ದಿನದ ಸುದ್ದಿ
‘ಕಾಶ್ಮೀರ ಸಮಸ್ಯೆ’ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದವರು ‘ಇಂದಿರಾಗಾಂಧಿ ಮತ್ತು ವಾಜಪೇಯಿ’..!
ನಿರಂತರವಾಗಿ ರಕ್ತ ಹರಿಯಲು ಕಾರಣವಾಗಿರುವ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದವರು ಇಬ್ಬರು ಪ್ರಧಾನಿಗಳು. ಮೊದಲನೆಯವರು ಇಂದಿರಾಗಾಂಧಿ, ಎರಡನೆಯವರು ಅಟಲಬಿಹಾರಿ ವಾಜಪೇಯಿ.
ಇಂದಿರಾಗಾಂಧಿ ಮತ್ತು ಝುಲ್ಪಿಕರ್ ಅಲಿ ಭುಟ್ಟೋ ನಡುವೆ ನಡೆದಿದ್ದ ಶಿಮ್ಲಾ ಮಾತುಕತೆ ಬಹುತೇಕ ಯಶಸ್ವಿಯಾಗಿತ್ತು. ಬಾಂಗ್ಲಾದೇಶಕ್ಕೆ ಮಾನ್ಯತೆ, ಮೂರನೆಯವರ (ಯುಎನ್) ಮಧ್ಯಪ್ರವೇಶಕ್ಕೆ ನಿರಾಕರಣೆ ಮತ್ತು ಯುದ್ಧ ವಿರಾಮದ ಗಡಿರೇಖೆಯನ್ನು ಎಲ್ ಓ ಸಿಯಾಗಿ ಪರಿವರ್ತಿಸಲು ಒಪ್ಪಿಗೆ.. ಹೀಗೆ ಬಹುತೇಕ ವಿಷಯಗಳನ್ನು ಭುಟ್ಟೋ ಒಪ್ಪಿಕೊಂಡಿದ್ದರು. ಆ ಸಂಬಂಧ ಮತ್ತೆ ಹದಗೆಟ್ಟಿದ್ದು ಕಾರ್ಗಿಲ್ ಯುದ್ಧದಿಂದಾಗಿ.
ಅದೇ ರೀತಿ ವಾಜಪೇಯಿ ಮತ್ತು ಪರ್ವೇಜ್ ಮುಷರಪ್ ಅವರ ನಡುವೆ ಆಗ್ರಾ ಶೃಂಗ ಸಭೆಯ ಕೊನೆಯಲ್ಲಿ ಇನ್ನೇನು ಪರಸ್ಪರ ಸಮ್ಮತಿಯ ಒಪ್ಪಂದಕ್ಕೆ ಸಹಿ ಬೀಳುತ್ತದೆ ಎನ್ನುವಾಗ ಮುರಿದು ಬಿತ್ತು. ಅದಕ್ಕೆ ಕಾರಣವಾಗಿದ್ದು ಆಗಿನ ಉಕ್ಕಿನ ಮನುಷ್ಯ ಅಡ್ವಾಣಿ -ಸುಷ್ಮಾ ಜೋಡಿ. ಈ ಎರಡನೇ ಘಟನೆಗೆ ಪತ್ರಕರ್ತನಾಗಿ ನಾನು ಕೂಡಾ ಸಾಕ್ಷಿ. ಆಗ್ರಾ ಶೃಂಗ ಸಭೆಯ ಪ್ರತ್ಯಕ್ಷ ವರದಿ ಮಾಡಲು ಅಲ್ಲಿಗೆ ಹೋಗಿದ್ದೆ.
