ರಾಜಕೀಯ

ದಾವಣಗೆರೆ ಮತದಾರ ಹೊಸ ಮುಖ ಬಯಸಿದ್ರೆ ‘ಹೊನ್ನಾಳಿ ಹೊಡೆತ’ ಗ್ಯಾರೆಂಟಿ.. !

Published

on

ಸುದ್ದಿದಿನ,ದಾವಣಗೆರೆ: ನಿರಂತರ ಮೂರು ಸೋಲು, ಮೂರು ಗೆಲುವಿಗೆ ವೇದಿಕೆಯಾದ ದಾವಣಗೆರೆ ಲೋಕಸಭಾ ಕ್ಷೇತ್ರ, ಇದೀಗ ಹೊಸ ಮುಖ ಬಯಸಿದರೆ ರಾಜ್ಯದ ಜನತೆಗೆ ‘ಹೊನ್ನಾಳಿ ಹೊಡೆತ’ ಇನ್ನಷ್ಟು ಮುನ್ನೆಲೆಗೆ ಬರುವ ಸಾಧ್ಯತೆ ಇದೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದು, ಇದೀಗ ನಾಲ್ಕನೇ ಬಾರಿಗೆ ಆಯ್ಕೆ ಬಯಸಿರುವ ಜಿಎಂ ಸಿದ್ದೇಶ್ವರ್ ಅವರಿಗೆ ಸಾಂಪ್ರದಾಯಿಕ ಎದುರಾಳಿ ಎಸ್ ಎಸ್ ಮಲ್ಲಿಕಾರ್ಜನ್ ಕಣದಲ್ಲಿ ಇಲ್ಲ. ಕಳೆದ ಮೂರು ಭಾರಿ ಆಯ್ಕೆಯಲ್ಲೂ ಅಲೆಗಳ ಮೇಲೆ ಗೆದ್ದವರು ಎನ್ನುವುದು ಜನಜನಿತ. ಒಮ್ಮೆ ತಂದೆಯ ಸಾವಿನ ಅನುಕಂಪದ ಅಲೆ, ಇನ್ನೊಮ್ಮೆ ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂಪ್ಪ ಅವರ ಅಲೆ ಹಾಗೂ ಮೂರನೇ ಬಾರಿ ಪ್ರಧಾನಿ ಮೋದಿಯವರ ಅಬ್ಬರದ ಅಲೆಯಲ್ಲಿ ಹ್ಯಾಟ್ರಿಕ್ ಮಾಡಿದರು. ಅಲ್ಲದೆ ಕೇಂದ್ರ ಸಚಿವರು ಆಗಿದ್ದರು. ಅಷ್ಟೇ ಬೇಗ ಸ್ಥಾನವನ್ನೂ ಕಳೆದುಕೊಂಡರು ಎನ್ನುವುದು ಈಗ ಇತಿಹಾಸ.‌ ಆದರೆ, ಇದೀಗ ನಾಲ್ಕನೇ ಬಾರಿಯೂ ಜನ ಕೈ ಹಿಡಿಯುವ ಸಾಧ್ಯತೆ ಕಡಿಮೆ ಎನ್ನುವ ಉದ್ದೇಶದಿಂದ ಹಳ್ಳಿ ಸುತ್ತಿದ್ದಾರೆ. ಅಬ್ಬರದ ಪ್ರಚಾರವೂ ಕೈಗೊಂಡಿದ್ದಾರೆ.

ಎಸ್. ಎಸ್. ಮಲ್ಲಿಕಾರ್ಜುನ್ ಕಣದಿಂದ ಹಿಂದಕ್ಕೆ

ಮೂರು ಬಾರಿ ಹ್ಯಾಟ್ರಿಕ್ ಸೋಲಿಂದ ಧೃತಿಗೆಡದೆ ಕೊನೆ ಪ್ರಯತ್ನಕ್ಕೆ ಮುಂದಾದ ಎಸ್ ಎಸ್ ಎಂ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ, ಅವರ ಆಪ್ತ ಎಚ್ ಬಿ ಮಂಜಪ್ಪ ಅವರನ್ನು ಕಣಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇತ್ತ ಸಿದ್ದೇಶ್ವರ್ ನನಗೆ ಪೈಪೋಟಿ ನೀಡುವ ಎದುರಾಳಿ ಇಲ್ಲ, ಎಸ್ ಎಸ್ ಎಂ ಎದುರಾಳಿಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಊರು ಸುತ್ತಿದ್ದು ನಷ್ಟವಾಯಿತು ಎನ್ನುವಂತ ಸ್ಥಿತಿಗೆ ಬಂದಿದ್ದು ಸುಳ್ಳಲ್ಲ.

ಹೊನ್ನಾಳಿ ಹೊಡೆತ ?

ಅತಿಯಾದ ಆತ್ಮವಿಶ್ವಾಸದಿಂದ ಒಂದು ಹಂತದಲ್ಲಿ ಸುತ್ತಾಟ ಕಡಿಮೆ ಮಾಡಿದ ಬಿಜೆಪಿ ಅಭ್ಯರ್ಥಿಗೆ ಎಚ್ ಬಿ ಮಂಜಪ್ಪ ಸುತ್ತಾಟ, ಅವರ ತಂತ್ರ, ಮೈತ್ರಿ ಧರ್ಮ, ಅಹಿಂದ ಸಂಘಟನೆ ರಾಜಕೀಯ ವಿಶ್ಲೇಷಕರು, ಇಂಟಲಿಜೆನ್ಸ್ ವರದಿಗಳು ಹೊನ್ನಾಳಿ ಹೊಡೆತದ ಸೂಚನೆ ನೀಡಿದ್ದು ಮತ್ತೆ ಪ್ರಚಾರ ಚುರುಕುಗೊಳಿಸುವಂತೆ ಮಾಡಿದೆ.

ಮಂಜಪ್ಪ ಕಡಿಮೆ ಅವಧಿಯಲ್ಲಿ ಜಿಲ್ಲಾದ್ಯಂತ ಪ್ರವಾಸ ಮಾಡುವುದನ್ನೆ ಸವಾಲಾಗಿ ಸ್ವೀಕರಿದ್ದಾರೆ. ಇನ್ನು ಟಿಕೆಟ್ ಘೋಷಣೆ ಆರಂಭದಿಂದಲೇ ಹಣ ಬಲದ ವಿರುದ್ಧ ಬಡವನ ಹೋರಾಟ, ಅಹಿಂದ, ಮೈತ್ರಿ ತಂತ್ರದಡಿ ಅಲ್ಪಸಂಖ್ಯಾತ, ಹಿಂದುಳಿದ ದಲಿತ ಸಮುದಾಯಗಳ ವಿಶ್ವಾಸಕ್ಕೆ ಪಡೆಯುವ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಹರಿಹರದಲ್ಲಿ ಮಾಜಿ ಶಾಸಕ ಎಚ್ ಎಸ್ ಶಿವಶಂಕರ್, ಹಾಲಿ ಶಾಸಕ ರಾಮಪ್ಪ ಒಂದೇ ವೇದಿಕೆಯಲ್ಲಿ ಸುತ್ತಾಡುತ್ತಿದ್ದಾರೆ. ಹರಪನಹಳ್ಳಿಯಲ್ಲಿ ಜೆಡಿಎಸ್ ಮುಖಂಡ ಕೊಟ್ರೇಶ್, ದಿ. ಎಂಪಿ ರವೀಂದ್ರ ಅಭಿಮಾನಿಗಳು, ಜಗಳೂರಲ್ಲಿ ಎಚ್ ಪಿ ರಾಜೇಶ್, ಮೈತ್ರಿ ಟೀಮ್, ಚನ್ನಗಿರಿಯಲ್ಲಿ ವದ್ದಿಗೆರೆ ರಮೇಶ್, ವಡ್ನಾಳ್ ರಾಜಣ್ಣ, ಮಯಕೊಂಡದಲ್ಲಿ ಬಸವಂತಪ್ಪ, ಹೊನ್ನಾಳಿಯಲ್ಲಿ ಶಾಂತನಗೌಡ್ರು ಹಾಗೂ ಮೈತ್ರಿ ಟೀಮ್ ಹಾಗೂ ಸ್ಥಳೀಯ ಎನ್ನುವ ತಂತ್ರ ಪ್ರಯೋಗ ಮಾಡಲಾಗುತ್ತಿದೆ. ಸಿದ್ದೇಶ್ವರ್ ಹೊರಗಿನವರು, ಮಂಜಪ್ಪ ಸ್ಥಳೀಯ ಎನ್ನುವ ವಿಷಯ ಮುನ್ನೆಲೆಗೆ ಬಂದಿದೆ. ಸಿದ್ದೇಶ್ವರ್ ಗೆ ೧೫ ವರ್ಷ ಅಧಿಕಾರ ಕೊಟ್ಟಿದ್ದೀರಿ. ಈ ಬಾರಿ ಸ್ಥಳೀಯ ಮಂಜಪ್ಪನಿಗೆ ಅವಕಾಶ ಮಾಡಿಕೊಡುವಂತೆ ಒತ್ತಿ ಒತ್ತಿ ಪ್ರಚಾರ ಮಾಡಲಾಗುತ್ತಿದೆ.

ಮಂಜಪ್ಪ ಸಹಿತ ಮೈತ್ರಿ ತಂಡ ತಾಲೂಕುವಾರು ಸುತ್ತಾಟ ಮಾಡುತ್ತಿದ್ದರೆ, ಇತ್ತ ಎಸ್ ಎಸ್ ಎಂ, ಎಸ್ಎಸ್ ದಾವಣಗೆರೆ ನಗರದಲ್ಲಿ ಆಯ್ದ ಗ್ರಾಮಗಳಲ್ಲೂ ರೋಡ್ ಶೋ ಮಾಡುತ್ತಿದ್ದಾರೆ. ಕಾರ್ಮಿಕ ಮುಖಂಡ ಎಚ್ ಕೆ ರಾಮಚಂದ್ರಪ್ಪ, ಜೆಡಿಎಸ್ ಗುಡ್ಡಪ್ಪ, ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಅಹಿಂದ ಮುಖಂಡರು ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರು ವಾರ್ಡವಾರು, ತಮ್ಮ ಭೂತ್ ಮಟ್ಟದಲ್ಲಿ ಸಕ್ರಿಯವಾಗಿರುವುದು ಎದುರಾಳಿ ನಿದ್ದೆ ಕೆಡಿಸುವಂತಾಗಿದೆ.

ಮತದಾರರೇ ಹಣ ಕೊಟ್ರು…!

ಮಂಜಪ್ಪ ಊರು ಸುತ್ತಲು ವಾಹನ ವ್ಯವಸ್ಥೆ, ಚುನಾವಣಾ ಖರ್ಚಿಗೆ ಮತದಾರರೇ ಹಣ ನೀಡುತ್ತಿರುವುದು ಇನ್ನೊಂದು ವಿಶೇಷವಾಗಿದ್ದು, ಬಿಜೆಪಿಯಲ್ಲಿ ಹಣದ ಕೊರತೆ ಇಲ್ಲ, ಆದರೆ, ದೂರವಿದ್ದ ನಾಯಕರು ಮುನ್ನೆಲೆಗೆ ಬಂದಿದ್ದಾರೆ. ಮಂಜಪ್ಪ ಅಭ್ಯರ್ಥಿ ಆದ ಕೂಡಲೇ ಅದೇ ಸಮಾಜ ಹಾಗೂ ಅಹಿಂದ ಮುಖಂಡರಾದ ಬಿ ಎಂ ಸತೀಶ್, ಜಯಪ್ರಕಾಶ್, ಲಿಂಗರಾಜ್, ಶಿವಕುಮಾರ್ ರಂಥ ಆನೇಕರು ಮುನ್ನೆಲೆಗೆ ಬರುತ್ತಿದ್ದಾರೆ. ಒಟ್ಟಾರೆ ಏಕಮುಖವಾದ ಕಣ ಇದೀಗ ನೇರ ಹಣಾಹಣಿಯಾಗಿದೆ. ಬಿಜೆಪಿ, ಕಾಂಗ್ರೆಸ್ ಯಾರೇ ಗೆದ್ದರೂ ಅಲ್ಪ ಅಂತರವಷ್ಟೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version