ಲೈಫ್ ಸ್ಟೈಲ್
ಹೃದಯಾಘಾತ: ಸಮಯೋಚಿತವಾಗಿದ್ದರೆ ಸಾವನ್ನು ಗೆಲ್ಲಬಹುದು
ಹೃದಯಘಾತವಾಗಬೇಕೆಂದರೆ ಕೇವಲ ಭಾವೋದ್ವೇಗಗಳೇ ಆಗಬೇಕಿಲ್ಲ, ವಯೋವೃದ್ಧರಿಗೇ ಆಗಬೇಕಿಲ್ಲ, ಅಧಿಕ ರಕ್ತದೊತ್ತಡವಿರುವವರಿಗೇ ಆಗಬೇಕಿಲ್ಲ ಅಥವಾ ಶ್ವಾಸಕೋಶದ ತೊಂದರೆಯಿರುವರಿಗೇ ಆಗಬೇಕಿಲ್ಲ. ಬದಲಾಗಿ, ಒಂದು ಸಣ್ಣ ಮಾನಸಿಕ ಒತ್ತಡ ಅಥವಾ ಎಂದೂ ಇಲ್ಲದ ಸಣ್ಣ ದೈಹಿಕ ಪರಿಶ್ರಮದಿಂದಲೂ ಹೃದಯಾಘಾತ ಸಂಭವಿಸಬಹುದು.
ಆದರೆ ಇದಾವುದರ ಬಗ್ಗೆ ಅರಿವಿಲ್ಲದೇ ಇದರ ಲಕ್ಷಣಗಳು ಕಂಡುಬಂದರೂ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ನಮ್ಮ ಸಾವಿಗೆ ಆಹ್ವಾನ ನೀಡಿದಂತಾಗುತ್ತದೆ. ನಮಗೆ ಅಥವಾ ನಮ್ಮೆದುರು ಯಾರಿಗೇ ಆಗಲಿ ಹೃದಯಾಘಾತದ ಗುಣಲಕ್ಷಣಗಳು ಕಂಡುಬಂದಲ್ಲಿ ಕೆಲ ಸೂಕ್ತ ಕೆಲಸದಿಂದ ಜೀವ ಸಾವಿನಿಂದ ಗೆಲ್ಲಬಹುದು. ಹೌದು, ಹೃದಯಾಘಾತವಾದ ನಂತರದ ಒಂದು ಗಂಟೆಯ ಸಮಯ ಜೀವ ಉಳಿಸುವ ನಿಟ್ಟಿನಲ್ಲಿ ಅತ್ಯಮೂಲ್ಯವಾಗಿರುತ್ತದೆ.
ಹೃದಯಾಘಾತ( Myocardial Infarction)ವೆಂದರೆ ಹೃದಯದ ಸ್ನಾಯುಗಳಿಗೆ ರಕ್ತಸಂಚಲನೆಯಲ್ಲಿ ಕೊರತೆಯುಂಟಾಗಿ ಹೃದಯದ ಜೀವಕೋಶಗಳು ಸಾಯುವುದು.
ಹೃದಯಾಘಾತ ಉಂಟು ಮಾಡುವ ಅಪಾಯಕಾರಿ ಅಂಶಗಳು
ಪುರುಷರಿಗಿಂತ ಮಹಿಳೆಯರಲ್ಲಿ, ಹಾಗೂ 45 ರಿಂದ 65ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಸಂಭವಿಸುವ ಸಾಧ್ಯತೆಗಳು ಇವೆ.
- ಮಧುಮೇಹ
- ಧೂಮಪಾನ
- ಸ್ಥೂಲಕಾಯತೆ
- ಮದ್ಯಪಾನ
- ಅಧಿಕ ರಕ್ತದೊತ್ತಡ
- ಮಾನಸಿಕ ಒತ್ತಡಗಳು
- ವಂಶಪಾರಂಪರ್ಯತೆ
- ಕಠಿಣ ದೈಹಿಕ ವ್ಯಾಯಾಮಗಳು
ಹೃದಯಾಘಾತ ಹೇಗೆ ಉಂಟಾಗುತ್ತದೆ?
