ರಾಜಕೀಯ
ಬಿಜೆಪಿ ಅಭ್ಯರ್ಥಿಯಾಗಿ ಭಯೋತ್ಪಾದನಾ ಆರೋಪಿ-ಒಂದು ಕೇಡಿನ ಪ್ರತೀಕ
- ಚುನಾವಣಾ ಅಭ್ಯರ್ಥಿಯಾಗಿ ಪ್ರಜ್ಞಾ ಠಾಕುರ್ ಆಯ್ಕೆ ಮತದಾರರಲ್ಲಿ ಧ್ರುವೀಕರಣ ತರುವ ಉದ್ದೆಶದಿಂದ ಕೋಮುವಾದವೇ ಮುಖ್ಯ ಒತ್ತು ಹಾಕಿರುವ ಬಿಜೆಪಿಯ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಬಂದಿದೆ. ಇಂತಹ ಒಂದು ವಿಭಜನಕಾರೀ ಪ್ರಚಾರದಲ್ಲಿ, ಒಬ್ಬ ಕಾವಿಧಾರಿ ಭಯೋತ್ಪಾದನಾ-ಆರೋಪಿ ಮತ್ತು ಮುಸ್ಲಿಂ-ದ್ವೇಷಿ ಬಿಜೆಪಿಯ ಚುನಾವಣಾ ಅಜೆಂಡಾದ ಒಂದು ಪ್ರತೀಕವಾಗಿದ್ದಾರೆ. ಇದು ಕೂಡ ಬಹಳ ಹೊಸದೇನಲ್ಲ. ಇನ್ನೊಬ್ಬ ಮುಸ್ಲಿಂರ ವಿರುದ್ಧ ದ್ವೇಷ ಕಾರುವ, ಕಾವಿಧಾರಿ, ಆದಿತ್ಯನಾಥರನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಮಾಡಲಾಗಿದೆ ತಾನೇ?
ಭೋಪಾಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಜ್ಞಾ ಸಿಂಗ್ ಠಾಕುರ್ ನಾಮಕರಣ 17ನೇ ಲೋಕಸಭಾ ಚುನಾವಣೆಗಳಲ್ಲಿ ಒಂದು ಮಹತ್ವದ, ಅಶುಭಕಾರೀ ಕ್ಷಣ. ಬಿಜೆಪಿಯ ಈ ನಿರ್ಧಾರ ಈ ಚುನಾವಣೆಯಲ್ಲಿ ಅದರ ನಿಜವಾದ ವೇದಿಕೆ ಏನೆಂಬುದರ ಒಂದು ಘೋಷಣೆಯಾಗಿದೆ. ಯಾವುದೇ ಮುಲಾಜಿಲ್ಲದ ಉಗ್ರ ಹಿಂದುತ್ವ, ಮತ್ತು ಅದರೊಂದಿಗೆ ಅದರ ಎಲ್ಲ ನಕಾರಾತ್ಮಕ ತೊಡಕುಗಳು-ಇದೇ ಆ ವೇದಿಕೆ.
ಪ್ರಜ್ಞಾ ಠಾಕುರ್ 2008ರ ಮಾಲೆಗಾಂವ್ ಸ್ಫೋಟದ ಒಬ್ಬ ಆರೋಪಿ. ಈ ಸ್ಫೊಟವನ್ನು ಸಂಘಟಿಸಿದ ಗುಂಪಿನ ಸೂತ್ರಧಾರಳು ಎಂಬ ಆಪಾದನೆ ಆಕೆಯ ಮೇಲಿದೆ. ಈ ಮೊಕದ್ದಮೆಯ ಆರೋಪ ಪತ್ರ ಆರು ಜನಗಳನ್ನು ಸಾಯಿಸಿದ ಈ ಸ್ಫೋಟವನ್ನು ಉಂಟು ಮಾಡುವಲ್ಲಿ ಬಳಸಿದ ಸ್ಫೋಟಕಗಳಿಂದ ತುಂಬಿದ್ದ ಮೋಟಾರ್ ಸೈಕಲ್ ಆಕೆಯದ್ದು ಎಂದು ಹೊರಗೆಡಹಿದೆ.
ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಆಕೆಯ ವಿರುದ್ಧ ಇದ್ದ ಮೊಕದ್ದಮೆಯನ್ನು ವಿಫಲಗೊಳಿಸಲು ಸಕಲ ಪ್ರಯತ್ನಗಳೂ ನಡೆದವು. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಆಕೆಯ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿತು. ಆದರೆ ನ್ಯಾಯಾಲಯ ಅದನ್ನು ಒಪ್ಪದೆ ಆಕೆಯನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಅಡಿಯಲ್ಲಿ ಆರೋಪಿಯಾಗಿಸಿದೆ. ಈಗ ಆಕೆ ವಿಚಾರಣೆಯ ನಡುವೆ ಜಾಮೀನಿನಲ್ಲಿ ಹೊರಗಿದ್ದಾರೆ.
