ಬಹಿರಂಗ
ಬದಲಾಗುತ್ತಿರುವ ಭಾರತದಲ್ಲಿ ಮಾಧ್ಯಮವೆಂಬೋ ಮಾಂತ್ರಿಕ
- ನಾ ದಿವಾಕರ
ಭಾರತ ಬದಲಾಗುತ್ತಿದೆ. ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಮಾರುಕಟ್ಟೆ ಬಂಡವಾಳದ ಸುಳಿಯಲ್ಲಿ ಸಿಲುಕಿ ಉನ್ಮತ್ತ ಸ್ಥಿತಿ ತಲುಪಿರುವ ಭಾರತದ ಒಂದು ವರ್ಗ ಈ ಬದಲಾದ ಭಾರತದ ರಾಯಭಾರಿಯಂತೆ ಕಾಣುತ್ತಿದೆ. ಕೋವಿದ್ 19 ಸಂದರ್ಭದಲ್ಲಿ ಬದಲಾಗುತ್ತಿರುವ ಭಾರತದ ವಿಭಿನ್ನ ಮಜಲುಗಳು ಸಾರ್ವಜನಿಕ ಬದುಕಿನಲ್ಲಿ ಹಂತಹಂತವಾಗಿ ತೆರೆದುಕೊಳ್ಳುತ್ತಿವೆ. 2019ರ ಉತ್ತರಾರ್ಧದಲ್ಲಿ ದೇಶಾದ್ಯಂತ ಸೃಷ್ಟಿಯಾದ ಸಾಮಾಜಿಕ ಪ್ರಕ್ಷುಬ್ಧತೆ, ಸಾಂಸ್ಕೃತಿಕ ಉನ್ಮಾದ ಮತ್ತು ರಾಜಕೀಯ ಪಲ್ಲಟಗಳ ನಡುವೆಯೇ ಭಾರತ ಕೊರೋನಾ ದಾಳಿಗೆ ಸಿಲುಕಿ ದಿಕ್ಕುಗಾಣದ ದೆಸೆಯಲ್ಲಿ ನಿಂತಿದೆ.
ಭಾರತದ ಮಟ್ಟಿಗೆ ಹೇಳುವುದಾದರೆ ಕೊರೋನಾ ಸತ್ಯ ದರ್ಶನದ ಹೆಬ್ಬಾಗಿಲಿನಂತೆ ಕಾಣುತ್ತಿದೆ. ಆಳುವ ವರ್ಗಗಳ ದೃಷ್ಟಿಯಲ್ಲಿ ನಿಕೃಷ್ಟರಾಗಿದ್ದ ಬೃಹತ್ ಜನಸಮುದಾಯ ಇಂದು ತನ್ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳಲು, ತನ್ನ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಎದ್ದು ನಿಂತಿದೆ.
ಈ ಜನಸಮುದಾಯಗಳ ಒಳಗಿನಿಂದಲೇ “ ಅನ್ಯರನ್ನು ” ಗುರುತಿಸಿ ಸ್ವಚ್ಚ ಭಾರತವನ್ನು ನಿರ್ಮಿಸುವ ಕನಸು ಕಾಣುತ್ತಿದ್ದ ಬೌದ್ಧಿಕ-ರಾಜಕೀಯ ವಲಯಕ್ಕೆ ತಮ್ಮ ಆಂತರ್ಯವನ್ನು ಸ್ವಚ್ಚಗೊಳಿಸಿಕೊಳ್ಳಬೇಕಾದ ಸಂದರ್ಭ ಎದುರಾಗಿದೆ.
ಕೊರೋನಾ ಸಮಾಜದ ಎಲ್ಲ ವರ್ಗಗಳನ್ನೂ ಕಾಡುತ್ತಿದೆ ಆದರೆ ಕೊರೋನಾದಿಂದ ಉದ್ಭವಿಸಿರುವ ಸಾವು ಬದುಕಿನ ಸಂಘರ್ಷ ಕೆಲವೇ ವರ್ಗಗಳನ್ನು ಮುನ್ನೆಲೆಗೆ ತಂದಿದೆ. ಈ ಸಂಘರ್ಷದ ನೆಲೆಯಲ್ಲೇ ಭಾರತೀಯ ಸಮಾಜದ ಪ್ರಜ್ಞಾವಂತ ಮನಸುಗಳು ಪ್ರಬುದ್ಧ ಭಾರತದ ಕನಸು ಕಾಣಬೇಕಿದೆ.
