ದಿನದ ಸುದ್ದಿ

ಇವರ ವಿವೇಕವಿಲ್ಲದ ವಿದ್ಯೆಗೆ ಬೆಂಕಿ ಬಿತ್ತು….‌ಛೇ !

Published

on

  • ಹಿರಿಯೂರು ಪ್ರಕಾಶ್

ವಿದ್ಯೆಗೂ ವಿವೇಕಕ್ಕೂ ಸಂಬಂಧವಿಲ್ಲವೆನ್ನುವುದು ಆಗಾಗ್ಗೆ ಸಾಬೀತಾಗುತ್ತಲೇ ಬಂದಿದೆ. ಅತ್ಯುನ್ನತ ಶ್ರೇಣಿಯಲ್ಲಿ ಡಿಗ್ರಿಗಳನ್ನು ಪಡೆದು ವಿದ್ಯಾವಂತರಾದರಷ್ಟೇ ಸಾಲದು , ಅದಕ್ಕೆ ಪೂರಕವಾದ ಕಾಮನ್ ಸೆನ್ಸ್ ಹಾಗೂ ಸ್ವಲ್ಪಮಟ್ಟಿಗೆ ವಿವೇಕವನ್ನೂ ಬೆಳೆಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ಡಿಗ್ರಿ ಸರ್ಟಿಫಿಕೇಟ್ ಒಂಥರಾ ವೇಸ್ಟ್ ಪೇಪರ್ ಇದ್ದಂತೆ ಕಸದ ಬುಟ್ಟಿಗೂ ಅನ್ ಫ಼ಿಟ್ !

ಈ ವಿಷಯ ಈಗ್ಯಾಕೆ ಬಂತು ಅಂತೀರಾ..??

ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಇಬ್ಬರು ಸುಶಿಕ್ಷಿತ ಭೋಧಕ ದಂಪತಿಗಳು ಪರಾಕಾಷ್ಠೆಯ ಮೂಢನಂಬಿಕೆಗೆ ಮರುಳಾಗಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನವೇ ವಯಸ್ಸಿಗೆ ಬಂದ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭೀಭತ್ಸ ಘಟನೆಯನ್ನು ನೋಡಿದಾಗ ನಾನು ಮೇಲೆ ಉಲ್ಲೇಖಿಸಿರುವ ಮಾತುಗಳ ಸತ್ಯಾಸತ್ಯತೆ ತಿಳಿಯುತ್ತದೆ.

