ಬಹಿರಂಗ

ದೇಶಪ್ರೇಮ ಮತು ದೇಶದ್ರೋಹ

Published

on

  • ದೇಶವೆಂದರೆ ಒಂದು ಭೂಪ್ರದೇಶ, ಅಲ್ಲಿ ಜೀವಿಸುವ ಜನರು, ಅವರ ಅಸ್ತಿತ್ವಕ್ಕಾಗಿ ಬಳಸುವ ಜೀವನಾಧಾರ ವಸ್ತುಗಳು ಮತ್ತು ಅವನ್ನು ಪಡೆಯಲು ಸಾಮಾಜಿಕವಾಗಿ ಬಳಸುವ ಶ್ರಮ ಮತ್ತು ಸಹಜೀವಿಗಳೊಂದಿಗಿನ ಶ್ರಮಸಂಬಂಧಗಳು ಎಲ್ಲವೂ ಕೂಡಿರುವ ವಾಸ್ತವವೇ ದೇಶ. ಇವುಗಳ ಬಗೆಗಿನ ಸ್ವಾಭಾವಿಕ ಪ್ರೀತಿಯೇ ದೇಶಪ್ರೇಮ. ಹಾಗಿದ್ದ ಮೇಲೆ ‘ದೇಶಭಕ್ತಿ’ ಎಂಬುದು ಹುಟ್ಟಿದ್ದು ಹೇಗೆ? ದೇಶಭಕ್ತಿ ಎಂಬುದು ಊಳಿಗಮಾನ್ಯ ರಾಜಕೀಯದ ಪರಿಕಲ್ಪನೆ.ಸಂಘಪರಿವಾರ ಈಗ ಹರಡುತ್ತಿರುವ ‘ದೇಶಭಕ್ತಿ‘ ಮತ್ತು ‘ದೇಶದ್ರೋಹ‘ದ ಕಲ್ಪನೆಗಳ ಹಿಂದೆ ಊಳಿಗಮಾನ್ಯ ವ್ಯವಸ್ಥೆಯ ಮತ್ತು ಫ್ಯಾಸಿಸ್ಟ್ ‘ದೇಶ’ದ ಪರಿಕಲ್ಪನೆಯ ಮಿಶ್ರಣ ಇದೆ.

ಪ್ರೊ. ವಿ.ಎನ್.ಲಕ್ಷ್ಮೀನಾರಾಯಣ

18-19ನೇ ಶತಮಾನದ ಸ್ಕಾಟಿ? ಕವಿ, ಸರ್ ವಾಲ್ಟರ್ ಸ್ಕಾಟ್ ಬರೆದ ‘Patriotism’
ಎಂಬ ಕವನ ಹೀಗೆ ಪ್ರಾರಂಭವಾಗುತ್ತದೆ:
Breathes there the man with soul so dead
who never to himself hath said
‘This is my own my native land

ಇದನ್ನು ಕುವೆಂಪುರವರು ಕನ್ನಡಿಸಿದ್ದು,
ಅದು- ದೇಶ ನನ್ನದು, ನನ್ನದು ನಾಡು
ಎನ್ನದ ಮಾನವನೆದೆ ಸುಡುಗಾಡು” ಎಂದು ಪ್ರಾರಂಭವಾಗುತ್ತದೆ. ಅವರ ಅನುವಾದದಲ್ಲಿ ‘Native’ಎಂಬ ಪದಕ್ಕಿರುವ ಅರ್ಥಪುಷ್ಟಿಯು ವ್ಯಕ್ತವಾಗುವುದಿಲ್ಲ.

