ಬಹಿರಂಗ
‘ಭಾರತ ಸಂವಿಧಾನ’ದ ಬಗ್ಗೆ ನೀವಿಷ್ಟು ತಿಳಿಯಲೇ ಬೇಕು : ಮಿಸ್ ಮಾಡ್ದೆ ಓದಿ
ಭಾರತ ಸಂವಿಧಾನದ ಬಗ್ಗೆ ತಿಳಿದುಕೊಳ್ಳುವುದು ಇಂದಿನ ತುರ್ತು. ಈ ಹಿನ್ನಲೆಯಲ್ಲಿ ನಮ್ಮ ಹೆಮ್ಮೆಯ ಸಂವಿಧಾನದ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ.
ಭಾರತ ಸಂವಿಧಾನದ ಲಕ್ಷಣಗಳು
1. ಬೃಹತ್ ಸಂವಿಧಾನ
ಇದು ವಿಶ್ವದಲ್ಲಿಯೇ ಬೃಹತ್ ಸಂವಿಧಾನವಾಗಿದೆ. ಮೂಲ ಸಂವಿಧಾನವು ಒಟ್ಟು 395 ವಿಧಿಗಳು, 8 ಅನುಸೂಚಿಗಳು ಮತ್ತು 8 ಭಾಗಗಳನ್ನು ಒಳಗೊಂಡಿತ್ತು. ಆದರೆ ಪ್ರಸ್ತುತ ಸಂವಿಧಾನವು ಒಟ್ಟು 465ವಿಧಿಗಳು, 12 ಅನುಸೂಚಿಗಳು ಮತ್ತು 100 ತಿದ್ದುಪಡಿಗಳನ್ನು ಒಳಗೊಂಡಿದೆ.
ಬೃಹತ್ ಸಂವಿಧಾನಕ್ಕೆ ಕಾರಣಗಳೆಂದರೆ
- ಭೌಗೋಳಿಕ ವಿಸ್ತೀರ್ಣತೆ.
- ಐತಿಹಾಸಿಕ ಅಂಶಗಳು (1935ರ ಭಾರತ ಸರ್ಕಾರದ ಕಾಯ್ದೆಯ ಪ್ರಕಾರ).
- ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಇಡೀ ಭಾರತಕ್ಕೆ ಒಂದೇ ಸಂವಿಧಾನ.
- ನಮ್ಯ ಮತ್ತು ಅನಮ್ಯ ಸ್ವರೂಪದ ಲಕ್ಷಣಗಳು.
- ನಮ್ಮ ಸಂವಿಧಾನಕ್ಕೆ ಇದುವರೆಗೆ ತರಲಾದ ತಿದ್ದುಪಡಿಗಳ ಮೂಲಕ ಕೆಲವು ಹೊಸ ಅಧ್ಯಾಯ ಹಾಗೂ ವಿಧಿಗಳನ್ನು ಸೇರಿಸಲಾಗಿದೆ.
- ನಮ್ಮ ಸಂವಿಧಾನವು ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ವಿವರಣೆಗಳನ್ನು ಹೊಂದಿದೆ.
2. ಲಿಖಿತ ಸಂವಿಧಾನ
ಅಮೆರಿಕಾ ಸಂವಿಧಾನದಂತೆ ಭಾರತದ ಸಂವಿಧಾನವು ಲಿಖಿತ ಸಂವಿಧಾನವಾಗಿದ್ದು, ಬ್ರಿಟನ್ ಸಂವಿಧಾನದಂತೆ ಅಲಿಖಿತ ಸಂವಿಧಾನವಾಗಿರುವುದಿಲ್ಲ. ಸರ್ಕಾರದ ಅಂಗಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ರಚನೆ, ಅಧಿಕಾರ ಮತ್ತು ಕಾರ್ಯವ್ಯಾಪ್ತಿ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದ ವಿವರಗಳು ಬರವಣಿಗೆಯ ರೂಪದಲ್ಲಿರುವುದನ್ನು ನಾವು ಕಾಣಬಹುದು.
