ರಾಜಕೀಯ

ಮೋದಿಯನ್ನು ಕಾಡುತ್ತಿದೆ ಮೈತ್ರಿಕೂಟ ಭೀತಿ

Published

on

  • ಕೇಂದ್ರದಲ್ಲಿ ಒಂದು ಜಾತ್ಯತೀತ ಸರಕಾರವನ್ನು ರಚಿಸಬಲ್ಲ ಒಂದು ಚುನಾವಣೋತ್ತರ ಮೈತ್ರಿಕೂಟ ರೂಪುಗೊಳ್ಳಲಿದೆ ಎಂಬ ಭೀತಿಯ ಭೂತ ಮೋದಿಯನ್ನು ಕಾಡುತ್ತಿದೆ, ಇಂತಹ ಒಂದು ಸರಕಾರ ಮೈತ್ರಿಕೂಟದ ಎಲ್ಲ ಅಂಗಪಕ್ಷಗಳು ಅಂಗೀಕರಿಸುವ ಒಂದು ಸಮಾನ ಕನಿಷ್ಟ ಕಾರ್ಯಕ್ರಮದ ಆಧಾರದಲ್ಲಿ ರಚನೆಗೊಳ್ಳುತ್ತದೆ. ಇಂತಹ ಒಂದು ಮೈತ್ರಿ ತನ್ನ ಜಾಗದಲ್ಲಿ ಅಧಿಕಾರಕ್ಕೆ ಬರಬಹುದು ಎಂಬ ಭೀತಿಯನ್ನೇ ಮೋದಿ ಮೈತ್ರಿಗಳ ವಿರುದ್ಧ ತನ್ನ ಆರ್ಭಟಗಳ ಮೂಲಕ ಪ್ರದರ್ಶಿಸುತ್ತಿದ್ದಾರೆ. ಆ ಭೀತಿಯ ಭೂತೋಚ್ಛಾಟನೆಗೆ ಅವರು ಪ್ರಯತ್ನಿಸುತ್ತಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಮಹಾಗಟ್‌ಬಂಧನ್ ಅಥವ ಪ್ರತಿಪಕ್ಷಗಳ ಮೈತ್ರಿಯನ್ನು ಮಹಾಮಿಲಾವಟ್(ಮಹಾ ಕಲಸುಮೇಲೋಗರ) ಎಂದು ಅದರ ಮೇಲೆ ದಾಳಿ ನಡೆಸದ ದಿನವೇ ಇಲ್ಲ. ಪ್ರತಿಪಕ್ಷಗಳ ಮುಖಂಡರುಗಳು ಅಧಿಕಾರದಾಹ ತುಂಬಿದ ಸಮಯಸಾಧಕರ ಒಂದು ಪಡೆ ಎಂದು ವರ್ಣಿಸದ ದಿನವೇ ಇಲ್ಲ.

ಪ್ರಚಾರದ ಆರಂಭದಿಂದಲೂ, ಮೋದಿಯವರ ಭಾಷಣಗಳಲ್ಲಿ, ಮಹಾಮಿಲಾವಟ್ ಸರಕಾರ ಹೇಗೆ ಅಭಿವೃದ್ಧಿಗೆ ಕಂಟಕವಾಗುತ್ತದೆ, ರಾಷ್ಟ್ರೀಯ ಭದ್ರತೆಯನ್ನು ಖಾತ್ರಿಪಡಿಸಲಾರದ ಒಂದು ದುರ್ಬಲ ಸರಕಾರವಾಗುತ್ತದೆ, ಹೇಗೆ ಉತ್ತರ ಪ್ರದೇಶ ಮತ್ತು ಇತರೆಡೆಗಳಲ್ಲಿನ ಪ್ರತಿಪಕ್ಷಗಳ ಮೈತ್ರಿ ಮುಖಂಡರ ವೈಯಕ್ತಿಕ ಹಿತಗಳಿಗಾಗಿ ಅಧಿಕಾರವನ್ನು ಬಾಚಿಕೊಳ್ಳುವ ಒಂದು ನೀತಿವಿಹೀನ, ಸಮಯಸಾಧಕರ ಗುಂಪಷ್ಟೇ ಆಗಿದೆ, ಎಂಬುದೇ ನಿರಂತರವಾದ ರಾಗಾಲಾಪ.

