ್ಲಿ ಯಾವುದೋ ಹಬ್ಬದ ಸಂದರ್ಭದಲ್ಲಿ ಹಾಕಿದ್ದ ವಿಡಿಯೋದಲ್ಲಿ ಡಾ.ರಾಜ್‌ರ ‘ಭಾಗ್ಯವಂತರು’ ಸಿನಿಮಾ ನೋಡಿದಾಗ, ಆ ಸಿನಿಮಾದಲ್ಲಿ “3 ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು, ಅಪ್ಪ-ಅಮ್ಮ ಇಷ್ಟೇ ಇದ್ದ ನಮ್ಮಿಡೀ ಕುಟುಂಬ”ವೇ ಅದರಲ್ಲಿ ನಟಿಸಿದ ಅನುಭವವಾಗಿತ್ತು! ಹಾಗೆಯೇ ಊರ ಮಾರಿಹಬ್ಬದಲ್ಲಿ ಮೈಕ್‌ನಲ್ಲಿ ಆಗಿನ ಕಾಲದಲ್ಲಿ ಕಾಂತೀಯ ಪ್ಲೇಟ್‌ಗಳನ್ನು ಬಳಸಿ ಹಾಕುತ್ತಿದ್ದ ಡಾ.ರಾಜ್ ಚಿತ್ರಗಳ ಗೀತೆಗಳ ಕೇಳುತ್ತಿದ್ದಾಗ ಅನುಭವಿಸುತ್ತಿದ್ದ ಆನಂದ ಬಹುಶಃ ನೆನೆಪಿನ ಬಹುದೊಡ್ಡ ಹಿನ್ನೆಲೆಗೆ ರಾಜ್ ನಮ್ಮನ್ನು ಕರೆದೊಯ್ಯುತ್ತಾರೆ. ಮುಂದೆ ಟೇಪ್‌ರಿಕಾರ್ಡರ್ ಬಂದಾಗ ಕೇಳಿದ ‘ಅನುರಾಗ ಅರಳಿತು’, ‘ಪರಶುರಾಮ್’ ಚಿತ್ರಗಳ ಸ್ಟೋರಿ… ಅಬ್ಬಾ! ಅಂದಹಾಗೆ ತೆರೆಯಲ್ಲಿ ಅವರ ಚಿತ್ರಗಳನ್ನು ವಯಕ್ತಿಕವಾಗಿ ನಾನು ಸ್ವತಂತ್ರವಾಗಿ ನೋಡುವ ಮಟ್ಟಕ್ಕೆ ಬೆಳೆದಾಗ ನಾನು ನೋಡಿದ ಚಿತ್ರ ‘ಶಬ್ಧವೇಧಿ’ಯಾಗಿತ್ತು. ದುರಂತವೆಂದರೆ ಅದೇ ರಾಜ್ ರ ಕೊನೆಯ ಚಿತ್ರವಾಗಿತ್ತು!

ಆದರೆ ಈಗೀಗ ಟಿವಿಯಲ್ಲಿ, ಯೂಟ್ಯೂಬ್‌ನಲ್ಲಿ, ‘ಗಾನಾ’ app ನಲ್ಲಿ ರಾಜ್‌ರ ಎಲ್ಲಾ ಹಳೆಯ ಚಿತ್ರಗಳನ್ನು, ಹಾಡುಗಳನ್ನು ನೋಡಿದ್ದೇ ನೋಡಿದ್ದು, ಕೇಳಿದ್ದೇ ಕೇಳಿದ್ದು. ಅದರಲ್ಲೂ ಶಂಕರ್ ಗುರು ಚಿತ್ರದ ‘ಲವ್ ಮಿ ಆರ್ ಹೇಟ್ ಮಿ…’, ಹುಲಿಯ ಹಾಲಿನ ಮೇವು ಚಿತ್ರದ ‘ಚಿನ್ನದ ಮಲ್ಲಿಗೆ ಹೂವೇ’ ಹಾಡುಗಳನ್ನು ಕೇಳುತ್ತಿದ್ದರೆ… ಜತೆಗೆ ದನಿಗೂಡಿಸುತ್ತಿದ್ದರೆ… ಬಹುಶಃ ಬದುಕಿನ ಮೇಲಿನ ಪ್ರೀತಿಗೆ ರಾಜ್ ಒಂದು ಸಹಜ ಮಾದರಿಯಾಗುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version