ದಿನದ ಸುದ್ದಿ
ಶಿಕ್ಷಣ ನಮ್ಮ ಹಕ್ಕು, ಬಡವರನ್ನು ಅಣಕಿಸಿ ಬೆತ್ತಲಾಗಬೇಡಿ
- ಡಾ.ಪುರುಷೋತ್ತಮ ಬಿಳಿಮಲೆ
ಗುಜರಾತಿನಲ್ಲಿ ಪಟೇಲರ ಪ್ರತಿಮೆಗೆ 2063 ಕೋಟಿ ರೂಪಾಯಿಗಳನ್ನು ಸರಕಾರ ಖರ್ಚು ಮಾಡಿದಾಗ ಇವರಿಗೆಲ್ಲ ಟ್ಯಾಕ್ಸ್ ಕಟ್ಟಿದ್ದು ನೆನಪಾಗಲೇ ಇಲ್ಲ.
ಮಾನ್ಯ ಪ್ರಧಾನ ಮಂತ್ರಿಗಳು 55 ತಿಂಗಳಲ್ಲಿ 92 ದೇಶಗಳನ್ನು ಸುತ್ತಿ, 2021 ಕೋಟಿ ರೂಪಾಯಿಗಳನ್ನು ಸರಕಾರ ಖರ್ಚು ಮಾಡಿದಾಗ ಇವರಿಗೆಲ್ಲ ಟ್ಯಾಕ್ಸ್ ಕಟ್ಟಿದ್ದು ನೆನಪಾಗಲೇ ಇಲ್ಲ.
ಚುನಾವಣಾ ಡಿಕ್ಲರೇಶನ್ ಗಳಲ್ಲಿ ಕೋಟ್ಯಂತರ ಆಸ್ತಿ ತೋರಿಸುವ ರಾಜಕಾರಣಿಗಳು ಪಾರ್ಲಿಮೆಂಟಲ್ಲಿ 4 ರೂಪಾಯಿಗಳಿಗೆ ದೋಸೆ ತಿಂದು ಮೂರು ರೂಪಾಯಿಗಳಿಗೆ ಚಹಾ ಕುಡಿವಾಗ ಇವರಿಗೆಲ್ಲ ಟ್ಯಾಕ್ಸ್ ಕಟ್ಟಿದ್ದು ನೆನಪಾಗಲೇ ಇಲ್ಲ.
ಬ್ಯಾಂಕುಗಳನ್ನು ಮುಳುಗಿಸಿ ವಿದೇಶಗಳಲ್ಲಿ ಹೋಗಿ ಕುಳಿತವರ ಕಂಡಾಗ ಇವರಿಗೆಲ್ಲ ಟ್ಯಾಕ್ಸ್ ಕಟ್ಟಿದ್ದು ನೆನಪಾಗಲೇ ಇಲ್ಲ.
ದೊಡ್ಡ ದೊಡ್ಡ ಉದ್ಯಮಿಗಳ ಹಾಗೂ ಕಾರ್ಪೋರೇಟ್ ಕಂಪೆನಿಗಳ 12 ಲಕ್ಷ ಕೋಟಿ ತೆರಿಗೆ ಮತ್ತು ಸಾಲವನ್ನು ಸರಕಾರ ಮನ್ನಾ ಮಾಡುವಾಗ ಇವರಿಗೆಲ್ಲ ಟ್ಯಾಕ್ಸ್ ಕಟ್ಟಿದ್ದು ನೆನಪಾಗಲೇ ಇಲ್ಲ.
ಜೆ ಎನ್ ಯು ವಿನ ಬಡ ಮಕ್ಕಳ ಶುಲ್ಕ ಹೆಚ್ಚು ಮಾಡಬೇಡಿ ಎಂದು ಕೇಳುವಾಗ ಮಾತ್ರ ಇವರಿಗೆಲ್ಲ ಟ್ಯಾಕ್ಸ್ ಕಟ್ಟಿದ್ದು ಬಹಳ ಬೇಗ ನೆನಪಾಗುತ್ತದೆ.
ಒಂದು ಕಾಲಕ್ಕೆ ಈ ಬಡ ದೇಶದಲ್ಲಿ ( 2006-07) 58,263 ಡಾಲರ್ ಗಳನ್ನು ವೇತನವಾಗಿಯೂ, 117,336 ಡಾಲರ್ ಗಳನ್ನು ಬೋನಸ್ ಆಗಿಯೂ, 21,779 ಡಾಲರ್ ಗಳನ್ನು ವಾರ್ಷಿಕ ಕಾಂಪನ್ಸೇಷನ್ ಆಗಿಯೂ, 15,287 ಡಾಲರ್ ಗಳನ್ನು ಲೋಂಗ್ ಟರ್ಮ್ ಬೆನಫಿಟ್ ಆಗಿಯೂ ಪಡೆದ ( ಒಟ್ಟು 212665 ಡಾಲರ್ ಗಳು ಅಥವಾ ಸುಮಾರು ಒಂಬತ್ತೂವರೆ ಕೋಟಿ ರೂಗಳು) ಶ್ರೀ ಮೋಹನ್ ದಾಸ್ ಪೈಯವರು ಈಗ ‘ತೆರಿಗೆ ಕಟ್ಟಿದವರ ಹಣ ವ್ಯರ್ಥವಾಗುತ್ತಿದೆ’ ಎಂದು ಗೋಗರೆಯುತ್ತಿರುವುದು ತಮಾಷೆಯಾಗಿದೆ.
ಪ್ರಶ್ನೆ ಕೇಳಿ, ಆದರೆ ಬಡವರನ್ನು ಅಣಕಿಸಿ ಸಾರ್ವಜನಿಕವಾಗಿ ಬೆತ್ತಲಾಗಬೇಡಿ ಅಷ್ಟೆ. ಶಿಕ್ಷಣ ನಮ್ಮ ಹಕ್ಕು. ಅದು ಎಲ್ಲರಿಗೂ ಸುಲಭವಾಗಿ ದೊರೆಯಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243