ಇಂತಹ ಒಬ್ಬ ಭಯೋತ್ಪಾದನಾ ಆರೋಪಿಯನ್ನು ಭೋಪಾಲದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಮಾಡಿದೆ. ಈ ಎಲ್ಲ ವರ್ಷಗಳಲ್ಲಿ ಆಕೆ ತನ್ನ ಉನ್ಮತ್ತ ಹಿಂದುತ್ವ ಮತ್ತು ಮುಸ್ಲಿಂ-ದ್ವೇಷಿ ಅಭಿಪ್ರಾಯಗಳನ್ನು ಎಂದೂ ಗುಟ್ಟಾಗಿ ಇಟ್ಟಿಲ್ಲ.
ನಾಮಪತ್ರ ಸಲ್ಲಿಸಿದ ಕೂಡಲೇ ಆಕೆ ಮಹಾರಾಷ್ಟ್ರ ಪೋಲೀಸ್ ಪಡೆಯ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ಮುಖ್ಯಸ್ಥರಾಗಿದ್ದ ದಿವಂಗತ ಹೇಮಂತ ಕರ್ಕರೆ ಮೇಲೆ ಎರಗಿದರು. ಕರ್ಕರೆ ಮಾಲೆಗಾಂವ್ ಸ್ಫೋಟದ ತನಿಖೆ ಮಾಡಿದ್ದ, ಮತ್ತು ಪ್ರಜ್ಞಾ ಠಾಕುರ್ ಮತ್ತು ಆಕೆಯ ಸಹಯೋಗಿಗಳನ್ನು ಬಂಧಿಸಿದ್ದ ಪೋಲೀಸ್ ಅಧಿಕಾರಿ. ತಾನು ಕರ್ಕರೆಗೆ ಶಾಪ ಹಾಕಿದ್ದೆ, ಅದರಿಂದಾಗಿ ೪೫ ದಿನಗಳೊಳಗೆ ಆತ ಭಯೋತ್ಪಾದಕ ಗುಂಡಿಗೆ ಬಲಿಯಾಗಿ ಸತ್ತರು ಎಂದು ಆಕೆ ಹೇಳಿದಳು. ಹೇಮಂತ ಕರ್ಕರೆ ಒಬ್ಬ ಧೀರ ಪೋಲೀಸ್ ಅಧಿಕಾರಿಯಾಗಿದ್ದು, ನವಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರು. ಇಂತಹ ಒಂದು ಆಘಾತಕಾರಿ ಹೇಳಿಕೆಯ ನಂತರವೂ, ಬಿಜೆಪಿ ಅದನ್ನು ಖಂಡಿಸುವ ಆಶಯವನ್ನು ತೋರಲಿಲ್ಲ, ಅದು ಆಕೆಯ ವೈಯಕ್ತಿಕ ಅಭಿಪ್ರಾಯವಷ್ಟೇ, ಬಹುಶಃ ಪೋಲೀಸರಿಂದ ಆಕೆ ಅನುಭವಿಸಿದ ಚಿತ್ರಹಿಂಸೆಯಿಂದಾಗಿ ಇರಬಹುದು ಎಂದಷ್ಟೇ ಹೇಳಿತು.
ಈ ಬಗ್ಗೆ ಬಂದ ಟೀಕೆಯಿಂದ ವಿಚಲಿತಳಾಗದ ಪ್ರಜ್ಞಾ ಠಾಕುರ್ ಇನ್ನೂ ಮುಂದೆ ಹೋಗಿ ಬಾಬ್ರಿ ಮಸೀದಿಯ ಧ್ವಂಸ ನಡೆಯುತ್ತಿದ್ದಾಗ ತಾನು ಗುಮ್ಮಟದ ತುದಿಯಲ್ಲಿದ್ದೆ, ಆ ಸ್ಥಳದಲ್ಲಿ ರಾಮ ದೇವಸ್ಥಾನ ಕಟ್ಟುವಾಗಲೂ ಆ ಸ್ಥಳದಲ್ಲಿ ಇರುತ್ತೇನೆ ಎಂದರು.