ದೇಶಪ್ರೇಮ, ದೇಶಾಭಿಮಾನ ಮುಂತಾದ ಪದಗಳು ಮೇಲುನೋಟಕ್ಕೆಎಲ್ಲ ಮನುಷ್ಯರೂ, ಅವರು ಹುಟ್ಟಿ-ಬೆಳೆದು ವಾಸಿಸುವ ಅಥವಾ ವಲಸೆಹೋಗಿ ಜೀವಿಸುವ ಒಂದು ಭೂ ಪ್ರದೇಶಕ್ಕೂ ಅವರಿಗೂ ನಡುವೆ ಇರುವ ಭೌತಿಕ ಮತ್ತು ಭಾವನಾತ್ಮಕ ಸಂಬಂಧವನ್ನು ಕುರಿತು ಹೇಳುವಂತೆ ತೋರುತ್ತವೆ. ನಾಡು, ದೇಶ ಎಂಬ ಪದಗಳು ಮೂಲಭೂತವಾಗಿ ಭೂ ಪ್ರದೇಶವನ್ನೇ ಕುರಿತು ಹೇಳುತ್ತವೆ. ಅವುಗಳ ವಿಶಾಲತೆಯನ್ನು ಹಿಗ್ಗಿಸುತ್ತಾ ಹೋದರೆ ಖಂಡ, ವಿಶ್ವ, ಜಗತ್ತುಎಂದಾಗಿ, ಇಡೀ ಭೂಮಿಗೆ ವಿಸ್ತರಿಸುತ್ತದೆ. ಮತ್ತೂ ವಿಸ್ತರಿಸಿದರೆ, ಸಾಂದ್ರವಾಗಿರುವ ಭೂಮಿಯ ವಾಸ್ತವತೆಯು ಅಳ್ಳಕವಾಗುತ್ತಾ ಹೋಗಿ ಎಲ್ಲವನ್ನೂ ಒಳಗೊಳ್ಳುವ ‘ಬ್ರಹ್ಮಾಂಡ’ ಎಂಬ ಅಮೂರ್ತವಾದ ಭಾವನೆಯಾಗಿಬಿಡುತ್ತದೆ.

ಅದರೊಂದಿಗಿನ ಮನುಷ್ಯ ಸಂಬಂಧವೂ ಸಹ ವಿಶಾಲಗೊಂಡು ‘ವಿಶ್ವಪ್ರೇಮ’, ಎಂದಾಗುತ್ತದೆ. ಅದೇ ರೀತಿಯಲ್ಲಿ ಈ ಸಂಬಂಧವನ್ನು ಕಿರಿದುಗೊಳಿಸುತ್ತಾ, ನಿರ್ದಿಷ್ಟಗೊಳಿಸುತ್ತಾ ಹೋದರೆ ಅದರ ಬಗ್ಗೆ ಇರುವ, ಪ್ರೀತಿ, ಅಭಿಮಾನ ಮುಂತಾದವುಗಳೆಲ್ಲಾ ದೇಶ, ಪ್ರಾಂತ್ಯ, ಜಿಲ್ಲೆ, ಊರು, ಕುಟುಂಬಗಳಿಗೆ ಕುಗ್ಗುತ್ತಾ ಕೊನೆಗೆ ಮನುಷ್ಯರ ಭೌತಿಕ ಮತ್ತು ಭಾವನಾತ್ಮಕಗಾಢ ಸಂಬಂಧಗಳ ಕೇಂದ್ರವಾದ ‘ಮನೆ’ಯನ್ನುತಲುಪುತ್ತವೆ. ‘ಮನೆ’ಯಲ್ಲಿನ ತಂದೆ, ಅಜ್ಜ, ಅಜ್ಜಿ, ಸೋದರ-ಸೋದರಿ, ಬಂಧು-ಬಳಗವನ್ನು ಒಳಗೊಳ್ಳುತ್ತದೆ. ಈ ಸಂಬಂಧಗಳನ್ನು ಮತ್ತೂ ನಿರ್ದಿಷ್ಟಗೊಳಿಸಿದರೆ, ಅದು ವ್ಯಕ್ತಿಯ ಹುಟ್ಟಿನೊಂದಿಗೆ ಬಿಡಿಸಲಾಗದಷ್ಟುಗಾಢ ಸಂಬಂಧವಿರುವ ವ್ಯಕ್ತಿಗೆ ಅಂದರೆ ತಾಯಿಗೆ, ಇನ್ನೂ ನಿರ್ದಿಷ್ಟವಾಗಿ ತಾಯಿಯ ಗರ್ಭಕ್ಕೆ ಬಂದು ನಿಲ್ಲುತ್ತವೆ.

ತಾಯಿಯ ಗರ್ಭದಲ್ಲಿರುವವರೆಗೂ ವ್ಯಕ್ತಿಗೆ (ಅಂದರೆ, ಮಗುವಿಗೆ) ಪೋಷಣೆ ಮತ್ತು ಭದ್ರತೆಗಳು ಕುಟುಂಬದ ಹಿನ್ನೆಲೆಯಲ್ಲಿ ಸ್ವಾಭಾವಿಕವಾಗಿ ದೊರೆಯುತ್ತವೆ. ಹುಟ್ಟಿದಮೇಲೆ ಪೋಷಣೆ ಮತ್ತು ಭದ್ರತೆಗಳು ಪಾಲನೆಯ ರೂಪದಲ್ಲಿ ತಾಯಿ-ತಂದೆ ಮತ್ತು ಕುಟುಂಬದ ಜನರಿಂದ ಸಾಮಾಜಿಕವಾಗಿ ದೊರೆಯುತ್ತವೆ.