ನಾವು ಕೊರೋನಾ ವಿರುದ್ಧ ಯುದ್ಧ ಮಾಡುತ್ತಿದ್ದೇವೆ ಎನ್ನುವ ಒಂದು ಚಿಂತನೆ ನಮ್ಮ ಸೂಕ್ಷ್ಮತೆಯನ್ನು ಮತ್ತಷ್ಟು ಹರಿತಗೊಳಿಸಬೇಕಿತ್ತು. ಆದರೆ ಈ ಯುದ್ಧ ಎನ್ನುವ ಪದ ಅಕ್ಷರಶಃ ರಣರಂಗದ ಪರಿಭಾಷೆಯಲ್ಲಿ ವ್ಯಕ್ತವಾಗುತ್ತಿದ್ದು ಶತ್ರು-ಮಿತ್ರರ ಶೋಧಕ್ಕೆ ಕಾರಣವಾಗುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ.
ಇದರ ಒಂದು ಅಕ್ಷರತುಣುಕು ಪ್ರಜಾವಾಣಿ ಪತ್ರಿಕೆಯ ಸಂದರ್ಶನವೊಂದರಲ್ಲಿ ಕಂಡುಬರುತ್ತದೆ. ಸಂಘಪರಿವಾರದ ವಕ್ತಾರ ದತ್ತಾತ್ರೇಯ ಹೊಸಬಾಳೆಯವರೊಡನೆ ಪತ್ರಿಕೆ ನಡೆಸಿದ ಸಂದರ್ಶನವನ್ನು ನೋಡಿದಾಗ ಭಾರತದ ಸಾಂಸ್ಕೃತಿಕ ರಾಜಕಾರಣ ಒಂದು ವೈರಾಣುವನ್ನೂ ಆವಾಹನೆ ಮಾಡುವಷ್ಟು ಬಲಿಷ್ಟವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಸಾಂಸ್ಕೃತಿಕ ರಾಜಕಾರಣದ ಪರಿಭಾಷೆಗೆ ನಾವು ಒಗ್ಗಿಹೋಗಿದ್ದೇವೆ. ಸದಾ ರಣರಂಗದ ಗುಂಗಿನಲ್ಲೇ ಇರುವ ಉನ್ಮತ್ತ ಮನಸುಗಳು ಇಲ್ಲದ ಶತ್ರುಗಳನ್ನು ಹುಡುಕುತ್ತಲೇ ತಮ್ಮೊಳಗಿನ ವೈರತ್ವದ ಭಾವನೆಯನ್ನು ಮತಧಾರ್ಮಿಕ ಕುಲುಮೆಗಳಲ್ಲಿ ಬೇಯಿಸುತ್ತಿರುತ್ತವೆ. ಕಳೆದ ಮೂರು ದಶಕಗಳಲ್ಲಿ ಭಾರತ ಕಂಡಿರುವ ದುರಂತ ಇದು.
ಈ ದುರಂತದ ಸೋದರ ಸಂಬಂಧಿಯಾಗಿ ಹಣಕಾಸು ಬಂಡವಾಳ ವ್ಯವಸ್ಥೆ ಅಗೋಚರ ಪ್ರಪಂಚವೊಂದನ್ನು ಸೃಷ್ಟಿಸಿಬಿಟ್ಟಿದೆ. ಕೊರೋನಾ ಕೃಪೆಯಿಂದ ಈ ಪ್ರಪಂಚ ಇಂದು ನಮ್ಮ ಕಣ್ಣೆದುರು ನಿಂತಿದೆ. ದೇಶದ ಬಹುಸಂಖ್ಯಾತ ಪ್ರಜೆಗಳನ್ನು ಪ್ರತಿನಿಧಿಸುವ ಈ ಪ್ರಪಂಚ ನಮ್ಮ ಮುಂದಿನ ದಿನಗಳಲ್ಲಿ ನಿರ್ಣಾಯಕ ನೆಲೆ ತಲುಪಲಿದೆ.
ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ ದತ್ತಾತ್ರೇಯ ಹೊಸಬಾಳೆಯವರ ಮೂರು ಅಭಿಪ್ರಾಯಗಳು ಪ್ರಜಾತಂತ್ರದ ಪ್ರಜ್ಞೆಗೆ ಘಾಸಿ ಉಂಟುಮಾಡುತ್ತವೆ. 9/11ರ ಸಂದರ್ಭದಲ್ಲಿ ಅಮೆರಿಕದ ವಿರೋಧ ಪಕ್ಷಗಳು ಸರ್ಕಾರದ ಬೆನ್ನಿಗೆ ನಿಂತಿದ್ದವು, 1971ರ ಯುದ್ಧದ ಸಂದರ್ಭದಲ್ಲಿ ವಾಜಪೇಯಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು.
ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಭಾರತದಲ್ಲಿ ಮಿಲಿಟರಿಯನ್ನು ಬಳಸುವ ಪರಿಸ್ಥಿತಿ ಎದುರಾಗಲಿಲ್ಲ ಎಂದು ಜನರನ್ನು ಅಭಿನಂದಿಸಿದ್ದಾರೆ. ಈ ಮೂರು ವಾಕ್ಯಗಳಲ್ಲೂ ಕೊರೋನಾ ರಣಕೇಕೆ(ಸುದ್ದಿಮನೆಯ ಪರಿಭಾಷೆಯಲ್ಲಿ) ಮತ್ತು ಸಾಂಸ್ಕೃತಿಕ ರಾಜಕಾರಣದ ರಣೋತ್ಸಾಹದ ಛಾಯೆ ಕಂಡುಬರುತ್ತದೆ.
ಸಂದರ್ಶನ ನೀಡಿದ ವ್ಯಕ್ತಿ ಯಾರು ಎನ್ನುವುದಕ್ಕಿಂತಲೂ, ಒಂದು ಸಂಘಟನೆಯ ಸದಸ್ಯರಿಗೆ ಸಮಸ್ತ ಭಾರತೀಯರ ರಾಯಭಾರಿಯಾಗಿ ಮಾತನಾಡುವ ಅವಕಾಶ ನೀಡಿದ ಮಾಧ್ಯಮದ ನಡೆ ಇಲ್ಲಿ ಪ್ರಶ್ನಾರ್ಹವಾಗುತ್ತದೆ. ದತ್ತಾತ್ರೇಯ ಅವರ ಅಭಿಪ್ರಾಯಗಳು ವೈಯಕ್ತಿಕ-ತಾತ್ವಿಕ ಮತ್ತು ಸಂಘಟನಾತ್ಮಕ ನೆಲೆಯಲ್ಲಿ ವ್ಯಕ್ತವಾಗುವಂತಹುದು.
ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸೋಣ. ಪತ್ರಿಕೆಯ ಸಂಪಾದಕ ಮಂಡಲಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಮನ್ನಿಸೋಣ. ಆದರೆ ರಾಜ್ಯದ ಪ್ರತಿಷ್ಠಿತ ಸುದ್ದಿ ಪತ್ರಿಕೆಯೊಂದರ ಮುಖಪುಟದಲ್ಲಿ ಇಂತಹ ಅಭಿಪ್ರಾಯಗಳು ವಿಜೃಂಭಿಸಿದಾಗ ಪ್ರಜ್ಞಾವಂತ ಮನಸುಗಳಿಗೆ ಆತಂಕ ಉಂಟಾಗುವುದು ಸಹಜ. ಇತರ ಯಾವುದೇ ಪತ್ರಿಕೆಯಲ್ಲಿ ಈ ಸಂದರ್ಶನ ಪ್ರಕಟವಾಗಿದ್ದರೂ ನಿರ್ಲಕ್ಷಿಸಬಹುದಿತ್ತೇನೋ.
ಇರಲಿ, ಇಲ್ಲಿ ಸಮಸ್ಯೆ ಇರುವುದು ಒಂದು ಪತ್ರಿಕೆ ಅಥವಾ ಒಬ್ಬ ವ್ಯಕ್ತಿಯಲ್ಲಿ ಅಲ್ಲ. ಭಾರತದ ಪ್ರಜಾತಂತ್ರ ವ್ಯವಸ್ಥೆ ಎದುರಿಸುತ್ತಿರುವ ಸವಾಲು ಇಂತಹ ಸೂಕ್ಷ್ಮ ಸಂಗತಿಗಳನ್ನೂ ನಿಷ್ಕರ್ಷೆಗೊಡ್ಡುವ ಅನಿವಾರ್ಯತೆಯನ್ನು ಸೃಷ್ಟಿಸಿದೆ.
ನಾವು ಇಂದು ಮಾಧ್ಯಮ ಎಂದು ಭಾವಿಸುವ ವಿದ್ಯುನ್ಮಾನ ಸುದ್ದಿಮನೆಗಳು, ಮುದ್ರಣ ಲೋಕದ ಸುದ್ದಿ ಪತ್ರಿಕೆಗಳು ಮತ್ತು ಸಾಮಾಜಿಕ ತಾಣಗಳು ಪ್ರಜಾತಂತ್ರ ವ್ಯವಸ್ಥೆಯ ಆಧಾರ ಸ್ತಂಭಗಳು ಎನ್ನುವ ಭ್ರಮೆ ನಮ್ಮಿಂದ ಇನ್ನೂ ದೂರವಾಗದೆ ಉಳಿದಿರುವುದೇ ಅಚ್ಚರಿಯ ಸಂಗತಿ. ಬಹುಶಃ ನಮ್ಮ ಸಮಾಜದಲ್ಲಿ ತಾಳ್ಮೆ, ಸಹನೆ ತುಸು ಹೆಚ್ಚಾಗಿಯೇ ಇದೆ ಎನ್ನುವುದನ್ನು ಇದು ನಿರೂಪಿಸುತ್ತದೆ.