3. ಮೂಲಭೂತ ಹಕ್ಕುಗಳು
ಮೂಲಭೂತ ಹಕ್ಕುಗಳು ವ್ಯಕ್ತಿತ್ವ ವಿಕಸನದ ಅವಿಭಾಜ್ಯ ಅಂಗಗಳಾಗಿವೆ. ಭಾರತದ ಸಂವಿಧಾನದ ಮೂರನೆಯ ಭಾಗವು ತನ್ನ ಪ್ರಜೆಗಳಿಗೆ ಸ್ವಾತಂತ್ರ್ಯದ ಹಕ್ಕು, ಸಮಾನತೆಯ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತ್ತು ಸಂವಿಧಾನಾತ್ಮಕ ಪರಿಹಾರಗಳ ಹಕ್ಕು ಹೀಗೆ ಆರು ಮೂಲಭೂತ ಹಕ್ಕುಗಳನ್ನು ನೀಡಿದೆ. ಸಂವಿಧಾನದ ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿದೆ, ಆದ್ದರಿಂದ ಸರ್ವೋಚ್ಛ ನ್ಯಾಯಾಲಯವನ್ನು “ಭಾರತ ಸಂವಿಧಾನದ ರಕ್ಷಕ/ಕಾವಲುಗಾರ” ಎಂದು ಕರೆಯಲಾಗುತ್ತದೆ.
4. ಮೂಲಭೂತ ಕರ್ತವ್ಯಗಳು
ಮೂಲಭೂತ ಕರ್ತವ್ಯಗಳನ್ನು ನಾವು ಭಾರತ ಸಂವಿಧಾನಕ್ಕೆ ಸೋವಿಯತ್ (ರಷ್ಯಾ) ಸಂವಿಧಾನದಿಂದ ಎರವಲು ಪಡೆದಿದ್ದೇವೆ. 1976ರ 42ನೇ ತಿದ್ದುಪಡಿಯ ಮೂಲಕ ಭಾರತ ಸಂವಿಧಾನಕ್ಕೆ ಮೂಲಭೂತ ಕರ್ತವ್ಯಗಳ ಪಟ್ಟಿಯನ್ನು ಸೇರಿಸಲಾಯಿತು. ಭಾರತ ಸಂವಿಧಾನದಲ್ಲಿ 4-ಎ ಭಾಗದಲ್ಲಿನ 51(ಎ) ವಿಧಿಯಡಿಯಲ್ಲಿ ಹನ್ನೊಂದು ಮೂಲಭೂತ ಕರ್ತವ್ಯಗಳನ್ನು ಕಾಣಬಹುದು.
ಅವುಗಳು ಈ ಕೆಳಗಿನಂತಿವೆ
1.ಸಂವಿಧಾನ, ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಗೌರವಿಸುವುದು.
2.ಸ್ವಾತಂತ್ರ್ಯ ಚಳುವಳಿಯ ಉದಾತ್ತ ಆದರ್ಶಗಳನ್ನು ಪಾಲಿಸುವುದು.
3. ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವುದು ಮತ್ತು ಕಾಪಾಡುವುದು.
4. ಕರೆ ಬಂದಾಗ ರಾಷ್ಟ್ರವನ್ನು ರಕ್ಷಿಸುವುದು ಮತ್ತು ದೇಶ ಸೇವೆ ಮಾಡುವುದು.
5. 6 ರಿಂದ 14 ವರ್ಷದೊಳಗಿನ ಮಕ್ಕಳನ್ನು ಪಾಲಕರು ಕಡ್ಡಾಯವಾಗಿ ಶಾಲೆಗೆ ಕಳುಹಿಸತಕ್ಕದ್ದು.
6. ನಮ್ಮ ಸಮ್ಮಿಶ್ರ ಸಂಸ್ಕøತಿಯ ಶ್ರೀಮಂತ ಪರಂಪರೆಯನ್ನು ಗೌರವಿಸುವುದು ಮತ್ತು ರಕ್ಷಿಸುವುದು.
7. ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ಪ್ರಾವಿಣ್ಯತೆಯನ್ನು ಪ್ರದರ್ಶಿಸಿ ರಾಷ್ಟ್ರದ ಪ್ರಗತಿಗೆ ಶ್ರಮಿಸುವುದು.
8. ಮಹಿಳೆಯರ ಗೌರವಕ್ಕೆ ಚ್ಯುತಿಯುಂಟುಮಾಡುವ ಆಚರಣೆಗಳನ್ನು ತ್ಯಜಿಸುವುದು ಮತ್ತು ಭಾರತೀಯರಲ್ಲಿ ಭ್ರಾತೃತ್ವ ಮತ್ತು ಸಾಮರಸ್ಯ ಭಾವನೆಗಳನ್ನು ಬೆಳೆಸುವುದು.
9. ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳನ್ನು ಒಳಗೊಂಡ ನೈಸರ್ಗಿಕ ಪರಿಸರವನ್ನು ರಕ್ಷಿಸಿ, ಅಭಿವೃದ್ಧಿಪಡಿಸುವುದು.
10. ವೈಜ್ಞಾನಿಕ ಹಾಗೂ ಮಾನವೀಯ ಗುಣಗಳನ್ನು ಮತ್ತು ವಿಚಾರಣಾ ಹಾಗೂ ಸುಧಾರಣಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು.
11. ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವುದು ಮತ್ತು ಹಿಂಸೆ ತ್ಯಜಿಸುವುದು.
5. ರಾಜ್ಯ ನೀತಿ ನಿರ್ದೇಶಕ ತತ್ವಗಳು
ಭಾರತ ಸಂವಿಧಾನಕ್ಕೆ ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಐರ್ಲೆಂಡ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ, ಭಾರತ ಸಂವಿಧಾನದ ನಾಲ್ಕನೇ ಭಾಗವು ರಾಜ್ಯನೀತಿ ನಿರ್ದೇಶಕ ತತ್ವಗಳನ್ನು ಒಳಗೊಂಡಿದೆ. ಕಾನೂನುಗಳನ್ನು ರೂಪಿಸುವಾಗ, ನೀತಿಗಳನ್ನು ಹಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಾಗ ಮತ್ತು ಆಡಳಿತ ನಡೆಸುವಾಗ ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಅಳವಡಿಸಿಕೊಳ್ಲುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ.
6. ಎರವಲು ಸಂವಿಧಾನ
ನಮ್ಮ ಸಂವಿಧಾನವು ವಿಶ್ವದ ವಿವಿಧ ಸಂವಿಧಾನಗಳಿಂದ ಅನೇಕ ಲಕ್ಷಣಗಳನ್ನು ಎರವಲು ಪಡೆದಿದೆ, ಆದ್ದರಿಂದ ಇದನ್ನು ಎರವಲು ಸಂವಿಧಾನ ಎಂದು ಕರೆಯುತ್ತಾರೆ. ಉದಾಹರಣೆಗೆ ಮೂಲಭೂತ ಹಕ್ಕುಗಳ ಪಟ್ಟಿ, ನ್ಯಾಯಿಕ ವಿಮರ್ಶೆ, ಪ್ರಸ್ತಾವನೆಗಳನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂವಿಧಾನದಿಂದಲೂ, ಕಾನೂನಿನ ಆಳ್ವತೆ, ಏಕ ಪೌರತ್ವ, ಸಂಸದೀಯ ಪದ್ದತಿಗಳನ್ನು ಗ್ರೇಲಿತ್ ಬ್ರಿಟನ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
7. ಸಂಸದೀಯ ಸರ್ಕಾರ ಪದ್ದತಿ
ಬ್ರಿಟಿಷ ಸಂವಿಧಾನದಿಂದ ನಾವು ಸಂಸದೀಯ ಸರ್ಕಾರ ಪದ್ದತಿಯನ್ನು ಭಾರತೀಯ ಸಂವಿಧಾನಕ್ಕೆ ಎರವಲಾಗಿ ಪಡೆದಿದ್ದೇವೆ. ಭಾರತ ಸಂವಿಧಾನವು ಕೇಂದ್ರ ಹಾಗೂ ರಾಜ್ಯಗಳಲ್ಲಿ ಸಂಸದೀಯ ಪದ್ದತಿಗೆ ಅವಕಾಶ ಮಾಡಿಕೊಟ್ಟಿದೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಕಾರ್ಯಾಂಗವು ಶಾಸಕಾಂಗಕ್ಕೆ ಹೊಣೆಯಾಗಿರುತ್ತದೆ. ಕಾರ್ಯಾಂಗವು ಶಾಸಕಾಂಗದ ವಿಶ್ವಾಸವನ್ನು ಹೊಂದಿರುವವರಿಗೆ ಮಾತ್ರ ಅಧಿಕಾರದಲ್ಲಿ ಮುಂದುವರೆಯುತ್ತದೆ. ಶಾಸಕಾಂಗದ ವಿಶ್ವಾಸವನ್ನು ಕಳೆದುಕೊಂಡ ತಕ್ಷಣ ಅಧಿಕಾರವನ್ನು ಕಳೆದುಕೊಳ್ಳುತ್ತದೆ.