ಪ್ರತಿಪಕ್ಷಗಳ ಮೈತ್ರಿಯ ಮೇಲೆ ಇಂತಹ ಒಂದು ಸತತ ದಾಳಿ, ತನ್ನ ಆಳ್ವಿಕೆ ಹೋಗಿ ಒಂದು ಮೈತ್ರಿ ಸರಕಾರ ಬರುವ ಸಂಭವವಿದೆ ಎಂಬ ನಿಜವಾದ ಭೀತಿಯನ್ನು ಮೋದಿ ಹೊಂದಿದ್ದಾರೆ ಎಂಬುದನ್ನು ಪ್ರಕಟಪಡಿಸುತ್ತದೆ.

1977ರಿಂದೀಚೆಗೆ, ಕೆಲವು ಅಪವಾದಗಳನ್ನು ಬಿಟ್ಟರೆ, ಮೈತ್ರಿ ಸರಕಾರಗಳು ಒಂದು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ. ಮೋದಿ ವರ್ಣನೆಗೆ ತದ್ವಿರುದ್ಧವಾಗಿ ಮೈತ್ರಿ ಸರಕಾರಗಳು ಸ್ಥಿರ ಸರಕಾರಗಳನ್ನು ಕೊಟ್ಟಿವೆ ಮತ್ತು ಅಭಿವೃದ್ಧಿ ಕುರಿತಂತೆ ಅವುಗಳ ದಾಖಲೆ ಬೇರೆ ಸರಕಾರಗಳಿಗಿಂತ ಭಿನ್ನವಾಗಿಯೇನೂ ಇಲ್ಲ, ಎಲ್ಲವೂ ಬಂಡವಾಳಶಾಹಿ ಅಭಿವೃದ್ಧಿಯ ಚೌಕಟ್ಟಿನಲ್ಲೇ ಇವೆ. ನಿಜಸಂಗತಿಯೆಂದರೆ, 1999-2004ರ ವಾಜಪೇಯಿ ನೇತೃತ್ವದ ಮೈತ್ರಿ ಸರಕಾರವನ್ನು ಬಿಜೆಪಿಯೇ ಪ್ರಕಾಶಮಾನ ಭಾರತದ ಒಂದು ಮಾದರಿ ಎಂದು ಹೇಳುತ್ತಿತ್ತು.

