ನೆಲದನಿ
ಮಾಗಿದ ಕಾಲದಲ್ಲಿ ಸಾಹಿತ್ಯ ಕೃಷಿಗೆ ನಿಂತ ಪ್ರೊ.ಜಿ.ಪರಮೇಶ್ವರಪ್ಪ ಅವರ ಸಾಹಿತ್ಯ ಪಯಣ
- ಡಾ.ಕೆ.ಎ.ಓಬಳೇಶ್
ಭಾರತದಂತಹ ವಿಶಿಷ್ಟ ಸಾಂಸ್ಕೃತಿಕ ನಾಡಿನಲ್ಲಿ ವಿಭಿನ್ನ ಪ್ರಕಾರದ ಕಲೆಗಳು ಜನ್ಮತಳೆದಿವೆ. ಈ ಎಲ್ಲಾ ವಿಭಿನ್ನ ಕಲಾ ಪ್ರಕಾರಗಳು ಈ ನೆಲದ ಬಹುತ್ವವನ್ನು ಎತ್ತಿಹಿಡಿಯುವ ಪ್ರಯತ್ನ ಮಾಡಿವೆ. ಇಂತಹ ಬಹುತ್ವವೇ ಭಾರತದ ಸೌಹಾರ್ದತೆಗೆ ಸಾಕ್ಷಿಯಾಗಿರುವುದು ಈ ನೆಲದ ಹೆಮ್ಮೆಯ ಪ್ರತೀಕ.
ಇದಕ್ಕೆ ಪೂರಕವೆಂಬಂತೆ ಕನ್ನಡ ನಾಡಿನಲ್ಲಿ ಹಲವಾರು ಸಾಹಿತಿಗಳು ಈ ನೆಲದ ವಿವಿಧತೆಯನ್ನು ಅನಾವರಣಗೊಳಿಸುವ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸುವ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಇಂತಹ ದೇಶಿ ಸೊಗಡನ್ನು ಸಾಹಿತ್ಯದ ಮೂಲಕ ಸೆರೆಹಿಡಿಯುತ್ತ ಬಂದಿರುವ ಸಾಹಿತಿಗಳಲ್ಲಿ ಪ್ರೊ.ಜಿ.ಪರಮೇಶ್ವರಪ್ಪನವರು ಒಬ್ಬರಾಗಿದ್ದಾರೆ.
ಮಧ್ಯ ಕರ್ನಾಟಕದ ಐತಿಹಾಸಿಕ ನಗರವಾಗಿರುವ ಚಿತ್ರದುರ್ಗ ಪ್ರಾಂತ್ಯವು ಕರ್ನಾಟಕದ ಸಾಂಸ್ಕೃತಿಕ ಹಿರಿಮೆ ಮತ್ತು ಗರಿಮೆಗೆ ತನ್ನದೇ ಆದ ವಿಶಿಷ್ಟ ಕಾಣಿಕೆಯನ್ನು ನೀಡಿರುವುದು ಚಾರಿತ್ರಿಕ ಸತ್ಯ. ಇಂತಹ ಸಾಂಸ್ಕೃತಿಕ ಶ್ರೀಮಂತ ನೆಲದಲ್ಲಿ ಹುಟ್ಟಿ ಬೆಳೆದು, ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಅಂತರ್ಗತವಾಗಿರುವ ಸಾಹಿತ್ಯದ ದೇಶೀಯತೆ ಹಾಗೂ ಅದರ ವೈಶಿಷ್ಟ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಾಹಿತ್ಯ ಚಟುವಟಿಕೆಗೆ ತೊಡಗಿಸಿಕೊಂಡ ಜಿ.ಪರಮೇಶ್ವರಪ್ಪನವರ ಬದುಕಿನ ಸುತ್ತ ಒಂದು ಕೀರುನೋಟ ಬೀರುವುದು ಪ್ರಸ್ತುತ ಲೇಖನದ ಆಶಯವಾಗಿದೆ.
ಶ್ರೀಯುತ ಜಿ.ಪರಮೇಶ್ವರಪ್ಪನವರು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು ಹರ್ತಿಕೋಟೆ ಸಮೀಪದ ಕಪಿಲೆಹಟ್ಟಿ ಗ್ರಾಮದಲ್ಲಿ ದಿನಾಂಕ 15 ನವಂಬರ್1950ರಲ್ಲಿ ಜಡಿಯಪ್ಪ ಹಾಗೂ ಸಕ್ರಮ್ಮ ದಂಪತಿಗಳ ತೃತೀಯ ಪುತ್ರನಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹರ್ತಿಕೋಟೆಯಲ್ಲಿ, ಪ್ರೌಢ ಶಿಕ್ಷಣವನ್ನು ಐಮಂಗಳದಲ್ಲಿ, ಪದವಿಪೂರ್ವ ಶಿಕ್ಷಣವನ್ನು ಚಿತ್ರದುರ್ಗದಲ್ಲಿ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮೈಸೂರಿನಲ್ಲಿ ಪಡೆದರು.