ಎಂತಹಾ ಪರಮ ನೀಚರು ಈ ಜನ ! ತಂದೆಯಾದ ಪುರುಷೋತ್ತಮ್ ನಾಯ್ಡು ಮದನಪಲ್ಲಿಯ ಮಹಿಳಾ ಪದವಿ ಕಾಲೇಜಿನಲ್ಲಿ ಪ್ರೊಫೆಸರ್ ಹಾಗೆಯೇ ತಾಯಿಯಾದ ಪದ್ಮಜಾ ಸಹಾ ಗಣಿತದಲ್ಲಿ ಗೋಲ್ಡ್ ಮೆಡಲ್ ಪಡೆದ ಶಿಕ್ಷಕಿ ಹಾಗೂ ವೈಸ್ ಪ್ರಿನ್ಸಿಪಾಲ್ ಅಂತೆ. ಈ ನರಾಧಮರ ನೀಚ ಕೃತ್ಯಕ್ಕೆ ಕಾರಣವೆಂದರೆ, ಮೊನ್ನೆ‌ ಭಾನುವಾರದಂದು ಕಲಿಯುಗ ಅಂತ್ಯವಾಗಿ ಮಾರನೆಯ ದಿನವೇ ಸತ್ಯಯುಗ ಆರಂಭವಾಗಿ ಆ ದಿನವೇ ತಮ್ಮ ಮಕ್ಕಳು‌ ಮರುಹುಟ್ಟು ಪಡೆಯಲಿದ್ದಾರೆಂದು ಯಾವನೋ ನಫ಼್ತಟಾಲ್ ನಾಲಾಯಕ್ ನನ್ಮಗ ಹೇಳಿದ್ದ ಮೂಢನಂಬಿಕೆಯ ಭವಿಷ್ಯವನ್ನು ನಂಬಿದ ಈ ಅಯೋಗ್ಯ ಪೇರೆಂಟ್ಸ್ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಮನೆಯ ದೇವರಕೋಣೆಯಲ್ಲಿ ವಿವಸ್ತ್ರಗೊಳಿಸಿ ತ್ರಿಶೂಲದಿಂದ ಹಾಗೂ ಡಂಬಲ್ಸ್‌ನಿಂದ ಕೊಚ್ಚಿ ಕೊಂದಿದ್ದಾರೆಂದು ಆನಂತರ ಶವಗಳ ಮುಂದೆ ಅವರ ತಾಯಿ ನರ್ತಿಸಿದ್ದಾರೆಂದೂ ವರದಿಯಾಗಿದೆ. ಇಷ್ಟಾದ ಮೇಲೂ ಕಿಂಚಿತ್ತೂ ಪಾಪ ಪ್ರಜ್ಞೆ ಯಿರದ ಈ ಪಾಪಿಗಳು ಪೋಲೀಸರ ಮುಂದೆಯೂ ತಮ್ಮ ಮಕ್ಕಳಿಬ್ಬರೂ ಮರುಹುಟ್ಟು ಪಡೆದು ಬರುತ್ತಾರೆಂದು ಹೇಳಬೇಕಾದರೆ ಹಾಗೂ ಪೋಲೀಸರು ಇನ್ನರ್ಧ ಘಂಟೆ ತಡವಾಗಿ ಬಂದಿದ್ದರೆ ಮಕ್ಕಳು ಬದುಕಿಬರುತ್ತಿದ್ದರೆಂದೂ ತಾನು ಶಿವನ ಅವತಾರವೆಂದೂ ಬಡಬಡಿಸಬೇಕಾದಲ್ಲಿ ಇವರು ಇನ್ನೆಂತಹಾ ಮೂಢನಂಬಿಕೆಯ ಜಗ ಭಂಡರಿರಬಹುದು ?? ಎಲ್ಲಕ್ಕಿಂತ ವಿಪರ್ಯಾಸವೆಂದರೆ ತಂದೆಯಾದವನು ವಿಜ್ಞಾನದ ವಿಷಯ ಭೋದಿಸುವವನಾದರೆ ತಾಯಿ ಗಣಿತದ ಶಿಕ್ಷಕಿ !ಈ ದಂಪತಿಗಳು ಅಲ್ಲಿನ ಆಧ್ಯಾತ್ಮಿಕ ಗುರು ಮೆಹರ್ ಬಾಬಾನ‌ ‘ಅನುನಾಯಿ”ಗಳಂತೆ !

ಈ ಘೋರ ಕೃತ್ಯಕ್ಕೆ ಬಲಿಯಾದ ಅಮಾಯಕ ಹೆಣ್ಣುಮಕ್ಕಳಾದ ಅಲೆಖ್ಯಾ ಹಾಗೂ ಸಾಯಿ ದಿವ್ಯಾ ಉದ್ಯೋಗ ನಿಮಿತ್ತ ಬೇರೆ ಊರುಗಳಲ್ಲಿದ್ದರೂ ಲಾಕ್ ಡೌನ್ ಕಾರಣದಿಂದ ತಂದೆ ತಾಯಿ ಜೊತೆಯಲ್ಲಿ ಇರಬೇಕಾಗಿದ್ದೇ ಮುಂದೆ ಅವರ ಹೀನಾಯ ಸಾವಿಗೆ ಕಾರಣವಾಗಬಹುದೆಂಬ ಅರಿವು ಅವರಿಗೆ ಇರಲಿಲ್ಲ ! ಈ ಜನ್ಮದಲ್ಲೇ ಅವರನ್ನು ಸುಖವಾಗಿರಿಸುವಂತಹಾ ಹೊಟ್ಟೆಗೆ ಅನ್ನ ತಿನ್ನುವವರು ಮಾಡುವ ಸಹಜ ಯೋಚನೆ‌ ಬಿಟ್ಟು, ಇಲ್ಲದ ಸತ್ಯಯುಗದ ಹಿಂದೆ ಬಿದ್ದು ಇಂತಹಾ ಬರ್ಬರ ಕೃತ್ಯವೆಸಗಿರುವ ಈ ನರರಕ್ಕಸರ ತಲೆಯೊಳಗೆ ಅವನ್ಯಾವನೋ ಬೇಕೂಫ಼ಾ ಇನ್ನೆಂತಹಾ ನಂಬಿಕೆಯ ವಿಷ ತುಂಬಿದ್ದಿರಬಹುದು..??

