Connect with us

ದಿನದ ಸುದ್ದಿ

ಕಲ್ಕಿ ಭಗವಾನ್ ಮತ್ತು ದೇವ ಮಾನವರು..!

Published

on

ವಿವೇಕಾನಂದ. ಹೆಚ್.ಕೆ

ಸುಮಾರು 12 ವರ್ಷಗಳ ಹಿಂದೆ ವಿಜಯಕುಮಾರ್ ಎಂಬ ಕಲ್ಕಿ ಭಗವಾನ್ ಅವರನ್ನು ಐದಾರು ಬಾರಿ ಭೇಟಿಯಾಗುವ ಅವಕಾಶ ದೊರೆತಿತ್ತು. ಒಬ್ಬ ಭಕ್ತನಾಗಿಯಲ್ಲ. ಆಗ ನನ್ನ ವೃತ್ತಿಯಾಗಿದ್ದ ಸಾಕ್ಷ್ಯಚಿತ್ರದ ರಚನೆ ನಿರ್ಮಾಣ ನಿರ್ದೇಶನದ ಭಾಗವಾಗಿ ತಿರುಪತಿ ಬಳಿಯ ಬಂಗಾರು ಪಾಳ್ಯಂ ಆಶ್ರಮದಲ್ಲಿ ಸುಮಾರು 3 ದಿನಗಳ ಕಾಲ ಮತ್ತು ಚರ್ಚೆಯ ಭಾಗವಾಗಿ ಇನ್ನೂ ಕೆಲವು ದಿನ ಅವರ ಬಳಿ ಮಾತನಾಡುತ್ತಿದ್ದೆ.

ಇದೀಗ ಆತನ ಮೇಲೆ ತೆರಿಗೆ ದಾಳಿಯಾಗಿ ಅಪಾರ ಪ್ರಮಾಣದ ಹಣ ಆಸ್ತಿ ವಶಪಡಿಸಿಕೊಂಡರುವ ಸಂದರ್ಭದಲ್ಲಿ ಒಂದಷ್ಟು ನೆನಪುಗಳು.

ಆಶ್ರಮದ ಸಿಬ್ಬಂದಿ ಮತ್ತು ಭಕ್ತರು ಆತ ಮತ್ತು ಆತನ ಪತ್ನಿಯನ್ನು ಸಾಕ್ಷಾತ್ ದೇವರೆಂದೇ ಪರಿಗಣಿಸಿದ್ದರು. ಸದಾ ಹೊಳೆಯುವ ರೇಷ್ಮೆಯ ವಸ್ತ್ರವನ್ನು ಧರಿಸಿಕೊಂಡಿರುತ್ತಿದ್ದರು. ಉತ್ತಮ ಮೇಕಪ್ ಕಾರಣದಿಂದ ಮುಖ ಒಂದಷ್ಟು ಕಾಂತಿಯುತವಾಗಿ ಹೊಳೆಯುತ್ತಿತ್ತು. ಇದು ಮುಗ್ದ ಜನರಿಗೆ ಅವರ ಮೇಲೆ ಮತ್ತಷ್ಟು ನಂಬಿಕೆ ಹೆಚ್ಚಾಗಲು ಕಾರಣವಾಗಿತ್ತು.
ಎಂದಿನಂತೆ ಭಾಷೆ ಧ್ವನಿ ಆಕರ್ಷಕವಾಗಿತ್ತು.

ಆಗಾಗ ಹುಣ್ಣಿಮೆಯ ಸಮಯದಲ್ಲಿ ಸಂಜೆ ಕಾರ್ಯಕ್ರಮ ಏರ್ಪಡಿಸಿ ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಕಾಡಿನ ವಾತಾವರಣದ ವಿಶಾಲ ಜಾಗದಲ್ಲಿ ಹೂವು ಹಣ್ಣಿನ ಗಿಡಗಳು ಯಥೇಚ್ಛವಾಗಿ ಇದ್ದವು. ಭಕ್ತ ಭಕ್ತೆಯರ ದಂಡು ಸದಾ ಚಟುವಟಿಕೆಯಿಂದ ಓಡಾಡುತ್ತಾ ಅಲ್ಲಿಯೇ ವಾಸವಾಗಿದ್ದರು.