ಕನ್ನಡ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ನಂತರದ ದಿನಮಾನಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಾದ ಬೀದರ್, ಅಥಣಿ, ಮಾಯಕೊಂಡ, ಚಳ್ಳಕೆರೆ ಹಾಗೂ ಚಿತ್ರದುರ್ಗದಲ್ಲಿ 1980 ರಿಂದ 2020 ರವರೆಗೆ ಸುಮಾರು 30 ವರ್ಷಗಳ ಕಾಲ ಬೋಧಕರಾಗಿ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ.
ಬಾಲ್ಯದ ದಿನಗಳಿಂದಲೂ ಗ್ರಾಮೀಣ ಬದುಕಿನೊಂದಿಗೆ ನಂಟನ್ನು ಹೊಂದಿದ್ದ ಇವರಿಗೆ ಜಾನಪದ ಕಲೆ ಹಾಗೂ ಸಾಹಿತ್ಯದೊಂದಿಗೆ ಬೆರೆತು ಹೋಗಿದ್ದರು. ಹಾಗೆಯೇ ಸಾಹಿತ್ಯದ ವಿದ್ಯಾರ್ಥಿಯಾದ ಇವರಿಗೆ ಕನ್ನಡ ಸಾಹಿತ್ಯ ಹಾಗೂ ಹಲವಾರು ಕನ್ನಡ ಸಾಹಿತಿಗಳಿಗೆ ಮಾರುಹೋಗಿದ್ದರು. ಆದರೆ ಸಾಹಿತ್ಯದ ಬರವಣಿಗೆಯ ಬಗ್ಗೆ ಇವರಿಗೆ ಒಂದಷ್ಟು ಭಯವನ್ನು ಕಟ್ಟಿಕೊಂಡ ಕಾರಣ ತಮ್ಮ ಬೋಧನಾ ಅವಧಿಯುದ್ದಕ್ಕೂ ಬರವಣಿಗೆಯಿಂದ ದೂರವೇ ಉಳಿದಿದ್ದರು.
ಶ್ರೀಯುತರು ಬರವಣಿಗೆಯಿಂದ ದೂರ ಉಳಿದಿದ್ದರೂ ಬೋಧನೆಯೊಂದಿಗೆ ಸಾಹಿತ್ಯ ಪ್ರೀತಿಯನ್ನು ಸದಾ ಕಾಪಾಡಿಕೊಂಡಿದ್ದರು. ಪಂಪ, ರನ್ನ, ಕುಮಾರವ್ಯಾಸರಂತಹ ಪ್ರಾಚೀನ ಕವಿಗಳು ಹಾಗೆಯೇ ಕುವೆಂಪು, ಬೇಂದ್ರೆ, ಶಿವರಾಮ ಕಾರಂತ್, ಸಿ.ಪಿ.ಕೃಷ್ಣಮೂರ್ತಿ, ಜಿ.ಎಚ್.ನಾಯಕರಂತಹ ಆಧುನಿಕ ಸಾಹಿತಿಗಳ ಬರಹಗಳು ಇವರ ಮೇಲೆ ಸಾಕಷ್ಟು ಪ್ರೇರಣೆ ಮತ್ತು ಪ್ರಭಾವವನ್ನು ಬೀರಿದ್ದವು.
ಇಂತಹ ಸಾಹಿತ್ಯ ಪರಂಪರೆಯಿಂದ ಸಾಹಿತ್ಯಾಭಿರುಚಿಯನ್ನು ಮೈಗೂಡಿಸಿಕೊಂಡಿರುವ ಜಿ.ಪರಮೇಶ್ವರಪ್ಪನವರು ತಮ್ಮ ವಿದ್ಯಾರ್ಥಿಗಳಿಗೂ ಸಾಹಿತ್ಯಾಸಕ್ತಿಯನ್ನು ಮೂಡಿರುವ ಕಾಯಕದಲ್ಲಿ ತಮ್ಮ ಬೋಧನಾ ವೃತ್ತಿಯನ್ನು ಮುನ್ನಡೆಸಿಕೊಂಡು ಬಂದವರು. ಹಾಗೆಯೇ ಹಳಗನ್ನಡ, ವ್ಯಾಕರಣ, ಛಂದಸ್ಸಿನಲ್ಲಿ ವಿಶೇಷವಾದ ಪರಿಣಿತಿಯನ್ನು ಹೊಂದಿದ್ದ ಇವರು, ತಮ್ಮ ವೃತ್ತಿ ಬದುಕಿನಲ್ಲಿ ಹೆಚ್ಚು ಬೋಧನೆ ಮಾಡಿ, ಇವುಗಳನ್ನು ಕರಗತ ಮಾಡಿಕೊಂಡಿದ್ದರು. ಹೀಗಾಗಿ ಕನ್ನಡ ಸಾಹಿತ್ಯದ ಛಂದೋ ಪ್ರಕಾರದ ತಾಳ, ಲಯವನ್ನು ಸ್ಪಷ್ಟವಾಗಿ ಅರಿತವರಾಗಿದ್ದರು. ಇದು ಮುಂದೆ ಶ್ರೀಯುತರ ಸಾಹಿತ್ಯ ಚಟುವಟಿಕೆಗೆ ವರವಾಗಿ ಪರಿಣಮಿಸಿತು.
