ಅಸಾಮಾನ್ಯಳು

ಅಪರೂಪದ ಗುರುಮಾತೆ ರಾಜಯೋಗಿನಿ ನಾಗರತ್ನಮ್ಮ

Published

on

ದಾವಣಗೆರೆ ನಗರ ವ್ಯಾಪಾರ, ವಿದ್ಯಾ ಕೇಂದ್ರವಷ್ಟೇ ಅಲ್ಲ ಆಧ್ಯಾತ್ಮಿಕ ಕೇಂದ್ರವೂ ಹೌದು. ಇಲ್ಲಿ ಅದೆಷ್ಟೋ ಸಿದ್ಧಿ ಸಾಧಕರಿದ್ದಾರೆ. ಎಲೆ ಮರೆಯ ಕಾಯಿಯಂತೆ ತಪಗೈಯುತ್ತ ತಮ್ಮ ಬಳಿ ಸಾರಿದವರ ಆತ್ಮೋದ್ಧಾರ ಕಾರ್ಯದಲ್ಲಿ ತೊಡಗಿದ್ದಾರೆ. ಯಾವ ಪ್ರಚಾರದ ಹಂಗು ಇಲ್ಲದೆ ಆತ್ಮಗಳ ಶ್ರೇಯಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಇಂತಹ ವಿಶಿಷ್ಠ ಸಾಧಕರ ಸಾಲಿನಲ್ಲಿ ಕಂಡುಬರುತ್ತಾರೆ ದಾವಣಗೆರೆ ವಿನೋಬ ನಗರದ ನಿವಾಸಿ, ಅಪರೂಪದ ಗುರುಮಾತೆ ಶ್ರೀಮತಿ ನಾಗರತ್ನಮ್ಮನವರು.