ಎಲ್ಲಾ ದೇವ ಮಾನವರಂತೆ ಆತ ಒಂದು ವಿಚಾರಧಾರೆಯ ಮೇಲೆ ತನ್ನ ಹಿಂಬಾಲಕರನ್ನು ಮೆಚ್ಚಿಸಲು – ಸೆಳೆಯಲು ಪ್ರಯತ್ನಿಸುತ್ತಿದ್ದ. ಅದೇನೆಂದರೆ,
ನೀವು ನಿಮಗಿರುವ ಕಷ್ಟಗಳಿಂದ ದೂರ ಹೋಗಲು ಪ್ರಯತ್ನಿಸಬೇಡಿ. ಉದ್ದೇಶಪೂರ್ವಕವಾಗಿ ‌ಆ ಸಮಸ್ಯೆಯನ್ನೇ ಕುರಿತು ಯೋಚಿಸಿ. ಆ ಸಮಸ್ಯೆ ಒಳಗೆ ಹೋಗಿ. ಅದು ಆಳಕ್ಕೆ ಹೋದಂತೆ ಅದೇ ಸಮಸ್ಯೆ ಸಹಜವಾಗಿ ರೂಪಾಂತರ ಹೊಂದಿ ನೋವೇ ನಲಿವಾಗಿ ಬದಲಾಗುತ್ತದೆ. ನಂತರ ಅದು ಒಳ್ಳೆಯ ಪರಿಣಾಮ ಬೀರಿ ಸಂತಸವಾಗಿ ಮಾರ್ಪಡುತ್ತದೆ. ಆಗ ನಿಮ್ಮ ಸಮಸ್ಯೆ ತನ್ನಿಂದ ತಾನೇ ಪರಿಹಾರವಾಗುತ್ತದೆ.

ಆತನ ನಿಜವಾದ ಒಳನೋಟ ಏನಿತ್ತೋ ಗೊತ್ತಿಲ್ಲ. ಆದರೆ ಆ ವಿಚಾರಧಾರೆಯ ಸಾರಾಂಶವನ್ನು ನಾನು ಗ್ರಹಿಸಿದ್ದು ಹೀಗೆ.ಒಮ್ಮೆ ಆತನೊಂದಿಗೆ ಖಾಸಗಿ ಮಾತುಕತೆಯ ಸಮಯದಲ್ಲಿ ಆತನ ಪವಾಡದ ಬಗ್ಗೆ ಪ್ರಶ್ನಿಸಿದೆ.
ಆತನ ಅಂಗೈಯಲ್ಲಿ ಜೇನುತುಪ್ಪ ಮತ್ತು ವಿಭೂತಿ ಬರುತ್ತದೆ ಎಂಬ ನಂಬಿಕೆ ಆತನ ಭಕ್ತರಲ್ಲಿ ಇತ್ತು ಮತ್ತು ಅದು ಬರುತ್ತಲೂ ಇತ್ತು.

ಆದರೆ ನನಗೆ ಆಗಲೂ ಆ ರೀತಿಯ ಕ್ರಿಯೆ ನಡೆಯಲು ಸಾಧ್ಯವಿಲ್ಲ. ಅದು ಜಾದು ಅಥವಾ ಕಣ್ಕಟ್ಟು ಆಗಿರಬೇಕೆ ಹೊರತು ನಿಜವಲ್ಲ. ಅದು ಇಡೀ ಸೃಷ್ಟಿಗೇ ವಿರೋಧ ಮತ್ತು ಹಾಗಾಗಿದ್ದೇ ಆದಲ್ಲಿ ಸೃಷ್ಟಿಯ ಒಟ್ಟು ವಿಶ್ವಾಸವೇ ಕಳಚಿ ಬೀಳುತ್ತದೆ ಎಂಬ ಅರಿವಿತ್ರು. ಅದನ್ನು ಆತನ ಬಳಿ ಕೇಳಿದೆ.