ಹುಟ್ಟಿನಿಂದ ಹಿಡಿದು ಸಾಯುವ ಕಡೆಯ ಕ್ಷಣದವರೆಗೂ ಪ್ರತಿ ವ್ಯಕ್ತಿಗೂ ಪೋಷಣೆ ಮತ್ತು ಭದ್ರತೆಗಳು ಬೇಕೇ ಬೇಕು. ‘ಎಲ್ಲಿಗೇ ಹೋದರೂ’, ‘ಮನೆಗೆ’ ಮರಳಬೇಕು ಎಂಬ ಹಂಬಲ ವ್ಯಕ್ತಿಗಳಲ್ಲಿ ಸದಾ ತುಡಿಯುತ್ತಿರುತ್ತದೆ. ಮನೆಯ ಸುಖ-ಕೌಟುಂಬಿಕ ನೆಮ್ಮದಿ ಇತ್ಯಾದಿ ಹಂಬಲಗಳೆಲ್ಲಾ ಹುಟ್ಟುವ ಮುಂಚಿನಿಂದಲೂ ಎಲ್ಲರಲ್ಲಿಯೂ ಇರುವಂಥವೇ. ಇವು ವಾಸ್ತವದಲ್ಲಿ ತಾಯಿಯ ಗರ್ಭದಲ್ಲಿದ್ದುಕೊಂಡು, (ಯಾವಯತ್ನವನ್ನೂ ಮಾಡದೆ) ಮಗುವು ಹೊಕ್ಕಳು ಬಳ್ಳಿಯ ಮೂಲಕ ತಾಯಿಯಿಂದ ನೇರವಾಗಿ ಪಡೆಯುತ್ತಿದ್ದ ಪೋಷಣೆ (ಆಹಾರ-ಶಕ್ತಿ) ಮತ್ತು ಭದ್ರತೆ (ಸುರಕ್ಷತೆ)ಗಳನ್ನು ಸದಾ ಪಡೆಯುತ್ತಿರಬೇಕೆಂಬ ಹಂಬಲಗಳ ಮುಂದುವರಿಕೆಯೇ ಆಗಿದೆ.

ತಾಯಿಯನ್ನು ಕಂಡಾಗ ಆಗುವ ಸಂತೋಷ, ಎಲ್ಲಿಗೇ ಹೋದರೂ ಮತ್ತೆ, ಮನೆಗೆ ಮರಳಿದಾಗ ಆಗುವ ಸಂತೋ?ಕ್ಕೆ ಸಂವಾದಿಯಾದದ್ದು. ಈ ದೃಷ್ಟಿಯಿಂದತಾಯಿಯಗರ್ಭವನ್ನು ವ್ಯಕ್ತಿಯ ಮೊದಲ ‘ಮನೆ’ ಎಂದುಕರೆಯಬಹುದು. ಈ ಅರ್ಥದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂಎರಡು ಮನೆಗಳಿವೆ. ಹುಟ್ಟುವುದಕ್ಕಿಂತ ಮುಂಚಿನ ಮನೆ, ಅಂದರೆ ತಾಯಿಯ ಗರ್ಭ ಮತ್ತು ಹುಟ್ಟಿದ ಮೇಲೆ ಪೋಷಣೆ ಮತ್ತು ಭದ್ರತೆಗಳನ್ನು ಒದಗಿಸುವ, ಅನುಭವಿಸುವ ತಾಣವಾದ ‘ನಮ್ಮ ಮನೆ’.