8. ಸಾರ್ವತ್ರಿಕ ವಯಸ್ಕ ಮತದಾನ ಪದ್ದತಿ
ಈ ಪದ್ದತಿಯ ಪ್ರಕಾರ, ಜಾತಿ, ಮತ, ಲಿಂಗ, ಸಾಮಾಜಿಕ ಸ್ಥಾನಮಾನ, ಮುಂತಾದವುಗಳ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದೇ 18 ವರ್ಷ ಮೇಲ್ಪಟ್ಟ ಎಲ್ಲ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. 1989ರ 61ನೇಯ ತಿದ್ದುಪಡಿಯ ಪ್ರಕಾರ ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಲಾಯಿತು. ಇದು ಪ್ರಜಾಪ್ರಭುತ್ವವನ್ನು ಬಲಗೊಳಿಸುವಲ್ಲಿ ಕ್ರಾಂತಿಕಾರಿಕ ಹೆಜ್ಜೆಯಾಗಿದೆ. ಸಾರ್ವತ್ರಿಕ ವಯಸ್ಕ ಮತದಾನ ಪದ್ದತಿಯ ಫಲವಾಗಿ ಭಾರತವು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿದೆ.
9. ನ್ಯಾಯಿಕ ವಿಮರ್ಶೆ
ನ್ಯಾಯಿಕ ವಿಮರ್ಶೆಯಲ್ಲಿ ಭಾರತ ಸಂವಿಧಾನದ ಪ್ರಮುಖ ಲಕ್ಷಣಗಳಲ್ಲೊಂದಾಗಿದೆ. ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಂಗಗಳ ಅಧಿಕಾರ ಹಾಗೂ ಕಾರ್ಯಗಳ ಸಂವಿಧಾನ ಬದ್ದತೆಯನ್ನು ವಿಮರ್ಶಿಸುವ ಅಧಿಕಾರವನ್ನು ಹೊಂದಿದೆ. ಸಂವಿಧಾನವನ್ನು ಉಲ್ಲಂಘಿಸುವ ಶಾಸಕಾಂಗದ ಕಾನೂನುಗಳನ್ನು ನ್ಯಾಯಾಂಗವು ಸಂವಿಧಾನ ಬಾಹಿರ ಬಾಹಿರ, ಅಸಿಂಧು ಎಂದು ಘೋಷಿಸುತ್ತದೆ. ನ್ಯಾಯಾಂಗ ವ್ಯವಸ್ಥೆಯು ಸ್ವತಂತ್ರವಾಗಿರಲು ಕಾರಣಗಳು.
• ನೇಮಕಾತಿ ವಿಧಾನ
• ನಿವೃತ್ತಿಯ ನಂತರ ವಕೀಲ ವೃತ್ತಿಯಿಂದ ನಿಷೇಧ.
• ವೇತನ ಮತ್ತು ಭತ್ಯೆಗಳನ್ನು ದೇಶದ ಸಂಚಿತ ನಿಧಿಯಿಂದ ಭರಿಸಲಾಗುತ್ತದೆ.
• ನ್ಯಾಯಾಧೀಶರ ವರ್ತನೆಗಳನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ಚರ್ಚಿಸುವಂತಿಲ್ಲ.
10. ಏಕಪೌರತ್ವ
ಭಾರತ ಸಂವಿಧಾನಕ್ಕೆ ಏಕಪೌರತ್ವವನ್ನು ಬ್ರಿಟಿಷ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಭಾರತದಲ್ಲಿ ಒಬ್ಬ ವ್ಯಕ್ತಿ ರಾಷ್ಟ್ರೀಯ ಪೌರತ್ವವನ್ನು ಹೊಂದಿದ್ದಾನೆಯೇ ಹೊರತು ರಾಜ್ಯದ ಪೌರತ್ವವನ್ನು ಹೊಂದಿರುವುದಿಲ್ಲ. ಭಾರತೀಯರಲ್ಲಿ ಏಕತೆ, ಸಮಗ್ರತೆ ಮತ್ತು ಅವಿಭಜಿತ ನಿಷ್ಠೆ ಮುಂತಾದ ಉದಾತ್ತ ಮನೋಭಾವನೆಗಳನ್ನು ಬೆಳೆಸಲು ಏಕಪೌರತ್ವ ಪದ್ದತಿಯು ಪೂರಕವಾಗಿದೆ.