1990ರ ಸಂದರ್ಭದ ಸಾಂಸ್ಕೃತಿಕ ರಾಜಕಾರಣ ಮತ್ತು ಜಾಗತಿಕ ಬಂಡವಾಳದ ಪ್ರಹಾರದಿಂದ ಚೇತರಿಸಿಕೊಳ್ಳುವ ಮುನ್ನವೇ ನಮಗೆ ಸತ್ಯದರ್ಶನವಾಗಿದ್ದರೆ ಅದಕ್ಕೆ ಕೊರೋನಾ ಕಾರಣವಾಗಿದೆ. ಒಂದು ವರ್ಷದ ಹಿಂದೆ ದೇಶವ್ಯಾಪಿ ರಾಜಕೀಯ ಸಂಕಥನದ ಕೇಂದ್ರ ಬಿಂದು ಆಗಿದ್ದ “ ವಲಸಿಗರು ” ಇಂದೂ ಸಹ ಸಮಾಜೋ ರಾಜಕೀಯ ಸಂಕಥನದ ಕೇಂದ್ರ ಬಿಂದು ಆಗಿದ್ದಾರೆ.
ಅಂದು ನಿಕೃಷ್ಟರಾಗಿ ನಿರ್ಲಕ್ಷ್ಯಕ್ಕೆ ಅರ್ಹರಾಗಿದ್ದ ಈ ಸಮುದಾಯ ಇಂದು ಕಾಳಜಿ, ಕಳಕಳಿಗೆ ಅರ್ಹತೆ ಪಡೆದಿದ್ದರೂ, ಒಂದು ನೆಲೆಯಲ್ಲಿ ನಿಕೃಷ್ಟರಾಗಿಯೇ ಕಾಣುತ್ತಿದ್ದಾರೆ. ಈ ಅಂಶವನ್ನು ಬದಿಗಿಟ್ಟು ನೋಡಿದಾಗ, ಕೊರೋನಾ ಸಂದರ್ಭದಲ್ಲಿ ನಮಗೆ ಈ ದೇಶದ ಮುದ್ರಣ ಲೋಕ ಮತ್ತು ಡಿಜಿಟಲ್ ಲೋಕದ ಸುದ್ದಿಮನೆಗಳು ದಿನನಿತ್ಯ ಕಾಡುತ್ತವೆ.
ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎನ್ನುವ ಪ್ರತಿಷ್ಠಿತ ಸ್ಥಾನ ಪಡೆದಿರುವ ಈ ಜಗತ್ತು ಇಂದು, ಈ ಆಶಯದ ಆಂತರ್ಯವನ್ನೇ ಮರೆತಂತೆ ಕಾಣುತ್ತಿರುವುದು ದುರಂತ. ಪ್ರಜಾವಾಣಿಯಲ್ಲಿನ ಒಂದು ಸಂದರ್ಶನ ಆಕ್ಷೇಪಾರ್ಹವಾಗಿ ಕಾಣುವುದು ಇಲ್ಲಿಯೇ.
ಮಾಧ್ಯಮ ಲೋಕದಲ್ಲಿ ಸ್ವತಂತ್ರ , ಸ್ವಾಯತ್ತ ಮತ್ತು ನಿಷ್ಪಕ್ಷಪಾತ ಧೋರಣೆಯನ್ನೇ ಮೂಲಮಂತ್ರವಾಗಿ ಭಾವಿಸುವ ಪರಂಪರೆಗೆ ಬಹುಶಃ ನಾವು ವಿದಾಯ ಹೇಳಿದ್ದೇವೆ ಎನಿಸುತ್ತದೆ. ವ್ಯವಸ್ಥೆ, ಪ್ರಭುತ್ವ ಮತ್ತು ಆಡಳಿತಾರೂಢ ಸರ್ಕಾರ ಈ ಮೂರರ ನಡುವಿನ ಅಂತರ, ವ್ಯತ್ಯಾಸ ಮತ್ತು ಕಂದರವನ್ನು ಮೂಲತಃ ಮಾಧ್ಯಮಗಳು ಬಿಂಬಿಸಬೇಕಾಗುತ್ತದೆ.