ಶ್ರೀಯುತ ಜಿ.ಪರಮೇಶ್ವರಪ್ಪನವರು ತಮ್ಮ ವೃತ್ತಿ ಬದುಕಿನ ಅವಧಿಯಲ್ಲಿ ಸಾಹಿತ್ಯ ರಚನೆಗೆ ತೊಡಗಿದ್ದು ತೀರಾ ವಿರಳ. ಕೆಲವು ಸ್ನೇಹಿತರ ಒತ್ತಡ, ಸಭೆ ಸಮಾರಂಭಗಳಲ್ಲಿ ಉಪನ್ಯಾಸ ನೀಡುವುದಕ್ಕಾಗಿ ಮಾಡಿಕೊಂಡ ಟಿಪ್ಪಣಿಗಳು ಹಾಗೂ ವಿಶೇಷ ದಿನಗಳಿಗಾಗಿ ಪತ್ರಿಕೆಗಳಿಗೆ ಕೆಲವೊಂದು ಲೇಖನಗಳನ್ನು ಬರೆದಿರುವುದನ್ನು ಬಿಟ್ಟರೆ ಸಾಹಿತ್ಯದ ಯಾವುದೇ ಪ್ರಕಾರದಲ್ಲೂ ತಮ್ಮನ್ನು ಗುರುತಿಸಿಕೊಂಡವರಲ್ಲ. ಈ ಎಲ್ಲಾ ಲೇಖನಗಳನ್ನು ಸಂಗ್ರಹಿಸಿ ‘ಚದುರಿದ ಚಿಂತನೆಗಳು’ ಎಂಬ ಕೃತಿಯನ್ನು 2020ರಲ್ಲಿ ಹೊರತಂದಿದ್ದಾರೆ.
ಪ್ರಸ್ತುತ ಕೃತಿಯಲ್ಲಿ ಜಾನಪದ, ಹಳಗನ್ನಡ ಸಾಹಿತ್ಯ, ವಚನಸಾಹಿತ್ಯ ಹಾಗೂ ವೈಚಾರಿಕ ಚಿಂತನೆಗಳ ಮೇಲೆ ಬೆಳಕು ಚೆಲ್ಲಿರುವುದು ಕಂಡುಬರುತ್ತದೆ. ಈ ಕೃತಿಯು ಅವರ ಓದಿನ ವಿಸ್ತಾರ ಹಾಗೂ ಅವರಿಗಿದ್ದ ಸಾಹಿತ್ಯದ ತುಡಿತವನ್ನು ಅನಾವರಣಗೊಳಿಸುತ್ತದೆ. ಆದರೆ ಪರಮೇಶ್ವರಪ್ಪನವರಿಗೆ ಸವಾಲಾಗಿ ಪರಿಣಮಿಸಿದ್ದು ಮಾತ್ರ ಶಾಸ್ತçಬದ್ಧವಾದ ಸಾಹಿತ್ಯ ರಚನೆಗೆ ಮುಂದಾದ ಸಂದರ್ಭ. ತಮ್ಮ ಸುತ್ತಮುತ್ತಲಿನ ಸಾಂಸ್ಕೃತಿಕ ಪರಿಸರದಲ್ಲಿ ತಲಾತಲಾಂತರದಿಂದ ಬಾಯಿಂದ ಬಾಯಿಗೆ ಹರಿದು ಬಂದು, ಜನಜೀವನದಲ್ಲಿ ಬೆರೆತು ಹೋಗಿದ್ದ ಜಾನಪದೀಯ ಮಹಾಕಾವ್ಯವಾದ ‘ಪಾರ್ಥಲಿಂಗ ಚಾರಿತಾಮೃತ’ ಎಂಬ ಕೃತಿಯನ್ನು ಸಂಪಾದಿಸುವುದಕ್ಕೆ ತೊಡಗಿಸಿಕೊಂಡರು.