ಗರ್ಭಿಣಿ ತಾಯಿಯು ಕೃಶಳಾಗಿರಲಿ ಅಥವಾ ಆರೋಗ್ಯವಂತಳಾಗಿರಲಿ, ಹೇಗೇ ಇದ್ದರೂ ಮಗುವಿಗೆ ಆಕೆಯ ಗರ್ಭವೇ ‘ಮನೆ’. ಹಾಗೆಯೇ ವ್ಯಕ್ತಿಯು ವಾಸಿಸುವ ಸ್ಥಳವು ಗುಡಿಸಿಲಾಗಿರಲಿ ಅಥವಾ ಬಂಗಲೆಯಾಗಿರಲಿ ಅದು ಮನೆಯೇ. ಈ ಎರಡರ ಸಂಯೋಜಿತ ರೂಪವೇ ತಾಯಿಯ ಮನೆ (ತವರು), ತಾಯಿಯಊರು (ಹುಟ್ಟಿದೂರು) ತಾಯಿಯ ಭಾ? (ತಾಯ್ನುಡಿ), ಮತ್ತು ತಾಯಿ ಬದುಕುವ ನಾಡು (ತಾಯ್ನಾಡು). ‘ನನ್ನ ಮನೆ’ ಎಂದರೂ ಅದೇ, ‘ನನ್ನದೇಶ’ ಎಂದರೂ ಅದೇ.

ಗರ್ಭಸ್ಥವಾಗಿರುವಾಗಲೇ ಭ್ರೂಣದ ಬೆಳವಣಿಗೆಯೊಂದಿಗೆ, ಮತ್ತು ಮಗುವಿನ ಮೆದುಳಿನ ಬೆಳವಣಿಗೆಯೊಂದಿಗೆ ತಳುಕು ಹಾಕಿಕೊಂಡಿರುವ ತಾಯಿ ಮತ್ತು ಪೋಷಕ ಜನರ ಕುಟುಂಬ (ವಂಶ), ತಾಯ್ನುಡಿ, ತಾಯ್ನಾಡುಗಳ ಬಗೆಗಿನ ಗಾಢಪ್ರೇಮವು ಏಕಕಾಲಕ್ಕೆ ಭೌತಿಕವೂ ಹೌದು ಭಾವನಾತ್ಮಕವೂ ಹೌದು. ಈ ಕಾರಣಕ್ಕಾಗಿಯೇ ಈ ಸಂಬಂಧದ ಹೊಗಳಿಕೆ, ಪ್ರಶಂಸೆಗಳು ವ್ಯಕ್ತಿಗೆ ಅತೀವ ಸಂತೋಷವನ್ನು ಕೊಡುತ್ತದೆ. ತೆಗಳಿಕೆ ಅಥವಾ ನಿಂದನೆಗಳು ಭಾವೋದ್ರೇಕದ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟಿಸುತ್ತವೆ.

ವ್ಯಕ್ತಿಗಳು ಸಣ್ಣವರಿದ್ದಾಗ ಪೋಷಣೆ ಮತ್ತು ಭದ್ರತೆಗಳನ್ನು ತಾಯಿ ತಂದೆಯರ ಮೂಲಕ ಕುಟುಂಬದಿಂದ ಪಡೆಯುತ್ತಾರೆ. ತಾಯಿಗೆ ಹತ್ತಿರವಿರುವ ಕುಟುಂಬದ ಸದಸ್ಯರು ಸ್ವತಹ ತಮ್ಮ ಪೋಷಣೆ ಮತ್ತು ಭದ್ರತೆಗಳನ್ನು ತಮ್ಮ ಸಾಮಾಜಿಕ ಶ್ರಮಗಳಿಂದ ಹುಟ್ಟುವ ಜೀವನಾಧಾರ ವಸ್ತುಗಳ ಮೂಲಕ, ತಾವಿರುವ ಭೂಪ್ರದೇಶದಿಂದ ಪಡೆಯುತ್ತಾರೆ. ಇವೆಲ್ಲವುಗಳ ಒಟ್ಟುರೂಪವೇ ದೇಶ.

ಈ ದೇಶದ ಬಗೆಗಿನ ವ್ಯಕ್ತಿಗಳ ಪ್ರೀತಿಯು ಏಕಕಾಲಕ್ಕೆ ಸ್ವಾಭಾವಿಕವಾದದ್ದು ಮತ್ತು ಸಾಮಾಜಿಕವಾದದ್ದು. ಹೀಗೆ, ದೇಶವೆಂದರೆ ಒಂದು ಭೂಪ್ರದೇಶ, ಅಲ್ಲಿ ಜೀವಿಸುವ ಜನರು, ಅವರ ಅಸ್ತಿತ್ವಕ್ಕಾಗಿ ಬಳಸುವ ಜೀವನಾಧಾರ ವಸ್ತುಗಳು ಮತ್ತು ಅವನ್ನು ಪಡೆಯಲು ಸಾಮಾಜಿಕವಾಗಿ ಬಳಸುವ ಶ್ರಮ ಮತ್ತು ಸಹಜೀವಿಗಳೊಂದಿಗಿನ ಶ್ರಮ ಸಂಬಂಧಗಳು ಎಲ್ಲವೂ ಕೂಡಿರುವ ವಾಸ್ತವವೇ ದೇಶ. ಇವುಗಳ ಬಗೆಗಿನ ಸ್ವಾಭಾವಿಕ ಪ್ರೀತಿಯೇ ದೇಶಪ್ರೇಮ.