ಈಗ ಹೇಳಿ ! ಕಲಿಯುಗದಲ್ಲಿ ಇಂತಹಾ ಘನಕಾರ್ಯ ಮಾಡಿದ ವಿದ್ಯಾವಂತ ದಂಪತಿಗಳನ್ನು ಯಾವ ವರ್ಗಕ್ಕೆ ಸೇರಿಸುತ್ತೀರಿ ?? ಇವರಂತಹಾ ಅವಿವೇಕಿಗಳು, ಮೂಢರು, ದುಷ್ಟರು, ಅಯೋಗ್ಯರು, ಕ್ರೂರಿಗಳು, ನಿಷ್ಕರುಣಿಗಳು, ಪಾಪಿಗಳು, ಸ್ವಾರ್ಥಿಗಳು, ಎಜುಕೇಟೆಡ್ ಫ಼ೂಲ್ ಗಳು, ಪರಮ ಪಾಪಿಷ್ಠರು…. ಮತ್ತಾರಾದರೂ ಇದ್ದಾರೆಯೇ ?? ತಾವೇ ಜನ್ಮಕೊಟ್ಟು ಸಾಕಿ ಬೆಳೆಸಿದ ಮಕ್ಕಳನ್ನು, ಅದರಲ್ಲೂ ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಈ ರೀತಿ ಮೂಢನಂಬಿಕೆಗೆ‌ ಬಲಿಯಾಗಿ ಅಮಾನವೀಯವಾಗಿ ಬಲಿ ತೆಗೆದುಕೊಂಡಿರುವ ಘಟನೆಯನ್ನು ಹಿಂದೆ ಎಂದಾದರೂ ಕೇಳಿದ್ದೀರಾ… ನೋಡಿದ್ದಿರಾ..! ಇದು ನನಗೆ ತಿಳಿದಂತೆ ‌ಇಡೀ ನಾಡಿನಲ್ಲೇ ಅಪರೂಪದಲ್ಲಿ ಅಪರೂಪದ್ದು !

ಇವರ ಮನೆ ಕಾಯ್ ಹೋಗ ! ಕಲಿಯುಗ ಮುಗಿದು‌ ಮತ್ತೇ ಸತ್ಯಯುಗದಲ್ಲಿ ಅದೇ ಮಕ್ಕಳು‌ ಹುಟ್ಟುತ್ತಾರೆಂಬ ಇವರ ಕ್ಷುದ್ರ ನಂಬಿಕೆಯೇ ಅತ್ಯಂತ ಡೆಂಜರಸ್ ! ಹೇಳುವ ಮುಂಡೆಗಂಡರಿಗಂತೂ ಮೂರುಕಾಸಿನ ಬುದ್ದಿ ಇಲ್ಲ. ಕಾಸಿಗಾಗಿ ಏನೆಲ್ಲಾ ಕಥೆ ಹೇಳುತ್ತಾರೆ. ಆದರೆ ಕಾಲೇಜಿನಲ್ಲಿ‌ ಪಾಠ ಮಾಡುವ, ಅದರಲ್ಲೂ ವಿಜ್ಞಾನ ಭೋಧಿಸುವ , ಅತ್ಯಂತ ಸುಶಿಕ್ಷಿತ ವರ್ಗಕ್ಕೆ ಸೇರಿದ ದಂಪತಿಗಳು ಇಂತಹವರ ಮಾತುಗಳನ್ನು ಕೇಳಿ ಈ ರೀತಿಯ ಭೀಭತ್ಸ ಕೃತ್ಯಕ್ಕೆ ಕೈ ಹಾಕುತ್ತಾರೆಂದರೆ ಅದಕ್ಕಿಂತ ದುರಂತ ಮತ್ತೊಂದಿದೆಯೇ ? ಅಲ್ಲಿಗೆ ಕಲಿತ ವಿದ್ಯೆಗೂ ತಲೆಯೊಳಗಿರಬೇಕಾದ ಕನಿಷ್ಠ ವಿವೇಕಕ್ಕೂ ಸಂಬಂಧವೇ ಇಲ್ಲದಂತಾಯಿತು !