ಈ ಸಂದರ್ಭದಲ್ಲಿ ಗದ್ಯ ಪ್ರಕಾರದಲ್ಲಿಯೇ ಸಾಹಿತ್ಯ ರಚನೆಗೆ ಮುಂದಾದರು. ಆಗ ಅಲ್ಲಿನ ವಕ್ತೃ ಹಾಗೂ ಪಾರ್ಥಲಿಂಗ ಭಕ್ತರ ಅಭಿಲಾಷೆಯು ಇದನ್ನು ಭಾಮಿನಿ ಷಟ್ಟದಿಯಲ್ಲಿಯೇ ರಚಿಸಬೇಕು ಎಂಬುದಾಗಿತ್ತು. ಇದಕ್ಕೆ ಕಾರಣ ಗದ್ಯದಲ್ಲಿ ಪಾರ್ಥಲಿಂಗನ ಕಾವ್ಯವನ್ನು ಬರೆದರೆ ಯಾರೋ ಓದು ಬರಹ ಕಲಿತವರು ಓದಿ ಸುಮ್ಮನಾಗುತ್ತಾರೆ. ಆದರೆ ರಾಗ, ತಾಳ, ಲಯಬದ್ಧವಾದ ಭಾಮಿನಿ ಛಂದೋ ಪ್ರಕಾರದಲ್ಲಿ ರಚಿಸಿದರೆ ಯಾರೋ ಒಬ್ಬ ಹಾಡಿದರೆ ಅಕ್ಷರ ಬಲ್ಲವರು ಹಾಗೂ ಅಕ್ಷರ ವಂಚಿತರೆಲ್ಲ ಆಸಕ್ತಿಯಿಂದ ಕುಳಿತು ಕೇಳಿ ಆಸ್ವಾದಿಸುತ್ತಾರೆ ಎಂಬುದು ಅವರ ನಿಲುವಾಗಿತ್ತು.
ಆಗ ಕುಮಾರವ್ಯಾಸ ಮಾಡಿದ ಅಂತಹ ಸಾಧನೆಯು ನನ್ನಿಂದ ಸಾಧ್ಯವೇ ಎಂಬ ಅನುಮಾನ ಲೇಖಕರಲ್ಲಿ ಮೂಡಿತು. ಆಗ ಹಳಗನ್ನಡದ ಜನಪ್ರಿಯ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿರುವ ಷಟ್ಪದಿಯ ಭಾಮಿನಿ ಛಂದೋ ಪ್ರಕಾರದಲ್ಲಿಯೇ ಈ ಕಾವ್ಯವನ್ನು ರಚಿಸಬೇಕು ಎಂದು ಮುಂದಾದ ಸಂದರ್ಭದಲ್ಲಿ ಇದೊಂದು ಸವಾಲಿನ ಕೆಲಸವಾಗಿ ಪರಿಣಮಿಸಿತು. ಸುಮಾರು ಆರು ತಿಂಗಳ ಕಾಲ ನಿರಂತರವಾದ ಪ್ರಯತ್ನ ಮಾಡುತ್ತ ಬರೆಯುವ, ಹರಿಯುವ ಕಾಯಕದಲ್ಲಿ ನಿರತರಾದರು.
ಆಗ ಇದು ಭಾಮಿನಿ ಷಟ್ಪದಿಯ ಪಾಠ ಮತ್ತು ಪ್ರವಚನದಷ್ಟು ಸುಲಭವಾಗಿ ಛಂದೋ ಪ್ರಕಾರದ ಸಾಹಿತ್ಯ ರಚನೆ ಮಾಡಲಾಗದು ಎಂಬ ಅನುಭವವಾಯಿತು. ಈ ಯೋಜನೆಯಿಂದ ದೂರ ಉಳಿದು, ಇದು ನನ್ನಿಂದ ಸಾಧ್ಯವಾಗದ ಕೆಲಸವೆಂದು ಕೈಚೆಲ್ಲಿ ಕುಳಿತರು. ಇಂತಹ ಸಂದರ್ಭದಲ್ಲಿ ಪಾಥಲಿಂಗ ದೈವದ ಭಕ್ತರು ಹಾಗೂ ಕಾವ್ಯವನ್ನು ಹಾಡುವ ವಕ್ತೃಗಳು ಇದು ನಿಮ್ಮಿಂದ ಮಾತ್ರ ಸಾಧ್ಯ. ಪಾರ್ಥಲಿಂದ ದೈವವು ಕೂಡ ಅದು ನಿಮ್ಮಿಂದ ಮಾತ್ರವೇ ಸಾಧ್ಯವಾಗುವ ಕೆಲಸವೆಂದು ಅಪ್ಪಣೆ ನೀಡಿದೆ ಎಂದು ಒತ್ತಡ ಹಾಕಿದಾಗ, ಅವರ ದೈವಕೇಂದ್ರಿತವಾದ ನಂಬಿಕೆಗೆ ಕಟ್ಟುಬಿದ್ದು ಮತ್ತೇ ಛಂದೋಬದ್ಧ ಸಾಹಿತ್ಯ ಪ್ರಯೋಗದಲ್ಲಿ ತಮ್ಮನ್ನು ದುಡಿಮೆಗಚ್ಚಿದರು.
ಪಾರ್ಥಲಿಂಗನ ಭಕ್ತಾಧಿಗಳ ಒತ್ತಡ ಹಾಗೂ ಅವರ ಪ್ರೀತಿಯ ಹಠಕ್ಕೆ ಮಣಿದು, ಕವಿ ಕುಮಾರವ್ಯಾಸ ಹರಿ ಸ್ಮರಣೆಯಿಂದ ಕಾವ್ಯ ರಚನೆಗೆ ಮುಂದಾದಂತೆ ಶ್ರೀಯುತ ಜಿ.ಪರಮೇಶ್ವರಪ್ಪನವರು ಪಾರ್ಥಲಿಂಗನ ಸ್ಮರಣೆಯೊಂದಿಗೆ ಕಾವ್ಯಾಭ್ಯಾಸದ ಗರಡಿಯಲ್ಲಿ ಗಟ್ಟಿಗರಾಗಿ ನಿಂತರು. ಹೀಗೆ ಸಂಪ್ರದಾಯ ಬದ್ಧವಾಗಿ ಮೂಡಿ ಬಂದ ಛಂದೋ ಪ್ರಕಾರದಲ್ಲಿ ಸಾಹಿತ್ಯ ರಚನೆಗೆ ಮುಂದಾದ ಶ್ರೀಯುತರು ಪ್ರಸ್ತುತ ಕಥೆ ರಚನೆಯ ಕುರಿತಾದ ತಮ್ಮ ನಿಲುವನ್ನು ಕುಮಾರವ್ಯಾಸನಂತೆಯೇ ಹಂಚಿಕೊಂಡಿದ್ದಾರೆ;
ಬಾಯಿ ಮಾತಲಿ ಬಸವ ಹೇಳಿದ ತಾಯಿ ಭೂಮಿಯ ಜನರ ಕಿವಿಯಲಿ ಮಾಯೆಯಿಲ್ಲದ ನಿಗಮ ಗೋಚರನಾ ಪುರಾಣವನು ದಾಯಕನೊಲಿದು ಬರೆಸಿದ ಜನಪದೀಯರಾಡುವ ಪಾರ್ಥಕಥೆಯನು ಶಾಯಿಯಿಂದಲಿ ಕೃತಿ ರಚಿಸಿದೆನು ವಿಮಲ ಮನಸಿನಲಿ
ಇಲ್ಲಿ ಲೇಖಕರು ಕುಮಾರವ್ಯಾಸನಂತೆ ತನ್ನನ್ನು ಕೇವಲ ಲಿಪಿಕಾರ ಎಂಬುದಾಗಿ ಬಿಂಬಿಸಿಕೊಂಡಿದ್ದಾರೆ. ಹಾಗೆಯೇ ಇಲ್ಲಿ ತಾನೊಬ್ಬ ಕವಿಯೆಂಬುದನ್ನು ಕೂಡ ಕುಮಾರವ್ಯಾಸನಂತೆ ಛಂದೋ ನೆಲೆಯಲ್ಲಿ ಅಭಿವ್ಯಕ್ತಿಸಿರುವುದನ್ನು ಕಾಣಬಹುದಾಗಿದೆ.
ವೇದ ಶಾಸ್ತ್ರಾಗಮ ಪುರಾಣಗಳೋದಿ ತಲೆಗಳು ಚಿಟ್ಟು ಹಿಡಿದಿವೆ ವಾದ ಗೈವರಿಗೋದು ಬರದವರಿಗೆಡೆಯಿಲ್ಲಲ್ಲಿ ಓದು ಬರದವರಿಲ್ಲಿ ತಿಳಿವುದು ವಾದ ಮಾಡುವರಿಲ್ಲಿ ಬರಬಹು ದೋದಿ ಕುಣಿಸುವನಿಲ್ಲಿ ಕವಿ ಪರಮೇಶ್ವರೆಂಬುವನು
ಹೀಗೆ ತನ್ನನ್ನು ಪರಮೇಶ್ವರ ಕವಿ ಎಂಬುದಾಗಿ ಗುರುತಿಸಿಕೊಂಡು ಪಾರ್ಥಲಿಂಗ ಸ್ಮರಣೆಯ ಮೂಲಕವೇ ಕಾವ್ಯ ರಚನೆಗೆ ಗಟ್ಟಿಯಾಗಿ ನಿಂತರು. ಇಂತಹ ಗಟ್ಟಿತನದ ಪ್ರತೀಕವಾಗಿ ಆರಂಭಿಕ ದಿನಗಳಲ್ಲಿ ದಿನಕ್ಕೊಂದು ಕಾವ್ಯವನ್ನು ಛಂದೋಬದ್ಧವಾಗಿ ರೂಪಿಸುವಲ್ಲಿ ಯಶಸ್ವಿಯಾದರು.