ಮೋದಿ ಏನೇ ಹೇಳಿಕೊಳ್ಳಲಿ, ಒಂದು ಸಮಾನ ಕನಿಷ್ಟ ಕಾರ್ಯಕ್ರಮವನ್ನು ಆಧರಿಸಿದ ಒಂದು ಚುನಾವಣೋತ್ತರ ಮೈತ್ರಿಯು ಸ್ಥಿರ ಸರಕಾರವೊಂದರ ರಚನೆಗೆ ಆಧಾರವಾಗುವುದಿಲ್ಲ ಎಂದು ನಂಬಲು ಕಾರಣಗಳೇನೂ ಇಲ್ಲ. 2004ರ ಚುನಾವಣೆಗಳ ನಂತರ ಯುಪಿಎ ರಚನೆಗೊಂಡು ಒಂದು ಸಮಾನ ಕನಿಷ್ಟ ಕಾರ್ಯಕ್ರಮ ಅಂಗೀಕಾರವಾಯಿತು ತಾನೇ. ಬಿಜೆಪಿಯ ಅನುಭವವೂ ಇದೇ. 1998 ರಲ್ಲಿ ಮತ್ತು 1999ರಲ್ಲಿ ಚುನಾವಣೆಗಳ ನಂತರ ಎನ್‌ಡಿಎ ಮೈತಿಕೂಟ ರಚಿಸಲು ಅದು ಆಳ್ವಿಕೆಯ ಅಜೆಂಡಾ ಎಂಬುದನ್ನು ರೂಪಿಸಿತು. ಆ ಸಮಯದಲ್ಲಿ ಬಿಜೆಪಿ ಇಂತಹ ಒಂದು ಸರಕಾರದ ರಚನೆಗಾಗಿ, 370ನೇ ವಿಧಿಯ ರದ್ಧತಿ, ರಾಮಮಂದಿರ ನಿರ್ಮಾಣ ಮತ್ತು ಸಮಾನ ನಾಗರಿಕ ಸಂಹಿತೆಯ ತನ್ನ ಮೂಲ ಬೇಡಿಕೆಗಳನ್ನು ಬದಿಗಿಟ್ಟಿತ್ತು. ಮೋದಿ ಈಗ ಇಂತಹ ಮೈತ್ರಿ ಸರಕಾರಗಳನ್ನು ದೂಷಿಸುವುದೆಂದರೆ, ತನ್ನದೇ ಪಕ್ಷದ ಸರಕಾರಗಳನ್ನೂ ಖಂಡಿಸಿದಂತೆಯೇ ಸರಿ.

ಇಂತಹ ಮಹಾಮಿಲಾವಟ್ ಗ್ಯಾಂಗ್ ಸರಕಾರದಲ್ಲಿ ಇದ್ದಾಗ ಮಾವೋವಾದಿ ಚಟುವಟಿಕೆಗಳು ಭುಗಿಲೆದ್ದವು ಎಂದು ದೂಷಿಸಿರುವುದು, ಮತ್ತು ತನ್ನ ಸರಕಾರ ಬಂದ ಮೇಲೆ ಅವನ್ನು ಪರಿಣಾಮಕಾರಿ ಭದ್ರತಾ ಕಾರ್ಯಾಚರಣೆಗಳ ಮೂಲಕ ಮೆಟ್ಟಿ ಹಾಕಲಾಯಿತು ಎಂದಿರುವುದು ಕೂಡ ಮೋದಿಯ ಅಸಂಬದ್ಧ ಹೇಳಿಕೆ. ಮೋದಿಯ ಈ ಸುಳ್ಳು, ಪ್ರಸಕ್ತ ಚುನಾವಣಾ ಪ್ರಚಾರದ ವೇಳೆಯಲ್ಲೇ ಬಯಲಿಗೆ ಬಂದಿದೆ. ಗದ್ಚಿರೊಲಿಯಲ್ಲಿ ಒಂದು ಮಾವೋವಾದಿ ದಾಳಿಯಲ್ಲಿ 15 ಭದ್ರತಾ ಸಿಬ್ಬಂದಿಯ ಪ್ರಾಣ ಹೋದವು, ಮತ್ತು ಛತ್ತಿಸ್‌ಗಡ್‌ನ ದಾಂತೆವಾಡದಲ್ಲಿ ಒಂದು ಸ್ಫೋಟಕ ಉಪಕರಣದಿಂದ ಉಂಟಾದ ಕಾರ್ ಸ್ಫೋಟದಲ್ಲಿ ಆ ಕಾರಿನಲ್ಲಿದ್ದ ಒಬ್ಬ ಬಿಜೆಪಿ ಶಾಸಕ ಮತ್ತು ನಾಲ್ವರು ಭದ್ರತಾ ಸಿಬ್ಬಂದಿ ಕೊಲ್ಲಲ್ಪಟ್ಟರು.

