ಬಹಿರಂಗ
ಹಿಂದೂ ಧರ್ಮದ ಪ್ರಗತಿಪರ ಮನಸ್ಸುಗಳ ಬೆಳವಣಿಗೆಯನ್ನು ಜಾತಿಮೀರಿ ಬೆಂಬಲಿಸೋಣ
- ರಘೋತ್ತಮ ಹೊ.ಬ
ಕನ್ನಯ್ಯಕುಮಾರನ ಭಾಷಣ ಮತ್ತು ಬೆಳವಣಿಗೆ ಬಗ್ಗೆ ಒಂದು ಸಣ್ಣ ಚರ್ಚೆ ನಡೆಯುತ್ತಿದೆ. ಮುಖ್ಯವಾಗಿ ಆತನ ಜಾತಿ ಭೂಮಿಹಾರ ಜಾತಿ ಬಗ್ಗೆ ಕೆಲವು ದಲಿತ ಯುವಕರು ಚರ್ಚೆ ನಡೆಸುತ್ತಿದ್ದಾರೆ. ಖಂಡಿತ, ಸದರಿ ಜಾತಿ ದೌರ್ಜನ್ಯ ಮಾಡಿರಬಹುದು. ಆದರೆ ಆ ಜಾತಿಯ ಎಲ್ಲಾ ಗುಣಗಳನ್ನು ಕನ್ನಯ್ಯರಂತಹವರಿಗೆ ಆರೋಪಿಸುವುದು ಥರವಲ್ಲ. ನಿಜ, ದಿ.ಗೌರಿ ಲಂಕೇಶ್ ರವರೊಡನೆ ಇಂತಹದ್ದೆ ಮಾದರಿಯ ಚರ್ಚೆಗಳಲ್ಲಿ ಹಿಂದೆ ನಾನೂ ಕೂಡ ಪಾಲ್ಗೊಂಡಿದ್ದೆ. ಆದರೆ ಬಾಬಾಸಾಹೇಬ್ ಅಂಬೇಡ್ಕರರ ಬರಹಗಳನ್ನು ಓದಿದ ನಂತರ ನನ್ನ ಆ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡೆ. ಯಾಕೆಂದರೆ ತಮ್ಮ ‘ರಾನಡೆ, ಗಾಂಧಿ, ಜಿನ್ನಾ’ ಎಂಬ ಕೃತಿಯಲ್ಲಿ ಅಂಬೇಡ್ಕರರು ಸಮಸ್ಯೆಗಳ ನಡುವೆಯೂ ಹಿಂದೂ ಧರ್ಮ ಬದುಕಲಿಕ್ಕೆ ಒಂದಷ್ಟು ಸಹನೀಯವಾಗಿದೆ ಎಂದರೆ ಅದಕ್ಕೆ ಎಂ.ಜಿ.ರಾನಡೆಯವರಂತಹ ಮನಸ್ಸುಗಳೇ ಕಾರಣ ಎನ್ನುತ್ತಾರೆ. ಆದ್ದರಿಂದ ಅಂಬೇಡ್ಕರರ ಈ ಅಭಿಪ್ರಾಯದ ಪ್ರಕಾರ ನಾವು ಪ್ರಗತಿಪರ, ಬುದ್ಧಿಜೀವಿ ಒಂದಷ್ಟು ವ್ಯಕ್ತಿಗಳ ಬೆಳವಣಿಗೆಯನ್ನು, ಚಿಂತನೆಗಳನ್ನು ಒಪ್ಪಿಕೊಳ್ಳಬೇಕಿದೆ.
ಯಾಕೆಂದರೆ ಕೋಮುವಾದದ ವಿಜೃಂಭಣೆಯ, ಅಸಮಾನತೆಯನ್ನೂ ಸಾಮರಸ್ಯದ ಹಿನ್ನೆಲೆಯಲ್ಲಿ ಸಮರ್ಥಿಸಿಕೊಳ್ಳುವಂತಹ ಇಂತಹ ಕೆಟ್ಟ ವಾತಾವರಣದಲ್ಲಿ ನಾವು ಸಮಾನತೆಯನ್ನು ಪ್ರತಿಪಾದಿಸುವ ಒಂದಷ್ಟು ಮನಸ್ಸುಗಳನ್ನು ದೇಶದ ಹಿತದೃಷ್ಟಿಯ ಹಿನ್ನೆಲೆಯಲ್ಲಿ ಬೆಂಬಲಿಸದೆಹೋದರೆ ಜನತೆ ತೊಂದರೆಗೆ ಸಿಲುಕಲಿದ್ದಾರೆ. ಹಾಗೆಯೇ ಭಾರತ ವೈವಿದ್ಯಮಯ ಜಾತಿ-ಪಂಥ- ವರ್ಗ-ಸಿದ್ಧಾಂತಗಳ ನಾಡು. ಈ ನಿಟ್ಟಿನಲ್ಲಿ ಇಲ್ಲಿ ಒಂದು ಜಾತಿಯ ಒಬ್ಬ ಪ್ರತಿಗಾಮಿಯಾದರೆ ಅದೇ ಜಾತಿಯ ಮತ್ತೊಬ್ಬ ಪ್ರಗತಿಪರ ಆಗಬಾರದು ಎಂಬ ನಿಯಮವೇನು ಇಲ್ಲ. ಯಾಕೆಂದರೆ ಚಿಂತನೆ ಅದು ವಯಕ್ತಿಕ. ವ್ಯಕ್ತಿ ವೈಭಿನ್ಯತೆಯನ್ನು ಅದು ಅವಲಂಬಿಸಿರುತ್ತದೆ, ಆತ ಕಲಿಯುವ ಓದುವ ಪುಸ್ತಕಗಳನ್ನು ಅವಲಂಬಿಸಿರುತ್ತದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿ ಸಂಬಂಧಿತ ಜಾತಿಯನ್ನು ಆತನ ವ್ಯಕ್ತಿತ್ವಕ್ಕೆ ಆರೋಪಿಸುವುದು ತಪ್ಪು. ಹೀಗೆ ಆರೋಪಿಸುವುದರ ಮೂಲಕ ನಾವೇ ಪ್ರತಿಗಾಮಿಗಳನ್ನು ಒಂದೆಡೆ ಹೆಚ್ಚಿಸುವ ಕ್ರಿಯೆಯಲ್ಲಿ ತೊಡಗಿದಂತಾಗುತ್ತದೆಯೇ ಹೊರತು ಇದರಿಂದ ಮತ್ತೇನು ಪ್ರಯೋಜನವಾಗದು.
