ದಿನದ ಸುದ್ದಿ
ನೋಟುರದ್ಧತಿ : ಪ್ರಧಾನಿಗಳ ಯಾವ ತರ್ಕವನ್ನೂ ಒಪ್ಪದಿದ್ದ ಆರ್ಬಿಐ ‘ಅನುಮೋದನೆ’..!
ಓಟುಗಳ ಮುದ್ರಣ, ಚಲಾವಣೆ ರಿಝರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ಕಾರ್ಯಕ್ಷೇತ್ರದಲ್ಲಿ ಬರುವಂತದ್ದು. ಆದರೂ ನವಂಬರ್ 8, 2016ರಂದು ಪ್ರಧಾನ ಮಂತ್ರಿಗಳು ಕಪ್ಪು ಹಣದ, ಖೋಟಾ ನೋಟುಗಳ ಮತ್ತು ಭಯೋತ್ಪಾದಕರ ಹಣಕಾಸಿನ ಮೂಲದ ವಿರುದ್ಧ 56 ಅಂಗುಲದ ಧೀರ ಕಾರ್ಯಾಚರಣೆ ಎಂದ 500 ರೂ. ಮತ್ತು 1000 ರೂ. ನೋಟುಗಳ ರದ್ಧತಿಯ ಪ್ರಕಟಣೆ ಮಾಡಿದಾಗ ಅದು ಆರ್ಬಿಐನ ನಿರ್ಧಾರವಾಗಿತ್ತೇ, ಅಥವ ಅದಕ್ಕೆ ಆರ್ಬಿಐ ನ ಮಂಜೂರಾತಿಯಾದರೂ ಸಿಕ್ಕಿತ್ತೇ? ಇದುವರೆಗೆ ಬಹಳ ಊಹಾಪೋಹದಲ್ಲೇ ಇದ್ದ ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸುತ್ತ ಬಂದ ಆರ್.ಬಿ.ಐ. ಕೊನೆಗೂ ನೀಡಿರುವ ಮಾಹಿತಿಯ ಪ್ರಕಾರ, ನೋಟುರದ್ಧತಿಯ ಮೋದಿ ಸರಕಾರದ ಪ್ರಸ್ತಾವನೆ ಆರ್.ಬಿ.ಐ. ಆಡಳಿತ ಮಂಡಳಿಯಲ್ಲಿ ಪ್ರಧಾನ ಮಂತ್ರಿಗಳು ಅದರ ಪ್ರಕಟಣೆ ಮಾಡುವ ಕೇವಲ ಎರಡೂವರೆ ಗಂಟೆಗಳ ಮೊದಲಷ್ಟೇ ಚರ್ಚೆಗೆ ಬಂತು.
ಆದರೆ ಪ್ರಧಾನ ಮಂತ್ರಿಗಳು ಅದನ್ನು ಪ್ರಕಟಿಸುವಾಗ ಅದಕ್ಕೆ ಆರ್.ಬಿ. ಐ. ಮಂಜೂರಾತಿ ಸಿಕ್ಕಿರಲಿಲ್ಲ, ಅದನ್ನು ಸರಕಾರಕ್ಕೆ ಕಳಿಸಿದ್ದು 38 ದಿನಗಳ ನಂತರ, ಡಿಸೆಂಬರ್ 6, 2016ರಂದು; ಕೊನೆಗೂ, ಆರ್ಬಿಐ ಆಡಳಿತ ಮಂಡಳಿ ಅನುಮೋದನೆ ನೀಡಿದರೂ, ಸರಕಾರದ ಹೆಚ್ಚಿನ ತರ್ಕಗಳನ್ನು ಅದು ಒಪ್ಪಲಿಲ್ಲ;
- ನೋಟುರದ್ಧತಿಯಿಂದ ಕಪ್ಪು ಹಣವನ್ನು ತಡೆಯಲು ಸಹಾಯವಾಗುವದಿಲ್ಲ, ಏಕೆಂದರೆ, ಹೆಚ್ಚಿನ ಕಪ್ಪು ಹಣ ನಗದಿನಲ್ಲಿ ಇಲ್ಲ, ಬದಲಾಗಿ ರಿಯಲ್ ಎಸ್ಟೇಟ್ ಮತ್ತು ಚಿನ್ನದ ರೂಪದಲ್ಲಿದೆ, ಅವುಗಳ ಮೇಲೆ ಈ ಕ್ರಮದ ಪರಿಣಾಮ ಅತ್ಯಲ್ಪ;