ಅಟಲಬಿಹಾರಿ ವಾಜಪೇಯಿ ಅವರಿಗೆ ತನ್ನ ಸಂಪುಟದ ಸದಸ್ಯರ ಹೆಸರುಗಳೇ ಒಮ್ಮೊಮ್ಮೆ ನೆನಪಾಗದೆ ಇದ್ದರೂ ವಿದೇಶಾಂಗ ವ್ಯವಹಾರದ ಬಗ್ಗೆ ಅಗಾಧವಾದ ತಿಳುವಳಿಕೆ ಇತ್ತು. ಅವರ ಸಮೀಪವರ್ತಿಗಳ ಪ್ರಕಾರ ಏನಾದರೂ ಮಾಡಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆಯಬೇಕೆಂಬ ಆಸೆ ಇತ್ತಂತೆ ಅವರಿಗೆ. ಅಂತಹ 2001ರ ಜುಲೈ ನಲ್ಲಿ ನಡೆದ ಆಗ್ರಾ ಶೃಂಗ ಸಭೆಯ ಬಗ್ಗೆ ವಾಜಪೇಯಿ ಅವರಲ್ಲಿ ಅಂತಹದ್ದೊಂದು ನಿರೀಕ್ಷೆಯೂ ಇತ್ತು.
ಕಾರ್ಗಿಲ್ ಯುದ್ದದ ವೈರತ್ವವನ್ನು ಮನಸ್ಸಲ್ಲಿಟ್ಟುಕೊಳ್ಳದೆ ಅದೇ ಯುದ್ಧದ ಖಳನಾಯಕ ಪರ್ವೇಜ್ ಮುಷರಫ್ ಕಡೆ ಸ್ನೇಹದ ಹಸ್ತ ಚಾಚಿದ್ದ ವಾಜಪೇಯಿ ಆಗ್ರಾಕ್ಕೆ ಬಂದಿದ್ದರು. ಜುಲೈ 15ರ ಸಂಜೆ ಪತ್ನಿ ಜತೆ ತಾಜಮಹಲ್ ವೀಕ್ಷಿಸಿ ಬಂದಿದ್ದ ಸೈನಿಕ ಮುಷರಫ್ ಹರ್ಷಚಿತ್ತರಾಗಿದ್ದರು.
ಅದೇ ರಾತ್ರಿ ವಾಜಪೇಯಿ ಜತೆ ಮಾತುಕತೆಗೆ ಕೂತಿದ್ದಾಗ ಬಾಗಿಲಿನೆಡೆಯಿಂದ ‘’ಗುಪ್ತ ಹಸ್ತ’’ವೊಂದು ಒಳಚಾಚಿತ್ತು. ಆ ಕೈಯಲ್ಲಿ ಒಂದು ಚೀಟಿ ಇತ್ತು. ಅದನ್ನು ಕಳಿಸಿದವರು ಐಎಸ್ ಐ ಮಾಜಿ ಮುಖ್ಯಸ್ಥ ಹಮೀದ್ ಗುಲ್ ಅನುಯಾಯಿಯಾಗಿದ್ದ ವಿದೇಶಾಂಗ ವ್ಯವಹಾರ ಖಾತೆ ಸಚಿವ ಅಬ್ದುಲ್ ಸತ್ತಾರ್. ಆ ಚೀಟಿ ನೋಡಿದೊಡನೆ ಮುಷರಫ್ ಮುಖಗಂಟಿಕ್ಕಿದ್ದರಂತೆ.