ನಿಮಗೆ ಆಶ್ಚರ್ಯವಾಗಬಹುದು. ಆತ ಅದನ್ನು ಒಪ್ಪಿಕೊಂಡ. ಹೌದು ಹಾಗೆ ನಡೆಯಲು ಸಾಧ್ಯವಿಲ್ಲ. ಆದರೆ ನಾನು ನನ್ನ ವಿಚಾರಗಳನ್ನು ಜನರಿಗೆ ತಲುಪಿಸಿ ಈ ಸಮಾಜವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಬೇಕಾದರೆ ಈ ಸಾಮಾನ್ಯ ಜನರಿಗೆ ಅಸಾಮಾನ್ಯವಾದದ್ದನ್ನು ಮಾಡಿ ತೋರಿಸಲೇ ಬೇಕಿದೆ. ನನ್ನೊಳಗೆ ಒಂದು ದೈವತ್ವದ ಅಗಾಧ ಶಕ್ತಿ ಇದೆ ಎಂದು ಜನರಿಗೆ ಮನವರಿಕೆ ಮಾಡಿದರೆ ಮಾತ್ರ ಜನ ನನ್ನನ್ನು ನಂಬುತ್ತಾರೆ, ಗೌರವಿಸುತ್ತಾರೆ, ಆರಾಧಿಸುತ್ತಾರೆ. ಕೇವಲ ಒಳ್ಳೆಯ ವಿಚಾರಗಳು ಜನರನ್ನು ಆಕರ್ಷಿಸುವುದಿಲ್ಲ. ಪವಾಡಗಳು ಮಾತ್ರ ದೇವ ಮಾನವ ಎಂದು ಕರೆಯಲ್ಪಡುವ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ನಾನು ಜೇನು ತುಪ್ಪದ ಪವಾಡ ಮಾಡುತ್ತೇನೆ. ಇದೊಂದು ವಿಶೇಷ ಶಕ್ತಿ ಎಂದು ಜನ ನಂಬುತ್ತಾರೆ. ಇಲ್ಲಿ ನಾನು ಯಾವುದೇ ಮೋಸ ಮಾಡುತ್ತಿಲ್ಲ. ಈ ಸಮಾಜದ ಸೇವೆಗಾಗಿ ನಾನು ಕಲ್ಕಿ ಅವತಾರ ತಾಳಿದ್ದೇನೆ. ಇಲ್ಲಿನ ಮೋಸ ವಂಚನೆ ಅನ್ಯಾಯಗಳನ್ನು ಸರಿ ಮಾಡಿ ಶಾಂತಿ ಸಹಕಾರದ ನೆಮ್ಮದಿಯ ಬದುಕನ್ನು ರೂಪಿಸುವ ಗುರಿ ಹೊಂದಿದ್ದೇನೆ. ಕೆಲವೇ ವರ್ಷಗಳಲ್ಲಿ ಇದು ಸಾಧ್ಯವಾಗುತ್ತದೆ ಎಂದು ಆತ ಭರವಸೆಯಿಂದ ಹೇಳಿದ.

ಇದು ಖಾಸಗಿ ಮಾತುಕತೆ. ಅಲ್ಲಿಂದ ನಾನು ಆತನನ್ನು ಮತ್ತೆಂದೂ ಭೇಟಿಯಾಗಲಿಲ್ಲ. ಬಹುಶಃ ಆತನಿಗೆ ಈಗ ನನ್ನ ಗುರುತು ಸಿಗದಿರಬಹುದು.ಈ ಕಳೆದ ವರ್ಷಗಳಲ್ಲಿ ನನ್ನ ಅನುಭವದಿಂದ ನನ್ನೊಳಗೆ ಬಹಳಷ್ಟು ವಿಚಾರಗಳು ಅಭಿಪ್ರಾಯಗಳು ಬದಲಾಗಿವೆ. ಆದರೆ ಈ ನೆನಪುಗಳನ್ನು ಅಂದಿನ ನನ್ನ ಮನೋಭಾವಕ್ಕೆ ತಕ್ಕಂತೆ ನಿರೂಪಿಸಿದ್ದೇನೆ.