ಒಂದಷ್ಟು, ನಮಗೆ ತಿಳಿದಷ್ಟು

ದಾವಣಗೆರೆ ಗುರುಸಿದ್ದಪ್ಪ – ಪಾರ್ವತಮ್ಮ ದಂಪತಿಗಳ ದೈವಿ ಸಂಜಾತೆಯಾಗಿ 1945ರಲ್ಲಿ ಜನಿಸಿದ ನಾಗರತ್ನಮ್ಮ ಅವರಿಗೆ ಬಾಲ್ಯದಿಂದಲೂ ಶ್ರದ್ಧಾ ಭಕ್ತಿಯ ಭಾವನೆ ಅಂತರಂಗದಲ್ಲಿ ಅವಿರ್ಭವಿಸಿತ್ತು. ಪೂಜೆ, ಪಾಠ, ಪ್ರವಚನ, ಧ್ಯಾನಾದಿಗಳಲ್ಲಿ ವಿಶೇಷ ಆಸಕ್ತಿ ಮೇಳೈಸಿತ್ತು. ದಾವಣಗೆರೆ ನಿವಾಸಿ, ಕೆಇಬಿ ಸೀನಿಯರ್ ಅಸಿಸ್ಟೆಂಟ್ ಬಿ.ಬಸಪ್ಪ ಅವರೊಡನೆ ದಾಂಪತ್ಯ ಜೀವನಕ್ಕೆ ಅಡಿ ಇಟ್ಟ ಮೇಲೆ ರಾಜ್ಯದ ನಾನಾ ಕಡೆ ವರ್ಗಾವಣೆ ನಿಮಿತ್ಯ ಪತಿಯೊಡನೆ ಸಂಚರಿಸಿದರು. ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ 10 ವರ್ಷ ತಂಗಿದ್ದರು. ಆ ವೇಳೆ ಶಾರದಮ್ಮ ಎಂಬ ಸದ್ಭಕ್ತೆಯೊಬ್ಬರಿಂದ ಹಂಪಿ ಸಮೀಪದ ಕಾಳಘಟ್ಟ ಗ್ರಾಮದ ರುದ್ರಾವಧೂತರ ಮಠದ ಚಿದಾನಂದವಧೂತರ ಆಶ್ರಮದ ಬಗ್ಗೆ ಪರಿಚಯವಾಯಿತು.ಅಲ್ಲಿನ ಅಖಂಡ ತಪಸ್ವಿ, ರಾಜಯೋಗಿ, ಸಿದ್ಧಿ ಪುರುಷರಾದ ಶ್ರೀ ಕೆ.ಎನ್ ಸ್ವಾಮಿಗಳ ಮಾರ್ಗದರ್ಶನದಿಂದ ಪ್ರಭಾವಿತರಾಗಿ ಗುರುದೀಕ್ಷೆ ಪಡೆದರು. ಅವರಿಂದ ಬ್ರಹ್ಮ ಜ್ಞಾನ, ಕಾಲ ನಿರ್ಣಯ, ಮೋಕ್ಷ ಮಾರ್ಗದ ಬೋಧೆ ಪಡೆದು ಸಾಧನೆಯಲ್ಲಿ ತೊಡಗಿದರು. ಸಮರ್ಪಕ ಕುಟುಂಬ ನಿರ್ವಹಣೆಯ ಜೊತೆಗೆ ಆಧ್ಯಾತ್ಮಿಕ ಸಾಧನೆಯಲ್ಲೂ ಎತ್ತರಕ್ಕೇರುತ್ತಾ ಬಂದರು. ಕೇವಲ 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದರೂ ಪುರಾಣ, ಪುಣ್ಯ ಕಥೆ, ಪ್ರವಚನಗಳನ್ನು ನಿರರ್ಗಳವಾಗಿ ಓದುವುದರ ಜೊತೆ ಅದರ ನಿಜ ಸಾರವನ್ನು ಭೇದಿಸಿ ಅರ್ಥೈಸಿಕೊಳ್ಳಬಲ್ಲ ಚಾಣಕ್ಷ್ಯತನ ಅವರಿಗೆ ಒಲಿದಿತ್ತು.
ಹೃದಯಾಘಾತದಿಂದ ಪತಿ ಮರಣ ಹೊಂದಿದ ನಂತರ ದಾವಣಗೆರೆಗೆ ಮರಳಿದ ಅವರು ಈ ವರೆಗೆ ಇಲ್ಲಿಯೇ ನೆಲೆಸಿದ್ದಾರೆ. ಇದೀಗ ಕಾಳಘಟ್ಟ ಆಶ್ರಮದ ಆಧ್ಯಾತ್ಮಿಕ ಕಾರ್ಯ ಕಲಾಪಗಳು ಮತ್ತು ಸೇವಾ ಕಾರ್ಯಗಳು ಇವರ ಮಾರ್ಗದರ್ಶನದಲ್ಲಿಯೇ ನಡೆಯುತ್ತಿವೆ.