ಆಗ್ರಾ ಶೃಂಗ ಸಭೆಯಲ್ಲಿ ‘’ಕಾಶ್ಮೀರ ವಿಷಯವೇ ಪ್ರಧಾನ’’ ಎಂದು ಪಾಕಿಸ್ತಾನ ಹಠ ಮಾಡಿ ಕೂತಿದ್ದರೆ ‘’ಉಳಿದೆಲ್ಲವುಗಳ ಜತೆ ಕಾಶ್ಮೀರ ವಿಷಯವೂ ಇರಲಿ’’ ಎನ್ನುವುದು ಭಾರತದ ವಾದವಾಗಿತ್ತು. ಮುಷರಫ್ ಇದನ್ನು ಒಪ್ಪಿಕೊಂಡಿದ್ದರಂತೆ. ಆದರೆ ಅಷ್ಟರಲ್ಲಿ ಆಗ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅನಿರೀಕ್ಷಿತವಾಗಿ ಪತ್ರಕರ್ತರ ಕೊಠಡಿಗೆ ಬಂದು ಆಫ್ ದಿ ರೆಕಾರ್ಡ್ ಮಾತನಾಡುತ್ತಾ ‘’ ಭಾರತ ಅಂದುಕೊಂಡಂತೆಯೇ ಎಲ್ಲ ನಡೆಯುತ್ತಿದೆ’’ ಎಂಬ ಸುದ್ದಿಯನ್ನು ತೂರಿಬಿಟ್ಟು ಹೊರಟುಹೋದರು. ಟಿವಿ ಚಾನೆಲ್ ಗಳಲ್ಲಿ ಸುದ್ದಿ ಬ್ರೇಕ್ ಆಯಿತು.
ಇದನ್ನು ನೋಡಿದೊಡನೆಯೆ ಪಾಕಿಸ್ತಾನದ ಐಎಸ್ ಐ ಪಡೆ ಕೆರಳಿ ಹೋಗಿತ್ತು. ಆಗಲೇ ಚೀಟಿ ರವಾನೆಯಾಗಿದ್ದು. ಅದರ ನಂತರ ಮುಷರಫ್ ಇನ್ನಷ್ಟು ಬಿಗಿಯಾಗಿ ಹೋದರು. ಕೊನೆಗೆ ತೇಪೆ ಹಚ್ಚುವ ರೀತಿಯಲ್ಲಿ ಆಗ್ರಾ ಘೋಷಣೆಗೆ ಸಹಿ ಹಾಕಿ ಸಂಪಾದಕರ ಸಭೆಯಲ್ಲಿ ಭಾರತದ ವಿರುದ್ಧ ಗುಡುಗಿ ಪಾಕಿಸ್ತಾನಕ್ಕೆ ಹಾರಿಹೋದರು.
ಸುಷ್ಮಾ ಸ್ವರಾಜ್ ಸ್ವಯಂ ಪ್ರೇರಣೆಯಿಂದ ಪತ್ರಕರ್ತರ ಕೊಠಡಿಗೆ ಖಂಡಿತ ಬಂದಿರಲಿಲ್ಲ, ಅವರಿಗೆ ಕೀ ಕೊಟ್ಟು ಕಲಿಸಿದವರು ಲಾಲ್ ಕೃಷ್ಣ ಅಡ್ವಾಣಿಯವರಂತೆ. ಅವರಿಗೆ ನಾಗಪುರದ ಕಡೆಯಿಂದ ಸಂದೇಶ ಬಂದಿರಬಹುದು. ಪರಿವಾರದಲ್ಲಿರುವ ಯಾರಿಗೂ ಪಾಕಿಸ್ತಾನದ ಜತೆ ಅಟಲಬಿಹಾರಿ ವಾಜಪೇಯಿ ಅವರು ಮಾತುಕತೆ ನಡೆಸುವುದು ಬೇಡವಾಗಿತ್ತು. ನಂತರದ ದಿನಗಳಲ್ಲಿ ವಾಜಪೇಯಿಯವರ ರಾಜಧರ್ಮ ಪಾಲನೆಯ ಆದೇಶ ಕೂಡಾ ಜಾರಿಯಾಗದಂತೆ ನೋಡಿಕೊಂಡವರು ಕೂಡಾ ಈಗಿನ ಮೂಕ ನಾಯಕ ಲಾಲ್ ಕೃಷ್ಣ ಅಡ್ವಾಣಿ.
-ದಿನೇಶ್ ಅಮಿನ್ ಮಟ್ಟು
ಸುದ್ದಿದಿನ.ಕಾಂ|ವಾಟ್ಸಾಪ್|9986715401