ಯಾವುದೇ ಧರ್ಮದ ಯಾವುದೇ ದೇವಮಾನವರನ್ನು ಕಳ್ಳರು ಸುಳ್ಳರು ವಂಚಕರು ಕ್ರಿಮಿನಲ್ ಗಳು ಎಂದು ಒಂದು ವಾಕ್ಯದಲ್ಲಿ ವಿವರಿಸಬಾರದು ಅಥವಾ ನಿಜವಾಗಲೂ ಪವಾಡ ಪುರುಷರೆಂದು ಕುರುಡಾಗಿ ನಂಬಬಾರದು. ಹೇಗೆ ರಾಜಕಾರಣಿಗಳು, ನಟರು, ಧರ್ಮಾಧಿಕಾರಿಗಳು, ವ್ಯಾಪಾರಿಗಳು ಭವಿಷ್ಯಕಾರರು ಮುಂತಾದವರು ಈ ಸಮಾಜದ ಭಾಗವಾಗಿ ನಮ್ಮೊಳಗೇ ಇದ್ದು ನಮ್ಮನ್ನು ಭ್ರಮಾಲೋಕಕ್ಕೆ ಸೆಳೆದು ಅವರು ಪ್ರಖ್ಯಾತರು, ಕುಖ್ಯಾತರು, ಹಣವಂತರು, ಜನಪ್ರಿಯರು, ಅಧಿಕಾರಸ್ತರು ಆಗುತ್ತಾರೋ ಅದೇ ಪರೋಕ್ಷ ವಿಧಾನದಲ್ಲಿ ಈ ದೇವ ಮಾನವರು ಸಹ ನಮ್ಮ ಅಜ್ಞಾನದಿಂದ ಸೃಷ್ಠಿಯಾಗುತ್ತಾರೆ.

ಇವರನ್ನು ನೇರವಾಗಿ ಕಳ್ಳರು ಎನ್ನಲಾಗದು. ಒಂದೋ ತಮ್ಮೊಳಗಿರುವ ಯಾವುದೋ ಸಾಮರ್ಥ್ಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ ಅಥವಾ ಜನರ ಭಾವನೆ ನಂಬಿಕೆಗಳನ್ನು ಗುರುತಿಸಿ ಅದನ್ನು ಅವರಿಗೆ ತಕ್ಕಂತೆ ದುರುಪಯೋಗ ಪಡಿಸಿಕೊಳ್ಳುತ್ತಾರೆ.ಅದರಲ್ಲಿ ಕೆಲವರು ಅತಿ ಬುದ್ಧಿವಂತಿಕೆಯಿಂದ ದೇಶ ವಿದೇಶಗಳಲ್ಲಿ ತಮ್ಮ ಆಶ್ರಮವನ್ನು ಸ್ಥಾಪಿಸಿ ಹಣದ – ಭಕ್ತರ ಸಾಮ್ರಾಜ್ಯವನ್ನೇ ಕಟ್ಟುತ್ತಾರೆ. ಆ ಮುಖಾಂತರ ಮತ್ತಷ್ಟು ಬೆಳೆಯುತ್ತಾ ಹೋಗುತ್ತಾರೆ.

ಇಲ್ಲಿ ಯೋಚಿಸಬೇಕಾದ ಜವಾಬ್ದಾರಿ ನಮ್ಮದು. ಒಂದು ನಾಗರಿಕ ಸಮಾಜ ವೈಚಾರಿಕ ಚಿಂತನಾ ವಿಧಾನದ ಮೂಲಕ ನಿರ್ಮಾಣವಾದರೆ ಅದರ ಜ್ಞಾನ ಅಭಿವೃದ್ಧಿ ಕಡೆಗಿರುತ್ತದೆ ಮತ್ತು ಶಾಶ್ವತವಾಗಿರುತ್ತದೆ.
ಅದೇ ಸಮಾಜ ಭ್ರಮೆಗಳ ಭಯ ಭಕ್ತಿಯ ಮುಖಾಂತರ ರೂಪಗೊಂಡರೆ ಅದು ತಾತ್ಕಾಲಿಕ. ಯಾವುದೇ ಕ್ಷಣದಲ್ಲಿ ಕುಸಿಯಬಹುದು. ದೇವ ಮಾನವ ಕಲ್ಪನೆ ಒಂದು ಭ್ರಮೆ. ನಾವೆಲ್ಲರೂ ಕೇವಲ ಸಹಜ ಮಾನವರು ಮಾತ್ರ.

ಸುದ್ದಿದಿನ.ಕಾಂ|ವಾಟ್ಸಪ್|9980346243

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

Published

on

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.

ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending