ದಿನದ ಸುದ್ದಿ

ಡಾ. ಚಿದಾನಂದ ಮೂರ್ತಿ ಅವರಿಗೆ ಅಂತಿಮ ನಮನಗಳು

Published

on

  • ಡಾ. ಪುರುಷೋತ್ತಮ ಬಿಳಿಮಲೆ

ಸ್ವಾತಂತ್ರ್ಯೋತ್ತರ ಕಾಲದ ಕನ್ನಡ ಸಂಶೋಧನೆಗೆ ಭದ್ರವಾದ ತಳಹದಿ ಹಾಕಿಕೊಟ್ಟವರಲ್ಲಿ ಡಾ. ಚಿದಾನಂದ ಮೂರ್ತಿಯವರು (1931 – 2020) ಕೂಡಾ ಒಬ್ಬರು. ಪಾಶ್ಚಾತ್ಯ ವಿದ್ವಾಂಸರು ಮಾಡಿದ ಕೆಲಸಗಳು ಸಂಶೋಧನೆಯ ಮೂಲ ಆಕರಗಳಾಗಿ ಸಹಕರಿಸುತ್ತಲಿರುವ ಸಂದರ್ಭದಲ್ಲಿ ಅವರು ನಿಘಂಟು ಶಾಸ್ತ್ರ, ಶಾಸನ ಶಾಸ್ತ್ರ, ಹಸ್ತ ಪ್ರತಿ ಸಂಪಾದನೆ, ಗ್ರಂಥ ಸಂಪಾದನೆ, ಸಂಸ್ಕೃತಿ ಸಂಶೋಧನೆ ಮತ್ತು ಜಾನಪದ ಕೆಲಸಗಳ ಮೂಲಕ ಕನ್ನಡ ಸಂಶೋಧನೆಯ ವಸ್ತು ಮತ್ತು ವಿಧಾನಗಳನ್ನು ಪುನಾರೂಪಿಸಿದರು.

ತೀ. ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ1964 ರಲ್ಲಿ ಅವರು ಪಿಎಚ್.ಡಿ ಪದವಿಗಾಗಿ ಸಿದ್ಧ ಪಡಿಸಿದ್ದ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಕೃತಿಯು ನಮಗೆಲ್ಲಾ ಪ್ರೇರಣೆ ನೀಡಿದ ಅತ್ಯುತ್ತಮ ಸಂಶೋಧನಾ ಗ್ರಂಥ. ಉಳಿದಂತೆ, ಅವರು ಬರೆದ ಭಾಷಾ ವಿಜ್ಞಾನದ ಮೂಲತತ್ವಗಳು, ವಾಗಾರ್ಥ, ಸಂಶೋಧನ ತರಂಗ ಒಂದು ಮತ್ತು ಎರಡು, ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪ್ರಶ್ಯತೆ, ಹೊಸತು ಹೊಸತು, ಶೂನ್ಯ ಸಂಪಾದನೆಯನ್ನು ಕುರಿತು, ವಚನ ಸಾಹಿತ್ಯ, ಗ್ರಾಮೀಣ, ಪಗರಣ ಮತ್ತು ಇತರ ಸಂಪ್ರಯದಾಯಗಳು ಕೃತಿಗಳನ್ನು ನಾನು ಇವತ್ತಿಗೂ ಆಗಾಗ ಪರಿಶೀಲಿಸುತ್ತಿರುತ್ತೇನೆ.

1988ರಲ್ಲಿ ಅವರು ‘ಕನ್ನಡ ಶಕ್ತಿಕೇಂದ್ರವನ್ನು’ ಸ್ಥಾಪಿಸಿದ ಮೇಲೆ ಅವರ ಸಂಶೋಧನೆಯ ಪ್ರಖರತೆ ಕಳೆಗುಂದಿತು. ಆದರೆ ಕಾಲ್ನಡಿಗೆಯ ಮೂಲಕ ಬೆಂಗಳೂರಿನಿಂದ ಹಂಪಿಗೆ ಪ್ರಯಾಣ ಮಾಡಿ, ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣರಾದರು. ಟಿಪ್ಪುವಿನ ವಿಷಯದಲ್ಲಂತೂ ಪೂರ್ಣ ಕೋಮುವಾದಿಯಾದರು. ನಾವೆಲ್ಲ ಚಿದಾನಂದಮುರ್ತೀ ಅವರ ಪುಸ್ತಕಗಳನ್ನು ಕೈಯಲ್ಲಿ ಹಿಡಿದುಕೊಂಡೇ ಕಲಬುರ್ಗಿ ಅವರ ಕಡೆಗೆ ವಾಲಿಕೊಂಡೆವು.

ನಾನು ಕನ್ನಡ ವಿವಿಯಲ್ಲಿದ್ದಾಗ ಅವರೊಮ್ಮೆ ಕನ್ನಡದ ಉಳಿವಿಗಾಗಿ ತುಂಗಾಭದ್ರ ನದಿಗೆ ಹಾರಿದ್ದರು. ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಅವರನ್ನು ಯಾರೋ ಮೇಲೆತ್ತಿ ಹಾಕಿದರು. ನಡು ರಾತ್ರಿ ನಾನು ಮತ್ತು ಕೆ ವಿ ನಾರಾಯಣ ಅವರನ್ನು ಹೊಸಪೇಟೆಗೆ ತಂದು ಆರೈಕೆ ಮಾಡಿದೆವು.

ಈಚಿಗೆ ಅವರಿಗೆ ರಾಷ್ಟ್ರಪತಿಗಳ ಪ್ರಶಸ್ತಿ ಬಂದಿತ್ತು. ‘ ಬಿಳಿಮಲೆ, ನೀವು ಅಲ್ಲಿದ್ದೀರಲ್ವಾ? ಬರ್ತೇನೆ’ ಎಂದಿದ್ದರು. ಎರಡು ದಿನ ಅವರ ಜೊತೆ ಇದ್ದೆ. ಅದಕ್ಕೂ ಹಿಂದೆ ಒಮ್ಮೆ ಬಂದಿದ್ದಾಗ, ಕೆಳದಿ ನೃಪ ವಿಜಯದಲ್ಲಿ ಉಲ್ಲೇಖಿತವಾಗಿದ್ದ ಚಾವಲ್ ಮಂಡಿಯನ್ನು ಅವರು ದೆಹಲಿಯ ಕೆಂಪು ಕೋಟೆಯ ಬಳಿ ಪತ್ತೆ ಹಚ್ಚಿದ್ದರು. ನಾನು ಸಿದ್ಧವೇಶದ ಬಗ್ಗೆ ಮತ್ತು ಕುಮಾರರಾಮನ ಬಗ್ಗೆ ಬರೆದ ಲೇಖನಗಳನ್ನು ಅವರು ಬಹಳ ಮೆಚ್ಚಿಕೊಂಡಿದ್ದರು.

ಡಿ ಎಲ್ ನರಸಿಂಹಾಚಾರ್, ಆರ್ ನರಸಿಂಹಾಚಾರ್, ಕೆ ಬಿ ಪಾಠಕ್, ಪಿ ಬಿ ದೇಸಾಯಿ, ಕೆ ಜಿ ಕುಂದಣಗಾರ, ಟಿ ಎಸ್ ವೆಂಕಣಯ್ಯ, ಮಂಜೇಶ್ವರ ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಷ್ಣ ಭಟ್, ಎಲ್ ಬಸವರಾಜು, ಶಂಭಾ ಜೋಷಿ, ಫ ಗು ಹಳಕಟ್ಟಿ, ಚನ್ನಪ್ಪ ಉತ್ತಂಗಿ ಮೊದಲಾದವರಿಂದ ಪ್ರೇರಣೆ ಪಡೆದು, ಕನ್ನಡಕ್ಕೆ ಮಹತ್ವದ ಕೊಡುಗೆ ನೀಡಿದ ಚಿದಾನಂದ ಮೂರ್ತಿ ಅವರು ನನ್ನ ಕಾಲದ ಅತ್ಯುತ್ತಮ ಸಂಶೋಧಕರಲ್ಲಿ ಒಬ್ಬರು. ಅವರಿಗೆ ನಮನಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version