ಸರಳ ಬೋಧನೆ – ಉದಾತ್ತ ಚಿಂತನೆ

ನಾಗರತ್ನಮ್ಮಾಜಿಯವರ ತತ್ವ ಬೋಧೆಗಳು ಅತ್ಯಂತ ಸರಳ ಮತ್ತು ಸಾತ್ವಿಕ. ಸಂಸ್ಕಾರ ದೋಷ ನಿಮಿತ್ಯ ಜೀವನ್ಮರಣದ ಚಕ್ರದಲ್ಲಿ ಸಿಲುಕುವ ಜೀವಾತ್ಮರಿಗೆ ಮುಕ್ತಿ ಮಾರ್ಗ ತೋರುವುದು ಹಾಗೂ ಜೀವಾತ್ಮರು ಮೂಲ ಪರಮಾತ್ಮನ ಕಣ ಸ್ವರೂಪರು ಎಂಬ ಸತ್ಯ ದರ್ಶನ ಮಾಡಿಸುವುದು ಇವರ ಮೂಲ ಗುರಿ. ಎಲ್ಲ ಕರ್ಮಕ್ಕೂ ಮನಸ್ಸೇ ಕಾರಣ. ಎಲ್ಲ ಸಂಸ್ಕಾರಗಳ ಮೂಲ ಬೀಜ ಮನಸ್ಸೇ. ಬಂಧನ ಮತ್ತು ಮುಕ್ತಿ ಕೂಡ ಈ ಮನಸ್ಸಿನಿಂದಲೇ. ಲೌಕಿಕ ಜೀವನಕ್ಕೆ ಮರಳಿ ಬರುವುದು ಅಥವಾ ಮುಕ್ತಿ ಪಡೆಯುವುದು ಸಹ ಈ ಮನಸ್ಸಿನ ಆಲೋಚನೆ ಮತ್ತು ಸಂಸ್ಕಾರಗಳ ಪ್ರಭಾವದಿಂದಲೇ. ಮನಸ್ಸು ಹೇಳಿದಂತೆ ಜೀವಾತ್ಮ ಕೇಳಿದರೆ ಚಂಚಲತೆಗೆ ಒಳಗಾಗಿ ಕಲ್ಮಷ, ಅಶುದ್ಧತೆ, ಪಾಪ, ಕರ್ಮ ಇತ್ಯಾದಿಗಳ ಸುಳಿಗೆ ಸಿಕ್ಕು ನಲುಗಬೇಕಾಗುತ್ತದೆ. ಆದರೆ ಅದೇ ಮನಸ್ಸಿನ ಮೇಲೆ ಅಧಿಕಾರ ಸಾಧಿಸಿದರೆ ಈ ಲೋಕದ ಎಲ್ಲಾ ಸುಖ ಸಿರಿ ಸಂಪತ್ತು, ಇಹ ಪರ ಆನಂದಗಳನ್ನು ಸಾತ್ವಿಕ ಮಾರ್ಗದಲ್ಲಿ ಅನುಭವಿಸಿ ತೃಪ್ತಿ ಹೊಂದಿ ನಂತರ ಜೀವನ್ಮುಕ್ತಿ ಸಹ ಹೊಂದಬಹುದು, ಶಿವನಲ್ಲಿ ಐಕ್ಯವಾಗಬಹುದು ಎಂಬ ಮಾರ್ಮಿಕ ಸತ್ಯವನ್ನು ಸರಳವಾಗಿ ಬೋಧಿಸುತ್ತಾರೆ. ಆಧ್ಯಾತ್ಮಿಕ ಜೀವನ ಎಂದರೆ ಎಲ್ಲಾ ಆಸೆ ಆಕಾಂಕ್ಷೆ ಬಿಟ್ಟು ಬಿಡುವುದು, ಗುಡ್ಡ ಬೆಟ್ಟಕ್ಕೆ ಹೋಗಿ ತಪಗೈಯುವುದು, ಮಠ ಮಂದಿರ ಸೇರುವುದು ಎಂಬ ಹತ್ತು ಹಲವು ಗೊಂದಲ ನಮ್ಮ ಜನರಲ್ಲಿದೆ. ಆದರೆ, ಬೇಕು ಎನಿಸುವ ಎಲ್ಲ ಸುಖ, ಸಿರಿ, ಸಂಪತ್ತು, ಶಾಂತಿ, ನೆಮ್ಮದಿಗಳನ್ನು ಸಾತ್ವಿಕವಾದ ಹಾದಿಯಲ್ಲಿ ತನಗೂ ಪರರಿಗೂ ಹಿತವಾಗುವ ರೀತಿಯಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ. ಆದರೆಭೌತಿಕವಾಗಿ ಕಣ್ಣಿಗೆ ಕಾಣುವುದನ್ನು ಬಯಸಿ ಪಡೆದ ಮಾತ್ರಕ್ಕೆ ಜೀವನ ಅಂತ್ಯವಾಗಿ ಬಿಡುವುದಿಲ್ಲ. ಇದರ ಆಚೆ ನಮ್ಮ ಗುರಿ ಇನ್ನೂ ಬೇರೇನೋ ಇದೆ. ಆ ಅಗೋಚರವಾದ ಸತ್ಯವೂ ಕೂಡ ಏನೆಂದು ಅರಿತು,ಅದನ್ನು ಸಹ ಸಾಧಿಸಿ ಪಡೆದುಕೊಂಡು ಅಂತಿಮವಾಗಿ ಪರಮ ತೃಪ್ತಿ, ಪರಮಾನಂದ ಹೊಂದಬೇಕಿದೆ. ತಿಳಿಯಲು, ಹೊಂದಲು, ಅನುಭವಿಸಲು ಇನ್ನೇನೂ ಉಳಿದಿಲ್ಲ ಎಂಬ ಅಂತಿಮ ಘಟ್ಟ ತಲುಪಿದಾಗ ಮತ್ತೇ ಮನಸ್ಸು ಮರಳಿ ಲೋಕದ ಗೊಡವೆಗೆ, ಜನನ ಮರಣಗಳ ಸುಳಿಗೆ ಸಿಲುಕಲು ಸಾಧ್ಯವೇ ? ಅದನ್ನೇ ಸುಲಭ ಮಾರ್ಗದಲ್ಲಿ ತಿಳಿಸಿಕೊಡುವುದು ನಮ್ಮ ಧರ್ಮ ಎನ್ನುತ್ತಾರೆ ಗುರುಮಾತೆ.ಸ್ಥೂಲ, ಸೂಕ್ಮ, ಕಾರಣ, ಮಹಾ ಕಾರಣ ಹಾಗೂ ತುರಿಯಾತೀತ ಎಂಬ ವಿವಿಧ ಘಟ್ಟಗಳ ಪರಿಚಯದ ಮೂಲಕ ಜೀವನ್ಮುಕ್ತಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ .ಈ ವಿದ್ಯೆಗೆ ಬ್ರಹ್ಮ ವಿದ್ಯೆ, ಕಾಲ ಜ್ಞಾನ, ಮೋಕ್ಷ ಸಾಧನೆ ಎಂಬಿತ್ಯಾದಿ ಹೆಸರುಗಳುಂಟು. ಈ ವಿದ್ಯೆಯನ್ನು ತಾನು ಅರಿತು ಪರರಿಗೂ ಧಾರೆ ಎರೆಯುವುದೆಂದರೆ ಸುಲಭದ ಮಾತಲ್ಲ. ನರ ಗುರು, ಪಶು ಗುರು, ದೇವಗುರು ಎಂಬ ಹಲವಾರು ಗುರು ಪರಂಪರೆಗಳಿವೆ. ಇದರಲ್ಲಿ ದೇವಗುರು ಪರಂಪರೆಯೇ ಸರ್ವ ಶ್ರೇಷ್ಠ.
ತನ್ನ ಅಮೃತ ಹಸ್ತದಿಂದ ಇತರರನ್ನು ಮುಟ್ಟಿದ ಕೂಡಲೇ ಸಕಲ ಕರ್ಮದೋಷಗಳು ನಿವಾರಣೆಗೊಂಡು ಆ ಕ್ಷಣದಿಂದಲೇ ಮೋಕ್ಷ ಮಾರ್ಗ ತೆರೆದುಕೊಳ್ಳುವಂತೆ ಮಾಡುವ ದಿವ್ಯ ಶಕ್ತಿ ಯಾವ ಗುರುವಿಗೆ ಇದೆಯೋ, ಯಾರಿಗೆ ಪರರ ಕಷ್ಟ ನಿವಾರಿಸಿ ಅವರ ಸಕಲ ಇಷ್ಟಾರ್ಥ ಈಡೇರಿಸಿ ಜೀವನ್ಮುಕ್ತಿಗೆ ಹರಸುವ ಔದಾರ್ಯವಿದೆಯೋ ಆತನೇ ನಿಜವಾದ ಸದ್ಗುರು ಎಂಬ ಮಾತಿದೆ. ಈ ಸಾಲಿಗೆ ಸೇರಿದ್ದಾರೆ ನಾಗರತ್ನಮ್ಮ ಗುರುಮಾತೆ.

ಸಿದ್ದಗಂಗಾ ಸ್ವಾಮಿಯವರೊಂದಿಗೆ ಗುರುಮಾತೆ

ಲವಲವಿಕೆ ಮತ್ತು ಸದಾ ಕ್ರಿಯಾಶೀಲತೆ

76ಕ್ಕೂ ಅಧಿಕ ವರ್ಷದ ವಯೋವೃದ್ಧರಾಗಿರುವ ನಾಗರತ್ನಮ್ಮನವರು ಯುವಕರನ್ನು ಕೂಡ ನಾಚಿಸುವಂತಹ ಲವಲವಿಕೆ ಮತ್ತು ಕ್ರಿಯಾಶೀಲತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಸದಾ ಪರರ ಏಳ್ಗೆ ಬಯಸುತ್ತಾ ಉಪಕಾರ – ಸಹಕಾರದಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಾಗರತ್ನಮ್ಮನವರದು ಬತ್ತದ ಉತ್ಸಾಹ. ಮಕ್ಕಳು, ಮನೆ, ಮಠದ ಜವಬ್ದಾರಿಗಳನ್ನು ನಿರ್ವಹಿಸುವ ಜೊತೆ ಸಾಮಾಜಿಕ ಮತ್ತು ಅಧ್ಯಾತ್ಮಿಕ ಸೇವೆಯನ್ನು ನಿರಂತರ ಮುಂದುವರೆಸಿಕೊಂಡು ಬಂದಿದ್ದಾರೆ. ಹಾವು – ಚೇಳಿನಂತಹ ವಿಷ ಜಂತು ಕಡಿದವರಿಗೆ ಆಯುರ್ವೇದ ಔಷಧ ನೀಡುವ ಕಾರ್ಯ, ಧ್ಯಾನ, ಪೂಜೆ, ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸುವ ಜೊತೆ ಕಾಳಘಟ್ಟ ಶ್ರೀಮಠದ ಅವಧೂತ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರಷ್ಟೇ ಅಲ್ಲದೆ ಶ್ರೀ ಮಠದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ರಾಜಯೋಗಿನಿ ನಾಗರತ್ನಮ್ಮ ಅವರ ಪ್ರಯತ್ನ ಮತ್ತು ಅಪಾರ ಕಳಕಳಿಯ ಫಲವಾಗಿ 2018ರ ಏಪ್ರಿಲ್ ತಿಂಗಳಲ್ಲಿ ಟಿವಿ 9 ವಾಹಿನಿಯಲ್ಲೂ ಕೂಡ ಶ್ರೀಮಠದ ಕುರಿತು ಕಾರ್ಯಕ್ರಮ ಪ್ರಸಾರವಾಯಿತು. ಆ ಮೂಲಕ ಆ ಮಠದ ಇತಿಹಾಸ, ಪರಂಪರೆ, ಸೇವೆ ಹಾಗೂ ಕೊಡುಗೆಗಳ ಕುರಿತು ನಾಡಿನಾದ್ಯಂತ ಪ್ರಚಾರ – ಪ್ರಸಾರವಾಗಲು ಅನುವಾಯಿತು. ಅಂತೆಯೇ ಅನೇಕರು ತಮ್ಮ ಜೀವನದ ದುಃಖ – ದುಮ್ಮಾನಗಳಿಗೆ ಪರಿಹಾರ ಪಡೆದುಕೊಂಡು ಸುಖ – ಶಾಂತಿ, ಸಮಾಧಾನದ ಬದುಕಿನೆಡೆಗೆ ಸಾಗಲು ಸಹಕಾರಿಯಾಯಿತು.

