ನೆಲದನಿ
ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ಕವಲೇದುರ್ಗ
ತೀರ್ಥಹಳ್ಳಿ ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿದ ನೆಲ. ಇಲ್ಲಿನ ಪ್ರತಿಯೊಂದು ಸ್ಥಳವೂ ತನ್ನದೇ ಆದ ಐತಿಹಾಸಿಕ ಮತ್ತು ಪೌರಾಣಿಕ ಇತಿಹಾಸವನ್ನು ಹೊಂದಿದೆ. ಅವುಗಳಲ್ಲಿ ಕವಲೇದುರ್ಗಾ ಕೂಡಾ ಒಂದು. ಸಹ್ಯಾದ್ರಿ ಶ್ರೇಣಿಯ ಮಡಿಲಿನಲ್ಲಿ ಕಂಡು ಬರುವ ಈ ದುರ್ಗಾ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ನೈಸರ್ಗಿಕ ತಾಣ.
09ನೇ ಶತಮಾನದಲ್ಲಿ ನಿರ್ಮಾಣವಾದ ಈ ಕೋಟೆ ಕೆಳದಿ ಸಂಸ್ಥಾನದ ನಾಲ್ಕನೇಯ ಹಾಗೂ ಕೊನೆಯ ರಾಜಧಾನಿಯಾಗಿತ್ತು ಎಂದು ಹೇಳಲಾಗುತ್ತದೆ. ಕೆಳದಿ ಸಂಸ್ಥಾನದ ಅನೇಕ ಐತಿಹ್ಯ ಹಾಗೂ ಅಂದಿನ ವಾಸ್ತುಶಿಲ್ಪ, ಕಲೆ ಮತ್ತು ಸಂಸ್ಕೃತಿಗಳಿಗೆ ಈ ಕೋಟೆ ಇಂದೂ ಸಾಕ್ಷಿಯಾಗಿ ನಿಲ್ಲುತ್ತದೆ. ಪಶ್ಚಿಮ ಘಟ್ಟದ ಗಿರಿಕಂದರಗಳಿಂದ ಆವೃತವಾದ ಈ ಪ್ರದೇಶವನ್ನು ಕವಲೇದುರ್ಗ, ಕಪಿಲೇದುರ್ಗ, ಕಾವಲುದುರ್ಗ, ಭುವನಗಿರಿದುರ್ಗ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಕವಲೇದುರ್ಗಾ ಗಿರಿಪ್ರದೇಶ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಪಾಳೆಗಾರ ಸಹೋದರರ ಸ್ವಾದೀನದಲ್ಲಿತ್ತು. ಈ ಸಹೋದರರನ್ನು ಸೋಲಿಸಿದ ಮಲ್ಲವರು ಕವಲೇದುರ್ಗಾ ಕೋಟೆಯನ್ನು ವಶಕ್ಕೆ ಪಡೆದರು. ನಂತರ ಮಲ್ಲವ ಸಾಮ್ರಾಜ್ಯದ ವೆಂಕಟಪ್ಪ ನಾಯಕ ಇಲ್ಲಿ ಬೃಹತ್ ಕೋಟೆಯನ್ನು ನಿರ್ಮಾಣ ಮಾಡಿ ಭದ್ರ ಬುನಾದಿಯನ್ನು ಹಾಕಿದರು.
ನಂತರ ಶಿವಪ್ಪ ನಾಯಕ, ರಾಣಿ ಚನ್ನಮ್ಮ ಮತ್ತು ರಾಣಿ ವೀರಮ್ಮಾಜಿ ಆಳ್ವಿಕೆ ಮಾಡಿದರು. ಅಲ್ಲದೇ ಛತ್ರಪತಿ ಶಿವಾಜಿಯ ಮಗ ರಾಜಾರಾಮನಿಗೆ ಇಲ್ಲಿ ಆಶ್ರಯ ನೀಡಿದ್ದರು ಎಂದು ಇಲ್ಲಿನ ಇತಿಹಾಸ ಹೇಳುತ್ತದೆ. ಇದೇ ವಿಷಯವಾಗಿ ಮೊಘಲ್ ದೊರೆ ಔರಂಗಜೇಬನೋಂದಿಗೆ ಯುದ್ಧಮಾಡಿ ಗೆದ್ದ ಕೀರ್ತಿ ರಾಣಿ ಚೆನ್ನಾಮ್ಮಾಜಿಗೆ ಸಂದಿದೆ. 18ನೇ ಶತಮಾನದಲ್ಲಿ ಮೈಸೂರು ರಾಜ ಹೈದರಾಲಿ ಹಾಗೂ ಟಿಪ್ಪೂ ಸುಲ್ತಾನರ ದಾಳಿಗೆ ಕವಲೇದುರ್ಗಾ ತುತ್ತಾಯಿತು.
ಮೂರು ಸುತ್ತಿನ ಕೋಟೆ ಇದಾಗಿದ್ದು, ಪಡಸು ಕಲ್ಲುಗಳಿಂದ ಕೋಟೆಯನ್ನು ನಿರ್ಮಾಣ ಮಾಡಲಾಗಿದೆ. ಕೋಟೆಯ ಒಳಭಾಗದಲ್ಲಿ ಶ್ರೀ ಲಕ್ಷ್ಮೀನಾರಾಯಣ ದೇವಾಲಯವಿದೆ. ಅಲ್ಲದೇ ಬಯಲು ಬಸವ, ಗದಾತೀರ್ಥ ಶಿಖರೇಶ್ವರ ದೇವಾಲಯ, ತಿಮ್ಮಣ್ಣ ನಾಯಕ ಕೆರೆ, ಬಹು ಸುಂದರ ಕಲ್ಯಾಣ ಮಹಲ್, ಮಾರಿಕಾಂಬ ದೇವಾಲಯ, ಎಣ್ಣೆ ಮತ್ತು ತುಪ್ಪದ ಬಾವಿ, ಹಾಗೂ ಐತಿಹಾಸಿಕ ಕೋಟೆ ಮತ್ತು ಅರಮನೆ ಪ್ರವಾಸಿಗರ ಕಣ್ಗಳಿಗೆ ಹಬ್ಬವನ್ನುಂಟುಮಾಡುತ್ತವೆ.
ಕವಲೇದುರ್ಗಾ ಕೋಟೆಯು ಜಿಲ್ಲಾ ಕೇಂದ್ರದಿಂದ 80 ಕಿ.ಮೀ ಮತ್ತು ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಿಂದ 20 ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿಯಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಈ ಸ್ಥಳ ಸಿಗುತ್ತದೆ.
ಹೆಚ್ಚಿನ ಮಾಹಿತಿಗಾಗಿ
ಪರಾಮರ್ಶನ
ಸುದ್ದಿದಿನ.ಕಾಂ|ವಾಟ್ಸಾಪ್|9980346243