ಹೀಗೆ ಅಳುಕಿನಿಂದಲೇ ಆರಂಭವಾದ ಛಂದೋಬದ್ಧ ಸಾಹಿತ್ಯ ಕೃಷಿಯನ್ನು ಕರಗತ ಮಾಡಿಕೊಂಡು ಸುಮಾರು 497 ಪದ್ಯಗಳಿಂದ ಕೂಡಿದ ಒಟ್ಟು ಏಳು ಅಧ್ಯಾಯಗಳ ‘ಶ್ರೀ ಪಾರ್ಥಲಿಂಗ ಚರಿತಾಮೃತ’ ಎಂಬ ಭಾಮಿನಿ ಷಟ್ಪದಿ ಕಾವ್ಯ ಕೃತಿಯನ್ನು ಛಂದೋ ವಿನ್ಯಾಸಕ್ಕೆ ಚ್ಯುತಿಯಾಗದಂತೆ ಬರೆದು ಮುಗಿಸಿದ ಕೀರ್ತಿ ಕವಿ ಜಿ.ಪರಮೇಶ್ವರಪ್ಪ ಅವರಿಗೆ ಸಲ್ಲುತ್ತದೆ. ‘ಕನ್ನಡದಲ್ಲಿ ಮಹಾಕಾವ್ಯಗಳ ಕಾಲ ಮುಗಿಯಿತು.
ಛಂದೋಬದ್ಧವಾದ ರಚನೆಗಳ ಕಾಲ ಮುಗಿಯಿತು ಎಂಬ ಮಾತುಗಳು ಹುಸಿಯಾಗಿವೆ’ ಎಂಬ ಡಾ.ಬಿ.ವಿ.ವಸಂತಕುಮಾರ್ ಅವರ ಮಾತುಗಳಿಗೆ ಜಿ.ಪರಮೇಶ್ವರಪ್ಪ ಅವರು ರಚಿಸಿರುವ ಛಂದೋಬದ್ಧ ‘ಪಾರ್ಥಲಿಂಗ ಚರಿತಾಮೃತ’ ಸಾಕ್ಷಿಯಾಗಿ ನಿಲ್ಲುತ್ತದೆ.
ಪ್ರಸ್ತುತ ಕೃತಿಯು ಶ್ರೀಯುತ ಜಿ.ಪರಮೇಶ್ವರಪ್ಪನವರಿಗೆ ಸಾಹಿತಿ ಎಂಬ ಬಿರುದಾವಳಿಯನ್ನು ಮಾತ್ರವಲ್ಲದೆ, ಅವರನ್ನು ಪಾರ್ಥಲಿಂಗ ಚರಿತಾಮೃತದ ಕವಿಯೆಂದು ಗುರುತಿಸುವಷ್ಟು ಹೆಗ್ಗಳಿಕೆಯನ್ನು ತಂದುಕೊಟ್ಟಿದೆ.
ಹಾಗೆಯೇ ಈ ಕೃತಿಯು ಸಾಕಷ್ಟು ಜನಮಾನಸದಲ್ಲಿ ಬೆರೆತು ಹೋಗಿದ್ದು, ಈಗಾಗಲೇ ಸುಮಾರು ಐವತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಪಠನ ಮಾಡಲಾಗಿದೆ. ಇದು ಕವಿಗಳ ಶ್ರಮಕ್ಕೆ ಸಿಕ್ಕ ನಿಜವಾದ ಪ್ರತಿಫಲ. ಕವಿಯಾದವನು ಇದರಾಚೆ ಏನನ್ನು ನಿರೀಕ್ಷಿಸಲಾರ.