ಹಾಗಾದಲ್ಲಿ ಮಾತ್ರ ಸರ್ಕಾರದ ಕ್ರಮಗಳಿಂದ ಅಸಮಧಾನ ಹೊಂದಿರುವ, ಪ್ರಭುತ್ವದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ, ವ್ಯವಸ್ಥೆಯ ಲೋಪಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವ ಸೂಕ್ಷ್ಮ ಮನಸುಗಳಿಗೆ ಅಕ್ಷರಗಳ ಮೂಲಕ, ಮಾತುಗಳ ಮೂಲಕ ಸ್ಪಂದಿಸಲು ಸಾಧ್ಯ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಈ ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದು ಈ ಕಾಲಘಟ್ಟದ ದುರಂತ.
ತತ್ವ, ಸಿದ್ಧಾಂತ, ನೀತಿ ಮತ್ತು ಮೌಲ್ಯ ಈ ನಾಲ್ಕೂ ಸಹ ಒಂದು ದೇಶದ ಬೌದ್ಧಿಕ ವಲಯದ ಆಸ್ತಿ. ಹಾಗೆಯೇ ದೇಶದ ಮುನ್ನಡೆಗೆ ಪೂರಕವಾಗಬಹುದಾದ ಬೌದ್ಧಿಕ , ಭೌತಿಕ ಸರಕುಗಳು. ಈ ಸರಕುಗಳನ್ನು ನಾವು ಯಾವ ನೆಲೆಯಲ್ಲಿ ನಿಂತು ಬಳಸುತ್ತೇವೆ, ಹೇಗೆ ನಿಷ್ಕರ್ಷೆ ಮಾಡುತ್ತೇವೆ, ಯಾವ ದಿಕ್ಕಿನಲ್ಲಿ ಇವುಗಳನ್ನು ಕೊಂಡೊಯ್ಯುತ್ತೇವೆ ಮತ್ತು ಯಾರ ಪರವಾಗಿ ಈ ನಾಲ್ಕೂ ನೆಲೆಗಳು ನಿಲ್ಲುತ್ತವೆ ಈ ಪ್ರಶ್ನೆಗಳು ಒಂದು ಪ್ರಬುದ್ಧ ಸಮಾಜವನ್ನು ಕಾಡಲೇಬೇಕು.
ಇವುಗಳಿಂದಾಚೆಗೂ ಒಂದು ಪ್ರಪಂಚ ಇದೆ ಎಂದಾದರೆ ಅದು ಅರಾಜಕತೆಯ ನೆಲೆಯಲ್ಲೇ ಇರಬೇಕಾಗುತ್ತದೆ. ಭಾರತ ಈ ನಾಲ್ಕೂ ವಿದ್ಯಮಾನಗಳನ್ನು ಶತಮಾನಗಳಿಂದ ಪರಸ್ಪರ ವಿರುದ್ಧ ನೆಲೆಗಳಲ್ಲಿ, ವೈರುಧ್ಯಗಳ ನಡುವೆ, ವಿರೋಧಾಭಾಸಗಳೊಡನೆ ಮತ್ತು ಸಾಪೇಕ್ಷ ನೆಲೆಗಳಲ್ಲಿ ಎದುರಿಸುತ್ತಲೇ ಬಂದಿದೆ.
1990ರ ನಂತರದಲ್ಲಿ ಈ ನೆಲೆಗಳು ಹೆಚ್ಚು ಸಾಪೇಕ್ಷತೆಯನ್ನು ಪಡೆದುಕೊಳ್ಳುತ್ತಿದ್ದು, ತಮ್ಮ ಅಂತಃಸತ್ವವನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ್ದೇವೆ. ವಾದಗಳ ಅಥವಾ ಇಸಂಗಳ ಸಂಘರ್ಷದಲ್ಲಿ ಈ ನಾಲ್ಕೂ ವಿದ್ಯಮಾನಗಳು ಯಾವುದೇ ನೆಲೆಯಲ್ಲಿ ನಿಂತರೂ ಜನಸಮುದಾಯಗಳ ಮೂಲ ಆಶಯಗಳು ಮತ್ತು ಸಮಷ್ಟಿ ಪ್ರಜ್ಞೆಯ ಸಂರಕ್ಷಣೆಯ ಅನಿವಾರ್ಯತೆ ಎದುರಾದಾಗ ಮಾನವೀಯತೆ ಎನ್ನುವ ಒಂದು ವಿದ್ಯಮಾನ ಗೋಚರಿಸಲೇಬೇಕಲ್ಲವೇ ?
