ದಿನದ ಸುದ್ದಿ
ಸಜೀವಿ ಮಣ್ಣು ಸಾಮ್ರಾಜ್ಯದ ಮಹಾರಾಣಿ ಈ ಎರೆಹುಳು..!
ಇಂದು ವಿಶ್ವ ಎರೆಹುಳು ದಿನ. ಈ ಹಿನ್ನೆಲೆಯಲ್ಲಿ ಎರೆಹುಳು ಕುರಿತಂತೆ ಸಣ್ಣ ಲೇಖನ ನಿಮಗಾಗಿ.
- ಸಾಯ್ಲ್ ವಾಸು
ಇವಳು ಎರೆಹುಳು. ಸಜೀವಿ ಮಣ್ಣು ಸಾಮ್ರಾಜ್ಯದ ಮಹಾರಾಣಿ.ನಮ್ಮಲ್ಲಿ ಬೆರಗು ಮೂಡಿಸುವ ಬೆಡಗಿನರಸಿ. ಮಣ್ಣಲ್ಲಿ ತಾಕತ್ತು ತುಂಬುವ ಸೊಬಗಿನ ರಾಣಿ. ಸುಲಭಕ್ಕೆ ಕಣ್ಣಿಗೆ ಬೀಳದ ಮಾಯಾಂಗನೆ. ನಿರಂತರ ಮಣ್ಣಲ್ಲಿ ಮೇಲಿನಿಂದ ಕೆಳಗೆ – ಕೆಳಗಿನಿಂದ ಮೇಲೆ ಸಂಚರಿಸುತ್ತಾ ಕೋಟ್ಯಾಂತರ ಸುರಂಗಗಳನ್ನ್ನು ರೂಪಿಸುವ ವ್ಯೆಯ್ಯಾರಿ.
ಇವಳು ಹಾವಿನಂತೆ ಅಕ್ಕ ಪಕ್ಕ zigzag ರೀತಿಯಲ್ಲಿ ತೆವಳುತ್ತಾ ಸಾಗುವುದಿಲ್ಲ, ಬದಲಿಗೆ ನೇರವಾಗಿ ಮಣ್ಣಲ್ಲಿಯೇ ಮುನ್ನುಗ್ಗುತ್ತಾಳೆ. ಇದರಿಂದಾಗಿಯೇ “ನಿಸರ್ಗದ ನೇಗಿಲು” ಎಂಬ ಬಿರುದು ಪಡೆದವಳು.
ಒಟ್ಟಾರೆ ಸಜೀವಿ ಮಣ್ಣು ಸುಧಾರಕಿ ಹಾಗೂ ಮಣ್ಣು ವಿಶ್ಲೇಷಕಿ. ಇಂದಿಗೂ ಮಣ್ಣಿನ ಫಲವತ್ತತೆಯನ್ನು ಗುರುತಿಸಿ ತೀರ್ಮಾನಿಸುವಾಗ, ಮಣ್ಣಲ್ಲಿ ಇವಳ ಇರುವಿಕೆಯ ಪ್ರಮಾಣವನ್ನು ಪ್ರಧಾನವಾಗಿ ಪರಿಗಣಿಸಲಾಗುತ್ತದೆ. ಇವಳ ಮಹಿಮೆ, ಮಣ್ಣು ಮತ್ತು ಮಾನವ ಸಮುದಾಯಕ್ಕೆ ಇವಳ ಕೊಡುಗೆಗಳ ಕುರಿತಂತೆ ಆಳವಾಗಿ ಗಮನಿಸಿದಷ್ಟೂ ರೋಚಕ ಸಂಗತಿಗಳು ಬಯಲಾಗುತ್ತವೆ.
