ದಿನದ ಸುದ್ದಿ
ಶರಣ ತತ್ವ ಬೋಧಿಸುವ ಶ್ರೀ ಮುರುಘಾ ಶರಣರಿಂದ ದುಂದು ವೆಚ್ಚ: ಹೀಗೊಂದು ಜಿಜ್ಞಾಸೆ
ಸುದ್ದಿದಿನ, ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ದಸರಾ ಆರಂಭದಲ್ಲಿ ಶ್ರೀ ಮುರುಘಾ ಮಠದಿಂದ ಅದ್ದೂರಿ ಶರಣ ಸಂಸ್ಕೃತಿ ಉತ್ಸವ ನಡೆಯುತ್ತದೆ. ಈ ವೇಳೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಿಸಿಕೊಳ್ಳುವ ಕ್ರಮ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬಸವಾದಿ ಶರಣರ ಆಶಯವನ್ನು ಇಂದಿನ ತಲೆಮಾರಿನ ಜನರಿಗೆ ಮುಟ್ಟಿಸುವುದು ಶರಣ ಸಂಸ್ಕೃತಿ ಉತ್ಸವದ ಉದ್ದೇಶವೆಂದು ಹೇಳಲಾಗುತ್ತಿದೆ. ಆದರೆ ಶರಣ ತತ್ವ ಬೋಧಿಸುವ ಶ್ರೀ ಮುರುಘಾ ಶರಣರು ಅನಗತ್ಯ ದುಂದು ವೆಚ್ಚ ಮಾಡುತ್ತಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿವೆ.
ನಾಗರ ಪಂಚಮಿ ದಿನ ಕಲ್ಲು ನಾಗರ ಹಾವಿಗೆ ಹಾಲು ಅರ್ಪಿಸಿ ವ್ಯರ್ಥ ಮಾಡುವ ಬದಲು ಮಕ್ಕಳಿಗೆ ಹಾಲು ಕೊಡಿ ಎಂದು ಜಾಗೃತಿ ಮೂಡಿಸುವ ಶ್ರೀ ಶಿವಮೂರ್ತಿ ಮುರುಘಾ ಶರಣರು ಉತ್ಸವದ ವೇಳೆ ಮಾತ್ರ ಹೂ ಮಳೆ ಹರಿಸಿಕೊಳ್ಳುತ್ತಾರೆ. ಆ ಮೂಲಕ ನುಡಿದಂತೆ ನಡೆ ಎಂದು ಬಸವಾದಿ ಶರಣರ ವಚನವನ್ನು ಮೀರುತ್ತಾರೆ.
ಕಾಯಕ, ದಾಸೋಹದ ಪರಂಪರೆಯನ್ನು ಮುಂದಿನ ತಲೆಮಾರಿನ ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿರುವ ಮುರುಘಾ ಶರಣರು ಈ ರೀತಿ ದುಂದು ವೆಚ್ಚದ ಬದಲು ಅದೇ ಹಣವನ್ನು ಬಸವಾದಿ ಶರಣರ ಆಶಯಕ್ಕೆ ಪೂರಕವಾಗಿ ಬಳಸಿದರೆ ಸಾರ್ಥಕವಾದೀತು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಹಲವು ವಿಷಯಗಳಲ್ಲಿ ಕ್ರಾಂತಿಕಾರಿ ಹೆಜ್ಜೆಯಿಟ್ಟು ಜನ ಸಮುದಾಯವನ್ನು ಜಾಗೃತಗೊಳಿಸುತ್ತಿರುವ ಶ್ರಿ ಶಿವಮೂರ್ತಿ ಮುರುಘಾ ಶರಣರು ಈ ಕುರಿತು ಉತ್ತರಿಸಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401