ಮುಗಿಸುವ ಮುನ್ನ

ತಾನು ತಿಳಿದಿದ್ದೇ ಸತ್ಯ ಎಂಬ ಭ್ರಮೆಯೊಳಗೆ ಮುಳುಗಿ ತನ್ನ ಬಳಿ ಬಂದವರ ಅದಃ ಪತನಕ್ಕೆ ಕಾರಣವಾಗುವ ಹಾಗೂ ಕಲಿತ ವಿದ್ಯೆಯನ್ನು ಹಣ ಕೀಳುವ ದಂಧೆಯನ್ನಾಗಿ ಮಾಡಿಕೊಳ್ಳುವವರೇ ಹೆಚ್ಚು ತುಂಬಿರುವ ಈ ಕಾಲಘಟ್ಟದಲ್ಲಿ ನಾಗರತ್ನಮ್ಮನವರು ವಿಶೇಷಿಗರಾಗಿ ನಿಲ್ಲುತ್ತಾರೆ. ಅವರ ಸಾತ್ವಿಕತೆ, ರಾಜಯೋಗದ ಪ್ರಭಾವ, ಆತ್ಮಗಳ ಉನ್ನತಿಗೆ ಹಂಬಲಿಸುವ ಮಾತೃ ಹೃದಯದ ವಾತ್ಸಲ್ಯ ಅವರನ್ನು ಹತ್ತಿರದಿಂದ ಕಂಡವರಿಗೆ ಮಾತ್ರ ಅರಿವಿಗೆ ಬರುತ್ತದೆ.
ಜೀವನದಲ್ಲಿ ಕಷ್ಟ ನಷ್ಟ ಸಹಜ. ಆದರೆ ಕಷ್ಟಗಳನ್ನು ಕಂಡು ಕುಗ್ಗಿದ ಮನಸ್ಸುಗಳಿಗೆ, ಬಸವಳಿದು ಬೆಂದ ಹೃದಯಗಳಿಗೆ ಆ ಕಾಠಿಣ್ಯ ಎದುರಿಸುವ ಮಾರ್ಗ, ತಿಳಿವಳಿಕೆ, ಅರಿವು, ಮೆಟ್ಟಿ ನಿಲ್ಲುವ ಧೈರ್ಯ, ಸ್ಥೈರ್ಯ ಸಾಂತ್ವಾನ ನೀಡಿ ಕೈ ಹಿಡಿದು ನಡೆಸುವವರು ಬೇಕಾಗುತ್ತದೆ. ಆ ಕೆಲಸವನ್ನು ಅತ್ಯಂತ ಸುಗಮವಾಗಿ ಮಾಡಬಲ್ಲ ಶಕ್ತಿ ಗುರುವಿಗೆ ಮಾತ್ರ ಇದೆ. ಸರಿಯಾದ ಮಾರ್ಗದರ್ಶನ ತೋರುವ ತಪ ಶಕ್ತಿ ಕೆಲವೇ ಕೆಲವರಿಗೆ ಮಾತ್ರ ಒಲಿದಿರುತ್ತದೆ. ಆ ತಪೋ ಬಲ, ಮನೋ ಬಲ, ದೈವ ಬಲ, ವಾಕ್ ಸಿದ್ಧಿಯ ಬಲ ಗುರುಮಾತೆ ನಾಗರತ್ನಮ್ಮ ಅವರಿಗೆ ಭಗವಂತನ ವರದಾನವಾಗಿ ಲಭಿಸಿದೆ. ಈ ವಿದ್ಯೆ ಕಲಿಯಲು ಬರುವವರ ಸಂಖ್ಯೆ ಅತಿ ವಿರಳ. ಆ ಭಾಗ್ಯ ದೊರೆಯುವುದು ಕೂಡ ಕೆಲವರಿಗೆ ಮಾತ್ರ. ಇದು ಗುರು ಕೃಪೆಯಿಂದ ಮಾತ್ರ ಸಾಧ್ಯ ಎನ್ನುವ ಅವರು ಇಂತಹ ಅಪರೂಪದ ವಿದ್ಯೆಯನ್ನು ಅತ್ಯಂತ ಉತ್ಸಾಹ ಮತ್ತು ಪ್ರೀತಿಯಿಂದ ತಮ್ಮ ಮನೆಯಲ್ಲೇ ಕಲಿಸುತಿದ್ದಾರೆ. ಆಸಕ್ತರು ಅವರ ಮಾರ್ಗದರ್ಶನ ಪಡೆಯಲು ಮೊ.ಸಂ| 9741458905 ಗೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

Trending

Exit mobile version