ಮರೆಯುವ ಮುನ್ನ 

ಮನುಷ್ಯ ಏನೆಲ್ಲಾ ಓದಿರಬಹುದು, ಎಷ್ಟೆಷ್ಟು ಡಿಗ್ರಿಗಳನ್ನು ಮೈಗೆಲ್ಲಾ ಮೆತ್ತಿಕೊಂಡಿರಬಹುದು, ಆಕಾಶದಲ್ಲೇ ಸದಾ ಹಾರಾಡುತ್ತಿರಬಹುದು, ಕರಗದಷ್ಟು ಆಸ್ತಿಯನ್ನೇ ಸಂಪಾದಿಸಿರಬಹುದು ಆದರೆ ಮನುಷ್ಯ ಅಂದಮೇಲೆ ಇರಲೇಬೇಕಾದ ಕಾಮನ್ ಮಿನಿಮಮ್ ಕಾಮನ್ ಸೆನ್ಸ್ ಅವನಲ್ಲಿ ಇಲ್ಲವೆಂದಮೇಲೆ ಅವನ ಓದಿಗೆ ವಿದ್ಯೆಗೆ ಬೆಂಕಿ‌ಬಿತ್ತು ! ಹೆತ್ತಮಕ್ಕಳನ್ನೇ ಈ ಲೆವೆಲ್ ನಲ್ಲಿ ಭಯಂಕರವಾಗಿ ಕೊಲೆ ಮಾಡುವ ಮನಸ್ಥಿತಿಯಿರುವವರು ತಮ್ಮ ವಿಧ್ಯಾರ್ಥಿಗಳಿಗೆ ಯಾವ ನೈತಿಕತೆಯ ಪಾಠವನ್ನು ಹೇಳಿಕೊಡಬಲ್ಲರು.? ಓದಿದ ಓದಿಗೂ, ಕಲಿತ ವಿದ್ಯೆಗೂ, ಮಾಡುವ ವೃತ್ತಿಗೂ ಈಗ ಅವರು ಎಸಗಿರುವ ಹೀನ ಕೃತ್ಯಕ್ಕೂ ಏನಾದರೂ ತಾಳೆ ಇದೆಯೇ ? ಇಂತಹಾ ಘಟನೆಗಳನ್ನೆಲ್ಲಾ ನೋಡಿದಾಗ ಮನುಷ್ಯನಷ್ಟು ವಿಷಕಾರಿ ಅಪಾಯಕಾರಿ ಜಂತು ಈ ಭೂಮಿಯಲ್ಲೇ ಇಲ್ಲವೇನೋ ಅನಿಸುತ್ತದೆ.

ಇಂತಹಾ ವಿಕ್ಷಿಪ್ತ ಮನಸ್ಥಿತಿಗೆ ಏನು ಕಾರಣವೋ ಗೊತ್ತಿಲ್ಲ. ಆದರೆ ಯಾವ್ಯಾವುದೋ ಹೆಸರಿನಲ್ಲಿ ಹುದುಗಿರುವ ಅತಿಯಾದ ಮೂಢನಂಬಿಕೆ , ಭ್ರಮಾತ್ಮಕ ಲೋಕ, ಮಾನವೀಯ ಮೌಲ್ಯಗಳ ಬೆಲೆಯರಿಯದ ಬದುಕು,
ಸ್ವಯಂಘೋಷಿತ ದೇವಮಾನವರು, ಬಾಬಾಗಳು , ಮಾಟ ಮಂತ್ರ ಮಾಡುವವರ ಮೇಲಿನ ಕುರುಡು ನಂಬಿಕೆ ಹಾಗೂ ಅಂತಹವರು ಹೇಳಿದ್ದೇ ವೇದವಾಕ್ಯವೆಂದು ನಂಬುವ ಅಜ್ಞಾನ…. ಈ ಎಲ್ಲವೂ ಕೆಲಮಟ್ಟಿಗೆ ಕಾರಣವಿರಲೂಬಹುದು..!

ಏನಾದರೂ ಇರಲಿ ! ಹೆತ್ತವರಿಂದಲೇ ಬರ್ಬರವಾಗಿ ಹತ್ಯೆಗೊಳಗಾಗಿ ನೆತ್ತರ ಮಡುವಲ್ಲಿ ಕೊನೆಯುಸಿರೆಳೆದ ಆ ಅಮಾಯಕ ಹೆಣ್ಣುಮಕ್ಕಳ ಆತ್ಮಕ್ಕೆ ಶಾಂತಿ ಕೋರುವುದು ಹಾಗೂ ಇಂತಹಾ ದುರ್ಘಟನೆಗಳು ಮತ್ತೇ ನೆಡೆಯದಿರಲಿ ಎಂದು ಪ್ರಾರ್ಥಿಸುವುದೊಂದೇ ಉಳಿದಿರುವ ದಾರಿ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version