ಅಳುಕಿನಿಂದಲೇ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟ ಜಿ.ಪರಮೇಶ್ವರಪ್ಪನವರು ಛಂದೋಬದ್ಧ ಕಾವ್ಯ ರಚನೆಯಲ್ಲಿ ಮೊದಲ ಯಶಸ್ಸು ಗಳಿಸಿದ ತರುವಾಯ ‘ವದ್ದಿಕೆರೆ ಸಿದ್ಧೇಶ್ವರ ಚರಿತೆ’ಯನ್ನು ಇದೇ ಛಂದೋ ವಿನ್ಯಾಸದಲ್ಲಿ ರಚನೆಗೆ ಮುಂದಾಗಿದ್ದು, ಇದನ್ನು ಒಂದೇ ವರ್ಷದಲ್ಲಿ ಮುಗಿಸುವಷ್ಟು ಛಂದೋಬದ್ಧ ಸಾಹಿತ್ಯ ಕ್ಷೇತ್ರದಲ್ಲಿ ಹಿಡಿತವನ್ನು ಸಾಧಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.
ಪ್ರಸ್ತುತ ಕೃತಿಯು ಕೂಡ ದೈವ ಕೇಂದ್ರಿತವಾದ ಪುರಾಣ ನೆಲೆಯಿಂದ ಕೂಡಿದ್ದು, ಜನಪದರ ಬದುಕಿನೊಳಗೆ ಬೆರೆತು ಹೋದ ಮೌಖಿಕ ಕಥನವೊಂದನ್ನು ಛಂದೋಬದ್ಧ ಹಾಡುಗಬ್ಬವಾಗಿ ರೂಪಿಸುವ ಮಹತ್ತರ ಕಾರ್ಯವೊಂದನ್ನು ಇವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಶ್ರೀಯುತ ಪರಮೇಶ್ವರಪ್ಪನವರ ಎರಡನೇ ಕೃತಿಯಾಗಿರುವ ‘ವದ್ದಿಕೆರೆ ಸಿದ್ಧೇಶ್ವರ ಚರಿತೆ’ಯು ಹರಿಹರನ ‘ಶಿವಶರಣರ ರಗಳೆ’ಯ ಕಥನ ಮಾದರಿಯಿಂದ ಪ್ರಭಾವಿತಗೊಂಡಂತಿದೆ.
ಇದನ್ನೂ ಓದಿ |ವಿಮರ್ಶೆ | ಸ್ವಪ್ನದಲ್ಲಿ ಸೊರಗಿದ ಪ್ರೀತಿ
ಈ ಕೃತಿಯು ಒಟ್ಟು 311ಷಟ್ಪದಿ ಪದ್ಯಗಳಿಂದ ಕೂಡಿದೆ. ಇಲ್ಲಿಯೂ ಕೂಡ ಕವಿಗಳು ಪ್ರಾಚೀನ ಕಾವ್ಯ ಪರಂಪರೆಯ ಮುಂದುವರಿಕೆಯ ಭಾಗವೆಂಬಂತೆ ದೈವ ಸ್ತುತಿಯೊಂದಿಗೆ ಕಾವ್ಯಾರಂಭಕ್ಕೆ ಮುಂದಾಗಿರುವುದನ್ನು ಕಾಣಬಹುದಾಗಿದೆ.
ಶುದ್ಧಮನದಲಿ ಖುದ್ದು ಹೇಳುವೆ ಸಿದ್ಧ ಪುರುಷನ ಸಿದ್ಧ ಕಥೆಯನು ಬುದ್ಧ ಜನಗಳು ಮೆಚ್ಚುವಂದದಿ ಹಾಡುಗಬ್ಬದಲಿ ಬಿದ್ದು ಗಂಗೆಯಲೆದ್ದು ಬಂದಂತೆದ್ದು ಹೋಗುವವಿದ್ದ ರುಜಿನಗ ಳೆದ್ದು ಬರುವಾ ಜನ್ಮ ಚಕ್ರವನೊದ್ದು ಹೋಗುವುದು
ಹೀಗೆ ಪ್ರಾಚೀನ ಕಾವ್ಯ ಪರಂಪರೆಯ ತಂತ್ರವನ್ನು ಅನುಸರಿಸುತ್ತಲೇ ಜಾನಪದೀಯ ಕಥನವನ್ನು ಶಿಷ್ಟ ಸಾಹಿತ್ಯದ ಚೌಕಟ್ಟಿಗೆ ಒಳಪಡಿಸುವ ಮೂಲಕ ಛಂದೋಬದ್ಧಗೊಳಿಸುವಲ್ಲಿ ಕವಿ ಜಿ.ಪರಮೇಶ್ವರಪ್ಪನವರ ಪಾತ್ರ ಮಹತ್ವದ್ದಾಗಿದೆ. ಜನಪದರ ಸಾಂಸ್ಕೃತಿಕ ಬದುಕಿನಲ್ಲಿ ಬೆರೆತುಕೊಂಡಿರುವ ಮೌಖಿಕ ಕಥನವನ್ನು ಶಿಷ್ಟ ಪರಂಪರೆಯೊಂದಿಗೆ ಅನುಸಂಧಾನಗೊಳಿಸುವ ಮೂಲಕ ಹಾಡುಗಬ್ಬಗೊಳಿಸಿದ ಕವಿಯ ತಂತ್ರಗಾರಿಕೆಯ ಹಿಂದೆ ನೆಲಮೂಲದ ತುಡಿತ-ಮಿಡಿತವಿದೆ.