ಹೃದಯದ ಜೀವಕಣಗಳಿಗೆ ರಕ್ತಸಂಚಾರ ಅಥವಾ ಆಮ್ಲಜನಕ ಪೂರೈಕೆಯಲ್ಲಿ ಕೊರತೆಯುಂಟಾಗುವ ಯಾವುದೇ ಸಂದರ್ಭವೂ ಹೃದಯಾಘಾತಕ್ಕೆ ಕಾರಣವಾಗಬಹುದು.
ಸಾಮಾನ್ಯವಾಗಿ ಹೃದಯಕ್ಕೆ ರಕ್ತಸಂಚಾರ ಒದಗಿಸುವ ಅಪಧಮನಿ(Coronary Artery) ಗಳಲ್ಲಿ ಕೊಬ್ಬಿನಾಂಶ ಅಥವಾ ಪ್ಲೇಟಲೆಟ್ಸ್ ಶೇಖರಣೆಗೊಳ್ಳುವುದರ ಪರಿಣಾಮ ಸಂಭವಿಸುವ ಹೃದಯಾಘಾತಗಳೇ ಹೆಚ್ಚು.ಈ ಮೊದಲು ತುಂಬಾ ದೀರ್ಘಕಾಲದಿಂದಲೂ ಹೃದಯ ರಕ್ತನಾಳಗಳಲ್ಲಿ ತೊಂದರೆ ಇರುವವರು ಯಾವುದಾದರೂ ಸಣ್ಣ ಮಾನಸಿಕ ಒತ್ತಡ, ದೈಹಿಕ ಒತ್ತಡ ಅಥವಾ ಭಾವೋದ್ವೇಗವು ಹೃದಯಾಘಾತಕ್ಕೆ ಕಾರಣವಾಗಬಹುದು. ಹೃದಯದ ಸ್ನಾಯುಗಳು ತಮ್ಮ ಕೆಲಸದೊತ್ತಡಕ್ಕೆ ಮಣಿದು ಮುಂದೊಂದು ದಿನ ಜೀವ ಕಳೆದುಕೊಳ್ಳುತ್ತವೆ, ಇದೇ ಹೃದಯಾಘಾತ.
ರೋಗ ಗುಣಲಕ್ಷಣಗಳು
ಎದೆ ನೋವು(ಎದೆಯನ್ನುಬಿಗಿಯಾಗಿ ಹಿಡಿದಂತೆ, ಒತ್ತಿದಂತೆ ಅಥವಾ ಹಿಸುಕಿದಂತೆ ಅನುಭವವಾಗುತ್ತದೆ)
ಸಾಮಾನ್ಯವಾಗಿ ಎದೆನೋವು ಎಡಬಾಹುವಿಗೆ ಹರಡುವುದುಂಟು(ಕೆಲವೊಮ್ಮೆ ಕತ್ತು, ದವಡೆ, ಬಲಬಾಹು, ಹೊಟ್ಟೆಯ ಮೇಲ್ಭಾಗಕ್ಕೂ ಹರಡುವುದುಂಟು)
- ಉಸಿರಾಟದ ತೊಂದರೆ
- ಬೆವರುವಿಕೆ
- ತಲೆ ಸುತ್ತು
- ನಿಶ್ಯಕ್ತಿಯಿಂದ ಕುಸಿದು ಬೀಳುವುದು
ರೋಗನಿರ್ಣಯ:ಇಸಿಜಿ(ECG)
ಆಸ್ಪತ್ರೆಗೆ ಪ್ರವೇಶ ಪಡೆದ ನಂತರ ಮಾಡುವ ಮೊಟ್ಟಮೊದಲ(ಪ್ರಾಥಮಿಕ) ಪರೀಕ್ಷೆ ಇದಾಗಿರುತ್ತದೆ. ಇದರಲ್ಲಿ ವಿವಿಧ ಎಲೆಕ್ಟ್ರೋಡ್ ಗಳ ಚಿತ್ರಣದ ಮೂಲಕ ಹೃದಯಾಘಾತದ ನಿರ್ಣಯವನ್ನು ಮಾಡಲಾಗುತ್ತದೆ.