ಈ ಪರಿಶುದ್ಧ ಮೋದಿ ಸರಕಾರದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಸನ್ನಿವೇಶ ಹೇಗೆ ಹದಗೆಟ್ಟಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಅಲ್ಲಿ 2014ರಿಂದ 2019ರ ನಡುವೆ ಭಯೋತ್ಪಾದಕ ದಾಳಿಗಳ ಸಂಖ್ಯೆ 109ರಿಂದ 626ಕ್ಕೆ ಏರಿದೆ ಮತ್ತು ಕೊಲ್ಲಲ್ಪಟ್ಟ ಭದ್ರತಾ ಸಿಬ್ಬಂದಿಯ ಸಂಖ್ಯೆ 130ರಿಂದ 483ಕ್ಕೇರಿದೆ.

ಹೀಗೆ ಇಲ್ಲಿರುವ ಪ್ರಶ್ನೆ ಒಂದು ಏಕ ಪಕ್ಷ ಬಹುಮತದ ಸರಕಾರ ಇದೆಯೇ ಅಥವ ಒಂದು ಮೈತ್ರಿಕೂಟದ ಸರಕಾರ ಇದೆಯೇ ಎಂಬುದಲ್ಲ. ಆ ಸರಕಾರ ಯಾವ ಧೋರಣೆಗಳನ್ನು ಮತ್ತು ಕಾರ್ಯಕ್ರಮವನ್ನು ಅನುಸರಿಸುತ್ತಿದೆ ಎಂಬುದೇ ಪ್ರಶ್ನೆ.

ನೋಟುರದ್ಧತಿಯ ಕರಾಳ ಧೋರಣೆಯನ್ನು ಹೇರಿದ್ದು ಲೋಕಸಭೆಯಲ್ಲಿ ಬಹುಮತ ಹೊಂದಿದ್ದ ಬಿಜೆಪಿಯ ನೇತೃತ್ವದ ಒಂದು ನಿರ್ಣಾಯಕ ಸರಕಾರವೇ ತಾನೇ? ಈ ವಿಧ್ವಂಸಕಾರಿ ಹೆಜ್ಜೆಗೆ ಯಾರನ್ನೂ ಹೊಣೆ ಮಾಡಲಾಗಿಲ್ಲ.

ಮಹಾಗಟ್‌ಬಂಧನ್ ರಚಿಸಿಕೊಂಡಿರುವ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಪಕ್ಷಗಳು ಮೋದಿಯವರ ಪ್ರಧಾನ ಗುರಿ, ಏಕೆಂದರೆ, ಈ ಮೈತ್ರಿಕೂಟ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಒಂದು ನಿರ್ಣಾಯಕ ಸೋಲು ಉಣ್ಣಿಸುವ ಬೆದರಿಕೆ ಒಡ್ಡಿದೆ. ಆದರೆ ಪ್ರತಿಪಕ್ಷಗಳ ಮೈತ್ರಿಗಳ ಮೇಲೆ ದಾಳಿ ಮಾಡುವ ಭರದಲ್ಲಿ ಎನ್‌ಡಿಎ 40 ಪಕ್ಷಗಳ ಒಂದು ಮಹಾಗಟ್‌ಬಂಧನ್ ಎಂಬುದನ್ನು ಮೋದಿ ಮರೆತಿದ್ದಾರೆ.

ಕೇಂದ್ರದಲ್ಲಿ ಒಂದು ಜಾತ್ಯತೀತ ಸರಕಾರವನ್ನು ರಚಿಸಬಲ್ಲ ಒಂದು ಚುನಾವಣೋತ್ತರ ಮೈತ್ರಿಯ ಭೀತಿಯ ಭೂತ ಮೋದಿಯನ್ನು ಕಾಡುತ್ತಿದೆ, ಇಂತಹ ಒಂದು ಸರಕಾರ ಮೈತ್ರಿಕೂಟದ ಎಲ್ಲ ಅಂಗಪಕ್ಷಗಳು ಅಂಗೀಕರಿಸುವ ಒಂದು ಸಮಾನ ಕನಿಷ್ಟ ಕಾರ್ಯಕ್ರಮ.

(ಈ ವಾರದ ಜನಶಕ್ತಿವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಪ್ರಕಾಶ ಕಾರಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version