ಪ್ರಜ್ಞಾ ಠಾಕುರ್ನ್ನು ಅಭ್ಯರ್ಥಿಯಾಗಿ ನಿಲ್ಲಿಸಿದ್ದು ಒಂದು ಬಹಳ ಯೋಚನೆ ಮಾಡಿ ನಿರ್ಧರಿಸಿದ್ದ ನಡೆ ಎಂಬುದು ನರೇಂದ್ರ ಮೋದಿ ಅದನ್ನು ಸಮರ್ಥಿಸಿಕೊಂಡ ರೀತಿಯಲ್ಲೇ ಕಾಣುತ್ತದೆ. ಆಕೆ ಅಭ್ಯರ್ಥಿಯಾಗಿರುವುದು ವಸುಧೈವ ಕುಟುಂಬಕಮ್ ನಲ್ಲಿ ನಂಬಿಕೆಯಿರುವ 5000 ವರ್ಷಗಳಷ್ಟು ಹಳೆಯ ನಾಗರಿಕತೆಯ ಹೆಸರುಗೆಡಿಸುವವರಿಗೆ, ಭಯೋತ್ಪಾದಕರು ಎಂದು ಕರೆದವರಿಗೆ ನೀಡಿರುವ ಒಂದು ಉತ್ತರ ಎಂದು ಅವರು ಹೇಳಿದ್ದಾರೆ. ಇದಕ್ಕೆ ಮೊದಲು ಎಪ್ರಿಲ್ 1 ರಂದು ವರ್ಧಾದಲ್ಲಿ ಮಾತಾಡುತ್ತ ಮೋದಿ, ಹಿಂದು ಭಯೋತ್ಪಾದನೆಯ ಮಾತಾಡುವವರು ಇಡೀ ಹಿಂದೂ ಸಮುದಾಯವನ್ನು ಅವಮಾನ ಮಾಡುತ್ತಾರೆ ಎಂದು ಹೇಳಿದ್ದರು.
ಸಾವಿರ ವರ್ಷಗಳ ಇತಿಹಾಸದಲ್ಲಿ ಹಿಂದೂ ಭಯೋತ್ಪಾದನೆಯ ಕೃತ್ಯವನ್ನು ತೋರಿಸುವ ಒಂದೇ ಒಂದು ಘಟನೆ ನಡೆದಿಲ್ಲ ಎಂದು ಅವರು ಸಾರಿದರು. ಇದು ಎಲ್ಲ ತರ್ಕಗಳನ್ನೂ ಹುಸಿಯಾಗಿಸಿರುವ ಅಸಂಬದ್ಧ ಹೇಳಿಕೆ. ನಾಥುರಾಂ ಗೋಡ್ಸೆಯಿಂದ ಹಿಡಿದು 2002ರ ಗುಜರಾತ್ ಹತ್ಯಾಕಾಂಡದ ವರೆಗೆ, ನಂತರ ದಭೋಲ್ಕರ್, ಪನ್ಸರೆ, ಕಲ್ಬುರ್ಗಿ, ಗೌರಿ ಹತ್ಯೆಗಳ ವರೆಗೆ ಹಿಂದುತ್ವ ಭಯೋತ್ಪಾದನೆಯ ಒಂದು ದೊಡ್ಡ ಸಾಲೇ ಇದೆ. ಈ ಎಲ್ಲ ಹೇಳಿಕೆಗಳ ಹಿಂದೆ ಇರುವ ತಿಳುವಳಿಕೆಯೆಂದರೆ, ಹಿಂದೂಗಳು ಭಯೋತ್ಪಾದಕರಾಗಲು ಸಾಧ್ಯವಿಲ್ಲ, ಕೇವಲ ಮುಸ್ಲಿಮರು ಮಾತ್ರವೇ ಹಾಗಾಗಲು ಸಾಧ್ಯ.
ಪ್ರಜ್ಞಾ ಠಾಕುರ್ ಒಬ್ಬ ಅಮಾಯಕ ಸಾಧ್ವಿ, ಆಕೆಯನ್ನು ಒಂದು ಸುಳ್ಳು ಕೇಸಿನಲ್ಲಿ ಸಿಗಿಸಲಾಗಿದೆ ಎಂಬುದು ಅಮಿತ್ ಷಾ ಮತ್ತು ಬಿಜೆಪಿಯ ನಿಲುವು. ಆದರೆ, ಅದೇ ವೇಳೆಗೆ, ಸಂಘ ಪಡೆಗಳು ಆಕೆ ಹಿಂದೂಗಳನ್ನು ಸಾಯಿಸಿದ್ದಕ್ಕೆ ಪ್ರತೀಕಾರ ತೀರಿಸಿರುವ ಧೀರೆ ಎಂದು ವೈಭವೀಕರಿಸುತ್ತಿವೆ.