ನಮ್ಮವರೇ ಆದ Dr. Radha Kale, Dr. Channesh T S, L C Nagaraj, Manjunatha Holalu ಹಾಗೂ Dr. Sulthan Ismail ಹಾಗೂ Sir Albert Howard, J. I. Rodale ಮತ್ತು Bill MOllison ಇನ್ನಿತರರು ಇವಳ ವಿದ್ಯಾರ್ಥಿಗಳೇ. ಇವಳ ಇತಿಹಾಸ, ಕುಲ-ಸಂಕುಲಗಳು, ಹುಟ್ಟು – ಬೆಳವಣಿಗೆ, ಪಾತ್ರ – ಜವಾಬ್ದಾರಿ – ಸೇವೆ ಇವೆಲ್ಲವನ್ನೂ ಕುರಿತಂತೆ ಈ ವಿದ್ಯಾರ್ಥಿಗಳು ಹಲವಾರು ಲೇಖನ – ಪುಸ್ತಕಗಳನ್ನೇ ಬರೆದಿಟ್ಟಿದ್ದಾರೆ.
ಇವಳಿರುವ ಮಣ್ನನ್ನು ಉಳುಮೆ ಮಾಡದಿದ್ದರೆ, ಆ ಮಣ್ಣಿಗೆ ನಿರಂತರ ಸಾವಯವ ಗೊಬ್ಬರವನ್ನೇ ಹಾಕುತ್ತಿದ್ದರೆ, ಇವಳಿರುವ ಮಣ್ಣನ್ನು ಸೂರ್ಯನ ನೇರಬಿಸಿಲಿಗೆ ಒಡ್ಡದಿದ್ದರೆ, ಇವಳಲ್ಲಿನ ವಿಶಿಷ್ಟ ಶಕ್ತಿ ಸಾಮರ್ಥ್ಯಗಳ ಅರಿವಾಗುತ್ತದೆ. ಇವಳ ಹಿಕ್ಕೆ ಅಥವಾ ತಿಂದು ಹೊರಹಾಕುವ ವಿಸರ್ಜಿತ ವಸ್ತು, ಮಣ್ಣಲ್ಲಿ ಬೆರೆಯುತ್ತಿದ್ದಂತೆ;
- ಮಣ್ಣಿನ ಆರೋಗ್ಯ ಸುಧಾರಣೆ
- ಇವಳು ಮಣ್ಣಲ್ಲಿ ನಿರ್ಮಿಸುವ ಸುರಂಗಗಳ ಮೂಲಕ ಗಾಳಿಯಾಡುವಿಕೆ
- ಈ ಸುರಂಗ ರಂಧ್ರಗಳ ಮೂಲಕ ಮಳೆ ನೀರು ಮಣ್ಣೊಳಗಿಳಿಯುತ್ತದೆ
- ಗಿಡದ ಬೇರುಗಳ ಮೂಲಕ ಗಿಡದ ಬೆಳವಣಿಗೆಗೆ ಬೇಕಾದ ಪೋಷಕಾಂಶ ಪೂರೈಕೆ
ಇವಳಲ್ಲಿನ ಅಪಾರ ಶಕ್ತಿ ಸಾಮರ್ಥ್ಯಗಳ ಕುರಿತು ನಮ್ಮಲ್ಲಿ ಲವಲೇಶದ ಜ್ಞಾನವೂ ಇಲ್ಲ. ಉದಾಹರಣೆಗೆ, ಇರುವೆಗಳು ಗಾತ್ರದಲ್ಲಿ ಚಿಕ್ಕದಾದರೂ, ಅವು ಬಲಿಷ್ಟ ಜೀವಿಗಳು ಎಂದೇ ನಮ್ಮಲ್ಲನೇಕರು ಭಾವಿಸಿದ್ದೇವೆ. ಆದರೆ ಇರುವೆಗಳಿಗೇ ಸಡ್ಡು ಹೊಡೆವಷ್ಟು ಬಲಿಷ್ಟತೆ ಇವಳಿಗಿದೆ. ತನ್ನ ತೂಕದ ಆರವತ್ತು ಪಟ್ಟು ಹೆಚ್ಚು ಭಾರದ ಕಲ್ಲುಗಳನ್ನು ಇವಳು ನಿರಾಯಾಸವಾಗಿ ನೂಕಬಲ್ಲಳು. ಅಂದರೆ 50 ಕೆ.ಜಿ. ತೂಕದ ವ್ಯಕ್ತಿಯೊಬ್ಬ 600 ಕೆ.ಜಿ. ತೂಕದ ಕಲ್ಲುಬಂಡೆಯೊಂದನ್ನು ಸುಲಭವಾಗಿ ನೂಕಿದಂತೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243