ಜನಪದ ಮತ್ತು ಶಿಷ್ಟ ಪರಂಪರೆಯ ನಡುವಿನ ಬೇಲಿ ಹಾಗೂ ಅಂತರವನ್ನು ಕಡಿದು ಹಾಕಿ ಇವೆರಡ ನಡುವೆ ಸಂಕರವನ್ನು ಸಾಧಿಸಿದ್ದಾರೆ. ಈ ಕಾರಣದಿಂದಾಗಿ ಇವರು ನಮ್ಮ ಮುಂದಿನ ಅಪರೂಪದ ಸಾಹಿತಿಗಳಲ್ಲಿ ಒಬ್ಬರಾಗಿ ಕಂಡುಬರುತ್ತಾರೆ.
ಶ್ರೀಯುತರ ಈ ಛಂದೋಬದ್ಧ ಕಾವ್ಯದ ದುಡಿಮೆಯ ಹಿಂದೆ ಒಂದು ಪ್ರಾಮಾಣಿಕ ಪ್ರಯತ್ನವಿದೆ. ಈ ಪ್ರಯತ್ನ ಕಾಯಕ ಪ್ರಧಾನತೆಯಿಂದ ಕೂಡಿದೆ. ಇಂತಹ ಕಾಯಕ ಪ್ರಧಾನ ಕೃಷಿಯು ಇವರ ಸತತ ಪ್ರಯತ್ನವೆಂಬ ತಪಸ್ಸಿನ ಪ್ರತೀಕವಾಗಿ ಕಂಡುಬರುತ್ತದೆ.
ಇಂತಹ ತಪದ ಪ್ರತೀಕ ಹಾಗೂ ಬಾಲ್ಯದ ದಿನಗಳಿಂದ ಮೈಮನಗಳಲ್ಲಿ ಬೆರತು ಹೋದ ಜನಪದ ಸೊಗಡು, ಅಧ್ಯಯನದೊಂದಿಗೆ ಆಸಕ್ತಿಯಾಗಿ ವಿಷಯವಾಗಿ ಪ್ರಭಾವ ಬೀರಿದ ಸಾಹಿತ್ಯಾಭಿರುಚಿ, ಸುದೀರ್ಘವಾದ ಬೋಧನಾನುಭವ ಹಾಗೂ ನಿವೃತ್ತಿಯ ಸಮಯದಲ್ಲಿನ ಸಾಹಿತ್ಯಾಸಕ್ತ ಸಮಾನ ಮನಸ್ಕರ ಪ್ರೇರಣೆ ಮತ್ತು ಪ್ರೋತ್ಸಾಹದ ಫಲವಾಗಿ ಕನ್ನಡ ಸಾರಸ್ವತ ಲೋಕಕ್ಕೆ ‘ಪಾರ್ಥಲಿಂಗ ಚರಿತಾಮೃತ’, ವದ್ದಿಕೆರೆ ಸಿದ್ಧೇಶ್ವರ ಚರಿತೆ’, ‘ವೀರ ಕರಿಯಣ್ಣ’, ‘ಚಿತ್ತಯ್ಯ-ಕಾಟಯ್ಯ’ ಎಂಬ ಛಂದೋ ವಿನ್ಯಾಸದ ಮೌಲ್ಯಯುತ ಷಟ್ಪದಿ ಕೃತಿಗಳನ್ನು ಹಾಗೂ ‘ಚದುರಿದ ಚಿಂತನೆಗಳು’ ಎಂಬ ವೈಚಾರಿಕ ಕೃತಿಯನ್ನು ನೀಡಿದ ಕವಿ, ಸಾಹಿತಿ, ಚಿಂತಕರಾಗಿರುವ ಶ್ರೀಯುತ ಜಿ.ಪರಮೇಶ್ವರಪ್ಪ ಅವರಿಂದ ಕನ್ನಡ ಸಾಹಿತ್ಯಲೋಕ ಮತ್ತಷ್ಟು ಶ್ರೀಮಂತಗೊಳ್ಳಲಿ ಎಂಬುದು ನಮ್ಮ ಹಾರೈಕೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243