ಚುನಾವಣಾ ಅಭ್ಯರ್ಥಿಯಾಗಿ ಪ್ರಜ್ಞಾ ಠಾಕುರ್ ಆಯ್ಕೆ ಮತದಾರರಲ್ಲಿ ಧ್ರುವೀಕರಣ ತರುವ ಉದ್ದೆಶದಿಂದ ಕೋಮುವಾದವೇ ಮುಖ್ಯ ಒತ್ತಾಗಿರುವ ಬಿಜೆಪಿಯ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಬಂದಿದೆ. ನರೇಂದ್ರ ಮೋದಿ ಮತ್ತು ಅಮಿತ್ ಷಾ ರಿಂದ ಹಿಡಿದು ಎಲ್ಲ ಬಿಜೆಪಿ ಮುಖಂಡರುಗಳ ಭಾಷಣಗಳು ದಿನಗಳೆದಂತೆ ಹೆಚ್ಚೆಚ್ಚು ಕರ್ಕಶಗೊಳ್ಳುತ್ತಿವೆ. ಹಿಂದೂಗಳಿಗೆ ಹೊರಗಿನ ಮತ್ತು ಒಳಗಿನ ಶತ್ರುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕೆಂಬ ಕರೆ ನೀಡಲಾಗುತ್ತಿದೆ; ಅಲ್ಪಸಂಖ್ಯಾತರು ಬುಡಮೇಲು ಪಾತ್ರ ವಹಿಸುತ್ತಿದ್ದಾರೆ ಎಂದು ಸಾಕಷ್ಟು ಬಹಿರಂಗವಾಗಿಯೇ ಬೆದರಿಕೆ ಹಾಕಲಾಗುತ್ತಿದೆ; ತಮ್ಮ ರಾಷ್ಟ್ರೋನ್ಮಾದದ ಅಪಪ್ರಚಾರಕ್ಕೆ ಸಶಸ್ತ್ರ ಪಡೆಗಳ ಹೆಸರನ್ನು ಬಳಸಲಾಗುತ್ತಿದೆ; ಮತ್ತು ನಾಗರಿಕತ್ವ(ತಿದ್ದುಪಡಿ) ಮಸೂದೆ ಹಾಗೂ ರಾಷ್ಟ್ರೀಯ ನಾಗರಿಕರ ದಾಖಲೆ(ಎನ್ಆರ್ಸಿ) ಹೊರಗಿನವರನ್ನು ಹೊರಹಾಕುವ ಸಾಧನಗಳು ಎಂದು ಬಿಂಬಿಸಲಾಗುತ್ತಿದೆ.
ಇಂತಹ ಒಂದು ವಿಭಜನಕಾರೀ ಪ್ರಚಾರದಲ್ಲಿ, ಒಬ್ಬ ಕಾವಿಧಾರಿ ಭಯೋತ್ಪಾದನಾ-ಆರೋಪಿ ಮತ್ತು ಮುಸ್ಲಿಂ-ದ್ವೇಷಿ ಬಿಜೆಪಿಯ ಚುನಾವಣಾ ಅಜೆಂಡಾದ ಒಂದು ಪ್ರತೀಕವಾಗಿದ್ದಾರೆ. ಇದು ಕೂಡ ಬಹಳ ಹೊಸದೇನಲ್ಲ. ಇನ್ನೊಬ್ಬ ಮುಸ್ಲಿಂರ ವಿರುದ್ಧ ದ್ವೇಷ ಕಾರುವ, ಕಾವಿಧಾರಿ, ಆದಿತ್ಯನಾಥರನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಮಾಡಲಾಗಿದೆ ತಾನೇ?
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯನ್ನು ನಿಜವಾಗಿಯೂ ಬಿಟ್ಟೇ ಬಿಡಲಾಗಿದೆ. ಅದರ ಜಾಗದಲ್ಲಿ ಒಂದು ಬಹಿರಂಗ ಹಿಂದುತ್ವ ಕೋಮುವಾದಿ-ಮಿಲಿಟರಿಶಾಹಿಮಾದರಿ-ಸಂಕುಚಿತವಾದೀ ಮನವಿ ಬಂದಿದೆ. ಇದು, ಮೋದಿ ವಿಕಾಸದ ಮಾತಾಡುವವರು ಎಂಬ ನಂಬಿಕೆಗೆ ಜೋತು ಬಿದ್ದಿರುವವರನ್ನೂ ಬೆಚ್ಚಿ ಬೀಳಿಸುವಂತದ್ದು. ಇಂತಹ ಭ್ರಮೆಗಳಿಗೆ ಈಗ ಯಾವ ಅವಕಾಶವೂ ಉಳಿದಿಲ್ಲ. ದೇಶವನ್ನು ಉಳಿಸುವ ಏಕೈಕ ದಾರಿಯೆಂದರೆ, ಬಿಜೆಪಿ ಮತ್ತು ಮೋದಿ ಸೋಲುವಂತೆ ಮಾಡುವುದು.
( ಈ ವಾರದ ಜನಶಕ್ತಿವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
–ಪ್ರಕಾಶ ಕಾರಟ್
ಸುದ್ದಿದಿನ.ಕಾಂ|ವಾಟ್ಸಾಪ್|9980346243