ಹಾಗಿದ್ದ ಮೇಲೆ ‘ದೇಶಭಕ್ತಿ’ ಎಂಬುದು ಹುಟ್ಟಿದ್ದು ಹೇಗೆ?

ಶ್ರಮಸಂಬಂಧಗಳಲ್ಲಿ ಜೀವನಾಧಾರ ವಸ್ತುಗಳನ್ನು ಉತ್ಪಾದಿಸಲು ಬೇಕಾದ ಉತ್ಪಾದನಾ ಸಾಧನಗಳನ್ನು ಬಲಿಷ್ಠರಾದ ಕೆಲವರು ತಮ್ಮ ಕೈಲಿಟ್ಟುಕೊಂಡು ತಾವು ಶ್ರಮಪಡದೆ, ಸಾಮಾನ್ಯ ಜನರ ಶ್ರಮದಿಂದ ಜೀವಿಸುತ್ತಾ ಅವರ ಪೋಷಣೆ – ಭದ್ರತೆಗಳನ್ನು ನಿಯಂತ್ರಿಸುವ ಶೋಷಕ ವ್ಯವಸ್ಥೆಯು ಸಾವಿರಾರು ವರ್ಷಗಳ ಹಿಂದಿನ ಗುಲಾಮ ಪದ್ಧತಿಯಲ್ಲಿ ರೂಢಿಗೆ ಬಂದಿತು. ಈ ಆಧುನಿಕ ಕಾಲದಲ್ಲೂ ಇಂಥ ಶೋಷಕ ವ್ಯವಸ್ಥೆಯು ಬೇರೆ ಬೇರೆ ರೂಪಗಳಲ್ಲಿ, ಬೇರೆ ಬೇರೆ ಹೆಸರುಗಳಲ್ಲಿ ಇಂದಿಗೂ ಜೀವಂತವಾಗಿದೆ.

ಭೂಪ್ರದೇಶ, ಉತ್ಪಾದನಾ ಸಾಧನಗಳು ಮತ್ತು ಶ್ರಮಶಕ್ತಿಯ ಮೂಲವಾದ ಸಾಮಾನ್ಯ ಜನರು ಮತ್ತು ಅವರ ಸಂತಾನವನ್ನು ತಮ್ಮ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವುದರಲ್ಲಿ ಬಲಿಷ್ಠರ ಎರಡು ಬಣಗಳ ನಡುವೆ ಹೊಡೆದಾಟ-ಕಾದಾಟಗಳು ನಡೆದಾಗಲೆಲ್ಲಾ ಬಲಿಷ್ಠರಿಗಾಗಿ ಕಾದಾಡಿ ಪ್ರಾಣಕೊಡಲು ಸಾಮಾನ್ಯ ಜನರನ್ನೇ ಬಳಸಿಕೊಳ್ಳುವುದು ಬಹು ಹಿಂದಿನಿಂದಲೂ ಬಳಕೆಯಲ್ಲಿರುವ ಮತ್ತೊಂದು ಕ್ರೂರಪದ್ಧತಿ. ಅವರಿಗೆ ಸಮವಸ್ತ್ರವನ್ನು ಹಾಕಿ ಆಯುಧಗಳನ್ನು ಕೊಟ್ಟುಕಾದಾಡಲು ಕಳಿಸಿದರೆ ಅವರೇ ರಾಜಭಕ್ತಿಯುಳ್ಳ ಸೈನಿಕರು ಅಥವಾ ರಾಜಭಟರು.