ವಸುದೈವ ಕುಟುಂಬಕಂ ಎನ್ನುವ ಅಸ್ಪಷ್ಟ ಘೋಷವಾಕ್ಯಕ್ಕಿಂತಲೂ ವಿಶ್ವಮಾನವತೆ ಎನ್ನುವ ವಿಶಾಲ ಹೃದಯದ ಒಂದು ಪದ ನಮ್ಮ ಮನಸುಗಳಿಗೆ ಹತ್ತಿರವಾಗುವುದು ಈ ಕಾರಣಕ್ಕಾಗಿಯೇ ಅಲ್ಲವೇ ? ಇದು ಮಾಧ್ಯಮ ಜಗತ್ತಿನಿಂದ ಕಣ್ಮರೆಯಾಗುತ್ತಿದೆ.
ಇಲ್ಲಿ ಮಾಧ್ಯಮ ಜಗತ್ತು ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಂಡುಕೊಳ್ಳಬೇಕಿತ್ತು. ತನ್ನ ಅಸ್ತಿತ್ವ ಮತ್ತು ಅಸ್ಮಿತೆಗೂ, ಈ ದೇಶದ ಬಹುಸಂಖ್ಯೆಯ ಜನಸಮುದಾಯಗಳ ಅಸ್ತಿತ್ವ ಮತ್ತು ಅಸ್ಮಿತೆಗೂ ಅವಿನಾಭಾವ ಸಂಬಂಧ ಇದೆ, ಈ ಸಂಬಂಧವನ್ನು ಹೊಸೆಯುವ ಸೂಕ್ಷ್ಮ ತಂತುಗಳನ್ನು ನಿಷ್ಕ್ರಿಯಗೊಳಿಸಲು ಸಮಾಜೋ ರಾಜಕೀಯ ನೆಲೆಯಲ್ಲಿ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಸದಾ ಸಕ್ರಿಯವಾಗಿರುತ್ತವೆ ಎನ್ನುವ ಪ್ರಜ್ಞೆ ಮಾಧ್ಯಮ ಜಗತ್ತಿನಲ್ಲಿ ಸದಾ ಜಾಗೃತವಾಗಿರಬೇಕಿತ್ತು.
ಪ್ರಭುತ್ವ ಮತ್ತು ಸರ್ಕಾರ ಅಥವಾ ವ್ಯವಸ್ಥೆ ಈ ಬಹುಸಂಖ್ಯೆಯ ಜನಸಮುದಾಯಗಳನ್ನು ಪ್ರತಿನಿಧಿಸುವುದಿಲ್ಲ, ನಿಯಂತ್ರಿಸುತ್ತವೆ. ಈ ಪ್ರಾತಿನಿಧಿಕ ಹೊಣೆಯನ್ನು ಹೊರಬೇಕಾದುದು ಮಾಧ್ಯಮ ಲೋಕದ ಆದ್ಯತೆಯಾಗಬೇಕಲ್ಲವೇ ?
ಈ ಕೊರತೆಯ ವಿರಾಟ್ ಸ್ವರೂಪವನ್ನು ನಾವು ಕೊರೋನಾ ಸಂದರ್ಭದಲ್ಲಿ ಕಾಣುತ್ತಿದ್ದೇವೆ. ಹಣಕಾಸು ಬಂಡವಾಳ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನೂ ಸೇರಿದಂತೆ ವ್ಯವಸ್ಥೆಯ ಎಲ್ಲ ಸಾಂಸ್ಥಿಕ ನೆಲೆಗಳೂ ಬಿಕರಿಯಾಗುತ್ತಿದ್ದರೂ, ತಾನು ಹರಾಜು ಮಾರುಕಟ್ಟೆಯ ಬಲಿಪೀಠದಲ್ಲಿ ತಲೆತಗ್ಗಿಸಿ ನಿಲ್ಲುವುದಿಲ್ಲ ಎನ್ನುವ ದಿಟ್ಟತನ ಮಾಧ್ಯಮ ಜಗತ್ತಿಗೆ ಇರಬೇಕಿತ್ತು. 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇದನ್ನು ಕಂಡಿದ್ದೇವೆ.
ಆದರೆ ಪರಿಸ್ಥಿತಿ ಏನೇ ಇದ್ದರೂ ಇಂದು ವಸ್ತುಸ್ಥಿತಿ ಬದಲಾಗಿದೆ. ಹಣಕಾಸು ಬಂಡವಾಳದ ಮಾರುಕಟ್ಟೆ ಅಧಿಪತ್ಯದೊಂದಿಗೆ, ಸಾಂಸ್ಕೃತಿಕ ರಾಜಕಾರಣ ಮತ್ತು ಜಾತಿ ರಾಜಕಾರಣದ ಕಬಂಧ ಬಾಹುಗಳು ಇಡೀ ವ್ಯವಸ್ಥೆಯನ್ನೇ ಆಕ್ರಮಿಸಿಕೊಂಡಿವೆ. ಪ್ರಭುತ್ವದ ನೆಲೆಗಳು ಈ ಅತಿಕ್ರಮಿತ ಕೋಟೆಯಲ್ಲಿ ಕಂಡುಬರುತ್ತಿವೆ. ಚುನಾಯಿತ ಸರ್ಕಾರಗಳು ತಮ್ಮ ಮೂಲ ನೆಲೆ ಮತ್ತು ಸೆಲೆ ಎರಡನ್ನು ಮರೆತು ಸ್ವಂತಿಕೆ ಕಳೆದುಕೊಂಡಿವೆ.