11. ಪ್ರಜಾಪ್ರಭುತ್ವ
ಭಾರತವು ವಿಶ್ವದಲ್ಲಿಯೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತ ದೇಶದಲ್ಲಿ ಸಾರ್ವತ್ರಿಕ, ವಯಸ್ಕ ಮತದಾನ ಪದ್ದತಿ ಮೂಲಕ ಚುನಾಯಿತರಾದ ಜನಪ್ರತಿನಿಧಿಗಳು ಪ್ರಜೆಗಳ ಪರವಾಗಿ ರಾಜ್ಯಾಡಳಿತದಲ್ಲಿ ಭಾಗವಹಿಸುತ್ತಾರೆ (326ನೇ ವಿಧಿ), ಹೀಗೆ ಪ್ರಜೆಗಳು ಆಡಳಿತದಲ್ಲಿ ಪರೋಕ್ಷವಾಗಿ ಭಾಗವಹಿಸುವುದನ್ನು ಕಾಣಬಹುದು.
12. ಜಾತ್ಯಾತೀತತೆ
1976ರ ಸಂವಿಧಾನದ 42ನೇ ತಿದ್ದುಪಡಿ ಕಾಯ್ದೆಯ ಮೂಲಕ ಜಾತ್ಯಾತೀತ ಎಂಬ ಪದವನ್ನು ಸಂವಿಧಾನಕ್ಕೆ ಸೇರಿಸಲಾಯಿತು. ಸಂವಿಧಾನದ 25ರಿಂದ 28ನೇ ವಿಧಿಯು ಧಾರ್ಮಿಕ ಸ್ವಾತಂತ್ರಕ್ಕೆ ಅವಕಾಶವನ್ನು ಕಲ್ಪಿಸುತ್ತದೆ. ಭಾರತವು ಒಂದು ಜಾತ್ಯಾತೀತ ರಾಷ್ಟ್ರವಾಗಿದೆ. ಭಾರತವು ತನ್ನದೇ ಆದ ರಾಷ್ಟ್ರಧರ್ಮವನ್ನು ಹೊಂದಿಲ್ಲ, ನಮ್ಮ ದೇಶದಲ್ಲಿ ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣಲಾಗುತ್ತದೆ. ಸರ್ಕಾರವು ಪ್ರಜೆಗಳ ಧಾರ್ಮಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಸಂವಿಧಾನವು ತನ್ನ ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ, ಆದ್ದರಿಂದ ಒಬ್ಬ ಭಾರತೀಯನು ತನ್ನ ಮನಸಾಕ್ಷೆಗನುಗುಣವಾಗಿ ಯಾವುದೇ ಧರ್ಮವನ್ನು ಪಾಲಿಸುವ, ಆರಾಧಿಸುವ ಹಾಗೂ ಪ್ರಚಾರಪಡಿಸುವ ಸ್ವಾತಂತ್ರ್ಯ ಹೊಂದಿದ್ದಾನೆ.
13. ಸಾರ್ವಭೌಮ ರಾಷ್ಟ್ರ
ಭಾರತವು ಒಂದು ಸಾರ್ವಭೌಮ ರಾಷ್ಟ್ರವಾಗಿದೆ. ಇದು ಆಂತರಿಕ ಶ್ರೇಷ್ಠತೆಯನ್ನು ಹಾಗೂ ಬಾಹ್ಯ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ. ಅಂದರೆ ನಮ್ಮ ರಾಷ್ಟ್ರವು ಆಂತರಿಕವಾಗಿ ಸರ್ವೋಚ್ಚ ಅಧಿಕಾರವನ್ನು ಹಾಗೂ ಬಾಹ್ಯವಾಗಿ ಅನ್ಯ ರಾಷ್ಟ್ರಗಳಿಂದ ಸಂಪೂರ್ಣ ಸ್ವತಂತ್ರವನ್ನು ಪಡೆದಿದೆ. ಆದ್ದರಿಂದ ಭಾರತವು ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿಯನ್ನು ಪಾಲಿಸಬಹುದು.