ಈ ಪದ್ಧತಿಯಿಂದಾಗಿ, ಸಾಮಾನ್ಯ ಜನರಲ್ಲಿ ಸ್ವಾಭಾವಿಕವಾಗಿ ಮತ್ತು ಸಾಮಾಜಿಕವಾಗಿ ಇದ್ದ ‘ದೇಶಪ್ರೇಮ’ವು ತಮ್ಮನ್ನು ನಿಯಂತ್ರಿಸುವ ಬಲಿಷ್ಠ ಶೋಷಕರ ಬಗ್ಗೆ ಇಟ್ಟುಕೊಳ್ಳಲೇಬೇಕಾದ ಭಯ ಮತ್ತು ಬಲವಂತದ ಗೌರವಗಳಿಗೆ ಮತ್ತೊಂದು ಹೆಸರಾದ ‘ದೇಶಭಕ್ತಿ’ಯಾಗಿ ಕಾಲಕ್ರಮೇಣ ಮಾರ್ಪಟ್ಟಿತು. ಹೀಗೆ ಸಾಮಾನ್ಯ ಜನರಿಗೆ ಪೋಷಣೆ ಮತ್ತು ಭದ್ರತೆಗಳನ್ನು ಒದಗಿಸುವ ‘ದೇಶ’ದ ಸ್ಥಾನವನ್ನು ಬಲಿಷ್ಠರಾದ ಶೋಷಕರು ಆಕ್ರಮಿಸಿಕೊಂಡು ತಾವೇ ದೇಶವೆಂದು, ತಮ್ಮ ಬಗ್ಗೆ ಸಾಮಾನ್ಯ ಜನರು ಇಟ್ಟುಕೊಳ್ಳಬೇಕಾದ ಭಯ-ಗೌರವಗಳೇ ದೇಶಭಕ್ತಿಯೆಂದು ಬಲಾತ್ಕರಿಸುತ್ತಾ ಬಂದದ್ದರ ಫಲವಾಗಿ ‘ದೇಶಪ್ರೇಮ’ದ ಸ್ಥಾನದಲ್ಲಿ, ‘ದೇಶಭಕ್ತಿ’ಯೆಂಬ ಪರಿಕಲ್ಪನೆಯು ಪ್ರತಿಷ್ಠಾಪನೆಗೊಂಡಿತು.

ದೇಶಪ್ರೇಮವು ಅಥವಾ ರಾಷ್ಟ್ರಪ್ರೇಮವು ಸ್ವಾಭಾವಿಕವಾದದ್ದು ಮತ್ತು ಸಾಮಾಜಿಕವಾದದ್ದು. ದೇಶಭಕ್ತಿ ಎಂಬುದು ಊಳಿಗಮಾನ್ಯ ರಾಜಕೀಯದ ಪರಿಕಲ್ಪನೆ. ಅದನ್ನು ನಂಬುವವರ ದೃಷ್ಟಿಯಲ್ಲಿ ಜನರು ತಮ್ಮನ್ನು ನಿಯಂತ್ರಿಸುವ ಶೋಷಕರ ಬಗ್ಗೆ ಭಯ-ಭಕ್ತಿಯನ್ನು ತೋರಿಸಿದರೆ, ಅದು ದೇಶಭಕ್ತಿ. ಅವರನ್ನೇ ಪ್ರಶ್ನಿಸಿದರೆ ಅಥವಾ ಅವರ ಬಗ್ಗೆ ಭಯ-ಭಕ್ತಿಯನ್ನು ತೋರಿಸದಿದ್ದರೆ ಅದು ‘ರಾಜದ್ರೋಹ’ ಅಥವಾ ‘ದೇಶದ್ರೋಹ’.