ಇಂತಹ ವಿಷಮ ಸ್ಥಿತಿಯಲ್ಲಿ 130 ಕೋಟಿ ಜನತೆಯ ಸೂಕ್ಷ್ಮ ಸಂವೇದನೆಗೆ ಸ್ಪಂದಿಸುವ ನೈತಿಕ ಹೊಣೆ ಮಾಧ್ಯಮ ಲೋಕದ ಮೇಲಿದೆ. ಕೆಂಪುಕೋಟೆಯ ಮೇಲಿನ ಛಾಯೆ ಮಾಧ್ಯಮ ಲೋಕದಲ್ಲಿ ಕತ್ತಲು ಆವರಿಸುವಂತೆ ಮಾಡುವ ಪರಂಪರೆ ಇಡೀ ಮಾಧ್ಯಮ ಜಗತ್ತನ್ನೇ ಬದಲಿಸಿಬಿಟ್ಟಿದೆ. ಬಿತ್ತರವಾಗಬೇಕಿದ್ದ ಸುದ್ದಿಗಳು ಉತ್ಪಾದನೆಯಾಗುತ್ತಿವೆ.
ಮಾಧ್ಯಮ ಲೋಕದ ಮಸೂರಗಳು ಸಿಕ್ಕುಗಳಿಗೆ ಸಿಲುಕಿ, ಸೂತ್ರ ಕಳೆದುಕೊಂಡಂತಾಗಿವೆ. ಪತ್ರಿಕೋದ್ಯಮದ ಕಣ್ಣೋಟ ಮತ್ತು ಮುನ್ನೋಟ ಮಸೂರದಲ್ಲೇ ಇರುತ್ತದೆ ಅಲ್ಲವೇ ? ಜನಸಾಮಾನ್ಯರ ನಾಡಿಮಿಡಿತವನ್ನು ಗ್ರಹಿಸಬೇಕಾದ ಮಾಧ್ಯಮ ಲೋಕ ಇಂದು ಉಸಿರುಗಟ್ಟಿರುವ ಸಮಾಜವನ್ನು ಅಕ್ಷರ ಸರಕು ಸಾಗಿಸುವ ಸಾಧನದಂತೆ ಬಳಸಿಕೊಳ್ಳುತ್ತಿದೆ. ಇದರ ನೇರ ಪರಿಣಾಮವನ್ನು ಕೊರೋನಾ ಸಂದರ್ಭದಲ್ಲೇ ಕಂಡಿದ್ದೇವೆ.
ಪ್ರಜಾತಂತ್ರ ಮೌಲ್ಯಗಳ ರಕ್ಷಣೆ ಮಾಧ್ಯಮ ಲೋಕದ ಮೌಖಿಕ ಅಭಿವ್ಯಕ್ತಿಯಿಂದ ಸಾಧ್ಯವಾಗುವಷ್ಟೇ ಅಕ್ಷರದಿಂದಲೂ ಸಾಧ್ಯವಾಗುತ್ತದೆ. ಸುದ್ದಿಮನೆಗಳ ಈ ಅಕ್ಷರಗಳು ಯಾವುದೇ ಚೌಕಟ್ಟಿನೊಳಗೆ ಬಂಧನಕ್ಕೊಳಗಾಗದೆ ಮುಕ್ತ ವಾತಾವರಣದಲ್ಲಿ ಹರಿದಾಡಿದಾಗ ಸಮಾಜದ ವಿಭಿನ್ನ ವರ್ಗಗಳು ಇವುಗಳ ನಡುವೆ ತಮ್ಮ ನೆಲೆ ಕಂಡುಕೊಳ್ಳುತ್ತವೆ.