14. ಗಣರಾಜ್ಯ
ರಾಷ್ಟ್ರದ ಮುಖ್ಯಸ್ಥರನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಚುನಾಯಿಸುವ ರಾಜಕೀಯ ವ್ಯವಸ್ಥೆಯನ್ನು ಗಣರಾಜ್ಯ ಎಂದು ಕರೆಯಲಾಗುತ್ತದೆ. ಭಾರತದ ಸಂವಿಧಾನಕ್ಕೆ ಗಣರಾಜ್ಯವನ್ನು ಐರ್ಲೆಂಡ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಭಾರತದ ಮುಖ್ಯಸ್ಥರಾದ ರಾಷ್ಟ್ರಾಧ್ಯಕ್ಷರನ್ನು ಪರೋಕ್ಷ ಚುನಾವಣೆಯಿಂದ ಆಯ್ಕೆ ಮಾಡುವುದರಿಂದ ಭಾರತವು ಒಂದು ಗಣರಾಜ್ಯವಾಗಿದೆ. ‘ಗಣರಾಜ್ಯ’ ಎಂಬ ಪದವು ಭಾರತ ಸರ್ಕಾರದ ಯಾವುದೇ ಅನುವಂಶೀಯ ರಾಜ ಅಥವಾ ರಾಣಿಯ ಆಳ್ವಿಕೆಗೆ ಒಳಪಟ್ಟಿಲ್ಲ ಎಂಬುದನ್ನು ಸೂಚಿಸುತ್ತದೆ.
15. ತುರ್ತುಪರಿಸ್ಥಿತಿ
ಭಾರತ ಸಂವಿಧಾನಕ್ಕೆ ತುರ್ತು ಪರಿಸ್ಥಿತಿಯನ್ನು ಜರ್ಮನಿಯ ಸಂವಿಧಾನದಿಂದ ಎರವಲು ಪಡಯಲಾಗಿದೆ. ರಾಷ್ಟ್ರದ ಆರ್ಥಿಕ ಸ್ಥಿರತೆಗೆ ಧಕ್ಕೆಯಾದಗಿದಾಗ ರಾಷ್ಟ್ರಾಧ್ಯಕ್ಷರು ಆರ್ಥಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು. ರಾಷ್ಟ್ರಾಧ್ಯಕ್ಷರು ಸಂಧಿಗ್ದ ಪರಸ್ಥಿತಿಗಳಲ್ಲಿ ಮೂರು ಬಗೆಯ ತುರ್ತು ಪರಿಸ್ಥಿತಿಗಳನ್ನು ಘೋಷಿಸುವ ಅಧಿಕಾರವನ್ನು ಹೊಂದಿದ್ದಾರೆ. ರಾಷ್ಟ್ರಾಧ್ಯಕ್ಷರು ವಿದೇಶಿ ಆಕ್ರಮಣ, ಸಶಸ್ತ್ರ ಬಂಡಾಯ, ಯುದ್ಧ ಈ ಕಾರಣಗಳಿಂದ ರಾಷ್ಟ್ರೀಯ ಭದ್ರತೆಗೆ ಗಂಡಾಂತರ ಒದಗಬಹುದು ಎಂದು ಭಾವಿಸಿದಲ್ಲಿ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು. ಸಂವಿಧಾನಾತ್ಮಕ ಯಂತ್ರವು ಕುಸಿದು ಬಿದ್ದ ರಾಜ್ಯಗಳಲ್ಲಿ ರಾಷ್ಟ್ರಾಧ್ಯಕ್ಷರು ತಮ್ಮ ಆಳ್ವಿಕೆಯನ್ನು ಘೋಷಿಸಬಹುದು.
1962ರಲ್ಲಿ ಭಾರತ ಮತ್ತು ಚೀನಾದ ನಡುವೆ ಹಾಗೂ 1971ರಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ದಗಳು ನಡೆದಾಗ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಘೋಷಿಸಲಾಯಿತು.
1975ರಲ್ಲಿ ಆಂತರಿಕ ಗಲಭೆಯ ಕಾರಣದಿಂದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.