ಸದ್ಯದ ರಾಜಕೀಯ ಸಂದರ್ಭದಲ್ಲಿ ಸಂಘಪರಿವಾರದ ಆಳುವ ಜನರು ಪ್ರಜಾಪ್ರಭುತ್ವದ ವಿಧಾನದಲ್ಲೇ ಅಧಿಕಾರಕ್ಕೆ ಬಂದಿದ್ದರೂ ಸಹ ಅವರ ರಾಜಕೀಯ ಮೌಲ್ಯಗಳ ಬೇರುಗಳು ಇನ್ನೂ ಆಸ್ತಿಕ ಮೂಲದ ಊಳಿಗಮಾನ್ಯ ವ್ಯವಸ್ಥೆಯಲ್ಲೇ ಇವೆ. ಸಾಮಾನ್ಯ ಜನರಲ್ಲಿರುವ ಸ್ವಾಭಾವಿಕವಾದ ದೇಶಪ್ರೇಮವನ್ನು ಗುರುತಿಸಲಾಗದ ಅವರು ತಮ್ಮನ್ನು ಪ್ರಶ್ನಿಸುವವರೆಲ್ಲರನ್ನೂ ‘ದೇಶದ್ರೋಹಿ’ಗಳೆಂದು ಜರೆದು ಶಿಕ್ಷಿಸಲು ಹಾತೊರೆಯುತ್ತಾರೆ. ಭಾರತವೆಂಬ ಭೂಪ್ರದೇಶದ ಸಾಮಾನ್ಯ ಜನರೊಂದಿಗೆ, ರಕ್ತಸಂಬಂಧಗಳಲ್ಲಿ ಹೇಗೋ ಹಾಗೆ ಸಾಮಾಜಿಕ ಶ್ರಮಸಂಬಂಧಗಳಲ್ಲಿ ಬದುಕುತ್ತಿರುವ ಎಲ್ಲರೂ ದೇಶಪ್ರೇಮಿಗಳೇ. ಆದ್ದರಿಂದ, ಜನರ ದೇಶಪ್ರೇಮವನ್ನು ಶಂಕಿಸುವ, ಸಾಬೀತುಪಡಿಸಿ ಎಂದು ಆಗ್ರಹಿಸುವ, ಅಥವಾ ಆಳುವವರನ್ನು ಪ್ರಶ್ನಿಸುತ್ತಾರೆಂಬ ಕಾರಣಕ್ಕಾಗಿ ಯಾರನ್ನೇ ಆಗಲಿ ‘ದೇಶದ್ರೋಹಿ’ಗಳೆಂದು ದೂಷಿಸುವ ಕ್ರಮಗಳು ಪ್ರಜಾತಾಂತ್ರಿಕವೂ ಅಲ್ಲ, ನ್ಯಾಯಯುತವೂ ಅಲ್ಲ.

17ನೇ ಶತಮಾನದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಯುರೋಪಿನಲ್ಲಿ ಉದಯಿಸಿ ಬೇರು ಬಿಡಲು ಆರಂಭಿಸಿದಾಗ ಬೆಳೆದು ಬಂದ ‘ದೇಶ’ದ ಪರಿಕಲ್ಪನೆ ನಮ್ಮ ಈಗಿನ ‘ದೇಶ’ದ ಕಲ್ಪನೆಯನ್ನು ಪ್ರಧಾನವಾಗಿ ರೂಪಿಸುತ್ತಿದೆ. ‘ದೇಶ’ವನ್ನು ಆಯಾ ಬಂಡವಾಳಶಾಹಿ ವರ್ಗದ ಪ್ರಭುತ್ವದ ಅಧಿಪತ್ಯದಲ್ಲಿರುವ – ಸ್ವಂತ ಮಾರುಕಟ್ಟೆಯಾಗಿ; ಭೂಮಿ, ಗಣಿ ಮತ್ತಿತರ ಪ್ರಾಕೃತಿಕ ಸಂಪನ್ಮೂಲಗಳು ಹಾಗೂ ಬಂಡವಾಳ ಇತ್ಯಾದಿ ಸೇರಿದಒಟ್ಟು ಸಂಪತ್ತು ಆಗಿ;- ನೋಡುವುದು; ಯುದ್ಧ ಅಥವಾ ಇತರ ಆಕ್ರಾಮಕ ಕ್ರಮಗಳಿಂದ ಇತರ ದೇಶಗಳನ್ನು ಅವುಗಳ ‘ಮಾರುಕಟ್ಟೆ’ ಮತ್ತು ‘ಸಂಪತ್ತು’ಗಳನ್ನು ಗೆದ್ದುಕೊಳ್ಳಬೇಕಾದ ಅಧೀನಕ್ಕೊಳಪಡಿಸಬೇಕಾದ ದ್ವೇಷಕ್ಕೆ ಯೋಗ್ಯವಾದವುಗಳಾಗಿ ನೋಡುವುದು – ಆಗ ಬೆಳೆದು ಬಂದ ‘ದೇಶ’ದ ಪರಿಕಲ್ಪನೆ. ಯುರೋಪಿನ ಪ್ರಮುಖ ‘ದೇಶ’ಗಳು ಜಗತ್ತಿನಾದ್ಯಂತ ‘ವಸಾಹತು’ಗಳನ್ನು ಗೆದ್ದುಕೊಳ್ಳಲು ಆರಂಭಿಸಿದ ಮೇಲೆ ಮತ್ತು ವಸಾಹತುಗಳಿಗಾಗಿ ಪೈಪೋಟಿಯ ಭಾಗವಾಗಿ ಮಹಾಯುದ್ಧ ನಡೆದ ಮೇಲಂತೂ ಈ ಕಲ್ಪನೆ ಇನ್ನಷ್ಟು ಗಟ್ಟಿಯಾಯಿತು.