ಶೋಷಿತ, ಅವಕಾಶವಂಚಿತ, ದಮನಿತ ಜನಸಮುದಾಯಗಳು ಈ ನೆಲೆಯಲ್ಲೇ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಗುರುತಿಸಿಕೊಳ್ಳುತ್ತವೆ. ಇದು ಪ್ರಜಾತಂತ್ರ ವ್ಯವಸ್ಥೆಯ ಬಲವರ್ಧನೆಗೆ ನೆರವಾಗುತ್ತದೆ. ಪತ್ರಿಕೋದ್ಯಮ ಎನ್ನುವ ಪದವನ್ನು ನಾವೆಷ್ಟೇ ಬಳಸಿದರೂ ಪತ್ರಿಕೆ ಉದ್ಯಮವಾಗುವುದನ್ನು ಸಹಿಸಲಾಗುವುದಿಲ್ಲ. ವಿದ್ಯುನ್ಮಾನ ಮಾಧ್ಯಮಗಳಿಗೂ ಇದು ಅನ್ವಯಿಸುತ್ತದೆ.
ಮಾಧ್ಯಮ ಲೋಕದಲ್ಲಿ ಮಾಂತ್ರಿಕ ಶಕ್ತಿ ಇದೆ. ಈ ಮಾಂತ್ರಿಕ ಶಕ್ತಿಯನ್ನು ಸಮಷ್ಟಿ ಪ್ರಜ್ಞೆಯ ನೆಲೆಯಲ್ಲಿ ಬಳಸಿದರೆ ಪ್ರಜಾತಂತ್ರದ ಮೌಲ್ಯಗಳ ರಕ್ಷಣೆಯಾಗುತ್ತವೆ. ವ್ಯಷ್ಟಿ ಪ್ರಜ್ಞೆಯ ನೆಲೆಯಲ್ಲಿ ಬಳಸಿದರೆ ಮಾದ್ಯಮ ವಸ್ತುನಿಷ್ಠೆಯನ್ನು ಮರೆತು ವ್ಯಕ್ತಿನಿಷ್ಠೆಗೆ ಬಲಿಯಾಗುತ್ತದೆ. ಬೌದ್ಧಿಕ ಸಮಾಜ ವಿನಾಶದತ್ತ ಸಾಗುತ್ತದೆ.
ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿ ಮತ್ತು ಮಾರುಕಟ್ಟೆಯ ಲೆಕ್ಕಾಚಾರಗಳು ಈ ಮಾಂತ್ರಿಕ ಶಕ್ತಿಯನ್ನು ನಿಯಂತ್ರಿಸುವಂತಾದರೆ ಮಾಧ್ಯಮ ಲೋಕ ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಸುಲಭವಾಗಿ ಕಳೆದುಕೊಳ್ಳುತ್ತದೆ. ಇಂದು ಈ ಅಪಾಯವನ್ನು ನಾವು ಎದುರಿಸುತ್ತಿದ್ದೇವೆ.
ದುರದೃಷ್ಟವಶಾತ್ ಇಂದು ನಾವು ಔದ್ಯಮಿಕ ಸ್ವರೂಪದ ಮಾಧ್ಯಮಗಳ ನಡುವೆ ಬದುಕುತ್ತಿದ್ದೇವೆ. ಹಾಗಾಗಿಯೇ ಸುದ್ದಿಮನೆಗಳಲ್ಲಿ ಅಭಿಪ್ರಾಯಗಳ ಉತ್ಪಾದನೆಯಾದರೆ, ಮುದ್ರಣ ಮನೆಗಳಲ್ಲಿ ಅಕ್ಷರಗಳು ಉತ್ಪಾದನೆಯಾಗುತ್ತವೆ. ಎರಡೂ ಕಡೆ ಅಕ್ಷರ/ಅಭಿಪ್ರಾಯ ಮೂಡುವ ಪರಿಕಲ್ಪನೆ ಇಲ್ಲವಾಗಿದೆ.
ಪರ್ಯಾಯವೇನು ಎನ್ನುವ ಪ್ರಶ್ನೆಯೊಡನೆಯೇ ನಾವು ಮತ್ತೊಂದು ಮಾಧ್ಯಮ ಜಗತ್ತನ್ನು ಸೃಷ್ಟಿಸುವ ಹಂತಕ್ಕೆ ತಲುಪಿದ್ದೇವೆ. ಅಧಿಕಾರ ರಾಜಕಾರಣ ಮತ್ತು ವ್ಯವಸ್ಥೆಯ ಬಾಹುಗಳಿಂದ ದೂರ ಉಳಿದು ಈ ಹೊಸ ಜಗತ್ತನ್ನು ಸಂರಕ್ಷಿಸಿ, ಮಾನವೀಯ ನೆಲೆಯಲ್ಲಿ ಅಕ್ಷರಗಳನ್ನು ಬಿತ್ತುವ ನಿಟ್ಟಿನಲ್ಲಿ ನಾವು ಸಾಗಬೇಕಿದೆ. ಆಗ ಮಾತ್ರ ವಿಶ್ವಮಾನವ ಸಂದೇಶವನ್ನು ಸಾಕಾರಗೊಳಿಸಲು ಸಾಧ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243