ಟ್ರೊಪೊನಿನ್( Troponin I and T) ಮತ್ತು ಸಿರಮ್ ಕ್ರಿಯಾಟಿನ್ ಕೈನೇಸ್(CK-MB)
ಈ ಎರಡು ಅಂಶಗಳಲ್ಲಿ ಏರಿಕೆಯು ಇನ್ನೂ ಹೆಚ್ಚಿನ ಧನಾತ್ಮಕ ರೋಗನಿರ್ಣಯದಲ್ಲಿ ಸಹಕಾರಿಯಾಗುತ್ತದೆ
ಇನ್ನೂ ಹೆಚ್ಚಿನ ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ 2ಡಿ ಎಕೋಕಾರರ್ಡಿಯೋಗ್ರಾಫಿ, ನ್ಯೂಕ್ಲಿಯರ್
ಸ್ಕ್ಯಾನಿಂಗ್ ನಂತಹ ಪರೀಕ್ಷೆಗಳನ್ನು ಮಾಡಲಾಗುತ್ತದೆ.
ಚಿಕಿತ್ಸೆ
- ವ್ಯಕ್ತಿಯನ್ನು ಆದಷ್ಟು ಸಮಾಧಾನ ಚಿತ್ತವಾಗಿರಿಸಿಕೊಂಡು, ದೀರ್ಘ ಉಸಿರಾಟವನ್ನು ಪ್ರೋತ್ಸಾಹಿಸಬೇಕು.
- ರಕ್ತದೊತ್ತಡ ಕುಸಿಯುವ ಸಾಧ್ಯತೆಗಳು ಹೆಚ್ಚಿರುವ ಕಾರಣ ಎರಡೂ ಕಾಲುಗಳನ್ನು ದೇಹ ಮಟ್ಟದಿಂದ ಮೇಲಕ್ಕೆ ಎತ್ತಿ ಹಿಡಿಯಬೇಕು.
- ನಂತರ ತಕ್ಷಣ ಅಲ್ಲೇ ಇರುವ ಹತ್ತಿರದ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು.
- ಚಿಕಿತ್ಸೆಯಲ್ಲಿ ಮೊದಲು ಆಮ್ಲಜನಕ, ಆಸ್ಪಿರಿನ್ ಮತ್ತು/ಅಥವಾ ಕ್ಲಾಪಿಡಾಗ್ರೆಲ್ ಮತ್ತು ನೈಟ್ರೊಗ್ಲಿಸರಿನ್ ಎಂಬ ಮಾತ್ರೆಗಳನ್ನು ನೀಡಲಾಗುತ್ತದೆ. ಆದರೆ ಈ ಮಾತ್ರೆಗಳನ್ನು ಎಷ್ಟುಬೇಗ ನೀಡುತ್ತೇವೊ ಅಷ್ಟು ಬೇಗ ರೋಗಿಯ ಹೃದಯದ ಮೇಲೆ ತನ್ನ ಕೆಲಸದೊತ್ತಡ ಕಡಿಮೆಯಾಗಿ ರೋಗಿ ಗುಣಮುಖವಾಗುವ ಸಂದರ್ಭ ಹೆಚ್ಚಿರುತ್ತದೆ. ಆದ ಕಾರಣ ಹೃದಯಾಘಾತವಾದ ನಂತರದ 1 ಗಂಟೆಯ ಅವಧಿ ಅತ್ಯಮೂಲ್ಯವಾಗಿರುತ್ತದೆ.
- ನಂತರ ಹೃದಯರೋಗ ತಜ್ಞರು ರೋಗಿಯನ್ನು ಪರಿಶೀಲಿಸಿ, ಕ್ಯಾತ್ ಲ್ಯಾಬ್ನಲ್ಲಿ ಏಂಜಿಯೋಗ್ರಾಮ್ ಮಾಡಿದ ನಂತರ ಹೃದಯ ರಕ್ತನಾಳಗಳು ಎಷ್ಟು ಪ್ರಮಾಣದಲ್ಲಿ ತೊಂದರೆಗೊಳಪಟ್ಟಿವೆ ಎಂದು ಪರಿಶೀಲಿಸುತ್ತಾರೆ. ನಂತರವಷ್ಟೇ ಅವಶ್ಯಕತೆಯಿದ್ದಲ್ಲಿ, ಏಂಜಿಯೋಪ್ಲಾಸ್ಟಿಯಂತಹ ಚಿಕಿತ್ಸೆಯನ್ನು ನೀಡಲಾಗುತ್ತದೆ.