ಹಾಗೆಯೇ ಬಾಬಾಸಾಹೇಬ್ ಅಂಬೇಡ್ಕರರ ಚಿಂತನೆಗಳನ್ನು ಅಷ್ಟೆ. ಒಂದು ದ್ವೀಪದ ರೀತಿ ನಾವು ಅದನ್ನು ಮಾಡಬಾರದು. ಏಕೆಂದರೆ ಬಾಬಾಸಾಹೇಬ್ ಅಂಬೇಡ್ಕರ್ ಅದು ಒಂದು ವ್ಯಕ್ತಿಯಲ್ಲ, ಅದೊಂದು ಮಾನವ ಪರ ಚಿಂತನೆ, ಜೀವಪರ ಬೋಧನೆ. ಎಲ್ಲಾ ಶೋಷಿತರ ವಿಮೋಚನೆಗೂ ಅದು ಮದ್ದಾಗಲಿದೆ. ಈ ನಿಟ್ಟಿನಲ್ಲಿ ಅದನ್ನು ಹೀಗೆಯೇ ಇರಬೇಕು, ಅದನ್ನು ದಲಿತರೇ ಅಥವಾ ಅವರ ಬೆಂಬಲದ ಒಂದು ಪಕ್ಷವೇ ಮಾತಾಡಬೇಕು ಇತರರು ಮಾತಾಡಬಾರದು ಎಂಬ ಹಟ ತಪ್ಪು. ಬದಲಿಗೆ ಮಾನವಪರ ಚಿಂತನೆಗಳನ್ನು ಎಲ್ಲರೂ ವಿಶೇಷವಾಗಿ ಪ್ರಗತಿಪರರು ಬಳಸಿಕೊಳ್ಳಲು, ಮಾತಾಡಲು ಮುಕ್ತ ಅವಕಾಶ ಹೊಂದಿದ್ದಾರೆ ಎಂಬುದನ್ನು ಅವರ ಅನುಯಾಯಿಗಳು ಅರಿಯಬೇಕು. ಆಗಷ್ಟೆ ಬಾಬಾಸಾಹೇಬ್ ಅಂಬೇಡ್ಕರರ ಚಿಂತನೆಗಳು ಜಾತಿ ಮೀರಿ ಬೆಳೆಯುತ್ತದೆ. ಹಾಗೆಯೇ ಪ್ರಗತಿಪರ ಮನಸ್ಸುಗಳು ಹೆಚ್ಚು ಹೆಚ್ಚು ಬೆಳೆಯಲಿವೆ ಭಾರತ ಜಾತಿ ಮುಕ್ತ ವಾತಾವರಣದಲ್ಲಿ ಮಿಂದು ಏಳಲಿದೆ.
ಈ ನಿಟ್ಟಿನಲ್ಲಿ ಕನ್ನಯ್ಯಕುಮಾರ್ ಇರಲಿ ಮತ್ಯಾರೇ ಇರಲಿ ಅವರು ಬಾಬಾಸಾಹೇಬ್ ಅಂಬೇಡ್ಕರರ ವಿಚಾರಗಳನ್ನು ಮಾತಾಡಿದರೆ ದಲಿತರು ಅವರನ್ನು ಬೆಂಬಲಿಸಲಿ. ಪ್ರಗತಿಪರ ಎಲ್ಲರನ್ನೂ ಅಂತಹ ಮನಸ್ಸುಗಳನ್ನೂ ಮಾತಾಡುವವರನ್ನು ಬರೆಯುವವರನ್ನು ದಲಿತರು ಬೆಂಬಲಿಸಲಿ. ಆ ಮೂಲಕ ಎಲ್ಲರಿಗೂ ಜಾತಿಮೀರಿ ವೈಚಾರಿಕ ಚಿಂತನೆಗಳನ್ನು ಮಾಡುವ ಹಕ್ಕು ಎಲ್ಲರಿಗೂ ಇದೆ ಎಂಬುದನ್ನು ಎಲ್ಲರೂ ವಿಶೇಷವಾಗಿ ಕೆಲ ದಲಿತ ಯುವಕರು ಅರಿಯಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243