ದೇಶಭಕ್ತಿಎಂದರೆ ‘ದೇಶ’ದ ಬಂಡವಾಳಶಾಹಿ ವರ್ಗದ ಹಿತಾಸಕ್ತಿಗಳನ್ನು ಪ್ರಶ್ನಿಸದಿರುವುದು, ಕಣ್ಣು ಮುಚ್ಚಿ ಎತ್ತಿ ಹಿಡಿಯುವುದು, ಇತರ ದೇಶಗಳನ್ನು ಹಗೆಗಳಂತೆ ಕಂಡು ದ್ವೇಷಿಸುವುದು ಎಂದಾಯಿತು. ದೇಶಭಕ್ತಿ ಎಂದರೆ ದೇಶದ ಆಳುವ ವರ್ಗ, ಅದರ ಪ್ರಭುತ್ವ, ಅದರ ಆಗಿನ ಸರಕಾರ ಇವೆಲ್ಲವನ್ನು ಒಂದೇ ಎಂದು ಬಗೆದು ಅವುಗಳಿಗೆ ಭಯ-ಭಕ್ತಿಯಿಂದ ನಡೆದುಕೊಳ್ಳುವುದು ಎಂದಾಯಿತು. ಫ್ಯಾಸಿಸ್ಟ್ ದೇಶದ ಪರಿಕಲ್ಪನೆ ಇದರ ಪರಾಕಾಷ್ಟೆಯಾಗಿತ್ತು. ಇದರಲ್ಲಿ – ದೇಶ, ಪ್ರಭುತ್ವ, ಸರಕಾರ – ಇವೆಲ್ಲವೂ ಒಬ್ಬ ಸರ್ವಾಧಿಕಾರಿಯಲ್ಲಿ ಮೂರ್ತೀಭವಿಸಿ ಅವನಿಗೆ ಭಯ ಭಕ್ತಿಯಿಂದ ನಡೆದುಕೊಳ್ಳುವುದು ದೇಶಭಕ್ತಿ ಎಂದಾಯಿತು.

ವಸಾಹತುಶಾಹ-ವಿರೋಧಿ ಚಳುವಳಿಗಳು, ಅಕ್ಟೋಬರ್ ಕ್ರಾಂತಿಯಿಂದಾರಂಭಿಸಿ ಜನತಾ ಪ್ರಜಾಪ್ರಭುತ್ವ ಅಥವಾ ಸಮಾಜವಾದಿ ಪ್ರಭುತ್ವ ಸ್ಥಾಪಿಸಿದ ದೇಶಗಳಲ್ಲಿ ಇದಕ್ಕೆ ತದ್ವಿರುದ್ಧವಾದ ಜನ-ಕೇಂದ್ರಿತ ಮತ್ತು ಮೇಲೆ ಹೇಳಿದ ಪರಿಕಲ್ಪನೆಗೆ ತದ್ವಿರುದ್ಧವಾದ ಪರಿಕಲ್ಪನೆಯನ್ನು ರೂಪಿಸಲಾಯಿತು. ಆದರೆ 1990ರ ದಶಕದಲ್ಲಿ ಇವುಗಳ ಅವನತಿಯೊಂದಿಗೆ ಬಂಡವಾಳಶಾಹಿ ಮತ್ತು ಫ್ಯಾಸಿಸ್ಟ್ ‘ದೇಶ’ದ ಮತ್ತು ‘ದೇಶಭಕ್ತಿ’ಯ ಪರಿಕಲ್ಪನೆ ಮತ್ತೆ ವ್ಯಾಪಕವಾಗಿ ಮುನ್ನೆಲೆಗೆ ಬಂದಿದೆ. ಸಂಘಪರಿವಾರ ಈಗ ಹರಡುತ್ತಿರುವ ‘ದೇಶಭಕ್ತಿ’ ಮತ್ತು ದೇಶದ್ರೋಹ’ದ ಕಲ್ಪನೆಗಳ ಹಿಂದೆ ಊಳಿಗಮಾನ್ಯ ವ್ಯವಸ್ಥೆಯ ಮತ್ತು ಫ್ಯಾಸಿಸ್ಟ್ ‘ದೇಶ’ದ ಪರಿಕಲ್ಪನೆಯ ಮಿಶ್ರಣ ಇದೆ.

(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version