- ಖೋಟಾ ನೋಟಿನ ಪ್ರಮಾಣ 400 ಕೋಟಿ ರೂ.ಗಳಷ್ಟಾದರೂ ಒಟ್ಟು ನೋಟುಗಳ ಚಲಾವಣೆಯಲ್ಲಿ ಅದರ ಪ್ರಮಾಣ ಅತ್ಯಲ್ಪ, ಅದಕ್ಕಾಗಿ ನೋಟುರದ್ಧತಿಯ ಕ್ರಮದ ಅಗತ್ಯವಿರಲಿಲ್ಲ;3. ಚಲಾವಣೆಯಲ್ಲಿದ್ದ 500 ರೂ. ಮತ್ತು 1000ರೂ. ನೋಟುಗಳ ಏರಿಕೆಯ ಪ್ರಮಾಣ ಆರ್ಥಿಕ ಬೇಳವಣಿಗೆಯ ದರಕ್ಕೆ ಹೋಲಿಸಿದರೆ ಬಹಳ ಹೆಚ್ಚು ಎಂಬ ತರ್ಕವೂ ಅವುಗಳ ನಿಜಮೌಲ್ಯವನ್ನು ಪರಿಗಣಿಸಿದಾಗ ಒಪ್ಪುವಂತದ್ದಲ್ಲ;4. ಪ್ರಸಕ್ತ ವರ್ಷದಲ್ಲಿ ಈ ಕ್ರಮ ಜಿಡಿಪಿ ಬೆಳವಣಿಗೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.
ಅಂದರೆ ಒಟ್ಟಿನಲ್ಲಿ, ಪ್ರಧಾನ ಮಂತ್ರಿಗಳು ನೋಟುರದ್ಧತಿಗೆ ಕೊಟ್ಟ ಯಾವ ಕಾರಣವನ್ನೂ ಒಪ್ಪದಿದ್ದರೂ, ಬದಲಾಗಿ ಇದರಿಂದ ಆರ್ಥಿಕ ವ್ಯವಸ್ಥೆಯ ಮೇಲೆ ಅಲ್ಪಾವಧಿ ದುಷ್ಪರಿಣಾಮ ಉಂಟಾಗಬಹುದು ಎಂದು ಎಚ್ಚರಿಸಿದ್ದರೂ ಆರ್ಬಿಐ ಈ ಕ್ರಮವನ್ನು ಶಿಪಾರಸು ಮಾಡಿತು ಎಂಬುದು ಈ ಆರ್ಟಿಐ ಉತ್ತರದಿಂದ ತಿಳಿಯುವ ಆಂಶ.
ಇವೆಲ್ಲವೂ ಈಗಾಗಲೇ ಎಲ್ಲರ ಗಮನಕ್ಕೆ ಬಂದಿರುವ ಸಂಗತಿ, ನೋಟುರದ್ಧತಿ ಆರ್ಬಿಐ ಎಚ್ಚರಿಸಿದ್ದಕ್ಕಿತಲೂ ಹೆಚ್ಚಿನ ದುಷ್ಪರಿಣಾಮವನ್ನು ಜನಸಾಮಾನ್ಯರ ಮೇಲೆ ಅಲ್ಪಾವಧಿಯಲ್ಲಿ, ನಗದಿಗಾಗಿ ಪರದಾಟದಲ್ಲಿ ಮಾತ್ರವಲ್ಲ, ಅನೌಪಚಾರಿಕ, ಸಣ್ಣ ಉತ್ಪಾದನೆಯ ವಲಯದ ಧ್ವಂಸ ಮತ್ತು ಅಪಾರ ಪ್ರಮಾಣದ ಉದ್ಯೋಗ ನಷ್ಟದಲ್ಲಿ ಈಗಲೂ ಕಾಣ ಬರುತ್ತಿದೆ.
ಆದರೂ ರಿಝರ್ವ್ ಬ್ಯಾಂಕ್ ಈ ಕ್ರಮವನ್ನು ಬೆಂಬಲಿಸಿದ್ದು ಏಕೆ ಎಂಬ ಪ್ರಶ್ನೆಯೂ ಈಗ ಅರ್ಥಹೀನವಾಗಿದೆ.. ಆಗ ಆಡಳಿತ ಮಂಡಳಿಯ ಸದಸ್ಯರಾಗಿ ನವಂಬರ್ 8ರ ಸಭೆಯಲ್ಲಿ ಭಾಗವಹಿಸಿದ್ದವರಲ್ಲಿ ಒಬ್ಬರು ಈಗ ಆರ್ಬಿಐ ಗವರ್ನರ್ ಆಗಿದ್ದಾರೆ.
(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9986715401