16. ಪಂಚಾಯತ್ ರಾಜ್ ವ್ಯವಸ್ಥೆ
73ನೇಯ ತಿದ್ದುಪಡಿ ಕಾಯ್ದೆಯ ಮೂಲಕ 1993ರಲ್ಲಿ ಹೊಸ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯು 3 ಹಂತದ ಪಂಚಾಯತ್ ರಾಜ್ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿದೆ. ಗ್ರಾಮ ಮಟ್ಟಗಳಲ್ಲಿ ಗ್ರಾಮ ಪಂಚಾಯತಿ, ತಾಲ್ಲೂಕು ಮಟ್ಟಗಳಲ್ಲಿ ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಜಿಲ್ಲಾ ಪಂಚಾಯತಿಗಳು ಇವೆ. 73ನೇಯ ತಿದ್ದುಪಡಿ ಕಾಯ್ದೆಯು ಭಾರತದ ಗ್ರಾಮೀಣ ಸ್ಥಳೀಯ ಸರ್ಕಾರಗಳ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು.
17. ದ್ವಿಸದನ ಶಾಸಕಾಂಗ ಪದ್ದತಿ
ಶಾಸಕಾಂಗವಾದ ಸಂಸತ್ತು ದ್ವಿಸದನ ಪದ್ದತಿಯ ಆಧಾರದ ಮೇಲೆ ರಚನೆಯಾಗಿದೆ. ಆದ್ದರಿಂದ ಇದು ಕೆಳಮನೆ ಮತ್ತು ಮೇಲ್ಮನೆ ಎಂಬ ಎರಡು ಸದನಗಳನ್ನು ಹೊಂದಿದೆ. ಸಂಸತ್ತಿನ ಕೆಳಮನೆಯಾದ ಲೋಕಸಭೆ ಜನರನ್ನು ಪ್ರತಿನಿಧಿಸಿದರೆ, ಮೇಲ್ಮನೆಯಾದ ರಾಜ್ಯಸಭೆಯ ರಾಜ್ಯಗಳನ್ನು ಪ್ರತಿನಿಧಿಸುತ್ತದೆ. ಭಾರತದ ಸಂವಿಧಾನಕ್ಕೆ ದ್ವಿಸದನ ಶಾಸಕಾಂಗ ಪದ್ದತಿಯನ್ನು ಬ್ರಿಟಿಷ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
18. ಸಂಯುಕ್ತ ಪದ್ದತಿ
ಭಾರತ ಸರ್ಕಾರ ಕಾಯ್ದೆ, 1935ರಿಂದ ಸಂಯುಕ್ತ ಪದ್ದತಿಯನ್ನು ಭಾರತದ ಸಂವಿಧಾನಕ್ಕೆ ಸೇರಿಸಲಾಯಿತು. ಭಾರತ ಸಂವಿಧಾನವು ಒಕ್ಕೂಟ ವ್ಯವಸ್ಥೆಗೆ ಅವಕಾಶವನ್ನು ಕಲ್ಪಿಸುತ್ತದೆ. ಒಕ್ಕೂಟ ವ್ಯವಸ್ಥೆ ಎಂದರೆ, ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಅಧಿಕಾರದ ಹಂಚಿಕೆಯಾಗಿದೆ. ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಂವಿಧಾನಾತ್ಮಕವಾದ ಅಧಿಕಾರ ವಿಭಜನೆಯನ್ನು ಕಾಣಬಹುದು. ವಿದೇಶಾಂಗ ವ್ಯವಹಾರ, ರಕ್ಷಣೆ, ಅಂತರಾಜ್ಯ ವ್ಯಾಪಾರ, ರೇಲ್ವೆ, ಅಂಚೆ ಮತ್ತು ತಂತಿ, ನಾಗರಿಕ ವಿಮಾನಯಾನ, ಆದುದು ಮತ್ತು ರಫ್ತು ಮುಂತಾದ ರಾಷ್ಟ್ರಿಯ ಮಹತ್ವವನ್ನು ಪಡೆದ 99 ವಿಷಯಗಳಿಗೆ ಸಂಬಂಧಿಸಿದಂತೆ ಕಾಯ್ದೆಯನ್ನು ರೂಪಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಸಾರ್ವಜನಿಕ ಆರೋಗ್ಯ, ಪೋಲಿಸ್, ಬಂಧೀಖಾನೆ, ಸಾರ್ವಜನಿಕ ಶಾಂತಿಪಾಲನೆ, ವಾಣಿಜ್ಯ ತೆರಿಗೆ, ಮುಂತಾದ ಸ್ಥಳೀಯ ಮಹತ್ವ ಪಡೆದ 61 ವಿಷಯಗಳಿಗೆ ಸಂಬಂಧಿಸಿದಂತೆ ಕಾಯ್ದೆ ರೂಪಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401