ತಡೆಗಟ್ಟುವಿಕೆ
- ಕೊಬ್ಬಿನಾಂಶವಿರುವ ಪದಾರ್ಥಗಳನ್ನು ಊಟದಲ್ಲಿ ಕಡಿಮೆ ಮಾಡುವುದು.
- ಅಧಿಕ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ಬರದಂತೆ ತಡೆಗಟ್ಟುವುದು, ಮತ್ತು ಈಗಾಗಲೇ ಇದ್ದಲ್ಲಿ ಸೂಕ್ತ ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದು.
- ದಿನವಿಡೀ ಸದಾ ಚಟುವಟಿಕೆಯಿಂದಿರುವುದು, ಮತ್ತು ಪ್ರತಿ ದಿನ ಕನಿಷ್ಟ ಅರ್ಧ ಗಂಟೆಯ ಕಾಲ್ನಡಿಗೆ ಅವಶ್ಯವಾಗಿರುತ್ತದೆ.
- ನಮ್ಮ ವಯಸ್ಸು ಹಾಗೂ ಎತ್ತರಕ್ಕೆ ತಕ್ಕಂತೆ ನಮ್ಮ ದೇಹ ತೂಕವನ್ನು ಕಾಪಾಡಿಕೊಳ್ಳಬೇಕು
ಮಾನಸಿಕ ಒತ್ತಡ ಹಾಗೂ ಭಾವೋದ್ವೇಗಗಳನ್ನು ಕಡಿಮೆ ಮಾಡಿಕೊಳ್ಳಬೇಕು. - ವ್ಯಾಯಾಮಗಳನ್ನು ಮಾಡುವಾಗ ಮೊದಲು ವಾರ್ಮ್ ಅಪ್ ಅಥವಾ ಏರೋಬಿಕ್ ವ್ಯಾಯಾಮಗಳನ್ನು ಅಗತ್ಯವಾಗಿ ಮಾಡಿದ ನಂತರವಷ್ಟೇ ಹೆಚ್ಚಿನ ವ್ಯಾಯಾಮಗಳನ್ನು ಮಾಡಬೇಕು. ಇದರಿಂದ ಹೃದಯದ ಕಾರ್ಯಕ್ಷಮತೆ ಹೆಚ್ಚುವುದಲ್ಲದೇ ವ್ಯಾಯಾಮದ ಸಮಯದಲ್ಲಿ ಜೀವಕ್ಕೆ ಆಮ್ಲಜನಕದ ಕೊರತೆಯಿಂದಾಗಲೀ ಅಥವಾ ಹೃದಯದ ಕೆಲಸದೊತ್ತಡದಿಂದಾಗಲೀ ಯಾವುದೇ ಅಪಾಯ ಉಂಟಾಗುವುದಿಲ್ಲ.
- ಪ್ರತಿ ಮೂರು ತಿಂಗಳಿಗೊಮ್ಮೆ (ಮಹಿಳೆಯರು ಪ್ರತಿ 4ತಿಂಗಳಿಗೊಮ್ಮೆ) ರಕ್ತದಾನ ಮಾಡುವುದರಿಂದ ಹೃದಯಾಘಾತದ ಸಂಭವ ಕಡಿಮೆಯಾಗುವುದೆಂದು ಅಭಿಪ್ರಾಯವಿದೆ.
- ಒಂದು ಸಣ್ಣ ಎದೆನೋವು ಕಾಣಿಸಿಕೊಂಡರೂ ಅದನ್ನು ನಿರ್ಲಕ್ಷಿಸದೇ ವೈದ್ಯರ ಬಳಿ ಸಮಾಲೋಚನೆ ಪಡೆಯುವುದು.